Friday 24 April 2015

ಗೂಡು ಮರೆತ ಹಕ್ಕಿಗಳೇ.!? (ತಂದೆ ತಾಯಿಗಳಿಗಿಂತ ಮಿಗಿಲಾಯಿತೆ ಹುಚ್ಚು ಪ್ರೀತಿ)


       ಬೆಳಿಗ್ಗೆ ಎದ್ದು ಪೇಪರ್ ಓದುತ್ತಿದ್ದಾಗ ಬಹಳ ಸಿಂಪಲ್ ಎನ್ನುವಂತೆ ಮುದ್ರಿಸಿರುವ ತುಂಬಾ ಗಂಭೀರವಾದ ವಿಚಾರವನ್ನು ಗಮನಿಸಿದೆ. ‘ಯುವ ಪ್ರೇಮಿಗಳಿಬ್ಬರೂ ರಾತ್ರೋರಾತ್ರಿ ಪರಾರಿ, ಪ್ರೀತಿಸುತ್ತಿದ್ದ ಈ ಜೋಡಿಗಳು ಮನೆಯವರಿಗೆ ಹೆದರಿ ಓಡಿಹೋಗಿದ್ದಾರೆ’ ಇದು ಸುದ್ಧಿಯ ಸಾರಾಂಶ. ನನಗಂತೂ ತುಂಬಾ ಬೇಸರವಾಯಿತು. ಪತ್ರಿಕೆಯ ಪುಟದಲ್ಲಿ ಇದು ನಾರ್ಮಲ್ ವಿಷಯವಾದರೂ ಓದುತ್ತಿರುವಷ್ಟು ಹೊತ್ತು ಎಂತವನಿಗಾದರೂ ಇದೇನು ಕಾಲ ಬಂದಿತಪ್ಪಾ! ಅಂತ ಅನಿಸದಿರದು.
ಕೆಲ ಹದಿ ಹರೆಯದ ಮಕ್ಕಳನ್ನು ನೋಡುವಾಗ ಕೋಪದ ಜೊತೆಗೆ ಅವರ ಮುಂದಿನ ಬದುಕಿನ ಬಗ್ಗೆಯೂ ಅನುಕಂಪ ಮೂಡಿ ಬರುತ್ತದೆ. ಆ ವಯಸ್ಸೇ ಹಾಗೆ ಲಂಗು-ಲಗಾಮಿಲ್ಲದ ಕುದುರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಎಂದು ಅರಿಯುವ ತಾಳ್ಮೆ ಅವರಲ್ಲಿಲ್ಲ, ಹಿರಿಯರ ಮಾತುಗಳೋ ಅವರಿಗೆ ಹಿತವೆನಿಸೋದೆ ಇಲ್ಲಾ. ಪ್ರೀತಿ-ಪ್ರೇಮ, ಸಿಗರೇಟ್, ಕುಡಿತ ಇತ್ಯಾದಿ ಶೋಕಿಗಳ  ಕಡೆ ವಾಲುವ ಮನದ ಕಂಟ್ರೋಲ್ ಅವರಿಗೆ ಸಿಗೋದೆ ಇಲ್ಲಾ.
        ಹರೆಯದ ಹುಡುಗ ಹುಡುಗಿಯರು ಪರಸ್ಪರ ಆಕರ್ಷಣೆಗೊಳಗಾಗುವುದು ಪ್ರಕೃತಿ ಸಹಜ. ಜೀವನಪರ್ಯಂತ ಕೂಡಿ ಬಾಳಬೇಕಾಗಿರುವುದರಿಂದ ಪರಸ್ಪರರು ಹೊಂದಿಕೊಂಡು ಹೋಗುವಂತ ಸ್ವಭಾವ, ಒಂದು ಗೂಡಿನ ಬದುಕಿಗೆ ಬೆಸುಗೆಯಂತೆ ಕೆಲಸ ಮಾಡುವ ಲೈಂಗಿಕತೆ ಅಂದರೆ ಪರಸ್ಪರರ ಲೈಂಗಿಕ ಸಾಮಥ್ರ್ಯ, ತ್ಯಾಗ, ಕಷ್ಟ-ಸುಖಗಳ ಹಂಚಿಕೆ ಇದೆ ಮೊದಲಾದವನ್ನೆಲ್ಲಾ ಪರೀಕ್ಷಿಸಿ ನೋಡುವ ಕುತೂಹಲ ಎಲ್ಲಾ ಹುಡುಗ ಹುಡುಗಿಯರಲ್ಲೂ ಇದ್ದೆ ಇರುತ್ತವೆ. ಇಂತಹ ಪೃಕೃತಿ ಸಹಜ ಗುಣಗಳೇ ಲಿವಿಂಗ್ ಟುಗೆದರ್ ಗೆ ಅನುವುಮಾಡಿ ಕೊಡುತ್ತವೆ ಎನಿಸುತ್ತದೆ.
ಈ ಪ್ರೀತಿ-ಪ್ರೇಮ ಇಂದಿನ ಕಾಲದಲ್ಲಿ ಎಷ್ಟು ಮೌಲ್ಯ ಕಳೆದುಕೊಂಡಿದೆ ಎಂದರೆ, ವಿದೇಶಿ ಸಂಸ್ಕøತಿಯ ಪ್ರಭಾವದಿಂದ ಇಂದಿನ ಬಹುತೇಕ ಹುಡುಗ ಹುಡುಗಿಯರು ಹೈಸ್ಕೂಲು, ಪಿ.ಯು, ಕಾಲೇಜು ಓದುವಾಗಲೇ ಅನಾವಶ್ಯಕ ಆಕರ್ಷಣೆಯ ಪ್ರೀತಿಗೆ ಬಿದ್ದು, ಮನೆಯವರು ಒಪ್ಪಲ್ಲ ಎಂದು ತಿಳಿಯುತ್ತಲೇ ಮುಂದೆನು ಮಾಡಬೇಕು ಎಂದು ತೋಚದೆ ಮನೆ ಬಿಟ್ಟು ಓಡಿ ಹೋಗಿ ತಡಕಾಡುವ ಮಟ್ಟಕ್ಕೆ ಒಂದು ಕಡೆಯಾದರೆ, ಒಬ್ಬರನ್ನೊಬ್ಬರು ಅರಿಯುವ ಮುನ್ನವೇ ಎಲ್ಲಾ ಸಂಪರ್ಕದ ಏಳು ಬೀಳು ನಡೆದು, ಜೀವನದಲ್ಲಿ ಇನ್ನೇನೂ ಇಲ್ಲಾ ಎನ್ನುವ ಹಂತಕ್ಕೆ ತಲುಪಿ ಡೈವೋರ್ಸ್ ಎಂಬಲ್ಲಿಗೆ ಎಲ್ಲಾ ಮುಗಿತು ಎಂದು ಕೈತೊಳೆದುಕೊಳ್ಳುವ ಮಟ್ಟಕ್ಕೂ ತಲುಪಿದೆ.
ಪ್ರೀತಿ ಪ್ರೇಮ ಫೇಲಾದ ಒಂದು ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಯುವ ಪ್ರೇಮಿಗಳಿಗೆ ತಮ್ಮ ತಂದೆ ತಾಯಿಯ ಬಗ್ಗೆ ಯೋಚನೆ ಇರುವುದೇ ಇಲ್ಲ. ಒಬ್ಬ ತಾಯಿ ತನ್ನ ಮಗನನ್ನು ಕಳೆದುಕೊಂಡಾಗ ಪಡುವ ದುಃಖವನ್ನು ಯಾವ ಪದದಿಂದಲೂ ಹೇಳಲಾಗದು. ಮಗು ಗರ್ಭದಲ್ಲಿ ಬೆಳೆಯುವಾಗಿನಿಂದ ಹಿಡಿದು ಅವನು/ಅವಳು ಬೆಳೆದು ದೊಡ್ಡವನಾಗುವವರೆಗೂ ಪ್ರತಿಕ್ಷಣ ಪ್ರತಿ ದಿನ ತಂದೆ ತಾಯಿಯರು ನಮ್ಮನ್ನು ಎಷ್ಟು ಕೇರ್ ಮಾಡುತ್ತಾರೆಂಬುದು ಬಹುತೇಕ ಮಕ್ಕಳಿಗೆ ತಿಳಿದಿರುವುದಿಲ್ಲ. ಅದು ತಿಳಿಯಬೇಕೆಂದರೆ ಇವರು ಕೂಡ ತಂದೆ ತಾಯಿಯಾಗಿ ಅವರ ಮಕ್ಕಳು ಇದೇ ರೀತಿ ಕೆಲಸ ಮಾಡಬೇಕು ಅಷ್ಟೆ. ಎಲ್ಲೋ ಒಂದು ಕಡೆ ಮನೆಯವರ ತಪ್ಪು ಇದರಲ್ಲಿದೆ ಎನಿಸುತ್ತದೆ. ತಂದೆ ತಾಯಿಗಳು ಮಗುವಾದ ಮೇಲೆ ಎಲ್ಲಿಯೂ ಕೂಡ ಮಗುವಿನ ಮುಂದೆ ಪರಸ್ಪರ ಮುದ್ಧಿಸುವ ಮನಸಾಗಲಿ, ಅಪ್ಪಿಕೊಳ್ಳುವ ಪರಿಯಾಗಲಿ ಮಕ್ಕಳ ಮುಂದೆ ತೋರಲು ಇಷ್ಟಪಡುವುದಿಲ್ಲ. ‘ಸುಮ್ಮನೀರ್ರಿ ಮಗ/ಮಗಳು’ ಇದ್ದಾರೆ ಎನ್ನುವ ರಾಗದೊಂದಿಗೆ ಮುಚ್ಚು ಮರೆ ಮಾಡುತ್ತಾರೆ. ಇಬ್ಬರ ನಡುವೆ ಮಗುವನ್ನು ಮಲಗಿಸಿಕೊಂಡು ಮಗುವಿನ ಪ್ರೀತಿಗಾಗಿ ತಮ್ಮ ಸುಖವನ್ನು ತ್ಯಾಗ ಮಾಡಿರುತ್ತಾರೆ. ಯಾಕೆ ಹೀಗೆ!?.., ಇನ್ನೂ ಕೆಲವರಿದ್ದಾರೆ ಮಗ/ ಮಗಳು ವಯಸ್ಸಿಗೆ ಬಂದ ತಕ್ಷಣ ಅವರಿಗೆ ಒಂದು ಸಪರೇಟ್ ರೂಮ್ ಮಾಡಿ, ಅವರ ಭಾವನೆಗಳನ್ನು ಅರ್ಥೈಸಿಕೊಳ್ಳದೇ ಯಾವುದೆ ವಿಚಾರವನ್ನು ಗಮನಿಸಿದೆ ತೆಪ್ಪಗಿರುತ್ತಾರೆ. ಮಕ್ಕಳಿಗಿರುವ ಕುತೂಹಲ, ಅವರ ಮನದಲ್ಲಿರುವ  ವಸ್ತು-ಸ್ಥಿತಿಯ ತಳಮಳ ಏನನ್ನೂ ಅರಿಯದೆ ಸುಮ್ಮನಿರುತ್ತಾರೆ. ಹೌದು ಲೈಂಗಿಕ ವಿಷಯಗಳ ಬಗ್ಗೆ ಮುಜುಗರವಿಲ್ಲದೆ ಮಾತಾಡುವುದು ಕಷ್ಟ. ಆದರೆ ಲೈಂಗಿಕ ಕ್ರೀಯೆಗಳು ಪಾಪಪ್ರಜ್ಞೆಯ ಚಟುವಟಿಕೆ ಎನ್ನುವ ರೀತಿಯಲ್ಲಿ ಮಾತನಾಡುವುದು ತಪ್ಪು ಅಲ್ವಾ. ಇಂತಹ ಭಾವನೆಗಳನ್ನು ದೂರ ಸರಿಸಿದಾಗ ಲೈಂಗಿಕ ವಿಷಯಗಳು ಹುಟ್ಟಿಸುವ ತೀವ್ರ ಕುತೂಹಲ ಅದರ  ಮುಜುಗರ ಬದಲಾಗಬಹುದು ಎನ್ನಿಸುತ್ತದೆ. ಮಕ್ಕಳ ಮನಸ್ಸಿನ ಬೆಳವಣಿಗೆ, ಬದಲಾವಣೆಗಳ ಅಧ್ಯಯನ ಮಾಡಿರುವ ಅನೇಕರ ಪ್ರಕಾರ ಲೈಂಗಿಕ ವಿಷಯಗಳ ಬಗ್ಗೆ ಮನೆಯ ವಾತಾವರಣದಲ್ಲಿರುವಂತಹ ಮುಜುಗರ, ಮಡಿವಂತಿಕೆಯ ಭಾವನೆಗಳು ಮಕ್ಕಳ ಮನದಲ್ಲಿ ಮೂಡುವ ಲೈಂಗಿಕ ವಿಷಯದ ಬಗೆಗಿನ ಕುತೂಹಲವನ್ನು ಕ್ಷೀಣಿಸುವುದಿಲ್ಲ. ಬದಲಿಗೆ ಕಾಮದ ವಿಷಯಗಳ ಬಗ್ಗೆ ಮುಚ್ಚುಮರೆಯ ವರ್ತನೆಯನ್ನು ಗಟ್ಟಿಯಾಗುವಂತೆ ಮಾಡಿಸುತ್ತದೆ. ಇದೇ ನಂತರದ ದಿನಗಳಲ್ಲಿ ವ್ಯಕ್ತಿತ್ವದ ಗೊಂದಲಕ್ಕೂ ಕಾರಣವಾಗಬಹುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹೆತ್ತವರೆ, ಎಲ್ಲದಕ್ಕೂ ಒಂದೊಂದು ಸಮಯ ಅಂತ ಇರುತ್ತೆ. ಯಾವಾಗ ಎನಾಗÀಬೇಕೋ ಆಗೆ ಆಗುತ್ತೆ ಅಲ್ಲಿಯವರೆಗೂ ಸುಮ್ಮನಿದ್ದು ಬಿಟ್ಟರೆ ಬೆಟರ್. ಇಲ್ಲವಾದಲ್ಲಿ ವಯಸ್ಸಿನಲ್ಲಾಗುವ ಬದಲಾವಣೆಯನ್ನು ಗಮನಿಸಿ, ಕೂಲಂಕುಶವಾಗಿ ಚರ್ಚಿಸಿ, ಪರಸ್ಪರ ಮುಕ್ತವಾಗಿ ಮಾತನಾಡಿ ತಿಳಿಹೇಳುವುದು ಉತ್ತಮ ಎನಿಸುತ್ತದೆ. ಬದಲಾಗಿ ಅದೇ ಶಿಕ್ಷಾರ್ಹ ಅಪರಾಧ ಎಂದುಕೊಳ್ಳಬೇಡಿ.                                                                                                                                                                                                                                                         ಹರೆಯದ ಹುಡುಗ ಹುಡುಗಿಯರೇ ನೀವ್ಯಾಕೆ ‘ಲಿವಿಂಗ್ ಟುಗೆದರ್ ಕಾನ್ಸೆಪ್ಟ್’ ನ್ನು ಫಾಲೋ ಮಾಡ್ತೀರಾ. ನಿಮಗಾಗಿ ತಂದೆ ತಾಯಂದಿರು ಹಗಲಿರುಳು ಕಷ್ಟಪಟ್ಟು, ಸುಖವನ್ನು ಬಲಿಕೊಟ್ಟು, ಬೆಳೆಸಿದ್ದು ತಿಳಿದಿದ್ದರೂ ನೀವ್ಯಾಕೆ ಅವರ ಪ್ರೀತಿಗೆ ಕೈಕೊಟ್ಟು ಇನ್ನೊಂದು ಪ್ರೀತಿಗೆ ಹಾತೊರೆದು ಓಡಿ ಹೋಗ್ತಿರಾ!?... ಒಂದು ಕ್ಷಣ ಯೋಚಿಸಿ. ಮಕ್ಕಳೇ, ಮುಂದುವರಿಯುವ ಮುಂಚೆ ಮುಂದೆ ನಿಂತು ನೋಡಿ, ಲಿವ್ ಇನ್ ರಿಲೇಷನ್‍ಶಿಪ್ ಎಂಬ ತತ್ವ ಪಾಶ್ಚಿಮಾತ್ಯ ಸಂಸ್ಕøತಿಯಿಂದ  ಬಂದಿದ್ದರೂ ಅದು ಇದೀಗ ಎಲ್ಲಾ ಕಡೆಯೂ ಕಾಮನ್ ಎನ್ನುವ ಹಂತಕ್ಕೆ ತಲುಪಿದೆ. ಇದರ ಪರಿಣಾಮ ನೀವು ಪರಸ್ಪರ ಆಕರ್ಷಿಸಲ್ಪಟ್ಟು, ಪ್ರೀತಿ ಬಲೆಗೆ ಬಿದ್ದು, ಜೀವನವೇ ಅಲ್ಲೋಲ ಕಲ್ಲೋಲ ಮಾಡಿಕೊಳ್ಳುತ್ತಿದ್ದೀರಾ!? ಅದಕ್ಕಾಗಿಯೇ ದಿನ ಬೆಳಗಾದರೆ ಇಂತಹದೇ ಸುದ್ದಿ ನಾವು- ನೀವು ಕೇಳುತಿರುವುದೆನ್ನುವದರಲ್ಲಿ ಮುಚ್ಚುಮರೆ ಇಲ್ಲಾ. ಅತ್ತ ಮನೆಯವರು ನಿಮ್ಮನ್ನು ಎಕ್ಸೆಪ್ಟ್ ಮಾಡಲ್ಲ, ಇತ್ತ ಬಾಳ್ವೆಯೂ ಸರಿಯಾಗಿ ನಡೆಯೊಲ್ಲ. ಕೊನೆಗಿರೋದೊಂದೆ ನಾವು ತಪ್ಪು ಮಾಡಿ ಬಿಟ್ವಿ ಅನ್ನೋ ಮನಸ್ಸಿನ ತಿಕಳಾಟ. ಪರಿಣಾಮ ಸಾವಾಗಿರಲೂಬಹುದು... ಜೋಡಿಗಳು ಬೇರೆ-ಬೇರೆಯಾಗಲೂಬಹುದು.
ಸ್ವಾಮಿ ವಿವೇಕಾನಂದರು ಒಂದು ಕಡೆ ಹೇಳುತ್ತಾರೆ, “ಒಬ್ಬ ಮನುಷ್ಯನ ಜನ್ಮ ಸಾರ್ಥಕವಾಗುವುದು ಯಾವಾಗೆಂದರೆ, ಅವನು ಬೇರೆಯವರ ಸಲುವಾಗಿ ದುಡಿದಾಗ”...ಎಂದು. ನಾವು ಬೇರೆಯವರಿಗಾಗಿ ದುಡಿಯುವುದು ಬೇಡ ಅಟ್‍ಲೀಸ್ಟ್ ನಮ್ಮನ್ನು ಹೆತ್ತ ತಂದೆ-ತಾಯಿಗಾದರೂ ದುಡಿಯೋಣ, ಅವರಿಗಾಗಿ ಬದುಕೋಣ, ಲವ್ ಅನ್ನೋ ಕ್ಷಣಿಕ ಸುಖಕ್ಕೆ ಹಾತೊರೆಯದೆ ಸುಖಸಂಸಾರದಲ್ಲಿ ಎಲ್ಲರ ಜೊತೆಯೂ ಲೀನರಾಗೋಣ, ತಂದೆ ತಾಯಿಯರೆ ನೀವೂ ಕೂಡ ಅಷ್ಟೆ, ಸಂಕೋಚ ಬಿಟ್ಟು ಸಂಸಾರ ನಡೆಸಿ, ನಿಮ್ಮ ಹಾಗೂ ಮಕ್ಕಳ ಬಾಳಲ್ಲಿ ಸಮೃದ್ಧರಾಗಿ...




ಮುದ್ದು ಮರಿಯ ಸೋಜಿಗದ ನಲ್ಮೆ


       ಮುಂಜಾನೆ ಸೂರ್ಯಕಿರಣ ನೆತ್ತಿಯಿಂದ ಎದ್ದು ತನ್ನ ಪ್ರಖರತೆಯ ಮೃದು ಬಿಸಿಯನ್ನು ಭೂಮಿಗೆ ತಾಗುವ ಮುನ್ನವೇ ಮುಂಗಾಲನ್ನು ಊರಿ, ಹಿಂಗಾಲನ್ನು ಮಡಚಿ, ಸಣ್ಣ ಕಿರು ನಗೆಯೊಂದಿಗೆ ನನ್ನ ಏಳುವಿಕೆಯನ್ನು ಕಾಯುತ್ತಾ ಕುಳಿತಿರುತ್ತಿದ್ದ ಆ ಜಾಗÀದಲ್ಲಿ ಇವತ್ತಿನ ನಿನ್ನ ಪ್ರಸ್ತುತತೆ ಇಲ್ಲದಿರುವುದನ್ನು ಎಣಿಸಿಕೊಂಡರೆ ವೇದನೆಯ ಜೊತೆಗೆ ಮನ ಪಟಲದಲ್ಲಿ ಎಕಾಂಗಿ ಭಾವ ಮೂಡಿ ಕಣ್ಣಿನ ಅಂಚಲ್ಲಿ ಕಂಬನಿ ಜಿನುಗುತ್ತೆ.
ಅದ್ಯಾಕೋ ಗೊತ್ತಿಲ್ಲ...!, ನೀನಂದ್ರೇ ನಂಗೆ ತುಂಬಾ ಇಷ್ಟ ಕಣೋ, ನಾನು ನಿನ್ನ ತುಂಬಾ ಹಚ್ಚಿಕೊಂಡಿದ್ದೆ. ನಿನಗೂ ಕೂಡ ನಾನಂದ್ರೆ ಪಂಚಪ್ರಾಣ ಅಂತ ಗೊತ್ತು. ರಜೆಯಲ್ಲಿ ಅಜ್ಜ- ಅಜ್ಜಿಯ ಊರು ಅಂತ ಮನೆಬಿಟ್ಟು ಅಲ್ಲಿ- ಇಲ್ಲಿ ಸ್ವಲ್ಪ ದಿನ ಇದ್ದರೂ ನೀನು ಮಾತ್ರಾ ಪ್ರತಿದಿನ ನನ್ನ ನೆನಪಲ್ಲೇ ಕಾಲ ಕಳೆಯುತ್ತಿದ್ದೆ. ನನ್ನ ಬರುವಿಕೆಯಂತೂ ನಿನಗೆಷ್ಟು ಖುಷಿ ಕೊಡುತ್ತಿತ್ತೆಂದರೆ ಅದರ ಅಂದವನ್ನು ನೀನು ಕೂಗಿ ವರ್ಣಿಸುತ್ತಿದ್ದ ಸೋಜಿಗವೇ ಬೇರೆ ಎನಿಸುತ್ತೆ. ಪ್ರತಿ ದಿನ ನನ್ನ ಶಾಲೆಗೆ ಬಿಟ್ಟು, ಸಂಜೆ   ನಾ ಮನೆಗೆ ಬರುವ ಸಮಯವನ್ನು ಬಾಗಿಲ ಬಳಿಯೇ ಕಾದು ಕುಳಿತು ನೀನು ಆದರದಿಂದ ಆಹ್ವಾನಿಸುತ್ತಿದ್ದ ರೀತಿ ಇನ್ನೆಂದೂ ಯಾರಿಂದಲೂ ತೋರಲಾಗದು ಬಿಡು.

ದಿನ ಬೆಳಿಗ್ಗೆ ನಾನು ಎದ್ದು ಹೊರ ಬಂದಾಗ ಸಣ್ಣ ಕಿರುನಗೆಯೊಂದಿಗೆ ಶುಭೋದಯ ಸಾರಿ, ಎದ್ದ ತಕ್ಷಣವೇ ನನಗೊಂದು ಪ್ರಣಾಮವಿತ್ತು. ಒಂದಾಟ ಆಡೋಣವೆಂದು ಒಟ್ಟಿಗೆ ಅಂಗಳದಲ್ಲಿ ಎದ್ದು-ಬಿದ್ದು ಆಡಿ ನಂತರವೇ ಮುಖ ತೊಳೆದು ತಿಂಡಿ ತಿನ್ನುವುದನ್ನು ನೆನೆಸಿಕೊಂಡರಂತೂ ಇಂದಿಗೂ ಬಾಲ್ಯ ಜೀವನಕ್ಕೊಂದು ಮಹತ್ವದ ಅರ್ಥ ಕಲ್ಪಿಸಿಕೊಟ್ಟು ನನಗದರ ಅಂದವನ್ನು ಹೆಚ್ಚಿಸಿದ ಆಪ್ತ ನೀನೆನಿಸುತ್ತದೆ. ನಿನಗೆ ನಾನು ಎಷ್ಟು ಇಷ್ಟ ಅಂತ ಗೊತ್ತಾಗಿದ್ದು ಯಾವಾಗ ಗೊತ್ತಾ!? ನಾನು ಮನೆಯಲ್ಲಿ ಇಲ್ಲದಾಗ ನೀನು ಒಬ್ಬನೇ ಅಮ್ಮ-ಅಪ್ಪನ ಜೊತೆ ಇದ್ದು ನನಗಾಗಿ  ಫೀಲ್ ಮಾಡ್ತಿದ್ದ ಸಂದರ್ಭವನ್ನು ಅಮ್ಮ ಹೇಳುತ್ತಿದ್ದಾಗಲೆ ತಿಳಿದದ್ದು. ಆಗಲೇ ನಿನ್ನ ಮೇಲೆ ಇರುವ ಪ್ರೀತಿ ಇನ್ನಷ್ಟು ಇಮ್ಮಡಿಯಾಗಿದ್ದು. ಪ್ರತಿ ದಿನ ಈ ಪ್ರೀತಿ ಇಮ್ಮಡಿಯಾಗುತ್ತಿತ್ತೆ ಹೊರತು ಕಡಿಮೆಯಾಗಿದ್ದೆ ಗೊತ್ತಿಲ್ಲ ಕಣೋ.
ನನ್ನ ಮಾಮೂಲಿ ದಿನಚರಿಯಲ್ಲಿ ಎಡೆಬಿಡದೆ ಏಳುವ ಆಸೆಗಳಿಗೆ ನೀ ಕೊಡುವ ಸಾಥ್, ನನ್ನ ಮೆಚ್ಚಿಸೋ ನಿನ್ನ ಪ್ರೀತಿಯ ಪಾಥ್ ಇವೆಲ್ಲದರ ನಡುವೆ ನಾನು ತುಂಬಾ ಚಿಕ್ಕವನು ಅನ್ನಿಸುತ್ತೆ ಕಣೋ. ಚಿಕ್ಕಂದಿನಿಂದಲೂ ಇದ್ದ ಕ್ರಿÀ್ರಕೆಟ್ ಆಟದ ಹುಚ್ಚು ನಿನಗೆ ಎಷ್ಟು ಕಷ್ಟಕೊಟ್ಟಿತ್ತೋ ನಾ ತಿಳಿಯೆ!!!. ಗೆಳೆಯರ್ಯಾರು ಸಿಗದಿದ್ದಾಗ ನಾ ದೂರಕ್ಕೆ ಎಸೆಯುತ್ತಿದ್ದ ಬಾಲ್‍ನ್ನು  ನೀನು ಕೈಗಳಿಂದ ತರಲಾಗದೇ ಬಾಯಿಂದ ಕಚ್ಚಿಕೊಂಡು ಬರುತ್ತಿದ್ದದ್ದೂ ನಿನ್ನನ್ನ ಕಾಡಿಸುವಂತೆ ಮಾಡುತ್ತಿತ್ತೆಂದು ನನಗೆ ಅನಿಸುತ್ತಿದೆ. ದಯವಿಟ್ಟು ಕ್ಷಮಿಸಿಬಿಡು. ಫರ್ಲಾಂಗು ದೂರಗಳ ನಿನ್ನ ಓಟ ಕಿಲೋ ಮೀಟರ್‍ವರೆಗೂ ಸಾಗಿದರೂ, ನಿನ್ನಲ್ಲಿ ಯಾವುದೇ ಉತ್ಸಾಹ ಕಡಿಮೆ ಆಗದೆ ಇನ್ನೂ ಆಡೋಣ-ಆಡೋಣ ಅಂತಲೇ ನನ್ನ ಸಂತೋಷವನ್ನೇ ನೀನು ಹಾರೈಕೆ ಮಾಡಿಕೊಳ್ಳುತ್ತಿದ್ದದ್ದೂ, ಯಾವ ಋಣಾನುಬಂಧವೋ ನಾ ತಿಳಿಯೇ...
      ಹೇ ನಿನಗೆ ನೆನಪಿದ್ಯಾ, ನನಗೀಗಲು ನೆನಪಿದೆ. ನನಗಾಗ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಮನೆಯಲ್ಲೆ ಕುಳಿತು ಓದಲು ಒಂದಿಷ್ಟು ದಿನ ರಜೆ ನೀಡಿದ್ದ ಸಮಯ, ಕುಳಿತಲ್ಲೆ ಕುಳಿತು ಓದಲು ಬೋರ್ ಎನಿಸುವ ನನಗೆ ಎಲ್ಲಾ ಕಡೆ ಓಡಾಡುತ್ತಾ ಓದುವ ಹಂಬಲ, ಮನೆಯಂಗಳ, ಗದ್ದೆಯ ಅಂಚು, ಗುಡ್ಡದ ಮೇಲಿರುವ ಬೆಟ್ಟದ ತುದಿಯ ಮೇಲೆ ಕುಳಿತು ಒಂದಿಷ್ಟು ಹೊತ್ತು ಒಂದೊಂದು ಸ್ಥಳದಲ್ಲಿ ಓದುವ ಪರಿವಿಡಿ ನನ್ನದು. ಆ ಸಮಯದಲ್ಲಿ ನೀ ಒಂದಿನವೂ ನನ್ನ ಬೆನ್ನು ಬಿಡದೆ, ನೀ ಓದು ನಾನು ನಿನಗೆ ಬೇಸರವಾಗದಂತೆ ಕಂಪೆನಿ ಕೊಡುತ್ತಾ ಪ್ರತಿ ದಿನವೂ ನಾ ಸಾಗುವ ಎಲ್ಲಾ ಕಡೆ ನನ್ನ ಪಕ್ಕವೇ ಕುಳಿತು, ಕಾಲಿನ ಬಳಿ ಬಂದು ಮಲಗಿ ಸ್ಫೂರ್ತಿ ತುಂಬಿದ ಬಂಧುಗಿಂತಲೂ ಆಪ್ತನಾಗಿದ್ದೆ ನೀ.
 ಈಗಲೂ ಊರಿಗೋದರೆ ಒಮ್ಮೊಮ್ಮೆ ಆ ಪರಿಸರ, ನಿನ್ನ ಜೊತೆ ಕಳೆದ ಆ  ಕ್ಷಣ ಮನಸಿನ ಮೂಲೆಯಲ್ಲಿ ಕಚಗುಳಿ ಇಡುತ್ತದೆ. ಇದಂತೂ ನಿನಗೆ ನೆನಪಿರಲೇಬೇಕು!, ಆ ದಿನ ರಾತ್ರಿ ನಾವೆಲ್ಲಾ ಮಲಗಿ ನಿದ್ರಾದೇವಿಯ ಮಡಿಲಿಗೆ ಶರಣಾಗಿದ್ದಾಗ ಮನೆಯ ಹೊರಗಡೆ ಹಾಕಿದ್ದ ಅಡಿಕೆ ರಾಶಿಗೆ ಒಬ್ಬ ಕಳ್ಳ ಕನ್ನ ಹಾಕಲು ಬಂದಿದ್ದಾಗ ನಿನಗೆ  ಕಳ್ಳ ಬಂದ ಸುಳಿವು ಸಿಕ್ಕಿ ನಮ್ಮ ನಿದ್ರೆಗೆ ಭಂಗ ಬರಬಾರದೆಂದು ನಿನೋಬ್ಬನೇ ನಿನ್ನ ಪ್ರಾಣ ಒತ್ತೆ ಇಟ್ಟು ಅವನನ್ನು ಎದುರಿಸಿದ್ದೆ. ಬೆದರಿಸಿ ಅಟ್ಟಿಸಿಕೊಂಡು ಹೋಗಿ ಓಡಿಸಿದ್ದೆ. ಚಿಕ್ಕಂದಿನಿಂದಲೂ ನೀನು ನಮಗಾಗಿ, ನಮ್ಮ ಮನೆಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ಕೊನೆಯವರೆಗೂ ಎನೂ ಕೇಳದೇ, ಏನಕ್ಕೂ ಅಳದೇ ಖುಷಿ ಖುಷಿಯಾಗೆ ಇದ್ದದ್ದನ್ನು  ನೋಡಿದರೆ ನಾವು ಮಾನವರು  ಚಿಕ್ಕ ಚಿಕ್ಕ ವಿಷಯಕ್ಕೂ ಅಸೂಯೇ, ಆಸೆ ಪಡುವ ಮನೋಭಾವನೆಯನ್ನು ತೊಡೆದುಹಾಕಿಕೊಳ್ಳಲು ನಿನ್ನನು ನೋಡಿ ಕಲಿಬೇಕು ಅನ್ನಿಸುತ್ತೆ.
ಆ ದಿನ ತಪ್ಪು ಮಾಡಿದೆ ಅಂತ ಆಣ್ಣ ಹೊಡೆದ ಒಂದೇಟಿಗೆ  ಸಿಟ್ಟು ಮಾಡಿಕೊಂಡು ಕುಳಿತ ನಿನ್ನನ್ನು ಸಮಾಧಾನ ಮಾಡಲು ನಾನು ಎಷ್ಟು ಹರಸಾಹಸ ಪಟ್ಟಿದ್ದೆ ಅಲ್ವಾ, ಅಬ್ಬಾ!! ನಿನ್ನ ಸಿಟ್ಟನ್ನೂ ನೋಡಿ ಭಯಪಟ್ಟಿದ್ದೆ ನೀನು ಊಟ ಮಾಡಿಲ್ಲ ಅಂತ ನಾನು ಊಟ ಬಿಟ್ಟಿದ್ದೆ, ಆಮೇಲೆ ನನಗಾಗಿ ನೀ ಊಟ ಮಾಡಲು ಒಪ್ಪಿಕೊಂಡಿದ್ದೆ. ಅಷ್ಟೆ ಅಲ್ಲದೇ, ಪಕ್ಕದ ಮನೆಯ ಅಭಿ ಜೊತೆ ಆಟವಾಡಲು ಹೋದಾಗ ಸಣ್ಣ ವಿಷಯಕ್ಕೆ ಗಲಾಟೆಯಾಗಿ ಅವನು ನನಗೆ ಹೊಡೆಯಲು ಬಂದಾಗ ನೀ ಅವನಿಗೆ ಕಚ್ಚಲು ಹೋಗಿ ಹೆದರಿಸಿ ಓಡಿಸಿದ್ದನ್ನೂ ಮರೆಯಲಾಗುತ್ತದೆಯಾ?. ನನಗೆ ಸ್ವಲ್ಪ ನೋವಾದರೂ ಮರುಗುತ್ತಿದ್ದ ನಿನ್ನ ಮಾನವೀಯತೆಯನ್ನು ನಾನು ಎಷ್ಟು ಹೊಗಳಿದರೂ ಕಡಿಮೆಯೇ ಹೌದು.
        ಈಗಲೂ  ನನಗೆ ಅನೇಕ ಕಾರಣಗಳಿಂದ ನೀನು ಹೆಮ್ಮೆಯ ಗೆಳೆಯ ಎನಿಸುತ್ತೆ . ತುಂಬಾ ಚಿಕ್ಕವನಾಗಿದ್ದಾಗ ನಿನ್ನನ್ನು ಅಣ್ಣ ಮನೆಗೆ ಕರೆದುಕೊಂಡು ಬಂದಿದ್ದ. ಆ ದಿನ ನಿನಗೆ ನಾನು ‘ಟಾಮಿ’ ಅಂತ ಇಟ್ಟಿದ್ದೆ ಅಂದಿನಿಂದಲೇ ನೀ ನಮ್ಮೆಲ್ಲರ ಮುದ್ದಿನ ಟಾಮಿ ಮರಿ ಆಗಿದ್ದೆ. ನೀನಿವತ್ತು ಈ ಲೋಕದಲ್ಲಿ ನಮ್ಮ ಜೊತೆ ಇರದಿದ್ದರೂ, ಮನೆ-ಮನದಲ್ಲಿ ಶಾಶ್ವತವಾಗಿ ಉಳಿದಿರುವೆ ಪುಟ್ಟಾ. ನಿನ್ನ ನೆನಪು ಹೃದಯಪಟಲದಲ್ಲಿ ಅಜರಾಮರವಾಗಿ ನೆಲೆಸಿದೆ.  ‘ನಾಯಿ ಮರಿ ನಾಯಿಮರಿ ತಿಂಡಿ ಬೇಕೆ’ ಎನ್ನುವ ಜಿ. ಪಿ ರಾಜರತ್ನಂರವರ ಹಾಡು ಆವಾಗಲೇ ನಾನು ನಿನ್ನ ಎದುರು ಹಾಡಿ ನಿನ್ನನ್ನು ಬಗೆ ಬಗೆಯಾಗಿ ರಂಜಿಸುತ್ತಿದ್ದದ್ದೂ, ‘ನಾಯಿ ಮರಿ ನಿನಗೆ ತಿಂಡಿ ಯಾಕೆ ಬೇಕು?’ ಎಂದು ಪ್ರಶ್ನಿಸುತ್ತಿದ್ದದ್ದೂ ಅದನ್ನೆಲ್ಲಾ ಮರೆಯಲಿಕ್ಕಾಗುತ್ತಾ ನೀನೆ ಹೇಳು. ಎಲ್ಲದಕ್ಕೂ ನಿನ್ನಲ್ಲಿ ನಗುವಿನ ಒಲುಮೆ ಇತ್ತು, ಸೋಜಿಗದ ಉತ್ತರವಿತ್ತು. ಆದರೆ ಏನು ಮಾಡಲಿ ನಮ್ಮ ಈ ಸ್ನೇಹಕ್ಕೆ ಯಾರ ಕಣ್ಣು ಬಿತ್ತೋ ಎನೋ ಆ ದಿನ ನೀನು ಮನೆಯ ಅಂಗಳದಿಂದ ಹೊರ ಹೋದವನು ವಾಪಾಸು ಬಂದಿದ್ದು ಉಸಿರಿರದ ದೇಹದಿಂದಲೇ. ಎಲ್ಲಿ, ಏನಾಯಿತು ಎಂಬುದು ಅರಿಯುವ ಮುನ್ನವೇ ನನ್ನನ್ನು ಅನಾಥ ಮಾಡಿ ನೀ ಕಾಣದೂರಿಗೆ ಪಯಣಿಸಿದ್ದೆ. ಅಂದಿನಿಂದ ಇಂದಿನವರೆಗೂ ಪ್ರತಿದಿನ ಯಾರ ಮನೆಯ ನಾಯಿಮರಿ ಕಂಡರೂ ಅಲ್ಲಿ ನಿನ್ನನ್ನೇ ಅರಸುವೇ, ಮುಂದಿನ ಏಳೇಳು ಜನ್ಮದಲ್ಲೂ ನಿನ್ನ ಗೆಳೆತನ ನನಗೆ ಸಿಗಲಿ, ಮತ್ತೊಮ್ಮೆ ನಮ್ಮ ಮನೆಯಲ್ಲೇ ಹುಟ್ಟಿ ಬಾ...ಎಂದು ಅನುದಿ ಆಶಿಸುವೆ ಕಣೋ..

“ಎಂದೆಂದೂ ನಿನ್ನ ನೆನಪಲ್ಲೇ ಇರುವ ನನ್ನ ನಲ್ಮೆಯೇ ನಿನ್ನ ವ್ಯಕ್ತಿತ್ವ ತೋರಿಸುವ ಕನ್ನಡಿ...
ನನ್ನ ಬದುಕಿನ ಪುಸ್ತಕದ ಪ್ರಾರಂಭದಲ್ಲೇ ಸದಾ ಇರುತ್ತದೆ ನಿನ್ನದೇ ಮುನ್ನುಡಿ...”




ಹೆಣ್ಣು-4

     ಮಹಿಳೆ ಇಂದು ಎಲ್ಲಾ ರಂಗದಲ್ಲಿ ಮುಂಚೂಣಿಯಲ್ಲಿದ್ದರೂ ಹೆಣ್ಣು ಮಕ್ಕಳ ಸ್ಥಿತಿಗತಿ, ಸಮಾನತೆ ಎಲ್ಲಾ ವರ್ಗದಲ್ಲೂ, ಎಲ್ಲಾ ದೇಶದಲ್ಲೂ ಸುಧಾರಣೆಯನ್ನು ಕಂಡಿಲ್ಲ. ಮಹಿಳೆಯ ವಿಚಾರದಲ್ಲಿ ಕೌಟಂಬಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಮೌಲ್ಯಗಳು ಬದಲಾಗದ ಹೊರತು ಅವರ ರಕ್ಷಣೆಯೂ ಅಷ್ಟಕಷ್ಟೆ. ಗಂಡು ಹೆಣ್ಣನ್ನು ಸಮಾನವಾಗಿ ಕಾಣಬೇಕೆಂದು ಭಾಷಣ ಬಿಗಿಯುವವರು ಎಲ್ಲಾ ಕಡೆಯೂ ಸಿಗಬಹುದು ಆದರೆ ಹೊರಗಡೆಯಾಗಲಿ, ಮನೆಯಲ್ಲಾಗಲಿ ಗಂಡು ಹೆಣ್ಣಿನ ಮಧ್ಯೆ ತಾರತಮ್ಯ ನಿಲ್ಲಿಸಲು ನಾವು ಎಷ್ಟು ಜವಾಬ್ಧಾರಿಯ ಕೆಲಸ ಮಾಡುತ್ತಿದ್ದೇವೆ…!?ಊಹೂ!!! ಉತ್ತರವಿಲ್ಲ...

ಭಾರತೀಯ ಪರಂಪರೆಯು ಅನಾಧಿಕಾಲದಿಂದಲೂ ಪುರುಷರು ಮತ್ತು ಮಹಿಳೆಯರ ವಿಷಯದಲ್ಲಿ, ಜೀವನದ ಎಲ್ಲಾ ಅಂಶಗಳಲ್ಲೂ ತಾರತಮ್ಯತೆಯನ್ನು ಕಾಣುತ್ತಾ ಬಂದಿದ್ದು, ಇದು ಶೋಷಣೆಯ ಹೆಸರಲ್ಲಿ ದಿನಂಪ್ರತಿ ನಮ್ಮೆದುರು ಬಿಂಬಿತವಾಗುತ್ತಾ ಇದೆ. ಹೆಣ್ಣಿನ ಮೇಲೆ ಎಲ್ಲಿಯವರೆಗೆ ಶೋಷಣೆಯೆಂಬ ಪೆಡಂಭೂತ ಇರುತ್ತದೋ ಅಲ್ಲಿಯವರೆಗೆ ಅವಳಿಗೆ ಪೂರ್ಣ ಪ್ರಮಾಣದ ರಕ್ಷಣೆ ದೊರಕುವುದು ಅಕ್ಷರಸಹ ಸುಳ್ಳು.
ಹೆಣ್ಣಿನ ರಕ್ಷಣೆ ಹೆಣ್ಣಿನ ಕೈಯಲ್ಲೇ ಇರುವುದಂತು ಸತ್ಯ ಹಾಗೆಯೇ ಅದನ್ನವರು ಅರಿತುಕೊಂಡಾಗ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯ. ಇನ್ನೊಂದು ವಿಚಾರದಲ್ಲಿ ಸರಕಾರ ಮತ್ತು ಸಮಾಜ ಇವೆರಡೂ  ಹೆಣ್ಣಿನ ದೌರ್ಜನ್ಯದ ಅಪರಾಧದಲ್ಲಿ ಸಮಪಾಲು ಹೊಂದಿದೆ ಎಂದರೆ ತಪ್ಪಿಲ್ಲ. ನಮ್ಮಲ್ಲಿ ಅನೇಕ ಶಾಸನಗಳಿವೆ ವರ್ಷಂಪ್ರತಿ ಅವುಗಳು ಬದಲಾವಣೆಗಳನ್ನು ಕಾಣುತ್ತಿವೆ ಆದರೆ ಅದರಿಂದ ಶಿಕ್ಷೆಯ ಪ್ರಮಾಣವನ್ನು ಶಾಸನ ಹೆಚ್ಚು ಮಾಡಿತೆ ಹೊರತು, ಸಮಾಜದಲ್ಲಿ ಹೆಣ್ಣಿಗೆ  ರಕ್ಷಣೆ ಮಾತ್ರಾ ದೊರಕುತ್ತಿಲ್ಲ.
ಹೆಣ್ಣಿನ ರಕ್ಷಣೆ ಅರ್ಧ ಅವಳ ಹೊರೆಯಾದರೆ ಇನ್ನರ್ಧ ಅವಳ ಕುಟುಂಬ ಮತ್ತು ಸಮಾಜದ್ದಾಗಿದೆ. ಜೊತೆಗೆ ನಮ್ಮ ನೆಲದ ಕಾನೂನನ್ನು ಇನ್ನಷ್ಟು ಬಲಗೊಳಿಸುವ ಕಾರ್ಯಕೂಡ ಆಗಬೇಕಿದೆ, ಕಾನೂನು ಮತ್ತು ಸಮಾಜ ನೋಡುವ ರೀತಿ ಬದಲಾಗಬೇಕು. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ನಿರ್ಭಯವಾಗಿ ದೂರನ್ನು ನೀಡುವಂತಾಗಬೇಕು. ದೂರು ತಕ್ಷಣವೇ ತನಿಖೆಯನ್ನು ಆರಂಭಿಸಬೇಕು ಸಮಾಜದಲ್ಲಿ ಅವಳು ಮತ್ತೆ ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಸೂಕ್ತ ವಾತಾವರಣವನ್ನು ನಿರ್ಮಿಸಿಕೊಡಬೇಕು. ಹೆಣ್ಣನ್ನು ಕೇವಲ ಭೋಗದ ವಸ್ತವೆಂದು ನೋಡುವ ಪ್ರಪಂಚಕ್ಕೆ ಆಕೆ ನಿಭಾಯಿಸುವ ಪಾತ್ರಗಳ ಬಗ್ಗೆ ಅರಿವಾಗಬೇಕು. ಅವಳ ಮೇಲೆ ಆಕ್ರಮಣ, ಶೋಷಣೆ ಕಂಡಲ್ಲಿ ಅದನ್ನೆದುರಿಸಿ ನ್ಯಾಯ ಪಡೆಯುವಂತಾಗಬೇಕು
 ಪ್ರತಿಯೊಬ್ಬ ಮಹಿಳೆಯಲ್ಲೂ ಶಕ್ತಿ, ಲಾವಣ್ಯ, ಧೈರ್ಯ, ಕರುಣೆ, ಸಮೃದ್ಧಿ, ಕರುಣೆ, ಮೌಲ್ಯ, ಜ್ಞಾನ ಮತ್ತು ದೂರದೃಷ್ಟ್ಟಿಗಳ ಸರಿಯಾದ ಸಮ್ಮಿಶ್ರಣವಿದೆ. ದಿವ್ಯತೆಯ ಅರ್ಧ ಪುರುಷ ಹಾಗೂ ಅರ್ಧ ಸ್ತ್ರೀಯಾಗಿರುವ ಅರ್ಧನಾರೀಶ್ವರಿಯನ್ನು ಕಲ್ಪನೆಯಲ್ಲೇ ಪೂರ್ವಜರು ತೋರಿಸಿರುವುದು ಸಮಾನತೆಯ ಅಭಿವ್ಯಕ್ತಿಯೇ ಹೊರತು ಉತ್ಫ್ರೇಕ್ಷೆಯಲ್ಲ. ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಆದ್ದರಿಂದ ಹೆಣ್ಣಿನ ರಕ್ಷಣೆಯಲ್ಲಿ ನಾವು ಪಾಲುದಾರರಾಗೋಣ.