Friday 10 July 2015

ಹೆಣ್ಮಕ್ಕಳೇ ನೀವೆಷ್ಟು ಸೇಫ್...!? (ಬೈಂದೂರು ಬಲಿಯ ಸುತ್ತ...)


ಕಾಮಾಂಧನ ಕುರುಡು ಕಾಮಕ್ಕೆ ಬಲಿಯಾದ ಅಕ್ಷತಾ...
ಮತ್ತೆ ಕರಾವಳಿಯಲ್ಲಿ ಕೊಲೆಯ ತಾಪ
ಕಾಮದ ಹಪಾಹಪಿಯ ನಡುವೆ ಕಣ್ಮುಚ್ಚಿದ ಅಕ್ಷತಾ...
ಕರಾವಳಿ ಜನರಲ್ಲಿ ಮಡುಗಟ್ಟಿದ ಕರಿಛಾಯೆಯ ಕಾರ್ಮೋಡ…

         ಗೋವಾ ಮತ್ತು ಕೇರಳಗಳ ನಡುವೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿಶಾಲ ಪ್ರದೇಶಕ್ಕೆ ಹಬ್ಬಿ ನಿಸರ್ಗ ಸೌಂದರ್ಯವನ್ನು ಉಣಿಸುತ್ತಿರುವ, ಸಮುದ್ರಕ್ಕೆ ತಾಗಿಕೊಂಡಿರುವುದೇ ಕರ್ನಾಟಕದ ಕರಾವಳಿ ಭೂಪ್ರದೇಶ. ಉಪ್ಪು ಸಿಹಿ ನೀರಿನ ಹವೆ, ಮಳೆ, ಉತ್ತಮ ಆರೋಗ್ಯದ ಜೊತೆಗೆ ದಷ್ಟ-ಪುಷ್ಟತೆಯನ್ನು, ಮೇಧಾವಿ ಚುರುಕು ಬುದ್ಧಿಯನ್ನು, ಮತ್ತು ಕಷ್ಟ ಸಹಿಸುವುದನ್ನು ಮೈಗೂಡಿಸಿಕೊಂಡ ಸ್ಥರಯುತ ಬಾಹುಳ್ಯ ಹೊಂದಿರುವವರು ಅಲ್ಲಿನ ಜನತೆ. ಕಲೆ, ಯಕ್ಷಗಾನ, ವಿದ್ಯಾಭ್ಯಾಸ, ಆರೋಗ್ಯ, ಶಿಸ್ತಿನ ಜೀವನಕ್ಕೆ ಹೆಸರು ಮಾಡಿದ್ದು, ಹೆಚ್ಚು ಅಂಕ ಪಡೆಯುವ ಜಿಲ್ಲೆ ಎಂದು ಬಿರುದನ್ನು ಪಡೆದಿದ್ದು, ವಾಯುಮಾರ್ಗ, ಜಲಮಾರ್ಗ, ರಸ್ತೆ, ರೈಲ್ವೆ ಮಾರ್ಗದಲ್ಲೂ ಉನ್ನತ ಸ್ಥರದಲ್ಲಿದ್ದು, ನೀರಿರಲಿ, ಬಿಸಿಲಿರಲಿ, ಕಾಡಿರಲಿ ಯಾವುದಕ್ಕೂ ಭಯ ಪಡಲಾರೆವು ಎನ್ನುತ್ತಿದ್ದ ಜನ ಇದೀಗ ಕೊಲೆ, ಹತ್ಯೆಯೆಂಬ ಹೆಸರಿಗೆ ನಿಜಕ್ಕೂ ಬೆಚ್ಚಿ ಬೀಳುತ್ತಿರುವುದು ಎಲ್ಲರಲ್ಲೂ ಭಯತರಿಸುತ್ತಿದೆ. ಅದರಲ್ಲೂ ಹರೆಯದ ಯುವತಿಯರ ನಿಗೂಢ ಸಾವುಗಳು ಮನೆಯ ಮನೆಯಲ್ಲೂ ಮಾನಸಿಕ ವಿಕ್ಷಿಪ್ತತೆಯೊಂದಿಗೆ ಭಯ ಹುಟ್ಟಿಸುತ್ತಿದೆ.
ಅರೇ ಇದೇನಿದು ಕೇಳ್ತೀರಾ..! ಹೌದು ಕಳೆದ  ಎರಡು ಮೂರು ವರ್ಷಗಳಿಂದ ಕರಾವಳಿಯಲ್ಲಿ ಕೊಲೆಯ ಕೂಗು ಕೇಳುತ್ತಿದೆ, ಉಗ್ರರ ತಾಂಡವತೆ, ರೋಲ್ ಕಾಲ್, ಸೆಕ್ಸ್ ದಂಧೆ , ರಾಜಕಾರಣಿ ಪುಡಾರಿಗಳ ರಕ್ತಚರಿತ್ರೆ, ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಕುಖ್ಯಾತಿಯಾಗುತ್ತಿದೆ. ಒಂದು ಕಡೆ ಅಲ್ಪ ಸಂಖ್ಯಾತರನ್ನು ಪ್ರತ್ಯೇಕಿಸುತ್ತಿರುವುದು ಇನ್ನೊಂದು ಕಡೆ ದುಡಿಯುವ ದಲಿತ ಶೂದ್ರ ಸಮುದಾಯವನ್ನು ದಾರಿ ತಪ್ಪಿಸುತ್ತಿರುವುದು  ಅಷ್ಟೇ ಅಲ್ಲದೇ ದೈವ ಭಕ್ತಿಯ ಆಡಂಬರದ ಅಗ್ಗದ ಪ್ರದರ್ಶನ ಹೆಚ್ಚುತ್ತಿರುವುದನ್ನು ನೋಡಿದರೆ ಮನುಷ್ಯನ ಜೀವನ ಇಲ್ಲಿ ಅಗ್ಗವಾಗಿದೆಯೇನೋ ಅನ್ನಿಸುತ್ತಿದೆ. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ ಕ್ರಿಮಿನಲ್ ಚಟುವಟಿಕೆಗಳಿಗೆ ಧರ್ಮವನ್ನು ರಕ್ಷಾಕವಚವನ್ನಾಗಿ ಬಳಸುತ್ತಿರುವುದು ಹಲವಾರು ಕಡೆ ನಡೆಯುತ್ತಲೇ ಇದೆ.
    ಇವೆಲ್ಲವುಗಳ ಸಂಗಮ ಇಂದು ಕರಾವಳಿಯ ಜನತೆಯಲ್ಲಿ ನಿದ್ರೆಗೆಟ್ಟಿಸಿಬಿಟ್ಟಿದೆ. ಒಂದಕ್ಕೊಂದು ಸಂಭಂಧವೇನೋ ಎಂಬಂತೆ ಇದೀಗ ಮಕ್ಕಳ ರಕ್ತದಲ್ಲೂ ಉಗ್ರತೆಯ ಕಂಪು ಮೂಡುತ್ತಿದ್ದು ಇದರ ಬಗ್ಗೆ ಗಮನವಹಿಸದಿದ್ದರೆ ಮುಂದೊಂದು ದಿನ  ಪ್ರತಿಷ್ಠಿತ ಕರಾವಳಿ ದಂಡು ಪಾಳ್ಯವೋ, ಕಾಬುಲ್‍ನ ಬುಡಕಟ್ಟು ಪ್ರದೇಶದಂತೋ ಆಗುವುದಂತು ನಿಜ.
  ಬಹುತೇಕ ಕಾಡುಗಳೇ ಇರುವ ಕರಾವಳಿಯ ಹಳ್ಳಿಗಳಲ್ಲಿ ಇದೀಗ ಹೆಣ್ಣು ಮಕ್ಕಳ ಕಣ್ಮರೆ, ನಿಗೂಢ ಸಾವುಗಳು ನಡೆಯುತ್ತಿವೆ. ಅಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಗಿಂತ ಮೊದಲು ಅದೆಷ್ಟು ಹೆಣ್ಮಕ್ಕಳು ಹೆಸರಿಗಿಲ್ಲ ಎಂಬಂತೆ ಮಾಯವಾದರೋ ಗೊತ್ತಿಲ್ಲ. ಬಹುಶಃ ಇದು ಪೋಲೀಸ್ ಪುಸ್ತಕದಲ್ಲಿಯೂ ಎಂಟ್ರಿಯಾಗಿತ್ತೋ ಇಲ್ವೋ ಬಲ್ಲವರಿಲ್ಲ. ಆದರೆ ಮೂರ್ನಾಲ್ಕು ವರ್ಷದಿಂದ ಈಚೆಗೆ ನಾಲ್ಕೈದು ಹೆಣ್ಮಕ್ಕಳ ಶವ ನಿಬಿಡ ಪ್ರದೇಶದಲ್ಲಿ ದೊರಕಿದರೂ, ಹೇಗಾಯಿತು? ಯಾಕಾಯಿತು? ಯಾರು ಇದನ್ನು ಮಾಡಿರಬಹುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ದೊರಕದೆ, ರಸವತ್ತಾಗಿ ಎಲ್ಲವೂ ಕಳಚಿಕೊಂಡಿದ್ದು ನಿಮಗೂ ಗೊತ್ತಿರಬಹುದು. ಮೊನ್ನೆ ಮೊನ್ನೆ ಬೈಂದೂರಿನ ಕಾಡಿನಲ್ಲಿ ಅನಾಥವಾಗಿ ದೊರೆತ ಕಾಲೇಜು ಬಾಲೆ ಅಕ್ಷತಾ ಎನ್ನುವವಳ ಶವ, ಹಳೆಯ ಪ್ರಕರಣಗಳು ಮಾಸುವ ಮೊದಲೇ ಹೊಸ ಆಕೃಂಧನಕ್ಕೆ ನಾಂಧಿಯಾಯಿತು. ಈ ಹಿಂದೆ ನಡೆದ ಸೌಜನ್ಯ, ನಂದಿತಾ, ರತ್ನಾ ಕೊಠಾರಿಯ ಅನುಮಾನಾಸ್ಫದ ಸಾವುಗಳಿಗೆ  ಜನ ಹೋರಾಡಿ ಹೋರಾಡಿ ಸೋತು ಸುಣ್ಣವಾಗಿ ಹೋಗಿದ್ದರೂ, “ಇದು ಯುದ್ಧ ಕಣ್ರೀ ಎದುರಿಸಿ ಬಿಡೋಣ” ಎಂಬ ಕೂಗಿನೊಂದಿಗೆ ಶವ ಸಿಕ್ಕಿದ ಕ್ಷಣದಿಂದಲೇ ಪ್ರತಿಭಟನೆಯನ್ನು ಕೈಗೆತ್ತಿಕೊಂಡರು ನೋಡಿ!!!, ಆಗಲೇ ಪೋಲೀಸ್ ಮಹಾಶಯರಿಗೆ ಒತ್ತಡದ ಕಾವು ನಿದ್ದೆಗೆಡಿಸುವಂತೆ ಮಾಡಿ ಆರೋಪಿಗಳನ್ನು ಹಿಡಿಯಲೇಬೇಕು ಎಂಬ ಛಲ ಮೂಡಿ ಬಂತು. ಕುಂದಾಪುರ ತಾಲೋಕಿನ ಬೈಂದೂರಿನ ಎಲ್ಲಾ ಗ್ರಾಮಸ್ಥರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಸಹಕಾರ ಹಾಗೂ ಒತ್ತಡದೊಂದಿಗೆ  ಅಂತು ಕೊಲೆಗಡುಕ ಸಿಕ್ಕಿಯೇಬಿದ್ದ ಅವನೇ ಕಾಮಪಿಶಾಚಿ 19ರ ಹರೆಯದ ಸುನೀಲ್..





ಸುನೀಲ್ ಏನು ರೇಪ್ ಆ್ಯಂಡ್ ಮರ್ಡರ್ ಮಾಡೋಷ್ಟು ಬೆಳೆದವನಲ್ಲ. ಆದರೆ ಆತನ ಕಾಮದ ಕೀಳು, ಚುಡಾಯಿಸುವ ಪುಂಡಾಟಿಕೆ ಅಮಾಯಕ ಹೆಣ್ಣೋಬ್ಬಳ ಜೀವವನ್ನೇ ಬಲಿ ಪಡೆದದ್ದು ದುರಾದೃಷ್ಟ. ಬೈಂದೂರಿನ ಒತ್ತಿನಣೆಯ ಸಮೀಪದಲ್ಲಿರುವ ಹನ್ನಬೇರು ಎಂಬ ಪುಟ್ಟ ಊರಿನ ಪ್ರತಿಭಾನ್ವಿತ ಹುಡುಗಿ ಅಕ್ಷತಾ. ಮನೆಯಲ್ಲಿ ಬಡತನವಿದ್ದರೂ ಓದಿಗೆ ಅದು ಅಡ್ಡಿಯಲ್ಲ ಎಂದು ತೋರಿಸಿದ ಮುಗ್ಧೆ ಅವಳು. ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲ ಶೇ.93 ಅಂಕ ಪಡೆದು ಕರ್ನಾಟಕ ರಾಜ್ಯದಲ್ಲೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನೀಯರಲ್ಲಿ ಅತೀ ಹೆಚ್ಚು ಅಂಕ ಪಡೆದ ಕೀರ್ತಿಗೆ ಭಾಜನಳಾಗಿ ಹಲವು ಕಡೆ ಸನ್ಮಾನಗಳನ್ನು ಗಿಟ್ಟಿಸಿಕೊಂಡಿದ್ದಳು. ಸದ್ಯ ಬೈಂದೂರಿನ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಓದುತ್ತಿದ್ದ ಆಕೆಯ ಮೇಲೆ ಅದಾಗಲೇ ಕಿಡಿಗೇಡಿ ಸುನೀಲನ ಕಣ್ಣು ಬಿದ್ದಿತ್ತು. ಆ ದಿನ ಅಂದರೆ ಜೂನ್ 17ರಂದು ಕಾಲೇಜಿಗೆ ಹೋಗಿದ್ದ ಅಕ್ಷತಾ ಸಮಯ 6 ಆದರೂ ಮನೆಗೆ ಬರದಿದ್ದದ್ದು ಮನೆಯವರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಅದಾದ  ನಂತರ ಹುಡುಕಾಟವನ್ನು ಪ್ರಾರಂಭಿಸಿದ ಮನೆಯವರಿಗೆ ದೊರಕಿದ್ದು ದಾರಿಮಧ್ಯೆ ಪೊದೆಯ ಸಮೀಪ ಅಂಗಾತ ಮಲಗಿರುವ ಆಕೆಯ  ಶವ. ದಟ್ಟ ಕಲ್ಲು ಬಂಡೆಯ ನಡುವೆ ಹಾದು ಹೋಗಿ ಮನೆ ಸೇರಬೇಕಾದ ಹುಡುಗಿ ಸ್ಮಶಾನದ ಕದ ತಟ್ಟಿದ್ದಳು.
ಕಾಮಾಂಧ ಸುನೀಲ್, ಈಗಷ್ಟೇ ಐ.ಟಿ.ಐ ಓದುತ್ತಿರುವ ವಿದ್ಯಾರ್ಥಿಯಾಗಿದ್ದು, ಹುಡುಗಿಯರಿಗೆ ಚುಡಾಯಿಸುವುದು, ಗಾಂಜಾ, ಸಿಗರೇಟ್, ಸೇರಿದಂತೆ ಅನೇಕ ಚಟಗಳಿಗೂ ದಾಸನಾಗಿದ್ದ ಅಸಾಮಿಯೆಂದರೆ ನಂಬುತ್ತೀರಾ!?. ಎಸ್... ನಂಬಲೇಬೇಕು...  ಹೌದು!.., ಆ ದಿನ ಅಕ್ಷತಾಳ ಬರಿವಿಕೆಗೆ ಹೊಂಚು ಹಾಕಿ ಕಾಯುತ್ತಿದ್ದ, ದುರ್ಗಮ ದಾರಿಯಲ್ಲಿ ಅವಳು ಆಗಮಿಸಿದಾಗ  ಅಡ್ಡ ನಿಂತು ದುರ್ವರ್ತನೆ ತೋರಿದ್ದ. ಅದಕ್ಕವಳು ಹೆದರಿ ಓಡಲಾರಂಭಿಸಿದ್ದೆ ತಡ ಆಕೆಯ ದುಪ್ಪಟ್ಟವನ್ನು ಜಗ್ಗಿ  ಮುಗ್ಧೆಯನ್ನು ಕಡೆವಿದ್ದ. ಕೂಗಿದಾಗ, ಅದರಿಂದಲೇ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿದ್ದಾನೆ. ಅರೆಉಸಿರಿನಿಂದ ಒದ್ದಾಡುತ್ತಿರುವ  ಅಕ್ಷತಾಳನ್ನು ಪಕ್ಕದಲ್ಲೇ ಇರುವ ಅಕೇಶಿಯಾ ಗಿಡಗಳತ್ತ ಎಳೆದುತಂದು ಮಲಗಿಸಿ, ಅವಳ ಮೈ ಮೇಲೆ ಮಲಗಿ, ಲೈಂಗಿಕ ಪೀಡನೆ ನಡೆಸಿ ಮತ್ತೊಮ್ಮೆ ತನ್ನ ವಾಮನಾವತಾರವನ್ನು ತೋರಿದ್ದಾನೆ. ಅದಾಗಲೇ ಅವಳು ಪೂರ್ತಿ ಜೀವ ಕಳೆದು ಇಹಲೋಕವನ್ನು ತ್ಯಜಿಸಿದ್ದಳು. ಇದನ್ನು ಗಮನಿಸಿದ ಸುನೀಲ್ ಭಯಗೊಂಡು ಆಕೆಯ ಬ್ಯಾಗ್ ಮತ್ತು ಕೊಡೆಯನ್ನು ಪಕ್ಕದಲ್ಲಿ ಇಟ್ಟು ಪರಾರಿಯಾಗಿದ್ದಾನೆ.
ಆನಂತರದಲ್ಲೇ ನೋಡಿ, ಕಳ್ಳನ ಮನಸ್ಸು ಹುಳ್ಳಗೆ ಎನ್ನುವಂತೆ, ಪೊಲೀಸರಿಗೆ ಸುಳಿವು ಸಿಗಬಾರದೆಂದು ತಲೆ ಕೂದಲನ್ನು ಕ್ಷೌರ ಮಾಡಿಸಿಕೊಂಡು ರೂಪ ಬದಲಾವಣೆಯ ಚರ್ಯೆಗೆ ನಿಂತು ಬಿಟ್ಟ ಸುನೀಲಕಾಮಿ. ಈ ನಡುವೆ ಮಾತನಾಡುತ್ತಾ ತನ್ನ ಚಿಕ್ಕಮ್ಮನ ಮಗ ಅಕ್ಷಯನಿಗೂ ವಿಷಯ ಹಂಚಿ, ಮತ್ಯಾರಿಗೂ ಹೇಳಬೇಡ ಪೊಲೀಸರ ಮುಂದೆಯೂ ಬಾಯಿ ಬಿಡದಿರು ಎಂದು ಸಲಹೆ ನೀಡಿದ್ದ. ಅಷ್ಟೇನೂ ಖಚಿತ ಮಾಹಿತಿ ಇಲ್ಲದಿದ್ರೂ ಅನುಮಾನಾಸ್ಫದವಾದ ಸುಮಾರು 150 ರಿಂದ 200 ಮಂದಿಯನ್ನು ವಿಚಾರಿಸಿದ ಉಡುಪಿ ಎಸ್ಫಿ ಅಣ್ಣಾಮಲೈ ಹಾಗೂ ಅವರ ತಂಡ ಅಂತಿಮವಾಗಿ ಸುನೀಲ್ ಮತ್ತು ಅಕ್ಷಯನನ್ನು ಪೋಲೀಸ್ ಗಾಡಿಗೆ ಹತ್ತಿಸಿದ್ದರು. ಸ್ಟೇಷನ್‍ನಲ್ಲಿ ಒಟ್ಟಿಗೆ ವಿಚಾರಿಸಿದಾಗ ಬಾಯಿ ಬಿಡದ ಇಬ್ಬರೂ ಕದೀಮರು ಒಬ್ಬೊಬ್ಬರನ್ನೇ ವಿಚಾರಿಸಿ ಬೆಂಡೆತ್ತಿದಾಗ, ಅಕ್ಷಯ ನಿಜವನ್ನು ಅರುಹಿದ್ದ. ಅಲ್ಲಿಗೆ ಕೇವಲ ಎರಡೇ ದಿನದಲ್ಲಿ ಇದು ಸಹಜವಾದ ಸಾವಲ್ಲ ‘ರೇಪ್ ಆ್ಯಟಂಪ್ಟ್ ಆ್ಯಂಡ್ ಮರ್ಡರ್’ ಎಂಬ ಸುದ್ಧಿ ಹೊರಬಿತ್ತು. ಇದೀಗ ಸುಳ್ಳು ಮಾಹಿತಿ ಕೊಟ್ಟು ಪೊಲೀಸರ ದಾರಿ ತಪ್ಪಿಸಿದ ನಿಟ್ಟಿನಲ್ಲಿ ಅಕ್ಷಯ ಹಾಗೂ ಕೊಲೆಯ ಪ್ರಮುಖ ವ್ಯಕ್ತಿ ಸುನೀಲ್ ಇಬ್ಬರೂ ಪೊಲೀಸ್ ತೆಕ್ಕೆಯಲ್ಲಿ ಕೋಳನ್ನು ತೊಟ್ಟಿದ್ದಾರೆ.
ಕೊಲೆಯೇನೋ ನಡೆದು ಹೋಯ್ತು, ಆರೋಪಿಗಳು ಸೆರೆ ಸಿಕ್ಕರು ಆದರೆ ಕರಾವಳಿಯ ಜನರಲ್ಲಿ ಮಡುಗಟ್ಟಿದ ಕರಿಛಾಯೆಯ ಕಾರ್ಮೋಡ ಇನ್ನೂ ಇಳಿದಿಲ್ಲ. ಈ ಹಿಂದೆ ನಡೆದ ಕೊಲೆಗಳಿಗೂ ಉತ್ತರ ಹುಡುಕಲು ಇದೀಗ ಅಲ್ಲಿನ ಜನತೆ ಮುಂದಾಗಿದ್ದಾರೆ. ಇದೇನೋ ಬಹಳ ಬೇಗ ಬೇಗ ತಪಾಸಣೆ, ವಿಚಾರಣೆ ನಡೆಯಿತು ಇದರಂತೆ ಹಿಂದಿನ ಕೊಲೆಗಳಿಗೂ ಉತ್ತರಿಸಿ ಎನ್ನುವುದು ತಾಲೋಕಿನ ಜನರ ಆಶಯ. ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಕ್ಷೇತ್ರದಲ್ಲಿ ಭಟ್ಟಂಗಿತನ ಮತ್ತು ಸ್ವಹಿತಾಸಕ್ತಿ ನಡೆಸುತ್ತಿದ್ದು, ಪ್ರಜಾಪ್ರಭುತ್ವವನ್ನು ಹೊಸುಕಿಹಾಕಿ ಜನರಿಗೆ ನ್ಯಾಯ ದೊರೆಯದಂತೆ ಮಾಡುತ್ತಿವೆ, ಇಲ್ಲಿನ ಅನೇಕ ಅಕ್ರಮಗಳಿಗೆ ರಾಜಕೀಯ ಹಾಗೂ ಪ್ರಭಾವಿ ವ್ಯಕ್ತಗಳೇ ಕಾರಣ ಎನ್ನುತ್ತಾರೆ ಅಲ್ಲಿನ ಜನ.
ನಿಜ! ಈ ಜಗತ್ತನ್ನು ಬೇರೆ ಬೇರೆ ಸ್ವರೂಪದ ಅನಿಷ್ಟಗಳು ಕಾಡುತ್ತಿವೆ. ಯರ್ರಾ ಬಿರ್ರಿಯಾಗಿ ಆಳುತ್ತಿವೆ. ಅಕ್ಷತಾಳ ಕೊಲೆಯ ರಹಸ್ಯವನ್ನೇನೋ ಬೇಧಿಸಿದ್ದೇವೆ ಆದರೆ ಇಂತಹ ಘಟನೆಗಳು ಮಾನವ ಲೋಕವನ್ನೇ ತಲ್ಲಣಿಸುವ ಹಾಗೂ ಅಮಾನವೀಯವನ್ನು ಅಕ್ರಮ ಸಮಾಜದೆಡೆ ಕೊಂಡು ಹೋಗುವ ಲಕ್ಷಣಗಳಾಗಿದ್ದು ಈಗಲೇ ಇದನ್ನು ತಡೆಯದಿದ್ದರೆ ಮುಂದೆ ನಮ್ಮ ಕಣ್ಮುಂದೆ ನಮ್ಮ ಮಕ್ಕಳು ಸತ್ತು ಹೆಣವಾಗುವುದನ್ನು ಕಾಣಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಇದರ ಬಗ್ಗೆ ನಮ್ಮನ್ನಾಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೀವೇ ಹೊಣೆ ಹೊತ್ತು  ಕಾಡು ಮೇಡಿನಲ್ಲಿರುವ ಪ್ರದೇಶಗಳಿಗೆ ಸೂಕ್ತ ಭದ್ರತೆ, ದಕ್ಷ ಅಧಿಕಾರಿಯ ನೇಮಕ, ಜೊತೆಗೆ ಸರಿಯಾದ ಮಾರ್ಗ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂದು ನಮ್ಮ ಕಳಕಳಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇಲ್ಲವಾದರೇ ನೀವೆ ಹೇಳಿ ‘ಘನವೆತ್ತ ಬದುಕನ್ನು ಅವರು ಬದುಕುವುದ್ಹೇಗೆ...!?’

ನಗ್ನತೆಯ ಪಿಸುಮಾತು...


ತಮ್ಮ-ತಂಗಿ ಶಾಲೆಗೆ ಹೋಗುತ್ತಿರುವರು ಆದರೆ...!!!

           ಜೂನ್ 1...
           ಮುಂಜಾನೆಯ ನಿತ್ಯಕರ್ಮಗಳನ್ನು ಮುಗಿಸಿ, ಬಾಹ್ಯ ಪ್ರಪಂಚಕ್ಕೆ ಹೊರ ಬೀಳುವ ಮುನ್ನ ಮೊಬೈಲ್ ಡಾಟಾ ಆನ್ ಮಾಡಿ ದಿನದ ವಿಷಯ ವೈವಿಧ್ಯ ಹಾಗೂ ಗೆಳೆಯ, ಗೆಳತಿಯರ ಸಂದೇಶ, ಪತ್ರಿಕೋದ್ಯಮದ ಸುದ್ದಿ ಶಕಾರನ್ನು ತಿಳಿಯಲು ಮನತೆರೆದೆ. ಎಂದಿನಂತೆ ಒಂದಿಷ್ಟು ಫೇಸ್ ಬುಕ್ ಟ್ಯಾಗ್‍ಗಳು, ಪೋಟೋ ಅಪ್ಡೇಟೆಡ್, ಸ್ಟೇಟಸ್, ಮೇಸೆಂಜರ್‍ನ ಸಂದೇಶಗಳು ಟಿನ್ ಟಿನ್ ಸದ್ದಿನೊಂದಿಗೆ ಪರದೆಯಲ್ಲಿ ನೋಟಿಫಿಕೇಷನ್ ಸ್ಥಳದಲ್ಲಿ ಮಿಂಚಿದವು. ಆಗಲೇ ವಾಟ್ಸಾಪ್‍ನಲ್ಲೂ ಶುಭೋದಯ ಸಾರುವ ಹಲವಾರು ಮೆಸೇಜ್‍ಗಳು ತಾ ಮುಂದು ನಾ ಮುಂದು ಎಂಬಂತೆ ಬೇರೆಯದೇ ರೀತಿಯಲ್ಲಿ ಸೌಂಡ್ ಮಾಡುತ್ತಾ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತಿದ್ದವು. ದಿನಬೆಳಗಾದರೆ ಇದಕ್ಕೇನು ಕಡಿಮೆ ಇಲ್ಲ. ಇತ್ತೀಚಿಗಂತು ಆ್ಯಂಡ್ರಾಯ್ಡ್ ಹವಾ ಎಲ್ಲರಲ್ಲೂ ಮೇಸೆಜ್‍ಗಳ ವ್ಯಾಲ್ಯೂವನ್ನು ಜಾಸ್ತಿಗೊಳಿಸಿ, ಅದಕ್ಕಿರುವ ಬೆಲೆಯ ಮೊತ್ತವನ್ನು ಕಡಿಮೆಗೊಳಿಸಿ ಬಿಟ್ಟಿವೆ ಬಿಡಿ!. ಮೊದಲು ನಾವೆಲ್ಲ ಸಿಮ್‍ನ ಪರ್ಸ್‍ನಲ್ ಆಕೌಂಟ್‍ನಿಂದ ಪ್ರತಿ ಮೇಸೆಜ್‍ಗೆ ಇಂತಿಷ್ಟು ಎಂಬಂತೆ ಹಣವನ್ನು ತೆಯ್ದು ಸಂದೇಶ ಕಳುಹಿಸುತ್ತಿದ್ದೇವು ಆಗ ಒಂದೊಂದು ಸಂದೇಶಕ್ಕೂ ಬೆಲೆ ಅಗಾಧ ಎಂಬಂತ್ತಿತ್ತು. ಆದರೀಗ ಎಲ್ಲವೂ ಇಂಟರ್‍ನೆಟ್ ಜಾಲದೊಳಗೆ ಫ್ರೀ ಎಂಬ ಪಾಶಕ್ಕೆ ಸಿಲುಕಿ ಅವುಗಳ ಮಹತ್ವವೇ ಅಡಗಿ ಹೋಗಿದೆ. ಒಮ್ಮೊಮ್ಮೆ ಈ ಮೆಸೇಜ್‍ಗಳು ಕಿರಿ ಕಿರಿ ಎನಿಸಿದರೂ ಎಲ್ಲೋ ಒಂದು ಕಡೆ ಕ್ಷಣ ಮಾತ್ರದಲ್ಲಿ ತಿಳಿಯದ ಹಾಗೂ ಅಚ್ಚರಿಯ ಕೆಲವೊಂದಿಷ್ಟು ಸುದ್ದಿ, ಪೋಟೋ ಇತ್ಯಾದಿಗಳನ್ನು ಕುಳಿತಲ್ಲೇ ವೇಗದಿ ಪಡೆಯಲು ಸಹಕಾರಿಯಾಗುತ್ತವೆ. ಆ ದಿನ ಬಂದಿರುವ ಅಷ್ಟು ಮೆಸೇಜ್‍ಗಳ ಪೈಕಿ ‘ಹಾಯ್ ಗೆಳೆಯ ಗುಡ್ ಮಾರ್ನಿಂಗ್ ಈ ದಿನ ನೆನಪಿದ್ಯಾ ನಿಂಗೆ’ ಎಂದು ಕಳುಹಿಸಿದ್ದ ನನ್ನ 18 ವರ್ಷದ ಹಿಂದಿನ ಬಾಲ್ಯದ ಗೆಳೆಯನ ಸಂದೇಶ ನನ್ನನ್ನು ತೀರಾ ಆಕರ್ಷಿಸಿತ್ತು. ಅರೇ ಇದೇನಿದು ಈ ದಿನ ಏನಿದೆ ಸ್ಫೇಷಲ್ ಅಂದುಕೊಂಡು ಮೆದುಳಿಗೆ ರೀಕಾಲ್ ಕೊಟ್ಟರೂ ಉತ್ತರ ತೋಚದಾಯಿತು. ‘ಎನ್ ಸ್ಫೇಷಲ್ ಮಿತ್ರಾ, ಗೊತ್ತಾಗಿಲ್ಲ’ ಎಂದು ರಿಪ್ಲೈ ನೀಡಿದೆ. ‘ಹೇ ಇವತ್ತು ಜೂನ್ ಒಂದು ಅಲ್ವೇನೋ, ನಾನು ನೀನು 18 ವರ್ಷಗಳ ಹಿಂದೆ ಇದೇ ದಿನ ನಮ್ಮ 6ನೇ ವಯಸ್ಸಿನಲ್ಲಿ ಒಂದನೇ ಕ್ಲಾಸ್‍ಗೆ ಹೋಗುವಾಗ ಪರಿಚಯವಾಗಿ ದೋಸ್ತಿಗಳಾಗಿದ್ದು, ಮೊದಲ ದಿನ 2 ಮೈಲಿ ದೂರವಿರುವ ಸಣ್ಣ ಶಾಲೆಗೆ ಹೋಗಿ ಒಂದು ಮೂಲೆಯಲ್ಲಿ ಯಾರದ್ದು ಪರಿಚಯವಿರದೇ ಇಬ್ಬರೇ ಎನ್ನುವಂತೆ ಮೇಸ್ಟ್ರ ಹಳೆಯ ಖುರ್ಚಿಯ ಕೆಳಗೆ ಹೋಗಿ ಕುಳಿತದ್ದು’ ಎಂದು ಹಳೆಯದನ್ನು ನೆನಪಿಸಿದ.
      ಹೌದಲ್ವಾ!!... ವಾವ್ಹ್... ಗೆಳೆಯ ಅದನ್ನೆಲ್ಲಾದ್ರೂ ಮರೆಯೋಕಾಗತ್ತಾ, ಆ ದಿನದ ಅನುಭವವೇ ಬೇರೆ. ನೀನು ದೂರದ ಗುಜರಾತ್‍ನಿಂದ  ಇಲ್ಲಿಗೆ ಬಂದು ನನ್ನ ಗೆಳೆಯನಾಗಿದ್ದು, ಅದಾದ ನಂತರವೂ ಅಷ್ಟೇ ಜೊತೆಗೆ ಶಾಲೆಗೆ ಹೋಗಿದ್ದು, ಒಂದೇ ಕೊಡೆಯಲ್ಲಿ ಗುಡುಗು ಮಿಂಚಿಗೆ ಹೆದರದೇ ಕಾಡು ಮೇಡು ದಾಟಿ ಅಕ್ಷರ ಕಲಿತದ್ದು ಅದೆಲ್ಲಾ ಎಣಿಸಿಕೊಂಡರೆ ಮೈಯಲ್ಲಿ ಎನೋ ಸಂಚಲನ ಆಗುತ್ತೆ ಮಗಾ ನೆನಪಿಸಿದ್ದಕ್ಕೆ ಥ್ಯಾಂಕ್ಸ್ ಕಣೋ ಎಂದು ಒಂದಿಷ್ಟು ಹಳೆಯ ಬಾಲ್ಯದ ನೆನಪುಗಳ ವಿಚಾರ ವಿನಿಮಯ ಮಾಡಿಕೊಂಡೆವು...
     ನಿಜಕ್ಕೂ ಅನ್ನಿಸುವುದು ನನಗೆ ಎಷ್ಟೊಳ್ಳೆ ದಿನಗಳು ಅವು. ನಾವೆಲ್ಲ ಕಾಲ್ನಡಿಗೆಯಲ್ಲಿ, ಉದ್ದನೆಯ ಹರಿದ ಕೊಡೆಯನ್ನು ಹಿಡಿದು, ಹವಾಯಿ ಚಪ್ಪಲಿಯನ್ನು ತೊಟ್ಟು ಒಮ್ಮೊಮ್ಮೆ ಅದು ಹರಿದರೆ ಬರಿಗಾಲಲ್ಲಿ ನಡೆದುಕೊಂಡು, ಮಳೆಗಾಲದಲ್ಲಿ ಮಳೆ ನೀರು ಹರಿಯುತ್ತ್ತಿದ್ದಾಗ ಕಾಗದದ ದೋಣಿ ಮಾಡಿ ಅದು ಹೋಗುವುದನ್ನೆ ಹಿಂಬಾಲಿಸಿಕೊಂಡು ಚಲಿಸುತ್ತಿದ್ದದ್ದು, ಕಾಡು ಹಣ್ಣುಗಳು ಜೊತೆಗೆ ಪೇರಲ, ನೇರಳೆ, ಮಾವು, ಗೇರು, ಬುಗುರಿಹಣ್ಣು ಇತ್ಯಾದಿಗಳನ್ನು ಕಿಸೆಯಲ್ಲಿ ತುಂಬಿಕೊಂಡು,ಹಣ್ಣು ಸಿಗದವನಿಗೆ ಸಾಲಕೊಟ್ಟು ಮರುದಿನ ಎರಡು ಹಣ್ಣು ಕೊಡು ಎನ್ನುವಂತೆ ಜಗಳ ಮಾಡುತ್ತಾ ಶಾಲೆಯ ದಾರಿಯನ್ನು ಸವೆಸುತ್ತಿದ್ದದ್ದು ಒಂಥರ ಮಜವಾಗಿದ್ದವು. ಇಂದಿನ ಕಾಲದಲ್ಲೂ ಮಕ್ಕಳು ಶಾಲೆಗೆ ಹೋಗುತ್ತಾರೆ ಆದರೆ ಶಾಲೆಯ ಜೊತೆಗೆ ಬದುಕು ಬಿನ್ನಾಣದ ಪರಪಂಚ ನೋಡಿದರೆ, ಇವತ್ತಿನ ಮಕ್ಕಳಿಗೆ ಸ್ಕೂಲ್ ಬಸ್ ಎಂಬ ವಾಹನದೊಳಗೆ ಅವರ ಸಂಭ್ರಮ ಕೊನೆಗಾಣುತ್ತದೆ. ನಮಗೆ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯದ ಆಟವಿತ್ತು ಜೊತೆಗೆ ವ್ಯಾಯಾಮದ ಆಯಾಮಗಳಿದ್ದವು. ಆದರೆ ಇಂದು ಗಿಜಿ-ಗಿಜಿಯಾಗಿ ಮಕ್ಕಳು ಸರಿಯಾದ ಕ್ರೀಡಾಂಗಣದ ವ್ಯವಸ್ಥೆಯೆ ಇಲ್ಲದೆ ನಮ್ಮ ಅಂದಿನ ಆ ಮಜದ ಸ್ಫರ್ಶವೇ ಇರದೇ ಸೊರಗುತ್ತಿದ್ದಾರೆ. ಕೇವಲ ಲಕ್ಷ ಲಕ್ಷ ಡೊನೆಷನ್‍ಗೆ ಬಾಯಿಬಿಟ್ಟು ದುಡ್ಡುಮಾಡುವ ಶಿಕ್ಷಣ ಸಂಸ್ಥೆಗಳು ತನ್ನ ಬಾಹ್ಯ ಚಹರೆ ಹೊರಗಡೆ ತೋರಬಾರದೆಂದು ದೊಡ್ಡ ದೊಡ್ಡ ಕಂಪೌಂಡ್ ಏರಿಸಿ ಸ್ವಾತಂತ್ರ್ಯದ ಆಟಕ್ಕೆ ಬ್ರೇಕ್ ಹಾಕಿ, ಓದು-ಓದು-ಓದು ಎಂದು ಮಕ್ಕಳನ್ನು ಮಂಡೆ ಬಿಸಿಯಲ್ಲೇ ಬೇಯುವಂತೆ ಮಾಡುತ್ತಿರುವುದು ನಿಜಕ್ಕೂ ನೋವು ತರಿಸುತ್ತದೆ.
          ಅಂದು ಇಂದಿನ ಮಣಬಾರದಂತ  ಬ್ಯಾಗ್‍ಗಳು ಬೆನ್ನಲ್ಲಿರುತ್ತಿರಲಿಲ್ಲ. ಇವತ್ತಿನ ಮಕ್ಕಳ ಕುತ್ತಿಗೆಯಲ್ಲಿ ವಾಟರ್ ಕ್ಯಾನ್, ಕೈಯಲ್ಲಿ ಲಂಚ್ ಕ್ಯಾರಿಯರ್ ನೋಡಿದರೆ ಅವುಗಳು ಅಂದು ನಮಗೆ ಯಾವುದೆಂದೆ ಗೊತ್ತಿರಲಿಲ್ಲ. ಮಧ್ಯಾಹ್ನ ಮರದ ಕೆಳಗೆ ಊಟದ ಬುತ್ತಿಯನ್ನು ಹಂಚಿಕೊಂಡು ತಿನ್ನುತ್ತಿದ್ದದ್ದು, ಇರುವುದು ಒಂದೇ ಜೊತೆ ಅಂಗಿ ಚಡ್ಡಿಯಾದರೂ ಅದನ್ನೇ ಒಗೆದು ಒಣಗಿಸಿಕೊಂಡು ಹಾಕಿಕೊಳ್ಳುತ್ತಿದದ್ದು, ಅಣ್ಣ-ಅಕ್ಕ ಬಳಸಿದ ಪುಸ್ತಕವನ್ನೇ ನಾವು ಬಳಸುತ್ತಿದ್ದದ್ದು, ಹಳೇ ನೋಟ್ ಪುಸ್ತಕಗಳಲ್ಲಿ ಖಾಲಿ ಇರುವ ಪುಟಗಳನ್ನು ಮಾತ್ರ ಕಿತ್ತು ರಫ್ ಬುಕ್ ಮಾಡುತ್ತಿದ್ದದ್ದು ಎಲ್ಲವೂ ಇಂದು ಬ್ಲಾಕ್ ಆ್ಯಂಡ್ ವೈಟ್ ಚಿತ್ರವಷ್ಟೆ.
 ಇಂದಿನ ಜನರೇಷನ್ ಮಕ್ಕಳಿಗೆ ಈ ಎಲ್ಲಾ ವೈವಿಧ್ಯತೆಯ ಬಗ್ಗೆ ಎಷ್ಟು ಗೊತ್ತಿರಬಹುದು ಎಂದು ಚಿಂತಿಸಿದಾಗ, ಮೊದಲು ನನಗೆ ಕಾಡುವುದೇ ಓದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎನ್ನುವ ಭಯ. ಅಪ್ಪ ಅಮ್ಮಂದಿರು, ಕನ್ನಡ ಮಾತಾಡಲೂ ಬೇಡ, ಕನ್ನಡ ಮೀಡಿಯಂ ಸ್ಕೂಲ್ ಅಂತೂ ಬೇಡವೇ ಬೇಡ ಎಂಬಂತೆ ಎಷ್ಟೇ ಬಡತನದಲ್ಲಿ ಬೇಯುತ್ತಿದ್ದರೂ ಮಗುವನ್ನೂ ಇಂಗ್ಲೀಷ್ ಮೀಡಿಯಂ ಸ್ಕೂಲ್‍ಗೆ ಲಕ್ಷಾಂತರ ಹಣ ಖರ್ಚುಮಾಡಿ ಸೇರಿಸುತ್ತಿದ್ದಾರೆ. ಬೆಳಿಗ್ಗೆ ಎದ್ದರೆ ಶುರುವಾಯ್ತು ದಿನದ ವೈಖರಿ, ಮಗುವಿಗೆ ಖಡಕ್ ಐರನ್ ಶರ್ಟ್ ಹಾಕಿಸಿ, ತಲೆ ಬಾಚಿ, ಪೌಡರ್ ಬಳಿದು, ಅಂದ ಚಂದವಾಗಿಸಿ, ಸ್ಕೂಟಿಯಲ್ಲೋ, ವ್ಯಾನ್‍ನಲ್ಲೋ ಶಾಲೆಗೆ ಭರ-ಭರನೇ ಕರೆದುಕೊಂಡು ಹೋಗಿ ಕಂಪೌಂಡ್ ಒಳಗೆ ಕಾರಾಗೃಹದೊಳಗೆ ಬಿಟ್ಟಂತೆ ದೂಡಿ ಬರುತ್ತಾರೆ. ಇನ್ನೂ ಒಳಗೋದ ಮಕ್ಕಳ ಪಾಡಂತು ಅಯ್ಯೋ ಎಂದರೂ ಇಲ್ಲ, ಅಮ್ಮಾ ಎಂದರೂ ಇಲ್ಲ...
       
ಆಧುನಿಕ ಶಿಕ್ಷಣ ಪದ್ಧತಿಯಿಂದ ಸ್ಫರ್ಧೆಗಿಳಿದಿರುವ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ದುರಂತ ಎನ್ನಬಹುದು. ವಿಕಸನದ ಹಾದಿ ಹಿಡಿದಿರುವ ತಂದೆ ತಾಯಿಗಳು ಮಕ್ಕಳನ್ನು ಅದೇ ಹಾದಿಗೆ ಕಳುಹಿಸಲು ಇದ್ದಾಡುತ್ತಿದ್ದಾರೆ. ಬದಲಾವಣೆಯ ಸುಳಿಯಲ್ಲಿ  ಬಾಲ್ಯದ ಅದ್ಭುತತೆಯನ್ನು ಕಳೆದುಕೊಂಡು ಚಲನ ಶೀಲತೆಯನ್ನು ಕೇವಲ ಡಿಜಿಟಲ್ ಯುಗಕ್ಕೆ ಸೀಮಿತ ಮಾಡಿಕೊಳ್ಳುತ್ತಿದ್ದಾರೆ.  ಆಧುನೀಕತೆಗಳ ಶ್ರೀಮಂತಿಕೆಯಲ್ಲಿ ಕಳೆದು ಹೋಗುತ್ತಿರುವ ಬಾಲ್ಯದ ಶ್ರೀಮಂತಿಕೆ, ಶಿಕ್ಷಣ ಹಂತದಲ್ಲೇನೋ ಮಕ್ಕಳನ್ನು  ಪ್ರಭುದ್ಧವಾಗಿಸುತ್ತಿದೆ. ನಾವು ಗೆಳೆಯರು  ಮಾತನಾಡಲು ಕುಳಿತಾಗ  ಬಾಲ್ಯದ ನೆನಪುಗಳ, ಶಾಲಾದಿನಗಳ ಮಜವನ್ನು  ನೆನಪುಮಾಡಿಕೊಂಡು ಹಲ್ಕಿರಿದು ನಗು ನಗುತ್ತಾ ಧನ್ಯ ನಾನು ಎಂಬಂತೆ ಖುಷಿ ಪಡುತ್ತೇವೆ. ಅದನ್ನೆಣಿಸಿದರೆ ಆ ಮಟ್ಟಿಗೆ ನಮ್ಮ ಮಕ್ಕಳು ದುರದೃಷ್ಟವಂತರಾ..,? ಎನ್ನುವ ಪ್ರಶ್ನೆ ಮೂಡುತ್ತೆ. ಆದರೆ ಅದಕ್ಕೂ ಮಿಗಿಲಾದ ಕಂಪ್ಯೂಟರ್, ಇಂಟರ್‍ನೆಟ್, ಪ್ಲೂಯೆನ್ಸ್ ಶಿಕ್ಷಣ ಅವರಿಗೆ ಸಿಕ್ಕಿದೆ. ಊಹಿಸಲಾಗದ ವೈಜ್ಞಾನಿಕ ಆವಿಷ್ಕಾರಗಳು ಅವರ ಕೈಯಲ್ಲಿ ಹರಿದಾಡುತ್ತಿವೆ. ಅದು ಅವರ ಅದೃಷ್ಟವಿರಬಹುದು. ಆದರೂ ಹಿಂದೆ ನಾವನುಭವಿಸಿರುವ ರಜೆಯ-ಮಜ, ಶಾಲೆಯ ರೂಪು-ರೇಷೆ, ಆಟ-ಪಾಠಗಳು, ತೀರಾ ಭಾವನೆಯ ಗೊಂಚಲಿಗೆ ಹತ್ತಿರವಾದಾಗ ಈ ಮುದ್ದು-ಪೆದ್ದು ಅನಿಸಿಕೆ, ಭಾವಲಹರಿಯಲ್ಲಿ ಮೀಟಿ ಆನಂದ ಬಾಷ್ಫ ಹೊಮ್ಮಿಸುತ್ತವೆ. ಆಗ ಆನಿಸುತ್ತದೆ ನಾವೇ ಅದೃಷ್ಟವಂತರು. ಬದಲಾವಣೆಯ ಹಾದಿಯಲ್ಲೇನೋ ನಾವಿದ್ದೇವೆ ಆದರೆ ಬದಲಾಯಿಸುತ್ತಿರುವುದು ಹೆಚ್ಚಾಗಿ ಹಳೆಯ ಮಾದರಿಯ ವಿಶೇಷತೆಗಳನ್ನೇ ಹೊರತು ಹೊಸದಾಗಿ ಬಂದಿರುವ ಕಟ್ಟುಪಾಡುಗಳನ್ನಲ್ಲ... ಥಿಂಕ್ ಡಿಫರೆಂಟ್ಲೀ... ಮುಂದೆ ಅನಿಸಬಹುದು, ಇದೇ ಇರಬಹುದು ನಮ್ಮೆಲ್ಲರ ದುರದೃಷ್ಟ...





 

ಹೆಣ್ಣು -7


        ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಮಾಮೂಲಿ ಎನ್ನುವಂತೆ ನಡೆದು ಹೋಗುತ್ತಲೇ ಇದೆ. ಪ್ರಕರಣಗಳು ನಡೆದ ಬೆನ್ನಲ್ಲೇ ಒಂದಷ್ಟು ಹೋರಾಟ, ಪ್ರತಿಭಟನೆ ಕೊನೆಗೆ ಆರೋಪಿಯ ಸೆರೆ ಅಂತಿಮವಾಗಿ ಆತನಿಗೊಂದಿಷ್ಟು ವರ್ಷದ ಜೈಲು ಸಜೆ ಹೀಗೆ ಏನಿದೆ ಅದರಲ್ಲಿ ಎನ್ನುವಷ್ಟು ಸಾರಾಸಗಟಾಗಿ ಬೆತ್ತಲೆ ಜಗತ್ತು ಹೆಣ್ಣಿನ ಮಾನವನ್ನು ದಿನೇ ದಿನೇ ಬೆತ್ತಲಾಗಿಸುತ್ತಿದೆ. ಅಷ್ಟೇ ಅಲ್ಲದೇ ಸಮಾಜದಲ್ಲಿ ಹೆಣ್ಣಿನ ಶೋಷಣೆ, ಕೀಳರಿಮೆ ಇತ್ಯಾದಿಗಳು ನಡೆಯುತ್ತಲೇ ಇದೆ. ಯಾಕೆ ನಮ್ಮ ಸಮಾಜ ಹೀಗಾಗುತ್ತಿದೆ? ಕಾಮದ ಕ್ರೂರ ಕತ್ತಿಗೆ ಇಂದಿನ ಹೆಣ್ಮಕ್ಕಳು ಬಲಿಯಾಗುತ್ತಿದ್ದಾರೆ? ಇಂತಹ ಸನ್ನಿವೇಶಗಳು ಎದುರಾಗಲೂ ಹೆಣ್ಣಿನ ತಪ್ಪು ಇರಬಹುದಾ? ಕಣ್ಣೇದುರೆ ಅನಿಷ್ಟ ನಡೆದು ಹೋದರೂ ಜನ ಸುಮ್ಮನೆ ಕುಳಿತುಕೊಳ್ಳಲು ಕಾರಣವಾಗುವ ಅನ್ಯ ಷಡ್ಯಂತ್ರಗಳು ನಡೆಯುತ್ತಿವೆಯಾ? ಎನ್ನುವ ಒಂದಿಷ್ಟು ವಿಚಾರಗಳು ಪ್ರಶ್ನೆಗಳಾಗಿ ಮೂಡಿ ಬರುತ್ತವೆ.




ಹಕ್ಕಿ ಬಯಸುವುದು ಬೆಚ್ಚಗಿನ ಗೂಡಿನ ಆಸರೆ, ಮಗು ಬಯಸುವುದು ಅಮ್ಮನ ತೋಳಿನ ಆಸರೆ, ಹಾಗೆಯೇ ಹೆಣ್ಣು ಯಾವಾಗಲೂ ಬಯಸುವುದು ಗಂಡಿನ ಆಸರೆ, ಆದರೆ ಅದೇ ಗಂಡು ಇಂದು ಹೆಣ್ಣನ್ನು ಮೋಹಿಸಿ ತನ್ನ ಭೋಗಕ್ಕಾಗಿ ಉಪಯೋಗಿಸಿ, ಎಲ್ಲ ಸುಖ ಪಡೆದ ಮೇಲೆ ನಿಷ್ಕಾರಣವಾಗಿ ಅವಳ ಮೇಲೆ ವೈರುಧ್ಯ ಸಾಧಿಸಿ, ಅವಳಿಗೂ ನನಗೂ ಯಾವ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಂಡು ನೋವಿನ ಸರಪಳಿಯಲ್ಲೇ ತನ್ನ ಹಟವನ್ನೇ ಸಾಧಿಸುತ್ತಾನೆ. ಸದಾ ಹೆಣ್ಣಿನ ರೂಪ, ಅವಳ ದೇಹಕ್ಕೆ ಹಪಹಪಿಸುವ ಇಂದಿನ ಯುವ ಜನಾಂಗ ಕಾಮದ ಆಸೆಗೆ ಸೋತು, ರೇಪ್ ಎನ್ನುವ ರೌದ್ರವನ್ನು ಮೈಗೂಡಿಸಿಕೊಂಡು ತನ್ನ ಹುಟ್ಟಿಗೆ ಕಾರಣಳಾದ ಹೆಣ್ಣಿನ ಕುಲಕ್ಕೆ ಮಸಿ ಬಡಿದು, ಸಾಯಿಸುವ ಕ್ಷಣದವರೆಗೆ ಮೆರೆಯುತ್ತಿದೆ. ಜಗತ್ತು ಅಪ್ಡೇಟ್ ಆಗಿದೆ ನಾವು ಬದಲಾವಣೆಯ ಗಾಳಿಗೆ ಸಿಲುಕಿದ್ದೇವೆ ಅದೇ ಇಂದು ಇಷ್ಟೆಲ್ಲವುದಕ್ಕೆ ಕಾರಣ ಅನಿಸಿದರೆ ತಪ್ಪೇನು ಇಲ್ಲ. ಇಂದಿನ ಮೊಬೈಲ್ ಒಂದರಿಂದಲೇ ಹೆಣ್ಣು ಗಂಡಿನ ಬಣ್ಣದ ಮಾತಿಗೆ ಮರುಳಾಗಿ ಕಾಮಧಾಟಕ್ಕೆ ಸಿಲುಕಿ ಬೆತ್ತಲಾಗಿ ಬಳಲುತ್ತಿದ್ದಾಳೆ. ಕೆಲವೊಂದು ಪ್ರಕರಣಗಳಲ್ಲಿ ಹೆಣ್ಣಿನ ತಪ್ಪು ಇದೆ ಎನಿಸುತ್ತದೆ. ಯಾಕೆಂದರೆ ಅವಶ್ಯಕತೆಗೆ ಬಂದ ಒಂದಿಷ್ಟು ವಸ್ತುಗಳು ಅವಶ್ಯವಿಲ್ಲದೇ ಉಪಯೋಗಿಸಿ ಇಂದಿನ ಯುವ ಜನಾಂಗ ದಾರಿ ತಪ್ಪುತ್ತಿದೆ.
ಇವೆಲ್ಲವನ್ನು ಬಿಟ್ಟು ಮುಂದೆ ಹೋದರೆ ಹೆಣ್ಣಿಗೆ ಕಿರುಕುಳಗಳೂ ಸಹಜ ಎನಿಸುತ್ತದೆ. ವರ್ಗಗಳ ಪ್ರಾಬಲ್ಯ ಎಷ್ಟೋ ಬಾರಿ ಇನ್ನೊಬ್ಬರಿಗೆ ನೋವಾಗುತ್ತದೆ ಎಂದು ತಿಳಿದರೂ ಮೆರೆಯುತ್ತಲೇ ಇದೆ. ಒಂದು ಹುಡುಗಿ ಒಂಟಿಯಾಗಿ ನಡೆದುಕೊಂಡು ಹೋದರೆ ಆಕೆ ನೋಡುವವರಿಗೆ ಆಟಿಕೆಯ ಗೊಂಬೆಯಂತೆ ಕಾಣುತ್ತಾಳೆ. ಸಮಾಜ ಆಡುವ ಮಾತಿಗೆ ಅವಳ ಮೈ ಮನಸು ಎರಡು ಹದಗೆಡುವಂತಾಗುತ್ತಿದೆ. ರಸ್ತೆಯಲ್ಲಿ ಅಣ್ಣ ತಂಗಿಯರೇ ಇಂದು ಜೊತೆ ಹೋದರೂ ಎನೆಲ್ಲಾ ಮಾತುಗಳು ಕೇಳುವ ಪರಿಸ್ಥಿತಿಗಳು ಬಂದಿವೆ. ಇನ್ನು ಅವಳೊಬ್ಬಳೆ ಅನುಭವಿಸುವ ನೋವುಗಳನ್ನು ಪಟ್ಟಿಗೈದರೆ ಅನುಭವವಾಗುತ್ತದೋ ಇಲ್ಲವೋ ಆದರೆ ಅನುಭವಿಸಿದರೆ ಚೆನ್ನಾಗಿ ಅರಿವಾಗಬಹುದು.
ಹೆಣ್ಣು ಸಮಾಜದ ಕಣ್ಣು ಅವಳೇ ಇಂದು ಸಮಾಜದ ಕಠೋರ ಕಿರುಕುಳ ತಾಳಲಾರದೆ ಮಣ್ಣಾಗುತ್ತಿದ್ದಾಳೆ. ಅವಳು ವಾತ್ಸಲ್ಯಮಯಿ ಎಂಥಾ ಘೋರ ನೋವನ್ನಾದರೂ ತಡೆದುಕೊಳ್ಳುವ ಕ್ಷಮಯಾಧರಿತ್ರಿ ಹಾಗಂತ ಕೆಟ್ಟದ್ದಕ್ಕೆ  ಮಾತ್ರಾ ಬಳಸುತ್ತಿದ್ದರೆ ಖಂಡಿತ ಸಮಾಜ ಕೆಡುವುದಲ್ಲದೇ ಉದ್ದಾರವಂತೂ ಆಗಲ್ಲ. ಆದ್ದರಿಂದ ಇನ್ನಾದರೂ ಎಲ್ಲರೂ ಅವಳ ಉಪಸ್ಥಿತಿಯನ್ನು ಅರಿಯೋಣ ಜೊತೆಗೆ ಗೌರವವನ್ನು ನೀಡೋಣ. ಹೆಣ್ಣೇ ಈ ಮಣ್ಣಿಗೆ ಭೂಷಣವೆನ್ನುವುದನ್ನು ಅರಿಯೋಣ. ಇಂದಿನಿಂದಲೇ ನಾವು ಬದಲಾಗೋಣ, ನಮ್ಮ ತನವನ್ನು ಬದಲಾಯಿಸಿಕೊಂಡು ಸಮಾಜವನ್ನು ಬದಲಾಯಿಸೋಣ.