Friday 6 May 2016

ಸಿರಿ ಬುಲೆಟ್-‘ಧರ್ಮೋ ರಕ್ಷತಿ ರಕ್ಷಿತಃ’


ಧರ್ಮಗಳ ಧ್ವಂಧ್ವ...


 ಒಂದಿಷ್ಟು ಧ್ವಂಧ್ವ ನಿಲುವುಗಳಿವೆ...
     ಮತ ಧರ್ಮಗಳ ನೆಲೆಯಲ್ಲಿ ನಿಂತರೆ ಪ್ರಮುಖವೆನಿಸಿರುವ ಒಂದೊಂದು ಮತಗಳು ಒಂದೊಂದು ಇತಿಹಾಸ ನೀಡುತ್ತವೆ. ಪ್ರಸಿದ್ಧ ಇತಿಹಾಸಕಾರ  ಇ.ಎಚ್ ಕಾರ್, ‘ಇತಿಹಾಸವೆನ್ನುವುದು ಕೆಲವೊಮ್ಮೆ ಅಂತಿಮ ಸತ್ಯದ ಅನಸ್ತಿತ್ವ ಎನ್ನುವ ನೆಲೆಯಲ್ಲಿ ಐಕ್ಯವಾಗುವುದರಿಂದ ವಾದ ವಿವಾದಗಳು ಸರ್ವೇಸಾಮಾನ್ಯವಾಗಿ ಹಾಸುಹೊಕ್ಕಾಗುತ್ತವೆ’ ಎನ್ನುತ್ತಾರೆ. ಬಹುಶಃ ಧರ್ಮಗಳ ನೆಲೆಯೂ ಅಂತಿಮದಲ್ಲಿ ಧ್ವಂಧ್ವವಾಗಿ ಅನಸ್ತಿತ್ವ ಎನಿಸುವುದರಲ್ಲಿ ಯಾವ ಸಂಶಯವಿಲ್ಲ...
ಹುಟ್ಟಿರುವ ಪ್ರತಿ ಮನುಷ್ಯನೂ ತನ್ನದೇ ಜಾತಿ, ಮತ, ಧರ್ಮ, ಸ್ವಭಾವ ಹೊಂದುತ್ತಾನಾದರೂ, ವಿಶ್ವಕ್ಕೆ ಯಾವ ಮತ ಸೂಕ್ತ!?, ಅಂತಿಮವಾಗಿ ವಿಶ್ವ ಯಾವ ಮತಕ್ಕೆ ಸೇರಿದ್ದು!?, ಇತ್ಯಾದಿಗಳ ಬಗ್ಗೆ ಯಾರಲ್ಲಿಯೂ ಉತ್ತರವಿಲ್ಲ. ಒಂದೊಂದು ದೇಶದಲ್ಲಿ ಒಂದೊಂದು ಮತ ಪ್ರಬಲವಾಗಿರುತ್ತೆ. ಸರಿದೂಗಿಸಿ ನೋಡಿದರೆ ಯಾರೂ ಮೇಲಲ್ಲ-ಕೀಳಲ್ಲ. ಎಲ್ಲರೂ ಒಂದೇ. ಆದರೆ ವೈಯಕ್ತಿಕವಾದ ಧರ್ಮ ಜಾತಿ, ಮತ, ಸ್ವಾಭಾವದಂತೆ ಧ್ವಂಧ್ವಗಳ ನೆಲೆಯಲ್ಲಿ ಧರ್ಮಗಳ ಮೇಲುಕೀಳನ್ನು ತೂಗುಹಾಕಬಹುದಾ!? ಎನ್ನುವುದೇ ಎಲ್ಲರೂ ಇಂದು ಅರಿಯಬೇಕಾಗಿರುವ ಅಧ್ಯಯುತ ಪ್ರಶ್ನೆ...
ಒಂದಿಷ್ಟು ಧರ್ಮೀಯರ ಪಂಗಡಗಳಿವೆ, ಒಂದಿಷ್ಟು ವಾದಕ್ಕಿಳಿಯುವ ತಂಡಗಳಿವೆ,  ಸೋಷಿಯಲ್ ಮೀಡಿಯಾಗಳಲ್ಲಂತೂ ಜಗಳವಾಡುತ್ತಾ, ನಾಗರೀಕತೆ ಮರೆತು ಕಚ್ಚಾಡುವ ಗುಂಪುಗಳಿವೆ. ಅವರವರಿಗೆ ಅವರವರ ಮಾತುಗಳು, ನಿಲುವುಗಳೇ ದೊಡ್ಡದು. ವಿಪರ್ಯಾಸವೆಂದರೆ, ಎರಡು ಪಂಥೀಯರು ಕಚ್ಚಾಡುತ್ತಾರೆ ಆದರೆ ಸೋಲುವುದಿಲ್ಲ...
ನನಗೂ ಗೊತ್ತು!!, ಆಧುನಿಕ ಜಗತ್ತಿನಲ್ಲಿ ಬದಲಾಗುತ್ತಿರುವ ಸಮಾಜದಲ್ಲಿ ಜನರ ಆದ್ಯತೆಗಳು ಬದಲಾವಣೆ ಆಗುತ್ತಿರುವಂತೆ ಸಾಮಾಜಿಕ ವ್ಯವಸ್ಥೆಗಳಲ್ಲಿ, ಧಾರ್ಮಿಕ ವ್ಯವಸ್ಥೆÉಗಳಲ್ಲಿ, ಹಾಗೂ ಪ್ರತಿಯೊಬ್ಬರ ಅಭಿವ್ಯಕ್ತ್ತ ಸ್ವಾತಂತ್ರ್ಯಗಳಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಎಲ್ಲವೂ ಮೇಲ್ನೋಟಕ್ಕೆ ಬದಲಾದಂತೆ ಕಂಡರೂ, ಒಳಗೆ ಬೆಂಕಿ ಉರಿಯುತ್ತಲೇ ಇರುತ್ತದೆ. ಅವಕಾಶವಾದಾಗಲೆಲ್ಲ ತನ್ನ ನಾಲಗೆಯನ್ನು ಚಾಚುತ್ತಾ ಸಮಾಜದಲ್ಲಿ ಅಸಹನೆಯನ್ನು ಸೃಷ್ಟಿಸುತ್ತಲೇ ಇರುತ್ತದೆ. ಧರ್ಮದ ಆಚರಣೆಗಳು ಸಿದ್ಧಾಂತಗಳು ಯಾವ ಕಾಲಕ್ಕೂ ಬದಲಾಗಲಾರದೇನೋ, ಅನ್ನುವಷ್ಟು ಜಿಡ್ಡುಗಟ್ಟಿದೆ. ಮೂಲಭೂತವಾದಿ ಮನಸ್ಸುಗಳಿಗೆ ಬದಲಾವಣೆ ಬೇಕಿಲ್ಲ. ಅದಕ್ಕೆಂದೇ ಸ್ಥಾಪಿತ ಹಿತಾಸಕ್ತಿಗಳ ಮೂಲಕ ಸದಾ ಕಾಲಕ್ಕೂ ಅದನ್ನು ಜೀವಂತವಾಗಿಡಲು ಯತ್ನಿಸುತ್ತಲೇ ಇದೆಯಾದ್ದರಿಂದ ಬದಲಾವಣೆಯ ನಿಯಮ ಅದಕ್ಕೆ ಅನ್ವಯಿಸದೆಂದು ವಿಷಾದದಿಂದಲೇ ಹೇಳಬೇಕಾಗಿದೆ...

     ಪ್ರಮುಖ ಮೂರು ಧರ್ಮಗಳನ್ನೇ ಕೈಗೆತ್ತಿಕೊಂಡರೆ :

ಮೊದಲನೆಯದು ಹಿಂದೂ ಧರ್ಮ:
            ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮವಾಗಿದ್ದು, ಅದು ಅನುಯಾಯಿಗಳಿಂದ ಹಲವು ವೇಳೆ ಶಾಶ್ವತ ಧರ್ಮವೆಂಬ ಅರ್ಥವನ್ನು ಕೊಡುವ ಸಂಸ್ಕøತ ಪದಗುಚ್ಚವಾದ ‘ಸನಾತನ’ ಧರ್ಮವೆಂದು ನಿರ್ಧೇಶಿಸಲ್ಪಡುತ್ತದೆ. ಸಂಕೀರ್ಣದೃಷ್ಟಿಗಳ ವೈವಿಧ್ಯಕ್ಕೆ ಸ್ಥಳ ಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ ಪ್ರಕಾರಗಳು, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ, ವೈಷ್ಣವ ಪಂಥದಲ್ಲಿರುವÀ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ‘ಭಗವದ್ಗೀತೆ’ಯನ್ನು ಆರಾಧಿಸುವ ಹಿಂದೂಗಳು ಯೋಗಿಕ ಸಂಪ್ರದಾಯ ಮತ್ತು ಕರ್ಮದ ಕಲ್ಪನೆಯನ್ನು, ಆಧರಿಸಿ ದೈನಿಕ ಸದಾಚಾರದ ವಿಶಾಲವಾದ ವೈವಿಧ್ಯದಿಂದ ಹಿಂದೂ ಧರ್ಮವು ಏಕದೇವತಾವಾದ, ಬಹುದೇವತಾವಾದ, ಸರ್ವದೇವತಾವಾದ, ಸರ್ವಬ್ರಹ್ಮವಾದ, ಅಧ್ವೈತವಾದ ಮತ್ತು ನಿರೀಶ್ವರವಾದಗಳಿಗೆ ವ್ಯಾಪಿಸುವ ನಂಬಿಕೆಗಳುಳ್ಳ ಕಲ್ಪನೆ ಈ ಧರ್ಮದಲ್ಲಿದ್ದು, ಉತ್ಕನನ ಅಧ್ಯಯನಗಳ ಪುರಾವೆಯಂತೆ ಕಿ.ಪೂ 5000 ವರ್ಷಗಳಿಗಿಂತ ಹಿಂದಿನದೆಂದು ಹೇಳಲಾಗುತ್ತದೆ.
ಎರಡನೆಯದಾಗಿ ಕ್ರೈಸ್ತ ಧರ್ಮ:
               ಕ್ರೈಸ್ತ ಧರ್ಮ ಏಸುಕ್ರಿಸ್ತನ ಜೀವನ ಮತ್ತು ಉಪದೇಶಗಳ ಮೇಲೆ ಆಧಾರಿತವಾದ, ಏಕದೇವತಾವಾದವನ್ನು ಅನುಸರಿಸುವ ಧರ್ಮಗಳಲ್ಲಿ ಒಂದು. 2001ರ ಅಂದಾಜಿನ ಪ್ರಕಾರ ಪ್ರಪಂಚದಲ್ಲಿ 2.1 ಬಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಜಗತ್ತಿನ ಅತೀ ದೊಡ್ಡದು ಎಂದು ಕ್ರೈಸ್ತರು ವಾದಿಸುತ್ತಾರೆ. ಐತಿಹ್ಯ ನೋಡಿದರೆ ಈ ಧರ್ಮಕ್ಕೆ 2000 ವರ್ಷಗಳ ಇತಿಹಾಸವಿದೆ. ‘ಜಗತ್ತಿಗೆ ಒಂದೇ ಧರ್ಮ, ಒಂದೇ ದೇವರು, ಅವರೇ ನಮ್ಮ ಏಸು’ ಎನ್ನುವ ಕ್ರೈಸ್ತ ಧರ್ಮೀಯರು ‘ಪವಿತ್ರ ಬೈಬಲ್’ನ ಕಟ್ಟು ಪಾಡಿನಲ್ಲಿ ಬದುಕುತ್ತಾ, ತಮ್ಮ ಪಂಗಡವನ್ನು ಬೆಳೆಸುತ್ತಾ ಮತ ಮಾಂತ್ರಿಕರಾಗಿದ್ದಾರೆ.

ಮೂರನೇಯದು ಇಸ್ಲಾಂ ಧರ್ಮ :
           ಅಲ್ಲಾನ ಅನುಸರಣೆ ಮಾಡುವುದು, ಆತನಿಗೆ ವಿಧೇಯತೆ ತೋರುವುದು ಮತ್ತು ಸರ್ವಸ್ವವನ್ನು ಆತನಿಗಾಗಿ ಸಮರ್ಪಿಸುವುದು  ಇಸ್ಲಾಂಮಿಕ್ ಗುಣ ಧರ್ಮಗಳಲ್ಲೊಂದು. ‘ಈ ಭೂಮಿಯ ಸೃಷ್ಟಿಕರ್ತ ಅಲ್ಲಾ, ನಮ್ಮದು ಏಕದೇವವಿಶ್ವಾಸ, ಅದುವೆ ನಮ್ಮ ಮೂಲಮಂತ್ರ, ವಿಶ್ವದ ಅಧಿಪ ಅವನೇ’ ಎನ್ನುವ ಇವರು ‘ಕುರಾನ್’  ಗ್ರಂಥದ ಮಾರ್ಗದರ್ಶನದಲ್ಲಿ ಧರ್ಮ ಪರಿಪಾಲನೆಯಲ್ಲಿರುತ್ತಾರೆ.

    ಮೇಲಿನ ಮೂರು ಧರ್ಮಗಳಲ್ಲಿ ಅನೇಕಾನೇಕ ಉಪಧರ್ಮಗಳಿದ್ದರೂ, ಉಪಜಾತಿಗಳ ಮೂಲ ಮೇಲಿನ ಮೂರರಲ್ಲಿ ಒಂದಾಗಿರುತ್ತದೆ. ಎಲ್ಲರಲ್ಲಿಯೂ ಅವರದೇ ಕಟ್ಟುಪಾಡುಗಳಿರುತ್ತವೆ, ಧ್ಯೇಯಗಳಿರುತ್ತವೆ, ಪೂರ್ವಜರು ಹಾಕಿಕೊಟ್ಟ ಮಾರ್ಗಗಳಿರುತ್ತವೆ. ಮೂರು ಧರ್ಮಿಯರಲ್ಲೂ ಬೇರೆ ಬೇರೆ ದೇವರುಗಳಿವೆ, ಶಾಂತಿಯಿದೆ, ಹಿಂಸೆಯಿದೆ, ಕ್ರೌರ್ಯವಿದೆ, ಭೀಭತ್ಸವಿದೆ. ಒಂದು ಧರ್ಮೀಯರಿಗೆ ಇನ್ನೊಂದು ಧರ್ಮ ಆಗಲ್ಲ. ಅವರು ಮಾಡಿರುವುದು ಇವರಿಗೆ ಸರಿ ಎನಿಸಲ್ಲ. ಮೊದಲೇ ಹೇಳಿದ ಪದದಂತೆ ಅಂತಿಮ ಸತ್ಯದ ಅನಸ್ತಿತ್ವದ ವಾದದಲ್ಲಿ ಧರ್ಮಗಳು ಧ್ವಂಧ್ವಕ್ಕೆ ಸಿಲುಕಿ ಸಂಕಷ್ಟಗೊಳಿಸುವುದು ಹೀಗೆಯೇ ಅಲ್ವಾ...

         
 ನಮ್ಮದೇ ದೇಶದ ವಿಚಾರಕ್ಕೆ ಬಂದರೆ 5000 ವರ್ಷಗಳಿಗಿಂತಲೂ ಹಳೆಯದಾದ ಹರಪ್ಪ ಮೊಹಂಜೋದಾರೋ ಸಂಸ್ಕøತಿ ಚಿಮ್ಮಿದಾಗ ಹಿಂದುಗಳಿಗೆ ಸುವರ್ಣ ಸಂಭ್ರಮದ ಗರಿ ಮೂಡುತ್ತದೆ!.. ತಮ್ಮ ಅನುಯಾಯಿಗಳ ಬಳಗ ದೊಡ್ಡದಾಗಿ ಬೆಳೆಯುತ್ತಿದೆ, ಕೋಟಿಗೆ ಮೀರಿದೆ ಅಂದೆನಿಸುತ್ತಿರುವಾಗ ಕ್ರೈಸ್ತರು ಅಂಕೆ ಮೀರಿದ್ದಕ್ಕೆ ಖುಷಿಯಾಗುತ್ತಾರೆ!.. ತಮ್ಮ ಪ್ರಾಬಲ್ಯದಲ್ಲಿ ಇನ್ನೊಬ್ಬರನ್ನು ಹತೋಟಿಗೆ ತೆಗೆದುಕೊಂಡು ಊರಿಗೆ ಊರನ್ನೆ ಬೆಳೆಸಿಕೊಳ್ಳುತ್ತಿರುವಾಗ ಮುಸ್ಲಿಂಮರು ಮಜವಾಡುತ್ತಾರೆ!..
ಐತಿಹಾಸಕವಾಗಿ ನೋಡೋದಾದರೆ ಭಾರತದ ಬಗ್ಗೆ ಮಾತನಾಡುವಾಗ ಹಿಂದುತ್ವ ಬಿಟ್ಟು ಮಾತನಾಡಲಾಗುವುದಿಲ್ಲ. ಯಾಕೆಂದರೆ ಈ ಧರ್ಮದ ಉಗಮವಾಗಿದ್ದೇ ಭರತಖಂಡದಲ್ಲಿ. ಇಲ್ಲಿ ಹಿಂದೂ ಧರ್ಮವೇ ಉಪಖಂಡದ ಪ್ರಧಾನ ಎಂದರೆ ತಪ್ಪಿಲ್ಲ. ಬೌದ್ಧ ಜೈನ ಪಂಥಗಳ ದೇವತೆಗಳು, ಪುರಾಣಗಳು, ದೇವಾಲಯಗಳಲ್ಲಿ ಹಿಂದೂ ಧರ್ಮದ ಸಾಮ್ಯತೆ ಪ್ರಭಾವಗಳು ಧಾರಾಳವಾಗಿ ಕಾಣುತ್ತವೆ. ಧರ್ಮದ ಉದಾತ್ತತೆಯಲ್ಲಿ ಹಿಂದುತ್ವ ದೊಡ್ಡದಾದರೂ, ಅನೇಕ ಮಹಾನುಭಾವರೇ ಹಿಂದೂ ಜಾತಿ, ಹಿಂದೂ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ಮರೆಯುತ್ತಾ ಅದನ್ನು ಅಪಮೌಲ್ಯಗೊಳಿಸುತ್ತಿದ್ದಾರೆ. ಧರ್ಮಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆ. ನಾವೇ ಸೃಷ್ಠಿಸಿಕೊಂಡಿದ್ದನ್ನು, ಕಚ್ಚಾಡಿಕೊಂಡು ಕೊಲ್ಲುತ್ತಿದ್ದೇವೆ!!. ಜಗತ್ತನ್ನು ಮಾರ್ಮಿಕವಾಗಿ ನೋಡಿದರೆ ಎಲ್ಲವೂ ಒಂದೇ ಎನಿಸುತ್ತೆ.., ಕಣ್ಮುಚ್ಚಿದರೆ ಶೂನ್ಯ ಅಡ್ಡಾಡುತ್ತೆ!!. ಇದು ಏಟು ನೀಡುತ್ತಿರುವುದು ಅವರವರ ಪರಂಪರೆಗೆ, ಸಂಸ್ಕøತಿಗೆ!!.

          ಭಾರತೀಯ ಪರಂಪರೆಯನ್ನು ಯಾವುದೋ ಒಬ್ಬ ಚಕ್ರವರ್ತಿ, ಒಬ್ಬ ಮಹರ್ಷಿ, ಒಬ್ಬ ಖಾನ್, ಒಬ್ಬ ಪ್ರವಾದಿ ಕಟ್ಟಿಕೊಟ್ಟಿದ್ದಲ್ಲ!. ಅದು ಕೆಲವೇ ಮೇಲ್ವರ್ಗದ ಸ್ವತ್ತೂ ಅಲ್ಲ!. ವೇದಗಳಲ್ಲಿ ಉಲ್ಲೇಖಿತವಾಗಿರುವಂತೆ ಅದು ಪ್ರತಿಯೊಂದು ವರ್ಗದ, ವರ್ಣದ ಮಾನವನ ಕೊಡುಗೆ...

ಗೋಪಾಲಕೃಷ್ಣ ಅಡಿಗರು ಹೇಳುವಂತೆ..,
“ಇದು ಬಾಳು ನೋಡು, ಇದ ತಿಳಿದೆನೆಂದರೂ,
ತಿಳಿದ ಧೀರನಿಲ್ಲ
ಹಲವು ತನದ ಮೈಮರೆಸುವಾಟವಿದು
ನಿಜವೂ ತೋರದಲ್ಲ...”


ನಿಜವಾಗಿಯೂ ಹೌದು ಎನಿಸುತ್ತಿದೆ. ಈ ಧ್ವಂಧ್ವಗಳು ಹೀಗೆ ಮುಂದುವರಿಯುತ್ತಿದ್ದರೆ ನಾವು ನಾವೇ ಕಚ್ಚಾಡುತ್ತಾ ಸಾಯಬೇಕಾಗುತ್ತದೆ!. ಇದು ಬಾಳು, ಇಲ್ಲಿ ಎಲ್ಲ ತಿಳಿದ ಧೀರನಿಲ್ಲ, ಎಲ್ಲ ಕಂಡರೂ ಯಾವುದು ಅಂತಿಮ ನಿಜವಲ್ಲ, ಮೈಮರೆಸುವಾಟವಷ್ಟೇ..!

      ಸನಾತನ ಪರಂಪರೆಯನ್ನು ಹೊಂದಿರುವ ಭಾರತ ದೇಶದಲ್ಲಿ ಅನೇಕ ಧಾರ್ಮಿಕ ಪಂಥಗಳಿವೆ. ಅದಕ್ಕನುಸಾರವಾಗಿ ಜನರು ಅವರಿಗಿಷ್ಟವಾದ ಧರ್ಮವನ್ನು ಅವರದ್ದೇ ಚೌಕಟ್ಟಿನಲ್ಲಿ ಅನುಸರಿಸಿಕೊಂಡು ಬರುತ್ತಿದ್ದಾರೆ. ಅದಕ್ಕೆ ಯಾವ ಅಭ್ಯಂತರವೂ ಇಲ್ಲ. ದೇಶದ ಸಂವಿಧಾನದಲ್ಲೂ  ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಸಮಸ್ಯೆ ಇರುವುದು ಅದರಲ್ಲಲ್ಲ. ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾದ ಕ್ರಿಯೆಗಳು ಸಾರ್ವತ್ರಿಕವಾಗಿ ವ್ಯಕ್ತವಾಗುವ ಹೇರಿಕೆಯಂತಹ ಕೃತ್ಯಗಳು ನಡೆದಾಗ, ಪ್ರಶ್ನಿಸುವ ಅನಿವಾರ್ಯ ಕೈಗೊಂಡಾಗ, ಮತ್ತೆ ಜಾತಿ, ಧರ್ಮ, ಪಂಥಗಳ ಮಾತು ಕೇಳಿ,ತಿಳುವಳಿಕೆ ಹೊಂದಿದವರನ್ನೂ, ಅವಿವೇಕರನ್ನಾಗಿಸಿ ಮತ್ತೆ ಧ್ವಂಧ್ವಕ್ಕೆ ಸಿಲುಕಿಸುತ್ತವೆ!.. ಒಂದು ಮಾತು ನಿಜ... ಮುಂದಿನ ದಿನಗಳಲ್ಲಿ ನಾವು ಕಟ್ಟಿಕೊಂಡಿರುವ ಧರ್ಮಗಳನ್ನು ಧರ್ಮಗಳೇ ರಕ್ಷಿಸಬೇಕಾಗಿದೆ...
ಹುಷಾರಾಗಿರಿ...ನಿಮ್ಮ ಧರ್ಮದ ವಿಚಾರಕ್ಕೆ ಯಾರಾದರು ಬಂದರೆ ನಿಮಗೂ ಸಿಟ್ಟು ಬರಬಹುದು!!.

No comments:

Post a Comment