Wednesday, 23 December 2015

ಮಳೆಯ ಹನಿಯಲ್ಲಿ ಕೂತು...


“ಎಲ್ಲ ಮರೆತು ನೆವವ ಹೂಡಿ ಅಡಗಿ ಕುಳಿತ ನೆನಪೆ..,
ಗುಳಿತೋಡಿ ಎದೆಯಿಳಿದು ಕುಳಿತು ಮನ ಕುಣಿಸುತಿರುವೆ ಏಕೆ ನೆನಪೆ...!?”
ನಿಜ...ತಮಿಳುನಾಡಿನಲ್ಲೂಂಟಾದ ಚಂಡಮಾರುತದ ನಿಮಿತ್ತ ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆ ವರ್ಷಧಾರೆ ದೀರ್ಘ ಎರಡು ಮೂರು ದಿನಗಳು ಸುರಿದಿತ್ತು. ಈ ಸಮಯ ನೆರೆ ಬರುವಂತೆ ಹೊಡೆಯುವ ಮಳೆಗಾಲ ಅಲ್ಲ. ಆದರೂ ಎಡೆಬಿಡದ ದುಂಬು ದುಂಬು ಮಳೆ ಎಲ್ಲೆಲ್ಲೂ ಚಳಿ ಹಿಡಿಸಿದ್ದಂತೂ ನಿಜ. ಧರಿತ್ರಿ ಈ ವರ್ಷ ಸಿಂಚನದಿಂದ ಚೇತನಗೊಂಡಿದ್ದಾಳೆ. ಬೇಸಿಗೆಯಂತೆ ಸೂರ್ಯನ ಧಗೆಯಿಂದ ದಹಿಸುತ್ತಿದ್ದ ಭೂಮಿ ಈಗ ತಂಪಾಗಿದೆ. ಪರಿಚಿತರೊಬ್ಬರು ಹೇಳುವಂತೆ ಸುಮಾರು 18 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿಯ ಹವಮಾನ ಸುಮಾರು ತಿಂಗಳುಗಳ ಕಾಲ ಇತ್ತಂತೆ. ಬಹುಶಃ ಇದೀಗ ಮತ್ತೇ ಹಾಗೆ ಆದಂತಿದೆ. ಅಬ್ಬಾ ಭೂಮಿಗೆ ಸೂರ್ಯನ ಕಿರಣವೇ ಇಲ್ಲ, ಮಂಜಿನಂತೆ ಸದಾ ಪಿರಿ ಪಿರಿಸುವ ಮಳೆ ಎಲ್ಲರಿಗೂ ಸ್ವೆಟರ್ ಹಾಕಿಸುವಂತೆ ಮಾಡಿತ್ತು. ಯಾರಿಗೆ ಫೋನ್ ಮಾಡಿದರೂ ಅಬ್ಭಾ ಏನು ಚಳಿ ಸಾಕಾಗಿ ಹೋಯ್ತು ಅನ್ನಿಸುವಷ್ಟು ಮಳೆರಾಯ ಬೆಂಗಳೂರಲ್ಲಿ ಚಳಿ ಬೀಸಿ ಹೋಗಿದ್ದ. ಇವಿಷ್ಟು ಒಂದು ಕಡೆಯ ವಿಷಯವಾದರೆÉ ಇಂತಹ ಮಳೆ ಚಳಿಯಲ್ಲೂ ಅಡಗಿ ಕುಳಿತ ಭಾವನೆಗಳು ಮತ್ತೆ ಗರಿಗೆದರಿ ಏದೆಯಲ್ಲಿ ಕುಳಿತದ್ದು ನನ್ನನ್ನು ಇನ್ನಷ್ಟೂ ಮೋಹಕತೆಗೆ ಜಾರಿಸಿ ನೆನಪ ತೇರಲ್ಲಿ ಒಂದು ಮೆರವಣಿಗೆ ಕರೆದುಕೊಂಡು ಹೋಗಿಯೇ ಬಿಟ್ಟಿತು...
ಅದೊಂದು ಸಂಭ್ರಮ...
ಬಾಲ್ಯದಿಂದ ಹಿಡಿದು ಇಂದಿನ ತನಕದ ಹಲವು ನೆನಪುಗಳು ಮಳೆಗಾಲದೊಂದಿಗೆ ಯಾವಾಗಲೂ ಮರುಕಳಿಸುತ್ತವೆ. ಬಹುಶಃ ಇದಕ್ಕೆ, ಹಿರಿಯರು ಹೇಳಿರಬೇಕು ವರ್ಷ ಋತುವಿಗೆ ಸೋಲದ ಮನಸ್ಸುಗಳೇ ಇರಲಾರವು ಎಂದು.
ಬಾಲ್ಯದಲ್ಲಿ ಮಳೆಯೊಂದಿಗೆ ಮಾಡಿದ ಅದೆಷ್ಟೋ ಮೋಜುಗಳು ಮೊನ್ನೆ ನೆನೆಪುಗಳ ಪುಟ ತೆರೆಯಿತು. ಮೊದಲ ರಭಸದ ಮಳೆಗೆ ತುಂಬುತ್ತಿದ್ದ ಮನೆಯ ಮುಂದಿನ ತೋಡುಗಳು, ಹರಿಯುವ ನೀರಿನಲ್ಲಿ ಮುಳುಗಿ ಆಟವಾಡಿ ಮೈರೆತು ಒದ್ದೆಯಾಗಿತ್ತಿದ್ದ ಸಂಧರ್ಭಗಳು, ಕಪ್ಪೆಗಳನ್ನು ಮೀನುಗಳೆಂದು ಭಾವಿಸಿ ಹಿಡಿಯುತ್ತಿದ್ದ ದಿನಗಳು. ನನ್ನೊಡನೆ ಆಡಲು ಬಂದ ಪುಟ್ಟ ನಾಯಿಯನ್ನು ನೀರಿಗೆ ದೂಡಿ ಅದರÀ ಈಜನ್ನು ನೋಡಿ ಖುಷಿಪಡುತ್ತಿದ್ದ ಕ್ಷಣಗಳು, ಮುಂಜಾನೆ ಬಿಸಿಲಿದ್ದ ಕಾರಣ ಕೊಡೆ ಮರೆತು ಶಾಲೆಗೆ ಹೋಗಿ ಮನೆಗೆ ಬರುವ ವೇಳೆ ಕೊಡೆಯಿಲ್ಲದೇ ನೆನದು ಬಳಿಕ ಕಟ್ಟಿಗೆ ಒಲೆಯ ಮುಂದೆ ಕುಳಿತಿದ್ದ ಆ ಬೆಚ್ಚನೆಯ ಸವಿಸಮಯಗಳು, ಪಾಪ ಧನಕರುಗಳು ಮಳೆಯಲ್ಲೇ ನಿಂತಿವೆ ಎಷ್ಟು ಚಳಿಯಾಗಬಹುದೇನೋ!? ಎಂದು ಮಳೆಯನ್ನು ತಡೆಯಲು ಕೊಡೆ ಹಿಡಿದ ಆ ಸುಂದರ ಸವಿಕ್ಷಣಗಳು, ಮಳೆಯಿದೆ ಶಾಲೆಗೆ ಹೋಗಲ್ಲ ಎಂದು ಹಠ ಬಿದ್ದು ಅಮ್ಮನ ಕೈ ಏಟು ತಿಂದು ಮಳೆಗಿಂತ ಜೋರಾಗಿ ಕಣ್ಣೀರ ಧಾರೆ ಹರಿಸಿ ಮನೆ ಸೇರಿದಂತ ವೇಳೆಗಳು, ಶಾಲೆ ಆರಂಭವಾಗುವ ಸಮಯ ರೈನ್ ಕೋಟ್, ಕೊಡೆಗಳಿಗಾಗಿ ಮಾಡಿದ್ದ ರಂಪಾಟಗಳು ಹೀಗೆ ನೆನಪುಗಳು ಒಂದೆರಡಲ್ಲ. ನಿಜಕ್ಕೂ ಅವೆಲ್ಲವೂ ಒಂದು ಸಂಭ್ರಮವೇ ಸರಿ...
ಚಿಕ್ಕವರಿದ್ದಾಗ ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ನೆಪಕ್ಕೊಂದು ಕೊಡೆ ಹಿಡಿದು ಚಪ್ಪಲಿಯನ್ನು ಬೇಕೆಂದೇ ಮನೆಯಲ್ಲಿ ಮರೆತು ಬರಿಗಾಲಲ್ಲಿ ಶಾಲೆಗೆ ಹೋಗುವುದೇ ಒಂದು ಪುಟ್ಟ ಹಬ್ಬದಂತೆ. ಆದರಿಂದು ಬೈಕ್ ಏರಿ ರಸ್ತೆಯಲ್ಲಿ ಸಾಗುವಾಗ ಅಂದು ಅನುಭವಿಸುತ್ತಿದ್ದ, ರಸ್ತೆಯ ನೀರಾಟದ ಮಜಾ ಮತ್ತೆ ಮತ್ತೆ ಮನ ಪಟಲವನ್ನು ಚಾಚುತ್ತದೆ. ಅಂದದು ಕೆಸರು ನೀರೋ, ಸ್ವಚ್ಚ ನೀರೋ ನಮಗೇ ವ್ಯತ್ಯಾಸವೇ ಇರಲಿಲ್ಲ, ಯಾವಶುಚಿತ್ವದ ಕಲ್ಪನೆಯೂ ಕಾಣುತ್ತಿರಲಿಲ್ಲ. ಮಳೆಗಾಲದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ಕಣ್ಣಿಗೆ ಬೀಳುವ ಕೆಂಪು ಬಣ್ಣದ ‘ರೇಶಿಮೆ ಹುಳು’ಗಳು, ನೀರಿನಲ್ಲಿ ಆಟವಾಡುವಾಗ ಕಾಲಿಗೆ ಹತ್ತಿಕೊಳ್ಳುವ ನಂಜು ಹುಳಗಳು, ಮೈ ಕೈ ತಾಗಿ ತುರಿಕೆ ಎಬ್ಬಿಸುವ ಕಂಬಳಿ ಹುಳಗಳು, ಇನ್ನೂ ಅನೇಕ ನೀರಿನಲ್ಲಿ ತೊಯ್ದು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಜೀವಿಗಳು ಮಳೆಗಾಲದಲ್ಲಿ ನಮ್ಮ ಆಸಕ್ತಿ ವಿಷಯಗಳಾಗಿದ್ದವು. ಕೆಲವಂತೂ ನಮ್ಮ ಹಿಂಸೆಗೆ ಜೀವ ತೆಯ್ದವೂ ಇವೆ, ಪಾಪದಂತೆ ಕಂಡು ಕೈ ಹಿಡಿದು ದಡ ಕಂಡವೂ ಇವೆ...
ಆ ಸಮಯ ಸಂಧರ್ಭಗಳೇ ಹಾಗೆ... ಅದುವರೆಗೂ ಬಿಸಿಲಿನ ಝಳಕ್ಕೆ ಕೆಂಪು ಕೆಂಪಾಗಿ ಬೆಂಡಾಗುತ್ತಿದ್ದ ಮರಗಿಡಗಳು ಮಳೆಯ ಹನಿಯ ಸ್ಫರ್ಶಕ್ಕೆ  ನವ ವಧುವಿನಂತೆ ಹಚ್ಚ ಹಸುರಿನಿಂದ ಕಂಗೊಳಿಸಿ ಕಣ್ಣಿಗೆ ಮನಸ್ಸಿಗೆ ಮುದ ನೀಡುತ್ತಿದ್ದವು.  ಸೂರ್ಯನ ತಾಪಕ್ಕೆ ಬೆನ್ನೊಡ್ಡಿ ಕಾದ ಕೆಂಡವಾಗಿರುತ್ತಿದ್ದ ಕರಿ ಬಂಡೆಗಳು ಮಳೆಗಾಳದಲ್ಲಿ ಹಾವಸೆಯ ಸ್ಫರ್ಶದ ಹಿತವನ್ನು ಅನುಭವಿಸುತ್ತಿದ್ದವು. ಮನೆಯ ಸುತ್ತಮುತ್ತ ಯಾವಾಗಲೂ ಇರುತ್ತಿದ್ದ ಮಬ್ಬು ಮಬ್ಬಾದ ವಾತಾವರಣ ಮನ ತುಂಬೆಲ್ಲಾ ಅಚ್ಚಳಿಯದ ನೆನಪಿನ ಬುತ್ತಿಯನ್ನು ಕಟ್ಟಿಕೊಡುತ್ತಿದ್ದದ್ದೂ ಮೊನ್ನೆ ಸುರಿದ ಮಳೆ ಮತ್ತೆ ಮನಸ್ಸನ್ನು ತೆರೆಸಿತ್ತು. ಆಗೆಲ್ಲ ಕೊಡೆಗಳಲ್ಲಿ ಅಷ್ಟು ವೆರೈಟಿ ಬಂದಿರಲಿಲ್ಲ. ಕಪ್ಪು ಬಟ್ಟೆಯ ದೊಡ್ಡ ಕೊಡೆಗಳಷ್ಟೇ ಹೆಚ್ಚಾಗಿ ಕಾಣಸಿಗುತಿದ್ದವು. ಅವುಗಳಲ್ಲಿ ನಮಗೆ ಮರದ್ದೋ, ಸ್ಟೀಲ್‍ದ್ದೋ ಬಾಗಿದ ಬೆತ್ತದಂತಿರುವ ಉದ್ದನೆಯ ಹಿಡಿPಯ ಕೊಡೆÉ ಮಾತ್ರಾ ಕಾಣ ಸಿಗುತ್ತಿತ್ತು. ಇಂದಿನ ಮಾಡರ್ನ್ ಯುಗದ ಚಿಕ್ಕ ಚಿಕ್ಕ ಛತ್ರಿಗಳನ್ನು ನೋಡಿದ ನೆನಪೇ ಇಲ್ಲ. ಆ ಉದ್ದನೆಯ ಅಜ್ಜನ ಕೊಡೆಗಳಿಗೊಂದು ಹಚ್ಚೆ ಹಾಕಿಸಿಕೊಂಡು, ನಾಮಾಂಕಿತ ಮಾಡಿಕೊಂಡು ಇದು ನನ್ನದು ಎನ್ನುವ ಗ್ಯಾರಂಟಿ ಕಾರ್ಡ್‍ನ್ನು ನಿಗಧಿಪಡಿಸಿ ಗುರುತಿಟ್ಟುಕೊಳ್ಳುವುದು ಸಾಮಾನ್ಯವಾಗಿತ್ತು. ಹೀಗಿದ್ದರೂ ಕೂಡ ಎಷ್ಟೊ ಸಲ ಕೊಡೆ ಕಳುವಾಗುತ್ತಿದ್ದವು. ಆದರೆ ಇದರಲ್ಲಿ ನಮ್ಮ ತಪ್ಪಿಲ್ಲದಿದ್ದರೂ ಮನೆಯಲ್ಲಿ ಕಡುಬು ತಿನ್ನಬೇಕಾಗಿದ್ದು ನಾವೇ ಆಗಿದ್ದೇವು. ಕೊಡೆಯೋ ಬುತ್ತಿಯೋ, ಹಾಕೋ ಚಪ್ಪಲಿಯೋ ಇದರಲ್ಲಿ ಯಾವೊಂದು ಕಳುವಾದರೂ ನಮ್ಮ ತಲೆಮೇಲೆ ಆಕಾಶ ಬಿದ್ದ ಹಾಗೇ ಫೀಲೀಂಗ್ ಆಗುತ್ತಿದ್ದದ್ದೂ ಮಾತ್ರಾ ಸುಳಲ್ಲ...
ಮಳೆಗಾಲವೆಂದರೆ ಇಷ್ಟೇ ಅಲ್ಲ ಅದು ಎಲ್ಲರ ಗೆಳೆಯ. ನೊಂದ ಮನಸ್ಸುಗಳ ಮಿತ್ರ, ಪ್ರೇಮಿಗಳ ಪ್ರೀತಿಯನ್ನು ಇಮ್ಮಡಿಸುವ ಆತ್ಮೀಯ. ನೋವನ್ನು ಮರೆಸುವ ಮಾಣಿಕ್ಯ. ಕಣ್ಣೀರನ್ನು ಒರೆಸುವ ಅಮ್ಮ. ಇನ್ನೂ ಏನೇನೋ ಒಬ್ಬೊಬ್ಬರಿಗೆ ಒಂದೊಂದು ಥರ. ನನಗಂತೂ ಮಳೆಯೆಂದರೆ ಪ್ರಾಣ. ಮತ್ತೆ ಮತ್ತೆ ಭೂವಿಗೆ ಮಳೆಯಾಗಲಿ ಎಂದು ಯಾವಾಗಲೂ ಹಂಬಲಿಸುವ ಮುದ್ದು ಮನಸು ನನದು. ಪ್ರತಿ ಮಳೆಯಲ್ಲೂ ಮನಪಟಲದಿಂದ ನೆನಪುಗಳು ಗರಿಗೆದರಿ ಬಂದು ಭಾವನೆಯನ್ನು ಕೆಣಕಿ ಮಾತನಾಡಿಸುತ್ತವೆ. ಈ ಮಳೆ ಇಲ್ಲಿಗೆ ನಿಲ್ಲಬಹುದು ಆದರೆ ನನ್ನ ಮೈ ಮನ ಮುಂದಿನ ಮುಂಗಾರಿನ ಸಿಂಚನಕ್ಕೆ ಮೈಯೊಡ್ಡಲು ಈಗಲೇ ಕಾತರಿಕೆಯಲಿ ನಿಂತಿದೆ...ಯಾವುದೇ ಜವಾಬ್ಧಾರಿಯಿಲ್ಲದ, ಕೇವಲ ಕುತೂಹಲ, ಹುಡುಗಾಟದಲ್ಲಿಯೇ ಕಳೆದು ಹೋಗುವ ಬಾಲ್ಯದ ಆ ದಿನಗಳು  ಮತ್ತೆಂದು ಹಿಂದಿರುಗಿ ಬರಲಾರವು ಎನ್ನುವ ಮನೋಭಾವವಿದ್ದರೂ, ಕಳೆದ ಆ ದಿನಗಳನ್ನೇ ಸಿಕ್ಕ ಸಮಯ ನೆನಪಿಸಿಕೊಂಡು ಎಂಜಾಯ್ ಮಾಡುವುದು ನಿಜಕ್ಕೂ ಮನಸ್ಸಿಗೆ ಉಲ್ಲಾಸ ಕೊಡದೆ ಇರದು. ನನಗೆ ಇದುವರೆಗೂ 24 ವಸಂತಗಳು ಕಳೆದು ಹೋದವು ಇಷ್ಟು ದಿನಗಳಲ್ಲಿ ಗಳಿಸಿದ್ದೆಷ್ಟೋ, ಕಳೆದುಕೊಂಡಿದ್ದೆಷ್ಟೊ ಲೆಕ್ಕಕ್ಕೆ ಸಿಗುತ್ತಿಲ್ಲ. ಆದರೆ ಒತ್ತಡದ ಬದುಕಿನ ಈ ದಿನಗಳಲ್ಲಿ ಅಪರೂಪಕ್ಕೊಮ್ಮೆ ಸಿಗುವ ಏಕತಾನತೆಯ ನಡುವೆ ಮತ್ತೊಮ್ಮೆ ಹಂಬಲಿಸುವ ಹಳೆಯ ನೆನಪಿನ ರೀವೈಂಡಿಂಗ್ ರೀಲ್ ನಿಜಕ್ಕೂ ಮಳೆಗಾಲದಲ್ಲೇ ಜಾಸ್ತಿ ಅನ್ನಿಸುತ್ತದೆ.
ಹೊರಗೆ ಭೋರ್ಗೆರದು  ಸುರಿವ ಮಳೆಗೆ, ಬೆಚ್ಚಗೆ ಬೆಡ್ ಶೀಟ್ ಹೊದ್ದು ಅಮ್ಮಾ ಮಾಡಿದ ಬಿಸಿ ಚಹವನ್ನು ತುಟಿಗೇರಿಸಿ, ಜತೆಜತೆಗೆ ಬಿಸಿ ಬಿಸಿ ಬೋಂಡಾ ತಿನ್ನುವ ಆಸೆಗಳನ್ನು ಅನುಭವಿಸಿದಂತೆ ನಿಮಗೂ ಈಗ ನೆನಪುಗಳ ಫೀಲಿಂಗ್ ಗರಿಗೆದರುತ್ತಿರಬಹುದು ಅಲ್ವಾ...ಅಷ್ಟಾದರೆ ಸಾಕು. ಓದಿ ಮುಗಿಸಿದ ನಂತರ ಪ್ಲೀಸ್ ಮಳೆರಾಯನಿಗೆ ನೀವು ತಿಳಿಸಿ ಒಂದು ಸಣ್ಣ ಧನ್ಯವಾದ...ಯಾಕೆಂದರೆ ಈ ಬರವಣಿಗೆಗೆ ಮೊನ್ನೆ ಅವನೇ ಕಾರಣವಾದ...

ವೆಂಕಟ ಇನ್ ಸಂಕಟ...


ಟಿ.ವಿ ಮಾಧ್ಯಮಗಳೇ ಶೇಮ್... ಶೇಮ್...
ಖಾಸು ಸಿಗುತ್ತದೆಂದು ಬಾಸು ಆದ ಹುಚ್ಚ ವೆಂಕಟ್...
ಟಿ.ಆರ್.ಪಿ ಸುಲ್ತಾನನ ಫೈರಿಂಗ್
ಅಂದು ಜಂಗಲ್ ಜಾಕಿ ರಾಜೇಶ ಇಂದು ಹುಚ್ಚ ವೆಂಕಟ್...

              ‘ನನ್ ಎಕ್ಡಾ.., ನನ್ ಮಗಂದ್.., ಬ್ಯಾನ್ ಆಗ್ಬೇಕ್...’ಈ ಡೈಲಾಗ್‍ಗಳೆಲ್ಲ ಇದೀಗ ಸಣ್ಣ ಮಗುವಿನಿಂದ ಹಿಡಿದು ಹಿರಿಯವರೆನಿಸಿಕೊಂಡ ದೊಡ್ಡಣ್ಣರ ಬಾಯಲ್ಲೂ ಕಾಮನ್ ಆಗಿ ಬಿಟ್ಟಿದೆ...ಇದಕ್ಕೆ ಕಾರಣ ವೆಂಕಟ್ ಹುಚ್ಚ ವೆಂಕಟ್... ಇರಬಹುದು ಹುಚ್ಚು ಮನಸ್ಸಿಗೆ ಹತ್ತು ಮುಖಗಳಂತೆ ಇತ್ತೀಚಿಗೆ ಟಿ.ವಿ ಮಾಧ್ಯಮದಲ್ಲಿ ಭಿತ್ತರವಾಗುತ್ತಿರುವ ವೆಂಕಟನ ಸಂಕಟ ವೀಕ್ಷಿಸಿ ನಗು, ಅಸಹನೆ, ನೋವು ಎಮಬಿತ್ಯಾದಿಗಳನ್ನೆಲ್ಲ ತಾಳಲಾರದೇ ಈಗ ಜನ ಹೇಳುತ್ತಿದ್ದಾರೆ ಹುಚ್ಚು ಮನಸ್ಸಿಗೆ ಹತ್ತಲ್ಲ ನೂರೋ, ನೂರಿಪ್ಪತ್ತೋ ಮುಖಗಳಿರಬೇಕು ಎಂದು!!. ಬಹುಶಃ ಇಂತದ್ದೊಂದು ಆಲೋಚನೆ ಮೂಡಿ ಬಂದಿದ್ದು ಹುಚ್ಚ ವೆಂಕಟ್‍ರವರ ಡಿಬೆಟ್ ಪ್ರೋಗ್ರಾಮ್ ನೋಡಿದ ಮೇಲೆಂದರೆ ಅನುಮಾನ ಸುಳಿಯುವುದಿಲ್ಲ ಬಿಡಿ. ನಾವು ಕನ್ನಡಿಗರೂ ವಿಶಾಲ ಹೃದಯದವರು, ಅನೇಕ ಒಳ್ಳೆಯ ಲೋಕ ಕಲ್ಯಾಣದ ವಿಚಾರಗಳಿದ್ದರೂ ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಹುಚ್ಚುಚ್ಚಾದ ವಿಷಯಗಳಿಗೆ ತಲೆ ಕೆರೆದುಕೊಳ್ಳುವುದು ಜಾಸ್ತಿ...ನಮ್ಮವರಿಗೆ ಮನೆ ಒಡೆಯುವುದರಲ್ಲಿರುವ ಸುಖ ಮನೆ ಕಟ್ಟುವುದರಲ್ಲಿಲ್ಲ. ಯಾರೂ ಹುಚ್ಚನಾಗಿದ್ದಾನೆ, ಯಾರನ್ನು ಹುಚ್ಚನ ಸ್ಥಾನದಲ್ಲಿ ನಿಲ್ಲಿಸಿ ಗೋಳಾಡಿಸುವುದು, ಎಂಬಿತ್ಯಾದಿ ವಿಚಾರಗಳನ್ನು ಕೆಲವೇ ಕೆಲವು ಮಂದಿ ನಿರ್ಧರಿಸಿ ಮೀಡಿಯಾ ಎಂಬ ಬಣ್ಣವನ್ನು ಹಚ್ಚಿ, ಕುಣಿಸಿ, ನಂತರ ಹೀರೋವಾಗಿಸುತ್ತಾರೆ. ಅವನ ಪ್ರತಿ ಘಳಿಗೆಯನ್ನು ಉಪಯೋಗಿಸಿಕೊಂಡು ಹಣ ಸಂಪಾದಿಸಿ ನಂತರ ಸತ್ತನೋ!, ಜೀವಿದ್ದನೋ! ಎಂಬುದನ್ನು ತಿಳಿಯದೇ ಮುಗ್ಧರಂತಿರುತ್ತಾರೆ. ಸದ್ಯಕ್ಕೆ ಇವು ಈ ತಿಂಗಳ ಹೈಲೆಟ್...
 ಕರೆಕ್ಟ್...ಇಲ್ಲಿನ ಸಮಸ್ಯೆ ಎದ್ದು ಕಾಣುತ್ತಿರುವುದು ಒಬ್ಬ ವ್ಯಕ್ತಿಯ ಅಭಿವ್ಯಕ್ತತೆಯ ಶೈಲಿಯಲ್ಲಿ ಅಷ್ಟೆ.  ಹುಚ್ಚ ವೆಂಕಟ್ ಒಬ್ಬ ಹುಚ್ಚ ಅಲ್ಲದಿದ್ದರೂ ಅವನ ಸಿನಿಮಾ ಹುಚ್ಚು,  ಕೆಲವೊಂದು ವಿಚಾರದಲ್ಲಿ ಆತ ತೆಗೆದುಕೊಳ್ಳುವ ನಿರ್ಣಯಗಳು, ಮಾತುಗಳು, ಅಷ್ಟೇ ಅಲ್ಲದೇ ಅವನ ಸಿನಿಮಾ ಟೈಟಲ್, ಎಲ್ಲಾ ಜೊತೆ ಜೊತೆಗೆ ಸೇರಿಸಿ ಆತನನ್ನ ‘ಹುಚ್ಚ’ನನ್ನಾಗಿ ಮಾಡಿದೆ ಅಷ್ಟೇ. ವೆಂಕಟ್ ಒಳಗೆ ಒಂದು ಮುಗ್ಧ ಮನಸ್ಸಿದೆ ಅದರ ಬಗ್ಗೆ ಯಾವ ಅನುಮಾನವೂ ಇಲ್ಲ, ಯಾವ ನಿರಾಸಕ್ತಿಯೂ ಇಲ್ಲ ಬದಲಾಗಿ ಅಭಿಮಾನವಿದೆ. ಎಷ್ಟೇ ಏನೆ ಅನ್ ವಾಂಟೆಡ್ ಸ್ಟೇಟ್‍ಮೆಂಟ್ ಇದ್ದರೂ ಈ ಒಂದು ಕಾರಣಕ್ಕಾಗಿಯೇ ಜನರಿಗೆ ಈತ ಹಿಡಿಸಿರಬೇಕು.
ಕಳೆದೆರಡು ಆವೃತ್ತಿಯ ಬಿಗ್‍ಬಾಸ್ ಎನ್ನುವ ಹೈ ಬಜೆಟ್  ಡ್ರಾಮಾ ಇಡೀ ಕರ್ನಾಟಕದ ಜನತೆಗೆ ಎಷ್ಟು ತಿಳಿದಿತ್ತೋ, ಮನೆರಂಜನೆ ನೀಡಿತ್ತೋ ತಿಳಿದಿಲ್ಲ. ಆದರೆ ಈ ಬಾರಿಯ ಬಿಗ್ ಬಾಸ್ ಅಂತೂ  ಉಳಿದೆಲ್ಲಾ ಟಿ.ವಿ ಕಾರ್ಯಕ್ರಮಗಳಿಗಿಂತ ಹೆಚ್ಚು ವೀಕ್ಷಿಸಲ್ಪಟ್ಟಿದೆ ಎಂದು ಬಿಗ್‍ಬಾಸ್ ಮಂಡಳಿ ಹೆಮ್ಮೆಯಿಂದ ಬೀಗಿದೆ. ಅನೇಕ ಜನ ಹೇಳುವಂತೆ ಇದಕ್ಕೆಲ್ಲಾ ಒಬ್ಬನೇ ಒಬ್ಬ ವ್ಯಕ್ತಿ ಕಾರಣ ಅವನೆ ಹುಚ್ಚ ವೆಂಕಟ್. ಈ ಮೊದಲು ಎರಡು ಸಿನಿಮಾಗಳಲ್ಲಿ ಅಭಿನಯವನ್ನು ತೋರಿದ್ದರೂ ವೆಂಕಟ್ ಥೀಯೇಟರ್‍ನಲ್ಲಿ ಸ್ಟಾರ್ ನಾಯಕನಾಗಿ ಹೊರಬೀಳಲಿಲ್ಲ. ಬದಲಾಗಿ ನಿರಾಸೆಯ ಆಕ್ರೋಶದಿಂದ ಹೊರಬಿದ್ದು, ಬಾಯಿಗೆ ಬಂದ ಸ್ಟೇಟಸ್ ನೀಡಿ ಯುಟ್ಯೂಬ್‍ನಲ್ಲಿ ಅಲ್ಟೀಮೇಟ್ ಹಿಟ್ ಆಗಿದ್ದ. ಅದೇ ಡೈಲಾಗು, ಅವನದೇ ವೈಖರಿಯನ್ನು ಅನೇಕ ಜನ ಅನುಕರಿಸಿ ಎಲ್ಲರ ಕಣ್ಣು ವೆಂಕಟ್ ಮೇಲೆ ಎನ್ನುವಂತಾಗಿತ್ತು. ಅದು ಬಿಗ್‍ಬಾಸ್ ಮನೆಗೂ ಎಂಟ್ರಿ ದೊರಕಿಸಿಕೊಟ್ಟಿತ್ತು. ಅಲ್ಲಿಯೂ ತನ್ನ ಬುದ್ಧಿಯನ್ನು ಎಳ್ಳಷ್ಟೂ ಬಿಟ್ಟುಕೊಡದ ವೆಂಕಟ್ ತಂದೆ, ತಾಯಿ ಹಾಗೂ ಹೆಣ್ಮಕ್ಕಳ ಬಗ್ಗೆ ಅಪಾರ ಅಭಿಮಾನದ ಮಾತುಗಳನ್ನಾಡಿ ಅಭಿಮಾನಿಗಳ ಗುಂಪನ್ನು ಗಿಟ್ಟಿಸಿಕೊಂಡು ಎಲ್ಲರಿಗೂ ಅಣ್ಣನಾಗಿಯೇ ಬಿಟ್ಟ...
 ಬಹುಶಃ ಇಲ್ಲಿಯವರೆಗೆ ಆಗಿದ್ದೆಲ್ಲವೂ ಆತನ ವೈಯಕ್ತಿಕ ವಿಚಾರ ಆಗಿದ್ದಿರಬಹುದು. ಆದರೆ ಇನ್ನೂ ಮುಂದೆ ಸಂಭವಿಸಿದ್ದು ನಿಜಕ್ಕೂ ವಿಷಾಧನೀಯ. ಇದರಲ್ಲಿ ಜನತೆಯ ತಪ್ಪೇನು ಇರಲಿಕ್ಕಿಲ್ಲ ಯಾಕೆಂದರೆ ಯಾರೊಬ್ಬನನ್ನು ಅವರು ಹೀರೋ ಮಾಡಬೇಕೆಂದರೂ, ಆತ ಟಿ.ವಿ.ಯಲ್ಲಿ ಮೊದಲು ಕಾಣಿಸಿಕೊಂಡು ಓ.ಕೆ ಆದ ಮೇಲೆ ಬೆಂಬಲ ಸೂಚಿಸಿ ಚಪ್ಪಾಳೆ ತಟ್ಟೋದು. ಆದರೆ ಟಿ.ವಿಯವರು ಎಂತಹವರನ್ನು ಬೇಕಾದರೂ ಸ್ಟಾರ್ ಮಾಡುತ್ತಾರೆ!. ಆ ತಾಕತ್ ಅವರಿಗಿದೆ ಬಿಡಿ!!!. ನಮ್ಮಲ್ಲೂ ಸ್ಟಾರ್‍ಗಿರಿಗೇನೂ ಕಡಿಮೆ ಇಲ್ಲ. ಎಂತಹವ ಬೇಕಾದರೂ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿ ಬಿಡುವ, ಬಿಡಿಸುವ  ಶಕ್ತಿ ನಮಗಿದೆ. ಇಲ್ಲಿಯ ನನ್ನ ನೋವು ಹುಚ್ಚ ವೆಂಕಟನ ಮೇಲೂ ಅಲ್ಲ, ಹೀರೋ ಮಾಡಿದ ಜನತೆಯ ಮೇಲೂ ಅಲ್ಲ ಟಿ.ಆರ್.ಪಿ ಹುಚ್ಚು ಹಿಡಿದಿರೋ ಟಿವಿ ಮಾಧ್ಯಮಗಳ ಮೇಲೆ. ಪ್ರಸರಿಸೋ ಪ್ರತಿ ಕಾರ್ಯಕ್ರಮವನ್ನು ಸ್ಲ್ಯಾಟ್ ಎನ್ನುವ ಸಂಭಾವನೆಯಲ್ಲಿಯೇ ಮುಳುಗುವ ವಾಹಿನಿಗಳಿಗೆ ಇತ್ತೀಚೆಗೆ ವೆಂಕಟನ ಲೀಲೆ ಖಾಸು ಮಾಡಲು ದಾರಿ ಮಾಡಿ ಕೊಟ್ಟಿತ್ತೆಂದರೆ ಅತಿಶಯೋಗ್ತಿಯಲ್ಲ.  ರವಿ ಮುರೂರು  ಮೇಲೆ ಹಲ್ಲೆ ಮಾಡಿದ ಪರಿಣಾಮ ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ವೆಂಕಟ್‍ಗೆ ಅಭಿಮಾನಿ ಬಳಗವೇ ಸೃಷ್ಟಿಯಾದದ್ದು ಟಿ.ವಿ ಚಾನೆಲ್‍ಗಳಿಗೆ ವರವಾಗಿ ಪರಿಣಮಿಸಿತು.  
ಇದೆಲ್ಲ ನಡೆಯುತ್ತಿರುವ ಸಮಯದಲ್ಲೇ ಹಲವಾರೂ ಏಳುಬೀಳುಗಳು, ಏನೇನೋ-ಎಷ್ಟೆಷ್ಟೋ ಲೋಕಕಲ್ಯಾಣದ ಕಾರ್ಯಗಳು ನಡೆಯುತ್ತ್ತಾ ಇದ್ದರೂ ಅದನ್ಯಾವ ಚಾನಲ್‍ಗಳು ಜಾಸ್ತಿ ತೋರಿಸುವ ಗೋಜಿಗೆ ಹೋಗಲಿಲ್ಲ. ಅಷ್ಟೇ ಏಕೆ ಪ್ರಧಾನಿ ಮೋದಿ ಲಂಡನ್‍ಗೆ ಹೋಗಿದ್ದು, ಮೊದಲ ದಿನ ಎಡಬಿಡದೆ ವರದಿಯಾಗುತ್ತಿದ್ದರೂ ನಂತರದ ಭಾಷಣ, ಬಸವಣ್ಣನ ಪ್ರತಿಮೆ ಅನಾವರಣ ಇತ್ಯಾದಿಗಳ್ಯಾವವು ಹೆಚ್ಚು ಸುದ್ದಿಯಾಗಲಿಲ್ಲ ಕಾರಣ ಬಿಗ್‍ಬಾಸ್ ಮನೆಯಿಂದ ಹುಚ್ಚ ವೆಂಕಟ್ ಹೊರಬಂದಿದ್ದರು!. ನೋಡಿ ಎಂಥಾ ವಿಪರ್ಯಾಸ!!!.
ಅಷ್ಟಕ್ಕೂ ಮಾಧ್ಯಮಗಳು ಇಂತಹ ವಿಚಾರಗಳನ್ನು ಯಾಕಿಷ್ಟು ವೈಭವೀಕರಿಸುತ್ತವೆ ಎಂಬುದು ಹೆಚ್ಚಿನವರ ಪ್ರಶ್ನೆಯಾದರೂ ಇದಕ್ಕೆ  ಟಿ. ಆರ್.ಪಿ ಎನ್ನೋ ಸಾಮಾನ್ಯ ಉತ್ತರ ಎಂದು ತಿಳಿದಿದೆ. ಹೌದು ಬಹುಶಃ ವೆಂಕಟ್ ಬಿಗ್‍ಬಾಸ್‍ನಿಂದ ಹೊರಬಿದ್ದ ನಂತರ ಮನೆಯಲ್ಲಿ ಸರಿಯಾಗಿ ಕುಳಿತಿದ್ದನೋ ಇಲ್ಲವೋ ಗೊತ್ತಿಲ್ಲ!, ಆದರೆ ರಾತ್ರಿ 2ರ ತನಕವೂ ಬೇರೆ ಬೇರೆ ನ್ಯೂಸ್ ಚಾನೆಲ್‍ಗಳಲ್ಲಿ ಕುಳಿತು ಮಾತನಾಡಿದ್ದ. ಊಟ ಮಾಡಿಸಿದ್ದರೋ ಇಲ್ಲವೋ! ಆದರೆ ಬ್ರೇಕ್ ಕೊಡದೆ ಮಾತನಾಡಿಸಿದ್ದರು... ಯಾಕೆಂದರೆ ಅವನೊಬ್ಬ ಟಿ.ಆರ್.ಪಿ ಮೇಕರ್.
ವರ್ಷಗಳ ಹಿಂದೆ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಎನ್ನುವ ರಿಯಾಲಿಟಿ ಶೋನಲ್ಲಿ ತೊಡೆ ತಟ್ಟಿ ‘ಕುಂತ್ರೆ ಕುರುಬ ನಿಂತ್ರೆ ಕಿರುಬ’ ಎಂದು ಡೈಲಾಗ್ ಹೊಡೆದು ಕನ್ನಡ ಜನತೆಯ ಮನಗೆದ್ದು, ನಿಜವಾದ ಹೀರೋ ಆಗಿದ್ದ್ ‘ಜಂಗಲ್ ಜಾಕಿ ರಾಜೇಶ್’ ಎನ್ನುವ ಹುಡುಗ ಫೈನಲ್‍ನಲ್ಲಿ ಗೆದ್ದಾಗ ಇದೇ ಪಾಡನ್ನು ಅನುಭವಿಸಿದ್ದ.
ನಂತರದ ದಿನಮಾನಗಳಲ್ಲಿ ಇದೇ ಮಾಧ್ಯಮಗಳು ವೈಭವೀಕರಿಸಿ ಹೀರೋ ಮಾಡಿ, ಕಾಡಿನ ಮಧ್ಯದಲ್ಲಿ ಬೆಳೆದ ಹುಡುಗನನ್ನು ಪ್ಯಾಟೆಗೆ ತಂದು  ಇಲ್ಲಿನ ಸಂಪ್ರದಾಯ ಸಂಸ್ಕøತಿಯನ್ನು ತೋರಿಸಿ, ಅವನಿಗೆ ಆ ಕಡೆ ಸಂಪೂರ್ಣವಾಗಿ ಹಳ್ಳಿಯ ಕ್ರಮವನ್ನು ಅನುಸರಿಸಲಾಗದೆ, ಇತ್ತ ನಗರ ಜೀವನಕ್ಕೂ ಒಗ್ಗಲಾಗದೇ ಮನಸ್ಸಿನಲ್ಲಿ  ತೀವ್ರ ತಳಮಳ ಅನುಭವಿಸುವಂತೆ ಮಾಡಿ , ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿದ್ದರು. ಇದರಿಂದಾಗಿ  ಆತ ‘ ಅಕ್ಯೂಟ್ ಮೇನಿಯಾ’  ಖಾಯಿಲೆಗೂ ತುತ್ತಾಗಿದ್ದ.  ನಂತರ ಮನೆಯ ಮೇಲಿಂದ ಹಾರಿ ಪ್ರಾಣವನ್ನು ತೆತ್ತಿದ್ದ.   ಇಂತಹ ಚಿತ್ರಣವೊಂದು ಮಾಸುವ ಮುನ್ನವೇ ಇದೀಗ ಮತ್ತೊಬ್ಬನನ್ನು ಹೀರೋ ಮಾಡಿ, ಅವನಾಡುವ ಮಾತುಗಳಿಗೆ ಬಣ್ಣ ಬಳಿದು ಟಿ.ಆರ್.ಪಿ ಹೆಚ್ಚಿಸಿಕೊಂಡು  ಇವನ ಕತೆಯನ್ನು ಮುಗಿಸುತ್ತಾರೋ ಏನೋ ತಿಳಿದಿಲ್ಲ ಎನ್ನುವುದೇ ಸುಮಾರು ಜನರ ಭಯ. ವೆಂಕಟ್ ಒಬ್ಬ ಹುಚ್ಚನಲ್ಲ ಅವನೊಳಗೆ ಬೇಯುತ್ತಿರುವ ನೋವು, ತುಡಿತ ಹಾಗೆ ಆಡಿಸುತ್ತಿದೆ ಅಷ್ಟೆ.  ರಕ್ತದೊತ್ತಡ ಜಾಸ್ತಿಯಾಗಿ ಅತಿರೇಖತೆಗೆ ತಲುಪಿ ಏನೇನೋ ಆಡುವಂತೆ ಮಾಡುತ್ತಿದೆ. ಇದು ಸ್ಥಿತ ಪ್ರಜ್ಞೆ ಹಾಗೂ ಸಮಯ ಪ್ರಜ್ಞೆ ಇಲ್ಲದ ಆಟವಷ್ಟೆ...
 ಟಿ.ವಿ ಮಾಲೀಕರೇ ಯಾಕಿಷ್ಟು ಉತ್ಸಾಹ ನಿಮಗೆ ಬೇರೆಯವರ ಜೀವನದಾಟದಲ್ಲಿ.!? ಅದೇ ವೆಂಕಟ ಯಾಕೆ ಹೀಗಾದ ಅವನನ್ನು ಸರಿ ಮಾಡೋಕೆ ಆಗುತ್ತಾ? ಅವನಿಗೆ ನಮ್ಮಿಂದ ಏನಾದರೂ ಸಹಾಯ ಆಗಬಹುದಾ?, ಅವನ ಸಮಸ್ಯೆ ಏನು ಎಂಬಿತ್ಯಾದಿ ವಿಚಾರವನ್ನು ಗಹಗಹಿಸುವುದ ಬಿಟ್ಟು, ಅವನ ಜೊತೆ ಡಮ್ಮಿ ನಿರೂಪಕನೊಬ್ಬನನ್ನು ಕುಳ್ಳಿರಿಸಿ, ಅವನು ಹೇಳಿದ ಹಾಗೆ ಪೂಸಿ ಹೊಡೆದು ಮರುಮಾತನಾಡದೇ ಊಟ ಏನ್ ಮಾಡ್ತೀರಾ?, ಅವರ ಬಗ್ಗೆ ಏನ್ ಹೇಳ್ತೀರಾ?, ಇವರಿಗೆ ಬೈತೀರಾ!? ಎಂದೆಲ್ಲಾ ಕಾಲಹರಿಸಿ, ನಿಮ್ಮ ಜೀವನ ಉತ್ತುಂಗಕ್ಕೇರಿಸಿ, ಮತ್ತೊಬ್ಬನ ಜೀವನ ಪಲ್ಟಿ ಹೊಡೆಸುವುದು ಸರಿನಾ?  ದಯಮಾಡಿ ಉತ್ತರಿಸಿ.
ಹಿಂದಿನ ದಿನ  ಸ್ಟುಡಿಯೋದಲ್ಲಿಟ್ಟುಕೊಂಡು ಕೊಂಡಾಡಿದವರು ಆನಂತರ ದಿನ ಶಾಕ್ ನ್ಯೂಸ್‍ನ್ನು ಕೊಟ್ಟು ಮತ್ತೇ ಬ್ರೇಕಿಂಗ್ ಎಂದರು. ಬಹುಶಃ ಇಷ್ಟು ಆಗಬೇಕು ಎಂದು ಕಾದಿದ್ದರೋ ಗೊತ್ತಿಲ್ಲ ಆದರೂ ಇಷ್ಟಾಯ್ತು...
“ ಕುತಂತ್ರದಿಂದ ಮಸಿ ಬಡಿಸಿದರು, ಬಾಯಿಗೆ ಬಂದಂತೆ ಮಾತಾಡಿಸಿದರು. ವೆಂಕಟ್ ಮೇಲೆ ಆರೋಪ ಬಿತ್ತು, ಪೋಲೀಸರು ಅರೆಸ್ಟ್ ಮಾಡಿದ್ರು, ಕೋರ್ಟ್‍ಗೆ ಹಾಜರು ಪಡಿಸಿದ್ರು...ಕೋರ್ಟ್ ಹಾಲ್ ತುಂಬಿತ್ತು... ನೂರಕ್ಕೂ ಹೆಚ್ಚು ಅಡ್ವೋಕೇಡ್‍ಗಳು ವೆಂಕಟ್‍ನ ನೋಡಲು ಮುಗಿಬಿದ್ರು, ಆದರೆ ವಿಚಾರಣೆ ವೇಳೆ ವೆಂಕಟ್ ಪರ ವಕೀಲರು ಜೆರಾಕ್ಸ್‍ಗೆಂದು ಹೋದವರು ಬರಲಿಲ್ಲ... ಕೋರ್ಟ್ ಹಾಲ್‍ನಲ್ಲಿದ್ದ 400 ಕ್ಕೂ ಅಧಿಕ ವಕೀಲರು ವೆಂಕಟ್ ಬಳಿ ನಾವೇ ಬಂದು ಪುಕ್ಸಟ್ಟೆ ವಾದ ಮಂಡಿಸ್ತೀವಿ ಅಂತದ್ರು. ಆದರೆ ನಂತರ ಸುಮ್ಮನಿರಿ ಎನ್ನುವ ಜಡ್ಜ್ ಮಾತಿಗೆ ಎಲ್ಲ ಸುಮ್ಮನಾದ್ರು.  ಜಡ್ಜೇ ವಾದ ಶುರು ಮಾಡಿದ್ರು... ನೀನು ಅಂಬೇಡ್ಕರನ್ನು ನಿಂದಿಸಿದ್ದು ನಿಜಾನಾ ಅಂತ ಕೇಳಿದ್ರು. ಪಾಪ ವೆಂಕಟ್ ನಿಜ ನುಡಿದು ಹೌದೆಂದ. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು ಕೋರ್ಟ್. ವೆಂಕಟ್ ಅಣ್ಣ ಮಾತ್ರ ಎಲ್ಲದಕ್ಕೂ ಮೀಡಿಯಾಗಳೇ ಕಾರಣ ಎಂದ್ರು. ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋದ್ರು. ಅಲ್ಲೂ ಅಭಿಮಾನಿಗಳ ಜೈಕಾರ ಸಿಕ್ತು...”
ಇಷ್ಟೆಲ್ಲಾ ಆಯ್ತು ಇನ್ನು ಅದರ ಫಲಿತಾಂಶ ಎಲ್ಲಿಗೆ ಹೋಗಿ ಮುಟ್ಟುವುದೋ ಆ ದೇವನೇ ಬಲ್ಲ. ಆದರೆ ಟಿ.ಆರ್.ಪಿ ಸಮರಕ್ಕಾಗಿ ಮತ್ತೊಬ್ಬನ ಜೀವನವನ್ನೇ ಸಮರ ಸಾರುವುದು ಎಷ್ಟು ಸರಿ...? ಮಾನಸಿಕವಾಗಿ ನೊಂದಿರುವವನ್ನು ಕೂರಿಸಿ ಮಜಾ ತಗೊಂಡ್ರು... ಟಿ.ಆರ್.ಪಿ ಸುಲ್ತಾನ ಏಕಾಂಗಿಯಾಗಿ ಇರಲು ಬಿಡದೆ ಪ್ರಚೋಧನಾತ್ಮಕವಾಗಿ ಕೆಣಕಿ ಕಣ್ಣೀರು ಸುರಿಸುವಂತೆ ಮಾಡಿದರು. ಅಣ್ಣ ತಮ್ಮಂದಿರಂತಿದ್ದವರನ್ನು ದಾಯಾದಿಗಳಂತೆ ಮಾಡಿದರು. ನಿಜಕ್ಕೂ ಇದು ವಿಚಾರ ಹೀನತೆಯ ಪರಮಾವಧಿ, ಟಿ.ಆರ್.ಪಿ ಹುಚ್ಚು


ಹೆಣ್ಣು-12


ಹೆಣ್ಣಿನ ಮೇಲಿನ ದುರಾಕ್ರಮಣ, ಅತ್ಯಾಚಾರ, ಅನಾಧಿ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಈ ಬಗ್ಗೆ ನಮ್ಮ ಪುರಾಣಗಳಲ್ಲೂ ಕೂಡ ಬಹಳಷ್ಟು ಹೃದಯ ವಿದ್ರಾವಕ ವಿಚಾರಗಳು ಉಲ್ಲೇಖವಾಗಿವೆ. ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಹೆಣ್ಣನ್ನು ತನ್ನ ಭೋಗದ ವಸ್ತುವೆಂದು ತಿಳಿದು ಅವಳ ಮೇಲೆ ನಿರಂತರವಾಗಿ ಆಕ್ರಮಣ ಮಾಡುತ್ತಲೇ ಬಂದಿದ್ದಾನೆ. ಗಂಡಿನ ಈ ನಡೆಯನ್ನು ಸಮಾಜ ಕೂಡ ಸತತವಾಗಿ ಕ್ಷಮಿಸುತ್ತಲೇ ಬಂದಿದೆ. ಕೇವಲ ಭಾರತದ ಪುರಾಣಗಳಷ್ಟೇ ಅಲ್ಲ, ವಿಶ್ವದ ಯಾವುದೇ ಪುರಾಣವನ್ನು  ನೋಡಿದರೂ ಇದೇ ಕಥೆ ಎದ್ದು ಕಾಣುತ್ತದೆ. ಒಬ್ಬ ವ್ಯಕ್ತಿ ಇನ್ನೊಬ್ಬಾಕೆಯನ್ನು ಹೆದರಿಸಿ, ಬೆದರಿಸಿ, ಹಿಂಸಿಸಿ, ಬಲಾತ್ಕಾರವಾಗಿ, ಅವಳ ಇಷ್ಟಕ್ಕೆ ವಿರೋಧವಾಗಿ, ನಡೆಸುವ ಲೈಂಗಿಕ ಆಕ್ರಮಣವನ್ನು ಅತ್ಯಾಚಾರವೆಂದು ಕರೆಯಬಹುದಾದರೂ, ಅದು ಕೇವಲ ಸಂಭೋಗವೇ ಆಗಿರಬೇಕೆಂದೇನೂ ಇಲ್ಲ. ಹೆಣ್ಣಿನ ವಿಚಾರವಾಗಿ ಅಸಭ್ಯವಾಗಿ ವರ್ತಿಸುವುದು, ಕೆಣಕುವುದು, ಪೀಡಿಸುವುದು, ಚುಡಾಯಿಸುವುದು ಅನಾವಶ್ಯಕವಾಗಿ ಅವಳ ಮೇಲೆ ಕೈಯಾಡಿಸುವುದು, ಮುಟ್ಟುವುದು ಕೂಡ ಅತ್ಯಾಚಾರದ ಪರಿಧಿಯೊಳಗೆ ಬರುತ್ತದೆ.
ಕೇವಲ ಮನುಷ್ಯ ವರ್ಗದಲ್ಲಿ ಮಾತ್ರವಲ್ಲದೆ ಪ್ರಾಣಿವರ್ಗವೆನ್ನುವ ಎಲ್ಲಾ ಜಾತಿಯಲ್ಲೂ ಈ ಅತ್ಯಾಚಾರವೆನ್ನುವುದು ಸಾಮಾನ್ಯವಾದರೂ, ಮನುಷ್ಯನ ಮಾನಕ್ಕೆ ಜಾಸ್ತಿ ಬೆಲೆ ಎನ್ನುವಂತೆ ಮನುಷ್ಯರಾದ ನಮ್ಮ ಘಟನೆಯನ್ನು ಮಾತ್ರಾ ಪ್ರತಿಬಿಂಬಿಸುತ್ತಾ ಸಾಗುತ್ತೇವೆ. ಸಾಮಾನ್ಯವಾಗಿ ಇಂತಹ ಘಟನೆಗಳು ತೆರೆಯ ಮರೆಯಲ್ಲಿ, ಏಕಾಂತದಲ್ಲಿ, ಕತ್ತಲೆಯಲ್ಲಿ ನಡೆಯುತ್ತಿದ್ದರೂ, ನಡೆದದ್ದನ್ನು ಹೇಳಿಕೊಳ್ಳುವುದು ಅವಮಾನಕರವೆಂದು ಪರಿಗಣಿಸಲಾಗುವುದರಿಂದ ಆಗಿದ್ದೆಲ್ಲವೂ ಬೆಳಕಿಗೆ ಬರುವುದಿಲ್ಲ. ಬೆಳಕಿಗೆ ಬಂದ ಪ್ರಕರಣಗಳನ್ನಷ್ಟೇ ಗಣನೆಗೆ ತೆಗೆದುಕೊಂಡು ನೋಡಿದರೆ ಒಂದು ಕ್ಷಣ ಎಂತಹವರು ದಂಗಾಗಬೇಕು ಹಾಗಾಗುತ್ತದೆ.
ಒಂದು ಮೂಲಗಳ ಪ್ರಕಾರ, ನಮ್ಮ ಕರ್ನಾಟಕದಲ್ಲೇ 2008 ರಿಂದ 2012 ರ ವರೆಗೆ 2,798 ಅತ್ಯಾಚಾರ ಪ್ರಕರಣಗಳು ನಡೆದಿವೆಯಂತೆ. ಇದು ಪೋಲಿಸ್ ಇಲಾಖಾ ವರದಿಯಾದರೆ ಲೆಕ್ಕಕ್ಕೆ ಸಿಗದೆ ಮಣ್ಣು ಕಚ್ಚಿರುವ ರೋಧನಿಕೆ ಎಷ್ಟು ನಡೆದಿವೆಯೋ ದೇವನೇ ಬಲ್ಲ. ಇನ್ನೂ ಈ ಅಂಕಿ ಸಂಖ್ಯೆಯನ್ನು ದೇಶೀಯ ಮಟ್ಟದಲ್ಲಿ ಗಮನಿಸಿದರೆ 2010 ರಲ್ಲಿ 2,13,585 ಮಂದಿ ಸ್ತ್ರೀಯರ ಮೇಲೆ ದೌರ್ಜನ್ಯ ನಡೆದಿದ್ದು, 22,172 ಲೈಂಗಿಕ ಆಕ್ರಮಣ, 40,613 ಅಸಭ್ಯ ವರ್ತನೆಗಳ ಕೇಸ್‍ಗಳು ದಾಖಲೆಯಲ್ಲಿವೆ. 2011ರ ಅಂಕಿ ಅಂಶಗಳ ಪ್ರಕಾರ ಪ್ರತಿ 54 ನಿಮಿಷಗಳಿಗೊಂದು ರೇಪ್, 51 ನಿಮಿಷಗಳಿಗೊಮ್ಮೆ ಲೈಂಗಿಕ ಕಿರುಕುಳ, 26 ನಿಮಿಷಗಳಿಗೊಮ್ಮೆ ಹೆಂಗಸನ್ನು ಚುಡಾಯಿಸುವುದು, 192 ನಿಮಿಷಗಳಿಗೊಂದು ವರದಕ್ಷಿಣೆ ಕೊಲೆ ನಡೆದಿದೆಯಂತೆ. ಇವೆಲ್ಲವನ್ನು ಮೀರಿ ಇಂದು ಒಂದು ಅಂದಾಜಿನ ಪ್ರಕಾರ ಪ್ರತಿ 30 ನಿಮಿಷಗಳಿಗೊಂದು ರೇಪ್ ನಡೆಯುತ್ತಿದೆಯಂತೆ.
ಅತ್ಯಾಚಾರವೊಂದು ಗುರುತರವಾದ, ಅಮಾನವೀಯ ಅಪರಾಧ ಅದಕ್ಕೆ ತಕ್ಕ ಶಿಕ್ಷೆಯಾಗಬೇಕೆಂಬುನ್ನು ಸಮಾಜ ಪದೆ ಪದೇ  ಸಭೆ, ಪ್ರತಿಭಟನೆ, ಭಾಷಣದಲ್ಲಿ ತೋರ್ಪಡಿಸುತ್ತಿದ್ದರೂ ಯಾವ ಬದಲಾವಣೆಯೂ ಆಗುತ್ತಿಲ್ಲ. ದಿನೇ ದಿನೇ ಹೆಣ್ಣು ಮಕ್ಕಳ ಈ ಶೋಷಣೆ ಜಾಸ್ತಿಯಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಈ ಭವಣೆ ನೀಗಲು ಕಾನೂನು ಕೈ ಇದ್ದರೂ ಸಮರ್ಪಕವಾದ ವಿಚಾರಣೆಯಿಲ್ಲದೆ ಆರೋಪಿಗಳೆಲ್ಲ ಕೈ ತಪ್ಪಿಸಿಕೊಳ್ಳುತ್ತಿದ್ದಾರೆ.
 ಒಂದಂತು ನಿಜ...
‘ದಶ ಶಿರಂ ಪೊತ್ತೊಯ್ಧುದು ಒರ್ಬನ ಸತಿಯನಲ್ತು, ಸತಿತನವನ್  ಉಯ್ದಿಹನ್...’ ಎಂಬ ಸಾಲು ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಹೇಗಿದೆಯೋ ಹಾಗೆ ಇಂದು ಅತ್ಯಾಚಾರ ವೈಯಕ್ತಿಕವಾಗಿ ಯಾವುದೋ ಒಂದು ಹೆಣ್ಣಿನ ಮೇಲೆ ನಡೆಯುತ್ತಿರುವುದಿಲ್ಲ. ಅದು ಇಡೀ ಹೆಣ್ಣು ಕುಲದ ಮೇಲೆ, ಆ ಮನು ಕುಲದ ಮೇಲೆ ನಡೆಯುತ್ತಿರುವ ಅತ್ಯಾಚಾರ. ಅದರ ಹೊಣೆಯನ್ನು ಇಡೀ ಮನುಕುಲವೇ ಹೊರಬೇಕಾಗಿದೆ. ‘ಪುರುಷನಿರಲಾಗದು ಈ ಧರೆಯ ಮೇಲೊರ್ವನುಂ  ಪೊರೆಯದೆ ಅನ್ನೆಗಂ ಆ ಸತೀತ್ವಮಂ...’ ಎಂಬ ರನ್ನನ ಮಾತುಗಳನ್ನು ಸ್ವಲ್ಪ ಬದಲಾಯಿಸಿ ಹೇಳುವುದಾದರೆ, ಈ ಅತ್ಯಾಚಾರದ ಅನಿಷ್ಟವನ್ನು ತಡೆಯಲಾಗದಿದ್ದರೆ ಈ ಭೂಮಿಯ ಮೇಲೆ ವಾಸಿಸುವ ಹಕ್ಕನ್ನು ಮನುಷ್ಯ ಕಳೆದುಕೊಳ್ಳುತ್ತಾನೆ ಎಂದರ್ಥ...

Saturday, 7 November 2015

ಚಿಂತನೆಯಿಂದ ಅಳಿಯದು ಉಳಿವಿನ ಚಿಂತೆ...


“ದೂರದ ಆಂಧ್ರಪ್ರದೇಶಕ್ಕೆ ಸೇರಿದ  ರಾಯದುರ್ಗದ ಮೋಣಕಾಲ್ಮೂರಿನಿಂದ 11 ಕಿ.ಮೀ ದೂರದಲ್ಲಿರುವ ಆಂಧ್ರಕರ್ನಾಟಕ ಗಡಿಭಾಗದ ಊರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ”.
 ಹೀಗೋಂದು ಅಚ್ಚರಿಯ ಸುದ್ಧಿ ಕೇಳಿ ಪುಳಕಗೊಂಡೆ...
                           ನಿಜ ಕೇವಲ ರಾಯದುರ್ಗವಷ್ಟೇ ಅಲ್ಲದೇ ರಾಜ್ಯದ ಗಡಿ ಭಾಗದಲ್ಲಿರುವ ಹಿರಿಯೂರು, ಚಳ್ಳಕೇರೆ, ಮೊಣಕಾಲ್ಮುರು ತಾಲ್ಲೂಕುಗಳು, ಅಲ್ಲಿನ ಅನೇಕ ಹಳ್ಳಿಗಳು, ಮೊಣಕಾಲ್ಮೂರಿನ ನೆರೆಯ ತಾಲ್ಲೂಕುಗಳು, ನೆರೆಯ ಆಂಧ್ರಪ್ರದೇಶದ ಹಳ್ಳಗಳೊಂದಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಪರಸ್ಫರ ಸಂಬಂಧವನ್ನು ಹೊಂದಿರುವುದು ಮಾತ್ರವಲ್ಲದೇ, ಗಡಿಭಾಗದಲ್ಲಿರುವ ಏರಡೂ ರಾಜ್ಯಗಳ ಹಳ್ಳಿಗಳಲ್ಲಿ  ಆಚಾರ, ವಿಚಾರ, ಸಂಸ್ಕøತಿಗಳು ಅದೆಲ್ಲಕ್ಕಿಂತ ಹೆಚ್ಚಾದ ಬುಡಕಟ್ಟು ಸಂಸ್ಕೃತಿ ಒಂದೇ ರೀತಿಯಲ್ಲಿವೆ. ಒಂದು ಮಾಹಿತಿಯ ಪ್ರಕಾರ ಇಡೀ ಆಂಧ್ರದಾದ್ಯಂತ 84 ಕನ್ನಡ ಶಾಲೆಗಳಿದ್ದು, ಅಲ್ಲಿನ ಮಕ್ಕಳು ಕನ್ನಡ ವಿಧ್ಯಾಭ್ಯಾಸವನ್ನೇ ಮಾಡುತ್ತಿದ್ದಾರಂತೆ. ಅಷ್ಟೇ ಅಲ್ಲದೆ ಗಡಿನಾಡಭಾಗದಲ್ಲಿರುವ ಜನ ಕನ್ನಡ ಸಾಹಿತ್ಯವನ್ನು ಓದುವ ಬರೆಯುವ ಹಾಗೂ ಅದರ ಬಗ್ಗೆ ಮಾತನಾಡುವಂತಹ ಅಭಿರುಚಿಯನ್ನು ಹೆಚ್ಚು ಮೈಗೂಡಿಸಿಕೊಂಡಿದ್ದು, ಅಲ್ಲಿ ಸುಮಾರು ಜನ ಕನ್ನಡ ಸಾಹಿತಿಗಳನ್ನು ನಾವು ಕಾಣಬಹುದಾಗಿದೆ ಎಂದರೆ ಅಚ್ಚರಿಯಾಗದೇ ಇರಲು ಸಾಧ್ಯವೇ ನೀವೆ ಹೇಳಿ... ನೋಡಿ ಕನ್ನಡ ಪ್ರೀತಿ ಅಂದರೆ ಇದು. ಗಡಿನಾಡಿನಲ್ಲಿದ್ದುಕೊಂಡು ನಾಡು ನುಡಿಯ ಕಂಪನ್ನು ಉಳಿಸುತ್ತಿರುವ, ಬೆಳೆಸುತ್ತಿರುವ ಅವರ ಮುಂದೆ ರಾಜಧಾನಿಯಲ್ಲಿದ್ದುಕೊಂಡು ಪರಭಾಷೆಯನ್ನು ಉಪಯೋಗಿಸುತ್ತಿರುವ ನಾವುಗಳು ಶೂನ್ಯರೆಂದರೆ ಯಾವ ತಪ್ಪಿಲ್ಲ ಬಿಡಿ...
               ನಿಜಕ್ಕೂ ಸತ್ಯ, ಕನ್ನಡ ಭಾಷೆ, ಅದರ ಉಳಿಯುವಿಕೆಯ ಬಗ್ಗೆ ಈಗಾಗಲೇ ಅನೇಕ ಬಾರಿ ಆಂದೋಲನ, ಜಾಗೃತಿಗಳನ್ನು ನಮ್ಮಲ್ಲಿ ನಾವೇ ಎತ್ತಿಕೊಂಡಿದ್ದರೂ, ಅದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಭಿತ್ತಿಕೊಂಡಿದ್ದರೂ, ಎಲ್ಲವೂ ಮುಗಿದ ಮೇಲೆ ನಾವು ಮೊರೆಹೋಗುವುದು ಅನ್ಯಭಾಷೆಗೆ!!!. ಏನು ಮಾಡಲಾಗದು ಸರ್, ವ್ಯವಹರಿಸಲು, ಆಧುನಿಕತೆಯ ಸರಪಳಿಯಲ್ಲಿ ಬದುಕಲು ಅನ್ಯಭಾಷೆ ಬೇಕೆ ಬೇಕು ಎನ್ನುತ್ತೀರಾ!?... ಇರಬಹುದು ಆದರೆ ಅದನ್ನೇ ನಮ್ಮ ಮುಂದಿನ ತಲೆಮಾರಿಗೆ ವರ್ಗಾಯಿಸಿ, ನೋಡಪ್ಪ ಅದನ್ನು ಬಿಟ್ಟರೆ ಸಾಧನೆ ಸಾಧ್ಯವಿಲ್ಲ. ನಮ್ಮ ಭಾಷೆ ಬೇಕಾಗಿಲ್ಲ ಅನ್ನುತ್ತಿರುವುದು ಎಷ್ಟು ಸರಿ!? ನೀವೆ ಹೇಳಿ!???. ನಾವು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು, ಇಲ್ಲಿನ ಅನ್ನ ನೀರನ್ನೇ ಉಪಯೋಗಿಸಿಕೊಂಡು ನಮ್ಮ ತನವನ್ನೇ ಮರೆತು ಹೆತ್ತವ್ವನ ಭಾಷೆಯನ್ನೇ ಕಡೆಗಣಿಸುತ್ತಿರುವಾಗ, ರಾಜ್ಯದ ಗಡಿ ಭಾಗದಲ್ಲಿ ಇನ್ನೊಂದು ಭಾಷೆಯ ಕಲಿಕೆಯ ಒತ್ತಡವಿದ್ದರೂ ಕನ್ನಡದ ಭಾಷೆಯೇ ಬೇಕು ಎಂದು ಅತೀವ ಆಸಕ್ತಿ ವಹಿಸಿ, ವ್ಯವಹರಿಸಿ, ಶಿಕ್ಷಣ ವಿನಿಮಯಿಸಿಕೊಳ್ಳುತ್ತಿರುವ ಗಡಿನಾಡ ಜನರಿಗೆ ನಿಜಕ್ಕೂ ಸೆಲ್ವ್ಯುಟ್ ಹೊಡೆಯಬೇಕೆನಿಸುತ್ತದೆ.
ಕರ್ನಾಟಕದಲ್ಲಿ ಕನ್ನಡ ಉಳಿಸುವ ಬಗ್ಗೆ, ಬೆಳೆಸುವ ಬಗ್ಗೆ ಚರ್ಚೆ ಆಂದೋಲನಗಳು ನಡೆಯುತ್ತಲೇ ಇರುತ್ತವೆ. ವಿಚಾರವಾದಿಗಳು, ಬುದ್ಧಿಜೀವಿಗಳು ಭಾಷಣ ಬಿಗಿಯುತ್ತಲೇ ಇರುತ್ತಾರೆ. ಆದರೂ ಚಿಂತನೆಗಳಿಂದ ಕನ್ನಡz ಉಳಿವಿನ ಚಿಂತೆ ಮಾತ್ರ ಅಳಿಯುತ್ತಿಲ್ಲ. ಯಾವ ಚಿಂತನೆಗಳು ಕಾರ್ಯರೂಪಕ್ಕೆ ಇಳಿಯದ ಕಾರಣ ಕನ್ನಡದ ಸ್ಥಿತಿ ಇನ್ನೂ ಚಿಂತಾಕ್ರಾಂತವಾಗಿಯೇ ಇದೆ. ಮಾತೆತ್ತಿದರೆ ಕನ್ನಡ ಎಂದು ಹೋರಾಡುವವರೆ ತಮ್ಮ ಮಕ್ಕಳನ್ನು ಒಂಗ್ಲೀಷ್ ಸ್ಕೂಲ್‍ಗೆ ಸೇರಿಸುತ್ತಾರೆ, ದಿನದ ವ್ಯವಹಾರನ್ನು ಅನ್ಯಭಾಷೆಯ ಗೋಜಿಗೆ ಬಿದ್ದು ದಣಿವಾರಿಸಿಕೊಳ್ಳುತ್ತಿದ್ದಾರೆ. ಹೋರಾಟದ ಸಂಖ್ಯೆ, ಹೋರಾಟಗಾರರ ಸಂಖ್ಯೆ, ಅಳಿವಿ ಉಳಿವಿನ ಬಗ್ಗೆ ಮಾತನಾಡುವವರ ಸಂಖ್ಯೆ, ರಾಜಕೀಯ ಪಕ್ಷದ ಕನ್ನಡ ಹೇಳಿಕೆಯ ಕಂತೆ, ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೊಗುತ್ತಿದ್ದರೂ, ನಾಡಿನಲ್ಲಿರುವ ಇಂಗ್ಲೀಷ್ ಶಾಲೆಗಳ ಸಂಖ್ಯೆ, ಅಲ್ಲಿಗೆ ಮಕ್ಕಳನ್ನು ಕಳಿಸುವ ಪೋಷಕರ ಸಂಖ್ಯೆ, ದಿನೇ ದಿನೇ ಹೆಚ್ಚುತ್ತಿರುವ ಅನ್ಯಭಾಷೆಯ ಅಳವಡಿಕೆ, ಯಾವುದು ಕುಗುತ್ತಿಲ್ಲ. ಇಷ್ಟೇಲ್ಲಾ ಧ್ವಂಧ್ವಭಯದ ನಡುವೆಯೂ ಮತ್ತೊಂದು ರಾಜ್ಯೋತ್ಸವ ಬಂದೇ ಬಿಟ್ಟಿದೆ. ಹೋದ ವರ್ಷ ಹಾಕಿದ್ದ ಶಪತಗಳೆಲ್ಲವೂ ಅಲ್ಲೆ ಸತ್ತಿವೆ. ಭಯವಿಲ್ಲ ಈ ವರ್ಷ ಇನ್ನಷ್ಟೂ ಮಾರುದ್ದದ ಶಪತಗಳು ರಾರಾಜಿಸುತ್ತವೆ ಸಂದೇಹವೆ ಬೇಡ. ರಾಜಕೀಯ ಪುಡಾರಿಗಳೇ ದಯವಿಟ್ಟು ನಿಮ್ಮಲ್ಲೊಂದು ವಿನಂತಿ. ನಿಮ್ಮ ಬೆಳೆ ಬೇಯಿಸಿಕೊಳ್ಳಲು ನಮ್ಮ ತಾಯ ನುಡಿಯನ್ನು ಅಸ್ತ್ರವಾಗಿಸಿಕೊಳ್ಳದಿರಿ...
ಮುಖ್ಯವಾಗಿ ರಾಜಧಾನಿಯಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಕನ್ನಡ ಕಲಿಸುವ ಕಾರ್ಯ ಇಂದಿನ ತುರ್ತು ಅಗತ್ಯವಾಗಿ ಬಿಟ್ಟಿದೆಯೇನೊ ಎಂದೆನಿಸುವ ಸುಪ್ತತೆಗೆ ತೆರಳಿರುವುದು ವಿಷಾಧಕರ. ಇದಕ್ಕೆ ಕಾರಣ ಕನ್ನಡ ಭಾರದ ಅನ್ಯಭಾಷೆಯ ಜನ ಇಲ್ಲಿಗೆ ವಲಸೆ ಬಂದಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಕನ್ನಡ ಕಲಿಸುವ ಶಾಲೆಗಳ ಕೊರತೆ ಎನ್ನುವುದು ಎದ್ದು ಕಾಣುತ್ತದೆ.
ಸುಮಾರು 2000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕನ್ನಡ ನೆಲಕ್ಕೆ ಗಟ್ಟಿತನವಿದೆ, ಭವ್ಯ ಪರಂಪರೆ ಇದೆ. ಆದರೆ ನಾವು ಸ್ವಯಂ ಪ್ರೇರಿತರಾಗಿ ಉಳಿಸಿ ಬೆಳೆಸುತ್ತಿಲ್ಲ ಅಷ್ಟೆ. ನಮ್ಮ ಇಡೀ ಭಾರತ ದೇಶದಲ್ಲಿ ನೂರಾರು ಭಾಷೆಗಳು ಸಾವಿರಾರು ವರ್ಷಗಳಿಂದ ಸಹಭಾಳ್ವೆ ನಡೆಸುತ್ತಿದ್ದದ್ದು ನಿಮಗೆ ಗೊತ್ತೆ ಇರಬಹುದು.  ಅದನ್ನು 1929ರಲ್ಲಿ ಲೆಕ್ಕಾಚಾರದ ಆಯಾಮಕ್ಕೆ ತಂದ ಗ್ರಿಯರ್ಸನ್ ಎಂಬಾತ  ಸುಮಾರು 139 ಭಾಷೆಗಳು, 544 ಉಪಭಾಷೆಗಳು ಇವೆಯೆಂದು ಮೊಟ್ಟ ಮೊದಲಬಾರಿಗೆ ಭಾಷಾ ಪರಿವೀಕ್ಷಣೆಯಲ್ಲಿ ಗುರುತಿಸಿ ತಿಳಿಸಿದ್ದ. ನಂತರ 1961ರ ಜನಗನತಿಯು 1652 ವರ್ಗೀಕೃತ ಭಾಷೆಗಳು, 184 ಅವರ್ಗೀಕೃತ ಭಾಷೆಗಳು ಇವೆಯೆಂದು ಗುರುತಿಸಿತು. ಆನಂತರದಲ್ಲಿ ಒಟ್ಟು 22 ಭಾಷೆಗಳನ್ನು ಭಾರತೀಯ ಸಂವಿಧಾ£ದÀ 8ನೇ ಅನುಸೂಚಿಯ ಭಾಷೆಯಲ್ಲಿ ಸೇರಿಸಿದ್ದು ಇದರಲ್ಲಿ ಕನ್ನಡ ಭಾಷೆಯೂ ಒಂದು ಎನ್ನುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ಇಂತಹ ಪುರಾತÀನ ಮಹತ್ವವಿರುವ, ಪ್ರತಿಶತ 99.99ರಷ್ಟು ವೈಜ್ಞಾನಿಕ ಹಾಗೂ ತರ್ಕಬದ್ಧವಾದ ನಮ್ಮ ಭಾಷೆಯನ್ನು ಉಳಿಸಿ-ಬೆಳೆಸಬೇಕಾದ ನಾವೇ ಇಂದು ಮೂಲೆ ಸೇರುತ್ತಿರುವುದು ನೋವಿನ ವಿಚಾರ. ಏನಾದರಾಗಲಿ ಎದ್ದು ಹೊರಾಡೋಣ ನಮ್ಮ ನಾಡು ನುಡಿಯನ್ನು ಎತ್ತಿ ಬೆಳೆಸೋಣ. ಇದು ನಮ್ಮದು ಎನ್ನುವುದಕ್ಕೆ ಹೆಮ್ಮೆ ಪಡೋಣ.
ಉಳಿಸಿ ಬೆಳೆಸುವುದ್ಹೇಗೆ?
ಲೇಖನಗಳು, ಭಾಷಣಗಳು, ಜಾಗ್ರತಿ ಸಭೆಗಳು ಅನಂತವಾಗಿ ಕೇಳಿಬರುತ್ತಲೇ ಇರುತ್ತವೆ ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಕುರಿತು ಚಿಂತನೆ ನಡೆಯುವುದಿಲ್ಲ. ಈ ಬಗ್ಗೆ ಸಾಕಷ್ಟು ಗೊಂದಲ, ಅಡೆ-ತಡೆಗಳಿದ್ದರೂ, ನಮ್ಮ ನಿಟ್ಟಿನಲ್ಲಿ ಒಂದಿಷ್ಟು ಪ್ರಯತ್ನ ಮಾಡುವುದು ನಾಳೆಯ ಕನ್ನಡಕ್ಕೆ ಒಳಿತೆನ್ನಿಸುತ್ತದೆ. ಈಗಾಗಲೇ ‘ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕ’ ಎಂಬ ಗುಂಪೊಂದು ತನ್ನದೇ ಒಂದಿಷ್ಟು ಜನರ ಸಂಘದೊಂದಿಗೆ ಕನ್ನಡ ಭಾಷೆಯ ನಾಳಿನ ಉಳಿವಿಗಾಗಿ ತಮ್ಮ ಕೈಲಾದ ಯತ್ನವನ್ನು ಮಾಡುತ್ತಿದೆ. ಯುದ್ಧರಂಗಕ್ಕಿಳಿಯದೇ ಯುದ್ಧ ಗೆಲ್ಲುವುದು  ಅಸಾಧ್ಯ ಎನ್ನುವಂತೆ ನಾವು ನಮ್ಮ ಭಾಷೆಗಾಗಿ ಕಣಕ್ಕಿಳಿದು ಹೋರಾಡಬೇಕು ಅದರಲ್ಲಿ ಯಾವ ಮುಲಾಜೂ ಬೇಡ. ರಾಜ್ಯ ರಾಜಧಾನಿ ಬೆಂಗಳೂರನ್ನು ತುಂಬುತ್ತಿರುವ ಅನ್ಯಭಾಷಿಕರನ್ನು ಕನ್ನಡ ಕಲಿಯುವಂತೆ ಪ್ರೋತ್ಸಾಹಿಸುವುದರ ಜೊತೆಗೆ ಭಾಷಾಭಿಮಾನವನ್ನು ಬೆಳೆಸಬೇಕು. ಕನ್ನಡ ನಾಡಿನ ಸಂಸ್ಕ್ರತಿ, ಸಾಹಿತ್ಯ ಶ್ರೀಮಂತಿಕೆಯನ್ನು ಹೊಗಳುವ ಮತ್ತು ಹಬ್ಬಿಸುವ ಕೆಲಸಕ್ಕೆ ನಮ್ಮ ಭಾಷಣಿಕರು, ನುಡಿಪ್ರೇಮಿಗಳು, ಸಂಘಟನೆಗಳು  ಸೀಮಿತವಾಗದೇ ನಮ್ಮ ಭಾಷೆಯ ಗತ್ತನ್ನು ಕಾರ್ಯರೂಪzಲ್ಲಿ ತೋರಿಸಿ, ಅವ್ಯಾಹತವಾಗಿ ತೋರಿಸಿ ಎಲ್ಲರಲ್ಲೂ, ಕನ್ನಡವೆ ಸತ್ಯ, ಕನ್ನಡವೇ ನಿತ್ಯವೆನ್ನುವ ಬೀಜವನ್ನು ಭಿತ್ತಬೇಕು. ಅಷ್ಟೇ ಅಲ್ಲದೇ ನಗರದ  ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಸಂಘ ಸಂಸ್ಥೆಗಳ ಸಮೀಕ್ಷೆ ಮಾಡಿ ಅಲ್ಲಿನ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ನಾಡಿನ ಗಡಿ ಪ್ರದೇಶದಲ್ಲಿರುವ ಶಾಲೆಗಳಿಗೆ ಸರಿಯಾದ ಮೂಲಭೂತ ವ್ಯವಸ್ಥೆ ಹಾಗೂ ಅಗತ್ಯ ಪಠ್ಯಪುಸ್ತಕಗಳ ಸೌಕರ್ಯವನ್ನು ಸರ್ಕಾರ ಓದಗಿಸಬೇಕು. ಕನ್ನಡ ಭಾರದಿರುವವರು ದಿನೇ ದಿನೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು ಭಾಷಾಮಾಲಿನ್ಯಕ್ಕೆ ನೇರ ಕಾರಣವಾಗುತ್ತಿದೆ. ಅದಕ್ಕಾಗಿ ಎಲ್ಲರೂ ಸುಲಭವಾಗಿ ಅರಿಯುವ ಹಾಗೂ ಸಂಭಾಷಿಸುವಂತಹ ಸ್ವಯಂ ಭೋಧನ ಕಲಿಕಾ ಪುಸ್ತಕಗಳನ್ನು ಪ್ರಕಟಿಸಬೇಕು. ಕಾರ್ಮಿಕರ ಅನಕ್ಷರಸ್ತ ಮಕ್ಕಳಿಗೆ ಕನ್ನಡ ಭೋಧಿಸುವ ಕಾರ್ಯ ಸರ್ಕಾರ ರೂಪಿಸಬೇಕು.ಕನ್ನಡ ಶಾಲೆಗಳ ಬೆಳವಣಿಗೆಗೆ ಶ್ರಮಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರು ಕನ್ನಡ ಪತ್ರಿಕೆಗಳನ್ನು ಮತ್ತು ಕನ್ನಡ ಪುಸ್ತಕಗಳನ್ನು ಕೊಂಡು ಓದುವ  ಸಂಸ್ಕøತಿಯನ್ನು ಬೆಳೆಸಿಕೊಳ್ಳಬೇಕು. ಅಂಗಡಿ ಮುಂಗಟ್ಟುಗಳ ಮುಂದೆ ಬರೆಯುವ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲೇ ಲಿಪಿಯ ಸೌಂದರ್ಯ ಕೆಡದಂತೆ ಬರಯುವ ಕೆಲಸವನ್ನು ಕಡ್ಡಾಯಗೊಳಿಸಬೇಕು.
ವಾಹನದ ತೆಕ್ಕೆಗೆ ಕನ್ನಡ ಭಾವುಟವನ್ನು ಹಾಕಿ ಒಡಾಡುವುದರಿಂದ, ತಮಿಳು, ಮರಾಠಿ ಜನರಿಗೆ ಹೊಡೆಯುವುದರಿಂದ, ಅನ್ಯರಾಜ್ಯದವರ ಪ್ರತಿಮೆ ಅನಾವರಣ ಮಾಡುವುದನ್ನು ನಿಲ್ಲಿಸುವುದರಿಂದ ,ದುಂದು ವೆಚ್ಚದ ರಾಜ್ಯೋತ್ಸವದ ಆಚರಣೆಯಿಂದ, ಬೇರೆ ಭಾಷೆಯ ಚಲನಚಿತ್ರ ಟಿ.ವಿ. ಚಾನೆಲ್ ಗಳನ್ನು ನಿರ್ಭಂಧಿಸುವುದರಿಂದ ಕನ್ನಡದ ಬೆಳವಣಿಗೆಯಾಗುತ್ತದೆ ಎನ್ನುವುದು  ಕೇವಲ ಭ್ರಮೆ ಮಾತ್ರ. ಈ ವಿಧಾನಗಳೆಲ್ಲ ಒಂದು ಸಾರಿ ಕನ್ನಡಿಗರನ್ನು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಮಾಡಬಹುದೇ ವಿನಃ ಬೇರೇನೂ ಸಾಧಿಸದು.
ಇನ್ನಾದರೂ ಮಾತು ಕಡಿಮೆ ಮಾಡಿ ಕೈಗೊಂಡಿರುವ, ಹಿಂದೆ ವಾಚಸಿಕೊಂಡಿರುವ ಮಾತುಗಳ ನೆರವೇರಿಕೆಯನ್ನು ಕಾರ್ಯಗತಗೊಳಿಸಲು ಪಣತೊಡೋಣ. ಅದರ ಮೂಲಕ ನಮ್ಮ ನಾಡು-ನುಡಿಯನ್ನು ಉಳಿಸೋಣ ಬೆಳೆಸೋಣ ಏನಂತೀರಾ!?...

.................................ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು................................................

Friday, 6 November 2015

ಅಕ್ರಮ ಮಧ್ಯ ಮಾರಾಟ, ಮಂದಿಗೆ ಮಾರಣವಾಗುತ್ತಿದೆ.

ಹಳ್ಳಿಗಳ ಮೂಲೆ ಮೂಲೆಯ ಜನತೆಯಲ್ಲಿ ಬೀಡು ಬಿಟ್ಟ ಆತಂಕ
ಇದು ಸೆಕೆಂಡ್ಸ್ ಮಧ್ಯವಲ್ಲ ಬದಲಾಗಿ ನಕಲಿ ಮಧ್ಯ
ಇದೇ ರೀತಿ ಗ್ರಾಮೀಣ ಭಾಗದಲ್ಲಿ ತೀರ್ಥ ಸಮಾರಾಧನೆ ಮಿತಿಮಿರಿದರೆ ಮುಂದಾಗುತ್ತದೆ  ವ್ಯಸನಿಯ ವೈಕುಂಟ ಸಮಾರಾಧನೆ
ಪಾಕೆಟ್ ಹೋಯ್ತು ಬಾಟಲಿ ಬಂತು


         ಕಳೆದ ಏಳೆಂಟು ವರ್ಷಗಳ ಹಿಂದೆ ರಾಜ್ಯ ಸರಕಾರ ಸಾರಾಯಿ ನಿಷೇಧ ಮಾಡಿದಾಗ ಸರಕಾರವೇನೋ ಘÀನಂಧಾರಿ ಕೆಲಸ ಮಾಡಿತ್ತು ಎಂಬಂತೆ ಎಲ್ಲರೂ ಬೇಷ್ ಎಂದಿದ್ದೂ ಈಗಲೂ ನಿಮಗೆಲ್ಲಾ ನೆನಪಿರಬಹುದು. ಅಂದಿನ ಕಾಲಘಟಕ್ಕೆ  ಆ ನಿಷೇಧದ ನಿರ್ಧಾರ ರಾಜ್ಯಕ್ಕೆ ಒಳ್ಳೆಯದು ಕೂಡ ಆಗಿತ್ತು. ಆದರೆ ಇಂದು ಕರಾವಳಿ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲೂ ಅಕ್ರಮ ಮಧ್ಯ ಮಾರಾಟದ ಜಾಲ ಭುಗಿಲೆದ್ದಿದ್ದು, ಈಗÀದನ್ನು ಅದನ್ನು ಹತ್ತಿಕ್ಕದಿದ್ದರೆ ನಾಳೆಯ ದಿನಗಳಲ್ಲಿ ಅದು ಗ್ರಾಮೀಣವಾಸಿಗಳ ಜನ ಜೀವನವನ್ನು ತತ್ತರಿಸಿ ಬಿಡುವುದರಲ್ಲಿ ಯಾವ ಸಂಶಯವಿಲ್ಲ. ಅಂದದರ ನಿಷೇಧ ಕಂಡಾಗ ಎಷ್ಟೋ ಮನೆಗಳಲ್ಲಿ ನಗುವಿನ ಅಲೆ ತೇಲಿತ್ತು, ಆದರೆ ಇಂದು ಆ 10 ರುಪಾಯಿಗೆ ಸಿಗುತ್ತಿದ್ದ ಸಾರಾಯಿ ಪಾಕೆಟ್‍ಗಳಾದರೂ ವಾಸಿಯಾಗಿತ್ತು ರೀ, ನೂರಿನ್ನೂರು ರೂಪಾಯಿಯ ಬಾರ್ ಬಾಟಲಿಯ ಸಹವಾಸದಿಂದ ಗಂಜಿ ನೀರಿಗೂ ಪರದಾಡುವಂತಾಗಿದೆ ಎನ್ನುವ ಪರಿಸ್ಥಿತಿ ಎದುರಾಗಿದೆ!.
ಅಂದು ಹೇಗೆ ಮಾರು ದೂರದ ಅಂಗಡಿಗಳಲ್ಲಿ ಸಾರಾಯಿ ಅಂಗಡಿ ಎನ್ನುವ ಫಲಕದೊಂದಿಗೆ ಪಾಕೆಟ್‍ಗಳ ಸಾರಾಯಿ ಸಿಗುತ್ತಿತ್ತೋ, ಇಂದು ಅದೇ ರೀತಿ ನಾಮಫಲಕದ ಜೋತುವಿಕೆ ಇಲ್ಲದೇ ಬಾರ್‍ನ ಬಾಟಲಿಗಳು ಬಾಕ್ಸ್ ಬಾಕ್ಸ್ ನಲ್ಲಿ ಸಿಗುತ್ತಿವೆ. ಇದರಲ್ಲಿ ಸ್ಥಳೀಯ ಬಾರ್ ಓನರ್‍ಗಳ ಕೈವಾಡವೂ ಇದ್ದು, ಬಾರ್‍ನಿಂದ ಹಳ್ಳಿಯೊಳಗೆ ದಿನಸಿ ಅಂಗಡಿಗಳಿಗೆ ಡೈರೆಕ್ಟ್ ಸರಂಜಾಮು ಸಿಕ್ಕಿ ಊರಿಗೆ ಊರೇ ಕೆಡುವಂತೆ ಮಾಡುತ್ತಿದೆ. ಅನೇಕ ಹೆಂಗಸರು ಮಕ್ಕಳು ಇದರಿಂದ ಬೀದಿಗೆ ಬರುತ್ತಿದ್ದರೂ, ಸರ್ಕಾರ ಈ ಬಗ್ಗೆ ಯಾವುದೇ  ಕಟ್ಟುನಿಟ್ಟಿನ ಕ್ರಮವನ್ನೂ, ಕೈಗೊಳ್ಳದಿರುವುದು ನಿಜಕ್ಕೂ ಭಯತರಿಸುವಂತಿದೆ.
  ನಮ್ಮ ದೇಶದ ಜೀವಾಳವೇ ಹಳ್ಳಿಗಳು, ಗ್ರಾಮೀಣ ಪ್ರದೇಶಗಳು. ನಮ್ಮೆಲ್ಲರ ಅಳಿವು ಅಲ್ಲಿದೆ. ಉಳಿವೂ ಅಲ್ಲಿದೆ. ಹಳ್ಳಿಗಳನ್ನು ನಾವಿಂದು ಸುವ್ಯವಸ್ಥಿತವಾಗಿ ಉಳಿಸಿದರೆ ಅವು ಮುಂದೆಯೂ ನಮ್ಮನ್ನು ಸುಭಿಕ್ಷವಾಗಿ ಉಳಿಸುತ್ತವೆ. ಆದ್ದರಿಂದ ಹಳ್ಳಿಗಳನ್ನು ನಿರ್ಲಕ್ಷಿಸಿದರೆ ನಮಗೆ ಉಳಿಗಾಲ ಖಂಡಿತ ಇರುವುದಿಲ್ಲ. ಬಹಳ ವರ್ಷಗಳ ಹಿಂದೆ ಶೇ. 80ರಷ್ಟಿದ್ದ ಹಳ್ಳಯ ಜನಸಾಂಧ್ರತೆ ನಗರೀಕರಣದಿಂದ ಶೇ. 40 ರಿಂದ 50 ರ ಆಸುಪಾಸಿನಲ್ಲಿದೆ. ಇದೀಗ ಹಳ್ಳಿಯೂ ಬದಲಾವಣೆ ಕಂಡಿದೆ ಹಳ್ಳಿಯ ಜನರೆಲ್ಲ ಕೆಲಸವರಸಿ ಸಿ.ಟಿಯ ಕಡೆ ಪಯಣಿಸುತ್ತಿದ್ದಾರೆ ಇದರಿಂದ ಯಾವ ನಷ್ಟವಿಲ್ಲ. ದೇಶ ಪ್ರಗತಿಯಾಗುತ್ತದೆ, ಆದರೆ ಅನಾಚಾರ, ಅನಾಗರಿಕ, ಅವ್ಯವಸ್ಥೆ, ಅಕ್ರಮ, ಇತ್ಯಾಧಿಗಳು ನಡೆದರೆ ಮುಂಬರುವ  ಫಲ ಇಡೀ ದೇಶಕ್ಕೆ ದೇಶವೇ ಪಶ್ಚಾತಾಪಪಡುವಂತಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಶ್ರೀಮಾನ್ ರಾಜಕಾರಣಿಗಳೇ ನೀವೂ ಇಲೆಕ್ಷನ್ ಟೈಮಲ್ಲಿ, ಗೆದ್ದ ನಡುವಲ್ಲಿ, ಅದು ಇದು ಅಂತ ವಾಕ್ ಚಾತುರ್ಯವಾ ತೋರಿಸುತ್ತಾ ಮನೆ ಮನೆಗೆ ಕೇಳುವಂತೆ ಕೂಗುತ್ತಿರಿ, ಆದರೆ ಇಂದು ನಿಮ್ ಹಳ್ಳಿಗಳೇ ಈ ಅಕ್ರಮಗಳಲ್ಲಿ ಬಿದ್ದು ಸಾಯುತ್ತಿದೆ, ನೋಡಿ ಮಾಡಿ ಸರಿಪಡಿಸಲು ನಿಮಗೇನು ದಾಡಿಯಾ!? ಮುಖ್ಯಮಂತ್ರಿಗಳೇ ನಗರ ಮಂದಿಗೆ ಅದು ಇದು ಅಂತ ಹಣ ಸ್ಯಾಂಕ್ಷೆನ್ ಮಾಡುತ್ತಿರುವಿರಿ ಆದರೆ ದೇಶದ ಜೀವಾಳವೇ ಆಗಿರುವ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ, ಅಕ್ರಮಗಳ ತಡೆಯುವಲ್ಲಿ ದಕ್ಷ ಅಧಿಕಾರಿಗಳ ನೇಮಕ, ಸರಿಯಾದ ಕಟ್ಟುನಿಟ್ಟಿನ ಕ್ರಮ ಇತ್ಯಾದಿಗಳನ್ನು ಯಾಕೆ ಕೈಗೊಳ್ಳುತ್ತಿಲ್ಲ!?, ನಗರ ಪ್ರದೇಶದಲ್ಲಿ ಬೇರೆ ಬೇರೆ ಕೆಲಸಕ್ಕೆ ಹಣ ಬಿಡುಗಡೆ ಮಾಡುವ ನೀವುಗಳು ಹಳ್ಳಿಗಳ ಬೆಳವಣಿಗೆಗೆ ಯಾಕೆ ಸಹಕರಿಸುತ್ತಿಲ್ಲ!?, ಲಂಚಗುಳಿಕ ತನದ ಅಧಿಕಾರಿಗಳು ಇದ್ದರೆಂದು ತಿಳಿದರೂ ಅವರನ್ಯಾಕೆ ಕೆಲಸದಿಂದ ಎತ್ತಂಗಡಿ ಮಾಡುತ್ತಿಲ್ಲ!?, ಇದರಿಂದ ನಿಮಗೆಷ್ಟು ಹಣ ಕಿಸೆತುಂಬುತ್ತಿದೆ ಹೇಳಿ!?.
ಕಣ್ಣೇದುರೇ ಸೋಗಲಾಡಿಯ ದಂಧೆಗಳು ನಡೆಯುತ್ತಿದ್ದರೂ ಕಣ್ಣಿದ್ದು ಇಲ್ಲದವರಂತೆ ಮೂಖರಾಗಿ ನಿದ್ರಿಸುತ್ತಿರುವಿರಲ್ಲ ಅಧಿಕಾರಿಗಳೇ,  ನಿಮಗೆ ನಿಮ್ಮ ಕೆಲಸದಲ್ಲಿ ಅತೃಪ್ತಿ ಅಥವಾ ಧೃಡ ಮನಸ್ಸು ಇಲ್ಲವೆಂದರೆ ಹೇಳಿಬಿಡಿ ನಿಮಗಿಂತಲೂ ಹೆಚ್ಚು ಓದಿರುವ ಟ್ಯಾಲೆಂಟೆಡ್ ಎಂಗ್ ಮೈಂಡೆಡ್ ಹುಡುಗ/ಹುಡುಗಿಯರು ಕೆಲಸಕ್ಕಾಗಿ ಕಾದು ಕುಳಿತಿದ್ದಾರೆ ಅವರಿಗಾದರೂ ಆ ಕೆಲಸ ಬಿಟ್ಟುಕೊಟ್ಟು ಸೈಲೆಂಟ್ ಆಗಿ ಸೈಡ್‍ಗೆ ಹೋಗಿ ಆಗಲಾದರೂ ದಕ್ಷ ರಾಜ್ಯ ಸೃಷ್ಟಿಯಾಗುತ್ತದಾ, ಇಲ್ಲವಾ ನೋಡೋಣ...
ವಿಷಯಕ್ಕೆ ಬರುತ್ತೇನೆ..,
ಕುಡಿತ ಕುಡಿಯುವವರನ್ನು, ಕುಡಿಯದವರನ್ನು ಟೋಟಲ್ಲಿ ಇಡೀ ಫ್ಯಾಮಿಲಿಯನ್ನು ವಿನಾಶದಂಚಿಗೆ ದೂಡುವುದಲ್ಲದೇ ಮಿತಿಮೀರಿದರೆ ದೇಶಭಾಂಧವ್ಯಕ್ಕೂ ಧಕ್ಕೆ ತರುವ ಪರಿಣಾಮಕಾರಿ ಕೆಟ್ಟತನವನ್ನು ಬೀರುತ್ತದೆ ಎಂಬ ಮಾತು ನೂರಕ್ಕೆ ನೂರು ಸತ್ಯ. ಮಧ್ಯಪಾನದಿಂದ ಸತ್ತವರ ಪ್ರತಿ ಕುಟುಂಬದಲ್ಲೂ ಒಂದೊಂದು ನೋವಿನ ಕಥೆ ಇದೆ, ಕೆಲ ಕುಟುಂಬಗಳು ಅನಾಥವಾಗಿವೆ, ಸತ್ತವರ ಮನೆ ಮಕ್ಕಳು ವಿಘಟಿತರಾಗಿದ್ದರೆ, ಮಡದಿ ಮಕ್ಕಳು ಊಟಕ್ಕಾಗಿ ಕೂಲಿನಾಲಿಯನ್ನೇ ಅವಲಂಭಿಸುವ ಪರಿಸ್ಥಿತಿ ನಿರ್ಮಾಣವಾಗಿವೆ. ಹೀಗೆ ಪಟ್ಟಿಗೈಯುತ್ತಾ ಹೋದರೆ ಮಧ್ಯಪಾನ ಮನೆ ಕೆಡಿಸಿ ತಲ್ಲಣಿಸುತ್ತಿದೆ ಅಲ್ಲದೇ ಬೇರೇನೂ ಉಪಯೋಗಿ ಕಾರ್ಯ ಮಾಡುತ್ತಿಲ್ಲ. ಒಂದು ಕಡೆ ರೈತರ ಸಾಲ ಭಾದೆಯ ಸಾವು ಇನ್ನೊಂದು ಕಡೆ ಈ ಸಮಸ್ಯೆ. ದಿನಕಳೆದರೆ ಏನಾಗುತ್ತದೋ ತಿಳಿಯುತ್ತಿಲ್ಲ. ಸರ್ಕಾರಕ್ಕೆ ಇದು ತಿಳಿಯುತ್ತಿಲ್ಲ, ಎಲ್ಲ ಆದ ಮೇಲೆ ಚಿಂತಿಸಿ ಫಲವಿಲ್ಲ.
 ಇದೀಗ ಹಳ್ಳಿಗಳಲ್ಲಿ ಅಕ್ರಮವಾಗಿ ಎಣ್ಣೆ ಸರಭರಾಜು ಎತೇಚ್ಚವಾಗಿ ನಡೆಯುತ್ತಿರುವುದು ನೋಡಿದರೆ ಕಣ್ಣಾಲಿಯಲ್ಲಿ ಭಯ ದಿಗಿಲುಗೊಳ್ಳುತ್ತಿದೆ. ಹಳ್ಳಿ ಮಂದಿಯ ಕೆಲವರಿಗೆ ಕುಡಿಯೋದೆ ಕೆಲಸವಾದರೆ ಇನ್ನೂ ಕೆಲವರಿಗೆ  ಬೀದಿ ಬೀದಿಯ ಅಂಗಡಿಗಳಲ್ಲಿಟ್ಟು ಮಾರೋದೆ ಬ್ಯುಸಿನ್ನೆಸ್ಸಾಗಿದೆ. ಒಂದು ಮೂಲದ ಪ್ರಕಾರ ಊರನ್ನೇ  ಕಾದು ಸುವ್ಯವಸ್ಥೆಯಲ್ಲಿಡಬೇಕಾದ ಪೋಲೀಸರು ಹಣದ ಆಮೀಷಕ್ಕೆ ಬಿದ್ದು ತಿಂಗಳಿಗೆ ಇಂತಿಷ್ಟು ಎಂಬಂತೆ ಲಂಚ ಪಡೆದು, ಅಕ್ರಮ ಧಂಧೆಗಳು ತಮ್ಮೆದುರೇ ನಡೆಯುವುದ ತಿಳಿದರೂ ಸುಮ್ಮನಿರುತ್ತಿದ್ದಾರೆ. ಇದು ರೋಲ್ ಕಾಲ್ ರೂಪವನ್ನು ಕರಾವಳಿಯ ಅನೇಕ ಕಡೆ ಕಾಣುತ್ತಿದ್ದು, ಕಾವಲು ಪಡೆಯುವವನೇ ಜಗಕೆ ಕತ್ತಲಾಗುತ್ತಿದ್ದಾನೆ. ಈ ಅವ್ಯವಸ್ಥೆ ಸರಕಾರ ಮನಗಾಣಬೇಕು. ಕುಡಿತದಂತ ಕೆಟ್ಟ ಚಟ ಹಳ್ಳಿಗಳಲ್ಲಿ ಪ್ರಭೆಬೀರುವುದನ್ನು ತಡೆಗಟ್ಟಬೇಕು. ಭ್ರಷ್ಟ ಅಧಿಕಾರಿಗಳನ್ನು ಕೈ ಬಿಟ್ಟು ದಕ್ಷ ಅಧಿಕಾರಿಗಳ ನೇಮಕಕ್ಕೆ ಸಾಕ್ಷಿಯಾಗಬೇಕು, ಇದಕ್ಕಾಗಿ ಸೂಕ್ತ ಕ್ರಮಗಳನ್ನು ಆದಷ್ಟು ಬೇಗ ಜರುಗಿಸಬೇಕು.

 ಆಧೀಕೃತವಾಗಿ ಮುಖ್ಯಗ್ರಾಮಗಳಲ್ಲಿ ಬಾರ್ ಹಾಗೂ ಮದ್ಯದಂಗಡಿ ನಡೆಸಲು ಲೈಸನ್ಸ್ ನೀಡಿರುವುದೇ ಇದಕ್ಕೆಲ್ಲಾ ಮುಖ್ಯ ಕಾರಣವಾಗಿದ್ದು, ಅನಧೀಕೃತವಾಗಿರುವ ಹಾಗೂ ನಿರ್ದಿಷ್ಟ ಪ್ರದೇಶಕ್ಕೆ ಇಂತಿಷ್ಟು ಎಂಬಂತೆ ಪರಿಷ್ಕರಿಸಿ ಹೆಚ್ಚು ಉಳಿದಿರುವ ಎಲ್ಲಾ ಮಧ್ಯದಂಗಡಿಗಳನ್ನು ಮುಚ್ಚಿಸುವ ಕೆಲಸ ಮಾಡುವುದರ ಜೊತೆಗೆ, ಏಕಾಏಕೀ ಲೈಸೆನ್ಸ್ ನೀಡುವ ಪದ್ಧತಿಯನ್ನು ನಿಲ್ಲಿಸಬೇಕು. ಹಳ್ಳಿ ಹಳ್ಳಿಗಳ ಸಣ್ಣ ಪುಟ್ಟ ಕಿರಾಣಿ ಅಂಗಡಿ ಸೇರಿದಂತೆ, ಹೊಲ ಗದ್ದೆಯ ಗುಡಿಸಲು, ಹಾಡಿ ಗುಡ್ಡಗಳಲ್ಲು ಅನಧೀಕೃತ ಸ್ಟೋರೆಜ್‍ನ ಜೊತೆಗೆ ಮಾರಾಟಗಳು ನಡೆಯುತ್ತಿದ್ದು, ಇದನ್ನೆಲ್ಲ ತಡೆಯಲೋಸುಗವಾಗಿ ಒಂದಿಷ್ಟು ದಕ್ಷ ಅಧಿಕಾರಿಗಳನ್ನು ನೇಮಕ ಮಾಡಿ ತಪಾಸಣೆಗೆ ಬಿಟ್ಟು ಅಕ್ರಮದಂಧೆಗಾರರನ್ನು ಬಂಧಿಸಬೇಕು.
ಹಳ್ಳಿ ಹಾಗೂ ಗ್ರಾಮೀಣ ಪ್ರದೇಶವಾಸಿಗಳೇ ಕೊನೆಯಲ್ಲಿ ಒಂದು ಮಾತು, ಅಪಾಯಕಾರಿ ಮಧ್ಯದ ಚಟದಿಂದ ಹೊರಬರಲು ಸಾಕಷ್ಟು ಉಪಾಯಳಿವೆ. ಯಾರೇನೆಂದರೂ ನಿಮ್ಮ ನಿರ್ಧಾರದ ಮೇಲೆ ಎಲ್ಲಾ ನಿಂತಿರುವುದು. ವ್ಯಸನಿಗಳ ನಿರ್ಧಾರದಿಂದ ಮಾತ್ರ ಮಧ್ಯದ ಗೀಳನ್ನು ಬಿಡಲು ಸಾಧ್ಯ. ಗಟ್ಟಿ ಮನಸ್ಸು ಮಾಡಿ ಮಧ್ಯವ್ಯಸನದಿಂದ ಹೊರಬರಲು ಪ್ರಯತ್ನಿಸಿ. ಇದರಿಂದ ಉತ್ತಮ ಆರೋಗ್ಯ ಹೊಂದಿ ಬಹುಕಾಲ ಬಾಳಲು ಸಾಧ್ಯ. ವಿಷವಾದರೂ ಒಂದೇಟಿಗೆ ವ್ಯಸನಿಯೊಬ್ಬನನ್ನೇ ಸಾಯಿಸಬಹುದು ಆದರೆ ಕುಡಿತ ನಿಧಾನವಾಗಿ ಇಡೀ ಮನೆ ಮಠವನ್ನೇ ಸಾಯಿಸುತ್ತದೆ. ಜಾಗೃತರಾಗೋಣ-ಜಾಗೃತಗೊಳಿಸೋಣ-ಜಾಗೃತಿ ಇರೋಣ...

ಹೆಣ್ಣು-11




ಹೆಣ್ಣು ಮನುಪ್ರಣಿತ ಪುರುಷಕೇಂದ್ರಿತ ವ್ಯವಸ್ಥೆಯಲ್ಲಿ ಬೇರುಗಂಟಿದಂತೆ ಯಾವಾಗಲೂ ಪುರುಷನಿಂದಲೇ ದೌರ್ಜನ್ಯಕ್ಕೆ ಒಳಗಾಗಿ ಸಾಯುತ್ತಾಳೆ ಎನ್ನುವ ಮಾತು ಶುದ್ಧ ಸುಳ್ಳು. ಯಾಕೆಂದರೆ ಇತ್ತೀಚಿಗೆ ಅನೇಕ ಹೆಣ್ಣು ಮಕ್ಕಳು ಯಾವ ದೌರ್ಜನ್ಯವೂ ಇಲ್ಲದೇ ಸಾವನ್ನು ಕಾಣುತ್ತಿರುವುದೇ ಈ ಮಾತಿಗೆ ಕಾರಣ. ಮೊನ್ನೆ ಮೊನ್ನೆ ನಡೆದ ಒಂದು ಘಟನೆ ನಿಜಕ್ಕೂ ಈ ಮೇಲೆ ಆಡಿದ ಮಾತಿಗೆ ಕಾರಣವೆಂದು ಕಡಾಖಂಡಿತವಾಗಿ ಹೇಳುವೆ. ಆಗಿದ್ದಿಷ್ಟು...
ಮಂಗಳೂರು ಸಮೀಪದ ಹಳ್ಳಿಯೊಂದರಲ್ಲಿ ಪಿ.ಯು.ಸಿ ಓದುತ್ತಿರುವ ಹುಡುಗಿಯೊಬ್ಬಳು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳದಿನ್ನು ಚಿಗುರುತ್ತಿರುವ ಬದುಕು. ಯಾವ ಕಷ್ಟವಾಗಲಿ, ಹಿತಶತ್ರುಗಳಾಗಲಿ, ಜೀವನದ ಸಮಸ್ಯೆಯಾಗಲಿ ಅವಳಿಗಿರಲಿಲ್ಲ. ಆದರೆ ಅವಳ್ಯಾಕೆ ಜೀವ ತೆಗೆದುಕೊಂಡಳು ಎನ್ನುವುದೇ ಎಲ್ಲರ ಯಕ್ಷ ಪ್ರಶ್ನೆ!?.
 ಸರಿ ಸುಮಾರು  ಇಪ್ಪತ್ತು ದಿನಗಳ ಬಳಿಕ ಅವಳ ಸಾವಿಗೆ, ಮಾನಸಿಕ ದೌರ್ಬಲ್ಯವೇ ಕಾರಣ ಎಂದು ಪ್ರಾಥಮಿಕ ವರದಿಯೊಂದು ತಿಳಿಸಿತು. ನಿಜಕ್ಕೂ ಇತ್ತೀಚಿಗೆ ಇಂತಹ ಘಟನೆಗಳು ಜಾಸ್ತಿಯಾಗುತ್ತಿವೆ. ಆಕೆಗೆ ಎಲ್ಲವೂ ಚೆನ್ನಾಗಿತ್ತು. ಓದುತ್ತಿರುವ ಕಾಲೇಜು, ಅಪ್ಪ-ಅಮ್ಮ ಬೆಳೆಸಿದ ರೀತಿ, ಮನೆ ಪರಿಸರ, ಗೆಳೆಯ-ಗೆಳತಿಯರು ಹೀಗೆ ಪ್ರತಿಯೊಂದು ಚೆನ್ನಾಗಿದ್ದ ಅವಳಿಗೆ ಆ ದಿನ ಸಾಯಲು ಕಾರಣವಾಗಿದ್ದು ಯಾವುದೋ ಸಣ್ಣ ಸಿಲ್ಲಿ ಮ್ಯಾಟರ್. ಅವರ ತಂದೆಯವರೇ ಹೇಳುವ ಹಾಗೆ ಡ್ರೆಸ್ ಬೇಕು ಎಂದು ಹಠ ಹಿಡಿದಿದ್ದಳಂತೆ, ಈಗ ಆಗಲ್ಲ ಸ್ವಲ್ಪ ದಿನದ ಬಳಿಕ ತೆಗೆದುಕೊಡುವೆ ಎಂದಾಗ ಕೋಪ ದುಃಖ ಎರಡನ್ನು ಉಮ್ಮಳಿಸಿಕೊಂಡ ಆಕೆ ಈ ಕೆಟ್ಟ ವರ್ತನೆ ತೋರಿದ್ದಾಳೆ.
ಯಾಕೆ ಹೀಗೆ!? ಹೆಣ್ಣಿನ ಮನಸ್ಸು ಬೆಣ್ಣೆಯಂತೆ ಎಂಬ ಮಾತಿದೆ ನಿಜ ಆದರೆ ಇಷ್ಟೊಂದು ಮೃದುವಾಗಿರುತ್ತದಾ!? ಹುಟ್ಟು ಅಂದ ಮೇಲೆ ಒಬ್ಬರಿಂದ ಒಬ್ಬರಿಗೆ  ನಾನಾ ರೀತಿಯ ವ್ಯತ್ಯಾಸಗಳಿರುವುದು ಸಹಜ. ಅದಕ್ಕಾಗಿ ನಿರಾಶವಾದಿಗಳಾಗದೇ ಎದುರಿಸುವ ಧೈರ್ಯಶಾಲಿಗಳಾಗಬೇಕು. ಜಗತ್ತು ಇಂದು ನಮಗಾಗಿ ಏನು ನೀಡದೇ ಇರಬಹುದು ಆದರೆ ಶ್ರಮಪಟ್ಟು ಜೀವನವನ್ನು ಪ್ರೀತಿಸಿ ಮುಂದೆ ಅಡಿ ಇಟ್ಟರೆ ಖಂಡಿತಾ ನಾವಂದುಕೊಂಡದ್ದನ್ನೆಲ್ಲಾ ಸಾಧಿಸಿ ಪಡೆಯಬಹುದು. ಸಮಾಜ ಬದಲಾಗುತ್ತಿದೆ ಅದರಂತೆ ನಾವು ಬದಲಾಗುತ್ತಿದ್ದೇವೆ. ಎಷ್ಟೋ ಜನ್ಮದ ಪುಣ್ಯದ ಫಲವಾಗಿ ಮನುಷ್ಯ ಜನ್ಮವನ್ನು ತಾಳುತ್ತೆವೆಂದು ಪುರಾಣದಲ್ಲೊಂದು ಮಾತಿದೆ ಅಂತಹ ಪವಿತ್ರ ಜನ್ಮವನ್ನು ಬೇಡವೆಂದು ತಿರಸ್ಕರಿಸಿಕೊಂಡು ಜೀವ ಕಳೆದುಕೊಳ್ಳುವುದು ಎಷ್ಟು ಸರಿ!?.
ಚರಿತ್ರೆಯಲ್ಲಿ ಅವಳದು ದುರವಸ್ಥೆ ಇರಬಹುದು. ಆದರೆ ಇಂತಹ ಘಟನೆಗಳೆಲ್ಲ ನಡೆಯುವುದು ಮನಸ್ಸಿನ ಅವ್ಯವಸ್ಥೆಯಿಂದಲೇ ಹೊರತು ಬೇರೆನಿಂದಲೂ ಅಲ್ಲ. ಇದು ಮನಸ್ಸಿನ ದೌರ್ಬಲ್ಯವೇ ಹೊರತು ಬೇರೆನೂ ಅಲ್ಲ. ಅವನಿಂದ-ಅವರಿಂದ ಕಿರುಕುಳ, ಅದರಿಂದ-ಇದರಿಂದ ಬೇಸರ ಎನ್ನುವ ಸಿಲ್ಲಿ ಸಿಲ್ಲಿ ವಿಷಯವನ್ನು ಬದಿಗಿಟ್ಟು ಮನ್ನಡೆಯಿರಿ. ಮನಸ್ಸಿನ ದುರ್ಬಲತೆಯನ್ನು ಸರಿದೂಗಿಸಿಕೊಂಡು ಧೈರ್ಯವಾಗಿರಿ. ನೆನಪಿಡಿ ಹೆಣ್ಮಕ್ಕಳೇ ‘ಜಗತ್ತಿನಲ್ಲಿ ಪುರುಷರಿಗಿಂತ ಮುಂದಿರುವುದು ಮಹಿಳೆಯರೇ’...

Friday, 23 October 2015

ಕಳಚಿತು ಸಾರಸ್ವತ ಲೋಕದ ಮತ್ತೊಂದು ಕೊಂಡಿ...


ಡಾ. ಎಂ.ಎಂ. ಕಲಬುರ್ಗಿಗೆ ಗುಂಡು, ಯುವಕರೇ ನಿಮಗ್ಯಾಕೆ ಇಷ್ಟವಾಯ್ತು ಈ ಸೌಂಡು...
ವಿಚಾರದ ಧನಿಗಳ ಸದ್ದಡಗಿಸುವ ಇಂತಹ ಕೃತ್ಯಗಳು ಖಂಡನೀಯ. 
ಅವರನ್ನು ನೀವ್ಹೇಗೆ ಸಂಶೋಧಕನೇ ಅಲ್ಲಾ ಅಂತೀರಾ!?...
ಬಲ ಪಂಥೀಯ ವಾದಿಗಳೇ ನೀವೆಷ್ಟು ಓದಿದ್ದೀರಿ!!? 
ಗುಂಪುಗಾರಿಕೆ ಮಾಡಿಕೊಂಡು ಮಾತುಗಾರಿಕೆಗಿಳಿದರೆ ಅದನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ವೆನ್ನುವುದಿಲ್ಲ. 



          ಶಬ್ಧ ಬಳಕೆಯ ಬಗ್ಗೆ ಇರುವ ಜಿಜ್ಞಾಸೆ ಹಾಗೂ ಪಂಥೀಯ ನಿಲುವುಗಳ ಬಗ್ಗೆ ಇರುವ ತಾರ್ಕಿಕ ಧ್ವಂಧ್ವಗಳನ್ನು
ಮನಸ್ಸಲ್ಲಿಟ್ಟುಕೊಂಡು ಈ ತಿಂಗಳ ಸಿರಿ ಬುಲೆಟ್ ಅಂಕಣವನ್ನು ಪ್ರಾರಂಭಿಸುತ್ತಿರುವೆ...
ನನ್ನ ಮಾತು, ಪ್ರಶ್ನೆ ಎಲ್ಲಾ ಯುವಜನಾಂಗಕ್ಕೆ, ನಾವೇಕೆ ಹೀಗೇ ಜಾತಿ, ಮತ, ಭೇಧ,ಎಂಬ ಅಸಹ್ಯಕರ ಭಾವದಿಂದ ಕಚ್ಚಾಡುತ್ತಲೇ ಬಾಳುತ್ತಿದ್ದೇವೆ!?, ಸರಿಯಾಗುವುದು ಯಾವಾಗ!? ಎಂಬಿತ್ಯಾಧಿಗಳು ನನನ್ನು ಈ ಸಂಧರ್ಭ ಜಿಜ್ಞಾಸೆಗೆ ಸಿಲುಕಿ ತಡಕಾಡಿಸುತ್ತಿವೆ. ಮಿತ್ರರೇ ಇದೊಂಥರ ಪ್ರಶ್ನೆ ಎನಿಸಿದರೂ, ಉತ್ತರ ಕಂಡುಕೊಳ್ಳುವ ಮಾರ್ಗ ಗೊತ್ತಿದ್ದರೂ,  ಬಹುಶಃ ಕಷ್ಟಪಟ್ಟು  ಜಿಜ್ಞಾಸೆಯಿಂದಲೇ ಮಥಿಸಿ ಸತ್ಯ ಕಂಡುಕೊಳ್ಳಬೇಕೇನೋ ಗೊತ್ತಿಲ್ಲ..! ಆದರೆ ಒಂದು ಮಾತು ನಿಜ!, ‘ಇಂದು ನಡೆಯುತ್ತಿರುವ ಅನಾಚಾರಕ್ಕೆ, ಗೂಂಡಾಗಿರಿಗೆ ‘ಬೆಳೆಯುತ್ತಿರುವ ನಮ್ಮಂತ ನಡುವಯಸ್ಸಿನ ಯುವಕರುಗಳೇ ಕಾರಣ’. ಅವರ ರೋಷ, ಕೋಶ ಎಲ್ಲವೂ ಬಲಪಂಥಕ್ಕೆ ಸಿಲುಕಿ ಅನಾಚಾರಕ್ಕೆ ಮುಹೂರ್ತವಿಡುತ್ತಿರುವುದು ನಿಜ.
ಬಿಸಿ ರಕ್ತದ ಪಂಥೀಯರೇ ನೀವು ಇದೇ ಸತ್ಯ, ಇದೇ ಹೌದು, ಇದೇ ಸರಿ ಎಂದು ವಾದಿಸಿ ಆದರೆ ನನ್ನ ನಿಲುವೇ ಸರಿ ನಾನೋಬ್ಬನೇ ಧರ್ಮ ಉಳಿಸುವವನು ಎನ್ನುವುದು ಎಷ್ಟು ಐಕ್ಯರೂಪಿ!?. ತಪ್ಪುಗಳ ಲೆಕ್ಕಾಚಾರ ಹಾಕದೇ, ಪ್ರಭುತ್ವದ ಶಾಂತಿ ನೆಮ್ಮದಿಯನ್ನು ಸುಖಿಯಾಗಿಡುವ ಐಕ್ಯರೂಪಿ ಗುಣವನ್ನು ಹೊಂದದೆ, ನನ್ನ ಧರ್ಮವೇ ಶ್ರೇóಷ್ಠ ಎಂದು ವಾದಿಸುವುದು ಎಷ್ಟು ಸರಿ!?. ಹೇಳುವ ಮಾತಿನಲ್ಲಿ ಕೇಳುವ ತಾಳ್ಮೆಯೂ ಇರಬೇಕು. ಇದ್ದರೆ ಚಂದ.
ಯಾಕೆ ಈ ಮಾತು ಎಂದು ನೀವು ಚಿಂತಿಸುತ್ತಿರಬಹುದು ಅದಕ್ಕೆ ಕಾರಣವೂ ಇದೆ,
ಮೊನ್ನೆ ಮೊನ್ನೆ ಅಪರಿಚಿತ ವ್ಯಕ್ತಿಗಳಿಂದ ನಡೆದ ಹಿರಿಯ ಸಾಹಿತಿ ಮತ್ತು ಸಂಶೋಧಕ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿರವರ ಹತ್ಯೆ ನಾಡು  ನುಡಿಯ ಜನರನ್ನು ಬೆಚ್ಚಿ ಬೀಳಿಸಿದ್ದಲ್ಲದೇ ಜನರಲ್ಲಿ ‘ಏನಪ್ಪಾ ಕಾಲ ಯಾಕೆ ಈ ಥರ ಎನ್ನುವ ಯಕ್ಷ ಪ್ರಶ್ನೆ ನೆಲೆಸುವಂತೆಯೂ ಮಾಡಿತ್ತು. ಹಂತಕರು ಯಾಕೆ ಗುಂಡು ಹೊಡೆದು ಅವರನ್ನು ಕೊನೆಗಾಣಿಸಿದ್ದಾರೆ ಎನ್ನುವುದು ಇಂದಿಗೂ ಸರಿಯಾದ ವಿಚಾರಣೆಯಲ್ಲಿ ತಿಳಿಯದಿದ್ದರೂ, ಮಾನವೀಯ ಹೃದಯವಂತರಿಗೆ ನೋವಾದರೂ ಅವರು ಸತ್ತ ಬಗೆ ಹಾಗೂ ವಿಚಾರ ಹಲವಾರೂ ಪಂಥೀಯ ನಿಲುವುಗಳ ಪುಂಡರಿಗೆ ಪಾಯಸವುಂಡಷ್ಟು ಖುಷಿ ನೀಡಿದ್ದು, ಆಶ್ಚರ್ಯವಾಗುತ್ತದೆ. ಇದು ನಮ್ಮ ದೌರ್ಬಲ್ಯವಲ್ಲದೇ ಮತ್ತೇನೆನ್ನಿಸಿ ಪೆನ್ನನ್ನು ಕೈಗೆತ್ತಿಕೊಂಡಿರುವೆ ಅಷ್ಟೇ. ಸತ್ಯ ತಿಳಿಸುವ, ತಮ್ಮನ್ನು ತಮಗೆ ಅರಿಸುವ ಸಣ್ಣ ಮೊಂಡುತನ ನನ್ನದಾದರೂ ಚಿಂತೆಯಿಲ್ಲ. ಖಂಡಿತಾ ಇದು ಹುಚ್ಚುತನ ಮಾತ್ರಾ ಅಲ್ಲಾ.
ನೇರ ನಿಷ್ಠುರ ಮಾತುಗಳು ಹಾಗೂ ಬರವಣಿಗೆಯಿಂದ  ಅನೇಕ ಬಾರಿ ವಿವಾಧಗಳಿಗೂ ಸಿಲುಕಿದವರಾಗಿದ್ದ ಡಾ.ಕಲಬುರ್ಗಿಯ ಗ್ರಂಥ ‘ಮಾರ್ಗ’ದ ಮೊದಲ ಸಂಪುಟದಲ್ಲಿನ  ಎರಡು ಲೇಖನಗಳು 1989ರಲ್ಲಿ ಭಾರಿ ವಿವಾಧ ಸೃಷ್ಟಿಸಿತ್ತು, ಈ ಎರಡು ಲೇಖನಗಳು  ಬಸವಣ್ಣನ ಪತ್ನಿ ಹಾಗೂ ಸೋಧರರಿಗೆ ಸಂಬಂಧಿಸಿದ್ದವಾಗಿದ್ದವು. ಮುಂದೆ ತನಗೆ ತಾನೇ ಮೋಸಮಾಡಿಕೊಂಡಂತೆ ತಮ್ಮ ಲೇಖನಗಳನ್ನು ಬರೆದ ಕಲಬುರ್ಗಿ ಇದು ‘ಬೌದ್ಧಿಕ ಆತ್ಮಹತ್ಯೆ’ ಎಂದು ಮರುಗಿದ್ದರು. ಏರಡು ವರ್ಷಗಳ ಹಿಂದೆ ಅನಂತಮೂರ್ತಿಯವರ ಮಾತೊಂದನ್ನು ತಪ್ಪಾಗಿ ಉಲ್ಲೇಖಿಸಿದ ಪ್ರಕರಣದಲ್ಲಿ ಕಲಬುರ್ಗಿ ಸಮಸ್ತ ಹಿಂದೂ ಜನತೆಯ ಕೆನ್ನಾಲಿಗೆಗೆ ಗುರಿಯಾಗಿದ್ದಲ್ಲದೇ ನೋವಲ್ಲೇ ಸಂಶೊಧನೆಯನ್ನು ಮುಂದುವರಿಸುತ್ತಾ ಸಾಯೋ ದಿನದವರೆಗೂ ಎದೆಗುಂದದೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರನ್ನು ಬೃಹತ್ ಧರ್ಮಧ್ವೇಷಿ ಎಂಬ ಪಟ್ಟವನ್ನು ನೀಡಿದ್ದು, ಸ್ವತಃ ಅವರಿಗೆ ನೋವಿದ್ದರು ಯಾವುದನ್ನೂ ಮನಸ್ಸಲ್ಲಿಟ್ಟುಕೊಳ್ಳದೇ ಬದುಕಿದ್ದರು.
ಆಡಿದ ಮಾತು ಎಲ್ಲವೂ ಸರಿಯಿರಬೇಕೆಂದೇನೂ ಇಲ್ಲ, ಅವರವರ ನಿಲುವು ಅಷ್ಟೆ.  ಒಬ್ಬ ಸಂಶೋಧಕನಾಗಿ  ಅವರಾಡಿದ ಮಾತು ಸಂಶೋಧನೆಯ ಎಳೆ ಇರಬಹುದು ಆದರೆ ಅದನ್ನೇ ಹಿಡಿದು ಕೊನೆಗಾಣಿಸಬಾರದಿತ್ತು. ಅಥವಾ ಅದನ್ನು ತಪ್ಪೆಂದು ನಾವು ಚರ್ಚಿಸುವುದು ಬಿಟ್ಟು, ಸಂಶೋಧನೆಯೇ ಸರಿಯಿಲ್ಲ, ಅವನೊಬ್ಬ ಸಂಶೋಧಕನೇ ಅಲ್ಲ ಎನ್ನುವುದು ಎಷ್ಟು ಸರಿ!? ಸಾರಸ್ವತ ಲೋಕದ ಒಬ್ಬ ಚಿಂತಕ, ಶ್ರೇಷ್ಠ ಬರಹಗಾರ ಸತ್ತನೆಂದರೆ ನಾವು ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆಂದರೆ ನಾವೆಂತ ಮಾನವತಾವಾಧಿಗಳಾದೆವು ನೀವೆ ಹೇಳಿ,
ಸಮಾಜದಲ್ಲಿ ಯಾವೊಬ್ಬ ಸಾಮಾನ್ಯನಾಗಲಿ, ಶ್ರೀಮಂತನೇ ಆಗಿರಲಿನ ಸತ್ತ ಎಂದರೆ ಅವನ ಹಿಂದಿನ ಎಂತಹ ಕೆಟ್ಟ ಕರ್ಮ ಫಲಗಳಿದ್ದರು, ಎಲ್ಲವನ್ನು ಪಕ್ಕಕ್ಕಿಟ್ಟು ಅರ್ಪಣೆಯಾಗಿ ಮನಪೂರ್ಣ ನಮನ ಸಲ್ಲಿಸಬೇಕಾಗಿರುವುದು ನಮ್ಮ ಹಿಂದೂ ಸಂಸ್ಕøತಿಯ ಸಂಸ್ಕಾರ. ಅದನ್ನ ಬಿಟ್ಟು ಹಿರಿಯ ತಲೆ ಉರುಳಿತು, ಸಾವು ಖುಷಿಕೊಟ್ಟಿತು, ಇನ್ನೂ ಕೆಟ್ಟ ಸಾವು ಅವನದಾಗಬೇಕಿತ್ತು, ಇಷ್ಟು ದಿನ ಬದುಕಲು ಬಿಟ್ಟಿದ್ದೆ ಹೆಚ್ಚು ಎನ್ನುವುದು,ಸತ್ತಿದ್ದಕ್ಕೆ ಹಬ್ಬ ಆಚರಿಸುವುದು ಮಾನವೀಯತೆ ಅಲ್ಲ. ಬೇಜಾವಾಬ್ದಾರರಾಗಿ ಉಂಡಾಡಿ ಗುಂಡನ ಹಾಗೆ ಬೊಬ್ಬಿರುವ ಬಾಯಿಯಿದೆ ಎಂದು  ಕತ್ತೆ, ನಾಯಿಗಳಂತೆ ಬೋರ್ಗೆರೆದರೆ ನಮ್ಮ ಸಂಸ್ಕøತಿಯನ್ನು ನಾವೇ ಬೀದಿಲಿಟ್ಟು ಮಾನ ತೆಗೆಸಿಕೊಂಡಂತೆ ವಿನಃ ಕಿಂಚಿತ್ತು ಉಳಿಸಿದಂತಲ್ಲ. ಕಲಬುರ್ಗಿ ಸತ್ತ ನಂತರ ಬಲಪಂಥೀ, ಎಡ ಪಂಥೀಯ ನಿಲುವುಗಳ ಮಧ್ಯದಲ್ಲಿ, ಟಿ.ವಿ ಹಾಗೂ ಸೋಷಿಯಲ್ ಮೀಡಿಯಾಗಳ ಮಾಧ್ಯಮದಲ್ಲೂ ಅನೇಕ ಮಾತುಗಾರಿಕೆಯ ಹೊಡೆದಾಟಗಳಾಯಿತು. ಹಿಂದೂ ಮುಂದು ಯೋಚಿಸದ ಯುವಕರು ತಮಗನಿಸಿದಂತೆ ಸ್ಟೇಟಸ್ ಕೊಟ್ಟು ಮೆರೆದರು. ಇದೆಲ್ಲಾ ಅವರ ಮನೆಯವರಿಗೆ, ಸಂಬಂಧಿಕರಿಗೆ, ಆಗಿದ್ದರೆ ಆಗೇನು ಹೇಳುತಿದ್ದರೋ ನಾ ತಿಳಿಯೆ. ಈ ಹಿಂದೆ ಅನಂತ ಮೂರ್ತಿ ಸತ್ತಾಗಲೂ ಅವರೊಬ್ಬ ಹಿಂದೂ ಧರ್ಮ ವಿರೋಧಿ, ಅವಹೇಳನಕಾರಿ ವ್ಯಕ್ತಿ ಎಂದು ಪಟಾಕಿ ಸಿಡಿಸಿದ ಘಟನೆಗಳು ನಡೆದಿದ್ದು ಮಾಸುವಾಗಲೇ ಮತ್ತೊಮ್ಮೆ ಈ ರೀತಿಯ ಘಟನೆ ಸಂಭವಿಸಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ನಾಚಿಗೆ ಗೇಡಿನ ಸಂಗತಿ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅಷ್ಟಕ್ಕೂ ಈ ಜಾತಿ-ಭೇಧ ಎನ್ನುತ್ತಾ ವಿಷ ಬಿಜ ಬಿತ್ತುತ್ತಿರುವವರು ಯಾರೂ!?...  ನಾವೇ ಅಲ್ಲವೇ!?... ಯಾಕೆ ಬೇಕು ಇದು?. ಬರಿಯ ಸ್ವಾತಂತ್ರ್ಯ ದಿನಾಚರಣೆಯ ದಿನ ‘ನಾವು ಭಾರತೀಯರು, ನಾವೆಲ್ಲ ಒಂದೇ, ಅವಳ ಮಕ್ಕಳು’ ಎಂದು ಹೇಳುತ್ತೇವೆ ಆದರೆ ಈಗ್ಯಾಕೆ ಈ ಮೊಂಡುತನ.
 ಯುವಕರೇ ಪದೇ ಪದೇ ಮಾತುಗಳನ್ನೇ ನೆಕ್ಕಿಕೊಳ್ಳುತ್ತಾ ಡೆಮಾಕ್ರಸಿಯ ವಿಷಬೀಜ ಬಿತ್ತುತ್ತಿದ್ದೀರಲ್ಲಾ, ನೀವು ಸಮಾಜದ ಸಹಿಷ್ಣು ಕಾಪಾಡುವ ವ್ಯಕ್ತಿಗಳಾ!?, ನೀವು ನಮ್ಮ ಭಾರತಾಂಭೆಯ ಮಕ್ಕಳಾ!? ನಿಮಗೆ ಕರಣೆ ಮಮಕಾರದ ಭಾವನಾತ್ಮಕತೆಯ ನಲಿವು ಗೊತ್ತಿದ್ಯಾ!?? ಮೊದಲು ಪಂಥಗಳನ್ನು ಬಿಟ್ಟು, ಕಾರಣಿಭೂತರಾದ ಹಂತಕರನ್ನು ಹಿಡಿಯಲು ಸಹಾಯ ಮಾಡಿ.  ಉಗ್ರತ್ವಕ್ಕೆ  ಶಹಬ್ಬಾಸ್ ಎಂದರೆ ನಾವೆಂಥಾ ನೈತಿಕೆಯುಳ್ಳವರು.
ಡಾ.ಎಂ ಎಂ. ಕಲಬುರ್ಗಿಯವರಿಗಾದ ಗತಿಯೇ ನಾಳೆ ನಿಮಗೂ ನಿಮ್ಮ ಮಕ್ಕಳಿಗೂ ಆದರೆ ಅದನ್ನು ಹೀಗೆ ಕಾಣುತ್ತೀರಾ!?, ಸ್ವಲ್ಪ ಚಿಂತಿಸಿ, ಕಚ್ಚಾಟ ನಮ್ಮನ್ನು ಬದಲಿಸುವುದಿಲ್ಲ, ಮೆರೆದಾಟ ಎಂದು ಮೇಲೆ ನಿಲ್ಲಿಸುವುದಿಲ್ಲ.ಬದಲಾಗೋಣ. ಸಂಘ ಸಂಘಟನೆಗಳ ಬೆಂಬಲವಿದೆಯೆಂದು ಗುಂಪುಗಾರಿಕೆ ಸರಿಯಲ್ಲ.ಅವುಗಳು ಇರುವುದು ಒಳ್ಳೆಯ ಕಾರ್ಯಮಾಡಲು ಹೊರತು ನೀಚತನಕ್ಕಲ್ಲ. ನಿಮಗೆ ಹೇಗೆ ಮಾತನಾಡುವ ಹಕ್ಕಿದೆಯೋ ಹಾಗೆ ಎಲ್ಲರಿಗೂ ತನ್ನ ಭಾವನೆ ವ್ಯಕ್ತಪಡಿಸುವ ಹಕ್ಕಿದೆ. ಆಂದ ಮಾತ್ರಕ್ಕೆ ಗುಂಪುಗಾರಿಕೆ ಮಾಡಿಕೊಂಡು ಮಾತುಗಾರಿಕೆಗಿಳಿದರೆ ಅದನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ವೆನ್ನುವುದಿಲ್ಲ.
ನಾನೊಬ್ಬ ಮುಖ್ಯಸ್ಥ ನನ್ನ ಹಿಂದೆ ಸುಮಾರು ಜನರ  ನಾಯಿ ಬಾಲವಿದೆ ಎಂದ ಮಾತ್ರಕ್ಕೆ ಕಿರುಚಬಾರದು ಬದಲಾಗಿ ಫ್ರೌಡರಾಗಬೇಕು, ಓದಬೇಕು, ಲೋಕ ಜ್ಞಾನ ಮೈಗೂಡಿಸಿಕೊಳ್ಳಬೇಕು.

ಕಲಬುರ್ಗಿಯವರು ಸಾಹಿತ್ಯ ಚರಿತ್ರೆ, ಗ್ರಂಥ ಸಂಪಾಧನೆ, ಶಾಸನ ಶಾಸ್ತ್ರ, ವಚನ ಸಾಹಿತ್ಯ, ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ ಅಪಾರ. ಐದು ದಶಕಗಳಿಗಿಂತಲೂ ಹೆಚ್ಚಿನ ಕಾಲ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ಅವರನ್ನು ನೀವ್ಹೇಗೆ ಸಂಶೋಧಕನೇ ಅಲ್ಲಾ ಅಂತೀರಾ!?...ಕಲಬುರ್ಗಿ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕ್ರತಿಕ ಇತಿಹಾಸ ಕುರಿತಂತೆ ಖಚಿತ ಅಭಿಪ್ರಾಯಗಳನ್ನು ಹೊಂದಿದ್ದರಲ್ಲದೇ, 4 ಸಂಪುಟಗಳಲ್ಲಿ ಅವರು ಪ್ರಕಟಿಸಿದ ‘ಮಾರ್ಗ’ಪುಸ್ತಕದಲ್ಲಿರುವ ಸಂಶೋಧನಾ ಲೇಖನಗಳು ಅವರ ವಿಧ್ವತ್ತಿಗೆ ಸಾಕ್ಷಿಯಾಗಿವೆ. ತಮ್ಮ ಪ್ರಧಾನ ಸಂಪಾದಕತ್ವದಲ್ಲಿ
ವಿವಿಧ ಸಂಪಾದಕರು ಸಂಪಾಧಿಸಿರುವ ಸಮಗ್ರ ವಚನ ಸಂಪುಟಗಳಲ್ಲಿರುವ ಇಪ್ಪತ್ತು ಸಾವಿರ ವಚನಗಳನ್ನು ಆರಿಸುವಲ್ಲಿ ಕೊನೆಯ ಪಕ್ಷ ಮೂವತ್ತುಸಾವಿರ  ವಚನಗಳನ್ನಾದರೂ ನಿಕಟವಾಗಿ ಓದಿದ್ದಾರೆ ಡಾ.ಎಂ ಎಂ. ಕಲಬುರ್ಗಿ..ಉತ್ತರ ಕೊಡಿ ಬಲ ಪಂಥೀಯ ವಾದಿಗಳೇ ನೀವೆಷ್ಟು ಓದಿದ್ದೀರಿ???. ಅನಂತಮೂರ್ತಿ ಅಥವಾ ಕಲಬುರ್ಗಿ ಮಾಡಿರುವ ಸಾಹಿತ್ಯ ಕೃಷಿಯ ಒಂದು ಎಳೆಯನ್ನ ನೀವು ಮಾಡಿದ್ದೀರಾ?.. ಅದು ನಿಮ್ಮಿಂದ ಸಾಧ್ಯವಾದರೂ ಇದ್ಯಾ?.. ನಿಮಗೆ ಕೂಗುವುದು, ಬೆಂಕಿಹಚ್ಚುವುದು, ಉರಿಯುತ್ತಿರುವ ಅಗ್ನಿಗೆ ತುಪ್ಪ ಸುರಿಯಲು ಗೊತ್ತು ಆದರೆ ಯೋಚಿಸುವುದು ಮಾತ್ರಾ ಗೊತ್ತಿಲ್ಲ ಅಲ್ವಾ...
ನಾನು ಒಬ್ಬ ಹಿಂದೂ, ನನಗೂ ಕೆಚ್ಚೆದೆ ಇದೆ, ರೋಷವಿದೆ. ಹಾಗಂತ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ವಾಗ್ವಾದಗಳ ನೆಲೆಗಳಲ್ಲಷ್ಟೇ ಉಳಿಸದೇ ಒತ್ತಡಗಳನ್ನು ಸೃಷ್ಟಿಸುವಂತಹ ಈ ಬಗೆಯ ಬೆದರಿಕೆಯ ವಾತಾವರಣ ಸೃಷ್ಟಿಸುವುದು ಸಾಮಾಜಿಕ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ.  ಪ್ರಜಾ ಪ್ರಭುತ್ವದಲ್ಲಿ ಅದರಲ್ಲೂ ಕನ್ನಡದ ನೆಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಆದರೆ ವಿಚಾರದ ದನಿಗಳ ಸದ್ದಡಗಿಸುವ ಇಂತಹ ಕೃತ್ಯಗಳು ಖಂಡನೀಯ. ವಿಚಾರಗಳನ್ನು ಹತ್ತಿಕ್ಕಿದಷ್ಟೂ ಅವು ಬೆಳೆಯುತ್ತಲೇ ಇರುತ್ತವೆ ಯಾವುದೇ ಭಿನ್ನಾಭಿಪ್ರಾಯವೂ ಕೊಲೆಯ ಹಂತಕ್ಕೆ ಹೋಗಬಾರದು. ಇದೆಲ್ಲವನ್ನು  ಅರಿಯುವ ಅಗತ್ಯ ಇಂದು ನಮ್ಮ ಸಮಾಜಕ್ಕಿದೆ.
 ‘ನಿನ್ನ ಆಭಿಪ್ರಾಯವನ್ನು ನಾನು ಒಪ್ಪುವುದಿಲ್ಲ ಆದರೆ ಅಭಿಪ್ರಾಯವನ್ನು ಹೊಂದುವ ನಿನ್ನ ಸ್ವಾತಂತ್ರ್ಯವನ್ನು ನನ್ನ ಜೀವ ಕೊಟ್ಟಾದರೂ ರಕ್ಷಿಸುತ್ತೇನೆ’ ಎನ್ನುವುದು ನಮ್ಮ ‘ಪ್ರಜಾಪ್ರಭುತ್ವ’. ಆದರೆ ಇಂದು ಹಾಗಾಗುತ್ತಿಲ್ಲ ಜನ ನೈತಿಕತೆಯನ್ನೇ ಮರೆತು ವರ್ತಿಸುತ್ತಿದ್ದಾರೆ. ಇಲ್ಲಿ ಯಾರೂ ಯಾರ ಮೇಲೂ ಏನೂ ಹೇಳುವಂತಿಲ್ಲ. ಬಲವಂತನ ಮಾತು ಬಡವಂತ ಕೇಳಲೆಬೇಕು. ಇಲ್ಲವಾದರೆ ಜಗಳವಾಗುತ್ತದೆ, ಹೊಡೆದಾಟ ನಡೆಯುತ್ತದೆ. ಅಷ್ಟೇ ಏಕೆ ಪಾಪಿಗಳು ಕೊಲೆಯನ್ನು ಮಾಡುತ್ತಾರೆ. ಇದರಲ್ಲಿ ರಾಜಕೀಯದ ಹಾವು ಏಣಿ ಆಟವೂ ಇದೆ ಎನ್ನುವುದು ತಿಳಿದಿದ್ದರೂ ಜನ ಅಸಹನೆಯ ಭಾವನೆಗಳಿಂದ ಹೊರಬರುತ್ತಿಲ್ಲ...ಹಾಗೆ ಮಾಡುವುದರಿಂದ ನಾವು ಮೂಲಭೂತ ವಾದಿಗಳಂತೆ ಸತ್ಯಶೋಧನೆಯ  ಕಣ್ಣು ಕಳೆದುಕೊಳ್ಳುತ್ತೇವೆ.
ಕೊನೆ ಮಾತು ಸರ್ಕಾರ ಸೇರಿ ಎಲ್ಲರಿಗಾಗಿ... ವಾದ ವಿವಾದಗಳ ನಡುವೆ ಕಲಬುರ್ಗಿಯವರ ಸಾವಿನಿಂದಾಗಿ, ಒಂದು ಬಗೆಯ ವಿಶಿಷ್ಟ ವಿದ್ವಾಂಸ ಮಾರ್ಗದ ಕಡು ಸಂಶೋಧನಾ ನಿಷ್ಠೆಯ ಕೊನೆಯ ಕೊಂಡಿಯೊಂದು ಕಳಚಿ ಹೋದದ್ದರ ಬಗ್ಗೆ ತುಂಬಾ ವಿಷಾಧವಿದೆ. ಹಾಡ ಹಗಲೇ ಸಾಹಿತಿಯೊಬ್ಬನನ್ನು ಗುಂಡೇಟಿನಿಂದ ಕೊಲ್ಲುವ ಪರಿ ನಿಜಕ್ಕೂ ಒಳ್ಳೆಯದಲ್ಲ. ಟೀಕಿಸುವುದನ್ನು ಬಿಟ್ಟು ನಾವೆಲ್ಲ ಎದ್ದೇಳಬೇಕಿದೆ. ಈ ಬಗ್ಗೆ ಸರ್ಕಾರ ತೀವ್ರ ಕಾಳಜಿ ಮತ್ತು ಭಧ್ರತೆ ಇಟ್ಟು ದುಷ್ಟ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಬೇಕು. ಮಾನ್ಯ ಮುಖ್ಯಮಂತ್ರಿಗಳೇ, ಅದು ಯಾರಾದರೂ ಸರಿ ಆದಷ್ಟು ಬೇಗ ವಿಚಾರಿಸಿ ಸಮಾಜದ ನೆಮ್ಮದಿ ಕಾಪಾಡಿ, ಅಬ್ಬರಿಸುವ ಬೊಬ್ಬಿರುವ ಅಶಾಂತಿ ರೂಪಿಸುವ  ಕೋಮುಗಲಭೆಯನ್ನು ಹುಟ್ಟಿಸುವವರನ್ನು ಜಾಡಿಸಿ ಒದೆಯಿರಿ...ಮುಲಾಜೇ ಬೇಡ...