Tuesday, 11 August 2015

"ನಮ್ಮ ಭಾರತ" - ಭಾರತಕ್ಕೆ ಭಾರತವೇ ಸಾಟಿ



    ಭಾರತ ಅಥವಾ ಭಾರತೀಯತೆಯ ಬಗ್ಗೆ ಮಾತನಾಡುವಾಗ ಯಾರಿಗೆ ಆಗಲಿ ಆತ್ಮದೊಳಗಿನಿಂದ ಉತ್ಸಾಹ ಭಾವಕತೆ, ದೇಶಾಭಿಮಾನದ ಜ್ವಾಜ್ವಲ್ಯ ಮೂಡಿ ಬರುತ್ತದೆ. ಯಾಕೆಂದರೆ, ಭಾರತದಲ್ಲಿ ಅನೇಕ ಭಾರತಗಳಿವೆ. ನೂರಕ್ಕೂ ಹೆಚ್ಚು ಭಾಷೆಗಳು ಹತ್ತಕ್ಕೂ ಪ್ರಮುಖ ಹಾಗೂ ಅನೇಕ ಅಪ್ರಮುಖ ಲಿಪಿ ವ್ಯವಸ್ಥೆಗಳು ಅಸಂಖ್ಯಾತ ಕುಲ, ಪಂಗಡಗಳಿಂದೊಡಗೂಡಿದ ಅನೇಕ ಪ್ರಾಚೀನ ಮತ ಧರ್ಮಗಳು, ಸಾವಿರಾರು ವರ್ಷಗಳಲ್ಲಿ ನಡೆದಿರುವ ವರ್ಣಸಂಕರಗಳು, ಬಗೆ ಬಗೆಯ ಭೂಪ್ರದೇಶಗಳು, ನಾನಾ ತೆರನಾದ ಹವಾ ಗುಣಗಳು ಇವೇ ಮುಂತಾದವುಗಳಿಂದಾಗಿ ಪರಂಪರೆ ಹಾಗೂ ವಿರುದ್ಧ ಪರಂಪರೆಗಳ ಅತ್ಯಂತ ಸಂಕೀರ್ಣವಾದ ಜಾಲ ನಿರ್ಮಾಣವಾಗಿದೆ. ಇನ್ನೊಂದು ವಿಷ್ಯ ಏನಪ್ಪ ಅಂದ್ರೆ ನೀವು ಭಾರತದ ಬಗೆಗೆ ಇದು ಸತ್ಯ ಎಂದು ಎನನ್ನೇ ಹೇಳಿದರೂ, ಅದಕ್ಕೆ ತೀರ ವಿರುದ್ಧವಾದುದನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಕೂಡ ಹೇಳಬಹುದು.
   ‘ಭಾರತ’ ಎಂದರೆ ಹೆಮ್ಮೆ. ಅದೊಂದು ಗರಿಮೆ, ಹಿರಿಮೆ. ನಮ್ಮ ದೇಶಕ್ಕೆ ನಮ್ಮ ದೇಶವೇ ಸಾಟಿ ಯಾಕೆಂದರೆ ಭಾರತ ತನ್ನ ದೀರ್ಘ ಇತಿಹಾಸದಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡಿದೆ. ಹಲವು ಬಾರಿ ಪರರ ದಾಳಿಗೆ, ಆಕ್ರಮಣಗಳಿಗೆ ತುತ್ತಾಗಿದೆ. ಎದುರಾದ ಎಲ್ಲಾ ವಿಷಮ ಸಂಧರ್ಭಗಳನ್ನೆಲ್ಲಾ ತಾಳ್ಮೆಯಿಂದ ಆತ್ಮ ವಿಶ್ವಾಸದಿಂದ ಎದುರಿಸಿದೆ. ನಮ್ಮ ಭಾರತ ಆಕ್ರೋಶದಿಂದ ಬಿರಿಯುತ್ತಾ ಮೇಲೆದ್ದು ನಿಂತು ಹೋರಾಡುವುದಿಲ್ಲ ಬದಲಾಗಿ ತನ್ನ ಸಮಯಕ್ಕಾಗಿ ತಾಳ್ಮೆಯಿಂದ ಕಾದು ನಿಲ್ಲುತ್ತದೆ. ಈ ದೇಶ ತಗ್ಗ ಬಲ್ಲದು, ಬಗ್ಗ ಬಲ್ಲದು ಆದರೆ ಮುರಿದು ಬೀಳುವುದಿಲ್ಲ. ಸಮಾಧಾನದಿಂದ ತನ್ನ ಅಂತಃಶ್ಚೈತನ್ಯವನ್ನು ಕೂಡಿಕೊಂಡು ಎದ್ದು ನಿಲ್ಲುತ್ತದೆಯೇ ಹೊರತು ಕುಗ್ಗುವುದಿಲ್ಲ.
   1757 ರಿಂದ ಭಾರತವನ್ನು ಬ್ರಿಟೀಷರು ಆಕ್ರಮಿಸಿಕೊಳ್ಳುತ್ತಾ ಬಂದಾಗ ಸಾಮಾನ್ಯ ಜನರಲ್ಲಿ ಉಂಟಾದ ಪ್ರತ್ರಿಕ್ರೀಯೇನು ಎಂಬುದನ್ನು ನಾವು ಅರಿತುಕೊಳ್ಳಬೇಕು ಮತ್ತು ನಮ್ಮ ಜನ ಆಗಲೇ ಪ್ರತಿಕ್ರಿಯಿಸಿದ್ದರೆ ಬ್ರಿಟೀಷರ ಸ್ಥಿತಿ ಏನಾಗುತ್ತಿತ್ತು ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗದೇ ಇರದು. ಪ್ಲಾಸಿ ಕದನವನ್ನು ರಾಬರ್ಟ್‍ಕ್ಲೈವ್‍ನ ನಾಯಕತ್ವದಲ್ಲಿ ಬ್ರಿಟಿಷರು ಗೆದ್ದರೇನೋ ನಿಜ. ಆದರೆ ಆ ನಂತರ ಅವನು 200 ಇಂಗ್ಲೀಷ್ ಸೈನಿಕರು ಹಾಗೂ 500 ಭಾರತೀಯ ಸಿಪಾಯಿ ದಳಗಳೊಂದಿಗೆ ಬಂಗಾಳದ ರಾಜಧಾನಿಯಾಗಿದ್ದ ಮುರ್ಷಿದಾ ಬಾದಿನಲ್ಲಿ ಒಂದು ವಿಜಯೋತ್ಸವ ನಡೆಸಿದ್ದ. ಸಹಸ್ರಾರು ಪ್ರಜೆಗಳು ಆ ಮೆರವಣಿಗೆಯನ್ನು ನೋಡಿದ್ದರು. ಅದನ್ನು ಕುರಿತು ಕ್ಲೈವ್ ಪಾರ್ಲಿಮೆಂಟರಿ ಸಮಿತಿಗೆ ವರದಿ ನೀಡುವಾಗ, ಮೆರವಣಿಗೆಯ ಸಂಧರ್ಭದಲ್ಲಿ ಲಕ್ಷಾಂತರ ಮಂದಿ ಭಾರತೀಯರು ಕೂಡಿದ್ದು, ಅವರು ಮನಸ್ಸು ಮಾಡಿದ್ದರೆ ಕಲ್ಲು, ದೊಣ್ಣೆಗಳಿಂದಲೇ ಯುರೋಪಿಯನ್ನರನ್ನು ನಾಶ ಮಾಡಬಹುದಾಗಿತ್ತು ಎಂದಿದ್ದನಂತೆ. ಅವನಾಡಿದ ಅಂದಿನ ಆ ಮಾತಿನಿಂದಲೇ ತಿಳಿಯುತ್ತದೆ ನಮ್ಮ ಭಾರತೀಯರು ಎಷ್ಟು ಪರಾಕ್ರಮಿಗಳು ಜೊತೆಗೆ ಎಷ್ಟು ಮುಗ್ಧರು ಎಂದು. ನಮ್ಮ ಅಂದಿನ ಮುಗ್ಧತೆಯನ್ನು ಬ್ರಿಟೀಷರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು 18ನೇ ಶತಮಾನದ ಮಧ್ಯಭಾಗದಲ್ಲಿ ಸಮೃದ್ಧ ದೇಶವೆಂದು ಖ್ಯಾತಿ ಪಡೆದಿದ್ದ ಭಾರತವನ್ನು 19ನೇಯ ಶತಮಾನದ ಕೊನೆಯ ವೇಳೆಗೆ ಜಗತ್ತಿನ ಅತ್ಯಂತ ಧೀನ ಧರಿದ್ರ ದೇಶ ಎಂಬ ಸ್ಧಿತಿಗೆ ತಂದರು. ಆದರೆ ಭಾರತ ಎಂದೂ ತನ್ನ ಅಸ್ಧಿತ್ವವಾಗಲಿ, ಹಿರಿಮೆಯಾಗಲಿ, ತನ್ನತನವನ್ನಾಗಲಿ ಕಳೆದುಕೊಳ್ಳಲಿಲ್ಲ. ಅದು ಕಣ್ರೀ ನಮ್ಮ ಭಾರತದ ಅಂತಸ್ತು.
   ಆಗತಾನೆ ಇಂಗ್ಲೆಂಡಿನಲ್ಲಿ ನಡೆದ ಔಧ್ಯಮಿಕ ಕ್ರಾಂತಿಯು ಭಾರತಕ್ಕೆ ‘ಹಳ್ಳಕ್ಕೆ ಬಿದ್ದವನ ಮೇಲೆ ಬಂಡೆ ಎಳೆದಂತೆ’ ಮಾಡಿತ್ತು. ಇದರ ಸರಿದೂಗುವಿಕೆಗೆ ಭಾರತದ ಪಾತ್ರ ಎಷ್ಟು ಆಳವಾಗಿತ್ತೆಂದು ಆಲೋಚಿಸಿದರೆ ತಲೆ ಕೆಡುತ್ತದೆ. ಯಾಕೆಂದರೆ ನಮ್ಮಲ್ಲಿಯ ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪಾರ ಇಂಗ್ಲೆಂಡಿಗೆ ಹಣದ ಹೊಳೆ ಹರಿಸಿ ಬೃಹತ್ ಉದ್ಯಮಗಳು ತಲೆ ಎತ್ತಲು ಅಗತ್ಯವಾದ ಬಂಡವಾಳವನ್ನು ಓದಗಿಸಿತ್ತು. ಹತ್ತಿ ಉದ್ಯಮ, ಸಣ್ಣ ಕೈಗಾರಿಕೆಯ ಇತರ ಉದ್ಯಮ ಇತ್ಯಾದಿಗಳಿಂದಲೇ ಇಂಗ್ಲೆಂಡಿಗೆ ದುಡ್ಡಿನ ಸುರಿಮಳೆಗಳೇ ಬರುತ್ತಿದ್ದವು ಹೊರತು, ಅವರು ಮಾಡಿದ ಕ್ರಾಂತಿಯಿಂದಲ್ಲ ಅದು ನಮ್ಮ ಭಾರತದ ಕೌಶಲ್ಯತೆ.
   ಅದು 1919 ಏಪ್ರಿಲ್ 11. ಆ ಸಂಧರ್ಭ ಡಯರ್ ಎಂಬ ಸೇನಾಧಿಕಾರಿಯನ್ನು ಭಾರತಕ್ಕೆ ಕರೆಸಿ ಮಾರ್ಷಲ್ ಲಾ ಜಾರಿ ಮಾಡಲಾಗಿತ್ತು. ಏಪ್ರಿಲ್ 13 ರಂದು ಜಲಿಯನ್ ವಾಲಾಬಾಗ್‍ನಲ್ಲಿ ಒಂದು ಜಾತ್ರೆಗಾಗಿ ಜನ ಕೂಡಿದ್ದರು. ಬಹುತೇಕ ಜನ ಹಳ್ಳಿಗರಾಗಿದ್ದು, ಅವರಿಗೆ ಬ್ರಟಿಷ್ ನಾಯಿಗಳ ಪ್ರತಿ ಬಂಧಕ ವಿಚಾರವೇ ತಿಳಿದಿರಲಿಲ್ಲ. ಆ ಮೈದಾನಕ್ಕೆ ಸುತ್ತಲೂ ಗೋಡೆ ಇದ್ದು ಒಂದೇ ಒಂದು ಧ್ವಾರ ಇತ್ತು. ಡಯರ್ ತಾನೇ ಮುಂದೆ ನಿಂತು ನಿಶ್ಯಸ್ತ್ರ ಗುಂಪಿನ ಮೇಲೆ ಯಾವ ಮುನ್ನಚ್ಚರಿಕೆಯನ್ನು ನೀಡದೆ ಗುಂಡಿನ ಮಳೆಗೆರೆದಿದ್ದ. ಆ ದಿನ ಅಲ್ಲಿ ಸತ್ತವರ ಸಂಖ್ಯೆ 379 ಎಂದು ಸರ್ಕಾರವೇ ತಿಳಿಸಿತ್ತು. ಇದಾದ ಬಳಿಕ ಮಾತನಾಡಿದ್ದ ಡಯರ್ ಈ ಅಮಾನುಷ ಕೃತ್ಯಕ್ಕೆ ಗುಂಡುಗಳು ಸಾಲದಾದವು, ಗಲ್ಲಿಗಳು ಕಿರಿದಾದವು, ಕಾರಣ ಅರ್ಮರ್ಡ ಕಾರುಗಳನ್ನು ತರಲಾಗಲಿಲ್ಲವೆಂದು ವಿಷಾದ ವ್ಯಕ್ತಪಡಿಸಿದ್ದ. ಇದರಿಂದಲೇ ತಿಳಿಯುತ್ತದೆ ನಿಶ್ಯಸ್ತ್ರಧಾರಿಗಳಾದ ನಮ್ಮನ್ನು ಕೊಲ್ಲಲು ಅವನಿಗೆ ಅಷ್ಟು ಗಂಡುಗಳು ಸಾಲಲಿಲ್ಲ. ಇನ್ನು ನಾವು ಅವರಂತೆ ಶಸ್ತ್ರಧಾರಿಗಳಾಗಿದ್ದರೆ ನಮ್ಮ ಮೈಯನ್ನೇ ಅವರಿಗೆ ಮುಟ್ಟಲಾಗುತ್ತಿರಲಿಲ್ಲವೇನೋ ಅಲ್ಲವೇ...
      17 ಮತ್ತು 18ನೇಯ ಶತಮಾನಗಳಲ್ಲಿ ಭಾರತ ಸಂಪದ್ಭರಿತ ದೇಶವಾಗಿತ್ತು ಎಂದು ಹೇಳಿದರೆ ಅದನ್ನು ನಂಬುವುದು ಕಷ್ಟ ಆದರೂ ಈ ಮಾತು ಅಕ್ಷರಶಃ ನಿಜ ಈ ಅಭಿಪ್ರಾಯವನ್ನು ಸ್ಫಷ್ಟ ಪಡಿಸಲು ಎರಡು ಮೂರು ಉಲ್ಲೇಖಗಳಿವೆ ನನ್ನ ಬಳಿ. ಹೇಳ್ತೀನಿ. ಓದಿದ ನಂತರ ನಮ್ಮ ದೇಶಕ್ಕೆ ಯಾವ ದೇಶವೂ ಸಾಟಿ ಆಗಲಾರದು  ಬಿಡಿ ಎಂದು ನಿಮಗೆ ಅನಿಸಬಹುದು. ಇಲ್ಲಿನ ಅಂಕಿ ಅಂಶಗಳನ್ನು ಗಮನಿಸಿದರೆ ಆಗಲೇ ಅಷ್ಟಿದ್ದ ಶ್ರೀಮಂತಿಕೆ ಇಂದಿದ್ದರೆ ಎಷ್ಟು ಕೋಟಿ ಆಗುತ್ತಿತ್ತೋ ಎಂದು ನಿಬ್ಬೆರಗಾಗಬಹುದು.
ಪಿಯರ್ ಸೆನ್ ಎಂಬಾತ 1572ರಲ್ಲಿ ಭಾರತದ ಸಮುದ್ರ ವ್ಯಾಪಾರ 8 ಕೋಟಿ ರೂಪಾಯಿಗಳಷ್ಟು ಎಂದು ಅಂದಾಜು ಮಾಡಿ ಹೇಳಿದ್ದ. (ಗಮನಿಸಬೇಕು ನೀವು ಇದು ಸಾವಿರ ಅಲ್ಲ ಲಕ್ಷ ಅಲ್ಲ ಬದಲಾಗಿ ಕೋಟಿ)
ಬ್ರಿಟೀಷರು ಭಾರತಕ್ಕೆ ಬರುವ ಮುಂಚಿನ ಮಾತು ಇದು 1601 ರಿಂದ 1623ರವರೆಗೆ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ತಂದ ವಸ್ತುಗಳಲ್ಲಿ ಶೇ 68.2 ಪಾಲು ಚಿನ್ನ ಬೆಳ್ಳಿ ಯಾಗಿತ್ತಂತೆ.
ಆಗ ಭಾರತಕ್ಕೆ ವಿನಿಮಯವಾಗಿ ಕಳುಹಿಸಲು ಯೋಗ್ಯವಾದ ವಸ್ತುಗಳು ಬ್ರಿಟನ್‍ನಲ್ಲಿ ತಾಯಾರಾಗುತ್ತಿರಲಿಲ್ಲ ಹಾಕ್ಸಿನ್ ಎಂಬಾತ ಎಲ್ಲ ರಾಷ್ಟ್ರಗಳು ಇಲ್ಲಿಗೆ ನಾಣ್ಯ (ಚಿನ್ನ,ಬೆಳ್ಳಿ) ತಂದು ಸರಕುಗಳನ್ನು ಒಯ್ಯುತ್ತವÉ. ಎಂದು ತನ್ನ ಪ್ರವಾಸ ಕಥನದಲ್ಲಿ ತಿಳಿಸಿದ್ದಾನೆ.
ಈಸ್ಟ್ ಇಂಡಿಯಾ ಕಂಪೆನಿ ತನ್ನ ವ್ಯಾಪಾರ ಕುದುರಿಸಿಕೊಂಡ ನಂತರವೂ 1710-1759 ರ ಅರ್ಧ ಶತಮಾನದ ಅವಧಿಯಲ್ಲಿ ಇಂಗ್ಲೆಂಡು ಪೂರ್ವ ದೇಶಗಳೊಂದಿಗೆ ಮಾಡಿದ ರಪ್ತು ವ್ಯಾಪಾರದ ಒಟ್ಟು 3 ಕೋಟಿ 60 ಲಕ್ಷ ಪೌಂಡು ಆಗಿತ್ತಂತೆ.  ಅವುಗಳಲ್ಲಿ 92 ಲಕ್ಷ ಮಾತ್ರ ಸರಕು ರೂಪದಲ್ಲಿ ಉಳಿದ 2 ಕೋಟಿ 68 ಲಕ್ಷ ಚಿನ್ನ, ಬೆಳ್ಳಿ, ರೂಪದಲ್ಲಿ ಇದ್ದವಂತೆ.

ನೋಡಿ ನಾವೆಷ್ಟು ಶ್ರೀಮಂತರಲ್ವಾ...ಎಂಥಹ ಅರ್ಥವ್ಯವಸ್ಥೆ ನಮ್ಮದಲ್ವಾ...!!!
  ಈ ಅಂಕಿ ಸಂಖ್ಯೆಗಳ ಅರ್ಥ ಇಷ್ಟು. ಭಾರತ 18ನೇಯ ಶತಮಾನದ ನಡು ಭಾಗದವರೆಗೆ ಸಿದ್ಧ ವಸ್ತುಗಳನ್ನು ರಫ್ತು ಮಾಡಿ ಸಂಪತ್ತನ್ನು ಗಳಿಸುತ್ತಿತ್ತು. ಹಲವಾರು ಆಕ್ರಮಣಗಳು, ಯುದ್ಧಗಳು ನಡೆಯುತ್ತಿದ್ದ ಆ ಕಾಲದಲ್ಲಿಯೂ ಸುಭದ್ರವಾಗಿದ್ದ ನಮ್ಮ ಅರ್ಥವ್ಯವಸ್ಥೆ ಸುಮಾರು 10 ಕೋಟಿಯಷ್ಟಿದ್ದ ಅಂದಿನ ಜನ ಸಂಖ್ಯೆಯ ಅಗತ್ಯಗಳನ್ನು ಪೂರೈಸಿ, ದೇಶದ ಒಳ ಮಾರುಕಟ್ಟೆಗೆ, ಬೆಳೆಯುತ್ತಿದ್ದ ವಿದೇಶಿ ಮಾರುಕಟ್ಟೆಗೆ , ಮೊಘಲ್ ಸಾಮ್ರಾಜ್ಯದ ಸೈನ್ಯಕ್ಕೆ ಹಾಗೂ  ಬೃಹತ್ ಸಾರ್ವಜನಿಕ ಕಟ್ಟಡ ಮತ್ತಿತರ ನಿರ್ಮಾಣ ಕಾರ್ಯಗಳಿಗೆ  ವಿವಿಧ ಸಿದ್ಧವಸ್ತುಗಳನ್ನು ಒದಗಿಸುತ್ತಿದ್ದು ಅಂತಹ ಅರ್ಥ ವ್ಯವಸ್ಥೆಯನ್ನು ನಿರ್ಬಲವಾಗಿತ್ತೆಂದೋ ಶಿಥಿಲವಾಗಿತ್ತೆಂದೋ ಹೆಸರಿಸುವುದು ಅಪಚಾರವೇವಾಗುತ್ತದೆ ಅಲ್ವಾ!?
  ಈ ಅರ್ಥ ವ್ಯವಸ್ಥೆಯ ಪ್ರಮುಖ ಲಕ್ಷಣಗಳನ್ನು ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳುವುದು ಅಗತ್ಯ. ಆದರೆ ಇಲ್ಲಿ ನಾ ಹೇಳಿರುವುದು ಅತ್ಯಂತ ಸ್ಥೂಲ ರೂಪ. ದೂರದಿಂದ ಬೆಟ್ಟ ತೋರಿಸಿದ ಹಾಗೆ. ಈ ವಿಷಯಗಳನ್ನು ಬಹಳ ಕೂಲಂಕುಶವಾಗಿ ವಿವರಿಸಲು ವಿಧ್ವಾಂಸರೇ ಹಿಂಜರಿಯುತ್ತಿದ್ದಾರೆ ಅಂದರೆ ಅವರಿಗೂ ನಮ್ಮ ಭಾರತದ ಸಂಪತ್ತನ್ನು ಅರಿಯಲು ಇಂದಿಗೂ ಕಷ್ಟ ಸಾಧ್ಯವಾಗಿದೆ.
  ಇದು ನಮ್ಮ ಭಾರತ ಬಹಳ ಪುರಾತನ ಕಾಲದಿಂದ ಪರಕೀಯ ದಾಳಿ ಆಕ್ರಮಣಗಳನ್ನು ಎದುರಿಸಿದ ದೇಶ. ಆದರೆ ಅಮೇರಿಕಾದ ಮೆಕ್ಸಿಕೋ, ಪೆರುಗಳಂತೆ ತಳ್ಳಿದರೆ ಬೀಳುವಂತಹ ದುಃಸ್ಥಿತಿಯಲ್ಲಿರಲಿಲ್ಲ 8-10 ಶತಮಾನಗಳ ಕಾಲ ಅರಬರ, ತುರ್ಕರ, ಅಫ್ಘ್‍ನ್ನರ ದಾಳಿಗಳನ್ನು ಅನುಭವಿಸಿ ಒಂದೊಂದರ ಪರಿಣಾಮವಾಗಿಯನ್ನು ಒಂದೊಂದು ಹೊಸ ಸಮತೋಲನವನ್ನು ಸಾಧಿಸಿಕೊಂಡ ಹೆಮ್ಮೆ ಇದ್ದರೆ ಅದು ನಮ್ಮ ಭಾರತದ್ದು ಮಾತ್ರಾ.
ಹೀಗೆ ಒಂದೊಂದು ವಿಷಯ ವೈವಿಧ್ಯವನ್ನು ಹೋಲಿಸುತ್ತಾ ವಿಮರ್ಶಿಸುತ್ತಾ ಸಾಗಿದರೆ ನಂಬಲಾರದ ಅದೆಷ್ಟೋ ಸತ್ಯಗಳು ಕಣ್ಮುಂದೆ ಮತ್ತೊಂದು ಇತಿಹಾಸ ಸೃಷ್ಟಿಸುತ್ತಾ ಸಾಗುತ್ತವೆ. ಈಗ ಹೇಳಿ ನಾವು ಪುಣ್ಯಾತ್ಮರಲ್ಲವೇ. ಮತ್ತೆ ಎಲ್ಲರಿಗೂ ಎದೆತಟ್ಟಿ ಕೂಗಿ ಹೇಳಿ ಇದು “ನಮ್ಮ ಭಾರತ”...

ಅತ್ತೆ ಸೊಸೆ...ಕಿರಿಕ್...


          ಮನಸ್ತಾಪ, ಜಗಳ, ವೈಮನಸ್ಸು ಇದು ಮಹಿಳೆಯರ ಸಹಜ ದೌರ್ಬಲ್ಯ...ಅವರ ಕಷ್ಟ ಕಾರ್ಪಣ್ಯ ಎಷ್ಟಿದ್ದರೂ, ಒಳಗೊಳಗೆ ಪ್ರಾರಂಭವಾಗುವ ಮುನಿಸು, ಜಲಸು, ಬೇರೆಯದನ್ನು ತನ್ನದಾಗಿಸಿಕೊಳ್ಳಲು ನಡೆಸುವ ಹೋರಾಟ ಎಲ್ಲವೂ ರೌದ್ರಾವತಾರದಂತೆ ಹೊಡೆದಾಡುತ್ತಲೇ ಇರುತ್ತವೆ.ಇನ್ನೂ ಇಬ್ಬರು ಹೆಂಗಸರ ಕಚ್ಚಾಟ ಪ್ರಾರಂಭವಾದರಂತೂ ಸಾಮಾಜಿಕವಾಗಿ ಪಸರಿಸದಿದ್ದರೆ ಅವರಿಗೆ ಸಮಾಧಾನ ಇರಲ್ಲ ಬಿಡಿ. ಇಲ್ಲಿ ಬರುವ ಎರಡು ಪಾತ್ರಗಳು ಹೆಣ್ಣೆ ಆದರೂ ಭಾವಗಳು ಬೇರೆ, ಅದೇ ಅವರ ಜಿದ್ದಿಗೆ ಹೆಚ್ಚು ಕಾರಣವಾದರೂ ಅರಿತು ಬಾಳಲು ಆಗುವುದಿಲ್ಲ ಎಂದರ್ಥವಲ್ಲ. ಬರವಣಿಗೆಗೂ ಮುನ್ನ ಈ ಪೀಠಿಕೆ ಯಾಕೆಂದರೆ  ಇದು ಸಾಮಾನ್ಯ ವಿಷಯವಲ್ಲ ಏರಡು ಹೆಂಗಳೆಯರ ಮಧ್ಯೆ ಕಂಡು ಬರುವ, ಪರಸ್ಫರ ಅಧಿಕಾರದಿಂದಲೋ, ಸ್ಥಾನ ಮಾನದ ಘನತೆಯಿಂದಲೋ  ಕೂಡಿರುವ ವಾದ ವಿವಾದ ಅದುವೇ ಅತ್ತೆ ಸೊಸೆಯರ ವಿಕಾರ ನಾದ...
          ಅತ್ತೆ ಸೊಸೆ ಕಾನ್ಸೆಪ್ಟ್ ತಲೆಗೆ ಮೂಡಿದಾಗಲೇ ನಮಗೆ ತೋಚುವುದೇ ದಿನಂಪ್ರತಿ ಕಾಣುತ್ತಿರುವ ಜಗಳದ ಅವರಿಬ್ಬರ ಜಲಕು. ಈ ಅತ್ತೆ ಸೊಸೆ ಜಗಳ ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ  ಇತ್ತು ಇಂದು ಇದೆ. ಆದರೆ ಅದು ಮುಂದೆ ಪ್ರವೃತ್ತಿ ಆಗುವುದು ಬೇಡ ಎನ್ನುವ ನಿಟ್ಟಿಲ್ಲಿ ಈ ಬರಹ ಅಷ್ಟೆ.

           ಒಂದು ಕಡೆ ಮನೋವೈಧ್ಯರು ಹೇಳುತ್ತಾರೆ ಅತ್ತೆ ಸೊಸೆಯ ಜಗಳಕ್ಕೆ ಮುಖ್ಯ ಕಾರಣ ಅವರ ಪರಸ್ಫರ ಧನಾತ್ಮಕ ನಿರೀಕ್ಷೆಗಳೇ ಕಾರಣವಂತೆ. ಆದರೆ ಕೆಲವೊಮ್ಮೆ ಅಧಿಕಾರ, ನಾನು ನನ್ನದು ಎನ್ನುವ ಭಾವೈಕ್ಯವೂ ಬರಬಹುದೇನೋ ಹೇಳಲಾಗದು. ನಾವೆಲ್ಲ ಸಮಾಜದಲ್ಲಿ ಮಹಿಳೆ ನಿರ್ಲಕ್ಷ್ಯಕ್ಕೊಳಪಟ್ಟಿದ್ದರೂ, ಆಕೆಯನ್ನು ದೇವತೆಯ ಸ್ಥಾನದಲ್ಲಿಯೇ ನೋಡುತ್ತೇವೆ., ಭೂಮಿಯನ್ನು ನೀರನ್ನು ಕೂಡ ಸ್ತ್ರೀ ರೂಪಿಯಾಗಿ, ಅಮ್ಮನ ಪಾತ್ರದಲ್ಲಿ ದೇವತೆಯಾಗಿ ಕಾಣುತ್ತೇವೆ. ಇಷ್ಟೆಲ್ಲಾ ಆದರೂ ಹೆಣ್ಣನ್ನೂ ಹೆಣ್ಣೆ ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.ಇನ್ನೂ ಗಹನವಾಗಿ ಆಲೋಚನೆಗೆ ಕುಳಿತರೆ, ಬಲಗಾಲಿಟ್ಟು ಬಂದ ಸೊಸೆಗೆ ಅತ್ತೆ ರಾಕ್ಷಸಿಯಂತೆ ಕಾಣುವುದ್ಯಾಕೆ?, ಸಂಧರ್ಭಕ್ಕೆ ತಕ್ಕಂತೆ ಸೊಸೆಯ ಪಾಲಿಗೆ ಅತ್ತೆ ಯಾಕೆ ತಾಯಿಯಾಗುತ್ತಿಲ್ಲ?, ಅತ್ತೆಯ ಬುದ್ಧಿ ಮಾತುಗಳ್ಯಾಕೆ ಸೊಸೆಗೆ ತಾಯಿಯ ಬುದ್ಧಿ ಮಾತುಗಳಾಗುತ್ತಿಲ್ಲ?, ಗಂಡನ ಮನೆಗೆ ಬಂದಾಗ  ಅತ್ತೆಯೂ ತನ್ನ ತಾಯಿಯಂತೆ ಎಂದು ಯಾಕೆ ಅಂದುಕೊಳ್ಳುವುದಿಲ್ಲ?, ಮಗನನ್ನು ಕಂಡುಕೊಂಡ ಪ್ರೀತಿಯಲ್ಲಿಯೇ ಅತ್ತೆ ಯಾಕೆ ಸೊಸೆಯನ್ನು ಕಾಣುವುದಿಲ್ಲ?, ಸಂಧರ್ಭದ ಆಧಾರದಲ್ಲಿ  ನಮ್ಮ ಮನಸ್ಥಿತಿಗಳು ಬದಲಾಗುತ್ತವೆಯಾ?, ತಾಯಿ ಮನೆ ಸ್ವರ್ಗ, ಅತ್ತೆ ಮನೆ ನರಕ ಎನ್ನೋ ಮನೋಕ್ಲಿಷೆ ಸರ್ವವ್ಯಾಪಿಯಾಗಿ ಬಿಟ್ಟಿದೆಯಾ?, ಅತ್ತೆ ಸೊಸೆಯರ ಸಂಬಂಧ ವ್ಯತಿರಿಕ್ತವಾಗೋದ್ಯಾಕೆ?, ಅತ್ತೆ ಸೊಸೆಯನ್ನು ಮಗಳಂತೆ, ಸೊಸೆ ಅತ್ತೆಯನ್ನು ಅಮ್ಮನಂತೆ ಯಾಕೆ ನೋಡಿಕೊಳ್ಳಬಾರದು!? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ. ಬಹುಶಃ ಕವಿ ಜಿ.ಎಸ್. ಶಿವರುದ್ರಪ್ಪ ಬಹಳ ಹಿಂದೆಯೇ “ಸ್ತ್ರೀ ಎಂದರೆ ಅಷ್ಟೇ ಸಾಕೆ ..!?” ಎಂಬ ಪ್ರಶ್ನೆ ಮಾಡಿದ್ದು ಇದಕ್ಕೆ ಎನಿಸುತ್ತದೆ.
          ದಿನಂಪ್ರತಿ ಎನ್ನದೇ ಅತ್ತೆ ಸೊಸೆಯರ ಬಗೆಗಿನ ಸುದ್ಧಿಗಳಂತೂ ಕಿವಿಗೆ ಬೀಳುತ್ತಲೇ ಇರುತ್ತವೆ. ಅತ್ತೆಯ ಕಾಟಕ್ಕೆ ನೇಣು ಬಿದಿದುಕೊಂಡ ಸೊಸೆ, ವರದಕ್ಷಿಣೆಗಾಗಿ ಅತ್ತೆಯಿಂದ ಹಿಂಸೆ, ಮಾವ ಹಾಗೂ ಅತ್ತೆಯ ಮೇಲೆ ಕೇಸ್ ದಾಖಲಿಸಿದ ಸೊಸೆ... ಹೀಗೆ ಒಂದರ ಮೇಲೊಂದರಂತೆ ದಿನಂಪ್ರತಿ ಘಟನೆಗಳು ಘಟಿಸುತ್ತಲೇ ಇವೆ.  ಆದರೆ ಯಾರೊಬ್ಬರು ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೇ, ಬಗೆ ಹರಿಸಿಕೊಳ್ಳದೇ, ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದನ್ನು ಚಿಂತಿಸುತ್ತಿಲ್ಲದಿರುವುದೇ ಸಮಸ್ಯೆಯ ಜ್ವಾಲಕ್ಕೆ ಇನ್ನಷ್ಟು ತುಪ್ಪ ಎರೆದಂತಾಗಿದೆ. ಇನ್ನೂ ಮಾಧ್ಯಮಗಳಂತೂ ಏಕಾಏಕಿ ಸಂಧರ್ಭದ ಲಾಭ ಪಡೆದು ಸುಮ್ಮನಾಗುತ್ತಿವೆ. ಎಂಟರ್ ಟೈನ್ ಮೆಂಟ್ ಹೆಸರಿನಲ್ಲಿ ಮನೆಮಂದಿಗೆ ಜಗಳಗಳನ್ನು ತಂದಿಕ್ಕಿ ರಂಪಾಟ ಮಾಡುತ್ತಾ ಬೇಳೆ ಬೇಯಿಸಿಕೊಳ್ಳುತ್ತಿವೆ. ಬೇಸರದ ಸಂಗತಿ ಎಂದರೆ ಪೋಸಿಟಿವ್ ವಿಷಯ ನೀಡಿ ಇಂತಹ ಕೌಟಂಬಿಕ ವಿಚಾರಗಳನ್ನು ತಿಳಿ ಹೇಳಲು ಯಾವ ಮಾಧ್ಯಮವೂ ಪುಷ್ಟಿ ನೀಡುತ್ತಿಲ್ಲ...
 ಇದು ಕೇವಲ ಒಂದೆರಡು ಮನೆಗಳ ಸಮಸ್ಯೆಯಲ್ಲ. ಪ್ರಪಂಚದ ಮುಕ್ಕಾಲು ಭಾಗ ಸಂಸಾರಗಳಲ್ಲಿ ಅತ್ತೆ ಸೊಸೆ ವೈಮನಸ್ಸು ಇದ್ದದ್ದೆ. ಅತ್ತೆ  ಒಳ್ಳೆಯವಳಾದರೆ ಸೊಸೆ ಕೆಟ್ಟವಳು. ಅತ್ತೆ ತಾಟಕಿಯಾದರೆ ಸೊಸೆಗೆ ಗೋಳು. ಇವರ ಮಧ್ಯೆ ಸಾಮರಸ್ಯವೇ ಸಾಧ್ಯವಿಲ್ಲವಾ ಎನ್ನುವುದು ವಿದ್ವಾಂಸರ ಮುಂದಿರುವ ಯಕ್ಷ ಪ್ರಶ್ನೆ.
ಮಗನಿಗೆ ಹೆಂಡತಿ ಬರುತ್ತಾಳೆ ಎಂದರೆ ಅತ್ತೆ ಸ್ಥಾನಕ್ಕೇರುವ ಆ ಮನೆಯ ಸೊಸೆಯ ಮನಸ್ಸಿನಲ್ಲೊಂದು ಸಣ್ಣ ಏರುಪೇರು ಉಂಟಾಗುತ್ತದೆ.  ಸೊಸೆ ತನ್ನ ಮಗನನ್ನು ತನ್ನಿಂದ ಕಸಿದುಕೊಂಡು  ಬಿಡುತ್ತಾಳೇನೋ ಎನ್ನುವ ಆತಂಕ ಪ್ರತಿಯೊಂದು ಅಮ್ಮನಲ್ಲೂ ಇರುತ್ತೆ. ಇದು ಹೆತ್ತವಳ ಪ್ರೀತಿಯ ಚಡಪಡಿಕೆ ಅಷ್ಟೆ. ಮದುವೆಯ ನಂತರ ಮಗ ಪತ್ನಿಯನ್ನು ಕರೆದಾಗ ತಾಯಿ ಸಣ್ಣದೊಂದು ಶಾಕ್ ಅನುಭವಿಸುತ್ತಾಳೆ.   ಜತನದಿಂದ ಸಾಕಿದ ಮಗನನ್ನು ಸೊಸೆ ಬಂದು ಕೈವಶ ಮಾಡಿಕೊಂಡಳೆಂಬ ಭಾವನೆ ಅತ್ತೆಗೆ. ಮಗ ವಯಸ್ಸಿಗೆ ಬಂದಿದ್ದಾನೆ ಈಗವನಿಗೆ ಹೆಂಡತಿ ಪ್ರೀತಿಯೂ ಅಷ್ಟೆ ಮುಖ್ಯ ಎಂದಾಲೋಚಿಸಿದರೆ ಏನಾಗುತ್ತದೆ!?? ಇನ್ನೂ ಏನಾದರೂ ಮಗ ಅಮ್ಮನ ಮಾತೇ ಸರಿ ಎಂದು ಪುಸಲಾಯಿಸಿದರೆ  ಸೊಸೆಗೆ ಮಗನನ್ನು ತನ್ನ ಕೈಮುಷ್ಠಿಯಲ್ಲೇ ಇರಿಸಿಕೊಂಡು ಆಡಿಸುತ್ತಿದ್ದಾಳೆ ಎನ್ನೋ ಭಾವನೆ ಅದನ್ನೆ ಯಾಕೆ ಸೊಸೆಯಾದವಳು ದೊಡ್ಡದು ಎಂದು ಗೊಗೆರೆದುಕೊಳ್ಳಬೇಕು. ಎಲ್ಲವೂ ಸ್ವಲ್ಪ ಸಮಯ ಕೊಟ್ಟು ಆಲೋಚಿಸಿದರೆ ಯಾವುದು ಸಮಸ್ಯೆ ಅಥವಾ ತಪ್ಪು ಅನ್ನಿಸುವುದಿಲ್ಲ.. ಇದು ಜಗಳವಲ್ಲ, ಮನಸು ಮನಸುಗಳ ಹೊಡೆದಾಟ.  ನಮ್ಮ ಎದುರಾಗುವ ಎಲ್ಲಾ ಪೂರ್ವಾಗ್ರಹಗಳಿಂದ ಹೊರಬಂದು ನೋಡಿದಾಗ ಅತ್ತೆ ಮಾತ್ರಾ ಕೆಟ್ಟವಳು ಅಂತ ಎಲ್ಲಿಯೂ ಹೇಳಲಾಗದು. ಎಷ್ಟೋ ಬಾರಿ ಅತ್ತೆ ಹೊಂದಿಕೊಂಡರೂ, ಸೊಸೆ ಅತ್ತೆಯನ್ನು ನಿರ್ಲಕ್ಷ್ಯದಿಂದ ನೋಡುತ್ತಾಳೆ. ಮನೆಕೆಲಸ ಮಗುವಿನ ಆರೈಕೆ ಎಲ್ಲವನ್ನೂ ಅತ್ತೆಗೊಪ್ಪಿಸಿ, ತಾವು ಮಾತ್ರಾ ಕ್ಲಬ್, ಪಬ್ ಎನ್ನುತ್ತಾ ಕಾಲ ಕಳೆಯುವ ಸೊಸೆಯಂದಿರೂ ಇದ್ದಾರೆ.
              ಅವಳು ಸರಿ ಇಲ್ಲ. ಇವಳಿಗೆ ಅಹಂಕಾರ ಅಂತೆಲ್ಲ ಪರಸ್ಫರ ಆರೋಪ ಮಾಡಿಕೊಳ್ಳುವುದಕ್ಕಿಂತ ಸಾಮರಸ್ಯದ ಬದುಕು ನಡೆಸಬೇಕು. ಇದೇನೂ ಕಷ್ಟದ ಕೆಲಸವಲ್ಲ. ಪರಸ್ಫರ ಗೌರವ, ಪ್ರೀತಿ ಇದ್ದರೆ ಅತ್ತೆ ಸೊಸೆ ತಾಯಿ- ಮಗಳಂತಿರಬಹುದು. ಅತ್ತೆಯಾದವಳು ತನ್ನ ಹಿರಿತನದಿಂದ ಸೊಸೆಯನ್ನು ವಾತ್ಸಲ್ಯದಿಂದ ಮಗನ ಜವಾಬ್ಧಾರಿ ಅವಳಿಗೊಪ್ಪಿಸಿದರೆ ಸೊಸೆಯೂ ಅತ್ತೆಯನ್ನು ಪ್ರೀತಿಯಿಂದ ಕಾಣುತ್ತಾಳೆ. ಹಿರಿಯರನ್ನು ಗೌರವದಿಂದ ಕಂಡು ಅವರನ್ನು ಪ್ರೀತಿಯಿಂದಾಗಿ ನೋಡಿಕೊಂಡು ಸೊಸೆಗೂ ಗಂಡನ ಪ್ರೀತಿ ಹಿರಿಯರ ವಾತ್ಸಲ್ಯ ದೊರಕುತ್ತದೆ. ಎಲ್ಲ ಸಂಸ್ಕಾರವಂತರೊಳಗೂ ಜಗಳವನ್ನು ನಿಯಂತ್ರಿಸುವ ಶಮನಗೊಳಿಸುವ, ಹತ್ತಿಕ್ಕುವ, ನಂದಿಸುವ ಒಂದು ಅದ್ಭುತ ಇನ್ ಬ್ಯುಲ್ಟ್ ಸಿಸ್ಟಮ್ ರಚನೆ ಇರುತ್ತದೆ. ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿಕೊಳ್ಳಬೇಕಷ್ಟೆ. ನಾವು ನಮ್ಮೊಳಗೆ ವಿಕಾರತೆಯ ಅನಾವರಣ ಮಾಡಿಕೊಂಡು ಅಪ್ರಬುದ್ದ ಮನಸ್ಸಿನ ಬಡಬಡಿಕೆಯ ತಾಂಡವವನ್ನು ಪ್ರದರ್ಶಿಸುತ್ತಾ ಇರುತ್ತೇವೆಯೋ ಹೊರತು ಸಂಸಾರ ದೋಣಿ ಬಳುಕುವ ನೃತ್ಯ ನಿಲ್ಲಿಸಿಕೊಂಡು ಸರಿದೂಗಿಸಿಕೊಳ್ಳುವುದಿಲ್ಲ. ಸೊಸೆಯಂದಿರೆ ನಿವೇಕೆ ಅತ್ತೆಯನು ಕೆಟ್ಟವಳಂತೆ ಕಾಣುತ್ತೀರಿ. ಅತ್ತೆ ಯಾವಾಗಲೂ ಸೊಸೆಯಿಂದ ನಿರೀಕ್ಷಿಸುವುದು, ನಯವಾದ ಮಾತು, ಉತ್ತಮ ನಡತೆ, ಗುಣ, ಆಡಮಬರವಿಲ್ಲದ ಸೌಂದರ್ಯಪ್ರಜ್ಞೆ, ಮನೆಯವರನ್ನೆಲ್ಲಾ ಪ್ರೀತಿಯಿಂದ ಓಲೈಸುವ ಮನೊಭಾವ ಅಷ್ಟೆ. ಮಗ ಪ್ರತಿ ದಿನ ಆಫೀಸ್‍ಗೆ ಹೋಗುವಾಗ ಅಮ್ಮ ಟಿಫಿನ್ ರೆಡಿ ಮಾಡಿ ಕೊಡುವುದು ಹೊಸತೇನಲ್ಲ ಆದರೆಸೊಸೆ ಬಂದ ಮೇಲೆ ಇದು ಬದಲಾಗಬೇಕು ಅತ್ತೇ ನಾನೀದಿನಲ್ಲಾ ಇನ್ನೂ ನೀವ್ಯಾಕೆ ಇದನ್ನೆಲ್ಲಾ ಮಾಡ್ಬೇಕು. ಅನ್ನುವ ಸೊಸೆಯ ಪ್ರೀತಿ ತುಂಬಿದ ಮಾತು ಬದುಕೆಂಬ ಕ್ರಿಕೆಟ್ ಜಗತ್ತಿನಲ್ಲಿ ಕ್ರಿಕೆಟ್ ಖಾತೆ ತೆರೆದಂತೆ. ಅಲ್ಲಿ ಅತ್ತೆ ನಿಮ್ಮೆದುರು ಏನೇ ಗೊಣಗಿದರೂ ಮರೆಯಲ್ಲಿ ನಿಂತು ಆನಂದದ ಕಣ್ಣೀರು ಸುರಿಸುತ್ತಾಳೆ. ಹೆಣ್ಮಕ್ಕಳೆ ಒಂದು ನೆನಪಿಟ್ಟುಕೊಳ್ಳಿ ಇಂದು ನೀವು ಸೊಸೆಯಾಗಿ ಮನೆ ಬೆಳಗಿದರೆ ನಾಳೆ ನಿಮಗೆ ಸಿಗುವ ಸೊಸೆ ಮುತ್ತಿನಂತವಳಾಗಿರುತ್ತಾಳೆ.



"ಅತ್ತೆ ಸೊಸೆ ಜಗಳವೆಂಬುದು ಅನಾಧಿಕಾಲದಿಂದಲೂ ಇದೆ. ಅದೊಂಥರ ಇನ್‍ಬಾರ್ನ್ ಸಿಸ್ಟಮ್. ಅತ್ತೆಯಾದವಳು ಅವಳ ಅತ್ತೆಯಿಂದ ಅನುಭವ ಪಡೆದಿರುತ್ತಾಳೆ ಅದನ್ನು ಅವಳು ತನ್ನ ಸೊಸೆ ಮೇಲೆ ತೀರಿಸಿಕೊಳ್ಳುತ್ತಾಳೆ. ಆದರೆ ಸೊಸೆಯಂದಿರು ಅತ್ತೆ ಮೇಲೆ ಹರಿಹಾಯಲು ಕಾರಣ ತಾನು ಸ್ವತಂತ್ರ ವಾಗಿರಲು ಭಯಸುವುದೇ ಆಗಿರುತ್ತದೆ. ಇದನ್ನು ಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಆದರೆ ಇಂತಹ ದೌರ್ಜನ್ಯ ಕಂಡುಬಂದಾಗ ‘ಕೌಟುಂಬಿಕ ದೌರ್ಜನ್ಯ ಕಾಯ್ದೆ’ಯಡಿ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ದೂರು ನೀಡಬಹುದಾಗಿದೆ."
-ಪ್ರಮೀಳಾ ನೇಸರ್ಗಿ.
ವಕೀಲರು, ಶಿಕ್ಷಣ ತಜ್ಞರು, ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ.

ಹೆಣ್ಣು-8


        ಈ ಸ್ಟೋರಿ ಪ್ರಾರಂಭವಾಗುವುದಕ್ಕೆ ಮುಂಚೆ ಅವಳೊಬ್ಬಳು ಪಾಪದ ಹುಡುಗಿ. ಸುಂದರ ಕನಸುಗಳನ್ನು ಹೊತ್ತ ಸುಂದರಿ. ಅವಳಿಗಿತ್ತು ಅವಳದೇ ಕೆಲವೊಂದು ರೀತಿ-ನೀತಿ, ನಲಿವಿನ ಪರಿಚಯ ಮಾತ್ರವೇ ಇತ್ತು.  ಆ ಬಾಲೆಗೆ ಮುಂದೊಂದು ದಿನ ಬದುಕೆಂಬ ದೋಣಿ ಬಿರುಗಾಳಿಗೆ ಸಿಲುಕಿ ಮುಳುಗಿ ಹೋಗುತ್ತದೆಯೇನೊ ಎಂಬ ಪರಿವೆಯೇ ಇರಲಿಲ್ಲ. ಟೋಟಲ್ ಆಗಿ ಅವಳೊಬ್ಬಳು ಮುಗ್ಧೆ ಎಂದರೆ ತಪ್ಪಿಲ್ಲ.
ತಂದೆ ತಾಯಿಯರಿಗೆ ಕಷ್ಟವಿದ್ದರೂ ಮಗಳಿಗೆ ಅದರ ಗುರುತು ನೀಡಿರಲಿಲ್ಲ. ಬೇಕೆಂದಿದ್ದನೆಲ್ಲಾ ಕೊಡಿಸಿ ಶ್ರೀಮಂತಿಕೆಯ ರಕ್ಷಾ ಕವಚ ಪರಿಚಯಿಸಿದ್ದರು. ಆಗಲೇ ಲೈಫ್ ಈಸ್ ಬ್ಯೂಟಿಫುಲ್ ಎನ್ನುತ್ತಾ ಮೆಲ್ಲನೆ ಎಸ್.ಎಸ್.ಎಲ್.ಸಿ ಮುಗಿಸುತ್ತಾ ಪಿ.ಯು.ಸಿ ಗೆ ಕಾಲಿರಿಸಿದ್ದಳು ಆಕೆ. ಈಗವಳು ಹರೆಯಕ್ಕೆ ಕಾಲಿಟ್ಟ ಚೆಲುವೆ. ಅದೊಂದು ರೀತಿಯ ಹೊಸ ಬಗೆ, ನವನವೀನ ಹುರುಪು, ಚಲ್ಲಾಟಕ್ಕೆ ಬ್ರೇಕ್ ಕೊಟ್ಟು ಸ್ವಲ್ಪ ಗಂಭೀರಕ್ಕೆ ತಿರುಗುವ ಜೋಷ್, ಬೇಡವೆಂದರೂ ಕನ್ನಡಿಯ ಮುಂದೆ ನಿಲ್ಲಿಸಿ ಮೇಕಪ್ ಮಾಡುವ ವಯಸ್ಸು. ಅದಾಗಲೇ ಹಳೆಯ ಗೆಳತಿಯರ ಜೊತೆಗೆ ಒಂದಿಷ್ಟು ಹೊಸ ಗೆಳತಿಯರು ದೊರಕಿರುವ ಖುಷಿ. ಹೀಗೆ ಎಲ್ಲವೂ ಭಿನ್ನ ಭಿನ್ನವಾಗಿದ್ದವು. ಪುಟ್ಟ ಹಳ್ಳಿಯಲ್ಲಿ ಬೆಳೆದು ಓದಿರುವ ಅವಳು ಆ ಹೊತ್ತಿಗಾಗಲೇ ಬಸ್ಸ್‍ನಲ್ಲಿ ಪಟ್ಟಣದ ಕಾಲೇಜಿಗೆ ಹೋಗಿ ಬರುತ್ತಿದ್ದಳು. ನಮ್ಮ ಹಾಗೆ ನಮ್ಮ ಮಗಳು ಆಗಬಾರದು, ಆಧುನಿಕತೆ ಅವಳಿಗೂ ಒಗ್ಗಲಿ ಎಂದೆನಿಸಿಕೊಂಡು ಮೂಲಭೂತ ಸೌಕರ್ಯ ಎಂಬಂತೆ ಒಂದೊಳ್ಳೆ ಮೊಬೈಲ್‍ನ್ನು ತೆಗೆಸಿಕೊಟ್ಟರು ತಂದೆ ತಾಯಿ.
‘ಮನೆಗೆ ಬರುವುದು ಲೇಟಾದರೆ, ಬಸ್ಸ್ ಮಿಸ್ ಆದರೆ, ಕಾಲ್ ಮಾಡಿ ತಿಳಿಸು ಮಗಳೆ’ ಎಂದು ಮುದ್ದಿಸಿ ಇನ್ನು ಸ್ವಲ್ಪ ಜಾಸ್ತಿ ಶ್ರೀಮಂತಿಕೆ ನೀಡಿ ಸಂಧರ್ಭಗಳ ಸವಿಯನ್ನು ಸವಿದಿದ್ದರು.
ಪ್ರಾರಂಭದಲ್ಲಿ ಎಲ್ಲ್ಲವೂ ನೀಟಾಗಿಯೇ ಇತ್ತು. ಸಂಬಂಧಿಕರು ಗೆಳತಿಯರು ಎಂದು ಕಾಂಟಾಕ್ಟ್ ಸೇವ್ ಆಗುತ್ತಿದ್ದ ಮೊಬೈಲ್‍ಗೆ ಮಸೇಜ್, ಕಾಲ್‍ಗಳು ಮಾಮುಲಿಯಾಗಿ ಬಂದು ಹೋಗುತ್ತಿದ್ದವು. ಇದೆಲ್ಲದರ ಮಧ್ಯೆ ಒಂದು ದಿನ ಅಚಾನಕವಾಗಿ ಬಂದ ಮಿಸ್‍ಕಾಲ್ ಅವಳ ಮೊಬೈಲ್  ಪರದೆಗೆ ಅಪ್ಪಳಿಸಿತ್ತು. ಅಂದಿನ ಆ ಮಿಸ್ಸ್ ಕಾಲ್‍ಗೆ ಶುರುವಾದ ಕ್ಯೂರ್ಯಾಸಿಟಿ ಯಾವಾಗ ಆಕೆ ಪದೆ ಪದೇ ಮೊಬೈಲ್ ನೋಡುವಂತೆ ಮಾಡಿತ್ತೋ, ಅಲ್ಲಿಂದಲೇ ಬದಲಾವಣೆಯ ಗಾಳಿ ಬೀಸಿತ್ತು ನೋಡಿ. ಅದೊಂದು ಕಳ್ಳಾಟಿಕೆ ತನ್ನ ಲೈಫ್‍ನ್ನೇ ಮುಂದೊಂದು ದಿನ ಮಿಸ್ ಮಾಡುತ್ತೆ ಎಂದು, ತಿಳಿದಿರಲಿಲ್ಲ ಆಕೆಗೆ. ಆನಾಮಿಕನಂತೆ ಮಿಸ್ ಕಾಲ್‍ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಇವಳಿಗೆ ದಿನ ಕಳೆದಂತೆ ಅವನ ವನಪು, ವಯ್ಯಾರವನ್ನು ಮೆಸೇಜ್ ಎಂಬ ಮಾಯೆಯಲ್ಲಿ ಕಳುಹಿಸುತ್ತಾ, ತನ್ನೆಡಗೆ ಸೆಳೆದು, ಬಗೆಬಗೆಯ ಆಸೆ ಹುಟ್ಟಿಸುತ್ತಾ ಮೊದಲು ಮೀಟಿಂಗ್ ಮಾಡೋಣ ಎಂದು ಕಾಲ್ ಮಾಡುವ ಸಾಹಸಕ್ಕೆ ಕೈ ಹಾಕಿ, ನಂತರ ಡೇಟಿಂಗ್‍ವರೆಗೂ ಕರೆದು ಮುಂದೇನು ಎಂಬುವಷ್ಟರಲ್ಲಿ ಜೇನು ರಸವನ್ನು ಹೀರಿ ಗೂಡು ಬಿಟ್ಟು ಪರಾರಿ ಎಂಬಂತೆ ಮಾಯವಾಗಿದ್ದ. ಜೊತೆಗೆ ತನ್ನ ಲೀಲೆಯ ಮಹಿಮೆಯನ್ನು ಸೋಷಿಯಲ್ ಆಗೂ ತಿಳಿಯುವಂತೆ ಮಾಡಿ ಪರಾರಿಯಾಗಿದ್ದ. ಮನೆಗೆ ದೀಪವಾಗಿದ್ದ ಅವಳ ಬೆಳಕು ಆ ಕ್ಷಣದಿಂದಲೇ ಬಿರುಗಾಲಿಗೆ ಸಿಲುಕಿ ನಂದಿ ಹೋಗುವ ಹಣಾಹಣಿಯಲ್ಲಿ ಸಾಗಿತ್ತು.  ವಿಷಯ ತಿಳಿದ ಅಪ್ಪ ಅಮ್ಮನ ಪ್ರೀತಿ ಅಷ್ಟಕಷ್ಟೆ ಆಗಿತ್ತು. ಕಾಲೇಜುಗಳಲ್ಲಿಯೂ ಎಲ್ಲರದೂ ಇವಳ ಜೊತೆ ನೀರವ ಮೌನ. ಸೆಳೆದು ಅಬ್ಬರಿಸುತ್ತಿದ್ದ ಅವಳ ಅಂದಕ್ಕೆ ನೋಡುವವರೆ ಗತಿ ಇರಲಿಲ್ಲ. ಅವಳಿಗೆ ಇದೀಗ ಎಲ್ಲವೂ ಸಾಕಾಗಿದೆ. ಅಂದು ಅವನ ಒಂದು ಮೆಸ್ಸೇಜ್‍ಗೆ ತಡಬಡಿಸಿ ಕಾಯುತ್ತಿದ್ದವಳು ಇಂದು ಅವನನ್ನು ನೆನೆಸಿದರೆ ಮೈಪರಚಿದಂತೆ ಪರಿತಪ್ಪಿಸುತ್ತಿದ್ದಳು. ಜೀವನವೇ ಬೇಡ ಎನಿಸಿ ಕೊನೆಗೂ ತೀರ್ಮಾನಿಸಿಯೇ ಬಿಟ್ಟಿದ್ದಳು. ಕಣ್ಣು ಮುಚ್ಚಿ ತೆರೆಯುವುದರೊಳಗೆ ಪರಲೋಕ ಸೇರಿದ್ದಳು.
ಈ ನೋವಿನ ಘಟನೆ ನಾ ಕಂಡ ನಿಜವೇ ಆದರೂ ಇದು ಒಂದು ಹುಡುಗಿಯ ಜೀವನದ ಗಾಥೆಯಲ್ಲ. ಅದೆಷ್ಟೋ ಹೆಣ್ಣು ಮಕ್ಕಳು ಅನುಭವಿಸಿರುವ ಘಟನೆ. ನಾನು ಹೇಳುವುದು ಇಷ್ಟೇ, ಹರೆಯದ ಹುಡುಗಿಯರೇ ಯಾವುದೂ ಎಷ್ಟೂ ಬೇಕೋ ಅಷ್ಟೇ ಇರಲಿ ಅತಿಯಾದರೆ ಅಮೃತವು ವಿಷ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಒಂದಿಷ್ಟು ಜನ ಬಣ್ಣ ಹಚ್ಚುವುದರಲ್ಲೆ ಬೇರೆಯವರ ಜೀವನದ ಓಕುಳಿಯನ್ನು ಆಡುತ್ತಿರುತ್ತಾರೆ, ಆಡಿರುತ್ತಾರೆ. ಕೆಲವೊಂದು ವರ್ಗ ಅದಕ್ಕಾಗಿ ನೆಲೆನಿಂತುಕೊಂಡು ಅಂದದ ಹುಡುಗಿಯರು, ಅಮಾಯಕ ಮಹಿಳೆಯರ ಜೊತೆ ಆಟವಾಡಿ ಮಜಾ ತೆಗೆದುಕೊಂಡು ಸಂಸ್ಕøತಿಯ ರೂಪು ರೇಷೆಯನ್ನು ಹಾಳುಗೆಡವುತ್ತಿದೆ. ಹೆಣ್ಣನ್ನು ಭೋಗಕ್ಕೆಂದೆ ಉಪಯೋಗಿಸುವ ಸಾಮಾಜಕ್ಕೆ ಸೋಷಿಯಲ್ ಮೀಡಿಯಾಗಳು ಪುಷ್ಟಿಕೊಟ್ಟು ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ಮೊಬೈಲ್ ಫೋನ್ ಗಳನ್ನು ಬಳಸಿ ಆದರೆ ಬಳಕೆಯಲ್ಲಿ ಮಿತಿಯಿದ್ದು, ಎಲ್ಲವೂ ನಿಜವೆಂದು ನಂಬದೆ, ಗುರುತು ಪರಿಚಯವಿಲ್ಲದವರ ಬಳಿ ಕಾಂಟ್ಯಾಕ್ಟ್ ಬಳಸುವ ವೇಳೆ ಜಾಗೃತೆ ವಹಿಸಿ, ಹೆತ್ತವರೇ,,, ಮಕ್ಕಳ ನಡೆ ನುಡಿಯಲಿ ನೀವೂ ಎಚ್ಚರವಹಿಸಿ  ಯಾಕೆಂದರೆ ನಿಮ್ಮ ಮಕ್ಕಳಿಗೆ ಏನೇ ಆದರೂ ಹೊಣೆಗಾರರು ನೀವೆ ಎಚ್ಚರವಿರಲಿ ...

Friday, 10 July 2015

ಹೆಣ್ಮಕ್ಕಳೇ ನೀವೆಷ್ಟು ಸೇಫ್...!? (ಬೈಂದೂರು ಬಲಿಯ ಸುತ್ತ...)


ಕಾಮಾಂಧನ ಕುರುಡು ಕಾಮಕ್ಕೆ ಬಲಿಯಾದ ಅಕ್ಷತಾ...
ಮತ್ತೆ ಕರಾವಳಿಯಲ್ಲಿ ಕೊಲೆಯ ತಾಪ
ಕಾಮದ ಹಪಾಹಪಿಯ ನಡುವೆ ಕಣ್ಮುಚ್ಚಿದ ಅಕ್ಷತಾ...
ಕರಾವಳಿ ಜನರಲ್ಲಿ ಮಡುಗಟ್ಟಿದ ಕರಿಛಾಯೆಯ ಕಾರ್ಮೋಡ…

         ಗೋವಾ ಮತ್ತು ಕೇರಳಗಳ ನಡುವೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿಶಾಲ ಪ್ರದೇಶಕ್ಕೆ ಹಬ್ಬಿ ನಿಸರ್ಗ ಸೌಂದರ್ಯವನ್ನು ಉಣಿಸುತ್ತಿರುವ, ಸಮುದ್ರಕ್ಕೆ ತಾಗಿಕೊಂಡಿರುವುದೇ ಕರ್ನಾಟಕದ ಕರಾವಳಿ ಭೂಪ್ರದೇಶ. ಉಪ್ಪು ಸಿಹಿ ನೀರಿನ ಹವೆ, ಮಳೆ, ಉತ್ತಮ ಆರೋಗ್ಯದ ಜೊತೆಗೆ ದಷ್ಟ-ಪುಷ್ಟತೆಯನ್ನು, ಮೇಧಾವಿ ಚುರುಕು ಬುದ್ಧಿಯನ್ನು, ಮತ್ತು ಕಷ್ಟ ಸಹಿಸುವುದನ್ನು ಮೈಗೂಡಿಸಿಕೊಂಡ ಸ್ಥರಯುತ ಬಾಹುಳ್ಯ ಹೊಂದಿರುವವರು ಅಲ್ಲಿನ ಜನತೆ. ಕಲೆ, ಯಕ್ಷಗಾನ, ವಿದ್ಯಾಭ್ಯಾಸ, ಆರೋಗ್ಯ, ಶಿಸ್ತಿನ ಜೀವನಕ್ಕೆ ಹೆಸರು ಮಾಡಿದ್ದು, ಹೆಚ್ಚು ಅಂಕ ಪಡೆಯುವ ಜಿಲ್ಲೆ ಎಂದು ಬಿರುದನ್ನು ಪಡೆದಿದ್ದು, ವಾಯುಮಾರ್ಗ, ಜಲಮಾರ್ಗ, ರಸ್ತೆ, ರೈಲ್ವೆ ಮಾರ್ಗದಲ್ಲೂ ಉನ್ನತ ಸ್ಥರದಲ್ಲಿದ್ದು, ನೀರಿರಲಿ, ಬಿಸಿಲಿರಲಿ, ಕಾಡಿರಲಿ ಯಾವುದಕ್ಕೂ ಭಯ ಪಡಲಾರೆವು ಎನ್ನುತ್ತಿದ್ದ ಜನ ಇದೀಗ ಕೊಲೆ, ಹತ್ಯೆಯೆಂಬ ಹೆಸರಿಗೆ ನಿಜಕ್ಕೂ ಬೆಚ್ಚಿ ಬೀಳುತ್ತಿರುವುದು ಎಲ್ಲರಲ್ಲೂ ಭಯತರಿಸುತ್ತಿದೆ. ಅದರಲ್ಲೂ ಹರೆಯದ ಯುವತಿಯರ ನಿಗೂಢ ಸಾವುಗಳು ಮನೆಯ ಮನೆಯಲ್ಲೂ ಮಾನಸಿಕ ವಿಕ್ಷಿಪ್ತತೆಯೊಂದಿಗೆ ಭಯ ಹುಟ್ಟಿಸುತ್ತಿದೆ.
ಅರೇ ಇದೇನಿದು ಕೇಳ್ತೀರಾ..! ಹೌದು ಕಳೆದ  ಎರಡು ಮೂರು ವರ್ಷಗಳಿಂದ ಕರಾವಳಿಯಲ್ಲಿ ಕೊಲೆಯ ಕೂಗು ಕೇಳುತ್ತಿದೆ, ಉಗ್ರರ ತಾಂಡವತೆ, ರೋಲ್ ಕಾಲ್, ಸೆಕ್ಸ್ ದಂಧೆ , ರಾಜಕಾರಣಿ ಪುಡಾರಿಗಳ ರಕ್ತಚರಿತ್ರೆ, ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಕುಖ್ಯಾತಿಯಾಗುತ್ತಿದೆ. ಒಂದು ಕಡೆ ಅಲ್ಪ ಸಂಖ್ಯಾತರನ್ನು ಪ್ರತ್ಯೇಕಿಸುತ್ತಿರುವುದು ಇನ್ನೊಂದು ಕಡೆ ದುಡಿಯುವ ದಲಿತ ಶೂದ್ರ ಸಮುದಾಯವನ್ನು ದಾರಿ ತಪ್ಪಿಸುತ್ತಿರುವುದು  ಅಷ್ಟೇ ಅಲ್ಲದೇ ದೈವ ಭಕ್ತಿಯ ಆಡಂಬರದ ಅಗ್ಗದ ಪ್ರದರ್ಶನ ಹೆಚ್ಚುತ್ತಿರುವುದನ್ನು ನೋಡಿದರೆ ಮನುಷ್ಯನ ಜೀವನ ಇಲ್ಲಿ ಅಗ್ಗವಾಗಿದೆಯೇನೋ ಅನ್ನಿಸುತ್ತಿದೆ. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ ಕ್ರಿಮಿನಲ್ ಚಟುವಟಿಕೆಗಳಿಗೆ ಧರ್ಮವನ್ನು ರಕ್ಷಾಕವಚವನ್ನಾಗಿ ಬಳಸುತ್ತಿರುವುದು ಹಲವಾರು ಕಡೆ ನಡೆಯುತ್ತಲೇ ಇದೆ.
    ಇವೆಲ್ಲವುಗಳ ಸಂಗಮ ಇಂದು ಕರಾವಳಿಯ ಜನತೆಯಲ್ಲಿ ನಿದ್ರೆಗೆಟ್ಟಿಸಿಬಿಟ್ಟಿದೆ. ಒಂದಕ್ಕೊಂದು ಸಂಭಂಧವೇನೋ ಎಂಬಂತೆ ಇದೀಗ ಮಕ್ಕಳ ರಕ್ತದಲ್ಲೂ ಉಗ್ರತೆಯ ಕಂಪು ಮೂಡುತ್ತಿದ್ದು ಇದರ ಬಗ್ಗೆ ಗಮನವಹಿಸದಿದ್ದರೆ ಮುಂದೊಂದು ದಿನ  ಪ್ರತಿಷ್ಠಿತ ಕರಾವಳಿ ದಂಡು ಪಾಳ್ಯವೋ, ಕಾಬುಲ್‍ನ ಬುಡಕಟ್ಟು ಪ್ರದೇಶದಂತೋ ಆಗುವುದಂತು ನಿಜ.
  ಬಹುತೇಕ ಕಾಡುಗಳೇ ಇರುವ ಕರಾವಳಿಯ ಹಳ್ಳಿಗಳಲ್ಲಿ ಇದೀಗ ಹೆಣ್ಣು ಮಕ್ಕಳ ಕಣ್ಮರೆ, ನಿಗೂಢ ಸಾವುಗಳು ನಡೆಯುತ್ತಿವೆ. ಅಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಗಿಂತ ಮೊದಲು ಅದೆಷ್ಟು ಹೆಣ್ಮಕ್ಕಳು ಹೆಸರಿಗಿಲ್ಲ ಎಂಬಂತೆ ಮಾಯವಾದರೋ ಗೊತ್ತಿಲ್ಲ. ಬಹುಶಃ ಇದು ಪೋಲೀಸ್ ಪುಸ್ತಕದಲ್ಲಿಯೂ ಎಂಟ್ರಿಯಾಗಿತ್ತೋ ಇಲ್ವೋ ಬಲ್ಲವರಿಲ್ಲ. ಆದರೆ ಮೂರ್ನಾಲ್ಕು ವರ್ಷದಿಂದ ಈಚೆಗೆ ನಾಲ್ಕೈದು ಹೆಣ್ಮಕ್ಕಳ ಶವ ನಿಬಿಡ ಪ್ರದೇಶದಲ್ಲಿ ದೊರಕಿದರೂ, ಹೇಗಾಯಿತು? ಯಾಕಾಯಿತು? ಯಾರು ಇದನ್ನು ಮಾಡಿರಬಹುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ದೊರಕದೆ, ರಸವತ್ತಾಗಿ ಎಲ್ಲವೂ ಕಳಚಿಕೊಂಡಿದ್ದು ನಿಮಗೂ ಗೊತ್ತಿರಬಹುದು. ಮೊನ್ನೆ ಮೊನ್ನೆ ಬೈಂದೂರಿನ ಕಾಡಿನಲ್ಲಿ ಅನಾಥವಾಗಿ ದೊರೆತ ಕಾಲೇಜು ಬಾಲೆ ಅಕ್ಷತಾ ಎನ್ನುವವಳ ಶವ, ಹಳೆಯ ಪ್ರಕರಣಗಳು ಮಾಸುವ ಮೊದಲೇ ಹೊಸ ಆಕೃಂಧನಕ್ಕೆ ನಾಂಧಿಯಾಯಿತು. ಈ ಹಿಂದೆ ನಡೆದ ಸೌಜನ್ಯ, ನಂದಿತಾ, ರತ್ನಾ ಕೊಠಾರಿಯ ಅನುಮಾನಾಸ್ಫದ ಸಾವುಗಳಿಗೆ  ಜನ ಹೋರಾಡಿ ಹೋರಾಡಿ ಸೋತು ಸುಣ್ಣವಾಗಿ ಹೋಗಿದ್ದರೂ, “ಇದು ಯುದ್ಧ ಕಣ್ರೀ ಎದುರಿಸಿ ಬಿಡೋಣ” ಎಂಬ ಕೂಗಿನೊಂದಿಗೆ ಶವ ಸಿಕ್ಕಿದ ಕ್ಷಣದಿಂದಲೇ ಪ್ರತಿಭಟನೆಯನ್ನು ಕೈಗೆತ್ತಿಕೊಂಡರು ನೋಡಿ!!!, ಆಗಲೇ ಪೋಲೀಸ್ ಮಹಾಶಯರಿಗೆ ಒತ್ತಡದ ಕಾವು ನಿದ್ದೆಗೆಡಿಸುವಂತೆ ಮಾಡಿ ಆರೋಪಿಗಳನ್ನು ಹಿಡಿಯಲೇಬೇಕು ಎಂಬ ಛಲ ಮೂಡಿ ಬಂತು. ಕುಂದಾಪುರ ತಾಲೋಕಿನ ಬೈಂದೂರಿನ ಎಲ್ಲಾ ಗ್ರಾಮಸ್ಥರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಸಹಕಾರ ಹಾಗೂ ಒತ್ತಡದೊಂದಿಗೆ  ಅಂತು ಕೊಲೆಗಡುಕ ಸಿಕ್ಕಿಯೇಬಿದ್ದ ಅವನೇ ಕಾಮಪಿಶಾಚಿ 19ರ ಹರೆಯದ ಸುನೀಲ್..





ಸುನೀಲ್ ಏನು ರೇಪ್ ಆ್ಯಂಡ್ ಮರ್ಡರ್ ಮಾಡೋಷ್ಟು ಬೆಳೆದವನಲ್ಲ. ಆದರೆ ಆತನ ಕಾಮದ ಕೀಳು, ಚುಡಾಯಿಸುವ ಪುಂಡಾಟಿಕೆ ಅಮಾಯಕ ಹೆಣ್ಣೋಬ್ಬಳ ಜೀವವನ್ನೇ ಬಲಿ ಪಡೆದದ್ದು ದುರಾದೃಷ್ಟ. ಬೈಂದೂರಿನ ಒತ್ತಿನಣೆಯ ಸಮೀಪದಲ್ಲಿರುವ ಹನ್ನಬೇರು ಎಂಬ ಪುಟ್ಟ ಊರಿನ ಪ್ರತಿಭಾನ್ವಿತ ಹುಡುಗಿ ಅಕ್ಷತಾ. ಮನೆಯಲ್ಲಿ ಬಡತನವಿದ್ದರೂ ಓದಿಗೆ ಅದು ಅಡ್ಡಿಯಲ್ಲ ಎಂದು ತೋರಿಸಿದ ಮುಗ್ಧೆ ಅವಳು. ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲ ಶೇ.93 ಅಂಕ ಪಡೆದು ಕರ್ನಾಟಕ ರಾಜ್ಯದಲ್ಲೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನೀಯರಲ್ಲಿ ಅತೀ ಹೆಚ್ಚು ಅಂಕ ಪಡೆದ ಕೀರ್ತಿಗೆ ಭಾಜನಳಾಗಿ ಹಲವು ಕಡೆ ಸನ್ಮಾನಗಳನ್ನು ಗಿಟ್ಟಿಸಿಕೊಂಡಿದ್ದಳು. ಸದ್ಯ ಬೈಂದೂರಿನ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಓದುತ್ತಿದ್ದ ಆಕೆಯ ಮೇಲೆ ಅದಾಗಲೇ ಕಿಡಿಗೇಡಿ ಸುನೀಲನ ಕಣ್ಣು ಬಿದ್ದಿತ್ತು. ಆ ದಿನ ಅಂದರೆ ಜೂನ್ 17ರಂದು ಕಾಲೇಜಿಗೆ ಹೋಗಿದ್ದ ಅಕ್ಷತಾ ಸಮಯ 6 ಆದರೂ ಮನೆಗೆ ಬರದಿದ್ದದ್ದು ಮನೆಯವರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಅದಾದ  ನಂತರ ಹುಡುಕಾಟವನ್ನು ಪ್ರಾರಂಭಿಸಿದ ಮನೆಯವರಿಗೆ ದೊರಕಿದ್ದು ದಾರಿಮಧ್ಯೆ ಪೊದೆಯ ಸಮೀಪ ಅಂಗಾತ ಮಲಗಿರುವ ಆಕೆಯ  ಶವ. ದಟ್ಟ ಕಲ್ಲು ಬಂಡೆಯ ನಡುವೆ ಹಾದು ಹೋಗಿ ಮನೆ ಸೇರಬೇಕಾದ ಹುಡುಗಿ ಸ್ಮಶಾನದ ಕದ ತಟ್ಟಿದ್ದಳು.
ಕಾಮಾಂಧ ಸುನೀಲ್, ಈಗಷ್ಟೇ ಐ.ಟಿ.ಐ ಓದುತ್ತಿರುವ ವಿದ್ಯಾರ್ಥಿಯಾಗಿದ್ದು, ಹುಡುಗಿಯರಿಗೆ ಚುಡಾಯಿಸುವುದು, ಗಾಂಜಾ, ಸಿಗರೇಟ್, ಸೇರಿದಂತೆ ಅನೇಕ ಚಟಗಳಿಗೂ ದಾಸನಾಗಿದ್ದ ಅಸಾಮಿಯೆಂದರೆ ನಂಬುತ್ತೀರಾ!?. ಎಸ್... ನಂಬಲೇಬೇಕು...  ಹೌದು!.., ಆ ದಿನ ಅಕ್ಷತಾಳ ಬರಿವಿಕೆಗೆ ಹೊಂಚು ಹಾಕಿ ಕಾಯುತ್ತಿದ್ದ, ದುರ್ಗಮ ದಾರಿಯಲ್ಲಿ ಅವಳು ಆಗಮಿಸಿದಾಗ  ಅಡ್ಡ ನಿಂತು ದುರ್ವರ್ತನೆ ತೋರಿದ್ದ. ಅದಕ್ಕವಳು ಹೆದರಿ ಓಡಲಾರಂಭಿಸಿದ್ದೆ ತಡ ಆಕೆಯ ದುಪ್ಪಟ್ಟವನ್ನು ಜಗ್ಗಿ  ಮುಗ್ಧೆಯನ್ನು ಕಡೆವಿದ್ದ. ಕೂಗಿದಾಗ, ಅದರಿಂದಲೇ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿದ್ದಾನೆ. ಅರೆಉಸಿರಿನಿಂದ ಒದ್ದಾಡುತ್ತಿರುವ  ಅಕ್ಷತಾಳನ್ನು ಪಕ್ಕದಲ್ಲೇ ಇರುವ ಅಕೇಶಿಯಾ ಗಿಡಗಳತ್ತ ಎಳೆದುತಂದು ಮಲಗಿಸಿ, ಅವಳ ಮೈ ಮೇಲೆ ಮಲಗಿ, ಲೈಂಗಿಕ ಪೀಡನೆ ನಡೆಸಿ ಮತ್ತೊಮ್ಮೆ ತನ್ನ ವಾಮನಾವತಾರವನ್ನು ತೋರಿದ್ದಾನೆ. ಅದಾಗಲೇ ಅವಳು ಪೂರ್ತಿ ಜೀವ ಕಳೆದು ಇಹಲೋಕವನ್ನು ತ್ಯಜಿಸಿದ್ದಳು. ಇದನ್ನು ಗಮನಿಸಿದ ಸುನೀಲ್ ಭಯಗೊಂಡು ಆಕೆಯ ಬ್ಯಾಗ್ ಮತ್ತು ಕೊಡೆಯನ್ನು ಪಕ್ಕದಲ್ಲಿ ಇಟ್ಟು ಪರಾರಿಯಾಗಿದ್ದಾನೆ.
ಆನಂತರದಲ್ಲೇ ನೋಡಿ, ಕಳ್ಳನ ಮನಸ್ಸು ಹುಳ್ಳಗೆ ಎನ್ನುವಂತೆ, ಪೊಲೀಸರಿಗೆ ಸುಳಿವು ಸಿಗಬಾರದೆಂದು ತಲೆ ಕೂದಲನ್ನು ಕ್ಷೌರ ಮಾಡಿಸಿಕೊಂಡು ರೂಪ ಬದಲಾವಣೆಯ ಚರ್ಯೆಗೆ ನಿಂತು ಬಿಟ್ಟ ಸುನೀಲಕಾಮಿ. ಈ ನಡುವೆ ಮಾತನಾಡುತ್ತಾ ತನ್ನ ಚಿಕ್ಕಮ್ಮನ ಮಗ ಅಕ್ಷಯನಿಗೂ ವಿಷಯ ಹಂಚಿ, ಮತ್ಯಾರಿಗೂ ಹೇಳಬೇಡ ಪೊಲೀಸರ ಮುಂದೆಯೂ ಬಾಯಿ ಬಿಡದಿರು ಎಂದು ಸಲಹೆ ನೀಡಿದ್ದ. ಅಷ್ಟೇನೂ ಖಚಿತ ಮಾಹಿತಿ ಇಲ್ಲದಿದ್ರೂ ಅನುಮಾನಾಸ್ಫದವಾದ ಸುಮಾರು 150 ರಿಂದ 200 ಮಂದಿಯನ್ನು ವಿಚಾರಿಸಿದ ಉಡುಪಿ ಎಸ್ಫಿ ಅಣ್ಣಾಮಲೈ ಹಾಗೂ ಅವರ ತಂಡ ಅಂತಿಮವಾಗಿ ಸುನೀಲ್ ಮತ್ತು ಅಕ್ಷಯನನ್ನು ಪೋಲೀಸ್ ಗಾಡಿಗೆ ಹತ್ತಿಸಿದ್ದರು. ಸ್ಟೇಷನ್‍ನಲ್ಲಿ ಒಟ್ಟಿಗೆ ವಿಚಾರಿಸಿದಾಗ ಬಾಯಿ ಬಿಡದ ಇಬ್ಬರೂ ಕದೀಮರು ಒಬ್ಬೊಬ್ಬರನ್ನೇ ವಿಚಾರಿಸಿ ಬೆಂಡೆತ್ತಿದಾಗ, ಅಕ್ಷಯ ನಿಜವನ್ನು ಅರುಹಿದ್ದ. ಅಲ್ಲಿಗೆ ಕೇವಲ ಎರಡೇ ದಿನದಲ್ಲಿ ಇದು ಸಹಜವಾದ ಸಾವಲ್ಲ ‘ರೇಪ್ ಆ್ಯಟಂಪ್ಟ್ ಆ್ಯಂಡ್ ಮರ್ಡರ್’ ಎಂಬ ಸುದ್ಧಿ ಹೊರಬಿತ್ತು. ಇದೀಗ ಸುಳ್ಳು ಮಾಹಿತಿ ಕೊಟ್ಟು ಪೊಲೀಸರ ದಾರಿ ತಪ್ಪಿಸಿದ ನಿಟ್ಟಿನಲ್ಲಿ ಅಕ್ಷಯ ಹಾಗೂ ಕೊಲೆಯ ಪ್ರಮುಖ ವ್ಯಕ್ತಿ ಸುನೀಲ್ ಇಬ್ಬರೂ ಪೊಲೀಸ್ ತೆಕ್ಕೆಯಲ್ಲಿ ಕೋಳನ್ನು ತೊಟ್ಟಿದ್ದಾರೆ.
ಕೊಲೆಯೇನೋ ನಡೆದು ಹೋಯ್ತು, ಆರೋಪಿಗಳು ಸೆರೆ ಸಿಕ್ಕರು ಆದರೆ ಕರಾವಳಿಯ ಜನರಲ್ಲಿ ಮಡುಗಟ್ಟಿದ ಕರಿಛಾಯೆಯ ಕಾರ್ಮೋಡ ಇನ್ನೂ ಇಳಿದಿಲ್ಲ. ಈ ಹಿಂದೆ ನಡೆದ ಕೊಲೆಗಳಿಗೂ ಉತ್ತರ ಹುಡುಕಲು ಇದೀಗ ಅಲ್ಲಿನ ಜನತೆ ಮುಂದಾಗಿದ್ದಾರೆ. ಇದೇನೋ ಬಹಳ ಬೇಗ ಬೇಗ ತಪಾಸಣೆ, ವಿಚಾರಣೆ ನಡೆಯಿತು ಇದರಂತೆ ಹಿಂದಿನ ಕೊಲೆಗಳಿಗೂ ಉತ್ತರಿಸಿ ಎನ್ನುವುದು ತಾಲೋಕಿನ ಜನರ ಆಶಯ. ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಕ್ಷೇತ್ರದಲ್ಲಿ ಭಟ್ಟಂಗಿತನ ಮತ್ತು ಸ್ವಹಿತಾಸಕ್ತಿ ನಡೆಸುತ್ತಿದ್ದು, ಪ್ರಜಾಪ್ರಭುತ್ವವನ್ನು ಹೊಸುಕಿಹಾಕಿ ಜನರಿಗೆ ನ್ಯಾಯ ದೊರೆಯದಂತೆ ಮಾಡುತ್ತಿವೆ, ಇಲ್ಲಿನ ಅನೇಕ ಅಕ್ರಮಗಳಿಗೆ ರಾಜಕೀಯ ಹಾಗೂ ಪ್ರಭಾವಿ ವ್ಯಕ್ತಗಳೇ ಕಾರಣ ಎನ್ನುತ್ತಾರೆ ಅಲ್ಲಿನ ಜನ.
ನಿಜ! ಈ ಜಗತ್ತನ್ನು ಬೇರೆ ಬೇರೆ ಸ್ವರೂಪದ ಅನಿಷ್ಟಗಳು ಕಾಡುತ್ತಿವೆ. ಯರ್ರಾ ಬಿರ್ರಿಯಾಗಿ ಆಳುತ್ತಿವೆ. ಅಕ್ಷತಾಳ ಕೊಲೆಯ ರಹಸ್ಯವನ್ನೇನೋ ಬೇಧಿಸಿದ್ದೇವೆ ಆದರೆ ಇಂತಹ ಘಟನೆಗಳು ಮಾನವ ಲೋಕವನ್ನೇ ತಲ್ಲಣಿಸುವ ಹಾಗೂ ಅಮಾನವೀಯವನ್ನು ಅಕ್ರಮ ಸಮಾಜದೆಡೆ ಕೊಂಡು ಹೋಗುವ ಲಕ್ಷಣಗಳಾಗಿದ್ದು ಈಗಲೇ ಇದನ್ನು ತಡೆಯದಿದ್ದರೆ ಮುಂದೆ ನಮ್ಮ ಕಣ್ಮುಂದೆ ನಮ್ಮ ಮಕ್ಕಳು ಸತ್ತು ಹೆಣವಾಗುವುದನ್ನು ಕಾಣಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಇದರ ಬಗ್ಗೆ ನಮ್ಮನ್ನಾಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೀವೇ ಹೊಣೆ ಹೊತ್ತು  ಕಾಡು ಮೇಡಿನಲ್ಲಿರುವ ಪ್ರದೇಶಗಳಿಗೆ ಸೂಕ್ತ ಭದ್ರತೆ, ದಕ್ಷ ಅಧಿಕಾರಿಯ ನೇಮಕ, ಜೊತೆಗೆ ಸರಿಯಾದ ಮಾರ್ಗ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂದು ನಮ್ಮ ಕಳಕಳಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇಲ್ಲವಾದರೇ ನೀವೆ ಹೇಳಿ ‘ಘನವೆತ್ತ ಬದುಕನ್ನು ಅವರು ಬದುಕುವುದ್ಹೇಗೆ...!?’

ನಗ್ನತೆಯ ಪಿಸುಮಾತು...


ತಮ್ಮ-ತಂಗಿ ಶಾಲೆಗೆ ಹೋಗುತ್ತಿರುವರು ಆದರೆ...!!!

           ಜೂನ್ 1...
           ಮುಂಜಾನೆಯ ನಿತ್ಯಕರ್ಮಗಳನ್ನು ಮುಗಿಸಿ, ಬಾಹ್ಯ ಪ್ರಪಂಚಕ್ಕೆ ಹೊರ ಬೀಳುವ ಮುನ್ನ ಮೊಬೈಲ್ ಡಾಟಾ ಆನ್ ಮಾಡಿ ದಿನದ ವಿಷಯ ವೈವಿಧ್ಯ ಹಾಗೂ ಗೆಳೆಯ, ಗೆಳತಿಯರ ಸಂದೇಶ, ಪತ್ರಿಕೋದ್ಯಮದ ಸುದ್ದಿ ಶಕಾರನ್ನು ತಿಳಿಯಲು ಮನತೆರೆದೆ. ಎಂದಿನಂತೆ ಒಂದಿಷ್ಟು ಫೇಸ್ ಬುಕ್ ಟ್ಯಾಗ್‍ಗಳು, ಪೋಟೋ ಅಪ್ಡೇಟೆಡ್, ಸ್ಟೇಟಸ್, ಮೇಸೆಂಜರ್‍ನ ಸಂದೇಶಗಳು ಟಿನ್ ಟಿನ್ ಸದ್ದಿನೊಂದಿಗೆ ಪರದೆಯಲ್ಲಿ ನೋಟಿಫಿಕೇಷನ್ ಸ್ಥಳದಲ್ಲಿ ಮಿಂಚಿದವು. ಆಗಲೇ ವಾಟ್ಸಾಪ್‍ನಲ್ಲೂ ಶುಭೋದಯ ಸಾರುವ ಹಲವಾರು ಮೆಸೇಜ್‍ಗಳು ತಾ ಮುಂದು ನಾ ಮುಂದು ಎಂಬಂತೆ ಬೇರೆಯದೇ ರೀತಿಯಲ್ಲಿ ಸೌಂಡ್ ಮಾಡುತ್ತಾ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತಿದ್ದವು. ದಿನಬೆಳಗಾದರೆ ಇದಕ್ಕೇನು ಕಡಿಮೆ ಇಲ್ಲ. ಇತ್ತೀಚಿಗಂತು ಆ್ಯಂಡ್ರಾಯ್ಡ್ ಹವಾ ಎಲ್ಲರಲ್ಲೂ ಮೇಸೆಜ್‍ಗಳ ವ್ಯಾಲ್ಯೂವನ್ನು ಜಾಸ್ತಿಗೊಳಿಸಿ, ಅದಕ್ಕಿರುವ ಬೆಲೆಯ ಮೊತ್ತವನ್ನು ಕಡಿಮೆಗೊಳಿಸಿ ಬಿಟ್ಟಿವೆ ಬಿಡಿ!. ಮೊದಲು ನಾವೆಲ್ಲ ಸಿಮ್‍ನ ಪರ್ಸ್‍ನಲ್ ಆಕೌಂಟ್‍ನಿಂದ ಪ್ರತಿ ಮೇಸೆಜ್‍ಗೆ ಇಂತಿಷ್ಟು ಎಂಬಂತೆ ಹಣವನ್ನು ತೆಯ್ದು ಸಂದೇಶ ಕಳುಹಿಸುತ್ತಿದ್ದೇವು ಆಗ ಒಂದೊಂದು ಸಂದೇಶಕ್ಕೂ ಬೆಲೆ ಅಗಾಧ ಎಂಬಂತ್ತಿತ್ತು. ಆದರೀಗ ಎಲ್ಲವೂ ಇಂಟರ್‍ನೆಟ್ ಜಾಲದೊಳಗೆ ಫ್ರೀ ಎಂಬ ಪಾಶಕ್ಕೆ ಸಿಲುಕಿ ಅವುಗಳ ಮಹತ್ವವೇ ಅಡಗಿ ಹೋಗಿದೆ. ಒಮ್ಮೊಮ್ಮೆ ಈ ಮೆಸೇಜ್‍ಗಳು ಕಿರಿ ಕಿರಿ ಎನಿಸಿದರೂ ಎಲ್ಲೋ ಒಂದು ಕಡೆ ಕ್ಷಣ ಮಾತ್ರದಲ್ಲಿ ತಿಳಿಯದ ಹಾಗೂ ಅಚ್ಚರಿಯ ಕೆಲವೊಂದಿಷ್ಟು ಸುದ್ದಿ, ಪೋಟೋ ಇತ್ಯಾದಿಗಳನ್ನು ಕುಳಿತಲ್ಲೇ ವೇಗದಿ ಪಡೆಯಲು ಸಹಕಾರಿಯಾಗುತ್ತವೆ. ಆ ದಿನ ಬಂದಿರುವ ಅಷ್ಟು ಮೆಸೇಜ್‍ಗಳ ಪೈಕಿ ‘ಹಾಯ್ ಗೆಳೆಯ ಗುಡ್ ಮಾರ್ನಿಂಗ್ ಈ ದಿನ ನೆನಪಿದ್ಯಾ ನಿಂಗೆ’ ಎಂದು ಕಳುಹಿಸಿದ್ದ ನನ್ನ 18 ವರ್ಷದ ಹಿಂದಿನ ಬಾಲ್ಯದ ಗೆಳೆಯನ ಸಂದೇಶ ನನ್ನನ್ನು ತೀರಾ ಆಕರ್ಷಿಸಿತ್ತು. ಅರೇ ಇದೇನಿದು ಈ ದಿನ ಏನಿದೆ ಸ್ಫೇಷಲ್ ಅಂದುಕೊಂಡು ಮೆದುಳಿಗೆ ರೀಕಾಲ್ ಕೊಟ್ಟರೂ ಉತ್ತರ ತೋಚದಾಯಿತು. ‘ಎನ್ ಸ್ಫೇಷಲ್ ಮಿತ್ರಾ, ಗೊತ್ತಾಗಿಲ್ಲ’ ಎಂದು ರಿಪ್ಲೈ ನೀಡಿದೆ. ‘ಹೇ ಇವತ್ತು ಜೂನ್ ಒಂದು ಅಲ್ವೇನೋ, ನಾನು ನೀನು 18 ವರ್ಷಗಳ ಹಿಂದೆ ಇದೇ ದಿನ ನಮ್ಮ 6ನೇ ವಯಸ್ಸಿನಲ್ಲಿ ಒಂದನೇ ಕ್ಲಾಸ್‍ಗೆ ಹೋಗುವಾಗ ಪರಿಚಯವಾಗಿ ದೋಸ್ತಿಗಳಾಗಿದ್ದು, ಮೊದಲ ದಿನ 2 ಮೈಲಿ ದೂರವಿರುವ ಸಣ್ಣ ಶಾಲೆಗೆ ಹೋಗಿ ಒಂದು ಮೂಲೆಯಲ್ಲಿ ಯಾರದ್ದು ಪರಿಚಯವಿರದೇ ಇಬ್ಬರೇ ಎನ್ನುವಂತೆ ಮೇಸ್ಟ್ರ ಹಳೆಯ ಖುರ್ಚಿಯ ಕೆಳಗೆ ಹೋಗಿ ಕುಳಿತದ್ದು’ ಎಂದು ಹಳೆಯದನ್ನು ನೆನಪಿಸಿದ.
      ಹೌದಲ್ವಾ!!... ವಾವ್ಹ್... ಗೆಳೆಯ ಅದನ್ನೆಲ್ಲಾದ್ರೂ ಮರೆಯೋಕಾಗತ್ತಾ, ಆ ದಿನದ ಅನುಭವವೇ ಬೇರೆ. ನೀನು ದೂರದ ಗುಜರಾತ್‍ನಿಂದ  ಇಲ್ಲಿಗೆ ಬಂದು ನನ್ನ ಗೆಳೆಯನಾಗಿದ್ದು, ಅದಾದ ನಂತರವೂ ಅಷ್ಟೇ ಜೊತೆಗೆ ಶಾಲೆಗೆ ಹೋಗಿದ್ದು, ಒಂದೇ ಕೊಡೆಯಲ್ಲಿ ಗುಡುಗು ಮಿಂಚಿಗೆ ಹೆದರದೇ ಕಾಡು ಮೇಡು ದಾಟಿ ಅಕ್ಷರ ಕಲಿತದ್ದು ಅದೆಲ್ಲಾ ಎಣಿಸಿಕೊಂಡರೆ ಮೈಯಲ್ಲಿ ಎನೋ ಸಂಚಲನ ಆಗುತ್ತೆ ಮಗಾ ನೆನಪಿಸಿದ್ದಕ್ಕೆ ಥ್ಯಾಂಕ್ಸ್ ಕಣೋ ಎಂದು ಒಂದಿಷ್ಟು ಹಳೆಯ ಬಾಲ್ಯದ ನೆನಪುಗಳ ವಿಚಾರ ವಿನಿಮಯ ಮಾಡಿಕೊಂಡೆವು...
     ನಿಜಕ್ಕೂ ಅನ್ನಿಸುವುದು ನನಗೆ ಎಷ್ಟೊಳ್ಳೆ ದಿನಗಳು ಅವು. ನಾವೆಲ್ಲ ಕಾಲ್ನಡಿಗೆಯಲ್ಲಿ, ಉದ್ದನೆಯ ಹರಿದ ಕೊಡೆಯನ್ನು ಹಿಡಿದು, ಹವಾಯಿ ಚಪ್ಪಲಿಯನ್ನು ತೊಟ್ಟು ಒಮ್ಮೊಮ್ಮೆ ಅದು ಹರಿದರೆ ಬರಿಗಾಲಲ್ಲಿ ನಡೆದುಕೊಂಡು, ಮಳೆಗಾಲದಲ್ಲಿ ಮಳೆ ನೀರು ಹರಿಯುತ್ತ್ತಿದ್ದಾಗ ಕಾಗದದ ದೋಣಿ ಮಾಡಿ ಅದು ಹೋಗುವುದನ್ನೆ ಹಿಂಬಾಲಿಸಿಕೊಂಡು ಚಲಿಸುತ್ತಿದ್ದದ್ದು, ಕಾಡು ಹಣ್ಣುಗಳು ಜೊತೆಗೆ ಪೇರಲ, ನೇರಳೆ, ಮಾವು, ಗೇರು, ಬುಗುರಿಹಣ್ಣು ಇತ್ಯಾದಿಗಳನ್ನು ಕಿಸೆಯಲ್ಲಿ ತುಂಬಿಕೊಂಡು,ಹಣ್ಣು ಸಿಗದವನಿಗೆ ಸಾಲಕೊಟ್ಟು ಮರುದಿನ ಎರಡು ಹಣ್ಣು ಕೊಡು ಎನ್ನುವಂತೆ ಜಗಳ ಮಾಡುತ್ತಾ ಶಾಲೆಯ ದಾರಿಯನ್ನು ಸವೆಸುತ್ತಿದ್ದದ್ದು ಒಂಥರ ಮಜವಾಗಿದ್ದವು. ಇಂದಿನ ಕಾಲದಲ್ಲೂ ಮಕ್ಕಳು ಶಾಲೆಗೆ ಹೋಗುತ್ತಾರೆ ಆದರೆ ಶಾಲೆಯ ಜೊತೆಗೆ ಬದುಕು ಬಿನ್ನಾಣದ ಪರಪಂಚ ನೋಡಿದರೆ, ಇವತ್ತಿನ ಮಕ್ಕಳಿಗೆ ಸ್ಕೂಲ್ ಬಸ್ ಎಂಬ ವಾಹನದೊಳಗೆ ಅವರ ಸಂಭ್ರಮ ಕೊನೆಗಾಣುತ್ತದೆ. ನಮಗೆ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯದ ಆಟವಿತ್ತು ಜೊತೆಗೆ ವ್ಯಾಯಾಮದ ಆಯಾಮಗಳಿದ್ದವು. ಆದರೆ ಇಂದು ಗಿಜಿ-ಗಿಜಿಯಾಗಿ ಮಕ್ಕಳು ಸರಿಯಾದ ಕ್ರೀಡಾಂಗಣದ ವ್ಯವಸ್ಥೆಯೆ ಇಲ್ಲದೆ ನಮ್ಮ ಅಂದಿನ ಆ ಮಜದ ಸ್ಫರ್ಶವೇ ಇರದೇ ಸೊರಗುತ್ತಿದ್ದಾರೆ. ಕೇವಲ ಲಕ್ಷ ಲಕ್ಷ ಡೊನೆಷನ್‍ಗೆ ಬಾಯಿಬಿಟ್ಟು ದುಡ್ಡುಮಾಡುವ ಶಿಕ್ಷಣ ಸಂಸ್ಥೆಗಳು ತನ್ನ ಬಾಹ್ಯ ಚಹರೆ ಹೊರಗಡೆ ತೋರಬಾರದೆಂದು ದೊಡ್ಡ ದೊಡ್ಡ ಕಂಪೌಂಡ್ ಏರಿಸಿ ಸ್ವಾತಂತ್ರ್ಯದ ಆಟಕ್ಕೆ ಬ್ರೇಕ್ ಹಾಕಿ, ಓದು-ಓದು-ಓದು ಎಂದು ಮಕ್ಕಳನ್ನು ಮಂಡೆ ಬಿಸಿಯಲ್ಲೇ ಬೇಯುವಂತೆ ಮಾಡುತ್ತಿರುವುದು ನಿಜಕ್ಕೂ ನೋವು ತರಿಸುತ್ತದೆ.
          ಅಂದು ಇಂದಿನ ಮಣಬಾರದಂತ  ಬ್ಯಾಗ್‍ಗಳು ಬೆನ್ನಲ್ಲಿರುತ್ತಿರಲಿಲ್ಲ. ಇವತ್ತಿನ ಮಕ್ಕಳ ಕುತ್ತಿಗೆಯಲ್ಲಿ ವಾಟರ್ ಕ್ಯಾನ್, ಕೈಯಲ್ಲಿ ಲಂಚ್ ಕ್ಯಾರಿಯರ್ ನೋಡಿದರೆ ಅವುಗಳು ಅಂದು ನಮಗೆ ಯಾವುದೆಂದೆ ಗೊತ್ತಿರಲಿಲ್ಲ. ಮಧ್ಯಾಹ್ನ ಮರದ ಕೆಳಗೆ ಊಟದ ಬುತ್ತಿಯನ್ನು ಹಂಚಿಕೊಂಡು ತಿನ್ನುತ್ತಿದ್ದದ್ದು, ಇರುವುದು ಒಂದೇ ಜೊತೆ ಅಂಗಿ ಚಡ್ಡಿಯಾದರೂ ಅದನ್ನೇ ಒಗೆದು ಒಣಗಿಸಿಕೊಂಡು ಹಾಕಿಕೊಳ್ಳುತ್ತಿದದ್ದು, ಅಣ್ಣ-ಅಕ್ಕ ಬಳಸಿದ ಪುಸ್ತಕವನ್ನೇ ನಾವು ಬಳಸುತ್ತಿದ್ದದ್ದು, ಹಳೇ ನೋಟ್ ಪುಸ್ತಕಗಳಲ್ಲಿ ಖಾಲಿ ಇರುವ ಪುಟಗಳನ್ನು ಮಾತ್ರ ಕಿತ್ತು ರಫ್ ಬುಕ್ ಮಾಡುತ್ತಿದ್ದದ್ದು ಎಲ್ಲವೂ ಇಂದು ಬ್ಲಾಕ್ ಆ್ಯಂಡ್ ವೈಟ್ ಚಿತ್ರವಷ್ಟೆ.
 ಇಂದಿನ ಜನರೇಷನ್ ಮಕ್ಕಳಿಗೆ ಈ ಎಲ್ಲಾ ವೈವಿಧ್ಯತೆಯ ಬಗ್ಗೆ ಎಷ್ಟು ಗೊತ್ತಿರಬಹುದು ಎಂದು ಚಿಂತಿಸಿದಾಗ, ಮೊದಲು ನನಗೆ ಕಾಡುವುದೇ ಓದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎನ್ನುವ ಭಯ. ಅಪ್ಪ ಅಮ್ಮಂದಿರು, ಕನ್ನಡ ಮಾತಾಡಲೂ ಬೇಡ, ಕನ್ನಡ ಮೀಡಿಯಂ ಸ್ಕೂಲ್ ಅಂತೂ ಬೇಡವೇ ಬೇಡ ಎಂಬಂತೆ ಎಷ್ಟೇ ಬಡತನದಲ್ಲಿ ಬೇಯುತ್ತಿದ್ದರೂ ಮಗುವನ್ನೂ ಇಂಗ್ಲೀಷ್ ಮೀಡಿಯಂ ಸ್ಕೂಲ್‍ಗೆ ಲಕ್ಷಾಂತರ ಹಣ ಖರ್ಚುಮಾಡಿ ಸೇರಿಸುತ್ತಿದ್ದಾರೆ. ಬೆಳಿಗ್ಗೆ ಎದ್ದರೆ ಶುರುವಾಯ್ತು ದಿನದ ವೈಖರಿ, ಮಗುವಿಗೆ ಖಡಕ್ ಐರನ್ ಶರ್ಟ್ ಹಾಕಿಸಿ, ತಲೆ ಬಾಚಿ, ಪೌಡರ್ ಬಳಿದು, ಅಂದ ಚಂದವಾಗಿಸಿ, ಸ್ಕೂಟಿಯಲ್ಲೋ, ವ್ಯಾನ್‍ನಲ್ಲೋ ಶಾಲೆಗೆ ಭರ-ಭರನೇ ಕರೆದುಕೊಂಡು ಹೋಗಿ ಕಂಪೌಂಡ್ ಒಳಗೆ ಕಾರಾಗೃಹದೊಳಗೆ ಬಿಟ್ಟಂತೆ ದೂಡಿ ಬರುತ್ತಾರೆ. ಇನ್ನೂ ಒಳಗೋದ ಮಕ್ಕಳ ಪಾಡಂತು ಅಯ್ಯೋ ಎಂದರೂ ಇಲ್ಲ, ಅಮ್ಮಾ ಎಂದರೂ ಇಲ್ಲ...
       
ಆಧುನಿಕ ಶಿಕ್ಷಣ ಪದ್ಧತಿಯಿಂದ ಸ್ಫರ್ಧೆಗಿಳಿದಿರುವ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ದುರಂತ ಎನ್ನಬಹುದು. ವಿಕಸನದ ಹಾದಿ ಹಿಡಿದಿರುವ ತಂದೆ ತಾಯಿಗಳು ಮಕ್ಕಳನ್ನು ಅದೇ ಹಾದಿಗೆ ಕಳುಹಿಸಲು ಇದ್ದಾಡುತ್ತಿದ್ದಾರೆ. ಬದಲಾವಣೆಯ ಸುಳಿಯಲ್ಲಿ  ಬಾಲ್ಯದ ಅದ್ಭುತತೆಯನ್ನು ಕಳೆದುಕೊಂಡು ಚಲನ ಶೀಲತೆಯನ್ನು ಕೇವಲ ಡಿಜಿಟಲ್ ಯುಗಕ್ಕೆ ಸೀಮಿತ ಮಾಡಿಕೊಳ್ಳುತ್ತಿದ್ದಾರೆ.  ಆಧುನೀಕತೆಗಳ ಶ್ರೀಮಂತಿಕೆಯಲ್ಲಿ ಕಳೆದು ಹೋಗುತ್ತಿರುವ ಬಾಲ್ಯದ ಶ್ರೀಮಂತಿಕೆ, ಶಿಕ್ಷಣ ಹಂತದಲ್ಲೇನೋ ಮಕ್ಕಳನ್ನು  ಪ್ರಭುದ್ಧವಾಗಿಸುತ್ತಿದೆ. ನಾವು ಗೆಳೆಯರು  ಮಾತನಾಡಲು ಕುಳಿತಾಗ  ಬಾಲ್ಯದ ನೆನಪುಗಳ, ಶಾಲಾದಿನಗಳ ಮಜವನ್ನು  ನೆನಪುಮಾಡಿಕೊಂಡು ಹಲ್ಕಿರಿದು ನಗು ನಗುತ್ತಾ ಧನ್ಯ ನಾನು ಎಂಬಂತೆ ಖುಷಿ ಪಡುತ್ತೇವೆ. ಅದನ್ನೆಣಿಸಿದರೆ ಆ ಮಟ್ಟಿಗೆ ನಮ್ಮ ಮಕ್ಕಳು ದುರದೃಷ್ಟವಂತರಾ..,? ಎನ್ನುವ ಪ್ರಶ್ನೆ ಮೂಡುತ್ತೆ. ಆದರೆ ಅದಕ್ಕೂ ಮಿಗಿಲಾದ ಕಂಪ್ಯೂಟರ್, ಇಂಟರ್‍ನೆಟ್, ಪ್ಲೂಯೆನ್ಸ್ ಶಿಕ್ಷಣ ಅವರಿಗೆ ಸಿಕ್ಕಿದೆ. ಊಹಿಸಲಾಗದ ವೈಜ್ಞಾನಿಕ ಆವಿಷ್ಕಾರಗಳು ಅವರ ಕೈಯಲ್ಲಿ ಹರಿದಾಡುತ್ತಿವೆ. ಅದು ಅವರ ಅದೃಷ್ಟವಿರಬಹುದು. ಆದರೂ ಹಿಂದೆ ನಾವನುಭವಿಸಿರುವ ರಜೆಯ-ಮಜ, ಶಾಲೆಯ ರೂಪು-ರೇಷೆ, ಆಟ-ಪಾಠಗಳು, ತೀರಾ ಭಾವನೆಯ ಗೊಂಚಲಿಗೆ ಹತ್ತಿರವಾದಾಗ ಈ ಮುದ್ದು-ಪೆದ್ದು ಅನಿಸಿಕೆ, ಭಾವಲಹರಿಯಲ್ಲಿ ಮೀಟಿ ಆನಂದ ಬಾಷ್ಫ ಹೊಮ್ಮಿಸುತ್ತವೆ. ಆಗ ಆನಿಸುತ್ತದೆ ನಾವೇ ಅದೃಷ್ಟವಂತರು. ಬದಲಾವಣೆಯ ಹಾದಿಯಲ್ಲೇನೋ ನಾವಿದ್ದೇವೆ ಆದರೆ ಬದಲಾಯಿಸುತ್ತಿರುವುದು ಹೆಚ್ಚಾಗಿ ಹಳೆಯ ಮಾದರಿಯ ವಿಶೇಷತೆಗಳನ್ನೇ ಹೊರತು ಹೊಸದಾಗಿ ಬಂದಿರುವ ಕಟ್ಟುಪಾಡುಗಳನ್ನಲ್ಲ... ಥಿಂಕ್ ಡಿಫರೆಂಟ್ಲೀ... ಮುಂದೆ ಅನಿಸಬಹುದು, ಇದೇ ಇರಬಹುದು ನಮ್ಮೆಲ್ಲರ ದುರದೃಷ್ಟ...





 

ಹೆಣ್ಣು -7


        ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಮಾಮೂಲಿ ಎನ್ನುವಂತೆ ನಡೆದು ಹೋಗುತ್ತಲೇ ಇದೆ. ಪ್ರಕರಣಗಳು ನಡೆದ ಬೆನ್ನಲ್ಲೇ ಒಂದಷ್ಟು ಹೋರಾಟ, ಪ್ರತಿಭಟನೆ ಕೊನೆಗೆ ಆರೋಪಿಯ ಸೆರೆ ಅಂತಿಮವಾಗಿ ಆತನಿಗೊಂದಿಷ್ಟು ವರ್ಷದ ಜೈಲು ಸಜೆ ಹೀಗೆ ಏನಿದೆ ಅದರಲ್ಲಿ ಎನ್ನುವಷ್ಟು ಸಾರಾಸಗಟಾಗಿ ಬೆತ್ತಲೆ ಜಗತ್ತು ಹೆಣ್ಣಿನ ಮಾನವನ್ನು ದಿನೇ ದಿನೇ ಬೆತ್ತಲಾಗಿಸುತ್ತಿದೆ. ಅಷ್ಟೇ ಅಲ್ಲದೇ ಸಮಾಜದಲ್ಲಿ ಹೆಣ್ಣಿನ ಶೋಷಣೆ, ಕೀಳರಿಮೆ ಇತ್ಯಾದಿಗಳು ನಡೆಯುತ್ತಲೇ ಇದೆ. ಯಾಕೆ ನಮ್ಮ ಸಮಾಜ ಹೀಗಾಗುತ್ತಿದೆ? ಕಾಮದ ಕ್ರೂರ ಕತ್ತಿಗೆ ಇಂದಿನ ಹೆಣ್ಮಕ್ಕಳು ಬಲಿಯಾಗುತ್ತಿದ್ದಾರೆ? ಇಂತಹ ಸನ್ನಿವೇಶಗಳು ಎದುರಾಗಲೂ ಹೆಣ್ಣಿನ ತಪ್ಪು ಇರಬಹುದಾ? ಕಣ್ಣೇದುರೆ ಅನಿಷ್ಟ ನಡೆದು ಹೋದರೂ ಜನ ಸುಮ್ಮನೆ ಕುಳಿತುಕೊಳ್ಳಲು ಕಾರಣವಾಗುವ ಅನ್ಯ ಷಡ್ಯಂತ್ರಗಳು ನಡೆಯುತ್ತಿವೆಯಾ? ಎನ್ನುವ ಒಂದಿಷ್ಟು ವಿಚಾರಗಳು ಪ್ರಶ್ನೆಗಳಾಗಿ ಮೂಡಿ ಬರುತ್ತವೆ.




ಹಕ್ಕಿ ಬಯಸುವುದು ಬೆಚ್ಚಗಿನ ಗೂಡಿನ ಆಸರೆ, ಮಗು ಬಯಸುವುದು ಅಮ್ಮನ ತೋಳಿನ ಆಸರೆ, ಹಾಗೆಯೇ ಹೆಣ್ಣು ಯಾವಾಗಲೂ ಬಯಸುವುದು ಗಂಡಿನ ಆಸರೆ, ಆದರೆ ಅದೇ ಗಂಡು ಇಂದು ಹೆಣ್ಣನ್ನು ಮೋಹಿಸಿ ತನ್ನ ಭೋಗಕ್ಕಾಗಿ ಉಪಯೋಗಿಸಿ, ಎಲ್ಲ ಸುಖ ಪಡೆದ ಮೇಲೆ ನಿಷ್ಕಾರಣವಾಗಿ ಅವಳ ಮೇಲೆ ವೈರುಧ್ಯ ಸಾಧಿಸಿ, ಅವಳಿಗೂ ನನಗೂ ಯಾವ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಂಡು ನೋವಿನ ಸರಪಳಿಯಲ್ಲೇ ತನ್ನ ಹಟವನ್ನೇ ಸಾಧಿಸುತ್ತಾನೆ. ಸದಾ ಹೆಣ್ಣಿನ ರೂಪ, ಅವಳ ದೇಹಕ್ಕೆ ಹಪಹಪಿಸುವ ಇಂದಿನ ಯುವ ಜನಾಂಗ ಕಾಮದ ಆಸೆಗೆ ಸೋತು, ರೇಪ್ ಎನ್ನುವ ರೌದ್ರವನ್ನು ಮೈಗೂಡಿಸಿಕೊಂಡು ತನ್ನ ಹುಟ್ಟಿಗೆ ಕಾರಣಳಾದ ಹೆಣ್ಣಿನ ಕುಲಕ್ಕೆ ಮಸಿ ಬಡಿದು, ಸಾಯಿಸುವ ಕ್ಷಣದವರೆಗೆ ಮೆರೆಯುತ್ತಿದೆ. ಜಗತ್ತು ಅಪ್ಡೇಟ್ ಆಗಿದೆ ನಾವು ಬದಲಾವಣೆಯ ಗಾಳಿಗೆ ಸಿಲುಕಿದ್ದೇವೆ ಅದೇ ಇಂದು ಇಷ್ಟೆಲ್ಲವುದಕ್ಕೆ ಕಾರಣ ಅನಿಸಿದರೆ ತಪ್ಪೇನು ಇಲ್ಲ. ಇಂದಿನ ಮೊಬೈಲ್ ಒಂದರಿಂದಲೇ ಹೆಣ್ಣು ಗಂಡಿನ ಬಣ್ಣದ ಮಾತಿಗೆ ಮರುಳಾಗಿ ಕಾಮಧಾಟಕ್ಕೆ ಸಿಲುಕಿ ಬೆತ್ತಲಾಗಿ ಬಳಲುತ್ತಿದ್ದಾಳೆ. ಕೆಲವೊಂದು ಪ್ರಕರಣಗಳಲ್ಲಿ ಹೆಣ್ಣಿನ ತಪ್ಪು ಇದೆ ಎನಿಸುತ್ತದೆ. ಯಾಕೆಂದರೆ ಅವಶ್ಯಕತೆಗೆ ಬಂದ ಒಂದಿಷ್ಟು ವಸ್ತುಗಳು ಅವಶ್ಯವಿಲ್ಲದೇ ಉಪಯೋಗಿಸಿ ಇಂದಿನ ಯುವ ಜನಾಂಗ ದಾರಿ ತಪ್ಪುತ್ತಿದೆ.
ಇವೆಲ್ಲವನ್ನು ಬಿಟ್ಟು ಮುಂದೆ ಹೋದರೆ ಹೆಣ್ಣಿಗೆ ಕಿರುಕುಳಗಳೂ ಸಹಜ ಎನಿಸುತ್ತದೆ. ವರ್ಗಗಳ ಪ್ರಾಬಲ್ಯ ಎಷ್ಟೋ ಬಾರಿ ಇನ್ನೊಬ್ಬರಿಗೆ ನೋವಾಗುತ್ತದೆ ಎಂದು ತಿಳಿದರೂ ಮೆರೆಯುತ್ತಲೇ ಇದೆ. ಒಂದು ಹುಡುಗಿ ಒಂಟಿಯಾಗಿ ನಡೆದುಕೊಂಡು ಹೋದರೆ ಆಕೆ ನೋಡುವವರಿಗೆ ಆಟಿಕೆಯ ಗೊಂಬೆಯಂತೆ ಕಾಣುತ್ತಾಳೆ. ಸಮಾಜ ಆಡುವ ಮಾತಿಗೆ ಅವಳ ಮೈ ಮನಸು ಎರಡು ಹದಗೆಡುವಂತಾಗುತ್ತಿದೆ. ರಸ್ತೆಯಲ್ಲಿ ಅಣ್ಣ ತಂಗಿಯರೇ ಇಂದು ಜೊತೆ ಹೋದರೂ ಎನೆಲ್ಲಾ ಮಾತುಗಳು ಕೇಳುವ ಪರಿಸ್ಥಿತಿಗಳು ಬಂದಿವೆ. ಇನ್ನು ಅವಳೊಬ್ಬಳೆ ಅನುಭವಿಸುವ ನೋವುಗಳನ್ನು ಪಟ್ಟಿಗೈದರೆ ಅನುಭವವಾಗುತ್ತದೋ ಇಲ್ಲವೋ ಆದರೆ ಅನುಭವಿಸಿದರೆ ಚೆನ್ನಾಗಿ ಅರಿವಾಗಬಹುದು.
ಹೆಣ್ಣು ಸಮಾಜದ ಕಣ್ಣು ಅವಳೇ ಇಂದು ಸಮಾಜದ ಕಠೋರ ಕಿರುಕುಳ ತಾಳಲಾರದೆ ಮಣ್ಣಾಗುತ್ತಿದ್ದಾಳೆ. ಅವಳು ವಾತ್ಸಲ್ಯಮಯಿ ಎಂಥಾ ಘೋರ ನೋವನ್ನಾದರೂ ತಡೆದುಕೊಳ್ಳುವ ಕ್ಷಮಯಾಧರಿತ್ರಿ ಹಾಗಂತ ಕೆಟ್ಟದ್ದಕ್ಕೆ  ಮಾತ್ರಾ ಬಳಸುತ್ತಿದ್ದರೆ ಖಂಡಿತ ಸಮಾಜ ಕೆಡುವುದಲ್ಲದೇ ಉದ್ದಾರವಂತೂ ಆಗಲ್ಲ. ಆದ್ದರಿಂದ ಇನ್ನಾದರೂ ಎಲ್ಲರೂ ಅವಳ ಉಪಸ್ಥಿತಿಯನ್ನು ಅರಿಯೋಣ ಜೊತೆಗೆ ಗೌರವವನ್ನು ನೀಡೋಣ. ಹೆಣ್ಣೇ ಈ ಮಣ್ಣಿಗೆ ಭೂಷಣವೆನ್ನುವುದನ್ನು ಅರಿಯೋಣ. ಇಂದಿನಿಂದಲೇ ನಾವು ಬದಲಾಗೋಣ, ನಮ್ಮ ತನವನ್ನು ಬದಲಾಯಿಸಿಕೊಂಡು ಸಮಾಜವನ್ನು ಬದಲಾಯಿಸೋಣ.

Friday, 19 June 2015

ನೆನಪಿನಂಗಳದಿಂದ...


“ಊರು ಉಡಿಯೊಳಿಟ್ಟುಕೊಂಡುನಿಂತ ತೆಂಗು ಅಡಿಕೆಯು
ಬೆಟ್ಟಗಳಿಗೆ ಹಗಲಿರುಳು ನೀಲ ನೀಲ ನಿದ್ದೆಯು
ಊರ ಸುತ್ತ ತೆನೆಗಳಿಂದ ತೊನೆವ ಹಸಿರು ಗದ್ದೆಯು
ಮುಗಿಲು ಹರಿದ ಹಾಗೆ ಸುರಿದು ಬಿದ್ದ ನೀರ ಮಳೆಯು
ಸಾಲು ಮರದ ನೆರಳಿನಲ್ಲಿ ಹಾವಿನಂಥಾ ಹಾದಿಯು”
ಇದೇನೂ ಕವಿತೆಯಾ!? ಆಥವಾ ಕಥೆಯಾ!? ಎಂದು ಕೇಳಬೇಡಿ! ಯಾಕೆಂದರೆ ಮೊನ್ನೆ ಮೊನ್ನೆ ಊರಿಗೆ ಹೋಗುವಾಗ ಬಸ್ಸಿನಲ್ಲಿ ಕುಳಿತು ಅನುಭವಿಸಿದ ಪುಳಕವನ್ನು ಕವಿತೆಯ ಮೂಲಕ ಹೇಳಲಾ? ಅಥವಾ ಕತೆಯ ಮೂಲಕ ಹೇಳಲಾ? ಎಂದು ತಿಳಿಯಲಾಗದೆ ಧ್ವಂಧ್ವದಲ್ಲೇ ಭಾವನೆಗಳನ್ನು ಬಚ್ಚಿಟ್ಟು ಕುಳಿತುಕೊಂಡಿರುವೆ. ಮೇಲಿನ ಸಾಲುಗಳನ್ನು ಓದಿ ಕಣ್ಮುಚ್ಚಿ ಮನನ ಮಾಡಿದರೆ ನಿಮಗೂ ನಿಮ್ಮ ಬಾಲ್ಯ, ಆಟ, ಪಾಠ, ಹಳೆಯ ನೆನಪುಗಳು ಮತ್ತೆ ಮನದಲ್ಲಿ ಮೂಡಬಹುದು.
ಒಂದೈದು ದಿನಗಳ ರಜೆ ಪಡೆದು ಊರಿಗೆ ಬಸ್ ಹತ್ತಿದ ನನಗೆ ರಾತ್ರಿಯ ತಂಪಾದ ಗಾಳಿಯಲ್ಲಿ ಒಳ್ಳೆಯ ನಿದ್ದೆಬಂದಿತ್ತು. ಬಸ್ ಶಿರಾಡಿಘಾಟ್  ದಾಟಿ ಮುಂದೆ ಸಾಗಿ ಮಂಗಳೂರನ್ನು ಬಳಸಿ ನಮ್ಮೂರ ಕಡೆ ಸಾಗುವ ಬರದಲ್ಲಿ ಕಿಟಕಿಯಿಂದ ನುಗ್ಗಿದ ಮಳೆಯ ಹನಿಯೊಂದು ಮುಖದ ಮೇಲೆ ಬಿದ್ದು ನಿದ್ರಾದೇವಿಯನ್ನು ಓಡಿಸಿ ಮುಂಜಾನೆÉಯ ಗುಡ್ ಮಾರ್ನಿಂಗ್ ಎಂಬಂತೆ ನನ್ನ ಕಣ್ಣನ್ನು ತೆರೆಸಿತ್ತು. ಕಣ್ಬಿಟ್ಟು ನೋಡಿದರೆ ವಾವ್ಹ್ ಅದೇನೂ ತಂಪು, ಮೆಲ್ಲನೆ ಮಳೆಯ ಜೊತೆಗೆ ತಂಪಾದ ಗಾಳಿ, ನಡುವೆ ಊರು ಕೇರಿಯ ತೆಂಗು ಅಡಿಕೆ ಮರಗಳ ಸಾಲು, ಬೆಟ್ಟಗುಡ್ಡಗಳ ಝರಿ, ಹಸಿರು ಗದ್ದೆ, ಹಾವಿನಂತೆ ಸಾಗುತ್ತಿರುವ ಏರುಪೇರಿನ ಹಾದಿ, ಇವುಗಳ ಮಧ್ಯೆ ನಾನು!. ನಿಜವಾಗಲೂ ಪ್ರಕೃತಿ ಮಾತೆಯ ಮಡಿಲಲ್ಲಿ ನಾವು ಎಷ್ಟು ಎಂಜಾಯ್ ಮಾಡಬಹುದು ಎಂದು ಅನಿಸಿದ್ದೆ ಆ ಘಳಿಗೆ. ಅದಾಗಲೇ ರಾತ್ರಿಯಿಂದ ಎಡೆಬಿಡದೆ ಗಾನದ ಹೊಳೆಯನ್ನೆ ಹರಿಸುತ್ತಿದ್ದ ಹೆಡ್ ಫೋನ್‍ನ್ನು ಕಳಚಿ, ಸಿಕ್ಕಿದ್ದೆ ಸಮಯ ಎಂಬಂತೆ ಬಾಲ್ಯ ಜೀವನದಲ್ಲಿ ಆಡಿದ ಆಟ, ನೋವು, ನಲಿವು ಇತ್ಯಾದಿಗಳನ್ನು ನೆನೆಯುತ್ತಾ ಅಂದಿನ ಕಾಲಕ್ಕೆ ಕಣ್ಮುಚ್ಚಿಕೊಂಡು ಮತ್ತೆ ಜಾರಿದೆ. ಆಗ ಮೂಡಿದ ವಿಚಾರ ಸರಣಿಯೇ  ಈ ನೆನಪಿನಂಗಳ...
ಬೆಚ್ಚನೆಯ ಚಳಿಯ ಮಧ್ಯೆ ಅಮ್ಮ ‘ಏಳು ಮಗಾ ಟೈಮ್ ಏಳಾಯಿತು’ ಎಂದು ಪದೆ ಪದೇ ಕೂಗಿ ಎಬ್ಬಿಸಿದರು  ಇನೈದು ನಿಮಿಷ ಮಲಗಿರ್ತೀನಿ ಇರಮ್ಮಾ ಎಂದು ಪೂಸಿ ಹೊಡೆದು ಅರ್ಧಗಂಟೆಯಾದರೂ ಎಳದೆ  ಮತ್ತೊಂದು ಬೆಡ್ ಶೀಟ್ ಹೊದ್ದು ಮಲಗಿ ಅಪ್ಪನ ಚೀರುವಿಕೆಗೆ ಭಯಪಟ್ಟು ಎದ್ದು ಹಲ್ಲುಜ್ಜಿ ತಿಂಡಿ ತಿನ್ನುವುದು ಮತ್ತೊಂಧರ್ಧ ಗಂಟೆಯಾಗುತ್ತಿತ್ತು.
ಸಮಯ 8 ಆಯಿತೆಂದರೆ ಶಾಲೆಗೆ ಓಡುವ ತರಾತುರಿ, ಬುತ್ತಿ ಕೈಯಲ್ಲಿಟ್ಟು ಬಗಲಿಗೆ ಬೀಣಿಚೀಲ ಸಿಕ್ಕಿಸಿಕೊಂಡು, ಮರೆತು ಹೋದ ಕೊಡೆಯನ್ನು ಮತ್ತೆ ನೆನಪಿಸಿಕೊಂಡು, ಶಾಲೆಗೆ ಮಳೆಯ ನೀರಿನಲ್ಲೇ ಆಡುತ್ತಾ ಮೈ ಒದ್ದೆ ಮಾಡಿಕೊಂಡು ಓಡಿ ಹೋಗಿ ಟೀಚರ್ಗೆ ಮೊದಲ ಬೆಲ್ ಕ್ಕಿಂತ ಮೊದಲೇ ಕೋಪಿ ಪುಸ್ತಕ, ಮಗ್ಗಿ ಬರೆದಿದ್ದನ್ನು ತೋರಿಸಿ ಅಬ್ಬಾ! ನಾನು ಪ್ರಾಮಾಣಿಕ ಎಂಬಂತೆ ಎದೆಯುಬ್ಬಿಸಿಕೊಂಡು ಕ್ಲಾಸ್ ಮುಗಿಸಿ, ಮನೆಯ ಬೆಲ್ ಹೊಡೆಯುವುದನ್ನೇ ಕಾದು, ಪಟ-ಪಟನೇ ಮನೆಗೆ ಬಂದು ಚೀಲ ಬಿಸಾಕಿ, ಪಕ್ಕದ ಮನೆಯ ಹುಡುಗರ ಜೊತೆ ಶಾಲೆಯಿಂದ ಬರುವಾಗಲೇ ಪಾರ್ಟಿಹಾಕಿಕೊಂಡು ಇಲ್ಲಿ ಸೇರೋಣ ಎಂದು ನಿರ್ಧರಿಸಿರುವ ಆಟವನ್ನು ಆಡಲು ರೆಡಿ ಎಂಬಂತೆ ತಿಂಡಿ ತಿಂದು ಮನೆಯಿಂದ ಹೊರಬೀಳುತ್ತಿದ್ದೆವು.
ಆಗೆಲ್ಲಾ ಸಮಯ ಸಿಕ್ಕಾಗ ಈಗಿನ ರೀತಿ ಟಿ.ವಿ, ಮೊಬೈಲ್ ಅಂತ ಸಮಯ ಹಾಳು ಮಾಡುವ ಪರಿ ಇರಲಿಲ್ಲ. ಬೆಳಿಗ್ಗೆ ಎದ್ದಾಗಲೇ ನಮ್ಮ ಕಿವಿಗೆ ಬೀಳುವುದೆಂದರೆ ಅದು ರೇಡಿಯೋ ಧ್ವನಿಗಳು ಮಾತ್ರಾ. ಬೆಳಿಗ್ಗೆಯ ಪ್ರಾರ್ಥನೆ, ಚಿಂತನ, ವಾರ್ತೆ, ಮಧ್ಯಾಹನದ ಭಾವಗೀತೆ. ಚಿತ್ತಗೀತೆಗಳು, ಸಂಜೆಯ ಕೃಷಿರಂಗ, ಯುವವಾಣಿ, ನಾಟಕ, ಇತ್ಯಾದಿಗಳ ರೇಡಿಯೋ ಕಾರ್ಯಕೃಮ ಬಿಟ್ಟರೆ ರಾತ್ರಿ ಪಾಳಯದಲ್ಲಿ ಒಬ್ಬೊಬ್ಬರ ಮನೆಯಲ್ಲಿ ನಡೆಯುವ ಯಕ್ಷಗಾನ ಬಯಲಾಟಗಳಷ್ಠೆ ನಮ್ಮ ಮನರಂಜನೆ. ಈ ಮನರಂಜನೆಗಳನ್ನು ಹೊರತುಪಡಿಸಿದರೆ ನಮ್ಮ ಪ್ರಪಂಚ ನಾವು ಕಂಡಿದ್ದು ನಮ್ಮ ಆಟಗಳಲ್ಲಿ.
ಎಷ್ಟೋ ಬಾರಿ ನಮ್ಮ ಆಟಗಳು ರಾತ್ರಿ ಕನಸಿನಲ್ಲೂ ದಾಳಿ ಇಟ್ಟು ಸೋಲಿಸುವ ಕ್ಷಣದಲ್ಲೇ ನನ್ನನ್ನು ಗೆಲ್ಲಿಸಿ ಕೂಗುವಂತೆ ಮಾಡಿದ್ದು ಉಂಟು. ನಮ್ಮೂರಿನ ಗುಡ್ಡದಲ್ಲಿ ಒಂದು ದೊಡ್ಡ ಮರವಿತ್ತು. ಅದರ ಹೆಸರೆ ‘ಹಾಸಿಗೆ ಗೇರು ಮರ’. ಮರದ ಬುಡಕ್ಕಿಂತ ಅದರ ಕೊಂಬೆಗಳೆ ಬಲು ಅಗಲ. ಇಬ್ಬರೂ ಸರಾಸರಿ ವ್ಯಕ್ತಿಗಳು ನಡೆಯಬಹುದಾದ ಆ ಕೊಂಬೆಗಳ ಮೇಲೆಯೆ ನಮ್ಮ ಆಟ ಸಾಗುತ್ತಿತ್ತು ಅದುವೇ ‘ಮರಕೋತಿ ಆಟ’. ಒಟ್ಟಿಗೆ ಸೇರುವ ಒಂದಿಷ್ಟು ಮಂದಿಯಲ್ಲಿ ಒಬ್ಬನನ್ನು ಸೆಲೆಕ್ಟ್ ಮಾಡಿ ಉಳಿದವರನ್ನು ಆತ ಮೇಲೆ-ಕೆಳಗೆ  ಅಟ್ಟಾಡಿಸಿ ಓಡಿಸಿಕೊಂಡು, ಕೈಯಲ್ಲಿ ಮುಟ್ಟಿ ಔಟ್ ಮಾಡಿ ಆಡುವ ಆಟವೇ ಈ ಮರಕೋತಿಯಾಟ. ಇದು ಥೇಟ್ ಕೋತಿಗಳ ಆಟದಂತೆ ಇರುವುದರಿಂದ ಮರಕೋತಿಯಾಟ ಎಂದೆ ನಮಗೆಲ್ಲಾ ಚಿರಪರಿಚಿತ. ಮರಗಳನ್ನು ಹತ್ತಿಹಾರುವ ಸಂಧರ್ಭ ಆಯತಪ್ಪಿ ಕೆಳಗೆ ಬಿದ್ದರೆ ಕೈಕಾಲು ಮುರಿಯುವುದು ಗ್ಯಾರಂಟಿ ಇದ್ದರೂ ಅದಕ್ಕೆಲ್ಲಾ ಭಯಪಡದೆ ಬೆಳೆದವರು ನಾವು. ಹಾಗೆ ಸಣ್ಣ ಪುಟ್ಟ ಏಟಿಗೆ ಹೆದರುವ ಜಾಯಮಾನವೂ ನಮ್ಮದಲ್ಲ ಬಿದ್ದು ಕೈ ಮುರಿದರೂ ಒಂದು ತಿಂಗಳು ಅಷ್ಟೆ ಕಣೋ ಸರಿಯಾಗುತ್ತೆ ಎಂದು ಕೈಗೊಂದು ಸಿಮೆಂಟ್ ಬ್ಯಾಂಡೆಜ್ ಏರಿಸಿಕೊಂಡು ನಗುತ್ತಲೇ ಇದ್ದೆವು ಆದರೆ ಇಂದಿನ ಮಕ್ಕಳು!.. ಮನೆಯ ಮೆಟ್ಟಿಲಿಂದ ಕೆಳಗೆ ಬಿದ್ದರೂ ಕೈಯೋ ಕಾಲೋ ಡ್ಯಾಮೇಜ್ ಆಗೋದು ಗ್ಯಾರಂಟಿ. ಇದು ಇಂದಿನ ಕಾಲದ ತಪ್ಪೋ, ಹೆತ್ತವರ ಕರುಣೆ ಮಮತೆಯ ತಪ್ಪೋ, ನಮಗ್ಯಾಕೆ!? ಹೇಳಿದರೆ ಕೆರಳುವ ವಿಚಾರ.
        ನಾನು ಓದಿದ್ದು ಸರಕಾರಿ ಶಾಲೆ, ಹಾಗಾಗಿ ಆಗೆಲ್ಲಾ ಆಂಗ್ಲ ಭಾಷೆ ಗೊತ್ತಿರಲಿಲ್ಲ. ‘ಎಳೆ ವಯಸ್ಸು ಸ್ವಚ್ಚ ಮನಸ್ಸು’ ಎಂಬಂತೆ ಆಗಿನ ಮುಗ್ಧತೆಯ ಆಟಗಳು ಇಂದಿನ ಬೆಟ್ಟಿಂಗ್‍ನ ಅಸಂತೋಷದ ಕ್ಷಣದಂತೆ ನೋವನ್ನು ತರುತ್ತಿರಲಿಲ್ಲ. ಬೇಸಿಗೆಯ ರಜೆಯಲ್ಲಿ ಮಾವಿನ ಕಾಯಿಯನ್ನು ಕೊಯ್ದು ಉಪ್ಪು ಊಡಿಕೊಂಡು ಸವಿಯುತ್ತಿದ್ದ ಕಾಲ ಇಂದಿಗೂ ಬಾಯಲ್ಲಿ ನೀರನ್ನು ಸುರಿಸುತ್ತವೆ. ‘ಕಳೆದು ಹೋದ ನೆನಪುಗಳು ಕಳೆದುಕೊಂಡ ಆಭರಣಗಳಂತೆ’ ಅದರ ಮೇಲಿನ ನೋವು.ನೆನಪು ಕಾಡುತ್ತಲೇ ಇರುತ್ತವೆ ಹೊರತು ಎಂದಿಗೂ ಮನಸ್ಸಿನಿಂದ ಮರೆಯಾಗುವುದಿಲ್ಲ. ಅಂದು ಆಡಿದ್ದ ಕುಂಟೆ ಬಿಲ್ಲೆ, ಲಗೋರಿ, ಗೋಲಿ, ಗಿಲ್ಲಿ ದಾಂಡು, ಜೋಕಾಲಿ, ಜೂಟಾಟ, ಬುಗುರಿ, ಗಿರಿಗಿಟ್ಲೆ, ಈಜಾಟ, ಅಳಿಗುಳಿಮನೆ, ಚೌಕಾಬಾರ, ಅವರ್ ಬಿಟ್ ಇವರ್ ಬಿಟ್ ಅವರ್ಯಾರು ಸೇರಿದಂತೆ ಅನೇಕ ಆಟಗಳು ಇಂದು ಮರೆಯಾಗಿ ಏನು?, ಹೇಗೆ? ಎಂಬುದು ಅರಿಯದೆ ಪುಸ್ತಕದಲ್ಲೋ, ಇಂಟರ್‍ನೆಟ್‍ನಲ್ಲೋ ಹುಡುಕಿ ಓದುವ ಕಾಲ ವರ್ತಮಾನದಲ್ಲಿದೆ. ಅಂದಿನ ‘ಕಣ್ಣಾಮುಚ್ಚೆ ಕಾಡೇ ಗೂಡೆ ಉದ್ದಿನ ಮೂಟೆ ಉರುಳೇಹೋಯ್ತು, ನನ್ನಯ ಹಕ್ಕಿ ಬಿಟ್ಟೆ ಬಿಟ್ಟೆ  ನಿಮ್ಮಯ ಹಕ್ಕಿ ಬಚ್ಚಿಕೊಳ್ಳಿ’ ಎಂದಿರುವ ಆಟದ ಹಾಡು ಇಂದು ನೆರೆದು ದೊಡ್ಡವರಾದ ಅದೆಷ್ಟೋ ಪ್ಯಾಟೆಮಂದಿಯ ಹುಡುಗರಿಗೆ ತಿಳಿಯದಿರುವುದು ಬೇಸರ ತರಿಸುತ್ತೆ. ಹಳ್ಳಿಯ ಸೊಗಡಿನಲ್ಲಿ ಬೆಳೆದ ಪ್ರತಿಯೊಬ್ಬರಿಗೂ ಇವುಗಳ ಇಂಗಿತ, ಇಂಪು  ಸಿಕ್ಕೆ ಸಿಕ್ಕಿರುತ್ತೆ. ಆದರೆ ಇಂದು ಹಳ್ಳಿಗಳಲ್ಲೂ ಆಧುನಿಕತೆಯ ಸೋಗಡಿನ ಗಾಳಿ ಬೀಸಿ ಅಲ್ಲಿಯೂ ಕಾಣದಾಗಿರುವುದು ಯಾರ ದುರಾದೃಷ್ಟವೋ ತಿಳಿಯುತ್ತಿಲ್ಲ.
        ನನಗೆ ಈಗಲೂ ನೆನಪಿದೆ ಅಂದು ಎಮ್ಮೆಯನ್ನು ಸ್ನಾನಕ್ಕೆಂದು ನೀರಿಗೆ ಕರೆದುಕೊಂಡು ಹೋಗುವಾಗ ಅದರ ಬಾಲ ಹಿಡಿದುಕೊಂಡು ಹೋಗಿ ಅದರ ಜೊತೆಯೇ ನೀರಿಗೆ ಬೀಳುವ ಆಟ, ಮೊದಲ ಮಳೆಯ ಸಂಧರ್ಭ ಹರಿವ ನೀರಿಗೆ ಕಾಗದದ ದೋಣಿಯನ್ನು ಬಿಟ್ಟು ಅದರಲ್ಲೇ ಖುಷಿ ಪಡುತ್ತಿದ್ದದ್ದು, ಸೈಕಲ್ ಚಕ್ರವನ್ನು ಬಳಸಿ ಸಣ್ಣ ಕೋಲಿಂದ ಓಡಿಸುತ್ತಿದ್ದು, ಹೀಗೆ ಅನೇಕ ವಿಧದಲ್ಲೇ ಅದೆಷ್ಟು ಸಂತೋಷ ಪಡುತಿದ್ವಿ ಎಂದರೆ ಹೇಳಲಾಗದು ಎನಿಸುತ್ತೆ. ಹಾಗೆಯೇ ಎಂದಿಗೂ ಎಂದೆಂದಿಗೂ ಇನ್ನೂ ಅವುಗಳನ್ನು ಸವಿಯುವುದು ಕಷ್ಟ ಅನ್ನಿಸುತ್ತದೆ.
       ಬಾಲ್ಯದ ಆಟ-ಹಾಡು-ಹಸೆ ಇಂದು ಕಾಲದ ತೊರೆಯಲ್ಲಿ ಕೊಚ್ಚಿ ಹೋಗುತ್ತಿದ್ದು, ತಡೆಯಲು ಯತ್ನಿಸುವ ನೆನಪಿನ ಹಾಯಿದೋಣಿಗಳು ಇಲ್ಲದೇ ಎಲ್ಲಾ ಆಟಗಳು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿವೆ. ಅಂದಿನ ಆಟಗಳು ಮನಸ್ಸಿಗೆ ಉಲ್ಲಾಸದ ಜೊತೆ ದೇಹಕ್ಕೆ ಒಂದಿಷ್ಟು ವ್ಯಾಯಾಮವನ್ನು ನೀಡಿ ಆರೋಗ್ಯಕರವಾಗಿರಿಸುತ್ತಿದ್ದವು ಆದರೆ ಇಂದು ಅಂತಹ ಆಟಗಳೇ ಆಡದೇ ಅನಾರೋಗ್ಯಕರ ಕೆಲಸವನ್ನು ಮಾಡುತ್ತಿದ್ದೇವೆ ಎನ್ನಲೂ ವಿಷಾಧಕರವಾಗುತ್ತದೆ. ಹಳೆಯ ನೆನಪುಗಳು ಹೊಸ ಜೀವನವನ್ನು ಕಟ್ಟುತ್ತವಂತೆ ಹಾಗೆ ಅವುಗಳು ನಮ್ಮೆಲ್ಲರ ಬದುಕನ್ನು ವಿಧವಿಧವಾಗಿ ಕಲಿಸಿ ಬೆಳೆಸುತ್ತವೆ ಎನ್ನುವುದರಲ್ಲೂ ಯಾವುದೇ ಅಪಾರ್ಥವಿಲ್ಲ. ಇನ್ನಾದರೂ ಹಳೆಯ ಆಟವನ್ನು ಗುರುತಿಸಿ ಬೆಂಬಲಿಸೋಣ, ಪೋಷಿಸೋಣ ಅಲ್ವಾ!? ವಾಟ್ ಯೂ ಸೇ...