Wednesday 10 August 2016

ನಾನೊಬ್ಬ ಸತ್ತೋದರೆ!?...


      ನಾನೊಬ್ಬ ಸತ್ತೋದರೆ!?... ಹೀಗೊಂದು ಪದ ಕಾಡಲು ಶುರುವಿಟ್ಟಿದ್ದು ಮೊನ್ನೆ ಮೊನ್ನೆಯಿಂದ... ಸರಿಸುಮಾರು ಐದಾರು ವರ್ಷಗಳಿಂದ ನನ್ನದು ಸದಾ ಒಂದಿಲ್ಲೊಂದು ವಿಭಾಗದಲ್ಲಿ ಹೋರಾಟದ ಬದುಕೆಂದರೆ ತಪ್ಪಿಲ್ಲ. ಇಲ್ಲಿ ಪ್ರತಿದಿನದ ಬದುಕನ್ನು ತುಂಬಾ ಪ್ರೀತಿಸುವ, ಹೆಚ್ಚು ಪರಿಪೂರ್ಣವಾಗಿಸಿಕೊಳ್ಳುವ ಹಂಬಲ ನನ್ನದು. ನನ್ನ ಕೆಲಸ ಕಾರ್ಯಗಳಿಗೆ ಹುಂಬತನದಲ್ಲೋ, ಹೊಟ್ಟೆಕಿಚ್ಚಿನಿಂದಲೋ ಅಡ್ಡಗಟ್ಟುವವರ ಸಂಖ್ಯೆ ಹೆಚ್ಚಿದ್ದರೂ, ನನ್ನದು ನಿಲ್ಲದ ಹೋರಾಟ. ಎಂ.ಕಾಂ ಕಲಿಕೆಯಲ್ಲಿ ಉನ್ನತ ದರ್ಜೆ ಪಡೆದಿದ್ದರೂ, ನಾನಾಯ್ಕೆ ಮಾಡಿಕೊಂಡಿದ್ದು ನನ್ನ ನೆಚ್ಚಿನ ಪತ್ರಿಕೋದ್ಯಮವನ್ನೇ. ಇದು ನನ್ನ ಹುಚ್ಚು. ಇದರಿಂದ ಪಡೆದುಕೊಂಡೆನೇ ವಿನಃ, ಏನನ್ನೂ ಕಳೆದುಕೊಂಡಿಲ್ಲ. ಐದಾರು ವರ್ಷದ ಹಿಂದೆ ಬದುಕಿನ ಸಣ್ಣ ಏರುಪೇರಿಂದ ಎಲ್ಲವನ್ನೂ ಕಳೆದುಕೊಂಡಿದ್ದಾಗ!, ವಿಶ್ವಾಸಿಗರೆಂದುಕೊಂಡಿದ್ದ ಎಲ್ಲರಿಂದ ಬಸವಳಿದು ನನ್ನಾತ್ಮ ನಂಬುಗೆ ಕಳೆದುಕೊಂಡಾಗ!, ಕಷ್ಟವೆಂದಿದ್ದಾಗ ಕೈ ಬಿಟ್ಟು ನಡೆದಿದ್ದ ಎಲ್ಲರಿಂದಲೂ ದೂರವಿರೋಣವೆಂದು ದೊಡ್ಡ ನಗರಿಗೆ ಬಂದು ನೆಲೆನಿಂತಾಗ!, ಜೊತೆಯಿದ್ದ ಅಣ್ಣನೊಬ್ಬನನ್ನ ಬಿಟ್ಟರೆ, ಹಿಂದೆ-ಮುಂದೆ, ಆಚೆ-ಈಚೆ ಕಂಡು ಬಂದಿದ್ದೆಲ್ಲಾ ವೈರಿಗಳೇ. ಕಣ್ಮುಚ್ಚಿದರೂ, ಕಣ್ತೆರೆದರೂ ಜಡಿಯುವ ಅವರ ಅಟ್ಟಹಾಸದ ದರ್ಪವೇ ಕಾಣುತ್ತಿತ್ತು. ಆದರೂ ಎಲ್ಲೂ ಭಯ ಮಿಶ್ರಿತಗೊಂಡಿರಲಿಲ್ಲ. ನನ್ನ ಎದೆಗಾರಿಕೆಗೆ ಧೃತಿ ಗೆಡುವ ಮಾತೇ ಇರಲಿಲ್ಲ... ಬಿಕಾಸ್ ನನ್ನ ಗುರಿ ನೇರವಾಗಿತ್ತು. ನಡಿಗೆ ಗುರಿ ಮುಟ್ಟುವುದ್ದಾಗಿತ್ತು. ದಾರಿ ನನಗರಿವಿಲ್ಲದೇ ನಡೆಸುತಿತ್ತು. ಏನಾದರೂ ಸಾಧಿಸಿ ತೋರಿಸಬೇಕೆನ್ನುವ ಛಲ ಸದಾ ಬೆನ್ನಿಗಂಟಿತ್ತು...

      ಬಹಳ ಹಿಂದೆಯೇ ನಿನ್ನನ್ನು ಕೊಲ್ಲುತ್ತೇನೆಂದು ಕತ್ತಿ ಹಿಡಿದು ದಾರಿ ಅಡ್ಡಗಟ್ಟಿದ್ದ ತಂಡದಿಂದ ಹೋರಾಡಿ ಉಳಿದಿರುವ ಈ ಜೀವಕ್ಕೆ ಇಂದಿಗೂ ಒಂದೆರಡು ಕೊಲೆ ಬೆದರಿಕೆಗಳಿವೆ!!, ದಿನ ಬೆಳಗಾದರೆ ಹೆದರಿಸುವ ಬೆದರಿಕಾ ಫೋನ್ ಕರೆಗಳಿವೆ!!. ಆದರೂ ನಿಲ್ಲದ ಹೋರಾಟ ದಿನದೂಡುತ್ತಲೇ ಇದೆ. ಎಷ್ಟೇ ಭಯವಿಲ್ಲದಿದ್ದರೂ ಎದೆಗಾರಿಕೆಗೆ ಹೆದರಿಸಲು ಒಮ್ಮೊಮ್ಮೆ ಕಾಡುವ ಪ್ರೀತಿ-ಗೀತಿ ಇತ್ಯಾದಿಗಳ ಹೂರಣವೂ ಇದೆ.
ಸಫೋಸ್ ನಾನೊಬ್ಬ ಸತ್ತೋದರೆ!?... 
ಏನಾಗಬಹುದು!?...
  ನಿನಗೇನು ಹುಚ್ಚಾ ಸಾಯೋ ಮಾತ್ಯಾಕೆ ಈಗ ಎಂದು ನೀವು ಕೇಳಬಹುದು!,  ಆದರೆ ನೆನಪಿರಲಿ ಚಿಂತನೆಯಿಂದ ಯಾರೂ ಅಳಿಯರು. ಹಾಗೆಯೇ ಈ ಜೀವವು ಅಳಿಯದು...
 ಚಿಂತಿಸೋಣ!?...
(ಇದನ್ನು ಓದುವಾಗ ನಿಮ್ಮ ಜೀವವೂ ನಿಮ್ಮ ಕೈಯಲ್ಲಿರಲಿ-ನೀವೊಬ್ಬ ಸÀತ್ತೋದರೆ!? ಅಂದುಕೊಂಡೆ ಓದಿ - ಆಗ ಮಾತ್ರಾ ಪ್ರತಿ ಪದಗಳಿಗೂ ವಿಶಾಲಾರ್ಥ ದೊರಕಬಹುದು, ಲೇಖನದ ಒಳಾರ್ಥ ಮತ್ತು ನಿಮ್ಮ ಜೀವ ಬೆಲೆಯ ಸಂದೇಶವನ್ನು ಅರಿಯಬಹುದು)

ಚಿಂತಿಸಿದರೆ ದ್ವಂಧ್ವ ಪ್ರಶ್ನೆಗಳ ಅಲೆ ಏಳುತ್ತದೆ...

ಏನಾಗಬಹುದು!?...
ಏನಾಗದಿರಬಹುದು!?..,

ನಾಲ್ಕು ಜನ ಅಳಬಹುದು, ಬಾಸ್ ರಜೆ ಘೋಷಿಸಬಹುದು, ಸಹಪಾಠಿಗಳು ಖೇಧಗೊಳ್ಳಬಹುದು, ಅಮ್ಮ ಅಳಬಹುದು, ಅಪ್ಪ ಚಿಂತಿಸಿ ಮರುಗಬಹುದು, ಅಣ್ಣಂದಿರು  ಸಾವಿಗೆ ಕಾರಣವರಸಬಹುದು, ಅವನು ಆತಂಕಗೊಳಗಾಗಬಹುದು, ಅವಳು ಬಿಕ್ಕಿ ಬಿಕ್ಕಿ ಅಳಬಹುದು, ಇನ್ನೊಬ್ಬಳು ಖುಷಿ ಹಂಚಿಕೊಳ್ಳಬಹುದು, ಆಂಟಿ ಊಟ ಬಿಡಬಹುದು, ಅಂಕಲ್ ಫೋಟೋಗೊಂದು ಹಾರ ಹಾಕಬಹುದು, ಗೆಳೆಯರೊಂದಿಷ್ಟು ಮಂದಿ ಒಳ್ಳತನವನ್ನೋ, ಕೆಟ್ಟತನವನ್ನೋ ಆಡಿಕೊಳ್ಳಬಹುದು, ಒಂದಿಷ್ಟು ಮಂದಿ ಆಶ್ಚರ್ಯದಲ್ಲಿ ಗರಬಡಿದವರಂತೆ ನಂಬಲಾರದೇ ಪ್ಲಾಶ್ ನ್ಯೂಸ್‍ನ ಅಪ್ಢೇಟ್ ಏನಾದ್ರೂ ಇದ್ಯಾ ಎಂದು ನೋಡಿ ಆಮೇಲೆ ಸತ್ತಿದ್ದು ನಿಜ! ಎನ್ನುವ ಕನ್‍ಫರ್ಮ್‍ಮೇಷನ್ ಮಾಡಿಕೊಳ್ಳಬಹುದು. ಸೋಶಿಯಲ್ ಮೀಡಿಯಾಗಳಲ್ಲಿ, ಸತ್ತ ‘ಸಂದೀಪನಿಗೆ ಶ್ರದ್ಧಾಂಜಲಿ’ ಎನ್ನುವಂತೆ ಆತ್ಮಕ್ಕೆ ಶಾಂತಿಕೋರುವ ಫೋಟೋಗಳು ಡಿಸೈನ್-ಡಿಸೈನ್ ಆಗಿ ಅಡ್ಡಾಡಬಹುದು. ಹಲವರಿಗೆ ಅದು ಫಾರ್ವಡ್ ಮಾಡಲು ಮಜ ನೀಡಲೂಬಹುದು, ಗ್ರೂಪ್‍ನಿಂದ ಗ್ರೂಪ್‍ಗೆ ನಾನು-ನನ್ನ-ಇತ್ಯಾದಿಗಳ ಬಯೋಡೇಟಾ ಹರಿದಾಡಬಹುದು. ಹಲವರ ಫ್ರೋಫೈಲ್ ಪಿಕ್‍ನಲ್ಲಿ ನನ್ನ ಭಾವಚಿತ್ರದ ನಗುಬೀರಬಹುದು. ಫೇಸ್ ಬುಕ್‍ನಲ್ಲಿ ಲೈಕ್ ‘ಸಾ’ವಿರದ ಗಡಿದಾಟಬಹುದು. ತೀರಾ ಹತ್ತಿರದಿಂದ ನನ್ನ ನೋಡಿದ್ದ ಆತ್ಮೀಯರು ನಮ್ಮನೆಗೆ ಬಂದು ಕೊನೆ ನೋಟ ಎಂಬಂತೆ ನೋಡಿ ಕೈಮುಗಿದು ಕಣ್ಣೀರಿತ್ತು ಸಾಗಬಹುದು, ವೈರಿಯೊಬ್ಬ ಖುಷಿಪಡಬಹುದು, ಕೊಂದಾತ ಅಡಗಬಹುದು, ಊರಿಗೆ ಊರೇ ಪ್ರತಿಭಟಿಸಬಹುದು, ಮತ್ತೆ ತಂಪಾದ ಗಾಳಿ ಬೀಸಬಹುದು...
ಇಷ್ಟೇ..,ಇಷ್ಟೇ..,ಇಷ್ಟೇ!!...
ನಿಜ ಅಲ್ವಾ!?
ಎಸ್!!!...
ಹೀಗೊಂದು ಕಲ್ಪನೆ ನನ್ನೊಳಗೆ, ನಾನೊಬ್ಬ ಸತ್ತೋದರೆ!?... ಎಂದು ಚಿಂತನೆಗೆ ಅಡಿಯಿಟ್ಟ ಕ್ಷಣದಿಂದ, ದೇಹ ಭಾಷೆಯಿಂದಲೋ, ಸ್ವರಭಾಷೆಯಿಂದಲೋ, ಮನದಭಾಷೆಯಿಂದಲೋ, ಎಲ್ಲಿಂದೆಂದು ನಿಖರವಾಗಿ ತಿಳಿಯಲಾರದೇÀ ಅಸಹಾಯಕ ಕಂಪನದಿಂದ ಮನಸ್ಸಿನೊಳಗೆ ಮೇಳೈಸಹತ್ತಿದೆ. ಒಂಥರಾ ‘ಬೇಸ್‍ವಾಯ್ಸ್’ ತಳದಿಂದ ಜಿನುಗಿದಂತಿದೆ... ಸಾವಧಾನವಾಗಿ ಶಿಸ್ತಿನಿಂದ ಸುರುಳಿ ಸುರುಳಿಯಾಗಿ ಕರುಳಿನಿಂದ ಮೇಲೆದ್ದ ಸ್ವರ ವ್ಯಂಜನಗಳು, ಅನುಸ್ವಾರ ವಿಸರ್ಗಗಳು ಕೊರಳ ವಯಾ ಲೋಕಾರ್ಪಣೆಯಾಗುತ್ತಿರುವಂತೆ ವಿರಳ ಧ್ವನಿತ ಶ್ರುತಿಗೊಂಡು ಕಲಾಪ ನಡೆಸಿದಂತಿದೆ. ಕಾಲಕಾಲಕ್ಕೆ ಉಂಟಾಗುವ ಪ್ರತಿಯೊಂದು ಭ್ರಮಾಭಂಗವೂ ನಮ್ಮನ್ನು ಇನ್ನೊಂದು ಸಾಕ್ಷಾತ್ಕಾರಕ್ಕೆ ನೂಕುತ್ತದಂತೆ. ಅದು ಇದೇನಾ!? ಅಥವಾ ಇದೂ ಅದೇನಾ!? ಎನ್ನುವಂತೆ ಗೊಮದಲದ ಗೂಡಿಗೆ ನೂಕಿದೆ.

ಓಶೋರವರು ಹೇಳುವಂತೆ ಜಗತ್ತಿನಲ್ಲಿ ಪ್ರತಿಯೊಬ್ಬನೂ ಶೂನ್ಯನೇ!. ಇರುವಷ್ಟು ದಿನ ಹೊಡೆದಾಟ, ಬಡಿದಾಟ ಅಷ್ಟೇ. ಸತ್ತಮೇಲೆ ಎಲ್ಲರಾಗುವುದು ಇಷ್ಟೇ!. ‘ಆಸೆಯ ಬಸಿರಿಗೆ ನಿರಾಶೆಯೇ ಹೆರಿಗೆ’ ಎಂಬಂತೆ ಎಂತಹ ಆತ್ಮಸ್ಥೈರ್ಯವಿದ್ದರೂ ಸಾವು ಸನ್ನಿಹಿತ ಎಂದರಿತ ಕ್ಷಣದಿಂದ ಏನೂ ಮಾಡಲಾಗದ ಕೈಕಟ್ಟಿದ ಅನುಭವ ನಮ್ಮನ್ನೂ ಶೂನ್ಯಕ್ಕೆ ತಳ್ಳುತ್ತದೆ ಮತ್ತು ಕೆಳಸ್ಥರಕ್ಕೆ ಮಂತ್ರಿಸುತ್ತದೆ, ಸತ್ತರೇ ಮುಂದೇನು!?, ಎನ್ನುವ ನಿರಾಶೆ ಇದ್ದ-ಬದ್ದ ಎಲ್ಲಾ ಆಸೆಗಳನ್ನು ತನ್ನ ತೆಕ್ಕೆಯಲ್ಲಿ ಸಾಯಿಸುತ್ತದೆ ಎನ್ನುವಲ್ಲಿ ಅನುಮಾನವೇ ಇಲ್ಲ!..

ನಿಜಕ್ಕೂ ನಾನು ಒಂದಲ್ಲ ಒಂದು ದಿನ ಸಾಯುತ್ತೇನೆ. ಅದರಲ್ಲಿ ಯಾವ ಅನುಮಾನವಿಲ್ಲ. ಸತ್ತ ನಂತರ ನಾನೇನಾಗಬಹುದು!. ಎಲ್ಲಿಗೋಗಬಹುದು! ಯಾರಿಗೂ ತಿಳಿದಿಲ್ಲ. ಆದರೂ ಏನಾಗಬಹುದೆಂದು ತಿಳಿಯುವ ಕಾತರದ ಯೋಚನಾ ನಡೆ, ಪ್ರತಿಯೊಬ್ಬರಲ್ಲೂ ಹರಿದಾಡೇ-ಆಡಿರುತ್ತದೆ. 

     ನನ್ನ ಸ್ವರೂಪ ಬದಲಾಗಬಹುದು. ಪಾತ್ರ ಬದಲಾಗಬಹುದು, ಸ್ಥಳ ಬದಲಾಗಬಹುದು, ವಾತಾವರಣ ಬದಲಾಗಬಹುದು, ಮೌಲ್ಯಗಳು ಕುಸಿಯಬಹುದು, ಬದುಕಿನ ಶೈಲಿ ಬದಲಾಗಬಹುದು. ಇವಿಷ್ಟೇ ಅಲ್ಲದೇ ಇನ್ನಿಷ್ಟು ಯಕ್ಷಪ್ರಶ್ನೆಗಳು ಕುಣಿದಾಡಿರುತ್ತವೆ!.. ಸತ್ತ ನಂತರ ಆತ್ಮದ ನಿಯಮ ಹೇಗಿರಬಹುದು, ನಾನಿಲ್ಲೇ ಇರುತ್ತೇನಾ!?,  ನನ್ನಾತ್ಮ ಇಲ್ಲೇ ಸುತ್ತಬಹುದಾ!? ನಾನಂತೂ ಅವರಿಗೆ ಕಾಣಿಸುವುದಿಲ್ಲ,.. ಇವರೆಲ್ಲಾ ನನಗೆ ಕಾಣಿಸಬಹುದಾ!? ಯಾರ್ಯಾರು ನನ್ನ ಬಗ್ಗೆ ಏನೆಲ್ಲಾ ಹೇಳಬಹುದು!?, ನಾನು ಆ ಕಡೆ ಸ್ವರ್ಗಕ್ಕೂ ಹೋಗದೇ, ಈ ಕಡೆ ನರಕಕ್ಕೂ ಹೋಗದೇ ಮನೆಯಂಗಳದ ಹುಣಸೇ ಮರದಲ್ಲಿ ವಾಸಿಸಲು ಯಮಧರ್ಮರಾಯ ಪರ್ಮಿಷನ್ ನೀಡಬಹುದಾ!? ಆತ್ಮದ ಅಲೆದಾಟವಿದೆ ಎನ್ನುವ ನನ್ನ ಕಾಣದ ಕಲ್ಪನೆ ಸುಳ್ಳಿರಬಹುದಾ!? ಸತ್ತ ಮೇಲೆ ಏನೂ ಇಲ್ಲವಾ!? ಇತ್ಯಾದಿಗಳೆಲ್ಲ ಹೊಸ ಭ್ರಮೆಯಲ್ಲಿ ಕಾಡತೊಡಗಿರುತ್ತವೆÉ. ಹಿಂದಿದ್ದ ಎಲ್ಲಾ ಆಶಾಭಾವನೆ, ಆತಂಕ, ಆಧ್ಯಾತ್ಮಿಕ ಪ್ರಜ್ಞಾವಾಹಿನಿಯ ಮೂಲ ಪ್ರೇರಪಣೆಯಾಗಿ ಕಾರ್ಯ ನಿರ್ವಹಿಸುವುದು ಇಲ್ಲಿ ವಿಪರ್ಯಾಸವಾದರೂ ಸತ್ಯ.

ಪ್ರತಿ ದಿನವನ್ನೂ ನಾವು ಆರಾಮದಾಯಕವಾಗಿ ವ್ಯರ್ಥಮಾಡುತ್ತಲೇ ಸಾಗುತ್ತೇವೆ. ಆಗಾಗ ಒಮ್ಮೊಮ್ಮೆ ಸೆಟೆದು ನಿಂತು ಮಹತ್ಕಾರ್ಯದತ್ತ ಗೌಡಾಯಿಸುತ್ತೇವೆ. ಸಾಧನೆ ಆದಾಗ ಹಿಗ್ಗುತ್ತೇವೆ, ಸೋಲಾದಾಗ ಕುಗ್ಗುತ್ತೇವೆ. ಒಬ್ಬರೂ ಇನ್ನೊಬ್ಬರನ್ನು ನೋಡಿ ಉರಿದುಕೊಳ್ಳುತ್ತೇವೆ, ಸಾಯಿಸಬೇಕೆಂದು ಹೊಂಚುಹಾಕುತ್ತೇವೆÉ. ಎಲ್ಲವೂ ನನ್ನದು, ನನಗೆ ಸೇರಬೇಕೆಂದು ಪಾಪದ ಕೂಪದಲ್ಲಿ ಬೀಳುತ್ತಿರುತ್ತೇವೆ. ಆದರೆ ಬದುಕ ಅಂತಿಮ ಸತ್ಯ ಅಡಗಿರುವುದು ಸಾವಲ್ಲಿ ಎನ್ನುವುದನ್ನು ಮರೆತಿರುತ್ತೇವೆ.

    ನಾನೊಬ್ಬ ಸತ್ತೋದರೆ!?... ಎಂದುಕೊಂಡು ಮನಸಿಗೆ ಚಿಂತನೆಯ ಬೆಂಕಿ ಹತ್ತಿಸಿಕೊಂಡಾಗಲೇ, ಬದುಕಿನ ಅಪರಿಮಿತ ಮುಖಗಳೆಲ್ಲವೂ ವಿನ್ಮಿತ ಕಣ್ಣುಗಳಲ್ಲಿ ತೆರೆದುಕೊಂಡಂತಾಗುವುದು. ಆ ಬೆರಗಿನ ಭಾವ ಕ್ಷಣ ಕ್ಷಣವನ್ನು ಲೆಕ್ಕಹಾಕಿಸುತ್ತದೆ. ಯಾವ್ಯಾವುದೋ ವಿಚಾರದಲ್ಲಿ ತರ್ಕತೆ ಬೇಡ ಎಂದು ಅನುಸಂಧಾನ ಕಾಣಿಸುತ್ತದೆ. ಭಯ ತರಿಸುತ್ತದೆ, ಅನುಕಂಪ ಮೂಡಿಸುತ್ತದೆ. ಎಲ್ಲರನ್ನೂ, ಎಲ್ಲವನ್ನೂ ಬಿಟ್ಹೋಗುತ್ತೀನಲ್ಲಾ ಛೇ ಎಂದೆನಿಸಿ, ಇನ್ನೊಂದಿಷ್ಟು ದಿನವಾದರೂ ಬದುಕೋ ಹಾಗೆ ಮಾಡಪ್ಪಾ ಅನಿಸುತ್ತದೆ. ಅಲ್ಲದೇ ಸಾವಿಗೆ ಮುಂಚೆ ಉಳಿದಿರುವ ಸಮಯ ಬರಿಯ ಕಳೆದ ದಿನಗಳ ಯೋಚನೆ ಮತ್ತು ಸರಿ-ತಪ್ಪುಗಳನ್ನು ಸರಿದೂಗಿಸಿಕೊಳ್ಳುವ ನಿಷ್ಠೆಯಲ್ಲಷ್ಟೇ ಕಾಲ ಸವೆಸುತ್ತಿರುತ್ತದೆ ಹೊರತು, ದೇಹ, ಮನ ಯಾವ ಮಹತ್ಕಾರ್ಯಕ್ಕೂ ಅಡಿಯಿಡುವುದಿಲ್ಲ. ಅದು ಸಾಧ್ಯವಾಗುವುದು ಇಲ್ಲ. ಯಾಕೆಂದರೆ ಅಲ್ಲಿ ಆತ್ಮದ ನಡುಕ ಗಡ ಗಡಿಸಲು ಶುರುವಿಟ್ಟಿರುತ್ತದೆ. ಎಲ್ಲವೂ ಶೂನ್ಯಕ್ಕೆ ವಾಲಿರುತ್ತದೆ. ಹೊಸ ಭಯ ಬೆವರಿಳಿಸುತ್ತಿರುತ್ತದೆ.

    ಸಿಂಪಲ್ ಮಾತಲ್ಲಿ ಹೇಳಬೇಕೆಂದರೆ, ಜೀವಿತದಲ್ಲಿ ಸಾವಿನ ಭಯವಿಲ್ಲದ ದಿನಗಳನ್ನು, ವೀರ್ಯ ಸ್ಖಲನದ ಬಳಿಕವೂ ಹೆಣ್ಣನ್ನು ಸಂಭೋಗಿಸುವ ‘ಸ್ಫಿರಿಟ್’ ಕಾಪಾಡಿಕೊಂಡೇ ತಿರುತ್ತೇನೆಂದು, ಮುನ್ನವೇ ಪ್ರತಿಜ್ಞೆ ಮಾಡಿ ಪಲ್ಲಂಗವೇರುವ ಪ್ರತಿಪುರುಷನ ಉನ್ಮತ್ತ ಭ್ರಮೆಯಾದರೆ, ಸಾವಿನ ಭಯ ಕಂಡಿರುವ ದಿನಗಳನ್ನು ವೀರ್ಯ ಸ್ಖಲನ ನಂತರದ ಅವಸ್ಥೆ ಎನ್ನಬಹುದು. ಪೂವೋತ್ತರ ಸ್ಥಿತಿಗಳೆರಡೂ ಭ್ರಮೆಯೇ ಆದರೂ, ಪೂರ್ವದಲ್ಲಿ ಚೈತನ್ಯಕ್ಕೆ ಮಿತಿಯೇ ಇರುವುದಿಲ್ಲ, ಉತ್ತರದಲ್ಲಿ ಇದುವೇ ನನ್ನ ಶಾಶ್ವತ ವಿರಕ್ತಿಯೆನ್ನುವ ಭ್ರಮೆ ಕಾಡದೇ ಬಿಡುವುದಿಲ್ಲ.

   ನೀವಿದನ್ನೂ ಏನು ಬೇಕಾದರೂ ಅಂದುಕೊಳ್ಳಿ!, ವಿವೇಕ-ಅವೀವೇಕದ ಕೊಂಡಿಯಂತಲೋ, ಬೆಳಕು ಮತ್ತು ಕತ್ತಲೆಯ ನಡುವಿನ ಕೊಂಡಿಯಂತಲೋ, ಅನಾದಿ ಮತ್ತು ಅನಂತದ ನಡುವಿನ ಕೊಂಡಿಯಂತಲೋ, ಉತ್ಫತಿ, ಲಯ, ಜಡ-ಚೇತನ, ಧ್ವೈತ-ಅಧ್ವೈತ ಹೀಗೆ ಯಾವುದಾದರೂ ಮಧ್ಯದ ಕೊಂಡಿಯಂತಲೋ, ಬಾಳಿನ ದುರ್ಬಲ ಸ್ಥರದ ಸತ್ಯವಂತಲೋ, ಒಳಿತು ಕೆಡುಕಿನ ಸತ್ಯಾಸತ್ಯತೆ ಅರಿಯುವ ಮೂಲ ಗಟ್ಟವೆಂತಲೋ ಹೀಗೆ, ಏನೂ ಬೇಕಾದರೂ ಅಂದುಕೊಳ್ಳಿ ಆದರೆ ಪ್ರತಿಯೊಬ್ಬ ನಾನಿಂದು ಸಾಯುತ್ತೇನೆಂದು ತಿಳಿದರೆ ಅರಿಯುವ ಸತ್ಯ ಈ ಮೇಲಿನದ್ದೆ ಅಂದರೆ ತಪ್ಪಿಲ್ಲ.

ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ, ಮನುಷ್ಯನು ಈ ಲೋಕದಲ್ಲಿ ಪಡುವ ಪ್ರಯಾಸವೆಲ್ಲವೂ ವ್ಯರ್ಥ, ಹಾಗಾದರೆ ಲಾಭವೇನು!?. ಒಂದು ತಲಾಂತರವೂ ಗತಿಸುವುದು, ಇನ್ನೊಂದು ತಲಾಂತರವೂ ಬರುವುದು. ಭೂಮಿಯಾದರೋ ಅಮರವಾಗಿ ನಿಲ್ಲುವುದು. ಸೂರ್ಯನು ಏರುವನು, ಸೂರ್ಯನು ಇಳಿಯುವವನು. ಗಾಳಿ ಬೀಸುವುದು, ನದಿಗಳೆಲ್ಲಾ ಸಮುದ್ರಕ್ಕೆ ಹರಿಯುವುದು. ಕಣ್ಣು ನೋಡಿ ತೃಪಿಗೊಳ್ಳದು, ಕಿವಿ ಕೇಳಿ ದಣಿಯದು. ಇದ್ದದ್ದೇ ಇರುವುದು, ನಡೆದದ್ದೇ ನಡೆಯುವುದು. ಹೊಸದೆಂದಿದ್ದು ತಲಾಂತರದಲ್ಲಿ ಹಳೆಯದೇ ಆಗುವುದು, ಮಣ್ಣು ಭೂಮಿಗೆ ಸೇರುವುದು ನಾವು ಒಂದಲ್ಲಾ ಒಂದಿನ ಮಣ್ಣಿಗೆ ಸೇರುವುದು...

     ಹೀಗೆ ಗತ, ಭವಿಷ್ಯ, ಪ್ರಸಕ್ತತೆಗಳು ಒಂದರೊಳಗೊಂದು ಅವಿತುಕೊಳ್ಳುತ್ತಾ ಲೀಲಾಮಯವಾದ ವರ್ತುಲವನ್ನೇ ಹೆಣೆದು ಬಿಡುವ ನಮ್ಮತನಕ್ಕೆ ಮತ್ತೇ ಮತ್ತೇ ಕಾಡಿ ಕೆಟ್ಟತನವನ್ನು ಸುಟ್ಟುಕೊಳ್ಳಲು ನಮಗಿರುವ ಒಂದೇ ನಡೆಯೆಂದರೆ... ನೇರವಾಗಿ ಮನಸ್ಸಿನೊಳಗೆ ಏಕಾಂಗಿಯಾಗಿ ಚಿಂತನೆಗಿಳಿಯಬೇಕು...

‘ನಾನೊಬ್ಬ ಸತ್ತೋದರೆ!?’......................................

ಕವಿ ಕನವರಿಕೆ-ಪ್ರೇಮಾಯಣ #3


ಅವಳು ಅವನ ತೆಕ್ಕೆಗೊರಗಿ ನಿದ್ರಿಸುವವಳಿದ್ದಳು!.. ಆದರೆ ಹಾಗಾಗಲಿಲ್ಲ...
ತೆಕ್ಕೆಯು ರೆಕ್ಕೆಯಂತೆ ಹಾರಿತ್ತು!..
ಅವರದು ಆರು ವರ್ಷದ ಲವ್. ಅವನಿಗೆ ಅವಳ ಮೇಲೆ ಅಘಾದ ಪ್ರೀತಿ. ಅವಳಿಗೂ ಅವನ ಮೇಲೆ ಅನಂತ ಪ್ರೇಮ. ಸಾಗುತಾ ದೂರಾ ದೂರಾ!.. ಎಂಬಂತೆ ಆರು ವರ್ಷಗಳು ಸದಾ ಇಬ್ಬರು
ಒಂದಿಲ್ಲೊಂದರಲ್ಲಿ ಕೈ ಕೈ ಹಿಡಿದು ನಲಿದು ಬಂದವರೇ!..
      ಒಂದು ಭಾಗದಿಂದ ಪ್ರಾರಂಭವಾಗಿ, ಇನ್ನೊಂದು ಭಾಗಕ್ಕೆ ತಾಗಿ, ಇಬ್ಭಾಗ ಒಮ್ಮುಖವಾಗಿ ಸಂಧಿಸಿ, ಪರಸ್ಫರ ಎಲ್ಲವನ್ನು ಹಂಚಿಕೊಂಡು ಮುನ್ನಡೆಗೆ ಅಣಿಯಿಟ್ಟಿದ್ದ ಪ್ರೇಮ ಮಂದಿರದ ತಳಪಾಯ ಇತ್ತೀಚೆಗೆ ಇನ್ನೊಬ್ಬಳು ಮಾಯಾಂಗನೆಯ ಮರ್ಮದಿಂದ ಗುಡಲಿ ಪೆಟ್ಟು ಬಿದ್ದಂತೆ ಕುಸಿಯುತ್ತಿತ್ತು.
     ಮಾಯಾಂಗನೆ ಇವರ ಹಟ್ಟಿಗೆ ಕರೆಯದೇ ಬಂದವಳು. ಮನೆಯೊಳಗೆ ಅನಾಥೆಯೆಂದು ಕರೆ ತಂದ ಮಾವನ ಮಗಳಾಕೆ. ಊರಿಗೆ ಬಂದು!, ನೀರಿಗೂ ಬಂದೂ!, ಬಲೆ ಬೀಸಿ ಹುಡುಗನನ್ನ ಹಿಡಿದ ಚದುರೆಯವಳು.  ಸಲುಗೆ ಸೆಳೆತದಿಂದÀ ಅತ್ತೆ ಮಗನ ಕಾಳಜಿಗೆ ಕರಗಿ ಮನಸು ಮಾರಿಕೊಂಡಿದ್ದಳು. ಇವನ ಇನ್ನೊಂದು ಪ್ರೀತಿಯ ಗುಟ್ಟೇ ಅವಳಿಗರಿವಿರಲಿಲ್ಲ. ಅಂತೂ ಇಂತೂ ಅತ್ತೆಗೂ ತಿಳಿಸಿ ಮದುವೆ ಫಿಕ್ಸ್ ಮಾಡಿಸಿಕೊಂಡೇ ಬಿಟ್ಟಳು.
    ಇತ್ತ ತುಟಿ ಮಿಟುಕಿಸದ ಹುಡುಗ, ತನ್ನ ಒಡಲ ಪ್ರೀತಿಯನ್ನು ಕುಕ್ಕಿ ಕೊಂದಿದ್ದ. ಸಂಸ್ಕøತಿ-ಸಂಸ್ಕಾರಕ್ಕೆ ಜೋತು ಬಿದ್ದು ಪ್ರೀತಿ ತೆಕ್ಕೆಯನ್ನು ದೂರ ಸರಿಸಿದ್ದ. ಅತ್ತ ಇವನನ್ನೇ ನಂಬಿದ್ದ ನೀರೆ ಕಣ್ಣೀರ ಪಾಲು!, ಇತ್ತ ಬೆವತು ಬೆಂಡಾದ ಈತ ಭಯದ ಪಾಲು. ಮನೆಯವರನ್ನು ತೊರೆಯಲಾರದೇ, ಬಯಸಿದ್ದ ಪ್ರೀತಿಯನ್ನು ಹೇಳಲಾರದೆ ಸೋತು ಸುಣ್ಣವಾಗಿದ್ದ. ತ್ಯಾಗಕ್ಕೆ ಪ್ರೀತಿ ದೊಡ್ಡದು, ಪ್ರೀತಿಗೆ ತ್ಯಾಗವೇ ದೊಡ್ಡದು ಎನ್ನುವ ದೊಡ್ಡತನಕ್ಕೆ ಶರಣಾಗಿ ಮೌನವಂತನಾಗಿದ್ದ.
      ಅತ್ತ ಅವಳು ಕಾದು ಸೋತಳು. ಇವಳು ಕರೆದು ಗೆದ್ದಳು. ಇತ್ತ ಪ್ರೀತಿ ಹುಟ್ಟುತ್ತಿದೆ, ಅತ್ತ ಪ್ರೀತಿ ಸಾಯುತ್ತಿದೆ...ನೆತ್ತಿ ನಡುವೆ ಸೂರ್ಯನ ಕಿರಣ ಮೋಡದ ಮರೆಯಲ್ಲಿ ಜಾರಿದೆ. ಗಟ್ಟಿಮೇಳ ಮೊಳಗಿದೆ, ಹುಸಿ ಪ್ರೇಮ ಕಮರಿದೆ...

ಸಿರಿ ಬುಲೆಟ್...ಜೀವಕ್ಕಿಲ್ಲ ಶ್ರೀರಕ್ಷೆ...ಮಕ್ಕಳಿಗಿಲ್ಲ ಸುರಕ್ಷೆ...ಕುಂದಾಪುರದಲ್ಲಿ ನಡೆದ ಶಾಲಾ ಮಕ್ಕಳ ಅಪಘಾತದ ಸುತ್ತ


ತೂಗುಯ್ಯಾಲೆಯಲ್ಲಿದೆ ವಿದ್ಯಾರ್ಥಿಗಳ ಭವಿಷ್ಯ, ಆಯತಪ್ಪಿದರೆ ಸಾವು ಖಚಿತ...
ಒಂದು ಬಾರಿ ಕೂಗಾಡಿ ಸುಮ್ಮನಿರಲು, ಇದು ಸಣ್ಣ ವಿಷಯವಲ್ಲ...
ಆಟಕ್ಕುಂಟು ಲೆಕ್ಕಕ್ಕಿಲ್ಲ ಶಾಲಾ ಮಕ್ಕಳ ಮಾರ್ಗಸೂಚಿ...
ಸುರಕ್ಷತೆಯ ಪರದಾಟ.., ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ...
ಜೀವಕ್ಕಿಲ್ಲ ಶ್ರೀರಕ್ಷೆ...ಮಕ್ಕಳಿಗಿಲ್ಲ ಸುರಕ್ಷೆ...

    ಆ ಮಗು ಈಗಷ್ಟೇ ಅರಳುತ್ತಿರುವ ಮೊಗ್ಗು.., ಒಂದಿಷ್ಟು ವರ್ಷದ ಪ್ರೀತಿಯ ಜೋಪಡಿಯಲ್ಲಿ ಬೆಳೆದಿದ್ದ ಪುಟ್ಟಿ ಶಾಲೆಗೂ ಅಪ್ಪ ಅಮ್ಮನ ಪ್ರೀತಿಯಿಂದಲೇ, ದಿನಾ ಚಾಚೂ ತಪ್ಪದೇ ಹೋಗುತ್ತಿದ್ದಳು. ಎಂದಿನಂತೆ ಅಂದೂ ಕೂಡ ಬೇಗನೆ ಎದ್ದು, ತನ್ನೆಲ್ಲಾ ಹೋಮ್ ವರ್ಕ್ ಮಾಡಿಕೊಂಡು, ಟಿಫಿನ್ ಮಾಡುವಷ್ಟೊತ್ತಿಗೆ, ‘ಅಪ್ಪಾ ನಾನು ಮುಂದೆ ಡಾಕ್ಟರ್ ಆಗಬೇಕು, ಚೆನ್ನಾಗಿ ಓದುತ್ತೇನೆ, ನೀನು ಓದಿಸ್ತೀಯಾ ಅಲ್ವಾ!’... ಎನ್ನುತ್ತಾ ನಗುನಗುತ್ತಲೇ ಕೇಳಿದ್ದಳು ಪುಟ್ಟಿ. 
ಅದಾಗಲೇ ಹೊರಗಿಂದ ಶಾಲಾ ವಾಹನವೊಂದರ ಹಾರ್ನ್ ಕೇಳಿ ಬರುತ್ತದೆ. ಗಡಿಬಿಡಿಯಲ್ಲೇ ಬ್ಯಾಗು, ಟಿಫಿನ್ ಬಾಕ್ಸು ಕೈಗೇರಿಸಿಕೊಂಡು ಹೊರನಡೆದ ಪುಟ್ಟಿಗೆ ಅಮ್ಮನ ಕೈ ಬೀಸುವಿಕೆಯ ಟಾಟಾ ಕನಸಿನ ಮೆಟ್ಟಿಲ್ಲನ್ನು ಇನ್ನಷ್ಟು ಪುಷ್ಟಿಸಿತ್ತು. ಆ ವಾಹನದಲ್ಲಿ ಪುಟ್ಟಿಯ ಕನಸಂತೆ ಇನ್ನೂ ಅನೇಕ ಕಂದಮ್ಮಗಳಿಗೆ ಕನಸ ಕಂತೆಯ ಜೋಪಡಿಯಿತ್ತು... 
ಮಗುವನ್ನು ಶಾಲೆಗೆ ಕಳಿಸಿರುವೆ ಯಾವ ಭಯವಿಲ್ಲ...ಸಂಜೆ ಬರುವಷ್ಟರ ಹೊತ್ತಿಗೆ ಅವಳಿಗಿಷ್ಟವಾದ ತಿಂಡಿಯನ್ನು ಮಾಡಿಡೋಣ ಎಂದುಕೊಳ್ಳುತ್ತಿದ್ದ ತಾಯಿಗೆ ಅಚಾನಕ್ ಆಗಿ ಬಂದ ಫೋನ್ ಕರೆ ತಲೆತಿರುಗಿ ಬೀಳುವಂತೆ ಮಾಡುತ್ತದೆ... ಅಪ್ಪನನ್ನು ಮುಂದೇನೂ ಎಂದು ತೋಚದ ಭಯಾನಕ ಕೂಪಕ್ಕೆ ಬೀಳಿಸುತ್ತದೆ. ಕಾರಣ ಮಗಳಿದ್ದ ‘ಶಾಲಾ ವಾಹನ ಪಲ್ಟಿ, ಸ್ಥಳದಲ್ಲೇ ಮಕ್ಕಳ ಸಾವು’...
ಚಿಗುರಬೇಕಿದ್ದ ಕನಸುಗಳು ಕರಟೋಯಿತು, ಕಟ್ಟಿದ್ದ ಆಸೆಯ ಮೆಟ್ಟಿಲು ಕುಸಿದೋಯಿತು, ವರ್ಷಾನುವರ್ಷ ಅದೆಷ್ಟೋ ನೋವು, ಕಷ್ಟ, ನಷ್ಟವನ್ನು ಹೊಟ್ಟೆಯಲ್ಲಿ ಕಟ್ಟಿಕೊಂಡು ಬೆಳೆಸಿದ್ದ ಮನೆ ದೀಪ ಬೆಳಗುವ ಮುನ್ನವೇ ಆರೋಯಿತು... ಇದು ಒಂದು ಮನೆಯ ಮಗಳನ್ನು ಕಳೆದುಕೊಂಡ ವಿದ್ರಾವಕ ಕಥೆಯಾದರೆ, ಇದಕ್ಕಿಂತ ಭಿನ್ನವಾದ ಅದೆಷ್ಟು ನೋವಿನ ಮಡಿಲುಗಳು ನಮ್ಮ ನಿಮ್ಮ ಮಧ್ಯೆ ಇದೆಯೋ ಹೇಳತೀರದು... ಅಬ್ಬಾ! ಆ ಆಕ್ರಂಧನ ನೋಡೋದಲ್ಲ, ದೂರಿಂದ ಕೇಳಿದರೇನೆ ಭಯ ಹುಟ್ಟಿಸುತ್ತೆ...
ವರ್ಷಗಳ ಹಿಂದೆ ಕಾಲ್ನಡಿಗೆಯಲ್ಲಿ ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳು ಸುರಕ್ಷರಾಗಿದ್ದರು. ಆದರೆ ಇಂದು ಯಾವುದನ್ನು ಸುರಕ್ಷವೆಂದು ವಾಹನ ಹತ್ತಿಸಿ ಕಳಿಸುತ್ತೇವೋ ಅದೇ ಅಸುರಕ್ಷಿತವಾಗಿದೆ.
ನಿಮಗೆಲ್ಲಾ ಗೊತ್ತಿರಬಹುದು ಇತ್ತೀಚೆಗೆ  ಕುಂದಾಪುರ ತಾಲೋಕಿನ ತ್ರಾಸಿ ಎಂಬಲ್ಲಿ ನಡೆದ ಶಾಲಾ ಓಮಿನಿ ಹಾಗೂ ಖಾಸಗಿ ಬಸ್ ಒಂದರ ಡಿಕ್ಕಿ 8 ಮಕ್ಕಳನ್ನು ದಾರುಣವಾಗಿ ಬಲಿ ಪಡೆದದ್ದು  ಎಲ್ಲರ ಹೃದಯ ಕರಗಿಸಿತ್ತು. ಮುದ್ದು ಕಂದಮ್ಮಗಳ ಸಾವು ಇಡೀ ರಾಜ್ಯವನ್ನೇ ಶೋಕತೆಯಲ್ಲಿ ಮುಳುಗಿಸಿತ್ತು. ಇದೊಂದೆ ದುರ್ಘಟನೆ ಅಲ್ಲ. ಅದಾದ ಮೇಲೆ, ಬೆಂಗಳೂರಿನಲ್ಲೊಂದು, ಹೊಳೆ ಹೊನ್ನೂರು ಪಟ್ಟಣದ ಹನುಮಂತಪುರದಲ್ಲೊಂದು ಹೀಗೆ ಒಂದು ಮಾಸುವ ಮುನ್ನವೇ ಮತ್ತೊಂದು ಅನಾಹುತಗಳು ಸಂಭವಿಸುತ್ತಲೇ ಇದೆ. ಇವೆಲ್ಲ ಅನಾಹುತಗಳನ್ನು ನೋಡುತ್ತಿರುವ  ಮನೆಯವರಿಗೆ ಇದೀಗ ಮಕ್ಕಳನ್ನು ಶಾಲೆಗೆ ಕಳಿಸುವುದೆಂದರೆ, ಜೀವ ಕೈಯಲ್ಲಿ ಹಿಡಿದು ದಿನದೂಡಿದಂತೆ ಎನ್ನುವ ಪರಿಸ್ಥಿತಿ ಬಂದಿದೆ.
ಒಂದಿಷ್ಟು ದಿನ ಎಲ್ಲಾ ಪತ್ರಿಕೆಗಳು, ವಾಹಿನಿಗಳು, ಸೋಷಿಯಲ್ ಮೀಡಿಯಾಗಳು ಅವೆರ್‍ನೆಸ್,.. ಎಂಬಂತೆ ವರದಿಗಳನ್ನು, ಡಿಬೆಟ್‍ಗಳನ್ನು, ಮೆಸೇಜ್‍ಗಳನ್ನು,  ಅನಿಯಮಿತವಾಗಿ ಪ್ರಸರಿಸಿದವು... ಆದರೆ ಯಾವುದು ಬದಲಾಗಿಲ್ಲ... ವಾಹನಗಳಿಗೆ ಮಕ್ಕಳ ತುಂಬುವಿಕೆ ಇಳಿದಿಲ್ಲ.
 ಕುಂದಾಪುರದಲ್ಲಿ ನಡೆದ ಅಪಘಾತದಲ್ಲಿ ಓಮಿನಿಯೊಳಗೆ 18 ಮಕ್ಕಳಿದ್ದರಂತೆ!. ಇದು ಸುರಕ್ಷವಲ್ಲ ಎಂದು ಎಲ್ಲರಿಗೂ ಅರವಿದ್ದರೂ ಮತ್ತೆ ಮತ್ತೆ ಅದೇ ತಪ್ಪನ್ನು ದಿನನಿತ್ಯ ಮಾಡುತ್ತಲೇ ಇದ್ದೇವೆ. ಅಂತಹ ಭಯಾನಕ ಸನ್ನಿವೇಶ ನಡೆದ ಮೇಲೂ ನಮ್ಮ ಕಣ್ಣೆದುರೇ ಇಂದಿಗೂ ಅದೆಷ್ಟೋ ಶಾಲಾ ವಾಹನಗಳು ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ. ಇದು ಯಾರ ದುರ್ದೈವವೋ ಯಾರಿಗೂ ತಿಳಿದಿಲ್ಲ... 
ಕಾಯ್ದೆ ಕಾನೂನುಗಳ ತಡಕಾಡಿದಾಗ!!;
ಶಾಲಾ ಮಕ್ಕಳ ಸುರಕ್ಷತೆ ಕುರಿತು ರಾಜ್ಯ ಸರಕಾರ ಸಾಕಷ್ಟು ಹಿಂದೆಯೇ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದರೂ, ಅವುಗಳನ್ನು ಪಾಲಿಸುವಲ್ಲಿ ಶಾಲೆಗಳು ಮತ್ತು ವಾಹನಗಳ ಚಾಲಕರು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ.
ಕಾನ್ವೆಂಟ್ ಸಂಸ್ಕøತಿಯಿಂದಾಗಿ ಹೊಸ ಟ್ರೆಂಡ್ ಎಂಬಂತೆ ಯಾವೊಂದು ಮಕ್ಕಳನ್ನು ಇಂದು ನಡೆದುಕೊಂಡು ಹೋಗಲು ಬಿಡದೆ ಅಟೋದಲ್ಲಿ ಓಮ್ನಿಯಲ್ಲಿ, ಮಿನಿವ್ಯಾನ್‍ಗಳಲ್ಲೇ ಹೆತ್ತವರು ತಿಂಗಳ ಬಾಡಿಗೆ ಕೊಟ್ಟು ಕಳಿಸುತ್ತಿದ್ದಾರೆ. ಬಹುತೇಕ ಭಾಗಗಳಲ್ಲಿ ಮಕ್ಕಳನ್ನು ಯರ್ರಾ ಬಿರ್ರಿ ತುಂಬುವುದು ಮಾಮೂಲಾಗಿದೆ. ಇದು ಅನಿಯಮವಾದರೂ ಹೆಚ್ಚು ಲಾಭಾಂಶ ಪಡೆಯುವ ದೃಷ್ಟಿಯಿಂದ ಖಾಸಗಿ ವಾಹನ ಮಾಲೀಕರು ವಾಹನದ ಗುಣಮಟ್ಟ ಹಾಗೂ ಆಸನಗಳ ಸಾಮಥ್ರ್ಯ ಗಮನಿಸಿದೆ ದುಡ್ಡು ಮಾಡುತ್ತಿದ್ದಾರೆ ಎಂಬುದು ಒಂದೇ ನೋಟಕ್ಕೆ ಅರಿಯುವ ವಿಷಯವಾಗಿದೆ. ನಾ ಕಂಡಂತೆ ಬಹುತೇಕ ಭಾಗಗಳಲ್ಲಿ ಬ್ಯಾಗಗಳನ್ನು ಹೊರಕ್ಕೆ ನೇತಾಕಿ ಮಕ್ಕಳನ್ನು ಕುರಿಗಳಂತೆ ಒಳಗೆ ತುಂಬಿ, ಮಿತಿಮೀರಿದ ವೇಗದಲ್ಲಿ ಚಲಿಸುತ್ತಿರುವ ಶಾಲಾ ವಾಹನವಗಿ ಮಾರ್ಪಾಟಾಗಿರುವ ಆಟೋರಿಕ್ಷಾ, ಓಮಿನಿ, ಇತ್ಯಾದಿಗಳನ್ನು ನೋಡಿದರೆ ಎದೆ ಝಲ್ ಎನ್ನುತ್ತದೆ.
ನಿಯಮಗಳ ಪ್ರಕಾರ, ಶಾಲಾಮಕ್ಕಳನ್ನು ಕೊಂಡೊಯ್ಯುವ ವಾಹನದ ಆಸನಗಳ ಸಾಮಥ್ರ್ಯ 12 ಪ್ಲಸ್ 1 ಮೀರದಂತೆ ಇರಬೇಕು. ಇಷ್ಟಲ್ಲದೇ ನಿಗದಿತ ಆಸನ ಸಾಮಥ್ರ್ಯ ಹೆಚ್ಚಿಸುವಂತೆಯೂ ಇಲ್ಲ. ಆದರೆ, ಸಾರಿಗೆ ನಿಯಮಗಳನ್ನು ಗಾಳಿಗೆ ತೂರುತ್ತಿರುವ  ಖಾಸಗಿ ವಾಹನಗಳು ಮನಸೋ ಇಚ್ಚೆ ಮಕ್ಕಳನ್ನು ತುಂಬುವುದು ಸಾಮಾನ್ಯವಾಗಿದೆ. ಮೋಟಾರು ವಾಹನ 1988ರ ಕಲಂ 74ರ ಪ್ರಕಾರ, ‘ಒಪ್ಪಂದ ವಾಹನ ಕಡ್ಡಾಯವಾಗಿ ರಹದಾರಿ ಹೊಂದಿರಬೇಕು. ಅಲ್ಲದೇ, ಅನುಮೋದಿತ ಸ್ಫೀಡ್ ಗೌರ್ನರ್ ಅಳವಡಿಸಿಕೊಳ್ಳುವ ಮೂಲಕ ವೇಗಮಿತಿ ಗಂಟೆಗೆ 40 ಕಿ.ಮೀ ಮೀರಬಾರದು. ವಾಹನಗಳ ನೊಂದಣಿ 15 ವರ್ಷ ಹಳೆಯದಾಗಿರಬಾರದು. ವಾಹನಗಳಲ್ಲಿ ಕರೆದೊಯ್ಯುವ ಮಕ್ಕಳ ಹೆಸರು, ತರಗತಿ, ಮನೆವಿಳಾಸ, ದೂರವಾಣಿ ಸಂಖ್ಯೆ, ರಕ್ತದ ಗುಂಪು, ಮಾರ್ಗದ ವಿವರ ಪಟ್ಟಿಯನ್ನು ವಾಹನದಲ್ಲಿ ಅಳವಡಿಸಬೇಕು’ ದುರದೃಷ್ಟವೆಂದರೆ, ಬಹುತೇಕ ವಾಹನಗಳಲ್ಲಿ ಈ ನಿಯಮಗಳನ್ನು ಇಂದಿಗೂ ಪಾಲಿಸುತ್ತಿಲ್ಲ.
    ಇಂತಹ ದುರಂತಗಳು ನಡೆದಾಗಲೆಲ್ಲ ವ್ಯವಸ್ಥೆಯ ಲೋಪಗಳು ಕಣ್ಣಿಗೆ ರಾಚುತ್ತವೆ, ಅದನ್ನು ಸರಿಪಡಿಸುವ ಕೂಗು ಮೊಳಗುತ್ತದೆ, ಆರ್.ಟಿ.ಓ ಮಾರ್ಗ ಸೂಚಿಗಳನ್ನು ಪ್ರಕಟಿಸುತ್ತದೆ, ಸಂಚಾರಿ ಪೊಲೀಸರು ಚುರುಕಾಗುತ್ತಾರೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ದೊಡ್ಡ ಗಂಟಲಿನ ಭರವಸೆ ಸಿಗುತ್ತದೆ. ಆದರೆ ಇವೆಲ್ಲವೂ ಒಂದೆರಡು ವಾರಗಳು ಅಷ್ಟೆ!!. ಆನಂತರ ನೀತಿ ನಿಯಮಗಳನ್ನು ಗಾಳಿಗೆ ತೂರುವ ಅರಾಜಕ ಸ್ಥಿತಿ ರಾಜ್ಯಭಾರ ಮಾಡತೊಡಗುತ್ತದೆ. ಕಾನೂನುಗಳು ಇರುವುದೇ ಮುರಿಯುವುದಕ್ಕೆ ಎನ್ನುವ ಮನೋಭಾವ ಬಹುತೇಕರಲ್ಲಿ ರಕ್ತಗತವಾಗಿ ಬಿಟ್ಟಿದೆ. ಇಂಥ ದುರಂತಗಳು ನಡೆದಾಗ ಮಾತ್ರಾ ಅಯ್ಯೋ ಎನ್ನುವ ಉದ್ಗಾರ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎನ್ನುವ ಪ್ರಜ್ಞೆ ಮೂಡುತ್ತದೆ. ಆದರೆ ಇವ್ಯಾವುದು ಅಚಲವಾಗಿ ಬೇರೂರುವುದಿಲ್ಲ.
ಸಂಚಾರ ಪೊಲೀಸರು ಹಾಗೂ ಆರ್.ಟಿ.ಒ ಅಧಿಕಾರಿಗಳು ಕೊಂಚ ಎಚ್ಚರ ವಹಿಸಿದರೆ ಇಂತಹ ದುರಂತಗಳನ್ನು ಸುಲಭವಾಗಿ ನಿವಾರಿಸಬಹುದು. ಕಾಯಿದೆ ಕಾನೂನಿನ ಪಾಲನೆಗಾಗಿ ಮಾಡುವ ಪ್ರತಿನಿತ್ಯದ ಕರ್ತವ್ಯ ನೂರಾರು ಜನರನ್ನು ಬದುಕಿಸುತ್ತದೆ ಎನ್ನುವ ಅರಿವೇ ಈ ಮಂದಿಗಿಲ್ಲ. ಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುವುದರಿಂದ ವೈಯಕ್ತಿಕ ಸುರಕ್ಷತೆಯ ಖಾತ್ರಿ ಜೊತೆಗೆ  ಇನ್ನೊಬ್ಬರ ಜೀವವನ್ನು ಉಳಿಸುತ್ತೇವೆ ಎನ್ನುವ ಭಾವನೆ ಚಾಲಕರಿಗೂ ಇಲ್ಲ.
ಶಾಲಾ ವಾಹನಗಳ ಸುರಕ್ಷತೆ ಕುರಿತು ಎರಡು ವರ್ಷಗಳ ಹಿಂದೆ ಸುಪ್ರಿಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತ್ತು. ‘ಮುಗ್ಧ ಮಕ್ಕಳನ್ನು ದನ-ಕರುಗಳಂತೆ ತುಂಬಿಸಿ ಸಾಗಿಸುವುದು ಅಮಾನವೀಯ. ಗ್ಯಾಸ್ ಸಿಲಿಂಡರ್‍ಗಳ ಮೇಲೆ ಮಕ್ಕಳನ್ನು ಕೂರಿಸುವುದು ಬಾಂಬ್‍ಗಳ ಮೇಲೆ ಕೂರಿಸಿದಂತೆ’ ಎಂದು ತರಾಟೆಗೆ ತೆಗೆದುಕೊಂಡಿತ್ತು. ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಎಲ್ಲಾ ರಾಜ್ಯಗಳಿಗೂ ಅದೇಶಿಸಿತ್ತು. ಕರ್ನಾಟಕ ಹೈಕೋರ್ಟ್ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪೋಲೀಸ್ ಇಲಾಖೆಗೆ ನೊಟೀಸ್ ಜಾರಿ ಮಾಡಿತ್ತು. ಇದರ ಪರಿಣಾಮವಾಗಿ ಶಾಲಾ ವಾಹನಗಳ  ಸುರಕ್ಷತಾ ಮಾರ್ಗ ಸೂಚಿಯನ್ನು ಜಾರಿಗೊಳಿಸಲಾಯಿತು. ಆದರೆ ಅಧಿಕಾರದ ಕೇಂದ್ರ ಬೆಂಗಳೂರಲ್ಲಿ ಇರುವ ಕಾರಣ ಇದರ ಬಗ್ಗೆ ಬೆಂಗಳೂರು ಪೊಲೀಸರು ಒಂದಿಷ್ಟು ಜಾಗರೂಕರಾಗಿರುವುದನ್ನು ಹೊರತು ಪಡಿಸಿದರೆ ರಾಜಧಾನಿಯಿಂದಾಚೆಗೆ ಮಾರ್ಗ ಸೂಚಿಗಳು ಯಾವಾಗಲೂ ದಿಕ್ಕು ತಪ್ಪಿದ ಸ್ಥಿತಿಯಲ್ಲೇ ಇವೆ.

ಏನ್ಮಾಡಬಹುದು!?:
ಕಾಯ್ದೆಗಳು ಏನನ್ನೇ ಸಾರಲಿ. ಮಕ್ಕಳ ಸುರಕ್ಷತೆ ಎನ್ನುವುದು ಶಾಲೆ ಮತ್ತು ಮಕ್ಕಳ ಪೋಷಕರ ಜವಾಬ್ಧಾರಿಯಾಗಿರುತ್ತದೆ. ಕೆಲ ಪೋಷಕರು ವಾಹನಗಳನ್ನು ಪರೀಕ್ಷೆ ಮಾಡದೆಯೇ ಮಕ್ಕಳನ್ನು ಕಳಿಸುತ್ತಾರೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಆಟೋ, ಓಮಿನಿಗಳಂತಹ ವಾಹನಗಳನ್ನು ಪೋಷಕರು ವಿರೋಧಿಸಬೇಕು. ಪೋಷಕರು ವಿರೋಧಿಸಿದರೆ ಇಂತಹ ವಾಹನಗಳನ್ನು ಶಾಲೆಗಳು ನಿಯೋಜಿಸುವುದಿಲ್ಲ.
ಮಕ್ಕಳ ಸುರಕ್ಷತೆಗೆ ಒತ್ತು ನೀಡುವುದು  ಆಡಳಿತ ಮಂಡಳಿಗಳ ನೈತಿಕ ಹೊಣೆ. ಆದರೆ, ಇದರಿಂದ ನುಣುಚಿಕೊಳ್ಳುವ ಶಾಲೆಗಳು, ಮಕ್ಕಳನ್ನು ಶಾಲೆಗೆ ಕರೆತಂದು, ಮನೆಗೆ ಬಿಡುವ ಕೆಲಸವನ್ನು ಖಾಸಗಿ ವಾಹನಗಳಿಗೆ ವಹಿಸಿವೆ. ಇದರಿಂದ ಮಕ್ಕಳ ಸುರಕ್ಷತೆಯ ಪ್ರಶ್ನೆಗೆ ಉತ್ತರವೇ ದೊರಕುತ್ತಿಲ್ಲ. ಇದನ್ನು ಮೊದಲು ನಿಲ್ಲಿಸಬೇಕು.
ಈ ಬಗ್ಗೆ ಕಳೆದ ಒಂದು ವರ್ಷದಲ್ಲಿ ಅಧಿಕಾರಿಗಳು ಜಪ್ತಿಗಿಳಿದಾಗ 61 ವಾಹನಗಳು ದೊರಕಿದರೂ ವ್ಯವಸ್ಥೆ ಸುಧಾರಿಸಿಲ್ಲ. ಹೆಚ್ಚಾಗಿ ನಗರವ್ಯಾಪ್ತಿಯೊಳಗೆ ಮಾತ್ರಾ ನಡೆಯುತ್ತಿರುವ ಈ ಕಾರ್ಯಾಚರಣೆ ರಾಜ್ಯದ ಮೂಲೆ ಮೂಲೆಯಲ್ಲೂ ನಡೆಯಬೇಕಾದ ಅವಶ್ಯಕತೆ ಇದೆ.
ಇನ್ನಾದರೂ ಎಚ್ಚೆತ್ತುಕೊಳ್ಳಿ;
ಲಾಭದಾಸೆಯಿಂದ ಸ್ಕೂಲು ಕಾಲೇಜುಗಳು  ಸುರಕ್ಷತೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಎಲ್ಲವನ್ನು ಗಾಳಿಗೆ ತೂರಿ ಮುಗ್ಧ ಮಕ್ಕಳ  ಜೀವದ ಜೊತೆ ಚೆಲ್ಲಾಟವಾಡುವ ಈ ಕ್ರೂರ ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಕಷ್ಟವಾದರೂ ಸರಿ ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಟ್ಟು ನಿಟ್ಟಾಗಿ ಸದಾ ಪಾಲಿಸಬೇಕು. ಸತ್ತ ಮಕ್ಕಳ ನೋಟ, ಅವರ ಪಾಲಕರ ಕಣ್ಣೀರು ಅಧಿಕಾರಿಗಳು ಮತ್ತು ಸಾರ್ವಜನಿಕರ ಆತ್ಮಸಾಕ್ಷಿಗೆ ಮಾರ್ಗದರ್ಶನವಾಗಬೇಕು.
ಒಮ್ಮೆ ಅಲೆ ಅಪ್ಪಳಿಸಿದಂತೆ ಕೂಗಾಡಿ-ರೇಗಾಡಿ ಸುಮ್ಮನಾಗಬಾರದು. ಅಲೆ ಪದೇ ಪದೇ ನಿಧಾನವಾದರೂ ದಡಮುಟ್ಟುವ ಕಾಯಕ ಮಾಡುತ್ತಲೇ ಇರುತ್ತದೆ ಅದರಂತೆ ನಾವುಗಳು ಈ ಅವ್ಯವಸ್ಥೆ ಸರಿಯಾಗುವವರೆಗೂ ಹೋರಾಟವನ್ನು ನಡೆಸುತ್ತಲೇ ಇರಬೇಕು.

ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ವಹಿಸಬೇಕಾದ ಎಚ್ಚರಿಕಾ ಕ್ರಮಗಳ ಬಗ್ಗೆ ಇಲಾಖಾ ವತಿಯಿಂದ ಪದೇ ಪದೆ ಸೂಚಿಸಲಾಗುತ್ತಿದೆ. ಈ  ನಿಯಮಗಳನ್ನು ಶಾಲಾ ಆಡಳಿತ ಮಂಡಳಿಗಳು ಮತ್ತು ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನ ಮಾಲೀಕರು ಕಟ್ಟು ನಿಟ್ಟಾಗಿ ಪಾಲಿಸಬೇಕು. ನಿಯಮ ಮೀರಿದರೆ ಕಾನೂನು ಕ್ರಮ ಅನಿವಾರ್ಯ.


- ಎನ್.ಎಸ್. ಮೇಘರಿಖ್
ನಗರ ಪೋಲೀಸ್ ಕಮಿಷನರ್






ಸುಪ್ರೀಂ ಕೋರ್ಟ್ ಮತ್ತು ಶಿಕ್ಷಣ ಇಲಾಖೆ ಹೊರಡಿಸಿದ ಸುರಕ್ಷತಾ ಕ್ರಮಗಳೇನು ಗೊತ್ತಾ!?
ಶಾಲಾ ವಾಹನಗಳ ಮೇಲೆ ಶಾಲೆಯ ಹೆಸರು ಮತ್ತು ದೂರವಾಣಿ ಸಂಖ್ಯೆ ಬರೆದಿರಬೇಕು.
ಶಾಲಾ ವಾಹನಗಳ ಕಿಟಕಿಗಳಿಗೆ ಗ್ರಿಲ್‍ಗಳನ್ನು ಅಳವಡಿಸಿರಬೇಕು.
ವಾಹನಗಳಲ್ಲಿ ಪ್ರಾಥಮಿಕ ಚಿಕಿತ್ಸೆಯ ಕಿಟ್‍ಬ್ಯಾಗ್ ಇಟ್ಟಿರಬೇಕು.
ಅಗ್ನಿ ಅವಘಡ ತಪ್ಪಿಸುವ ಸಲಕರಣೆ ಶಾಲಾ ವಾಹನಗಳಲ್ಲಿ ಇರಬೇಕು.
ಸಿಲಿಂಡರ್‍ಗಳನ್ನು ಶಾಲಾ ವಾಹನಗಳಿಗೆ ಅಳವಡಿಸಿದ್ದರೆ ಸಂಬಂಧಪಟ್ಟ ಅಗ್ನಿ ಶಾಮಕ ಇಲಾಖೆಯಿಂದ ಪರವಾನಗಿ ಪಡೆದಿರಬೇಕು.
ಎಲ್‍ಪಿಜಿ ಅಳವಡಿಸಿರುವ ಜಾಗದಲ್ಲಿ ಸೀಟುಗಳನ್ನು ಅಳವಡಿಸಿರಬಾರದು.
ವೇಗ ನಿಯಂತ್ರಕಗಳನ್ನು ಅಳವಡಿಸಿರಬೇಕು, 40 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಓಡಿಸಬಾರದು.
ಪ್ರತಿ ಶಾಲಾ ವಾಹನಗಳಲ್ಲೂ ಮಹಿಳಾ ಅಟೆಂಡರ್, ವಾಹನಗಳಲ್ಲಿ ಸಿಸಿಟಿವಿ ಮತ್ತು ಜಿಪಿಎಸ್ ನಿರ್ವಹಣೆ ಇರಬೇಕು.
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕರೆದೊಯ್ಯುವ ವಾಹನಗಳಲ್ಲಿ ಒಟ್ಟು ಸೀಟು ಸಾಮಥ್ರ್ಯಕ್ಕಿಂತ ಶೇ.50ರಷ್ಟು ಮಕ್ಕಳನ್ನು ಮಾತ್ರಾ ಹೆಚ್ಚಿಗೆ ಕೂರಿಸಬಹುದು.
ಬ್ಯಾಗ್‍ಗಳನ್ನು ಶಾಲಾ ವಾಹನದ ಹೊರಗೆ ನೇತು ಹಾಕದೆ ವಾಹನದಲ್ಲೇ ಪ್ರತ್ಯೇಕ ವ್ಯವಸ್ಥೆ ಕಲ್ಪಸಿರಬೇಕು.
ಶಾಲಾ ವಾಹನ ಚಾಲಕರ ಪೂರ್ವಾಪರ ಇತಿಹಾಸವನ್ನು ಪೊಲೀಸ್ ಇಲಾಖೆ ಮೂಲಕ ಪರಿಶೀಲಿಸಬೇಕು.
ಚಾಲನಾ ಪರವಾನಗಿ ಪಡೆದು ಕನಿಷ್ಠ 5 ವರ್ಷ ಚಾಲನಾ ಅನುಭವ ಹೊಂದಿದವರಾಗಿರಬೇಕು.
ವಾಹನ ಚಾಲಕರು ಶಾಲಾ ಆವರಣಕ್ಕೆ ಅನಗತ್ಯವಾಗಿ ಪ್ರವೇಶಿಸುವುದು, ಮಕ್ಕಳ ಜತೆ ಸಲುಗೆ ಬೆಳೆಸಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು.
ಬಸ್ಸಿನ ಮೆಟ್ಟಿಲುಗಳ ಎತ್ತರ ಮಕ್ಕಳಿಗೆ ಎಟುಕುವಂತಿರಬೇಕು.
ಗುರುತಿನ ಚೀಟಿ ತರುವ ಪೋಷಕರ ಕೈಗೆ ಮಾತ್ರ ಮಕ್ಕಳನ್ನು ವಹಿಸಬೇಕು.