Saturday 1 October 2016

ಮೂರು ಕಣ್ಣ ಅಹೋರಾತ್ರ ...ಮೂರ್ಖನಲ್ಲ...

ಸಂಭ್ರಮ!.. 
ಆ ದಿನ ನನ್ನೊಳಗೊಂದು ಹೊಸ ಬಗೆಯ ಹರುಷದ ಸಂಭ್ರಮ. ಮನಸ್ಸು ಆ ವ್ಯಕ್ತಿಯನ್ನು ನೋಡಲು ತುಂಬಾ ದಿನದಿಂದ ಮಿಡಿಯುತ್ತಿತ್ತು. ಒಳಗಿದ್ದ ಒಂದಿಷ್ಟು ಭಾವಗಳು ಪ್ರೀತಿಯಲಿ ತುಡಿಯುತ್ತಿತ್ತು. ವೃತ್ತಿ ಜೀವನದಲ್ಲಿ ಅನೇಕ ನಟ-ನಟಿಯರು, ರಂಗಭೂಮಿ ಕಲಾವಿದರು, ಸಾಧನೆಯ ಶಿಖರವೆತ್ತಿರುವ ಸಾರಥಿಗಳು, ರಾಜಕೀಯ ನಾಯಕರು ಹೀಗೆ ಸಂದರ್ಶನಕ್ಕೆ ನನಗೆ ಬರಗಾಲವೇ ಇರಲಿಲ್ಲ ಮತ್ತು  ಅವರವರ ಪೂರ್ತಿ ಬಯೋಡೆಟಾವನ್ನು ವಿಶಾಲ ಓದುಗರಿಗೆ ಇದುವರೆಗೂ ಮುಟ್ಟಿಸುತ್ತಾ ಇರುವುದಕ್ಕೆ ಲೆಕ್ಕವೇ ಇರಲಿಲ್ಲ. ಅದೇನೋ ಗೊತ್ತಿಲ್ಲ!. ಹಿಂದಿನ ಎಲ್ಲಾ ಸಂದರ್ಶನಕ್ಕಿಂತಲೂ ಇದು ಭಿನ್ನ ಎನಿಸುತ್ತಿತ್ತು. ಕಾರಣ ಆ ದಿನ ನನ್ನೆದುರು ಸಂದರ್ಶನಕ್ಕೆ ಕೂರುವ ವ್ಯಕ್ತಿ ಅಂತಿಂತವರಾಗಿರಲಿಲ್ಲ. ಸಾಕ್ಷಾತ್ ದೇವಮಾನವ. ಈ ಹಿಂದಿನ ನನ್ನ ಎಲ್ಲಾ ಸಂದರ್ಶನವೂ ‘ಗೆದ್ದ’ಲಾದರೆ, ಸಂದರ್ಶನ ಮುಗಿಸಿ ಹೊರಬಂದಾಗ ‘ಇದ್ದಲಿನ ಪ್ರಭೆ’ ಎನ್ನಿಸಿತ್ತು.
ಗೊತ್ತಿಲ್ಲ!.. 
ಆ ದಿನ ಅವರನ್ನು ಭೇಟಿಯಾಗುವುದಿರಲಿ, ಮಾತನಾಡಲು ಸಮಯವೇ ಸಿಗುತ್ತದೆ ಅಂದುಕೊಂಡಿರಲಿಲ್ಲ. ಆಪ್ತರಾದ ಸಾವಣ್ಣ ಪ್ರಕಾಶನದ ವ್ಯವಸ್ಥಾಪಕ ಜಮೀಲ್‍ರವರಿಗೆ ಹಿಂದಿನ ದಿನವೇ ನಿಮ್ಮ ಕಛೇರಿಗೆ ಅವರೇನಾದರೂ ಬಂದರೆ ನನಗೆ ತಿಳಿಸಿ, ಸಂದರ್ಶಿಸಬೇಕೆಂದುಕೊಂಡಿರುವೆ ಎಂದು ಹಲುಬಿದ್ದೆ. ಅದು ನನ್ನ ಪುಣ್ಯವೋ, ನಿಮ್ಮ ಅದೃಷ್ಟವೋ ಗೊತ್ತಿಲ್ಲ, ಯಾರಿಗೂ ಸಮಯ ನೀಡದೆ, ಲೆಕ್ಕಾಚಾರ ಹಾಕಿ ಸಿಕ್ಕೇ ಸಿಗುತ್ತೇನೆ ಎಂದು ಮಾತನ್ನು ನೀಡದೆ, ಸದಾ ಸಾಗುತ್ತಿರುವ ಅವರು ‘ನಿನಗಾಗಿಯೇ ಈ ಸಮಯ ಕಣೋ, ದೇವರೇ ನಮ್ಮಿಬ್ಬರನ್ನು ಭೇಟಿಮಾಡಿಸಿದ. ನಾ ನಿನ್ನ ಅಭಿಮಾನಿ ಅಪ್ಪಿ’ ಎಂದು ಪ್ರೀತಿಯ ಕಂಗಳ್ಳಲ್ಲಿ, ಮಂದಾರದ ಮನಸ್ಸಲ್ಲಿ ನನ್ನ ಭರಮಾಡಿದಾಗ ಜಗತ್ತು ಗೆದ್ದ ಖುಷಿಯಲ್ಲಿ ಧಾವಿಸಿದ್ದು ಈ ಲೇಖನಕ್ಕೆ ಪೂರಕವಾಯಿತು.
ಹೌದು!., ಆ ವ್ಯಕ್ತಿ ಬೇರೆ ಯಾರೂ ಅಲ್ಲ!! ತನ್ನನ್ನು ತಾನು ಮೂರ್ಖ ಎಂದು ಕರೆದುಕೊಂಡು, ನಾನೇನು ಅಲ್ಲ, ಇವನು (ಮೂರು ಕಣ್ಣ) ಹೇಳಿದಂತೆ ನುಡಿವ ಪಾತ್ರಧಾರಿ ಎನ್ನುವ ‘ಅಹೋರಾತ್ರ’...
‘ಜ್ಞಾನವೆನ್ನುವುದು ಶ್ರೇಷ್ಠ ಆದರೆ ಧ್ಯಾನ ಅದಕ್ಕಿಂತ ಶ್ರೇಷ್ಠ’ ಎನ್ನುವ ಮಾತು ಭಗವದ್ಗೀತೆಯಲ್ಲಿದೆ. ಅಂತೆಯೇ ನನಗೆ ಇವರನ್ನು ಸಂದರ್ಶಿಸಿದಾಗ ಇವರು ಅವೆರಡಕ್ಕಿಂತಲೂ ಶ್ರೇಷ್ಠವಾಗಿದ್ದಾರೆಂದು ಅನಿಸಿತು. ಪ್ರತಿಯೊಬ್ಬರನ್ನು ಪ್ರಚೋದಿಸುವ, ಮಾತನಾಡಿಸುವ, ಉನ್ಮಾದಿಸುವ, ನಯ-ವಿನಯತೆಯ ಸರಳ ಸಜ್ಜನಿಕೆ ಇವನಿಗೆ ಹೇಗೆ ಬಂತೋ ನಾ ಕಾಣೆ!!. ಡಿ.ವಿ.ಜಿಯವರ ಮಾತಿನಂತೆ ‘ಹಳೆ ಬೇರನ್ನು ಇಟ್ಟುಕೊಳ್ಳೋಣ ಹೊಸ ಚಿಗುರು ಬದಲಿಸೋಣ’ ಎನ್ನುವ ತತ್ವ ಇವರದು.
ನಿಮಗೆಲ್ಲಾ ಗೊತ್ತಿರಬಹುದು ಬಹಳ ಇತ್ತೀಚೆಗೆ ‘ಮೂರ್ಖನ ಮಾತುಗಳು’ ಎನ್ನುವ ಪುಸ್ತಕ ಬಿಡುಗಡೆಯಾಗಿ ಎಲ್ಲೆಲ್ಲೂ ಅನೇಕಾನೇಕರು ಅದರ ಬಗ್ಗೆ ಮಾತನಾಡಿದ್ದರು. ಆ ಪುಸ್ತಕವನ್ನು ನೀವೊಮ್ಮೆ ಓದಿದರೆ ಇವನ್ಯಾರು?, ಅವನ್ಯಾರು?, ನಾನ್ಯಾರು? ನೀನ್ಯಾರು? ಇವನ ಅಂತರಂಗದ ಶಕ್ತಿಯೇನು?, ಬಹಿರಂಗದ ಆಸೆಗಳೇನು? ಆತ್ಮದ ಮಾತುಗಳೇನು? ಇವನ ನಡೆಯ ಗುಟ್ಟೇನು? ಹೀಗೆ ಎಲ್ಲವೂ ತಿಳಿಯಬಹುದು. 
ಈಗ ನನ್ನ ಮುಂದಿರುವ ಕನ್‍ಫ್ಯೂಷನ್ ಏನೆಂದರೆ ಇವರ ಬಗ್ಗೆ ಬರೆಯಲಾ!? ಇವರೊಳಗಿರುವ ಅವನ ಬಗ್ಗೆ ಬರೆಯಲಾ!? ಸಾಧನೆಗಳನ್ನು ಪಟ್ಟಿ ಮಾಡಲಾ!? ಇವರ ಪುಸ್ತಕದ ಬಗ್ಗೆ ಬರೆಯಲಾ!? ಇಲ್ಲಾ ಇವರ ಜ್ಞಾನಾರ್ಜನೆ ಮತ್ತು ಸಾಧನಾತೀತತೆಗಳ ಬಗ್ಗೆ ಬರೆಯಲಾ ಎನ್ನುವುದಾಗಿದೆ.

          ಎಲ್ಲವನ್ನು ಚ್ಯುತಿ ಬಾರದಂತೆ ನಿಮಗೆ ವಿವರಿಸಬೇಕು, ಅದು ಅವರದೇ ಮಾತುಗಳಲ್ಲಿ ವ್ಯಕ್ತವಾದಂತಿರಬೇಕು, ‘ಬೇಡ ಕಣೋ ಅಪ್ಪಿ’ ಎನ್ನುವ ಅವರ ಮಗುವಿನಂಥ ಭಾವಕ್ಕೆ ಋಣಿಕಾಂತಿ ನಾವಾಗಬೇಕು ಆದ್ದರಿಂದ ಅವರದೇ ‘ಮೂರ್ಖನ ಮಾತು’ಗಳ ದಾಟಿಯಲ್ಲಿ ಅವರೇ ಹೇಳಿದಂತೆ ನಿಮಗೆ ಭಟ್ಟಿ ಇಳಿಸುತ್ತೇನೆ. ಗುರುವರ್ಯಾ ತಪ್ಪಿದ್ದಲ್ಲಿ ಕ್ಷಮೆ ಇರಲಿ...
ಇವರ ಮೂಲ ಹೆಸರು ನಟೇಶ್ ಪೋಲಿಪಳ್ಳಿ. ಜಗಜ್ಜಾಹೀರವಾಗಿರುವುದು ‘ಅಹೋರಾತ್ರ’ ನಾಮಾಂಕಿತದಿಂದ. ‘ಅಹೋರಾತ್ರ’ ಎಂದರೆ ಹಗಲು ಮತ್ತು ಬೆಳಕನ್ನು ಪ್ರತಿನಿಧಿಸುವ ‘ಅಹೋ’ ಹಾಗೂ ರಾತ್ರಿ ಮತ್ತು ಕತ್ತಲನ್ನು ಪ್ರತಿನಿಧಿಸುವ ‘ರಾತ್ರ’ ಸೇರಿ ಸಂಪೂರ್ಣತೆಯ ಸಂಕೇತವಾಗಿ ‘ಅಹೋರಾತ್ರ’ವಾಯಿತು ಎನ್ನುತ್ತಾರೆ.
(ಮಾತಿನಲ್ಲಿ ‘ಇವನು’ ಎಂದು ಸಂಭೋದಿಸುವ ‘ಅಹೋರಾತ್ರ’ರ ಮಾತಲ್ಲೇ ಬರವಣಿಗೆಯನ್ನು ನಿಮ್ಮ ಮುಂದಿಡುತ್ತೇನೆ. ಆಗ ಅಂಕಣಕ್ಕೊಂದು ಅರ್ಥಬರಬಹುದು. -ಇಲ್ಲಿ ‘ಇವನು’ ಎಂದರೆ ಮೂರು ಕಣ್ಣ ಎನ್ನುವ ಅರ್ಥವೂ ಬರುತ್ತದೆ)
 ಇವನ ಬಾಲ್ಯವೇ ಇವನ ಆಧ್ಯಾತ್ಮಿಕ ಜೀವನಕ್ಕೆ ಅಡಿಪಾಯ. ತುಂಬಾ ಪುಟ್ಟ ಗ್ರಾಮವಾದ ಕೋಲಾರ ಜಿಲ್ಲೆಯ ಬಾಗೆಪಲ್ಲಿ ತಾಲೋಕಿನ ಪಾತಪಾಳ್ಯ ಎನ್ನುವ ಹಳ್ಳಿಯಲ್ಲಿ ಇವನ ಜನನವಾಗುತ್ತದೆ. ತಾತ ಸ್ವಾತಂತ್ರ್ಯ ಹೋರಾಟಗಾರರು. ಕ್ರೀಡೆ, ವಾಲಿಬಾಲ್ ಅಕಾಡೆಮಿ, ಸ್ವಾತಂತ್ರ್ಯ ಹೋರಾಟ ಇವುಗಳಲ್ಲೇ ಸದಾ ಕಾಲ ಕಳೆದ ಬಾಲ್ಯ ಜ್ಞಾನಿ. ಸುಮಾರು 32 ಬಾಗಿಲಿನ ದೊಡ್ಡ ಮನೆ. ಅಪ್ಪ ಕಷ್ಟಪಟ್ಟು ಮನೆಗೆ ದುಡಿಯುತ್ತಿದ್ದರು.ಮನೆಯ ಎಲ್ಲಾ ವಾತಾವರಣವನ್ನು ಅವರೇ ಸಂಭಾಳಿಸಬೇಕಾಗಿತ್ತು. ಆ ಸಮಯ ಇವನು ತನ್ನನ್ನು ತಾನೂ ಪೂರ್ಣ ಶರಣಾಗಿಸಿಕೊಂಡಿದ್ದು ಹೆತ್ತಮ್ಮನಿಗೆ ಮಾತ್ರಾ.
ಚಪ್ಪಲಿ ಹಾಕಿಕೊಳ್ಳುತ್ತಿರಲಿಲ್ಲ. ಅದರ ಅವಶ್ಯಕತೆಯೂ ಇರಲಿಲ್ಲ. ಪ್ರಕೃತಿ ಮಧ್ಯೆ ಹೊಲಗದ್ದೆಗಳಲ್ಲಿ ಓಡಾಡಿಕೊಂಡು ಬೆಳೆದವನು ಈತ. ಚಿಕ್ಕಂದಿನಲ್ಲೇ ಹರಿಕಥೆಗಳು, ಭುರ್ರ ಕತೆಗಳು, ಮಂದಿರದ ಉತ್ಸವಗಳೆಲ್ಲ ಇವನಿಗಿಷ್ಟವಾಗತೊಡಗಿತ್ತು. ಜೀವನದಲ್ಲಿ ಮನೆಗೋಸ್ಕರ ಬದುಕಬಾರದು, ಇದಕ್ಕೆ ಮೀರಿ ಬದುಕಬೇಕು ಅಂದುಕೊಳ್ಳತೊಡಗಿದನು. ಮನೆಯಲ್ಲಿ ಸಮೃದ್ಧಿ ಇತ್ತು. ತೋಟದ ತುಂಬೆಲ್ಲಾ ಇರುತ್ತಿದ್ದ ಮಾವು, ಉಗ್ರಾಣದ ತುಂಬೆಲ್ಲಾ ತುಳುಕುತ್ತಿದ್ದ ಧಾನ್ಯಗಳು ಇವನಿಗೆ ಹೊಟ್ಟೆಪಾಡಿಗಾಗಿ ಬದುಕಬೇಕು ಎನ್ನುವ ಆಸೆಗಳನ್ನೇ ತುಂಬಲಿಲ್ಲ.
ಓದು ಪ್ರಾರಂಭಿಸಿದಾಗ ತಾಯಿ, ‘ದೊಡ್ಡ ಆಫೀಸರ್ ಆಗು’ ಎಂದು ಹೇಳಲೇ ಇಲ್ಲ. ಚಿಕ್ಕಂದಿನಿಂದಲೂ ಕೂರಿಸಿಕೊಂಡು ಚಂದಮಾಮನ ಕತೆ ಹೇಳಿ ಇದೊಂದಿದ್ದರೆ ಸಾಕು ಜೀವನ ಅರಿಯಬಹುದು ಎಂದು ತಿಳಿ ಹೇಳ್ತಾ ಇದ್ರು. ಅದನ್ನೇ ಇವನು ಸೀರಿಯಸ್ಸಾಗಿ ತೆಗೆದುಕೊಂಡ. ಪ್ರತಿಯೊಂದು ಕಥೆಯಲ್ಲೂ ಜೀವನ ಸಿಕ್ತು. ಇವನಿಗೆ ಪ್ರಕೃತಿಯ ಸಹಜತೆಯನ್ನು ತಾಯಿ ಬಹಳ ಅಂದವಾಗಿ ತೋರಿಸಿದ್ದರು. ಹಾವಿನ ಪೊರೆ ಬಿಡುವುದು, ನವಿಲಿನ ನರ್ತನ, ಜೀವಿಗಳ ಮಿಲನ ಇತ್ಯಾದಿಗಳೆಲ್ಲವನ್ನು ತೋರಿಸಿ, ಬಿಡಿಸಿ ಹೇಳುತ್ತಿದ್ದರು, ‘ಫೇಲಾದರೆ ನೀನು ನನ್ನ ಜೊತೆ - ಪಾಸಾದರೆ ನಾನು ನಿನ್ನ ಜೊತೆ ಇದ್ದೀನಿ ಬಿಡೋ’ ಎಂದು ಧೈರ್ಯ ತುಂಬಿ ಸಹಜತೆಯ ಬದುಕಿಗೆ ದಾರಿ ಮಾಡಿದ್ದರು. 
ಶಾಲೆಯಲ್ಲಿ ಗುರುಗಳು ಇವನನ್ನೇ ಜಾಸ್ತಿ ಪ್ರೀತಿ ಮಾಡುತ್ತಿದ್ದರು. ‘ಇವನ ಜೊತೆ ವೈವಿಧ್ಯಮಯ ಪ್ರಶ್ನೆಗಳಿವೆ!, ಇವನು ಇಲ್ಲಿರಬಾರದು, ಬೇರೆ ಎಲ್ಲಾದರೂ ಕಳಿಸಿ’ ಅಂತಿದ್ರು, ಅಮ್ಮನ ಬಗ್ಗೆ ವಿಶೇಷ ಮಮತೆ ಹೊಂದಿದ್ದ ಇವ, ‘ಈ ಪ್ರಶ್ನೆಗಳೇ ನನ್ನನ್ನು ತಾಯಿಯಿಂದ ದೂರ ಮಾಡುತ್ತವೋ ಎನೋ’ ಎಂದು ಕೆಲವೊಮ್ಮೆ ಪ್ರಶ್ನೆಯನ್ನೇ ಕೇಳದೆ ಇರುತ್ತಿದ್ದ. ಕಾರಣ ಅಮ್ಮನಿಲ್ಲದೇ ಇರುವ ಧೈರ್ಯ ಇವನಿಗಿರಲಿಲ್ಲ. 
ಹೀಗೆ ಇವನ ಬಾಲ್ಯ ಜೀವನ ತುಂಬಾ ಉತ್ತಮವಾದ ಆಕಾರವಾಯಿತು. ಎಲ್ಲಾ ಜಾತಿ ಬೇಧಗಳನ್ನು ತೊರೆದು ನಿಂತಿತು. ‘ಪಾಸಾಗುವುದಕ್ಕೆ ಓದಬೇಡ ತಿಳಿದುಕೊಳ್ಳುವುದಕ್ಕೆ ಓದು’ ಎನ್ನುವ ಮನಸ್ಥಿತಿ ಇವನದಾಯಿತು. ಇವನ ತಾತನಿಗೆ ಜ್ಯೋತಿಷ್ಯ ಜ್ಞಾನವಿತ್ತು. 4ನೇ ತರಗತಿ ಇರುವಾಗಲೇ ತಾತ ಮಂದ ದೂರದೃಷ್ಟಿ ಹೊಂದಿದ್ದರಿಂದ ಜಾತಕಗಳನ್ನು ಇವನ ಕೈಯಿಂದಲೇ ಬರೆಸಲು ಆರಂಭಿಸಿದರು. ಅಲ್ಲಿಂದ ಜಾತಕಗಳನ್ನು ಬರೆಯುವ ಕಾಯಕ ಪ್ರಾರಂಭವಾಯಿತು.

ತಿಳಿದ ಹಾಗೆ ಮಾತಾಡುವ ಜಾಯಮಾನ ಇವನದಾಯ್ತು. ಅದೃಷ್ಟವೋ ಏನೋ ಎಂಬಂತೆ ಓದಿದ ಎಲ್ಲ ವಿಷಯಗಳು ಉತ್ತಮ ಅಂಕವನ್ನೇ ಹೊತ್ತು ಬಂದವು. ಒಳ್ಳೆಯ ಮಾರ್ಕ್ ಬಂದರೆ ಮಾರಕ ಎನ್ನುವ ಅಂಶವೂ ತಿಳಿಯಿತು. ಇಂಜೀನಿಯರಿಂಗ್ ಓದಲು ಸೀಟ್ ಸಿಕ್ತು. ಆದರೆ ಜನರನ್ನು ಓದಬೇಕೋ!?, ಇಂಜಿನಿಯರಿಂಗ್ ಓದಬೇಕೋ!? ಎನ್ನುವ ಪ್ರಶ್ನೆಗಳು ಇವನನ್ನು ಕಾಡತೊಡಗಿತು. ದಿನ ಮುಗಿಸುವಷ್ಟರಲ್ಲಿ ಆಧ್ಯಾತ್ಮದ ಸೆಳವು ಇವನನ್ನು ಓವರ್ ಟೇಕ್ ಮಾಡಿತು. ‘ನಾನು ಇದಕ್ಕೋಸ್ಕರ ಹುಟ್ಟಿಲ್ಲ, ನನ್ನಿಂದ ಬೇರೇನೋ ಆಗಬೇಕಿದೆ ಅಂದೆನಿಸಿ ಅಮ್ಮನ ಬಳಿ ಅತ್ತು ಹೇಳಿ’ ಅಮ್ಮನ ಪೂರ್ಣ ಹಾರೈಕೆಯೊಂದಿಗೆ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಹೋಗಿ ಕುಳಿತುಕೊಂಡು ಮಾತು ಆರಂಭಿಸುತ್ತಾನೆ. ಜನರ ಸೆಳೆವು ಆರಂಭವಾಗುತ್ತದೆ. ಅಂತೆಯೇ ಜನರ ಸಂಖ್ಯೆ ಜಾಸ್ತ್ತಿಯಾಗುತ್ತದೆ. ಕಠಿಣವಾದ ವಿಚಾರ, ದೇವರ ಪ್ರೀತಿ ಧ್ಯಾನ, ಭಗವದ್ಗೀತೆಯ ಓದು, ಸಾಹಿತ್ಯದ ಒಲವು ಹೀಗೆ ಎಲ್ಲವೂ ಇವನನ್ನ ಸೆಳೆಯುತ್ತದೆ.
ಮುಂದೆ ಈತ ಹೇಳಿದ್ದೆಲ್ಲಾ ನಿಜವಾಗುತ್ತಾ ಸಾಗಿತು. ಅಂದಿನ ದಿನಗಳಲ್ಲಿ, ಬರೇ ಮನುಷ್ಯರೊಡನೆ ಮಾತನಾಡುತ್ತಿದ್ದ ಇವ, ಮಾತು ಕಿರಣದ ಹಾಗೆ, ಪ್ರತಿಕಿರಣದ ಅವಶ್ಯಕತೆ ಅದಕ್ಕಿಲ್ಲ ಎಂದು ಅರಿತು ನಂತರ ಮಾತು ಮಾತಿನ ಮಾತಲ್ಲೇ ಮುಳುಗಿ ಹೋದ. ಇರುವೆಯೊಡನೆಯೂ ಮಾತು, ಕರುವಿನೊಡನೆಯೂ ಮಾತು, ಬಳ್ಳಿಯೊಡನೆಯೂ ಮಾತು, ಕಲ್ಲಿನೊಡನೆಯೂ ಮಾತು. ಅದೊಂದು ರೋಮಾಂಚನ ಅನುಭವ. ದೇವನೆಂದೂ ಮಾತನಾಡುವುದಿಲ್ಲ, ಅದೊಂದು ಬಯಸಿದಾಗೆಲ್ಲ ಓದುವಂತಹ ಪುಸ್ತಕ ಎಂಬುದು ತಿಳಿಯುತ್ತಲೇ ಹೋಯಿತು. ಜಗತ್ತಿಗೆ ಅದರ ಅರಿವನ್ನು ಸಾರಲು ಎದ್ದು ನಿಂತನು.
ಇವನಿಗೆ ಚಿಕ್ಕಂದಿನಿಂದಲೂ ಅಮ್ಮನೇ ಅಪಾರ ಧೈರ್ಯ. ಅಮ್ಮನಿಲ್ಲದಿದ್ದರೆ ನಾನಿರಲು ಸಾಧ್ಯವಿಲ್ಲವೆಂಬಂತೆ ಬದುಕುತ್ತಿದ್ದವನಿಗೆ ಒಮ್ಮೆ ದೇವಾಲಯದ ಬಳಿ ಕುಳಿತಿದ್ದಾಗ ಜ್ಞಾನೋದಯವಾಗಿತ್ತು. 
ಭದ್ರತೆ ಭಯದ ತಾತ್ಕಾಲಿಕ ವಿರಾಮ, ಭದ್ರತೆ ಇಲ್ಲದೆ ನಿರ್ಭಯತೆ ಪೂರ್ಣವಿರಾಮ, ಅದೇ ಮುಕ್ತಿ, ದೇಹ ಕಳಚಿದ ಆಕಾಶ. ಆವರಣವಿಲ್ಲದ ಸ್ವಾತಂತ್ರ್ಯ, ಗಡಿಯಿಲ್ಲದ ದೇಶ, ವಿದೇಶವೂ ಸ್ವದೇಶವೂ ಒಂದಾಗುವುದು. ಯುದ್ಧವಿಲ್ಲದಂತಾಗುವುದು. ದೇಹ, ದೇಶಗಳು ದೇವನಲ್ಲಿ ಲೀನವಾಗುವ ಕ್ರೀಯೆ, ಸಮ್ಯಕ್ಮುಕ್ತಿ, ಬಯಸುವಿಕೆಯಿಂದ ಹುಟ್ಟುವ ಮೊದಲ ವೈರಿ ಭಯ. ಅಹಂಕಾರದೊಂದಿಗಿನ ನಿರ್ಭಯತೆ ನಾಟಕವಷ್ಟೇ. ಅಹಂಕಾರ ತೊರೆದ ನಿರ್ಭಯತೆ ಸೌಜನ್ಯವಾಗುತ್ತದೆ. ಸೌಜನ್ಯ ನಿರ್ಭಯದ ಸರೋವರದಲ್ಲಿ ಅರಳುವ ಕಮಲ. ಭಯ ದುಃಖದ ತಾಯಿ, ದುಃಖವು ದೇಹ ದೇಶ ದೇವರನ್ನು ವಿಭಜಿಸುತ್ತದೆ. ಭಯ ನಿರ್ಮೂಲನೆಯ ಪ್ರಯೋಗಗಳು ಆವರಣಗಳನ್ನು ಭೇಧಿಸುತ್ತದೆ ಎಂಬುದನ್ನು ಅರಿತೇ ಬಿಟ್ಟ್ಟ. ಅಂದಿನಿಂದ ಭಯವಿಲ್ಲದೇ ಬದುಕಲಾರಂಭಿಸಿದ.
ಹೀಗೆ ಇವರ ಬದುಕು ಕರ್ನಾಟಕದಿಂದ ದೂರದ ಮುಂಬೈವರೆಗೂ ಚಲನೆ ಕಂಡು ಇಂದು ಮುಂಬೈನಲ್ಲೇ ವಾಸವಾಗಿ ತಾಯ್ನಾಡಿಗೆ ಆಗಾಗಾ ಬಂದು ಹೋಗುತ್ತಿದ್ದಾರೆ. ಆಧ್ಯಾತ್ಮ, ಧ್ಯಾನ, ಸಾಹಿತ್ಯ, ಸಂಸ್ಕøತಿ, ಓದು, ವಿಚಾರ-ವಿನಿಮಯ ಇತ್ಯಾದಿಗಳೆಲ್ಲದರಲ್ಲೂ ತಾನೊಬ್ಬ ನಿಷ್ಣಾತನಾದರೂ ಎಲ್ಲಿಯೂ ಯಾರ ಬಳಿಯೂ ಏನನ್ನೂ ತೋರಿಸಿಕೊಳ್ಳದೇ ಮಾಮೂಲಿಯಾಗಿಯೇ ನಡೆದುಕೊಂಡೆ ಹೋಗುತ್ತಾರೆ. ದುಡ್ಡಿಗಾಗಿ ಕಲಿಯುವ, ಮುನ್ನಡೆಸುವ ಅದೆಷ್ಟೋ ಜ್ಯೋತಿಷ್ಯ ಶಾಸ್ತ್ರ ಸಮಾಜದಲ್ಲಿಂದು ತಲೆಯೆತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಆದರೆ ಇವರೆಂದು ಆ ಶಾಸ್ತ್ರವನ್ನು ಓದಿ ವಾಡಿಕೆ ಮಾಡಿಕೊಂಡವರಲ್ಲ ಮತ್ತು ಅದನ್ನು ಹಣಕ್ಕಾಗಿ ದುರುಪಯೋಗ ಪಡಿಸಿಕೊಂಡವರಲ್ಲ. ಬರಿಯ ಪ್ರೀತಿ ಬಿಟ್ಟರೆ ಯಾರಿಂದ ಏನನ್ನೂ ಬಯಸದ ಮಗುವಿನ ಮನಸು ಅವರದು. ಅವರ ಜ್ಞಾನಕ್ಕೆ, ಅವರಿರುವ ಗೌರವಕ್ಕೆ ಇಂದು ಬಂಗಲೆಯನ್ನೇ ನಿರ್ಮಿಸಿಕೊಂಡು ಐಷಾರಾಮಿಯಾಗಿ ಬದುಕಬಹುದು ಆದರೆ ಹತ್ತು ಮನೆಗಳನ್ನು ಬದಲಿಸಿದರೂ ಅವರಿಂದಿರುವುದು ಬಾಡಿಗೆ ಮನೆಯಲ್ಲೇ ಎಂದರೆ ನೀವು ನಂಬಲಸಾಧ್ಯ.
ಶೂನ್ಯತ್ವ, ಮಾನವ ಧರ್ಮ, ಭಗವಂತ ಎನ್ನುವ ಶಕ್ತಿ, ಪುರಾಣತೆಯ ಸ್ಪಷ್ಟನೆ, ದೇವ-ದೇಶ-ದೇಹ ಇವು ಮೂರರ ಸಂಬಂಧ ಇತ್ಯಾದಿಗಳೆಲ್ಲವೂ ಇವರಲ್ಲಿ ನಾವು ಕಾಣದ ಗೋಚರಗಳಾಚೆ ಮಿಡಿಯುತ್ತವೆ. ಪ್ರತಿ ಮಾತಲ್ಲೂ ನಯತೆ, ವಿನಯತೆ, ನಾನೇನೂ ಅಲ್ಲ, ಎಲ್ಲವೂ ಮೂರು ಕಣ್ಣಿನ ಸುತನೇ ಹೇಳುವವ ಎಂದೆನ್ನುವ ಅಹೋರಾತ್ರರು ನಾನು ಮೂರ್ಖ ಎನ್ನುತ್ತಲೇ ಜಗತ್ತಿಗೆ, ಜನರಿಗೆ ತಮ್ಮ ನುಡಿಗಳನ್ನು ನೀಡುತ್ತಲೇ ಸಾಗುತ್ತಿದ್ದಾರೆ. ಕನ್ನಡದ ಬಗ್ಗೆ ಅಪಾರ ಅಭಿಮಾನವೀಯುತ್ತಾ ಕಬೀರರಂತೆ ರಸಗವಳದ ಸಾಲುಗಳನ್ನು ನುಡಿಯುತ್ತಾ ಹೀಗೆ ಸಾಗುತ್ತಾರೆ.
ಅಂದು ಹೊರಟವ ಇವ...
ಎಲ್ಲಿಯೂ ನಿಲ್ಲಲಿಲ್ಲ...
ಮನೆಯನೆಂದೂ ಕಟ್ಟಲಿಲ್ಲ...
ಕೊನೆಯನಿನ್ನೂ ಮುಟ್ಟಲಿಲ್ಲ...


‘ವೃಕ್ಷ-ರಕ್ಷ’
‘ಮೂರ್ಖನ ಮಾತು’ಗಳು ಪುಸ್ತಕ ಬರೆದಾಗ, ಅದರ ಹಣ ನನಗೆ ಬೇಡವೆಂದು ಹಣವನ್ನು ಸಾವಣ್ಣ ಪ್ರಕಾಶಕರಿಗೆ ಹಿಂದಿರುಗಿಸುವ ಹೊತ್ತು, ಪ್ರಕಾಶಕ ಜಮೀಲ್ ಮತ್ತು ಅಹೋರಾತ್ರರಿಬ್ಬರು ಒಟ್ಟಿಗೆ ಯೋಚಿಸಿ ನಾನ್ ಮನಿ ಸಂಸ್ಥೆಯನ್ನು ಸ್ಥಾಪಿಸಿ ‘ವೃಕ್ಷ-ರಕ್ಷ’ ಎನ್ನುವ ಹೆಸರಿನೊಂದಿಗೆ, ಮನುಷ್ಯನ ಹೃದಯಕ್ಕೆ ಮತ್ತು ವೃಕ್ಷಕ್ಕೆ ನೇರ ಸಂಪರ್ಕ ಒದಗಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಿ ಎಲ್ಲೆಲ್ಲೂ ವೃಕ್ಷದ ಬೀಜಾಂಕುರ ಮಾಡುವ ಕೆಲಸವನ್ನು ಮಾಡುವ ಯೋಜನೆಗೂ ಕೈ ಹಾಕಿದ್ದಾರೆ.
‘ವೃಕ್ಷ-ರಕ್ಷ’ದ ಚಿಹ್ನೆ ಹೇಳುವಂತೆ, 32 ಜನ, 16 ಜೋಡಿಗಳು ವೃಕ್ಷದ ಸುತ್ತುವರಿದಿದ್ದಾರೆ, ವೃಕ್ಷದ ಮೇಲೆ ಮಕ್ಕಳು ಆಟವಾಡುತ್ತಿದ್ದಾರೆ.

ಕವಿ ಕನವರಿಕೆ: ಪ್ರೇಮಾಯಣ - #5

       ಅವನಿನ್ನು ಬ್ಯಾಚುಲರ್. ಅವಳಿಗೀಗ ಮದುವೆಯಾಗಿದೆ. ಒಂದೆರಡು ವರ್ಷಗಳ ಹಿಂದೆ ಇವರಿಬ್ಬರು ಪ್ರೇಮ ಪಕ್ಷಿಗಳು...ಅವನಿಗೆ ಅವಳ ಜೊತೆ ಕಳೆದಿರುವ ನೆನಪುಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಅವಳಿಗೆ ಗಂಡನನ್ನು ಬಿಟ್ಟರೆ ಜೊತೆಗೊಂದು ಮಗುವಿದೆ.
ರಾತ್ರಿ ಮಲಗಿದರೆ ಆಕೆ ನೆನಪಾಗುತ್ತಾಳೆ. ಹೊರ ಪ್ರಪಂಚಕ್ಕೆ ಕಾಲಿಟ್ಟರೆ ಜೊತೆ ನಡೆದ, ಜೊತೆ ಕಳೆದ ಸಮಯಗಳು ನೆನಪುಗಳನ್ನು ಒತ್ತುವರಿ ಪಡೆದು ಅಳಿಸುತ್ತವೆ. ಆಕೆಯ ದೇಹವನ್ನು ಇನ್ನೊಬ್ಬ ಹಕ್ಕುದಾರ ಮುಟ್ಟಬಹುದು ಎನ್ನುವ ಅಂಶ ತಿಳಿದೂ, ಮುಟ್ಟಬಾರದು ಎಂದು ಮನಸು ಹಾಹಾಕಾರ ವ್ಯಕ್ತಪಡಿಸಿ ಹೃದಯ ಚುಚ್ಚುತ್ತದೆ. ಬಾಯಿಗೆ ಬಂದಿರುವ ಮಾತುಗಳು ಆಡದೇ ಮಣ್ಣು ಸೇರಿ ಇವನನ್ನು ಮಣ್ಣಾಗಿಸುತ್ತಿದೆ.
      ಇಬ್ಬರದೂ ಪ್ರೀತಿಯ ಮನಸು. ಯಾವುದೋ ಅನ್ಯ ಶಿಕಾರಿಗೆ ಶಿರ ಕಳೆದಿದೆ. ಸಂಜೆಯಾದರೆ ಅವಳ ನೆನಪು ಆತನಿಗೆ ಮಾರಕವಾಗಿದೆ. ಕುಂತಲ್ಲಿ ಕೂರದೆ, ನಿಂತಲ್ಲಿ ನಿಲ್ಲದೇ, ಯಾರ ಸಂಪರ್ಕಕ್ಕೂ ಮನ ಒಪ್ಪದೇ, ಮನ ಕಾರಾಗ್ರದ ಬಂಧಿಯಾಗಿ ಬವಣೆ ನೋವನ್ನು ಪಡೆಯುತ್ತಿರುವ ಆತನ ಎದೆಯೊಳಗೆ ಅವಳು ಸಉಖವಾಗಿರಲಿ ಎನ್ನುವ ಹಸಿರ ಹೃದಯ ವೈಶಲ್ಯತೆ ಅಷ್ಟೋ ಇಷ್ಟೋ ತ್ಯಾಗದ ಸುಖವನ್ನು ಸಿಂಪಡಿಸುತ್ತಿದೆ...
   
      ಅತ್ತ ಅವಳು ಒಂದಿಷ್ಟು ದಿನ ಏನೂ ಅರಿಯದಂತೆ ಕಾಲ ಕಳೆದು ಎಲ್ಲವನ್ನು ಮರೆತು ಸಂಭ್ರಮಿಸಿದ್ದಕ್ಕೆ ಬಸುರಿಯಾಗಿ ಮಗನನ್ನು ಹೆತ್ತಿದ್ದಳು. ಈಗೀಗ ಮತ್ತೆ ಅವನ ನೆನಪಾಗುತ್ತಿದೆ. ಛೇ!, ನಾನು ಮೋಸ ಮಾಡಿದೆ ನನ್ನ ಹುಡುಗನಿಗೆ ಎನ್ನುವ ಸಾಕ್ಷ್ಯ ಪ್ರಜ್ಞೆ ಅವಳನ್ನು ಕಾಡ ಹತ್ತಿದೆ...ಇತ್ತ ತನ್ನದಲ್ಲ ಎನ್ನುವ ಅವನ ಅನಾಥ ಪ್ರಜ್ಞೆ, ಆತ ನನ್ನವನು ಎನ್ನುವ ಇವಳ ಸಮಯ ಪ್ರಜ್ಞೆಗಳೆರಡು ಕಾಲದ ಹೊಡೆತಕ್ಕೆ ಸಿಕ್ಕಿ ನೋವಲ್ಲೇ ಕನವರಿಸುತ್ತಿವೆ...

ಸಿರಿ ಬುಲೆಟ್... ಕಾವೇರಿದೆ ಕಾವೇರಿ ಕೂಗು...


* ಗೋಳು ಕೇಳುತ್ತಿಲ್ಲ...ಬರೀ ನೋವೆ ಎಲ್ಲಾ...
* ಅಂದಿನಿಂದ ಇಂದಿನವರೆಗೂ ಕರ್ನಾಟಕಕ್ಕೆ ಅನ್ಯಾಯವೊಂದೆ ತೀರ್ಪು
* ಯಾಕೆ!? ಏನು!? ಎತ್ತ!? ಬನ್ನಿ ತಿಳಿಯೋಣ...

         
     ಪ್ರತಿಭಟನೆ...ಪ್ರತಿಭಟನೆ...ಪ್ರತಿಭಟನೆ... 
ಒಮ್ಮೆ ಬಸ್ ನೌಕರರದ್ದು, ಇನ್ನೊಮ್ಮೆ ಕೂಲಿ ಕಾರ್ಮಿಕರದ್ದು, ಮಗದೊಮ್ಮೆ ಬೃಹತ್ ಮಟ್ಟದ ಕಾವೇರಿಯದ್ದು...ಈ ವರ್ಷ ಈ ರೀತಿಯ ಸ್ಟ್ರೈಕ್‍ಗಳಿಗೆ ಬರಗಾಲವೇ ಇಲ್ಲ ಎನ್ನುವಂತಾಗಿದೆ.
ಒಂದೊಂದು ಕಡೆ ಹೊತ್ತಿ ಉರಿಯಿತು, ಇನ್ನೊಂದು ಕಡೆ ಲಾಠಿ ಏಟು ಬಿತ್ತು, ಮತ್ತೊಂದು ಕಡೆ ಆ ರಾಜ್ಯದವನು ಈ ರಾಜ್ಯದವನಿಗೆ, ಇಲ್ಲಿಯವನು ಅಲ್ಲಿಯವನಿಗೆ ಮನಬಂತಂತೆ ಹೊಡೆದು ಆಕ್ರೋಶ ತೀರಿತು. 
ಈಗ ಎಲ್ಲವನ್ನು ಬದಿಗಿಟ್ಟು ದಿನದಿಂದ ದಿನಕ್ಕೆ ಕಾವೇರುತ್ತಿರುವ ಕಾವೇರಿ ನದಿ ಮತ್ತು ಹೋರಾಟದ ಹಿಂದಿರುವ ಎಲ್ಲಾ ಅಂಶಗಳ ನಡುವೆ ಒಂದು ರೌಂಡ್ ಚಲಿಸಿ ತಿಳಿದುಕೊಂಡು ಬರೋಣ. ಯಾಕೆಂದರೆ ಪ್ರತಿಭಟನೆಯೆಂದು ಮಾಡುವ ಅದೆಷ್ಟೋ ಜನರಿಗೆ ಮ್ಯಾಟರ್ ಏನೆಂದೆ ತಿಳಿದಿರುವುದು ಕಡಿಮೆ!. ಇದರ ಇತಿಹಾಸವೇನು?, ಕರ್ನಾಟಕದವರಾದ ನಾವು ಹೋರಾಟ ಯಾಕೆ ಮಾಡಬೇಕು? ನಮಗಾಗುತ್ತಿರುವ ಅನ್ಯಾಯವೇನು? ನೀರನ್ನು ಬಿಡಲಾಗದು ಎಂದು ಖಡಾಖಂಡಿತ ಯಾಕೆ ಹೇಳಬೇಕು ಇತ್ಯಾದಿಗಳನ್ನೆಲ್ಲಾ ತಿಳಿಯೋಣ ಬನ್ನಿ...
ಕಾವೇರಿ ನದಿ ನೀರು ವಿವಾದಕ್ಕೆ ಶತಮಾನಗಳ ಇತಿಹಾಸವಿದೆ. 1892 ಮತ್ತು 1924ರಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಮಾಡಿಕೊಂಡ ಎರಡು ಒಪ್ಪಂದಗಳಿಂದ ವಿವಾದ ಪ್ರಾರಂಭವಾಯಿತು. ಅದು 19ನೇ ಶತಮಾನದ ಬ್ರಿಟೀಷ್ ಆಳ್ವಿಕೆಯ ಕಾಲ. ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಸಂಸ್ಥಾನಗಳು ಆಂಗ್ಲರ ಆಳ್ವಿಕೆಗೆ ಒಳಪಟ್ಟಿದ್ದವು. ಕಾವೇರಿ ನದಿ ನೀರಿನ ಬಳಕೆ ಕುರಿತು ಆಂಗ್ಲರು ಹಲವು ಯೋಜನೆಗಳನ್ನು ರೂಪಿಸಿದ್ದರು. ಇದೇ ವೇಳೆ ಬರಗಾಲ ಪ್ರಾರಂಭವಾಗಿದ್ದರಿಂದ  ಈ ಯೋಜನೆಗಳು ಜಾರಿಗೆ ಬಂದಿರಲಿಲ್ಲ. 1881ರಲ್ಲಿ ಮೈಸೂರು ಸಂಸ್ಥಾನ ಕಾವೇರಿ ನದಿ ನೀರಿನ ಬಳಕೆ ಬಗ್ಗೆ ಕೆಲವು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಯ್ತು. ಈ ಯೋಜನೆ ಜಾರಿಗೆ ಬರಬೇಕೆನ್ನುವಷ್ಟರಲ್ಲಿ ಮೈಸೂರು ಸಂಸ್ಥಾನ ಬ್ರಿಟೀಷ್ ಆಳ್ವಿಕೆಯಿಂದ ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿತು. ಆದರೆ ಮದ್ರಾಸ್ ಸಂಸ್ಥಾನ ಇನ್ನೂ ಬ್ರಿಟೀಷರ ಆಳ್ವಿಕೆಯಲ್ಲೇ ಇತ್ತು. ಆಗ ಮೈಸೂರು ಸಂಸ್ಥಾನ ಕಾವೇರಿ ಬಗ್ಗೆ ನೀರಿನ ಸದ್ಭಳಕೆ ಬಗ್ಗೆ ಮುಂದಾದಾಗ ಮದ್ರಾಸ್ ಸಂಸ್ಥಾನ ವಿರೋಧ ವ್ಯಕ್ತಪಡಿಸಿತು. ಬಿಕ್ಕಟ್ಟಿನ ಶಮನಕ್ಕಾಗಿ 1890ರಲ್ಲಿ ಮೈಸೂರು ಮತ್ತು ಮದ್ರಾಸ್ ಸಂಸ್ಥಾನಗಳ ನಡುವೆ ಮಾತುಕತೆ ಏರ್ಪಟ್ಟಿತು. 2 ವರ್ಷಗಳ ಬಳಿಕ 1892ರಲ್ಲಿ ಉಭಯ ಸಂಸ್ಥಾನಗಳು ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಅನ್ಯಾಯ ಪ್ರಾರಂಭವಾಗಿದ್ದೆ ಈ ಒಪ್ಪಂದದ ಮೂಲಕ. ಈ ಒಪ್ಪಂದಕ್ಕೆ ಮೈಸೂರು ಸಂಸ್ಥಾನ ವಿರೋಧ ವ್ಯಕ್ತಪಡಿಸಿತ್ತಾದರೂ ಸಹಿ ಮಾಡಿತ್ತು. ಮೈಸೂರಿನ ಸಂಸ್ಥಾನಕ್ಕೆ ಕಾವೇರಿ ನೀರಿನ ಹರಿವಿಕೆಯಲ್ಲಿ ಕಡಿಮೆ ಸ್ವಾತಂತ್ರ್ಯ ಹಾಗೂ ಮದ್ರಾಸ್  ಸಂಸ್ಥಾನಕ್ಕೆ ನದಿ ನೀರಿನ ವಿಚಾರದಲ್ಲಿ ಯಾವುದೇ ಕೊರತೆಯಾಗದಂತೆ  ನೋಡಿಕೊಳ್ಳಲಾಗಿತ್ತಲ್ಲದೇ ಮದ್ರಾಸ್ ಸಂಸ್ಥಾನಕ್ಕೆ ಸರ್ವಾಧಿಕಾರ ನೀಡಲಾಗಿತ್ತು.
           ಅಂದಿನಿಂದ ಸ್ವಾತಂತ್ರ್ಯಾ ನಂತರವೂ ಮೈಸೂರು ಸಂಸ್ಥಾನ 1892ರ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಇತ್ತು. 1910ರಲ್ಲಿ ಕನ್ನಂಬಾಡಿ ಎಂಬ ಹಳ್ಳಿಯಲ್ಲಿ ಕಾವೇರಿ ನದಿಗೆ ಅಣೆಕಟ್ಟು ಕಟ್ಟುವ ಯೋಜನೆಯನ್ನು ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅಂದಿನ ಇಂಜಿನಿಯರ್ ಸರ್.ಎಂ. ವಿಶ್ವೇಶ್ವರಯ್ಯ ರೂಪಿಸಿದರು. ಆ ಅಣೆಕಟ್ಟು 2 ಹಂತದಲ್ಲಿ ನಿರ್ಮಿಸುವ ಯೋಜನೆ ಹೊಂದಲಾಗಿದ್ದು, ಆ ಮೂಲಕ 41.5 ಟಿಎಂಸಿ ನೀರು ಸಂಗ್ರಹಿಸುವ ಯೋಜನೆ ಹೊಂದಲಾಗಿತ್ತು. ಆದರೆ ಈ ಯೋಜನೆಗೆ ಮದ್ರಾಸ್ ಸಂಸ್ಥಾನ ತೀವ್ರ ವ್ಯಕ್ತಪಡಿಸಿತಲ್ಲದೇ ನೀರಿನ ಹರಿವು ಕಡಿಮೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿತು. ಅಲ್ಲದೇ ಮೆಟ್ಟೂರು ಬಳಿ ತಾನೂ ಒಂದು ಅಣೆಕಟ್ಟು ನಿರ್ಮಿಸಲು ನಿರ್ಧರಿಸಿತು. ಅದರಲ್ಲಿ 80 ಟಿಎಂಸಿ ನೀರು ಸಂಗ್ರಹದ ಉದ್ದೇಶ ಹೊಂದಿತ್ತು. ಈ ವಿವಾದ ಬ್ರಿಟೀಷ್ ಆಡಳಿತದ ಭಾರತ ಸರ್ಕಾರದ ಮೆಟ್ಟಿಲೇರಿತು. ವಿವಾದವನ್ನು ಪರಿಶೀಲಿಸಿದ ಸರ್ಕಾರ ಮೈಸೂರು ಸಂಸ್ಥಾನಕ್ಕೆ ಅಣೆಕಟ್ಟು ನಿರ್ಮಿಸಲು ಅವಕಾಶ ಕೊಟ್ಟಿತಾದರೂ ಅದರಲ್ಲಿ 11 ಟಿಎಂಸಿ ನೀರು ಸಂಗ್ರಹಿಸಬೇಕು ಎಂದು ತಿಳಿಸಿತು. ಇದರಿಂದ ಉಭಯ ಸಂಸ್ಥಾನಗಳ ನಡುವಿನ ವಿವಾದ ಹಾಗೆಯೇ ಮುಂದುವರೆಯಿತು.
ಕಾವೇರಿ ನದಿ ನೀರಿನ ಇತ್ಯರ್ಥಕ್ಕಾಗಿ ಸರ್ಕಾರ ಅಲಹಾಬಾದ್ ಹೈಕೋರ್ಟ್ ನ್ಯಾ.ಸರ್.ಹೆಚ್.ಡಿ ಗ್ರಿಫಿನ್ ಹಾಗೂ ಇನ್ಸ್‍ಪೆಕ್ಟರ್ ಜನರಲ್ ಆಫ್ ಇರಿಗೇಷನ್ ಇನ್ ಇಂಡಿಯಾ ಮಧ್ಯಸ್ಥಿಕೆ ಹಾಗೂ ಪರಿಶೀಲನೆಗಾಗಿ ನೇಮಕ ಮಾಡಿತು. 1913ರ ವರದಿಯನ್ವಯ 1914ರಲ್ಲಿ ತೀರ್ಪು ನೀಡಿದ  ಸರ್ಕಾರ ಮೈಸೂರು ಸರ್ಕಾರ ಕಾವೇರಿ ಕೊಳ್ಳದಲ್ಲಿ ಕೃಷಿಭೂಮಿಯನ್ನು 1,10,000 ಎಕರೆಗಿಂತ ಹೆಚ್ಚಿಸಬಾರದು ಮದ್ರಾಸ್ ಸಂಸ್ಥಾನಕ್ಕೆ  3,01,000 ಎಕರೆವರೆಗೂ ಹೆಚ್ಚಿಸಿತು. ಈ ತೀರ್ಪಿನ ಬಗ್ಗೆ ಮತ್ತೆ ಮತ್ತೆ ವಿರೋಧಗಳು ವ್ಯಕ್ತವಾದವು.
ಉಭಯ ಸಂಸ್ಥಾನಗಳ ಮಾತುಕತೆ ಫಲವಾಗಿ 1924ರಲ್ಲಿ ಮತ್ತೊಂದು  ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ ಮದ್ರಾಸ್ ಸಂಸ್ಥಾನ ಮೆಟ್ಟೂರು ಅಣೆಕಟ್ಟು ಕಟ್ಟಲು ಹಾಗೂ ಮೈಸೂರು ಸಂಸ್ಥಾನ ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಲು ಒಪ್ಪಿಗೆ ಸೂಚಿಸಲಾಯಿತು. ಉಭಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ತಲೆದೋರದಂತೆ  ನೋಡಿಕೊಳ್ಳುವ ಭರವಸೆಗಳನ್ನು ಉಭಯ ರಾಜ್ಯಗಳು ನೀಡಿದ್ದವು. ಆದರೆ ಈ ಒಪ್ಪಂದ 1974 ಅಂದರೆ 50 ವರ್ಷಗಳು ಮಾತ್ರಾ ಜಾರಿಯಲ್ಲಿರುತ್ತದೆ ಎಂದು ದಾಖಲಿಸಲಾಗಿತ್ತು. ಬಳಿಕ 1956ರಲ್ಲಿ ರಾಜ್ಯಗಳ ಏಕೀಕರಣದ ಸಂಧರ್ಭದಲ್ಲಿ ಬಾಂಬೆ, ಕೊಡಗು ಹಾಗೂ ಆಂಧ್ರಪ್ರದೇಶದ ಹಲವು ಭಾಗಗಳು ಕರ್ನಾಟಕಕ್ಕೆ ಸೇರ್ಪಡೆಗೊಂಡವು. ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದ ಮಲಬರ್ ಕೇರಳ ರಾಜ್ಯವಾಗಿ ಹೊರಹೊಮ್ಮಿತು. ಇದರ ಜೊತೆಗೆ ಪದುಚೇರಿ ಕೂಡ ರಾಜ್ಯವಾಗಿ ಉದಯಿಸಿತು. ಹೀಗೆ ಕಾವೇರಿ ನದಿ ನೀರಿನ ವಿವಾದಕ್ಕೆ 4 ರಾಜ್ಯಗಳು ಸೇರ್ಪಡೆಗೊಂಡವು.
          1924ರಲ್ಲಿ ಮಾಡಿಕೊಂಡ ಒಪ್ಪಂದ ಪೂರ್ಣಗೊಳ್ಳುವ ಮೊದಲೇ ಅಂದರೆ 1970ರಲ್ಲಿ ಕರ್ನಾಟಕ ಮತ್ತು ಮದ್ರಾಸ್  ರಾಜ್ಯಗಳು ಮತ್ತೆ ಕಾವೇರಿ ನದಿ ವಿಚಾರವಾಗಿ ಚರ್ಚೆ ನಡೆಸಿದವು. ಈ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ‘ಕಾವೇರಿ ಸತ್ಯ ಶೋಧನಾ ಸಮಿತಿ’ ರಚಿಸಿತು. ಇದರ ವರದಿ ಪ್ರಕಾರ ಕಣಿವೆ ಪ್ರಾಧಿಕಾರ ಸ್ಥಾಪನೆಗೆ ಉಭಯ ರಾಜ್ಯಗಳು ಒಪ್ಪಿಗೆ ಸೂಚಿಸಿದರಾದರೂ ಕೇಂದ್ರ ಸರ್ಕಾರ ಇದಕ್ಕೆ ಅಧಿಕೃತ ಅನುಮೋದನೆ ನೀಡಲಿಲ್ಲ. ಬಳಿಕ 1976ರಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವರಾಗಿದ್ದ ಜಗಜೀವನ್ ರಾಂ ನೇತೃತ್ವದಲ್ಲಿ ಉಭಯ ರಾಜ್ಯಗಳು ಒಂದು ಒಪ್ಪಂದಕ್ಕೆ ಬಂದವು. ಈ ಒಪ್ಪಂದಕ್ಕೆ ಸಂಸತ್ತಿನಲ್ಲಿ ಅಂಗೀಕಾರ ದೊರೆಯುವ ವೇಳೆಗೆ ತಮಿಳುನಾಡಿನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ತುರ್ತು ಪರಿಸ್ಥಿತಿ ಹಿಂದಕ್ಕೆ ಪಡೆದ ಬಳಿಕ ಹೊಸ ಸರ್ಕಾರ ಎಐಡಿಎಂಕೆ ಅಧಿಕಾರಕ್ಕೆ ಬಂದಿತು. ಆಗ ಮುಖ್ಯಮಂತ್ರಿಯಾಗಿದ್ದ ಎಂ.ಜಿ ರಾಮಚಂದ್ರನ್ 1976ರಲ್ಲಿ ಹೊಸ ಒಪ್ಪಂದವನ್ನು ತಿರಸ್ಕರಿಸಿ 1924ರ ಒಪ್ಪಂದವೇ ನಿರ್ಧರಿಸಿದರು. ಈ ಸಂಧರ್ಭದಲ್ಲಿ  ತಮಿಳುನಾಡಿನಲ್ಲಿ 14,40000 ಎಕರೆಯಿಂದ 15,80,000 ಎಕರೆಗೆ ವಿಸ್ತರಣೆಗೊಂಡಿದ್ದರೆ ಕರ್ನಾಟಕ 1924ರ ಒಪ್ಪಂದದ ಬಿಗಿ ಹಿಡಿತಕ್ಕೆ ಸಿಲುಕಿ ತನ್ನ ಕೃಷಿ ಭೂಮಿಯನ್ನು 6,80,000 ಎಕರೆಗೆ ಸೀಮಿತಗೊಳಿಸಿತು.
1984ರಲ್ಲಿ ತಮಿಳುನಾಡಿನ ತಂಜಾವೂರು ಪ್ರಾಂತದ ರೈತ ಸಂಘಟನೆ ಕಾವೇರಿ ನದಿ ನೀರಿನ ಹಂಚಿಕೆ ವಿವಾದದ ಇತ್ಯರ್ಥಕ್ಕಾಗಿ ನ್ಯಾಯಾಧಿಕರಣ ರಚನೆ ಮಾಡಬೇಕೆಂದು  ಸುಪ್ರಿಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿತು. ಅರ್ಜಿಯ ವಿವಾರಣೆ ನಡೆಸಿದ ಸುಪ್ರೀಂ ಕೋರ್ಟ್ 1990ರಲ್ಲಿ ಉಭಯ ರಾಜ್ಯಗಳು ಪರಸ್ಫರ ಒಪ್ಪಂದಕ್ಕೆ ಬರಬೇಕು. ಇಲ್ಲವಾದಲ್ಲಿ ನ್ಯಾಯಾಧಿಕರಣ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅದೇ ವರ್ಷದಲ್ಲಿ ನ್ಯಾಯಾಧಿಕರಣವನ್ನು ರಚನೆ ಮಾಡಿತು.
1991ರಲ್ಲಿ ತೀರ್ಪು ನೀಡಿದ ನ್ಯಾಯಾಧಿಕರಣ ವಾರ್ಷಿಕ 205 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತು. ಅಲ್ಲದೇ ಹಾಲಿ ಇರುವ ಕೃಷಿ ಭೂಮಿಯನ್ನು ಇನ್ನಷ್ಟು ಹೆಚ್ಚಿಸದಂತೆ ತಿಳಿಸಿತು. ಈ ತೀರ್ಪನ್ನು ವಿರೋಧಿಸಿದ ಕರ್ನಾಟಕ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಿತು. ಸುಗ್ರೀವಾಜ್ಞೆ ವಜಾಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧಿಕರಣದ ಆದೇಶವನ್ನು ಪಾಲಿಸುವಂತೆ ಆದೇಶ ನೀಡಿತು. ಇದೇ ವೇಳೆ 1995-96ರ ವೇಳೆ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಕರ್ನಾಟಕಕ್ಕೆ ಸಂಕಷ್ಟದ ಸ್ಥಿತಿ ಬಂದೊದಗಿತು ಬಳಿಕ 1997ರಲ್ಲಿ ಕೇಂದ್ರ ಸರ್ಕಾರ ಕಾವೇರಿ ನದಿ ಪ್ರಾಧಿಕಾರ ಹಾಗೂ ಕಾವೇರಿ ಮೇಲುಸ್ತುವಾರಿ ಸಮಿತಿಯನ್ನು ರಚಿಸಿತು.
ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತು ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧಿಕರಣ 2007ರ ಫೆ. 5ರಂದು ಕಾವೇರಿ ನದಿ ಪಾತ್ರದಲ್ಲಿ 740ಟಿಎಂಸಿ ನೀರು ಲಭ್ಯವಿದ್ದು, ಇದರಲ್ಲಿ ತಮಿಳುನಾಡಿಗೆ 419 ಟಇಎಂಸಿ ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30ಟಿಎಂಸಿ ಹಾಗೂ ಪಾಂಡಿಚೇರಿಗೆ 7 ಟಿಎಂಸಿ ಮತ್ತು 4 ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಯುವಿಕೆ ಕುರಿತು ಅಂತಿಮ ತೀರ್ಪು ನೀಡಿತು. ಆದರೆ ಬೇರೆ ವರದಿಗಳಂತೆ ಅಲ್ಲಿ 740 ಟಿಎಂಸಿ ನೀರಿರಲಿಲ್ಲ. ಅಲ್ಲಿಯೂ ಮೋಸವಾಯ್ತು. 
ಅಂದಿನಿಂದ ಇಂದಿನವರೆಗೂ ಈ ವಿವಾದ ನಡೆಯುತ್ತಲೇ ಇದ್ದು, ಸದಾ ಒಂದಿಲ್ಲೊಂದು ವಿಭಾಗದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಸದ್ಯ ದಿನೇ ದಿನೇ ಸುಪ್ರೀಂ ಕೋರ್ಟ್ ತೀರ್ಪು ತಮಿಳುನಾಡಿನ ಪರವಾಗೇ ಇದ್ದು, ದಿನಗಟ್ಟಲೇ ಸಾವಿರ ಸಾವಿರ ಕ್ಯೂಸೆಕ್ ನೀರನ್ನು ಬಿಡಿ ಬಿಡಿ ಅನ್ನುತ್ತಲೇ ಇದೆ.
ಈ ಬಗ್ಗೆ ಸುಪ್ರೀಂ ನಮ್ಮ ಮಾತನ್ನು ಕೇಳಬೇಕು:
ನಮ್ಮ ಜಲಾಶಯದಲ್ಲಿ ನೀರಿಲ್ಲ...
ಈಶಾನ್ಯ ಮಳೆಯ ಮಾರುತಗಳು ತಮಿಳುನಾಡಿನಲ್ಲಿ ಸುರಿಸುವ ಸಾದ್ಯತೆ ಇದ್ದು, ಈಗಾಗಲೇ ಅವರ ಮೆಟ್ಟೂರು ಜಲಾಶಯದಲ್ಲಿ 50 ಟಿಎಂಸಿಗೂ ಅಧಿಕ ನೀರಿದೆ.
ನಮ್ಮಲ್ಲಿ ಮಳೆಯ ಪ್ರಮಾಣವೂ ಕಡಿಮೆ ಇದ್ದು ಕುಡಿಯುವ ನೀರಿಗೂ ಸಮಸ್ಯೆ ತಲೆದೋರುತ್ತಿದೆ. ಆದರೂ ನಮ್ಮ ಕುಡಿಯುವ ನೀರನ್ನು ಅವರು ಕೇಳುತ್ತಿರುವುದು ಎಷ್ಟು ಸರಿಯೋ ಗೊತ್ತಿಲ್ಲ.
         ಹಳೆಯ ಕಾಯ್ದೆಗೆ ಅಂಟಿಕೊಂಡು ಕುಳಿತಿರುವ ತಮಿಳುನಾಡಿನಿಂದ ಅನ್ಯಾಯವಾಗುತ್ತಲೇ ಇದ್ದರೂ ಕನ್ನಡದ ಮಂದಿ ಸಹಿಸಿಕೊಂಡಿದ್ದರು ಆದರೆ ನಮಗೆ ಇಲ್ಲದಿರುವಾಗ ಇನ್ನೊಬ್ಬರಿಗೆ ನೀರನ್ನು ನೀಡಿ ಎನ್ನುವ ಮಾತು ಸಮಂಜಸವಲ್ಲವೆಂದರಿತ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ!?, ಯಾವ ನ್ಯಾಯಾಧಿಕರಣ ಇದನ್ನು ಬಗೆ ಹರಿಸುತ್ತೆ!? ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ...ಹೀಗೆ ತೀರ್ಪು ತಮಿಳಿಗರ ಪರವಾಗಿಯೇ ಸಾಗುತ್ತಿದ್ದರೆ ಒಂದಿನ ಮಂಡ್ಯ, ಮೈಸೂರು ಮತ್ತು ಬೆಂಗಳೂರಿನ ಮಂದಿ ಎಲ್ಲವೂ ಬರಡಾಗಿ ನೀರಿಗೆ ಹಾಹಾಕಾರವಿತ್ತು ಸಾಯಬೇಕಾಗುವುದು ಗ್ಯಾರಂಟಿ...
ಈಗ ಯಾಕಾಗಿ ನಾವು ಹೋರಾಟಕಿಳಿದ್ದೇವೆಂದು ಎದೆ ತಟ್ಟಿ ಹೇಳಿ ಮುಂದಡಿಯಿಡೋಣ ಬನ್ನಿ...

ಅವಳು ನೆನಪಾದಳು!.. ನಗಬೇಡಿ ಬಿ ಸೀರಿಯಸ್...



“ಅಭ್ಯಾಸ ಕಡಿಮೆ ನಂಗೆ ಅನುಭವದ ಅಭಾವ
ಕಣ್ಮುಚ್ಚಿದರೂ ಕಾಣುತ್ತದೆ ಒಮ್ಮೊಮ್ಮೆ ಅವಳದೇ ಹಾವ ಭಾವ...”
ಗೊತ್ತಿಲ್ಲ!.. ಅವಳು ಮತ್ತೆ ಮತ್ತೆ ನೆನಪಾಗುತ್ತಾಳೆ. ಯಾವ ದೈವಲೀಲೆಯೋ ತಿಳಿದಿಲ್ಲ!!! ಮೊನ್ನೆ ಮೊನ್ನೆ ಮತ್ತೆ ನೆನಪಾದಳು!.. ಸುಮ್ಮನಿದ್ದ ನನ್ನಲ್ಲಿ ಇತ್ತೀಚಿಗೆ ಕಾಡಲು ಶುರುವಿಟ್ಟಿದ್ದೆ ಅವಳ ಅಂದಿನ ವೈಯಾರದ ನೆಪ, ವಿಧವಿಧದಲ್ಲಿ ಮಿಡುಕಿ ನನ್ನ ಮನಸ್ಸನ್ನು ಕದ್ದು ಹೋದವಳು ಅವಳು. ಅಂದು ನಾ ಅವಳಿಗೆ ಬಿದ್ದೋಗಲು ಭವಣೆ ಸಮಾಚಾರ ಬೇಡವಾಗಿತ್ತು ಬದಲಾಗಿ ಅವಳ ಹವ ಭಾವವೊಂದೇ ಸಾಕಾಗಿತ್ತು.
“ಬಾಳ ಸಂತೆಯ ತುಂಬಾ
ಅವಳದೇ ವೈಖರಿ...
ಬಿಟ್ಟು ಹೋದ ಕ್ಷಣದಿಂದ
ಎದೆಯ ರಂಗದಲ್ಲಿ ಮುನ್ನಡೆಯುತ್ತಲೇ ಇದೆ ಮಂಜರಿ...”
ಅವಳೆಂದರೆ ನನಗೊಂದು ಸಂತೆ, ತುದಿಯನ್ನೇ ಕಾಣದ ಆನಂತ ರೇಖೆ. ಹಲವಾರೂ ಅದ್ಭುತಗಳ ಕಂತೆ. ಅನೇಕಾನೇಕ ಮೂಲ ಪರಿಕರಗಳ ಕುಂಟೆ. ಹೀಗೆಲ್ಲ ಆಗಿರುವ ಅವಳು ನೆನಪೋದರೆ ತಾನೆ ನೆನಪಿಸಿಕೊಳ್ಳಲು!!. ಗೊತ್ತಿಲ್ಲ..,ಕಳ್ಳಿ ಅವಳು!, ನೆನಪಲ್ಲೂ ಬಿಟ್ಟೋಗುತ್ತಾಳೆ!.. ನೆನಪೋಗಿ, ನೆನೆಸಿ ಮತ್ತೆ ಮತ್ತೆ ನೆನಪಾಗುತ್ತಾಳೆ.

“ಪಯಣದ ಮಧ್ಯೆ ಇದಿರಾಗುವ ಮಂದಿಯಲ್ಲೇ ಅವಳ ಗೋಚರ...
ಒಂದರೆಘಳಿಗೆ  ಕಂಡು, ಮತ್ತೇ ಕಾಣದೆ ಅಘೋಚರ...”
ರಸ್ತೆ ಬದಿಯಲ್ಲಿ ನಿಂತಿದ್ದ ಹುಡುಗಿಯೊಬ್ಬಳನ್ನು ಕಂಡು ನನ್ನವಳ ನೆನಪು ಇತ್ತೀಚಿಗೆ ಮತ್ತೆ ಮನದ ಕದ ತೆರೆಯಿತು. ಬದುಕಲ್ಲಿ ಪ್ರತಿ ದಿನವೂ ನೂತನ ನೆಪವೊಡ್ಡಿ ಇದಿರಾಗುವ ಆಕೆಯ, ನೆನಪ ಸುಂಟರ ಗಾಳಿಗೆ ಸಿಲುಕಿ ಅದೆಷ್ಟೋ ಬಾರಿ ಗಿರ ಗಿರನೇ ತಿರುಗಿ ತಲೆಕೆಡಿಸಿಕೊಂಡಿದ್ದರೂ, ಮನಕ್ಕೆ ಮಾತ್ರಾ ಇನ್ನೂ ಬುದ್ಧಿ ಬಂದಿಲ್ಲ!!. ಎಷ್ಟೋ ಬಾರಿ ಅವಳ ಬಗ್ಗೆ ಕಂಪಿಸಿದ್ದೆ, ಮೌನಿಸಿದ್ದೆ, ಕೋಪಿಸಿದ್ದೆ... ಆದರೂ, ಅವಳ ನೆನಪು ನನ್ನ ಬಿಟ್ಟೋಗುವ ಲಕ್ಷಣ ಮಾತ್ರಾ ಕಾಣುತ್ತಿಲ್ಲ!..

ಪ್ರಶ್ನೆ ಏನೆಂದರೆ ಅವಳೇ ಯಾಕೆ ನೆನಪಾಗಬೇಕು... ಈ ಹಾಳು ಹೃದಯ ಬತ್ತಿ ಹೋದ ಎದೆಯಲ್ಲಿ ಮತ್ತೆ ಪ್ರೀತಿ ಸಿಂಚನ ಸಿಂಪಡಿಸಲು ಮತ್ಯಾರಿಗೂ ಅವಕಾಶ ನೀಡುತ್ತಿಲ್ಲವ್ಯಾಕೆ!?...  . ಅವಳೆಂದರೆ ಅದಕ್ಯಾಕೆ ಅಷ್ಟೊಂದು ಇಷ್ಟ!?, ನಾ ಇಷ್ಟು ನೆನಪಿಸಿಕೊಂಡರೂ ಅವಳಿಗ್ಯಾಕೆ ಇವ್ಯಾವುದು ಚುಚ್ಚುತ್ತಿಲ್ಲ!?, ಎಲ್ಲಾ ಕಡೆ ವೃಬ್ರೇಟ್ ಶಕ್ತಿ ಇದೆ ಅಂತಾರೆ ಹಾಗಾದರೆ ಇವಳಲ್ಲಿ ನನ್ನಲ್ಲಿ ಅದು ಇಲ್ಲವಾ!? ಕಣ್ಣಿಗೆ ಬೀಳೋರೆಲ್ಲಾ ಅವಳಂತೆ ಕಾಣುತ್ತಾರೆ. ತತ್ ಕ್ಷಣ ನನ್ನ ಹೃದಯ ಬಡಿದಾಡಿಕೊಂಡು ಸಾಯುತ್ತದೆ. ಇನ್ನೇನು ಉಳಿದಿಲ್ಲ ಸತ್ತೇ ಎನ್ನುವಾಗ ಮತ್ತೆ ಹೃದಯ ನೆನಪುಗಳನ್ನು ಹಾಡಿ ಬದುಕಿಸುತ್ತದೆ...
ಇತ್ತೀಚಿಗೆ ಎಲ್ಲವೂ ರುಟೀನ್ ಆಗಿದೆ. ಹಳೆ ಹುಡುಗಿಯರೆಲ್ಲಾ ಮಗುವೆಯಾಗಿ ಮಗುವನ್ನಾಡಿಸುತ್ತಿರುವುದು ಕಂಡು ಬಂದಿದೆ. ಒಬ್ಬರು ಒಬ್ಬರಿಗೆಂದು ಬರೆದಿಡುವ ಬ್ರಹ್ಮ ನನ್ನವಳನ್ನು ಎಲ್ಲಿಟ್ಟಾದೆನೆಂದು ಅರಸುವುದೇ ಕಾಯಕವೆನಿಸಲು ಶುರುವಾಗಿದೆ. ಮೊದಲೆಲ್ಲ ಹುಡುಗರು ಹುಡುಗಿಯರಿಗೆ ಕಾಟ ಕೊಡುತ್ತಿದ್ದರೆಂದು ಕೇಳಿದ್ದೆ ಆದರೆ ಇದೀಗ ಹುಡುಗೀಯರೆ ಹುಡುಗರಿಗೆ ಕಾಟವೀಯುವಷ್ಟು ಜಗತ್ತು ಬದಲಾಗಿದೆ. ಆದರೆ ಅವಳೊಬ್ಬಳು ಎಲ್ಲೋ ಮಿಸ್ ಆಗಿ ಜನ್ಮಿಸಿರಬೇಕು. ಅವಳಿನ್ನು ಹಳೆ ಕ್ವಾಲಿಟಿಯಳೆನಿಸುತ್ತದೆ. ಹೊಸ ಟ್ರೆಂಡ್ಯಾವುದು ಅವಳರಿವಿಗೆ ಬಂದಿಲ್ಲವೋ ಅಥವಾ ನನ್ನ ಇಷ್ಟಾರ್ಥ ಅವಳು ಹಾಗೆ ಜನ್ಮಿಸಿರುವಳೋ ನಾ ಕಾಣೆ!!. ಹಳೆ ಹುಡುಗಿ ಯಜಮಾನನಿದ್ದರೂ, ಫ್ರೀ ಟೈಮ್ ಮಾಡಿಕೊಂಡು ಮಿಸ್ ಕಾಲ್ ಮಾಡುತ್ತಾಳೆ. ಹೊಸ ಹುಡುಗಿಯೊಬ್ಬಳು ಕರೆಯಲ್ಲೇ ಹೃದಯ ಕೆರೆಯುತ್ತಿದ್ದಾಳೆ.  ಮನಸ್ಸು ಹುಚ್ಚು ಅನಿಸಿದರೂ ಈ ವಿಚಾರದಲ್ಲೆಲ್ಲಾ ನನ್ನ ಮನ ಕೆಟ್ಟ ದಾರಿ ಹಿಡಿಯುವುದಿಲ್ಲ. ಆದರೆ ಅವಳ ವಿಚಾರದಲ್ಲಿ ಹಿಂದೆ ಬೀಳುವುದನ್ನು ಮರೆತಿಲ್ಲ. ಅವಳೇ ಬೇಕು ಅನ್ನುತ್ತದೆÉ. ಈ ಬೇಕು ಬೇಡಗಳೆಲ್ಲ ಮತ್ತೊಬ್ಬಳಿಗೆ ಗೊತ್ತಾಗಿ ವೈಶಮ್ಯ ನೆಲೆಗೊಳಿಸುತ್ತಿದ್ದಾಳೆ... ಇದು ತಪ್ಪು ಕಣೇ! ಹೋಗು ನನ್ನ ಮನಸಿಂದ ಎಂದರೂ ಕೇಳದೆ ಮತ್ತೆ ಮತ್ತೆ ನೆನಪಾಗುತ್ತಲೇ ನನ್ನಲ್ಲಿ ನೆಲೆನಿಂತಿದ್ದಾಳೆ. 
“ವಿಪರೀತ ಬಗೆಯವಳು
ಅಪರಿಮಿತದ ಆಸೆಯವಳು
ನಗುವೇ ಸೋಜಿಗವೆನಿಸುವವಳು
ತುಸು ದೂರವೂ ಬಿಟ್ಟು ಕೊಡದವಳು”
ಅನೇಕ ಕನಸುಗಳ ರಾಶಿಯಲ್ಲಿ ಬುಸ್ಸೆಂದು ಯಾವಾಗಲೂ ಎದ್ದು ಬಿದ್ದು ಬರುವ ಆ ನನ್ನ ಬೆಡಗಿ... ವರ್ಷಗಳ ಹಿಂದೆ ನಮ್ಮೆದುರು ಮನೆಯ ಮಹಡಿಯಲ್ಲಿ ನಗು ಬೀರುತ್ತಿದ್ದ ಸುಂದರಿ. ನೀಳ ಜಡೆಯ ವರ ಪಡೆದಿದ್ದಾಕೆ, ತಲೆ ಸ್ನಾನ ಮಾಡಿ ಮಹಡಿ ಮೇಲೆ ಪ್ರಕಾಶಿಸುವ ಸೂರ್ಯ ಕಿರಣಕೆ ತಲೆಯೊಡ್ಡಿ ಕೂದಲನ್ನು ಒಣಗಿಸುತ್ತಿದ್ದ ಮೊದಲ ದಿನವೇ ನನಗಿಷ್ಟವಾದªಳು.  

ಹರೆಯದ ಹರಿತವಿದು ತುಡಿತದ ಅಮಲಿದು...
ಹುಚ್ಚು ಹೆಚ್ಚೆ ಕಾಡುವುದು, ಪ್ರೀತಿ ಹಚ್ಚಿ ಸತಾಯಿಸುವುದು...
ಹದಿ ಹರೆಯದ ನಮ್ಮಂತವರಲ್ಲಿ ಕಾಣದ ಪ್ರೀತಿಯನ್ನು ಅರಸುವ ಮಜಭೂತೇನು  ಕಡಿಮೆ ಇಲ್ಲ. ಅದರಂತೆ ನಾನು ಒಬ್ಬ. ಹುಡುಗತನ ಹಿಂಬಾಗಿಲಿನಲ್ಲಿ ಮೆಲ್ಲಗೆ ಹೊರಡುತ್ತಿರುವುದು ಒಂದೆಡೆಯಾದರೆ, ಜವಾಬ್ಧಾರಿ ಅನ್ನೋದು ಮುಂಬಾಗಿಲಿನಲ್ಲಿ ಕಾಲಿಂಗ್ ಬೆಲ್ ಒತ್ತುತ್ತಾ ಇರುತ್ತದೆ. ಈ ಹುಡುಗತನ ಪ್ರಾರಂಭದಲ್ಲಿ ಅನೇಕ ಸತ್ಕಾರಗಳ ಸಂತೋಷ ಕೊಟ್ಟರೂ, ಆಮೇಲೆ ನೋವು ನೋವೆ... ಆದರೆ ಒಂದತೂ ನಿಜ!!, ಜೀವನದಲ್ಲಿ ಈ ಪ್ರೀತಿ-ಪ್ರೇಮದ ಮಳೆಗೆ ಸ್ವಲ್ಫ ಆದ್ರೂ ಮೈ ನೆನಸಿಕೊಳ್ಳದವರು ಯಾರೂ ಇಲ್ಲ. ನಮ್ಮನ್ನ ಪ್ರಡ್ಯೂಸ್ ಮಾಡಿದ ದೇವಾನು ದೇವತೆಗಳೇ ಪ್ರೀತಿಯ ಮಳೆಗೆ ನೆನೆದು ಚಳಿ ಜ್ವರ ಆಗಿ ಕಂಬಳಿ ನೆನೆದುಕೊಂಡವರೆ...
ಅವಳನ್ನು ನಾನೆಂದು ಮಾತಾಡಿಸಿಲ್ಲ, ರೌಡಿಯ ಥರ ರೊಡಿಗಡ್ಡಗಟ್ಟಿ ಚುಡಾಯಿಸಿಲ್ಲ, ನೀನೇ ನನ್ನ ಪ್ರೀತಿ, ನೀನೇ ನನ್ನ ಸಿಂಡ್ರೇಲಾ, ನೀನೇ ನನ್ನ ಮಜನೂ ಅಂತ ಪೋಸಿ ಹೊಡೆದಿಲ್ಲ, ಆದರೆ ಅವಳಿಗರಿವಿಲ್ಲದಂತೆ ಕದ್ದು ಮುಚ್ಚಿ ನೋಡಿದ್ದು ಮಾತ್ರಾ ಹೆಚ್ಚಾಗಿಯೇ ಇದೆ. ಅದೇಕೋ ಗೊತ್ತಿಲ್ಲ ಪದೆ ಪದೇ ನೊಡುತ್ತಿದ್ದಂತೆ ಜಾಸ್ತ್ತಿ ಜಾಸ್ತೀಯೇ ಇಷ್ಟವಾಗುತ್ತಿದ್ದಳು. ನಾನವಳ ಕಣ್ಣಿಗೆ ಅಪ್ಪಿ ತಪ್ಪಿ ಎದುರಾಗುತ್ತಿದ್ದರೆ, ಪರವಾಸಿಯೆಂಬಂತೆ ದೂರ ಸರಿಯುತ್ತಿದ್ದದ್ದು, ಇನ್ನೆಲ್ಲೋ ನೋಡುತ್ತಾ ಕೆನ್ನೆಗಿಳಿದಿರುತ್ತಿದ್ದ ಕೂದಲನ್ನು ಮೇಲೆತ್ತಿ ಕಿವಿಯ ಮೇಲ್ಭಾಗಕ್ಕೆ ಪೋಣಿಸುತ್ತಾ, ನಾಚುತ್ತಾ ನೆಲ ನೋಡಿಕೊಂಡು ನಡೆಯುತ್ತಿದ್ದದ್ದು, ಓಪನ್ ಹೇರ್ ಬಿಟ್ಕೊಂಡು ಆಗಾಗ ಸ್ಕೂಟಿಯಲ್ಲಿ ಹೋಗುತ್ತಿದ್ದದ್ದು, ಪಕ್ಕಾ ಟ್ರೆಡಿಷನಲ್ ಎಲಿಮೆಂಟ್ ಎಂಬಂತೆ ಬಟ್ಟೆಗಳನ್ನು ಧರಿಸುತ್ತಿದ್ದದ್ದು, ಇತ್ಯಾದಿಗಳೆಲ್ಲ ನನ್ನನ್ನು ಅವಳತ್ತ ತೀರಾ ಹತ್ತಿರ ಸೆಳೆಯಲು ಖಾತ್ರಿಯಾದ ವಿಚಾರವೆಂದರೆ ತಪ್ಪಿಲ್ಲ. ಮೈನೆರೆದು ನಿಂತಿದ್ದ ಅವಳ ಪ್ರಾಯದ ಬಿಸುಪಿಗೆ ನನ್ನ ಹರೆಯದ ಆಸೆಗಳು ಗರಿಗೆದರಿದ್ದವು. ನಾನೊಬ್ಬನೇ ಅಲ್ಲ ಅನೇಕ ಹುಡುಗರೂ ಅವಳಿಗೆ ಗಾಳ ಹಾಕಿದ್ದರು, ಸಿನೀಮೀಯ ಚರ್ಯೆಯಲ್ಲಿ ರಾಜಕುಮಾರರಾಗಲೂ ಹೊರಟಿದ್ದರು. ನನಗದೇನೂ ಬೇಕಿರಲಿಲ್ಲ!. ಅವಳ್ಯಾರು!?, ಎಲ್ಲಿಂದ ಬಂದವಳು!? ಹೀಗೆ ಯಾವುದನ್ನು ಹುಡುಕುವ ಪ್ರಯತ್ನ ನನ್ನ ಸತಾಯಿಸಲಿಲ್ಲ... ಕೇವಲ ಅವಳನ್ನು, ಅವಳ ನಡೆ ನುಡಿಯನ್ನು ಮಾತ್ರಾ ಗರಬಡಿದವನಂತೆ ನೋಡುತ್ತಾ ನಿಲ್ಲುವುದಷ್ಟೇ ನನ್ನ ಕಾಯಕವಾಗಿತ್ತು.

ಮುಂಜಾನೆ ಕನಸಲ್ಲಿ ಮನಸಿಗೆ ಗಾಯ
ಮನಸೆಂಬ ಮಸಣದಲಿ ಕನಸುಗಳ ಮಾರಣಹೋಮ...
ಕೋಣೆಯ ಮಂಚದ ಮೇಲೆ ಅದೆಷ್ಟೋ ದಿನ ಅವಳನ್ನೇ ನೆನದು ಮಲಗುತ್ತಿದ್ದ ನನಗೆ ಅವಳು ಹತ್ತಿರ ಬಂದು ಕುಂತಂತೆ, ನಿಂತಂತೆ, ಬಿಗಿದಪ್ಪಿಕೊಂಡಂತೆ, ಕತ್ತನ್ನೆತ್ತಿ ಮುತ್ತಿಕ್ಕಿದಂತೆ, ಕಾಣದ ಮೊಗಸಾಲೆಯಲ್ಲಿ ಪ್ರೀತಿ ತುಂಬಿ ತುಂಬಿ ಕೊಟ್ಟಂತೆ. ಆಕೃತಿ ಅನುಭವದಲ್ಲಿ ಒಮ್ಮೊಮ್ಮೆ ಮಧು ಮಂಚ ಏರಿದಂತೆ. ಯಾವುದೋ ಐಶಾರಾಮಿ ಬಂಗಲೆಯಲ್ಲಿ ನಾನೇ ರಾಜ ಅವಳೇ ರಾಣಿಯಾದಂತೆ, ನಮಗೆರಡು ಮಕ್ಕಳಾದಂತೆಲ್ಲಾ ಕನಸು ಬೀಳುತ್ತಿತ್ತು. ಕನಸು ಮಾತ್ರಾ ನನ್ನ ಅವಳನ್ನು ಒಂದು ಮಾಡಿ ಬಂಧಿಸಿ ಫ್ಯಾಮಿಲಿ ನಡೆಸುವ ರೆಂಜ್‍ಗೆ ಲಗ್ಗೆ ಇಟ್ಟಿತ್ತು. ಅವಳನ್ನು ಮುದ್ದಿಸಲು ಮನಸಾಗುತ್ತಿತ್ತು, ಖುಷಿಯಾಗುತ್ತಿತ್ತು. ಕಂಡಿದ್ದೆಲ್ಲವೂ ರಾತ್ರಿಯ ಕನಸು ಎಂದರಿತ ಕ್ಷಣ ನೋವಾಗುತ್ತಿತ್ತು. ಬಿಟ್ಟರೇ ಮದುವೇನೇ ಮಾಡಿಕೊಳ್ಳುತ್ತೇನೆ! ಎನ್ನುವ ಜೋಷ್ ಕೂಡ ಇತ್ತು ಆದರೆ ಮನದಭಯ, ಮನೆಯವರ ಭಯ, ಸಮಾಜದ ಭಯ, ಅರಿವಿನ ಭಯ, ಪ್ರೀತಿ ಭಯ ಇವೆಲ್ಲವೂ ನನ್ನನ್ನ ಕಡೆಯವರೆಗೂ ತಡೆದು ನಿಲ್ಲಿಸಿ ಮಾತೂ ಆಡದಂತೆ, ಮಾತೇ ಬಾರದಂತೆ ಕಟ್ಟಿಹಾಕಿತ್ತು. ಅದೆಷ್ಟೋ ಹೇಳಬೇಕೆಂದಿದ್ದ ಮಾತು ನನ್ನೊಳಗೆ ಮೀಟಿ ಒದ್ದಾಡಿ ಕನಸಿನ ಮಾರಣ ಹೋಮ ಮಾಡಿಕೊಂಡಿತ್ತು. ಇಂದು ಅವಳನ್ನು ಪದೆ ಪದೇ ನೆನದುಕೊಳ್ಳಲು ಅದೂ ಕೂಡ ಒಂದು ಕಾರಣವಾಗಿತ್ತು.




ಮರೆವೆನೆಂದರೂ ನೆನಪಾಗುವೆಯಲ್ಲೆ..
ಬೇಡವೆಂದರೂ ಕಾಡುವಿಯಲ್ಲೆ...
ಈಗೆಲ್ಲಿರುವೆ ಹೇಳೆ ನಲ್ಲೆ...
ಅಲ್ಲೇ ಬಂದು ಹುಡುಕುವೆ ನಿಲ್ಲೆ...
ಆ ದಿನ ಎಲ್ಲಿಗೋ ಬ್ಯಾಗ್ ಕಟ್ಟಿಕೊಂಡು ಹೊರನಡೆದ ನೀನು ಇಂದಿಗೂ ಆ ಮನೆಯ ಬಾಡಿಗೆಗೆ ತಿರುಗಿ ಬಂದಿಲ್ಲ. ನೀ ಹೋದ ಮೇಲೆ ಅದೆಷ್ಟೋ ಜನ ಹುಡುಗಿಯರು, ಹುಡುಗರು ಬಂದು ಬಂದು ಹೋಗಿದ್ದನ್ನು ನೋಡಿರುವೇ ಆದರೆ ಅಲ್ಲಿಗೆ ನಿನ್ನ ಸುಳಿವೇ ಇಲ್ಲ. ನಿನಗದೇನಾಯಿತೋ ತಿಳಿದಿಲ್ಲ. ಆದರೆ ಕೊನೆಯದಾಗಿ ಒಂದೆರಡು ಮಾತು ನಿನಗಾಗಿ ಹೇಳುವೆ ಕೇಳು...
ನೀ ನನಗೊಂದು ತೆರೆ ನೀರ ಭಾವನೆ. ನಿನ್ನ ನೆನಪು ನನಗಿನ್ನು ಗಾಳಿಯಲ್ಲಿ ಒಣಗಿದ ಹೂವಿನ ಗಂಧದಂತೆ. ನಾಳೆಯ ದಿನಗಳ ಪ್ರತಿಷ್ಠಿತ ಭರವ¸ಯಂತೆ. ಬಿಂದಿಗೆಗೆ ಬಿದ್ದ ಬೆಳದಿಂಗಳಂತೆ. ಅವೆಲ್ಲವನ್ನೂ ನಾನಿರುವವರೆಗೂ ಕಾಪಾಡಿಕೊಂಡು ಅದರಲ್ಲೇ ನಿನ್ನ ನೆನೆಸಿಕೊಂಡು ದಿನ ಕಳೆಯುವೆ. ನೀನ್ಯಾರೋ ಎಲ್ಲಿದ್ದೀಯೋ ಗೊತ್ತಿಲ್ಲ!! ಆದರೆ, ನೀ ಅಡಿಗಡಿಗೆ ನೆನಪಾಗುತ್ತೀಯಾ!! ಎಡಬಿಡದೇ ಹಿಂಬಾಲಿಸುತ್ತೀಯಾ!! ನನ್ನ ಹಾದಿಯಲ್ಲಿ ಯಾರದೋ ರೂಪದಲ್ಲಿ ಪ್ರತ್ಯಕ್ಷವಾಗುತ್ತೀಯಾ!! ಈಗಲೂ ನೋಡು ಕಾಣದ ರೂಪದಲ್ಲಿ ನನ್ನನ್ನು ಬರೆಸುತ್ತಿದ್ದೀಯಾ!! ಎಲ್ಲೇ ಇರು ಚೆನ್ನಾಗಿರು... ಈ ಮೌನದೊಳಗೂ ಒಂದು ಪ್ರೀತಿ ಭಿತ್ತಿದ ನಿನಗೆ ನಾನಾಗಲು ಭಯಸುವೆ ಎಂದಿಗೂ ಪುಟ್ಟ ಮಗು...
ಅಯ್ಯೋ ರಾಮ ರಾಮ ಅವಳು ಮತ್ತೆ ನೆನಪಾದಳು...

ಕವಿ ಕನವರಿಕೆ: ಪ್ರೇಮಾಯಣ - #4


     ಅವನು ಒಂಥರಾ!!! ಅವಳು ಒಂಥರಾ!!! 
ಅವಳು ಹೇಳುವುದನ್ನು ಬಿಟ್ಟಿಲ್ಲ!, ಅವಳು ಹೇಳಿದ್ದನ್ನು ಅವನು ಕೇಳುವುದಿಲ್ಲ!.. ಅವನಿಗೆ ಅವಳೆಂದರೆ ಇಷ್ಟ ಆದರೆ ಅವಳ ನಡೆ ನುಡಿ, ಸುತ್ತಮುತ್ತಲ ಪರಿಕರಗಳೆಲ್ಲ ಒಮ್ಮೊಮ್ಮೆ ಇಷ್ಟವಾದರೂ ಸಹಿಸಿಕೊಳ್ಳುತ್ತಾನೆ, ಕೋಪಿಸಿಕೊಳ್ಳುತ್ತಾನೆ, ಒಂದರ್ಧ ಗಂಟೆ ಬಿಟ್ಟು ಮುದ್ದಿಸುತ್ತಾನೆ. ಅವಳಿಗೆ ಅವನ ಎಲ್ಲವೂ ಇಷ್ಟ. ಪ್ರೀತಿಯಲ್ಲಿ ಅವಳು ಹೆಚ್ಚೆನಿಸಿದರೂ ಅವನೇ ಒಂದು ಬೊಗಸೆ ಜಾಸ್ತಿಯೇ ತೂಗುತ್ತಾನೆ... ಗಜಗಯಿಸಿ ಕಚ್ಚಾಡುತ್ತಾರೆ, ಅಷ್ಟಕ್ಕಷ್ಟೇ ಪ್ರೀತಿಸುತ್ತಾರೆ...

ಇಬ್ಬರಲ್ಲೂ ಪ್ರೀತಿ ಪರಿಣಾಮ ಬೀರಿದೆ, ಕಾಣದ ಸುಖ ನೀಡಿದೆ. ಒಂದಿನವೂ ಒಬ್ಬgನ್ನೊಬ್ಬರು ಬಿಟ್ಟಿದ್ದರೆ ಆ ದಿನ ಇಬ್ಬರೂ ಏನೋ ಕಳೆದಂತೆ, ಕಳೆದುಕೊಂಡಂತೆ!!. ವಾರಕೊಮ್ಮೆ ಸಂಧಿಸದಿದ್ದರೆ ಎಲ್ಲವೂ ಮೋಸದಂತೆ, ಇಲ್ಲಿ ಪ್ರೀತಿ ಕುರುಡೋ, ಅವರಿಬ್ಬರ ನಂಬಿಕೆ ಕುರುಡೋ ಇಬ್ಬರಿಗೂ ಗೊತ್ತಿಲ್ಲ!.

ಬೆಳಗೆದ್ದು ಗುಡ್ ಮಾರ್ನಿಂಗ್ ಹೇಳುವುದರಿಂದ ಹಿಡಿದು ಸಂಜೆ ಮಲಗುವವರೆಗೂ ನಡೆದಿದ್ದೆಲ್ಲವೂ ವಿನಿಮಯವಾಗಲೇಬೇಕು. ಸುತ್ತಮುತ್ತ ಸುನಾಮಿಯೇ ಬರಲಿ ಅವರಿಗ್ಯಾವ ಪರಿಯೂ ಇಲ್ಲ. ಕಳ್ಳ-ಕಾಕರು, ಮದ-ಮತ್ಸ್ಯರು, ಉರಿ-ಗರಿಗಳಲ್ಲಿ ಜಗ ಬೇಯುತ್ತಿದ್ದರೂ ಇವರಿಗದ್ಯಾವುದರ ಪರಿವೇ ಕಾಣದು. ಇಬ್ಬರು ಜೊತೆಯಾದರೆ ಜಗವನ್ನೇ ಮರೆತುಬಿಡುತ್ತಾರೆ. ಪ್ರತಿದಿನವೂ ಕಂಪಿಸುವ ಪ್ರೀತಿಯ ಇಂಪಿಗೆ ಹಾತೊರೆಯುತ್ತಾರೆ. ಅವನ ಬಿಸಿಯುಸಿರಿಗೆ ಆಕೆ ಆವಿಯಾಗುತ್ತಾಳೆ. ಕಚ್ಚಾಡಿಕೊಂಡರು ಕೋಪಿಸಿಕೊಂಡರೂ ಅವನೆದೆಯ ತೆಕ್ಕೆಯಲ್ಲಿ ಅವಳು ಆರಾಮಾಗಿಯೇ ಅಪ್ಪಿ ಅಮಲ ಪಾಶದಲ್ಲಿ ನಿದ್ದೆಗೆ ಜಾರುತ್ತಾಳೆ. ಪ್ರೇಮಾಯಣದಲ್ಲಿ ಅವರಿಬ್ಬರ ಹೃದಯವೂ ಒಂದಾಗಿ ಮತ್ತೆ ಮತ್ತೆ ಹುಟ್ಟಿ ಮತ್ತೆ ಮತ್ತೆ ಪ್ರೀತಿಯಲ್ಲಿ ಬದುಕಬಹುದೆಂದು ಎಲ್ಲರಿಗೂ ತೋರಿಸುತ್ತಿದ್ದಾರೆ.

ಸಿರಿ ಬುಲೆಟ್ - ಸೋಜಿಗದ ಸೋಷಿಯಲ್ ಮೀಡಿಯಾ...


ಬಳಸುವಾಗ ನಲಿ-ಕಲಿ, ಯಾಮಾರಿದರೆ ನೀನೇ ಬಲಿ...
ಹೊಟ್ಟೆಗೆ ಹಿಟ್ಟು ಬೇಡ, ಮೊಬೈಲ್‍ಗೆ ನೆಟ್ಟು ಮಾತ್ರಾ ಬೇಕು...
ಚರ್ಚೆಯ ವಿಮರ್ಶೆ, ಕಚ್ಚಾಡುವ ಪರಾಮರ್ಶೆ...
ಇನ್‍ಫಾರ್ಮೆಷನ್ ಸಹವಾಸ, ಅಡಿಕ್ಟ್ ಆಗಿಬಿಟ್ಟಿದ್ದೇವೆ; ಹೆಚ್ಚಿನವರಿಗೆ ಜಾಲತಾಣವೇ ವಾಸ.

                ಈಗೇನಿದ್ದರೂ ಇಂಟರ್‍ನೆಟ್ ಆಟ. ಮೊದಲೆಲ್ಲ ವಿರಳ ಅತೀ ವಿರಳ ಎನ್ನುವಂತಿದ್ದ ಅಂತರ್ಜಾಲ ಇಂದು ಅದೇ ಒಂದು ದೊಡ್ಡ ಜಾಲವೆಂಬಂತೆ ಹಬ್ಬಿಕೊಂಡಿದೆ. ಇದರಿಂದ ಎಲ್ಲವೂ ಬದಲಾವಣೆಗೊಂಡಿದೆ. ನಿಂತಲ್ಲೇ ಏನನ್ನು ಬೇಕಾದರೂ ನೋಡಬಹುದಾದ, ಏನನ್ನು ಬೇಕಾದರೂ ಕೇಳಬಹುದಾದ, ಇನ್‍ಫಾರ್ಮೆಷನ್‍ನನ್ನು ಪಾಸ್ ಮಾಡುವ ಸೋಜಿಗ ಸೃಷ್ಟಿಯಾಗಿದೆ.

  ಒಂದು ಹಂತದವರೆಗೆ ಸ್ಥಿರವಾಗಿದ್ದ, ವೆಬ್ ಪುಟಗಳನ್ನು, ಸಂವಹನಾತ್ಮಕವಾಗಿ ಬದಲಾಗುತ್ತಿದ್ದ ವಿದ್ಯಮಾನವನ್ನು ಪ್ರತಿಯೊಬ್ಬರು ಕಣ್ಣಾರೆ ಕಂಡವರೆ!! ಮತ್ತು ಅದರಿಂದ ಪ್ರಯೋಜನ ಪಡೆಯುತ್ತಿರುವವರೇ!!.ಆಗಿದ್ದಾರೆ.
 ಎಲ್ಲೋ ಒಂದು ಕಡೆ ಕುಳಿತು ಊಡಿಸಿದ ಮಾಹಿತಿಗಳನ್ನು ಜಾಲಿಗರು ಓದುವ ಸ್ಥಿತಿ ಬದಲಾಯಿತು. ಓದುತ್ತಲೇ ಅದಕ್ಕೆ ಪ್ರತಿಕ್ರಿಯಿಸವ ಅವಕಾಶ ದೊರೆಯಿತು. ಮಾಹಿತಿಯ ಬಳಕೆದಾರರೇ ಮಾಹಿತಿಯನ್ನು ಸೃಷ್ಟಿಸುವ ಅವಕಾಶವನ್ನು ಜಾಲತಾಣಗಳು ಬಳಸಿಕೊಳ್ಳಲು ಆರಂಭಿಸಿದ ನಂತರ ಒಂದು ಮೌನ ಕ್ರಾಂತಿಯೂ ನಡೆಯಿತು. ಅಲ್ಲಿಯ ತನಕ ಜಾಲ ತಾಣಗಳನ್ನು ನೋಡುವ ಅವಕಾಶ ಕಲ್ಪಿಸಿದ್ದ ಬ್ರೌಸರ್ ಮಾಹಿತಿಯನ್ನು ಸೃಷ್ಟಿಸುವ ಉಪಕರಣವಾಗಿಯೂ ಬಳಕೆಯಾಯಿತು.
ಇಂದು ಭಾರತದ ಮಟ್ಟಿಗೆ ಇದೊಂದು ದೊಡ್ಡ ಬೆಳವಣಿಗೆ. ಇಂಟರ್‍ನೆಟ್ ಬಳಕೆ ಹೆಚ್ಚಿರುವ ಪಾಶ್ಚಾತ್ಯ ದೇಶಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳ ಸೇವಾ ಲೋಪವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟಿಸುವ ಮಾದರಿಗಳಿವೆ. ಹಾಗೆಯೇ ಮರಗಳನ್ನು ಕಡಿಯುವುದು ಪ್ರಾಣಿಗಳನ್ನು ಉಳಿಸುವುದು ಮುಂತಾದ ಅನೇಕ ಹೋರಾಟಗಳಿಗೂ ಈ ಮಾಧ್ಯಮ ಬಳಕೆಯಾಗುತ್ತಿದೆ.  ಜಗತ್ತಿನ ಯಾವುದೇ ಮೂಲೆಗಳಲ್ಲಿ ಕುಳಿತಿರುವರನ್ನು ಒಂದು ಉದ್ದೇಶಕ್ಕಾಗಿ  ಒಂದುಗೂಡಿಸುವ ಕೆಲಸವನ್ನು ಈ ಸಾಮಾಜಿಕ ಜಾಲತಾಣಗಳು ಮಾಡುತ್ತಿವೆ. 
ಸಾಂಪ್ರದಾಯಿಕ ಸುದ್ಧಿ ಮೂಲಗಳ ಬುಡವನ್ನು ಅಲುಗಾಡಿಸುವಂತಹ ಸಿದ್ಧಿಯ ವಿಶ್ವಾಸಾರ್ಹತೆಯ ವಿಮರ್ಶೆ ಟ್ವಿಟರ್, ಫೇಸ್ ಬುಕ್, ಯೂಟ್ಯೂಬ್, ವ್ಯಾಟ್ಸಾಪ್, ಹೀಗೆ ಹತ್ತು ಹಲವು ಮುಖಗಳಲ್ಲಿ ಅಣುಬಾಂಬ್‍ನ ಸ್ಫೋಟಕ ಕಾಣುವ ವಿದಳನಾ ಕ್ರಿಯೆಯಂತೆ ಮುಂದುವರಿಯುತ್ತ್ತಿದೆ. ಒಬ್ಬ ವ್ಯಕ್ತಿ ತನ್ನ ಫೇಸ್‍ಬುಕ್, ವ್ಯಾಟ್ಸಾಪ್, ಟ್ವೀಟರ್ ನಲ್ಲಿ ಬರೆದು ಶೇರ್ ಮಾಡಿದ ವಿಷಯ ಆತನ ಹಿಂಬಾಲಕರ ಕಂಪ್ಯೂಟರ್, ಮೊಬೈಲ್, ನೆಟ್‍ಬುಕ್, ಲ್ಯಾಪ್ಟಾಪ್ ಇತ್ಯಾದಿಗಳ ಪರದೆಯ ಮೇಲೆ ಬರುತ್ತಿದ್ದಂತೆಯೇ ಆ ವಿಷಯದ ಪರ ಅಥವಾ ವಿರೋಧ ಮಾತುಕತೆಗಳು ಸಂವಾದದ ರೂಪದಲ್ಲಿ ಇಂಟರ್‍ನೆಟ್ ಒಡಲು ತುಂಬುತ್ತಾ ಹೋಗುತ್ತದೆ.
        ಅರಳಿ ಕಟ್ಟೆಯಲ್ಲಿ ಕೂತು ಹರಟುವ ಹಾಗೂ ರಾಜ್ಯ ಮತ್ತು ದೇಶದ ಸುದ್ಧಿಗಳ ಬಗ್ಗೆ ವಿಚಾರ ವಿನಿಮಯ  ಮಾಡಿಕೊಂಡು ಅದಕ್ಕೆ ನಮ್ಮದೇನಾದರೂ ಕಾಣಿಕೆ ಕೊಡಲಿಕ್ಕೆ ಸಾಧ್ಯವೇ ಎಂದು ಯೋಚಿಸಿ ಪತ್ರವ್ಯವಹಾರ ಮುಖೇನ ವ್ಯವಹರಿಸಿ ವರ್ಷಾನುಗಟ್ಟಲೆ ಕಾದು ಕೂರುವ ದಿನಗಳಲ್ಲಿ ಈಗ ನಾವಿಲ್ಲ. ಹಳ್ಳಿಗನೂ ಇಂದು ವಿಶ್ವದ ಇನ್ಯಾವುದೋ ಮೂಲೆಯ ವಿಜ್ಞಾನಿಯ ನೆರವನ್ನು ಪಡೆದು ತನ್ನ ಉತ್ಫತಿಯನ್ನು ಹೆಚ್ಚಿಸಿಕೊಳ್ಳುವ ಕಾಲವಿದು. ಮೊದಲೆಲ್ಲ ಸ್ಥಿರ ದೂರವಾಣಿಯನ್ನು ಬಳಸುತ್ತಿದ್ದವರು ಇಂದು ಕೈಗೆಟುಕುವ ಬೆಲೆಯಲ್ಲಿ ಮೊಬೈಲ್! ಅಲ್ಲಲ್ಲ.., ಆ್ಯಂಡ್ರಾಯ್ಡ್ ಮೊಬೈಲ್‍ನ್ನೇ ಖರೀದಿಸಿಕೊಂಡು ಇಂಟರ್ ನೆಟ್ ಮೂಲಕ ಬೇಕಾದÀ ಗೆಳೆಯರ ಸಂಘವನ್ನು ಸೇರಬಹುದು. ಯಾರು ಯಾರನ್ನು ಬೇಕಾದರೂ ಸಂಧಿಸಬಹುದು.
ಇಲ್ಲಿಯವರೆಗೆ ಎಲ್ಲವೂ ಚೆನ್ನಾಗೆ ಇತ್ತು. ಯಾವಾಗ ಚಿಲ್ಲರೆ ಖಾಸಿಗೂ ಇಂಟರ್‍ನೆಟ್ ದೊರೆಯಲು ಪ್ರಾರಂಭವಾಯ್ತೋ ಅಲ್ಲಿಂದಲೇ, ಏನೋ ಒಂದು ಯಡವಟ್ಟು ಪ್ರದೇಶಕ್ಕೆ ನಾವು ಕಾಲಿಟ್ಟುಬಿಟ್ಟೆವು ಏನಿಸಿದಂತಾಗಿದೆ. ಮುಖ್ಯವಾಗಿ ಇಂದಿನ ಯುವ ಜನತೆ ಈ ಸೋಷಿಯಲ್ ಮೀಡಿಯಾಗಳಿಂದ ಹಾದಿ ತಪ್ಪುತ್ತಿದ್ದಾರೆ. ಕೋಮುವಾದದ ದಳ್ಳುರಿಗೆ ಈಡಾಗುತ್ತಿದ್ದಾರೆ. ತಮ್ಮ ನಿಲುವನ್ನು ವಿರೋಧಿಸುವವರ ಧ್ವೇಷ ಕಟ್ಟಿಕೊಳ್ಳುತ್ತಿದ್ದಾರೆ. 
         ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದು ವರ್ಷದಲ್ಲಿ ನಗರ ಪ್ರದೇಶಗಳಲ್ಲಿ ಸಾಮಾಜಿಕ ಬಳಕೆದಾರರ ಸಂಖ್ಯೆ ಶೇ. 35ರಷ್ಟು ಹೆಚ್ಚಾಗಿದೆ ಎಂದು ಇಂಟರ್ ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಷನ್ ಇಂಡಿಯಾ ಮತ್ತು ಐಎಂಬಿಆರ್‍ಬಿ ಇಂಟರ್ ನ್ಯಾಷನಲ್ ತನ್ನ ವರದಿಯಲ್ಲಿ ಹೇಳಿದೆ.
ಇಂದು ಒಂದಲ್ಲ ಒಂದು ಸಾಮಾಜಿಕ ಜಾಲತಾಣ ನಮ್ಮ ಜೀವನದ ಅವಿಭಾಜ್ಯ ಅಂಗದಂತೆಯೇ ಆಗಿಬಿಟ್ಟಿದೆ. ನಾವು ಕೆಲಸ ಮಾಡುವ ಸ್ಥಳದಲ್ಲೂ ಸೋಷಿಯಲ್ ಮೀಡಿಯಾ ಬಳಸದೇ ಸುಮ್ಮನಿರಲು ಆಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಅಡಿಕ್ಟ್ ಆಗಿಬಿಟ್ಟಿದ್ದೇವೆ. ಬ್ಲೂ ಕೋಟ್ ಸಂಸ್ಥೆಯ ಸಮೀಕ್ಷೆ ಪ್ರಕಾರ, ವಿಶ್ವದಾದ್ಯಂತ ಪ್ರತೀ 5 ಉದ್ಯೋಗಿಗಳಲ್ಲಿ  ಇಬ್ಬರು ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಾರಂತೆ. ಅಂದರೆ ಕೆಲಸದ ಸ್ಥಳಗಳಲ್ಲಿ ಶೇ.40 ರಷ್ಟು ಮಂದಿ ಸೋಷಿಯಲ್ ಮೀಡಿಯಾ ಬಳಸುತ್ತಾರೆ ಎಂದಾಯ್ತು.
ನಿಜಕ್ಕೂ ಇದು ಅಘಾತಕಾರಿ!. ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ನಮಗೆ ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗವಾಗುತ್ತಿದೆಯೋ ಅಷ್ಟೇ ಕೆಡುಕೂ ಇದೆ. ಒಂದು ಸಣ್ಣ ಮಾಹಿತಿಯನ್ನೇ ಎತ್ತಿಕೊಂಡು ಕ್ಷಣಮಾತ್ರದಲ್ಲಿ ಜಗತ್ತಿನ ಮೂಲೆ ಮೂಲೆ ತಲುಪುವಿಕೆಯನ್ನು ಕಾಣಬಹುದಾದ ಉಪಯೋಗವಿರುವ ಇಂಟರ್‍ನೆಟ್ ಅದೆಷ್ಟೋ ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿದೆ. ಹಲವು ಅತೀರೇಖತೆಗಳು, ಜನಾಂಗೀಯ ಘರ್ಷಣೆಗಳು, ಮಾನ ಹರಣಗಳು, ಅಶ್ಲೀಲತೆಯ ಗುಂಗು ಇತ್ಯಾದಿಗಳಿಗೆ ಎಡೆಯಿಕ್ಕುತ್ತಿದೆ. ಇಂದು ಅನೇಕರು ಸೋಷಿಯಲ್ ಮೀಡಿಯಾಗಳನ್ನೇ ಬ್ಯುಸಿನೆಸ್ ಆಗಿ ಕನ್‍ವರ್ಟ್ ಮಾಡಿಕೊಂಡು ಹಲವರಿಗೆ ಹಣದ ಆಮಿಷವಿತ್ತು ಅದೆಷ್ಟೋ ಭ್ರಷ್ಟತನಕ್ಕೆ, ಅನ್ಯಾಯಕ್ಕೆ, ಅತ್ಯಾಚಾರಕ್ಕೆ ನಾಂದಿ ಹಾಡಿಕೊಂಡಿದ್ದಾರೆ.
ಸಾಮಾಜಿಕ ಸೈಟ್‍ನಿಂದ ಯಾರು ಯಾರನ್ನು ಬೇಕಾದರೂ ಫ್ರೇಂಡ್ ಮಾಡಿಕೊಳ್ಳಬಹುದು, ಫ್ರೇಂಡ್ ಶಿಪ್ ಮುಂದೆ ಎಂತಹ ಕೆಟ್ಟ ಕೆಲಸಗಳನ್ನು ಮಾಡಿಸಬಹುದು. 
ಉದಾಹರಣೆಗೆ;
1. ಅವಳಿಗೆ ಅವನು ಯಾರೆಂದೇ ಗೊತ್ತಿರುವುದಿಲ್ಲ. ಸಾಮಾಜಿಕ ತಾಣದ ಮೆಸೇಜ್‍ನಿಂದ ಪರಸ್ಫರ ಬಾಂಧವ್ಯ ಬೆಳೆಸಿ, ಒಂದಿಷ್ಟು ದಿನ ಕಳೆದ ಮೇಲೆ ಈಕೆ ಅವನ ಹಗಲಾಸೆಗೆ ಮಾರು ಹೋಗಿ, ಯಾರೂ ಕಾಣದ ಗುಡ್ಡದ ಮೇಲೆ ಅತ್ಯಾಚಾರಗೊಂಡು ಅನಾಥೆಯಾಗಿ ಸತ್ತು ಬಿದ್ದಿದ್ದಾಳೆ.
2. ನಿಮಗೆ ನಿಮ್ಮಿಷ್ಟ ಬೆಲೆಯ ಸೈಟ್ ಮಾಡಿಸಿಕೊಡುತ್ತೇವೆಂದು ಪ್ರಚಾರಗಿಟ್ಟಿಸಿಕೊಂಡು, ಹಣ ಹೊಡೆದು ಪರಾರಿಯಾಗಿ ನಾಮ ಏಳೆದುಕೊಂಡವರೂ ಇದ್ದಾರೆ. 
  ಇಷ್ಟೇ ಯಾಕೆ ಮೊನ್ನೆ ಮೊನ್ನೆ ಯಾವುದೋ ಪತ್ರಿಕೆಯಲ್ಲಿ ಓದಿದ ನೆನಪು, ‘ಇದೀಗ ದೇವರ ದರ್ಶನ, ಪ್ರಸಾದವೆಲ್ಲವೂ ಇಂಟರ್‍ನೆಟ್‍ನಲ್ಲಿ ತೋರಿಸುತ್ತಿದ್ದಾರಂತೆ. ಜನ ಮನೆಯಲ್ಲೇ ದೇವರನ್ನು ನೋಡಿ ಬೇಡಿಕೊಳ್ಳುತ್ತಿದ್ದಾರಂತೆ ಆ ಬ್ಲಾಗ್ ನ ವೀವರ್ ಸಂಖ್ಯೆ ಲಕ್ಷದ ಗಡಿ ದಾಟಿದೆಯಂತೆ” ಇದಕ್ಕೆ ನಗಬೇಕೋ ಅಳಬೇಕೋ ನೀವೇ ಹೇಳಿ.
ಮುಖ್ಯವಾಗಿ ಇಂದಿನ ಮಕ್ಕಳು ಅತೀ ಹೆಚ್ಚು ಸಮಯವನ್ನು ಇಂಟರ್‍ನೆಟ್ ನೊಂದಿಗೆ ಕಳೆಯುತ್ತಿದ್ದಾರೆ. ಒಂದು ಕಡೆ ಓದು ಹಾಳಾದರೆ ಇನ್ನೊಂದು ಕಡೆ ಬಾಲ್ಯ ಜೀವನದ ಅತೀ ಅಮೂಲ್ಯ ಸಮಯವನ್ನು ಹಾಳುಗೆಡವಿಕೊಳ್ಳುತ್ತಿದ್ದಾರೆ. ಪೋಷಕರೇ ಪ್ಲೀಸ್, ನಿಮ್ಮ ಐಶ್ವರ್ಯ ನಿಮ್ಮ ಮಗನಿಗೆ ಮುಂದೆ ಉಪಯೋಗಿಸಿಕೊಳ್ಳಲು ಸಮಯ ಸಿಕ್ಕೆ ಸಿಗುತ್ತೆ. ಹಾಗಂತ ಈಗಲೇ ಮಕ್ಕಳ ಮಂಡೇಗೆ ಅನಾವಶ್ಯಕ ಎಲೆಕ್ಟ್ರಾನ್‍ಗಳ ಗೋಜು ಕೊಡಬೇಡಿ. ನೀವು ಅಷ್ಟೇ ಅವರೆದುರು ಸೋಷಿಯಲ್ ಮೀಡಿಯಾಗಳಲ್ಲಿ ಬ್ಯುಸಿಯಾಗಿ ಅನಾವಶ್ಯಕ ಕಾಲಹರಣ ಮಾಡಬೇಡಿ. ಯಾವುದೋ ಲೈಕ್ ಕಮೆಂಟ್‍ನಿಂದ ಬರುವ ಖುಷಿಗೆ ಮಾರುಹೋಗದೆ ಅದೇ ಖುಷಿಯನ್ನು ನಿಮ್ಮ ಮನೆ ಮಂದಿಯೊಂದಿಗೆ ಕಳೆಯಿರಿ.
           ಹೇಳಿದ ತಕ್ಷಣಕ್ಕೆ ಎಲ್ಲವೂ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ನಮ್ಮ ಜಾಗೃತಿ, ನಮ್ಮವರ ಕಾಳಜಿ ಇರಬೇಕು ಅಷ್ಟೆ. ಯಾವುದನ್ನು ಎಷ್ಟು ಬೇಕೋ ಅಷ್ಟು ಬಳಸಿಕೊಳ್ಳೋಣ. ಸೋಷಿಯಲ್ ಮೀಡಿಯಾ ಇಂದು ಜನರ ಹವ್ಯಾಸವಾಗಿ ಬೆಳೆಯುತ್ತಿದೆ. ಅದಕ್ಕೆ ಸಾಂಪ್ರದಾಯಿಕ ಮಾಧ್ಯಮಗಳ ಸುದ್ಧಿ ಹರಿವಿನಷ್ಟು ಪ್ರಭಾವ ಬೀರಲು ಇನ್ನೂ ತಂತ್ರಜ್ಞಾನದ ಪ್ರಸರಣೆಯ ದೃಷ್ಟಿಯಿಂದ ಸಾಧ್ಯವಾಗದಿದ್ದರೂ, ವಿದ್ಯಾವಂತರ ನಡುವೆ ಬಹಳಷ್ಟು ಬಳಕೆಯಲ್ಲಿದೆ. ದಿನನಿತ್ಯ ಈ ತಂತ್ರಜ್ಞಾನದಿಂದ ಅನೇಕ ಪಾಠಗಳನ್ನು ಕಲಿಯುತ್ತಿದ್ದೇವೆ, ಅದರ ಅನೇಕ ಮುಖಗಳ ದರ್ಶನವನ್ನೂ ಈಗಾಗಲೇ  ಕಂಡಿರುತ್ತೇವೆ. ಇನ್ನಾದರೂ ಎಷ್ಟು ಬೇಕೋ ಅಷ್ಟನ್ನು ಉಪಯೋಗಿಸಿಕೊಳ್ಳುತ್ತಾ, ಅನಾವಶ್ಯಕವಾಗಿ ಮೈದೊರವ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯ ಹೆಜ್ಜೆಯಿಡುತ್ತಾ ಮುನ್ನುಗ್ಗೋಣ.

ಇದೂ ತಿಳಿದಿರಲಿ:
ಸದ್ಯಕ್ಕೆ ಪೋರ್ನ್ ವೀಕ್ಷಣೆಯ ವಿಷಯದಲ್ಲಿ ಭಾರತ ಟಾಪ್ 3 ಪಟ್ಟಿಯಲ್ಲಿದೆ. ಕಛೇರಿಯಲ್ಲಿ ಐಟಿ ವಿಭಾಗದವರ ಕಣ್ತಪ್ಪಿಸಿ ಹೊಸ ಅಪ್ಲೀಕೇಷನ್ ಬಳಕೆ ಮಾಡುವುದರಲ್ಲಿ ಭಾರತೀಯರಾದ ನಾವು ಸಿದ್ಧ ಹಸ್ತರು. ಶೇ. 30 ರಷ್ಟು ಭಾರತೀಯ ನೌಕರರು ಅಕ್ರಮವಾಗಿ ಅಪ್ಲೀಕೇಷನ್ ಯೂಸ್ ಮಾಡುತ್ತಾರಂತೆ. ಈ ವಿಷಯದಲ್ಲಿ ಸಿಂಗಾಪುರ ಮತ್ತು ಬ್ರಟನ್ ಮೊದಲೆರಡು ಸ್ಥಾನದಲ್ಲಿದೆ.

ಅಭಿವ್ಯಕ್ತ ಸ್ವಾತಂತ್ರ್ಯ ಎತ್ತಿ ಹಿಡಿಯುವ ಬೆಳವಣಿಗೆ:
ಇದೀಗ ಸಾಮಾಜಿಕ ಜಾಲತಾಣಗಳಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತಾಗಿನ ಮಾಹಿತಿ, ಸಂದೇಶಗಳನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು  ಸುಪ್ರೀಂ ಕೋರ್ಟ್‍ಗೆ  ಕೇಂದ್ರ ಸರಕಾರವು ವಿವರಣೆ ನೀಡಿದೆ. ವ್ಯಕ್ತಿಯ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಸರ್ಕಾರ ಇಚ್ಚಿಸುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯು ದಾಖಲಿಸುವ ಅಭಿಪ್ರಾಯಗಳು ಅಪರಾಧವಾಗುವುದಿಲ್ಲ. ಆದರೆ, ಐಟಿ ಕಾಯ್ದೆಗಳು ಸೈಬರ್ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‍ಗೆ ತಿಳಿಸಿದೆ.