Sunday 3 April 2016

ನನ್ನಂತರಂಗದ ಹಾಯ್ಕುಗಳು



ವಾಟ್ ಇಸ್  ದಿಸ್!...
           ತೀರಾ ಮೊನ್ನೆ ಮೊನ್ನೆಯವರೆಗೂ ನಾರ್ಮಲ್ ಆಗಿದ್ದೆ. ಸಣ್ಣ ಮೈ ಕೈ ನೋವು ಬಂದಂತಾಯ್ತು. ನೋವಿನೊಂದಿಗೆ ಜ್ವರವೂ ಅಡಿ ಇಡುವುದು ಯಾಕೋ ಖಾತ್ರಿಯಾಯಿತು. ನಮ್ಮಂಥವರಿಗೆ ಪ್ರಥಮ ಚಿಕಿತ್ಸೆ ‘ಮೆಡಿಕಲ್ ಅಲ್ವಾ’ ಎನ್ನುತ್ತಾ, ಜ್ವರ, ಮೈ-ಕೈ ನೋವಿಗೊಂದು ಮಾತ್ರೆ ಕೊಡಿ ಎಂದು ಗುಳಂ! ಸ್ವಾಹ ಮಾಡಿದೆ. ಮಾತ್ರೆ ಕೊಟ್ಟವಳ ಕೈಗುಣವೋ ಏನೋ ಯಾವುದು ಬರಬಾರದೆಂದು ಮಾತ್ರೆ ನುಂಗಿದ್ದೇನೋ ಅದಷ್ಟೇ ಅಲ್ಲದೇ ಸಹಪರಿವಾರದಲ್ಲಿರುವ ಎಲ್ಲಾ ಖಾಯಿಲೆ ಮಿತ್ರರು ಪ್ರೀತಿಯಿಂದ ಬಾಚಿ ತಬ್ಬಿಕೊಂಡರು. ಒತ್ತಡದಲ್ಲೇ ಒಂದೆರಡು ದಿನ ಆಫೀಸ್ ಕೆಲಸವೂ ಆಯ್ತು. ಗಂಟಲಲ್ಲಿ ಊಟ ಅಲ್ಲ ನೀರಿಳಿಯುವುದೇ ಕಷ್ಟ ಎನಿಸಿತು. ದ್ವಿತೀಯಾರ್ಧ ಚಿಕಿತ್ಸೆ ಎಂಬಂತೆ ಪಕ್ಕದಲ್ಲೇ ಇದ್ದ ಹೊಸ್ಪಿಟಲ್‍ಗೆ ಓಡಿದೆ. ಒಂದು ಇಂಜೆಕ್ಷನ್ ಕೊಟ್ಟು, ‘ಹೋಗುತ್ತೆ ಬಿಡಿ ಏನೂ ಪ್ರಾಬ್ಲಂ ಇಲ್ಲ, ಟ್ಯಾಬ್ಲೇಟ್ ತಗೋಳಿ’ ಅಂದ್ರು. ಆಯ್ತೆಂದು ಮಾತ್ರೆ ತಂದು ಕುಡಿದೇ ಬಿಟ್ಟೆ. ಆದರೂ ವರ್ಕೌಟ್ ಇಲ್ಲ. ಮಾಮೂಲಿ ಜ್ವರ ದೀರ್ಘ ಮೆರವಣಿಗೆಯಲ್ಲಿ  ಐದನೇ ದಿನಕ್ಕೆ ಬಂದು ನಿಂತಿತು. ಕಳೆದ ಒಂದೂವರೆ ವರ್ಷದ ಹಿಂದೆಯೂ ಇದೇ ಮಾಮೂಲಿ ಜ್ವರ ಗೋಳು ಕೊಟ್ಟಿತ್ತು. ಆಗಲೇ ಸಾಯುತ್ತಿದ್ದೆ. ಆದರೆ ಡಾಕ್ಟರ್ ಹೋರಾಟ, ಅಮ್ಮನ ಹರಕೆಯಿಂದ ಬದುಕಿದ್ದೆ. ಈ ಬಾರಿ ಹಾಗಾಗಲಿಕ್ಕಿಲ್ಲವೆಂದುಕೊಂಡಿದ್ದೆ. ಆದರೂ ಹಾಗೇ ಫೀಲ್ ಆಯ್ತು. ಮನೆಯಲ್ಲಿ ಹೇಳಿದರೆ ಹೆದರುತ್ತಾರೆ. ಹೇಳಲಿಲ್ಲ...! ಹಾಗೋ ಹೀಗೋ ದಿನ ಸಂದೇಶ ಮಾಡುವ ಕೆಲವೊಂದಿಬ್ಬರಿಗೆ ಆರೋಗ್ಯ ಸ್ಥಿತಿ ಹದವಾಗಿದ್ದು ತಿಳಿಯಿತು. ಕೇರ್ ನೆಸ್ ಎಂಬಂತೆ ಸಂದೇಶದಲ್ಲೇ ಕಿರಿ ಕಿರಿಯ ವಿಚಾರಣೆ ಜಾಸ್ತ್ತಿಯಾಯಿತು. ರೆಸ್ಟ್ ಮಾಡೋಣ ಎಂದು ಹಾಸಿಗೆ ಹಿಡಿದೆ. ಮತ್ತೆ ಮತ್ತೆ ಮೆಸೇಜ್‍ಗಳು ಇನ್ ಬಾಕ್ಸ್‍ನಲ್ಲಿ ಸದ್ದುಮಾಡತೊಡಗಿದವು. ಬೇಸತ್ತು, ಯಾರೂ ಡಿಸ್ಟರ್ಬ್ ಮಾಡಬಾರದೆಂದು ವ್ಯಾಟ್ಸಾಪ್‍ನಲ್ಲಿ ಒಂದು ಸಣ್ಣ ಸ್ಟೇಟಸ್ ಬರೆದೆ. ಅಲ್ಲಿಯೇ ಮಾಡಿದ್ದು ಎಡವಟ್ಟು ನೋಡಿ!., ಒಂದಿಬ್ಬರಿಗೆ ತಿಳಿದಿದ್ದ ವಿಚಾರ ಎಲ್ಲರಿಗೂ ತಿಳಿದು ಮರುಘಳಿಗೆ ಸರದಿಯಲ್ಲಿ ವಿಚಾರಣೆ ಪ್ರಾರಂಭವಾಯ್ತು. ಎಂಥಾ ಮೂಡನಯ್ಯ ನಾನು, ಅಷ್ಟಿದ್ದ ರಗಳೆ ತಡೆಯಲು ಹೋಗಿ ಇಷ್ಟು ಮಾಡಿಕೊಂಡೆನಲ್ಲಾ ಎಂದು ನನ್ನಯ ಗೊಡ್ಡುತನಕ್ಕೆ ಬೈದುಕೊಂಡೆ.
            ಗೆಳೆಯರ್ಯಾರೂ ಸೀರಿಯಸ್ ಅಂದುಕೊಳ್ಳಲಿಲ್ಲ. ಅಷ್ಟೋ ಇಷ್ಟೋ ಒನ್ ಸೈಡ್ ಭಾವನೆಗಳನ್ನಿಟ್ಟುಕೊಂಡಿದ್ದ, ಪ್ರೀತಿಯಲ್ಲಿ ಜೋಲಾಡುತ್ತಿದ್ದ ಹುಡುಗಿಯರು ಏನೋ ಪ್ರಳಯವೇ ಆಗಿದೆ ಎನ್ನುವಂತೆ ಗೊಣಗತೊಡಗಿದರು. ನಿನಗೆ ಆರೋಗ್ಯ ವಿಚಾರದಲ್ಲಿ ಜಾಗೃತೆ ಇಲ್ಲ ಯಾವಾಗ ಬುದ್ದಿ ಬರುತ್ತೋ ಏನೋ ಎಂಬಂತೆ ಬೈದರು. ಹೂಃ ಅಂತ ಹೇಳು ಬಂದು ವಿಚಾರಿಸಿಕೊಳ್ತೀವಿ ಅಂತ ಕೆಲವೊಂದಿಬ್ಬರ ಆರ್ತನಾದ. ಎಲ್ಲಿ ಮನೆ!?, ಬಂದೇ ಬಿಡುವೆ ನೋಡಲು..! ಎಂಬಂತೆ ಇನ್ನೊಂದಿಷ್ಟು. ಬೆನ್ನು ಬಿದ್ದ ಮೆಸೇಜ್‍ಗೆ ಬೆನ್ನು ಕೊಟ್ಟು ಮಲಗಿದೆ. ಯಾವುದಕ್ಕೂ ಉತ್ತರಿಸಲಿಲ್ಲ...
            ಸಂಜೆ ಯಾಕೋ ಮಂಕು ಬಡಿದಂತಾಯ್ತು. ಮತ್ತೆ ಮೊಬೈಲ್ ಕೈಗೆತ್ತಿಕೊಂಡೆ. ಮೆಸೇಜ್ ಓದಿ ಅರ್ಧಕ್ಕರ್ಧ ಉತ್ತರವಿತ್ತೆ... ಡಬ್ಬಲ್ ಸುಸ್ತಾಯಿತು. ಬಂದ ಸಂದೇಶಗಳನ್ನು ಓದಿಯೇ ಹೈರಾಣಾದೆ. ಮೈ ಬಿಸಿಗೆ ಮೆಸೇಜ್ ರಿಪ್ಲೈ ಕೂಡ ಕಾರಣ ಏನಿಸಿತು. ಸಾವಾಸ ಸಾಕು ಎಂದು ಮರಳಿ ಮೊಬೈಲ್ ಸೈಲೆಂಟ್ ಇಟ್ಟು ಸುಮ್ಮನಾದೆ. ಈ ವಯಸ್ಸೇ ಹಾಗಲ್ವಾ! ಮತ್ತೇ ಮತ್ತೆ ತಪ್ಪು ಅನಿಸಿದರೂ ಕೆಟ್ಟ ವಿಚಾರದಲ್ಲಿ ಮನಸ್ಸು ಯಾವಾಗಲೂ ಸೆಳೆಯುತ್ತಲೇ ಇರುತ್ತದೆ. ಅನಾವಶ್ಯಕ ಟೈಮ್ ಪಾಸ್‍ಗೆ ಅತಿಹೆಚ್ಚು ಜನ ಮರುಳಾಗಿರುವ ಮೊಬೈಲ್‍ನ್ನು ನೋಡೋಣ ಎನಿಸುತ್ತಿತ್ತು, ಆದರೂ ಕಂಟ್ರೋಲ್ ಮಾಡಿಕೊಂಡೆ. ಪ್ರೀತಿಸುವವರನ್ನು ಯಾಕೆ ದ್ವೇಷಿಸಬೇಕು!?, ದೂರ ಮಾಡೋದು ಬೇಡ ಸೈಡಲ್ಲಿ ಭಾವನೆಯ ಪ್ರೀತಿ ಇರಲಿ ಎಂದು ಹಾಗೇ ಕಣ್ಮುಚ್ಚಿ ಮಲಗಿದೆ.
           ಮನದ ಮೂಲೆಯ ಬಿಳಿಪರದೆಯ ಮೇಲೆ ಯೋಚನಾ ಲಹರಿ ತೇಲಿತು. ಈ ಬದುಕೆ ಹೀಗೆ ಅಲ್ವಾ ಯಾವಾಗ ಏನೂ ಬೇಕಾದರೂ ಆಗಬಹುದು. ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ದುಃಖ, ಆರೋಗ್ಯ, ಅನಾರೋಗ್ಯ, ಯೋಗ್ಯ, ಅಯೋಗ್ಯ... ಹೀಗೆ ಎಲ್ಲವೂ ಒಂದಿಲ್ಲೊಂದು ಸರಣಿಯಲ್ಲೇ ನಡೆಯುತ್ತಿರುತ್ತದೆ. ಯಾವನಿಗೊತ್ತು ಬದುಕು ಯಾವಾಗ ಅಂತ್ಯವಾಗುತ್ತೆ ಅಂತ. ನನ್ನೇ ನೋಡಿ ಹೋದ ವರ್ಷವೇ ಅಂತ್ಯ ಕಾಣಬೇಕಾಗಿದ್ದವನು ಇನ್ನೂ ಬದುಕಿರುವೆ. ಬದುಕಿಲ್ಲವೆಂದಿದ್ದರೆ ಇಷ್ಟೆಲ್ಲಾ ಮಾಡಲಾಗುತ್ತಿರಲಿಲ್ಲ. ನಾನು ಯಾರೆಂದು ನಿಮಗೇನು!, ನಮ್ಮವರಿಗೆ ಗೊತ್ತಿರುತ್ತಿರಲಿಲ್ಲ. ಒಂದಿಷ್ಟು ಅಳು, ಒಂದಿಷ್ಟು ಮೌನ, ಒಂದಿಷ್ಟು ನೆನಪಿನೊಂದಿಗೆ ನಾನು ಕೂಡ ಗೋಡೆಯ ಮೇಲಿನ ಫೋಟೋವಾಗುತ್ತಿದ್ದೇನೋ ಏನೋ...!
     ವಿಷಯ ಅದಲ್ಲ... ಎಲ್ಲರೂ ಒಂದಲ್ಲ ಒಂದು ದಿನ ಸಾಯುವುದು ಗ್ಯಾರಂಟಿ... ಅಲ್ವಾ!??...
ಹೌದು..!ಅಂತೀರಾ...
ಇದರೊಳಗೆ ಇನ್ನೊಂದು ಸತ್ಯ ಇದೆ!...
ಏನ್ ಗೊತ್ತಾ!?,
           ನಾನ್ ಮಾತ್ರ್ರಾ ಅಲ್ಲಾ ನೀವು ಕೂಡ ಸಾಯ್ತೀರಾ...! ಇದು ಪಕ್ಕಾ ಗ್ಯಾರಂಟಿ. ಕೆಲವೊಂದು ವಿಚಾರಗಳು ಗೊತ್ತಿದ್ದರೂ ಇನ್ನೊಬ್ಬರೂ ಹೇಳಿದ ಮೇಲೆ ಕನ್‍ಫರ್ಮ್ ಆಗೋದಂತೆ... ಇದು ಕೂಡ ಹಾಗೆ. ಅಂತ್ಯ ಎಲ್ಲರಿಗೂ ಎಲ್ಲದಕ್ಕೂ ಕಟ್ಟಿಟ್ಟ ಬುತ್ತಿ. ಇರುವಷ್ಟು ದಿನ ಹೊಡೆದಾಡ್ತೀವಿ, ನಗ್ತೀವಿ, ರೇಗಿಸ್ತೀವಿ, ಪಾಪ-ಪುಣ್ಯ ಮಾಡ್ತೀವಿ, ಪಾ..ಪಾ ಅಂತೀವಿ, ರೋಗಿಯಾಗ್ತೀವಿ, ರೇಗಿ ನುಲಿತೀವಿ, ಸುಖ ಪಡ್ತೀವಿ, ಕಷ್ಟ ಅನುಭವಿಸ್ತೀವಿ, ಹೀಗೆ ಎಲ್ಲದಕ್ಕೂ ಅಂತ್ಯವಿದೆ... ಸಾಯ್ತೀರಿ ಅಂದಿದ್ದಕ್ಕೆ ಭಯ ಪಡಬೇಡಿ. ಹಾಗೆಯೇ ಜೀವದ ಬಗ್ಗೆಯೂ ಭಯ ಬೇಡ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ. ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃದ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರೀಯೆ.
             ಸಾಧು ಸಂತರೇ ಹೇಳಿರುವಂತೆ ಜೀವನ ನಾಲ್ಕು ದಿನದ ಹೋರಾಟ. ಅಲ್ಲಿ ಸಂಪಾದಿಸಬೇಕೆಂದು ಅನಗತ್ಯವಾಗಿ ಹೊಡೆದಾಡುತ್ತೇವೆ. ಒಮ್ಮೊಮ್ಮೆ ಎಷ್ಟಿದ್ದರೂ ಏನೂ ಮಾಡಲಾಗದಂತ, ಇದ್ದದ್ದನ್ನು ಕರಗಿಸಲಾಗದಂತ ದುರವಸ್ಥೆ. ಸರಿಯಾಗಿ ಗಮನಿಸಿದರೆ ಎಲ್ಲವೂ ಜೀರೋ... ಯಾರೋ ನಮಗಿಂತ ಮುಂದೆ ಸಾಗುವರೆಂದೋ, ನಮ್ಮನೆ ಜಾಗ ಅವರ ಮನೆಯ ಆರ್ಟಿಸಿ ಅಲ್ಲಿ ನಮೂದಾಗಿದೆಯೆಂತಲೋ, ಯಾರು ಸತ್ತರೆ ನಮಗೇನು ದುಡ್ಡು ಮಾಡಬೇಕು ಅಷ್ಟೇ ಎಂದೋ, ನಿಮ್ಮ ಕಷ್ಟ ನಮಗೆ ಬೇಡ, ನನಗೆ ಬರೋ ದುಡ್ಡು ಬರಬೇಕು ಅಂದೋ, ಮೊದಲು ನಾವ್ ಸೇಫ್ ಆಗಬೇಕು ಉಳಿದವರ ಚಿಂತೆ ನಮಗೆ ಬ್ಯಾಡ ಅಂತಲೋ,ಮಕ್ಕಳ್ಯಾರೂ ಇಲ್ಲ, ಕೈಯಲ್ಲಿ ದುಡ್ಡು ಬೇಕಾದಷ್ಟಿದೆ ಆದರೂ ಆ ಬಾಡಿಗೆ ಮನೆಯವ ಇನ್ನೂ ಬಾಡಿಗೆ ಕೊಟ್ಟಿಲ್ಲ, ಯಾಮಾರಿಸುತ್ತಾನೆಂತಲೋ, ವಸ್ತು ಹಾಳಾದರೆ ಕೊಟ್ಟ ದುಡ್ಡು ಮಾರಾಟಗಾರನ ಅಕೌಂಟ್‍ಗೆ ಹೋಗಿ ಅವನೇನಾದರೂ ಬಿಲ್ಡಿಂಗ್ ಕಟ್ಟುತ್ತಾನೆ ಎನ್ನುವ ಭಯದ ಚೌಕಾಸಿಗೋ, ಬೇರೆಯವರಿಗೆ ಅನ್ನ ಹಾಕಿದರೆ ನಮ್ಮನೆಗೆ ದಿನಾ ಬರುತ್ತಾರೆಯೇನೋ ಎನ್ನುವ ಮುಜುಗರದ ಅಸೂಯೆಗೋ, ಹೀಗೆ ಒಂದಿಲ್ಲೊಂದರಲ್ಲಿ ಬದುಕನ್ನು ಹೆಣಗಾಡುತ್ತಲೇ ಇರುತ್ತೇವೆ.

ಎಣ್ಣೆ ಕಾಣದಂಥ ಶಿರ...
ಕಿತ್ತು ಬಂದಿರೋ ಕೆರ...
ಬಣ್ಣ ಮಾಸಿರೋ ಚರ...
ಅನ್ನ ಕಾಣದ ಉದರ...
ಕಳೆ ಇಲ್ಲದ ಮುಖ...
ರೇಖೆ ಅಳಿಸಿರೋ ಕೆರ...
ಕೊಳೆ ತುಂಬಿದ ಸುಖ...
ಕೊನೆ ಕಾಣದ ದುಃಖ...
ಇಷ್ಟೇ ಜೀವನ!!!...
             ಎಲ್ಲವೂ ತಿಳಿಯುವುದು ಸಂತೋಷದ ಶುಭ ಸಮಯ ಅಲ್ಲ, ಬದುಕು ಕೊನೆಯಾಗಬಹುದೋ ಏನೋ ಎನ್ನುವ ವಿದಾಯ ಮುಹೂರ್ತ ತಬ್ಬಿಕೊಳ್ಳುವಾಗಲೆ...!!!.   ರತಿ ಕ್ರೀಡೆಯಲ್ಲಿ, ಮೈಥುನ ಸಂಧರ್ಭದಲ್ಲಿ, ಆಹಾ!! ಎಂತಾ ಸುಖವಪ್ಪಾ ಜೀವನವೆಂದೆನಿಸಿದ ಭಾವಗಳೆಲ್ಲವೂ ರೋಗ ಹಿಡಿದು ಅಲ್ಲೊಂದು ಇಲ್ಲೊಂದು ಇಂಜೆಕ್ಷನ್ ಚುಚ್ಚಿಸಿಕೊಳ್ಳುವಾಗ ನರಕವಪ್ಪಾ ಅಂತನಿಸದೇ ಇರದು. ಎಲ್ಲವೂ ಕಾಲ ಘಟ್ಟವಷ್ಟೇ. ಕಾಲಕ್ಕೆ ಕಾಲವೇ ತಲೆಭಾಗುವುದಂತೆ. ಇನ್ನೂ ನಾವು ನೀವೂ ಯಾವ ಲೆಕ್ಕ. ಸರಿಯಿರುವಾಗ ತಿಳಿಯದ ಜೀವನ ಹದಗೆಟ್ಟಾಗ ತಿಳಿಯುವುದೇ ಜಾಸ್ತಿ...


ಇದು ಶಿಕ್ಷಣ ಇಲಾಖೆಯ ಅವಾಂತರ


ವಿದ್ಯಾರ್ಥಿಗಳ ಗೋಳಿಗೆ ಬೆಲೆಯಿಲ್ಲ, ಸರ್ಕಾರದ ಅವಾಂತರಕ್ಕೆ ಕೊನೆಯಿಲ್ಲ...
ಚಾಳಿಯಾಗಿದೆ ಸಮಸ್ಯೆಯ ಸಮಸ್ಯೆ...
ಪ್ರತಿವರ್ಷದ ಸೋರಿಕೆಯ ಅಧ್ವಾನ ಈ ವರ್ಷವೂ ಮುಂದುವರಿದಿದೆ...
ಶಾಪಿಂಗ್ ಮಾಲ್‍ಗಳಾಗಿವೆ ಖಾಸಗಿ ಶಿಕ್ಷಣ ಸಂಸ್ಥೆಗಳು...


           ಪ್ರತಿ ಬಾರಿ ಪತ್ರಿಕಾಗೋಷ್ಠಿ ಕುಳಿತುಕೊಂಡಾಗಲೂ ಮಾನ್ಯ ಶಿಕ್ಷಣ ಸಚಿವರಿಂದ ನಮ್ಮಂತ ಪತ್ರಿಕಾ ಮಿತ್ರರು ಕೇಳುವುದು ಇದೇ ಮಾತು...
“ವಿದ್ಯಾರ್ಥಿಗಳಲ್ಲಿ ಸದ್ಭಾವನೆ ಮೂಡಿಸುವ ಮತ್ತು ಅವರನ್ನು ಉತ್ತಮ ನಾಯಕರನ್ನಾಗಿಸುವ, ಶಿಕ್ಷಣ ಒದಗಿಸುವ, ವಿಚಾರದಲ್ಲಿ ಯಾವುದೇ ರಾಜಿ ಇಲ್ಲ...”
“ಶಾಲೆ ಆರಂಭವಾಗುವುದಕ್ಕೆ ಮುನ್ನವೇ ಪಠ್ಯ ಪುಸ್ತಕಗಳನ್ನು ಓದಗಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ...”
“ ರಾಜ್ಯದಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರದ ಅನುಧಾನಕ್ಕೆ ಒಳಪಡಿಸಿದ್ದು, ಸಮಿತಿ ರಚಿಸಿ ಮುಂದಿನ ಕ್ರಮ ಕೈಗೊಳ್ಳುಲಾಗುತ್ತದೆ”
“ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೂ ಸಾಧಿಸುತ್ತಿದ್ದೇವೆ, ಇದೊಂದು ಹೊಸ ರೀತಿಯ ಕ್ರಾಂತಿ ಎಂದರೂ ತಪ್ಪಿಲ್ಲ. ಅಕ್ರಮ, ಭ್ರಷ್ಟತೆ, ಡೊನೇಷನ್ ಹಾವಳಿ ಇತ್ಯಾದಿಗಳ ಬಗ್ಗೆ ಅತೀವ ಗಮನ ಇಟ್ಟಿದ್ದೇವೆ”
“ಪರೀಕ್ಷಾ ವಿಷಯದಲ್ಲಿ ಈ ಬಾರಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದೇವೆ ಯಾವ ರೀತಿಯ ನಕಲಿಗೂ ಅವಕಾಶವಿಲ್ಲ”..
 ............ಆದರೆ..!
           ಮೇಲ್ಕಂಡ ಯಾವ ಮಾತೂ ನೂರಕ್ಕೆ ನೂರು ಫಾಲೋ ಆಗಿದ್ದು ನಾನಂತೂ ನೋಡಿಲ್ಲ... ಹಾಗಾದ್ರೆ ಶಿಕ್ಷಣ ಸಚಿವರು, ಅವರ ಕೈಕೆಳಗಿರುವ ಉನ್ನತ ಅಧಿಕಾರಿಗಳು ಏನು ಮಾಡುತ್ತಿದ್ದಾರೆ!? ಶಿಕ್ಷಣ ಕ್ಷೇತ್ರ ಬಿಟ್ಟು, ನೀವು ಹಾಕಿಕೊಂಡಿರುವ ಪ್ಲಾನ್‍ಗಳನ್ನು ಬಿಟ್ಟು ಬೇರ್ಯಾವ ಘನಂಧಾರಿ ಕೆಲಸ ನಿಮ್ಮನ್ನು ಸೆಳೆಯುತ್ತಿದೆ ಮೊದಲು ಉತ್ತರವೀಯಿರಿ ನೋಡೋಣ..!
ಇನ್ನೂ ಎಷ್ಟು ಅಂತ ಸಹಿಸಿಕೊಳ್ಳಬೇಕು ನಾವು!??
          ಒಂದು ಕಡೆ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ, ಇನ್ನೊಂದು ಕಡೆ ಶಿಕ್ಷಕರ ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ, ಮತ್ತೊಂದು ಕಡೆ ಕನ್ನಡ-ಇಂಗ್ಲೀಷ್ ಎನ್ನುವ ಭಾಷೆಯ ನಡವಳಿಯಲ್ಲಿ ಶಾಲಾ ಫೀಸ್‍ಗಳ ಅಟ್ಟಹಾಸ ಇವಿಷ್ಟನ್ನೂ ದಾಟಿ ಮುಂದೆ ಹೋದರೆ ಪರೀಕ್ಷಾ ನಕಲು, ಪ್ರಶ್ನೆ ಪತ್ರಿಕೆಗಳ ಸೋರಿಕೆ... ಇದೊಂಥರ ಚಾಳಿಯಾಗಿ ಬಿಟ್ಟಿದೆ ಎನಿಸುತ್ತದೆ. ಪ್ರತಿ ವರ್ಷವೂ ಮತ್ತೆ ಮತ್ತೆ ಮರುಕಳಿಸುವ ಈ ಸಮಸ್ಯೆಗಳು ವಿದ್ಯಾರ್ಥಿಗಳ ಮನಸ್ಸಿಗೆ ಎಷ್ಟು ಪರಿಣಾಮ ಬೀರುವುದೆಂದು ಯಾರಿಗೂ ತಿಳಿದಿಲ್ಲ. ಪರೀಕ್ಷಾ ವಿಚಾರ ತೆಗೆದುಕೊಂಡರೆ, ಪ್ರತ್ಯೇಕ ಪರೀಕ್ಷಾ ಮಂಡಳಿ, ಅದಕ್ಕೆ ಸೂಕ್ತ ಸಿಬ್ಬಂದಿ, ಸಮರ್ಪಕ ಸೌಲಭ್ಯವಿದ್ದರೂ ಇಂಥ ಅಧ್ವಾನಗಳು ಏಕೆ ಮರುಕಳಿಸುತ್ತವೆ ಎನ್ನುವುದು ಪ್ರಶ್ನಾರ್ಹವಾಗಿದೆ!?. ವರ್ಷದಂತೆ ಈ ಬಾರಿಯೂ ಕೂಡ ದ್ವಿತೀಯ ಪಿಯು ರಸಾಯನಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಮೊನ್ನೆ ಮೊನ್ನೆ ಮರು ಪರೀಕ್ಷೆಯೂ ನಡೆಯಿತು. ಎಲ್ಲಾ ಆದ ಬಳಿಕ ಮರುಪರೀಕ್ಷೆಯಲ್ಲಿ ಯಾವ ಸೋರಿಕೆಯೂ ಆಗಿಲ್ಲ, ಕ್ಷಮೆ ಇರಲಿ ಮುಂದೆ ಈ ರೀತಿಯ ತಪ್ಪುಗಳು ನಡೆಯುವುದಿಲ್ಲ, ಎಂದು ಸರ್ಕಾರ ಸ್ಫಷ್ಟವಾಗಿ ಅರುಹಿ ತಣ್ಣಗಾಗಿದೆ ಹಾಗಾದರೆ ಈ ಹಿಂದಿನ ವರ್ಷಗಳಲ್ಲಿ ನಡೆದಿದ್ದಾಗ ನೀವಂದುಕೊಂಡ ಧ್ಯೇಯಗಳೇನು!? ಸ್ವಲ್ಫ ನಮಗೂ ತಿಳಿಸಿ... ಬಹುಶಃ ಮುಂದಿನ ವರ್ಷವೂ ಇದೇ ಡೈಲಾಗ್ ಮರುಬಳಕೆಯಾಗಬಹುದೇನೋ ಯಾರು ಬಲ್ಲರು ನಿಮ್ಮ ಸೋರಿಕೆಯ ಪರಾಕ್ರಮ. ಇದು ಇಲಾಖೆಗಳ ಬೇಜವಾಬ್ಧಾರಿಯೋ!?, ಅಧಿಕಾರಿಗಳ ನಿಷ್ಕಾಳಜಿಯೋ!?, ಗೊತ್ತಿಲ್ಲ...ಆದರೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಂತೂ ನಿಜ.
ನಮ್ಮಲ್ಲಿರುವ ಸಮಸ್ಯೆಗಳು ಇಂದು ನಿನ್ನೆಯದಲ್ಲ ಎಷ್ಟು ಸಿಲ್ಲಿ ಸಿಲ್ಲಿಯ ಸಮಸ್ಯೆಗಳೆಂದರೆ ಸೋಷಿಯಲ್ ಮೀಡಿಯಾದಲ್ಲಿ ಯಾರೋ ಮೊನ್ನೆ ಮೊನ್ನೆ ಒಂದು ಪೋಸ್ಟ್ ಮಾಡಿದ್ದರು ಅದನ್ನು ಓದಿ ನನಗಂತೂ ನಗು ತಡೆಯಲಾಗಲಿಲ್ಲ.., ನೀವೂ ಓದಿ ಒಮ್ಮೆ ನಕ್ಕು ಬಿಡಿ..,
1. “ನಮ್ಮ ಕಾಲದಲ್ಲೆಲ್ಲಾ ಚಿgತೆ ನೊಡೋಕೆ ಶಾಲೆಯಿಂದ ‘ಝೂ’ಗೆ ಟ್ರಿಪ್ ಹೋಗ್ತಾ ಇದ್ವು..,”
ಈಗ ಕಾಲ ಮುಂದುವರಿದಿದೆ.., ಬದಲಾವಣೆ ಕಂಡಿದೆ... ಅದಕ್ಕಾಗಿ..,
“ಇದೀಗ ಮಕ್ಕಳನ್ನೇ ನೊಡೋಕೆ ಚಿರತೆಯೇ ಸ್ಕೂಲಿಗೆ ಟ್ರಿಪ್ ಹೊಡಿತಾ ಇದೆ...”

2. “ವಿಬ್ಲಯಾರ್ ಶಾಲೆ ಸೇರಲು ಬಂದ ಚಿರತೆಯ ಅಡ್ಮಿಶನ್‍ಗೆ ನಕಾರ...
ಇಂಗ್ಲೀಷ್ ಮೀಡಿಯಂ ಸ್ಕೂಲ್‍ನಲ್ಲಿ ಓದಬೇಕೆಂಬ ಚಿgತೆಯ ಕನಸು ಭಗ್ನ...”

3. “ಹೆಚ್ಚಿನ ಡೊನೆಷನ್ ಕೇಳಿದ್ದಕ್ಕೆ ಆಕ್ರೋಶÀಗೊಂಡ ಚಿgತೆ..,
 ಶಾಲೆ ಸಿಬ್ಬಂದಿ ಸೇರಿ ಹಲವರ ಮೇಲೆ ದಾಳಿ...”

         ನೋಡಿ ಮುಂದೆ ಈ ರೀತಿ ಆದರೂ ಆಗಬಹುದು. ಸಿದ್ಧಾಂತಗಳನ್ನು ಎಲ್ಲಾ ಅಧಿಕಾರಿಗಳು ಬರೆಯುತ್ತಾರೆ ಆದರೆ ಅದನ್ನು ಫಾಲೋ ಮಾಡುವುದಿಲ್ಲ ಅಷ್ಟೇ. ಅದೇ ನಮ್ಮ ದೊಡ್ಡ ಸಮಸ್ಯೆ...ಮೊದಲೆಲ್ಲಾ ಮಕ್ಕಳು ಶಾಲೆಗೆ ಹೋಗೋದೆ ಕಷ್ಟ ಆಗಿತ್ತು. ಈಗೀಗ ಶಾಲೆಗೆ ಕಳಿಸೋದೆ ಕಷ್ಟ ಆಗಿದೆ...ಅಂತೂ -ಇಂತೂ ಕಷ್ಟ ಪಟ್ಟು ಶಾಲೆಗೆ ಕಳುಹಿಸಿದೀವಿ ಅಂದ್ಕೊಳ್ಳಿ ಈ ರೀತಿ ಸಮಸ್ಯೆಗಳು!!. ಹಿಂದೆ ಆಗಿದ್ದು ಆಯ್ತು ಮರೆತ್ವಿ ಎನ್ನುವಾಗಲೇ ಮೊನ್ನೆ ಮೊನ್ನೆ ಪರೀಕ್ಷಾ ನಕಲು ಹಾಗೂ ಸೋರಿಕೆಯ ಕರ್ಮಕಾಂಡ ಮತ್ತೇ ಶಿಕ್ಷಣ ಇಲಾಖೆಯ ಬೇಜಾವ್ಧಾರಿತನವನ್ನು ಎತ್ತಿ ಹಿಡಿದಿದೆ.
ಸಚಿವರೆ.., ಇನ್ನಾದರೂ ಒಂದಿಷ್ಟು ಸಮಯವನ್ನು ಮೀಸಲಿಟ್ಟು ಮೆಲ್ಗಾಣಿಸಿದ ಸಮಸ್ಯೆಗಳಿಗೆ ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಳ್ಳಿ ಸಮಸ್ಯೆಗಳ ಗೊಂದಲದಲ್ಲಿ ಶಿಕ್ಷಣಕ್ಕಿರುವ ಮೌಲ್ಯ ಹೊರಟು ಹೋದರೆ ಸಮಾಜದ ಗತಿ ಏನಾಗಬಹುದೋ ಹೇಳತೀರದು. ಇದಕ್ಕೆಲ್ಲಾ ಶಾಶ್ವತ ಪರಿಹಾರೋಪಾಯಕ್ಕಾಗಿ ಚಿಂತನೆಗಿಳಿಯಲು ಇದು ಸಕಾಲ. ಯಾವುದೇ ವ್ಯವಸ್ಥೆ ದೀರ್ಘಾವಧಿಯವರೆ ಬದಲಾವಣೆಗಳಿಲ್ಲದೇ ಮುಂದುವರಿದಿದ್ದೆ ಆದಲ್ಲಿ ಲೋಪದೋಷಗಳು, ಕೊರತೆಗಳು ನುಸುಳುವುದು ಸಾಮಾನ್ಯ. ಪ್ರಶ್ನೆ ಪತ್ರಿಕೆಯ ಸೋರಿಕೆ ಅವಾಂತರವೆನ್ನುವುದು ಇಂದು ನಿನ್ನೆಯ ಸಮಸ್ಯೆಯಲ್ಲ. ಪ್ರಶ್ನೆ ಪತ್ರಿಕೆಗಳನ್ನು ಸಂಬಂಧ ಪಟ್ಟ ಶಿಕ್ಷಣ ಸಂಸ್ಥೆಗಳಿಗೆ ರವಾನಿಸುವ ವಿಧಾನ ಹಲವು ವರ್ಷಗಳಿಂದ ಬದಲಾಗದೆ ಹಾಗೆ ಮುಂದುವರಿದಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಎಲ್ಲಿ ಯಾವ ಹಂತದಲ್ಲಿ  ಆಗುತ್ತದೆಂಬುದನ್ನು ಪತ್ತೆಹಚ್ಚಿ ನಿಯಂತ್ರಿಸುವ ಕ್ರಮ ಆಗಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಇಂದು ತಂತ್ರಜ್ಞಾನಗಳ ಬಳಕೆ ಹಾಸು ಹೊಕ್ಕಾಗಿದ್ದು ಪರೀಕ್ಷಾ ಮಂಡಳಿಗಳು ಪರೀಕ್ಷಾ ಪದ್ದತಿಯಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳುವತ್ತ ಗಮನವಹಿಸಬೇಕಿದೆ. ತಂತ್ರಜ್ಞಾನದ ನೆರವಿನಿಂದ ಪರೀಕ್ಷೆಗಳನ್ನು ಹೇಗೆ ಸುಲಲಿತವಾಗಿ ನಡೆಸಬಹುದು ಎಂಬುದಕ್ಕೆ ರಾಜೀವ್ ಗಾಂಧಿ ವಿಜ್ಞಾನ ವಿಶ್ವ ವಿದ್ಯಾಲಯ ಉತ್ತಮ ಉದಾಹರಣೆ. ಅಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆಗೆ ಒಂದು ಅಥವಾ  ಎರಡು ಗಂಟೆ ಮುಂಚಿತವಾಗಿ ಆನ್‍ಲೈನ್ ಸರ್ವರ್ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿಕೊಡಲಾಗುತ್ತದೆ, ಸೋರಿಕೆಗೆ ಅವಕಾಶವಿಲ್ಲದಂತಾಗಿದೆ.
            ಮಾನ್ಯ ಶಿಕ್ಷಣ ಸಚಿವರೇ.., ಖಾಸಗಿಯಾಗಿ ಎದ್ದು ನಿಂತಿರುವ ಶಿಕ್ಷಣ ಸಂಸ್ಥೆಗಳು ಶಾಪಿಂಗ್ ಮಾಲ್‍ಗಳಾಗಿ ಬೆಳೆಯುತ್ತಿವೆ. ತೀರಾ ಸಾಮಾನ್ಯ ಬಡವನಿಗೆ ಒಳಗೆ ಎಂಟ್ರಿಯೇ ಇಲ್ಲದಂತಾಗಿದೆ ಈ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳದೇ ಹೋದರೆ ಮುಂದೊಂದು ದಿನ ಶಿಕ್ಷಣವೆನ್ನುವುದು ದುಡ್ಡಿರುವವರಿಗೆ ಮಾತ್ರಾ ಲಭ್ಯ ಎನ್ನುವಂತಾಗದೆ ಇರದು. ಶಿಕ್ಷಣದ ಹೆಸರಲ್ಲಿ ವ್ಯಾಪಾರಿಕರಣವಾಗುತ್ತಿರುವುದನ್ನು ಮೊದಲು ನಿಲ್ಲಿಸಿ, ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೆತ್ತಿಕೊಳ್ಳಿ. ಉಳಿದಿರುವ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ, ಅನಾವಶ್ಯಕವಾಗಿ ಸಮಯ ಹಾಳು ಮಾಡುವ ವೆಸ್ಟೇಡ್ ಅಧಿಕಾರಿಗಳನ್ನು ಕೆಳಗಿಳಿಸಿ, ನಿಷ್ಠಾವಂತರನ್ನು ನೇಮಕ ಮಾಡಿ...
                                  
             ಶಿಕ್ಷಣ ಇಲಾಖೆಯಲ್ಲಿನ ಆಂತರಿಕ ಗೊಂದಲಗಳು, ವರ್ಗಾವಣೆ ವಿವಾಧಗಳು ಸಾಮಾಜಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ    ಬೀರುತ್ತಿದ್ದು, ಒಟ್ಟಾರೆ ದುರ್ಬಲ ವ್ಯವಸ್ಥೆಯೇ ಹಲವು ತೆರನಾದ ಸಮಸ್ಯೆಗಳಿಗೆ ಗುರಿಯಾಗಿದೆ. ಶಿಕ್ಷಣ ವ್ಯಾಪಾರೀಕರಣವಾಗಿದೆ, ಮಾರಿಕೊಳ್ಳುವ ಸಂತೆಯಾಗಿದೆ ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿನ  ಸಣ್ಣ ಪುಟ್ಟ ಲೋಪವೂ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆಂಬುದನ್ನು ಸಂಬಂದಪಟ್ಟವರು ಮರೆಯದಿರಲಿ... ವಿದ್ಯಾರ್ಥಿ ಹಾಗೂ ಶಿಕ್ಷಣಕ್ಕಿರುವ ಮೌಲ್ಯ ಎಲ್ಲರೂ ಅರಿಯಲಿ...