Saturday, 14 February 2015

ಇನ್ನೂ ಅನಿಸುತಿದೆ...

       ಮುಸ್ಸಂಜೆಯ ಮೌನ ಲಹರಿಯಲ್ಲಿ ಮರೆಯಾದ ಗೆಳತಿಯ ನೆನೆಯುತ್ತ ಕಡಲ ತೀರದ ಸಂದಿಯಲ್ಲಿ ಕುಳಿತ ನನಗೆ ಅವಳ ನೆನಪು ನೀರು ಬಂಡೆಗಪ್ಪಳಿಸುವಂತೆ ಪದೆ ಪದೇ ಮನದಲ್ಲಿ ಮೂಡುತ್ತಿತ್ತು...ಇಂದಿನ ಫೇಸ್ ಬುಕ್, ಪಾಟ್ಸಾಪ್‍ನ ಟ್ರೆಂಡ್ ಯುಗದಲ್ಲೂ ಅದ್ಯಾವುದರ ಬಗ್ಗೆಯೂ ಜಾಸ್ತಿ ಗಮನಕೊಡದೆ ಹಳೆ ಹುಡುಗಿಯೇ ಇವೆಲ್ಲಕ್ಕಿಂತ ಮಿಗಿಲೆಂದು ಸದಾ ತುಡಿಯುತ್ತಿರುವ ಮನಸ್ಸಿಗೆ ಹಾಗೇ ಸುಮ್ಮನೆ ಪ್ರಶ್ನೆ ಕೇಳುತ್ತಾ ಕುಳಿತಿದ್ದೆ. ಹೀಗಿರುವಾಗ ನನ್ನೋಳಗಿನ ಭಾವನೆ ಮತ್ತೆ ಮಿಡಿಯುದಿಲ್ಲ ಅಂತ ನಾ ಹೇಳಲಾರೆ. ಯಾಕೆಂದರೆ ಅದೊಂದು ಶುದ್ದ, ನಿರ್ಮಲ ನೆನಪು..ನೆನಪುಗಳೇ ಹಾಗೆ ಎಲ್ಲಿ ಎನು ಮರೆಯಾದರೂ ಸಂದಿಗೊಂದಿಯಲ್ಲಾದರೂ ನುಸುಳಿ ಮತ್ತೆ ಮತ್ತೆ ಕಾಡದಿದ್ದರೆ ಅವುಗಳಿಗೆ ನೆಮ್ಮದಿನೆ ಇರಲ್ಲ.  ಈ ನೆನಪುಗಳು ಯಾಕೆ ಸುಳಿಯಬಹುದು ಎನ್ನುವ ಪ್ರಶ್ನೆ ಕಾಡಿದರೆ ಅದಕ್ಕೆ ಉತ್ತರ ‘ಗೆಳತಿ ಈಗ ಪಕ್ಕದಲ್ಲಿಲ್ಲ’ ಎಂಬ ಮುಗ್ಧ ಮನಸ್ಸಿನ ಮೆಲುಕುವಿಕೆ..
ವ್ಯಕ್ತಿಯ ಉಪಸ್ಥಿತಿ ಪ್ರೇಮವನ್ನು ಬಲಗೊಳಿಸಿದರೆ, ವ್ಯಕ್ತಿಯ ಅನುಪಸ್ಥಿತಿ ಪ್ರೀತಿಯನ್ನು ತೀಕ್ಷಗೊಳಿಸುತ್ತದೆ ಎಂಬ ಮಾತು ಈ ಕ್ಷಣ ಅನಿಸುತ್ತಿರುವುದು ಸುಳ್ಳಲ್ಲ... ಹೌದು ಅದು ಸುಮಾರು 5 ವರ್ಷಗಳ ಹಿಂದಿನ ಕತೆ. ವರುಷಗಳು ಅದುಮಿಟ್ಟ ಭಾವನೆ ಈಗ ವ್ಯಕ್ತಪಡಿಸಲು ಕಾರಣ, ಎಲ್ಲರೂ ತಮ್ಮೊಳಗಿರುವ ಲವ್ ಭಾವನೆ ವ್ಯಕ್ತಪಡಿಸಲು ‘ವ್ಯಾಲೆಂಟೈನ್ಸ್ ಡೇ’ ಬರಲಿ ಎಂದು ಕಾಯುತ್ತಿರುತ್ತಾರೆ. ಕೆಲವರು ಅದನ್ನು ಹೇಳಿ ಸಂತಸದ ನಗುಬೀರಿದರೆ, ಇನ್ನೂ ಕೆಲವರು ದೇವದಾಸನಂತಾಗುತ್ತಾರೆ. ಆದರೆ ನನ್ನದು ಇವೆರಡೂ ಅಲ್ಲದ ಒಂಥರಾ ಡಿಫರೆಂಟ್ ಲವ್. ಇದು ಸಹಜ ಪ್ರೇಮಿಯ ಅಸಹಜ ನೋವು ನಲಿವಿನ ಪುಟ, ಒಳಗೆ ಅರಳಿ ಒಳಗೆ ಹುದುಗಿ, ಈಗಲೂ ತನ್ನೊಳಗಿರುವ, ಖುಷಿಕೊಡುವ ಸೋಜಿಗ...
ಅಂದು ಪರಿಚಯವಿದ್ದ ಗೆಳೆಯನ ಮನೆಗೆ ಅತಿಥಿಯಾಗಿ ಆಗಮಿಸಿದ ನನಗೆ ಅವಳು ಮೊದಲು ಇದಿರಾಗಿದ್ದು ಹೊಸ್ತಿಲಬಳಿ. ಆಗಿನ್ನು ನನ್ನದು ಟೀನೇಜಿನ ಸಮಯ. ಮೊದಲ ನೋಟದಲ್ಲೆ ಅವಳ ಬ್ಯೂಟಿ ಮನಸೆಳೆದರೂ, ಆಗಲೇ ಪ್ರೀತಿಯ ಅದ್ಭುತ ಪ್ರಾರಂಭವಾಗೋ ಕಾಲಘಟ್ಟದ ಪವರ್ ಇದ್ದರೂ, ನನಗೆ ಅವೆಲ್ಲದರ ಬಗ್ಗೆ ಕಲ್ಪನೆಯೂ ಇರಲಿಲ್ಲ. ಸಹಜವಾಗಿ ಆ ದಿನ ಪ್ರಾರಂಭವಾದ ಅವಳ ಪರಿಚಯ ಮುಂದೆ ಆಪ್ತಸ್ನೇಹಿತನಾಗುವವರೆಗೆ ತಿರುಗಿದ್ದು ನನ್ನ ಪುಣ್ಯವೋ, ಪ್ರೀತಿಯಾಗುವ ಮಹಿಮೆಯೋ ತಿಳಿದಿಲ್ಲ.
   
ಅದು ವಯರ್ ಲೆಸ್ ಲ್ಯಾಂಡ್ ಫೋನ್ ಗಳು ಉದ್ದನೆಯ ಕಂಬದ ಬಲದಿಂದ ಸಿಗ್ನಲ್ ಕೊಟ್ಟು ಮಾತನಾಡುವ ಹುರುಪನು ತುಂಬಿಸಿದ ಕಾಲ. ಅಂದುಕೊಂಡಂತೆ ಗೆಳೆಯನಿಗೆ ದಿನಾ ಸಂಜೆ ಫೋನ್ ಮಾಡುವುದು, ಮನೆಯಲ್ಲಿರುವ ಹೊಸ ಫೋನ್‍ನ ಕ್ರೇಜ್‍ನ್ನು ಮಾತನಾಡುವುದರ ಮೂಲಕ ಆನಂದಿಸುವುದು ನನ್ನ ಸಂಜೆ ದಿನಚರಿ. ಎಂದಿನಂತೆ ಆ ದಿನವೂ ಗೆಳೆಯನಿಗೆ ಫೋನ್  ಮಾಡಿದಾಗ ಅತ್ತ ಕಡೆಯಿಂದ ಹೆಣ್ಣಿನ ಧ್ವನಿ ಬಂದಿದ್ದು ಅಚ್ಚರಿಯಲ್ಲದಿದ್ದರೂ ನನ್ನ ಸ್ವರಕ್ಕೆ ಚಿಮಾರಿ ಹಾಕಿ ಹೆದರಿಸಿತ್ತು. ಅಂದಿನ ನನ್ನ ಅವಳ ಮಾತು ಯಾಕೋ ತುಂಬಾ ಹತ್ತಿರ ನಿಲ್ಲಿಸಿ, ಒಂದೇಮರದಡಿ ಎಕಾಂತದಲ್ಲಿ ಪ್ರೇಮಿಳಲ್ಲದಿದ್ದರೂ ಫ್ರೇಂಡ್ಸ ಆಗಿ ಮಾತನಾಡುವ ಮುಗ್ಥತೆಯವರೆಗೂ ಕರೆದುಕೊಂಡು ಹೋಗಿತ್ತು. ಪರಿಚಯ ಆಕಸ್ಮಿಕವಾಗಿ ಆದರೂ ಅದು ಕೊಡುವ ಸಂಬಂಧ ಶಾಶ್ವತವೆನ್ನುವಂತೆ ಮನದಲ್ಲಿ ಎನೂ ಅರಿಯದೇ ಅವಳ ಮೇಲೆ ಭಾವನೆ ತೇಲಾಡಲು ತೊಡಗಿದಾಗಲೇ ತಿಳಿದದ್ದು ಅವಳ ಮೇಲೆ ಪ್ರೀತಿಯಾಗಿದೆ ಅಂತ. ಈ ಮೆಲುಕಾಡುವ ಭಾವನೆಯು ಯಾವಾಗಾ ಪ್ರಾರಂಭವಾಯ್ತೋ ಆವಾಗಲೇ ಅವಳೆದುರು ಬಂದಾಗ, ಹೊಸದಾಗಿ ಭಯ, ಶಿಸ್ತು, ಸಂಯಮ, ಬೆವರುವಿಕೆಯ ನಡುಕ ಎಲ್ಲವೂ ಪ್ರಾರಂಭವಾಗತೊಡಗಿದವು. ಅಲ್ಲಿಂದ ಶುರುವಾಯ್ತು ನೋಡಿ ನನ್ನೊಳಗಿರುವ ಪ್ರೀತಿ ಅವಳಿಗೆ ಹೇಳಬೇಕೆನ್ನುವ ಆಸೆ. ಅವಳಿಗೆ ಇವತ್ತು ಹೇಳಬೇಕು,ನಾಳೆ ಹೇಳಬೇಕು ಎಂದು ಸಾಗಿದ ನಡೆÉಗಳು ಕೊನೆಯನ್ನೆ ಕಾಣದೆ ನನ್ನೊಳಗೆ ಉಳಿಯಿತೆನ್ನುವುದು ದುರಂತ. ಆದರೆ ಅಷ್ಟು ಆತ್ಮೀಯಳಾಗಿ ನನ್ನ ಜೊತೆ ಸಲುಗೆಯಿಂದಿದ್ದ ಅವಳಿಗೆ ನನ್ನ ಮೇಲೆ ಪ್ರೀತಿ ಬಂದಿಲ್ಲವೇ ಎನ್ನುವುದೇ ಇವತ್ತಿಗೂ ನನ್ನ ಬಳಿ ಉಳಿದಿರುವ ಪ್ರಶ್ನಾಂಶ. ಹಾಗಾದರೆ, ಅಂದಿನಿಂದ ಇಂದಿನವರೆಗೂ ನನ್ನದು ಒನ್ ಸೈಡ್ ಲವ್ ಇರಬಹುದಾ ಅಂತ ನಿಮಗನ್ನಿಸಿದರೆ ನಾ ಅದಕ್ಕೆ ಉತ್ತರ ನೀಡಲು ಅಸಮರ್ಥ ಯಾಕೆಂದರೆ ಈಗಲೂ ಒಮ್ಮೊಮ್ಮೆ ಅವಳು ಪ್ರೀತಿಯಿಂದ ಮಾತನಾಡಿಸುತ್ತಾಳೆ. ಆದರೆ ನನಗಂತೂ ಇಂದಿಗೂ ಹೇಳಲಾಗದ ಅಸಮರ್ಥ ಭಾವನೆ. ಹೇಳಿದರೆ ತಪ್ಪು ತಿಳಿದರೆ ಅನ್ನೋ ಆತ್ಮೀಯತೆಯ ಹೆದರಿಕೆ. ಅದಕ್ಕೆ ಎಲ್ಲವನ್ನು ಬಿಟ್ಟು ಅವಳ ನೆನಪು ಜೊತೆಯಲ್ಲಿ ಕಳೆದ ಕಾಲ ನೆನಸಿಕೊಂಡು ಕುಳಿತುಕೊಳ್ಳುವೆ. ಆ ನೆನಪುಗಳೇ ಇಂಧು ಸಂಜೆಯ ಕೊಲೆ ಮಾಡುತ್ತಿದೆ. ಬೇರೆಲ್ಲಾ ವಿಷಯದಲ್ಲೂ  ಮನಸ್ಸಿನ ಆಸೆ ನಿಧಾನವಾಗಿ ಕರಗತೊಡಗಿದರೂ, ಆ ಹಳೆಯ ನೆನಪು, ಅವಳ ವೈಖರಿಯ ನೆನೆಯುವಿಕೆ ಮೊದಲಿನ ಜೋಷ್ ನಲ್ಲೆ ಮುಂದುವರಿದಿದೆ.
ಹೋ ಸಮಯವಾಯ್ತು ಇನ್ನೂ ಹೆಚ್ಚು ನೆನೆಸಿಕೊಂಡರೆ, ತಾಳ್ಮೆಗೆ ಮನಸೋತ ಚಂದಿರ ಬಾನಿಂದ ಕಣ್ಣೀರು ಸೂಸಿಯಾನು. ಭಾವನೆಗಳನ್ನು ಹಿಡಿದಿಟ್ಟುಕೊಂಡು ಕಟ್ಟೆ ಕಟ್ಟಿ ‘ಐ ಲವ್ ಯೂ’ ಅಂತ ಹೇಳಿ ಪ್ರತಿಕ್ರೀಯೆ ಮತ್ತು ಮುಂದಿನ ನಿರ್ಧಾರಕ್ಕೆ ತುದಿಗಾಲಲ್ಲಿ ಕಾಯುವ, ಇಬ್ಬರೂ ಪರಸ್ಫರ ಒಪ್ಪಿಕೊಂಡರೆ ಸಿನಿಮಾ ಪಾರ್ಕ್ ಅಂತ ಅಲೆÉದಾಡುವ ಇಂದಿನ ಜನರ ಮಧ್ಯೆ ನನ್ನ-ನಮ್ಮಿಬ್ಬರ, ಪ್ರೀತಿ-ಸ್ನೇಹ ಸಂಪೂರ್ಣ ಡಿಫರಂಟ್ ಅಂತ ಅನ್ನಿಸದೆ ಇರದು. ಏನೇ ಇದ್ದರೂ ‘ಪ್ರೇಮಿಗಳ ದಿನ’ ಆಚರಿಸುವ ಈ ಮಾಸದಲ್ಲಿ ಆ ಹಳೆಯ ಸುಮಧುರತೆ ಮತ್ತೆ ನೆನಪಿಸಿಕೊಂಡೆ. ಮಾತು ಮೌನವಾದಾಗ ಕಣ್ಣ ಭಾಷೆ ಅರಿಯುವುದು ಮನ, ಮಾತಾಡದೇ ಸುಮ್ಮನೇ ಕುಳಿತರೆ ಕಳೆದು ಹೋಗುವುದು ಪ್ರೀತಿಯ ಮಾಮರ ಎನ್ನುವಂತೆ, ನೀವು ಪ್ರೇಮಿಯಾಗಿದ್ದರೆ, ಮುಚ್ಚುಮರೆಯಿಲ್ಲದೆ ಯಾರಿಗೂ ನೋವಿಲ್ಲದಂತೆ ಪ್ರೀತಿಸಿ, ಪ್ರೀತಿಗಾಗಿ ಬದುಕು ನೀಡಬೇಡಿ, ಬದುಕಿಗಾಗಿ ಪ್ರೀತಿ ನೀಡಿ, ‘ವ್ಯಾಲೆಂಟೈನ್ಸ್ ಡೇ’ಗಾಗಿ ಕಾಯಬೇಡಿ, ಪ್ರತಿದಿನ‘ವ್ಯಾಲೆಂಟೈನ್ಸ್ ಡೇ’ನಂತೆ ಪ್ರೀತಿ ಆಚರಿಸಿ ಬದುಕನ್ನು ಸಂಭ್ರಮಿಸಿ..
ಎಲ್ಲರಿಗೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ..

Thursday, 5 February 2015

ಕಂಬಳ ಕಂಡೀರಾ!!?



ಸಾಮಾನ್ಯವಾಗಿ ನವೆಂಬರ್‍ನಿಂದ ಪ್ರಾರಂಭವಾಗಿ ಮಾರ್ಚ್ ತಿಂಗಳ ಅಂತ್ಯದವರೆಗೆ ನಡೆಯುವ ಹಾಗೂಮೊದಲ ಭತ್ತದ  ಬೆಳೆಯ ಕೊಯ್ಲು ಮುಗಿದು ಎರಡನೇ ಸುಗ್ಗಿ ಬೆಳೆಗೆ ಭೂಮಿ ಹದ ಮಾಡುವ ಸಮಯದಲ್ಲಿ ನಡೆಯುವುದೇ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ಹಾಗೂ ವಿಶಿಷ್ಟ ಮಾದರಿಯ ಸಾಂಸ್ಕ್ರತಿಕ ಕ್ರೀಡೆಯೆ “ಕಂಬಳ”.. ಕರಾವಳಿಯ ಜನರ ಜೀವನ ವೃತ್ತಿಯ ಸಮಯದಲ್ಲಿ ಬೇಸಾಯದ ಜೊತೆಗೆ ಕೋಳಿ-ಕೋಣ,ದನ-ಕರು, ನಾಯಿ-ಬೆಕ್ಕುಗಳನ್ನು ಸಾಕುವುದು ಕೂಡ ಬದುಕಿನಲ್ಲಿ ಹುದುಗಿ ಹೋಗಿರುವ ಅಂಶ. ಬೇಸಾಯದ ಸಂದರ್ಭದಲ್ಲಿ ಬೇಸಾಯಕ್ಕಿಂತ ಮುಂಚೆ ಗದ್ದೆ ಉಳುಮೆ ಮಾಡಿ, ಅದರಲ್ಲಿ ಕೋಣಗಳನ್ನು ಓಡಿಸಿ ಓಟದ ಸ್ಫರ್ಧೆಯಾಗಿಸಿ ಕೃಷಿ ಬದುಕನ್ನು ಸಂಭ್ರಮಿಸುವ ಸಾಂಕೇತಿಕತೆಯೇ ಕಂಬಳ ಆಗಿದೆ..ಇನ್ನೊಂದು ಅರ್ಥದಲ್ಲಿ ಹೇಳೋದಾದರೆ ದಷ್ಟ-ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿಓಡಿಸುವ ಸ್ಪರ್ಧೆಯೇ ಕಂಬಳ ಎನ್ನಬಹುದು. ಕಂಬಳ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಯಾಗಿದ್ದು,ಇದಕ್ಕೆ 800 ರಿಂದ 900 ವರ್ಷಗಳ ಇತಿಹಾಸವಿದೆ.ಕಂಬಳದ ಬಗ್ಗೆ ಉಲ್ಲೇಖವಿರುವ ಅನೇಕ ಶಾಸನಗಳು ದೊರಕಿದ್ದು ಉಡುಪಿಯ ಕೆಂಜೂರಿನಲ್ಲಿ ದೊರಕಿರುವ ಆಳುಪರಾಣಿ ಬಲ್ಲಮಹಾದೇವಿಗೆ ಸೇರಿದ ಕಲ್ಬರಹದಲ್ಲಿ ಕಂಬಳದ ಉಲ್ಲೇಖವಿರುವುದು ಕಂಡುಬರುತ್ತದೆ. ಮುಖ್ಯವಾಗಿ ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ನಡೆಯುತ್ತಿದ್ದ ಕಂಬಳ ಇದೀಗ ಪದ್ದತಿ ಉಳಿಸಿಕೊಂಡು ಬಂದಿರುವ ಮನೆಯವರ ಆಯೋಜನೆಯಲ್ಲಿ ಸ್ಪರ್ಧೆಯ ರೂಪದಲ್ಲಿ ನಡೆಯುತ್ತಿದೆ. ಪ್ರಾರಂಭದಲ್ಲಿ ಇದೊಂದು ಸ್ಫರ್ಧೆಯಾಗಿರದೆ, ಸಾಮೂಹಿಕ ಶ್ರಮ ಸಂಸ್ಕ್ರತಿಯ ಮೂಲಕ ಭತ್ತದ ಶ್ರಮ ಸಂಸ್ಕ್ರತಿಯನ್ನು ಪ್ರೋತ್ಸಾಹಿಸುವುದಾಗಿತ್ತಂತೆ.ಮತ್ತೊಂದು ಕಥೆಯ ಪ್ರಕಾರ,ಸುಗ್ಗಿಯ ಬೆಳೆಯನ್ನು ಮದುಮಗಳಿಗೆ ಹೋಲಿಸುತ್ತಿದ್ದ ಅಂದಿನ ಜನ ಕಂಬುಲವನ್ನು ಭೂಮಿಗೆ ಹೋಲಿಸಿ ಗದ್ದೆ ಮಧ್ಯೆ ಬಾಳೆಗಿಡ ನೆಟ್ಟು ಅವೆರಡರ ಮದುವೆ ಸಮಾರಂಭವೆಂಬಂತೆ ಈ ಕ್ರೀಡೆಯನ್ನು ಆಚರಣೆ ತಂದಿದ್ದಾರೆಂದು ಹಿರಿಯರು ಹೇಳುತ್ತಾರೆ.

ಕರಾವಳಿ ಕರ್ನಾಟಕದ ಜನಪದ ಆಚರಣೆಯಾದ ಕಂಬಳದಲ್ಲಿ ಗದ್ದೆಯ ಮಧ್ಯೆ ಕೋಣಗಳು ಓಡುವಾಗ ಆಗಸದೆತ್ತರಕ್ಕೆ ಚಿಮ್ಮುವ ಗದ್ದೆಯ ಕೆಸರಿನ ವೈಭವದ ಅಂದ ಒಮ್ಮೆ ನೋಡಬೇಕು ಅದರ ಅನುಭವವೇ ಒಂಥರ ವಿಶಿಷ್ಟವಾದದು.ಕಂಬಳ ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆ ಕೂಡ ಹೌದು. ತುಳುನಾಡಿನಲ್ಲಿ ಈಗಲೂ ತನ್ನದೇ ಶೈಲಿಯಲ್ಲಿರುವ ಕೋಣಗಳ ಈ ಓಟ.ಇದೀಗ ವ್ಯಾವಹಾರಿಕ ಆಯಾಮ ಪಡೆದು ಸಾಂಗಿಕ ಬಲದೊಂದಿಗೆ ಬೆಳೆಯುತ್ತಿರುವುದು ಹಿಂಸೆಯೆಂಬ ಮನೋಭಾವ ತಳೆದಿದೆ. ಭತ್ತದ ಕೊಯಿಲಿನ ನಂತರ ರೈತರ ಮನೋರಂಜನಗೋಸ್ಕರ ಎರ್ಪಡುತ್ತಿದ್ದ ಈ ಆಟ, ಉಳ್ಳವರ ಸೋಲು ಗೆಲುವಿನ ಪೈಪೋಟಿಯಲ್ಲಿ ನಿಷೇಧವೆಂಬ ಪ್ರಶಸ್ತಿ ಪಡೆಯೋವರೆಗೂ ಹೋಗಿದ್ದು  ಒಂದು ರೀತಿಯ ಅಸಹನೆಯೇ ಎನ್ನಬಹುದು. ಮೂಲತಃ ಕಂಬಳಗದ್ದೆ ಎನ್ನುವುದು ಉತ್ಪತ್ತಿ ತರುವ ಹೊಲವಾಗಿದ್ದು, ಧಾರ್ಮಿಕ ಆಚರಣೆಯ ಭಾಗವೇನೂ ಆಗಿರಲಿಲ್ಲ. ನಿಧಾನವಾಗಿ ಈ ಹೊಲಗಳು ದೇವಸ್ಥಾನದ ಸೇವೆಗೆ ಧಾನ ಬಿಟ್ಟಿದ್ದರಿಂದ ಧಾರ್ಮಿಕ ಹಿನ್ನಲೆ ಒದಗಿ ಬಂದಿರಬಹುದೆಂದು ಅಭಿಪ್ರಾಯಿಸಲಾಗಿದೆ.
ಪ್ರಸ್ತುತ ತುಳು-ಕರಾವಳಿಯ ಭಾಗದಲ್ಲಿ 30 ಕ್ಕೂ ಹೆಚ್ಚು ಸ್ಥಳದಲ್ಲಿ ಕಂಬಳದ ಆಚರಣೆ ಇಂದು ಇರುವುದಲ್ಲದೇ,ಇತ್ತೀಚಿನ ದಿನಗಳಲ್ಲಿ ಓಟದ ಕೋಣಗಳನ್ನು ಸಾಕುವುದು ಒಂದು ಘನತೆ,ಸೋಲು-ಗೆಲುವು ಮರ್ಯಾದೆ,ಬಹುಮಾನ ಪಡೆಯುವುದು ಪ್ರತಿಷ್ಠೆಯ ವಿಚಾರ ಕೂಡ ಆಗಿದೆ.
ತೀರಾ ಇತ್ತೀಚೆಗೆ ಕಂಬಳವೆನ್ನುವುದು ಪ್ರಾಣಿ ಹಿಂಸೆ, ಅದನ್ನು ನಿಷೇಧಿಸಬೇಕೆನ್ನುವ ಸರ್ಕಾರದ ತೀರ್ಮಾನಕ್ಕೆ ಕರಾವಳಿ ಜನ ಅಸಮಾಧಾನವಾಗಿದ್ದರು. ಹಿಂದೆ ಇದ್ದ ಅನೇಕ ಜಾನಪದ ಕ್ರೀಡೆಗಳು ಮರೆಯಾಗುತ್ತಿರುವ ಇಂದಿನ ಆಧುನಿಕತೆಯಲ್ಲಿ ಈಗಿರುವ ಆಟವನ್ನು ನಿಷೇಧಿಸಿದರೆ,ಮುಂದೆಲ್ಲಿ ಇದನ್ನು ಕಾಣುವುದು ಎಂಬ ಪ್ರಶ್ನೇ! ಎಲ್ಲರಲ್ಲೂ ಉದ್ಭವಿಸುವುದು ಸಹಜ ಆದರೀಗ ಅದಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿದ್ದು, ಸಿಸಿಟಿವಿ ಸೇರಿದಂತೆ ಹಲವಾರು ಷರತ್ತಿನಡಿ ಹಿಂಸೆ ನೀಡದೆ ಕಂಬಳ ನಡೆಸಲು ಅನುಮತಿ ನೀಡಿದ್ದು ಖುಷಿ ಕೊಡುವ ವಿಚಾರ.. ಮುಂದೆಯೂ ಕೂಡ ಎಂದಿನಂತೆ ಕಂಬಳ ನಡೆಯುತ್ತೆ, ರೈತಮಿತ್ರರಿಗೆ ಮನರಂಹನೆ ದೊರಕುತ್ತದೆ ಎಂಬುದು ಸಂತೋಷದ ವಿಚಾರ. ಎನೇ ಇರಲಿ ಸಾಮಾನ್ಯವಾಗಿ ಕುದುರೆ,ಶ್ವಾನದಂತಹ ಪ್ರಾಣಿಗಳ ಆಟಕ್ಕೆ ವಿದೇಶದಲ್ಲೇ ಭಾರಿಮನೋರಂಜನೆ ಸಿಗುತ್ತಿರುವಾಗ ಈ ಕಾಲದಲ್ಲಿ ನಮ್ಮ ಶತಮಾನದ ಇತಿಹಾಸವಿರುವ ಈ ಹಳ್ಳಿ ಸೊಗಡಿನ ಪ್ರಾಚೀನ ಕಾಲದ ಕಂಬಳದ ಕ್ರೀಡೆಗೆ ವಿದೇಶಿಯರು ಕೂಡ ಆಕರ್ಷಿತರಾಗಿ ನಮ್ಮ ಈ ಕ್ರೀಡೆ ವಿಶ್ವವ್ಯಾಪಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ.ಇಂತಹ ಹಿನ್ನೆಲೆ,ಹಿರಿಮೆ ಮೇಲ್ತನವನ್ನು ಹೊಂದಿರುವ ಕರುನಾಡಿನ ಕಂಬಳ ವಿಶ್ವದೆಲ್ಲೆಡೆ ಹರಡಿ ಕರುನಾಡಿನ ಸಂಸ್ಕ್ರತಿ ಇನ್ನೂ ಹೆಚ್ಚಾಗಿ ಹಬ್ಬಿ ಕರುನಾಡ ಕಂಪು ಎಲ್ಲೆಡೆ ಸೂಸಲಿ ಎಂಬುದು ನನ್ನ ಹೆಬ್ಬಯಕೆ.

ಕಂಬಳದ ವಿಧಗಳು:
1.ಬಾರೆ ಕಂಬಳ
2.ಪೊಕರೆ ಕಂಬಳ
3.ಅರಸು ಕಂಬಳ
4.ಆಧುನಿಕ ಕಂಬಳ

ಕಂಬಳ ಗದ್ದೆಯ ವಿಧಗಳು:
1.ಒಂಟಿ ಗದ್ದೆಯ ಕಂಬಳ
2.ಜೋಡಿ ಗದ್ದೆಯ ಕಂಬಳ

ಕಂಬಳದ ವಿಶಿಷ್ಟತೆ:
ಕಂಬಳ ಗದ್ದೆಯ ಜೊತೆ ಕಂಬಳದಲ್ಲಿ ಭಾಗಿಯಾಗುವ ಕೋಣಗಳನ್ನು ಸಿಂಗರಿಸುವುದು. ಒಬ್ಬ ವ್ಯಕ್ತಿ ಸಿಂಗರಿಸಿದ ಕೋಲಿನಿಂದ ತನ್ನದೇ ಶೈಲಿಯಲ್ಲಿ ಕೂಗುತ್ತಾ ಕೋಣಗಳನ್ನು ಓಡಿಸುವುದು.





Saturday, 31 January 2015

ಹೆಣ್ಣು-1


 
  ಹೆಣ್ಣೆಂದರೇನು, ಸೌಂದರ್ಯವೇನು..,ಈ ಸಾಲನ್ನು ಸಾಮಾನ್ಯವಾಗಿ ನೀವೆಲ್ಲಾ ಕೇಳಿರಬಹುದು..ನಿಜ ಹೆಣ್ಣು ಸೌಂದರ್ಯದ ಬೀಡು.. ಸಾಮಥ್ರ್ಯ, ಗುಣ, ಗೌಣ, ಸಾಮಿಪ್ಯಗಳ ಸಮುದ್ರ ಹೌದು. ಹೆಣ್ಣು ಮಗು ಕುಟುಂಬವೊಂದರ ಜೀವಾಳವೆಂದು ಕುಮಾರಸಂಭವದಲ್ಲಿ ಉಲ್ಲೇಖಿಸಿದ್ದರೆ,ಮಹಾಭಾರತದೊಳಗೆ ಹೆಣ್ಣಿನಲ್ಲಿ ಸೌಭಾಗ್ಯ ಹಾಗೂ ಸೊಬಗು ಸದಾ ನೆಲೆಗೊಂಡಿರುತ್ತದೆ ಎಂಬ ಮಾತನ್ನು ಹೇಳಲಾಗಿದೆ. ಅಂದರೆ ಹೆಣ್ಣು ಸಾಮಾನ್ಯದವಳಲ್ಲ ಅಂದಿನಿಂದ ಇಂದಿನವರೆಗೂ ಅವಳ ಇತಿಹಾಸದ ವೈಖರಿಯೇ ದೀರ್ಘವಾಗಿದೆ. ಅವಳು ಕಷ್ಟ-ಸುಖ ಎರಡರಲ್ಲೂ  ಸಮಾನವಾಗಿ ಹೊಂದಿಕೊಳ್ಳುವವಳು. ಅವಳಿಗೆ ಅವಳೆ ಸಾಟಿ. ಚಿಕ್ಕ ಮಗುವಾಗಿದ್ದಾಗ ಮಗುವಾಗಿ, ಸ್ವಲ್ಪ ದೊಡ್ಡವಳಾದ ಮೇಲೆ ಮನೆಯ ಮಗಳಾಗಿ, ಆನಂತರ ಮದುವೆಯಾದ ಮೇಲೆ ಮಡದಿಯಾಗಿ, ಇನ್ನೊಬ್ಬರ ಮನೆಯ ಸೊಸೆಯಾಗಿ, ಬೇರೆಯವರ ಮನೆ ಬೆಳಗುವ ಜ್ಯೋತಿಯಾಗಿ, ಮಗುವಾದ ನಂತರ ತಾಯಿಯಾಗಿ, ಮೊಮ್ಮಗುವಾದಾಗ ಅಜ್ಜಿಯಾಗಿ ಹೀಗೆ ನಾನಾ ರೂಪದಲ್ಲೂ, ಎಲ್ಲ ಥರದಲ್ಲೂ ತಾಯಿ ಎಂದು ಪೂಜಿಸುವ ಮಾತೆಯಾಗಿರುತ್ತಾಳೆ. ಸಹಜವಾಗಿ ಅವಳ ಕಷ್ಟಗಳು, ಸೇವೆಗಳು, ಇನ್ನೊಬ್ಬರ ಸುಖಕ್ಕೆ ಸಂತೋಷಕ್ಕೆ ಇರುತ್ತದೆಯೇ ಹೊರತು ಅವಳಿಗಾಗಿ ಇರೋದಿಲ್ಲ. ಎನೇ ಕಷ್ಟಬಂದರೂ ನಾನಾ ವಿಧದಲ್ಲಿ ಸಹಿಸಿಕೊಳ್ಳುವ ಶಕ್ತಿ ಕೂಡ ಅವಳಿಗಿರುತ್ತದೆ ಎಂದರೆ ತಪ್ಪಿಲ್ಲ..
ನಾವು ಕೂಡ ಒಂದು ಹೆಣ್ಣನ್ನು ಯಾವ ರೀತಿ ನೋಡಬಹುದು ಎಂಬುದನ್ನು ಒಮ್ಮೆ ಯೋಚಿಸಿ ನೋಡಿದರೆ, ಉಪಯೋಗಕ್ಕಾಗಿಯೇ ಬಳಸಿಕೊಳ್ಳುತ್ತೇವೆ ಅನ್ನಿಸುತ್ತೆ. ಹುಡುಗನೊಬ್ಬ ಹುಡುಗಿಯನ್ನು ಪ್ರೀತಿ ಬಲೆಯಲ್ಲಿ ಬಿಳಿಸಿಕೊಂಡು ಅವಳಿಂದ ಎಲ್ಲಾ ಸುಖ ಪಡೆದ ಮೇಲೆ ಒಬ್ಬಳನ್ನೇ ಎಕಾಂಗಿಯಾಗಿಸಿ ಕೈ ಬಿಟ್ಟು ಹೋಗುವ ಪರಿ, ಗಂಡನಾದವನು ಮನೆಯಲ್ಲಿ ಕೆಲಸ ಮಾಡಿಕೊಳ್ಳುವ ಮತ್ತು ಅವಳ ಜೊತೆ ಸರಸವಾಡುವ ಸಮಯ ಬಂದಾಗ, ‘ನೀನೇ ಚಿನ್ನಾ, ನೀನೇ ಬಂಗಾರವೆಂದು’ ಅವಳನ್ನು ಬಣ್ಣ ಬಣ್ಣವಾಗಿ ಕರೆದು, ಎಲ್ಲವನ್ನೂ ಪಡೆದಾದ ಮೇಲೆ ಕೂಗಿ ರಂಪಾಟ ಮಾಡುವ ಪರಿ, ಮಗುವಾಗಿದ್ದಾಗ ತಾಯಿಯ ಎಲ್ಲಾ ಪ್ರೀತಿ ಅನುಭವಿಸಿ, ಆನಂತರ ಅವಳ ಇಳಿವಯಸ್ಸಿನಲ್ಲಿ ವೃದ್ಧಾಶ್ರಮಕ್ಕೆ ದೂಡುವ ಪರಿ,ಹಿಂದಿನಿಂದ ಇಂದಿನವರೆಗೂ ನಡೆದು ಬಂದಿದ್ದು,ಈಗಲೂ ನಡೆಯುತ್ತಿದೆ..ಇದು ಒಂದು ರೀತಿಯ ದೌರ್ಜನ್ಯವಾದರೆ, ಇನ್ನೂ ನಾವೇ ಕಂಡುಹಿಡಿದುಕೊಂಡ ‘ಅಲ್ಟ್ರಾಸೌಂಡ್’ ಎಂಬ ತಂತ್ರಜ್ಞಾನದಿಂದ ಭ್ರೂಣದ ಲಿಂಗವನ್ನು ಪತ್ತೆಹಚ್ಚಿ ಅದು ಹೆಣ್ಣು ಮಗುವಾಗಿದ್ದರೆ ಅದನ್ನು ಹತ್ಯೆಮಾಡಿ ಅಲ್ಲಿ ಕೂಡ ರಾಕ್ಷಸತನ ತೋರುವ ಮಾನವತಾವಾದಿಗಳು ನಾವು. ಇದುವರೆಗೂ ಮಹಿಳೆಯರ ಸ್ಥಿತಿಗತಿ, ಭೇದಭಾವ, ಕ್ರೌರ್ಯ ಇತ್ಯಾದಿಗಳನ್ನು ತಡೆಯಲು ವಿಚಾರ ಸಂಕೀರ್ಣ,ಮಹಿಳಾಮಣಿಗಳ ಸಂಘ ಹೋರಾಟ ನಡೆದರೂ ಅದು ಸಾಕ್ಷ್ಯಾಧಾರ ಚಿತ್ರಣವಾಗಿಯೇ ಉಳಿದಿದೆ ಹೊರತು ನಿಲ್ಲಿಸುವ ಸಾಮಾಜಿಕ ಗುರಿಯ ಗೆಲುವು ಆಗಿಲ್ಲ. ಇದಕ್ಕೆ ತಾಂತ್ರಿಕತೆಯ ಪರವಾದ ಕೇವಲ ಲಾಭ ಕೇಂದ್ರೀಕೃತ, ಧನದಾಹೀ ಸಮಾಜದ ಧೋರಣೆಗಳೇ ಮುಖ್ಯಕಾರಣ ಎನ್ನಬಹುದಾಗಿದೆ. ನಾವು ಆಡುವ ಭಾಷೆಗೆ ‘ತಾಯ್ನುಡಿ’ ಬದುಕುವ ನಾಡಿಗೆ ‘ತಾಯ್ನಾಡು’ ಎನ್ನುತ್ತೇವೆ. ಅಲ್ಲದೇ ನಮ್ಮನ್ನು ಹೆತ್ತವಳು ಹೆಣ್ಣು, ಅವಳೇ ನಮಗೆ  ಮೊದಲ ದೇವರು, ಮುಂದೆ ಜೀವನದ ನೋವು-ನಲಿವಲ್ಲಿ ಜೊತೆಯಾಗಿ ಸಂಗಾತಿಯಾಗುವವಳು ಹೆಣ್ಣು. ಇಷ್ಟೆಲ್ಲಾವನ್ನು ಅರಿತು ಹೆಣ್ಣಿನ ಮೇಲೆ ಮಾಡುವ ದೌರ್ಜನ್ಯವನ್ನು ಬಿಟ್ಟು, ಜನಪ್ರೀಯ ಸಂಸ್ಕ್ರತಿ ಮತ್ತು ಮಾಧ್ಯಮಗಳಲ್ಲಿ ಹೆಣ್ಣನ್ನು ವ್ಯಾಪಾರದ ದೃಷ್ಟಿಯಿಂದ ತೋರುವುದನ್ನು ವಿರೋಧಿಸಬೇಕು. ತುಕ್ಕು ಹಿಡಿದ ಹಳಸಿದ ಸಾಮಾಜಿಕ ಮೌಲ್ಯಗಳನ್ನು ದಿಕ್ಕರಿಸಿ ಮಹಿಳೆಯರ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಿ ಕಾರ್ಯಮಗ್ನರಾಗಬೇಕು. ಆಗಲೇ ಅವಳಿಗೊಂದು ಸಮಾಜದಲ್ಲಿ ಬೆಲೆ ಸಿಗುತ್ತದೆ ಅಲ್ವಾ ಏನಂತೀರಿ..!?

Sunday, 25 January 2015

ಭಾವನೆಗೆ ಬರವಣೆಗೆ ಕೊಡಿಸಿದವಳು…


     ಅದು ನನ್ನ ಟೀನೇಜ್‍ನ ಸಮಯ.ಆಗ ತಾನೆ ಪಿ.ಯು.ಸಿ.ಮುಗಿಸಿ ಪದವಿಗೆಎಂಟ್ರಿಕೊಟ್ಟಿದ್ದೆ. ಪದವಿ ಶಿಕ್ಷಣವೆಂದರೆ ಕೇಳಬೇಕೆ, ಅದೊಂಥರ ಮರೆಯಲಾಗದ ಸವಿದಿನಗಳ ಮಧುರ ಬಾಂಧವ್ಯ ನೀಡುವ ಬೀಡು…ಎಲ್ಲಾ ಹೊಸ-ಹೊಸ ಗೆಳೆಯರ ಗೂಡು…ಅದಕ್ಕೆಅದರದೆ ಆದಂತ ಗತ್ತು, ಹದಿ ಹರೆಯದ ವಯಸ್ಸಿನ ಹುಡುಗ-ಹುಡುಗಿಯರ ತುಡಿತ-ಮಿಡಿತ, ಓದುವಿಕೆಯಒಡನಾಟದಜೀವನ, ಲಚ್ಚರ್‍ಗಳ ಪಾಠ, ಟೈಮ್‍ಪಾಸ್‍ಆಗದಿರೋ ಕ್ಲಾಸ್‍ಗಳು, ಸುಮ್‍ಸುಮ್ನೆರೇಗುವಂತೆ ಮಾಡುವ ಕಾಮೆಂಟ್‍ಗಳು, ಬೇಡ ಬೇಡವೆಂದರೂ ಬರುವ ಪರೀಕ್ಷೆಗಳು, ಟೆನ್ಷನ್ ಹಾಲಿಡೇಗಳು, ಕ್ಲಾಸಿಗೆ ಬಂಕ್ ಹಾಕಿ ಚಕ್ಕರ್ ಹೊಡಿಯೋ ಪೋಲಿಗಳು, ಇವುಗಳ ಮಧ್ಯೆಅವರರವರ ಪ್ರೀತಿ-ಪ್ರೇಮಗಳು ಇತ್ಯಾದಿಗಳ ಸಂಗಮವದು....
ಇನ್ನೂ ಪದವಿಗೆ ಮೊದಲ ದಿನ ಹೋದಾಗಲಂತೂಅದೊಂಥರ ಹೊಸ ಕಥೆ…..ಸೀನಿಯರ್‍ಗಳು ರ್ಯಾಗಿಂಗ್ ಮಾಡುತ್ತಾರೋ ಏನೋ ಅನ್ನೋ ಭಯ, ಮೊದಲ ಬಾರಿದೊಡ್ಡಕಾಲೇಜಿಗೆ ಹೋಗುತ್ತಿದ್ದೆ…ಏನಾಗುತ್ತದೋ…..ಹೇಗಿರುತ್ತೋ….ಅನ್ನೋ ನಡುಕ, ಹೊಸ ಹೊಸ ಡ್ರಸ್‍ತೊಟ್ಟು ಬರುವ ಹೊಸ ಹೊಸ ಹುಡುಗಿಯರ ಲಕ-ಲಕ ಹೊಳಪು, ಅವರಲ್ಲಿ ಯಾರೊಬ್ಬಳ್ಳಿಗಾದರು ಲೈನ್ ಹಾಕಿ ನಾನೋಬ್ಬ ಭಯಂಕರ ಹುಡುಗ ಎನ್ನಿಸಿಕೋಳ್ಳಬೇಕೆಂಬ ಹುಡುಗರಎದೆಗಾರಿಕೆ, ಹುಡುಗರು ನೋಡಲಿ ಅಂತಾನೆಕಿರುನಗೆ ಬಿರುತ್ತ..ಪೋಸ್‍ಕೋಡುವ ಹುಡುಗಿಯರಚಮ್ಮಕ್ ಗಳು ಇವೆಲ್ಲತುಂಬ ಕಾಮನ್‍ಅಲ್ವಾ….ಆದರೆತರಗತಿಆರಂಭವಾದ ಸ್ವಲ್ಪ ದಿನ ನಂತರಇನ್ನೂ ಹಲವರು ಬದಲಾವಣೆಯನ್ನಕ್ಯಾಂಪಸ್‍ನ ಒಳಗಡೇ ನೋಡಬಹುದು..ಮೊದಲು ಗೆಳೆಯ ಗೆಳತಿಯರಂತೆ ಇದ್ದವರು ಸ್ವಲ್ಪ ದಿನದಲ್ಲೇ ಪ್ರೇಮಿಗಳಾಗಿ ನಾವಿಬ್ಬರುರತಿ ಮನ್ಮಥರುಎನ್ನೂವಷ್ಟು ಬದಲಾಗಿರುತ್ತಾರೆ.ದೊಡ್ಡದೊಡ್ಡ ಬದುಕ ಬಂಡಿಯನ್ನ ಸಾಗಿಸೋರತರಾಕಾರಿನಲ್ಲಿ ಕುಳಿತು ಹರಟೆ ಹೊಡಿಯುತ್ತಿರುತ್ತಾರೆ. ಇನ್ನೂ ಕೆಲವರು ನಾನ್ನೋಬ್ಬನೇ ಪ್ರೇಮಿ, ಅವಳಿಲ್ಲದೇ ನಾ ಬದುಕಲಾರೆಎಂದುಇದ್ದ ಪ್ರೀತಿಯನ್ನುತನ್ನ ಹುಡುಗಿಯ ಬಳಿ ಹೇಳಿ ಕೋಳ್ಳದೇ ತಾಕಳಾಟದಲ್ಲಿ ಕಳೆವ ಕಮಂಗಿಗಳಾಗಿರುತ್ತಾರೆ.ಪ್ಲಿಸ್‍ಕಾಣೆ ನನ್ನ ಪ್ರೀತಿಸುಅಂತ ಬೇಡುವ ಹುಡುಗರ ಮೇಸೆಜ್‍ಗಳು, ಅವಳಿಗೆ ನನ್ನ ಪ್ರೀತಿ ತಿಳಿಸ್ರೋಅನ್ನುವ ಗೆಳೆಯನ ಮಾತುಗಳು, ಲೋ ಅವನ್ನು ನನ್ನ ಹುಡ್ಗಿಜೊತೆಜೋರಾಗಿತಿರುಗಾಡ್ತಇದ್ದಾನಂತೆ.ಇವತ್ತುಅವ್ನ ವಿಚಾರಿಸಿ ಕೊಳ್ಳುತ್ತೇನೆ ಬರಲಿ ಕ್ಲಾಸ್‍ಗೆ…ಅನ್ನೋ ಸ್ವಲ್ಪ ಪ್ರೇಮಿಯ ಕೆಟ್ಟ ಕ್ಷಣಗಳು, ಹುಸಿನಗೆಯ ಬಿರುತ್ತ ಬಾಣ ಬಿಡುವ ಹುಡುಗಿಯರ ನಗೆಬಾಯಿಯ ಬಿಲ್ಲುಗಳು ಇವುಗಳು ಕೂಡಾಒಂಥರಾ ಮಾಮೂಲಿಗಳೇ….
ಎನಪ್ಪಾ ಇವನು ಬರೀಕಾಲೇಜು, ಹುಡುಗ-ಹುಡುಗಿಯ ಬಗ್ಗೆ ಹೇಳ್ತಾ ಇದ್ದಾನೆ ಅಂದ್ಕೊಳ್ತಿದ್ದೀರಾ ಹಾಗಾದರೆ ಕೇಳಿ ವಿಷ್ಯಾಇರೋದಿಲ್ಲಿ….
ಹೌದು!... ಅದು ಹುಡುಗ ಹುಡುಗಿಯರ ವಯೋ ಸಹಜಗುಣ. ಆಟ - ಪಾಠವೆಂದು ತಿರುಗೋ ವಯಸ್ಸಿನಲ್ಲಿ ಪ್ರೀತಿ ಪ್ರೇಮವೆಂದು ತಿರುಗಾಡೋದು ಅಧುನಿಕತೆಯ ಹೊಸ ಟ್ರೆಂಡ್‍ನಲ್ಲಿ ಒಂಥರಾ ಸಹಜವೆನಿಸುತ್ತದೆ. ಇದೊಂಥರಾ ಮನೋಧರ್ಮ ಅಂಥಹ ಒಂದು ಪ್ರೀತಿ ಘಟನೆಯನ್ನ ನನ್ನ ಕಾಲೇಜು ಜೀವನದಲ್ಲಿ ನಾ ಕಂಡಿದ್ದ ಕಥೆಯನ್ನು ಹೇಳುತ್ತೀನಿ ಕೇಳಿ…
ಪ್ರೀತಿ-ಪ್ರೇಮ-ಪ್ರಣಯವನ್ನು ದ್ವೇಷಿಸುತ್ತಿದ್ದ, ಕಟ್ಟಾ ವಿರೋಧಿಯಾದ ನಾನು ಅದರಗೀಜಿಗೆ ಹೋಗುವುದಿರಲಿ,  ಹುಡುಗಿಯರ ಬಳಿ ಮುಖಕೊಟ್ಟು ಮಾತನಾಡುತ್ತಲೂಇರುತ್ತಿರಲಿಲ್ಲ….ಬಹುಶಃ ಅದುವರೆಗೆ ಲವ್ ಎಂಬುದು ತಿಳಿದ್ದರೂ ಅದಕ್ಕೆ ನನ್ನ ಮನದಲ್ಲಿ ಸ್ಥಾನವಿಲ್ಲ ಎಂದೇ ಅರುಹುತ್ತಿದ್ದವ ನಾನು, ಬೆಳಿಗ್ಗೆ ಬೇಗ ಎದ್ದು ಮನೆ ಕೆಲಸ ಮಾಡಿ, ಗಡಿಬಿಡಿಯಲ್ಲೆ  ಬಸ್‍ಗೆ ಓಡಿ, ತರಾತುರಿಯಲ್ಲಿ ಸೀಟ್ ಹಿಡಿದು, ತನ್ನ ಪಾಡಿಗೆತಾನುಯಾವುದಾದರೂ ಬುಕ್ ಹಿಡಿದುಓದುತ್ತಾಕಾಲೇಜಿಗೆ ಹೋಗಿ ಕ್ಲಾಸ್‍ಲ್ಲಿ ಲೆಕ್ಚರ್ ಪಾಠ, ಫ್ರೀಯಾಗಿದ್ರೆ ಲೆಬ್ರೇರಿಗೆ ಬೇಟಿ ನೀಡಿಇಷ್ಟವಾದ ಬುಕ್,ಪೇಪರ್ ಓದಿ ದಿನದೂಡುವುದು ನನ್ನ ಹ್ವಾಬಿ… ಆದರೆ ಇದರ ನಡುವೆ ನನಗ್ಯಾವ ಗರ್ಲ್‍ಫ್ರೆಂಡ್‍ಗಲಿ, ಗೆಳತಿಯರಾಗಲಿ ಇರಲಿಲ್ಲ ಆಥವಾ ಅವರ ಜೊತೆ ಸುತ್ತುತ್ತಾ ಸಮಯ ಹಾಳು ಮಾಡುವ ಮನಸ್ಸು ನನಗಿದ್ದಿರಲಿಲ್ಲ...ಹೀಗಿರುವಾಗ ಒಂದು ದಿನ ಗೆಳೆಯರ ಮೂಲಕ ತೇಲ ಬಂದ ವರ್ತಮಾನವೊಂದಕ್ಕೆ ನಾ ಬೆಚ್ಚೆ ಬಿದ್ದೆ.ಅದೇನೂ ಗೊತ್ತೇ? ಸ್ಯಾಂಡಿ ನಿನ್ನ ಜಾನು ಅಂತಾ ಒಂದ್ ಹುಡ್ಗಿ ಲವ್ ಮಾಡ್ತಾ ಇದ್ಲಂತೆ ಕಣೋ…. ಬಿ.ಎ ಹುಡ್ಗಿಯಂತೆ ಕಣೋ..ಅವಳ ಫ್ರೆಂಡ್ ನಮಗೆ ಹೇಳಿದ್ರೂ, ಲೋ  ನಿನ್ ಲಕ್ಕಿ ಮಗಾ….ಎಂಜಾಯ್ ಮಾಡೋ..ನಮಗೆ ಲವ್ ಬೇಡ ಬೇಡಅಂತ ಈಗ ನೀನೆ ಒಳ್ಳೆ ಹುಡುಗಿಯನ್ನ ಪಟಾಯಿಸಿದ್ದೀಯಾ ಬಿಡು…ಕ್ಯಾರಿಆನ್‍ ಡಿಯರ್‍ಎಂದು ಗೆಳೆಯರು ನಗು-ನಗುತ್ತಾ ಹೇಳಿದ್ದರು.
ಹೇ…ಸಮ್ಮನಿರ್ರೋ ನನ್ನನ್ಯಾವ ಹುಡುಗಿ ಲವ್ ಮಾಡ್ತಾಳೆ, ನಾನೇನಿದ್ದೇನೆ ಅಂತ ಪ್ರೀತಿಸಬೇಕು ಆಕೆ ಎಂದು ಅಲ್ಲಗಳೆಯುವ ಉಸಬರಿ ಮಾಡಿದ್ದೆ. ಆದರೆ ಆ ಹುಡುಗಿಯಾರು...ಅವಳ್ಯಾಕೆ ನನ್ನಇಷ್ಟಪಡಬೇಕು, ಅವಳಿಗೆ ಇಷ್ಟವಾಗೋ ಹಾಗೆ ನಾನಿದ್ದೀನಾ…ಅವಳಿಗಾದರೂ ನಾನ್‍ಯಾಕೆ ಇಷ್ಟವಾಗಬೇಕು ಎಂಬೆಲ್ಲ ಪ್ರಶ್ನೆಗಳು ದಿನದಿಂದ ದಿನಕ್ಕೆ ನನ್ನಲ್ಲೆ ಮೂಡುತ್ತಾ, ಮನಸಲ್ಲೆಕೊರೆಯುತ್ತಾಕ್ರಮೇಣ ಅವಳತ್ತಲೇ ಮನಸ್ಸು ವಾಲುತ್ತಾತನ್ನಕೆಟ್ಟಬುದ್ದಿಯನ್ನತೊರಿಸಲು ಸಜ್ಜಾಗುತ್ತಿದ್ದದ್ದು ನನಗೂ ಅರಿವಾಯಿತು…ಮುಗ್ಧ ಮನಸ್ಸನಲ್ಲಿ ಅವಳೇ ನೆನಪಾಗುತ್ತಾಕ್ರಮೇಣ ನನ್ನಜೀವನ ಶೈಲಿಯೇ ಬದಲಾವಣೆ ಹಾದಿ ಹಿಡಿದಿದ್ದು ನನಗೆ ಗೊತ್ತುಗೊತ್ತಾಗದೇಕಂಡುಬಂದವು.
ಅವಳು ಹೇಗಿರಬಹುದು, ಯಾರಿರಬಹುದು ಎಂಬ ಕುತೂಹಲದ ನಡುವೆಯೂ ………….. ನಾಳೆ ಅವಖನ್ನ ನೊಡಲೇಬೇಕು ಏಂಬ ಎಲ್ಲಾ ಹಂಬಲಗಳನ್ನು ಒಡ್ಡುಗೂಡಿಸಿ ಧೈರ್ಯಮಾಡಿಕೊಂಡೆ.
ಮರುದಿನ ಬೆಳಿಗ್ಗೆ ನನ್ನ ವರ್ತನೆ ಎಂದಿನಂತಿರಲಿಲ್ಲ. ಇಷ್ಟು ದಿನ ಒಂದು ನಿಮಿಷನೂ ಕನ್ನಡಿಯ ಮುಂದೆ ನಿಲ್ಲದಿದ್ದ ನಾನು ಆ ದಿನ ಯಾಕೋತುಸು ಹೆಚ್ಚೆ ಕನ್ನಡಿಯ ಮುಂದೆ ನಿಂತು ವಿಧ ವಿಧದಲ್ಲಿ ಹೇರ್‍ಸ್ಟೆಲ್ ಮಾಡುತ್ತಿದ್ದೆ.ಇದನ್ನ ಗಮನಿಸಿದ ಅಮ್ಮ ಎನಾಯ್ತೋ ನಿನಗೆ ಇವತ್ತು ಬಸ್‍ಗೆ ಟೈಮ್‍ ಆಗಿದ್ದು ಕಾಣ್ತಾ ಇಲ್ವಾ! ಅಂದಗಾಗಲೇ ಹೋ! ಹೌದ್‍ ಅಲ್ವಾಎಂದು ಬಸ್ ಸ್ಟ್ಯಾಂಡ್‍ಗೆ ಓಡಿದ್ದೆ.
ಬಸ್‍ನಲ್ಲಿ ಸೀಟ್ ಇರದೇ ನಿಂತಿದ್ದಾಗಇನ್ನೊಂದು ಬಗ್ಗೆಯ ಪ್ರಶ್ನೆ ಮತ್ತೆಕಾಡಿತ್ತು….ಅದೇನು ಗೊತ್ತಾ!!?
ಅವಳನ್ನ ಹೇಗೆ ಗುರುತಿಸುವುದು?ಅವಳನ್ನ ಹೇಗೆ ಮಾತನಾಡಿಸುವುದು?ಎಲ್ಲಿಮಾತನಾಡಿಸುವುದು? ಗೆಳೆಯನಿಗೆ ಹೇಳೊಣ ಎಂದರೆ ಅವನು ಅದನ್ನೇದೊಡ್ಡ ನ್ಯೂಸ್ ಮಾಡಿ ಇಡೀ ಕಾಲೇಜಿಗೆ ತುಂಬಿಸಿದರೆ ಕಷ್ಟ ಎನಿಸಿತ್ತು, ಬೇಡ….
ಯಾವುದು ಬೇಡ ಅವಳ ತರಗತಿಗೆ ಹೋಗಿ ಅವಳ್ಯಾರೆಂದು ತಿಳಿದು ಕೊಳ್ಳೋಣವೆಂದು ಬಸ್ ಇಳಿದ ತಕ್ಷಣವೇ ಈ ಮೊದಲೇ ಪರಿಚಯವಿದ್ದ ನನ್ನ ಗೆಳತಿಯೊಬ್ಬಳ ಬಳಿ ಬಿ.ಎ. ಕ್ಲಾಸ್‍ಎಲ್ಲಿ, ಸ್ವಲ್ಪ ಹೋಗಬೇಕಿತ್ತುಎಂದು ಮಾರ್ಗಸೂಚಿ ಪಡೆದೆ. ಇಷ್ಟು ದಿನ ನನ್ನಕ್ಲಾಸ್‍ಗೆ ಹೆಜ್ಜೆ ಹಾಕುತ್ತಿದ್ದ ಪಾದಗಳುಆ ದಿನ ಸ್ವಲ್ಪ ತಿರುವನ್ನು ಪಡೆದುಕೊಂಡು ಅತ್ತ ಚಲಿಸುತ್ತಿತ್ತು. ಯಾಕೋ ಮನದಲ್ಲಿ ಒಂಥರಾ ಭಯ, ಹೃದಯ ಬಡಿತ ತುಸು ಹೆಚ್ಚೆ ತನ್ನ ಕದರನ್ನು ತೋರಿಸುತ್ತಿತ್ತು. ಮುಖದಲ್ಲಿ ಒಂಥರ ಬೆವರು,ಕೈಯಲ್ಲಿ ನಡುಕ.., ಯಾವುದಕ್ಕೂ ಯಾರಿಗೂ ಭಯ ಪಡದ ನಾನು ಯಾಕೆ ಈ ರೀತಿಯಾಗುತ್ತಿದೆ ಎಂದು ತಿಳಿಯದೇ ಮನಸ್ಸನ್ನು ಪದೇ ಪದೇ ಪ್ರಶ್ನಿಸಿದ್ದೆ. ಅಂತಿಮವಾಗಿ ಬಿ.ಎ ತರಗತಿಯ ಒಳಗೆ ಹೋದಾಗ ಅಲ್ಲಿದ್ದ ಗೆಳೆಯರ ಮಾತನಾಡಿಸುವ ನೆಪದಲ್ಲಿ ಆಚೆ-ಈಚೆ ಕಣ್ಣು ಹಾಯಿಸುತ್ತಾ ಯಾರಿರಬಹುದು ಅವಳು!! ಎಂದು ಹುಡುಗಿಯರ ಸಾಲಿಗೆ ಕಣ್ಣಾಡಿಸಿದೆ. ಆದರೆ ಎಲ್ಲೂ ಜಾನು ಎನ್ನುವ ನನ್ನಾಕೆ ಕಾಣದೆ ಇದ್ದಾಗ, ನಿಮ್ಮ ತರಗತಿಯಲ್ಲಿ ಜಾನು ಎಂದರೆ ಯಾರೋ ಎಂದು ನನ್ನೊಬ್ಬ ಗೆಳೆಯನ ಕೇಳಿದೆ. ಅದಕ್ಕೆ ಆತ ಅವಳಿಗೆ ಎರಡು ದಿನದಿಂದ ಜ್ವರ ಅಂತೆ ಅವಳು ಕಾಲೇಜಿಗೆ ಬಂದಿಲ್ಲ ಬಹುಶಃ ಆರಾಮಾಗಿಲ್ಲ ಅನ್ನಿಸುತ್ತೆ,ಯಾಕೇ ಅವಳು ನಿಂಗೆ ಪರಿಚಯವಾ!? ಎಂದು ಕೇಳಿದ ಹೇ ಇಲ್ಲ ಇಲ್ಲಾ., ಯಾರೋ ಅವಳ ಹೆಸರು ಹೇಳಿದ್ರೂ ಇಷ್ಟವಾಯ್ತು ಆ ಹೆಸರು ಅದಕ್ಕೆ ಕೇಳಿದೆ ಎಂದು ತೀರಾ ನೋವಿಂದ ಹೊರನಡೆದೆ. ಅದೇ ಕೊನೆ ಮತ್ತೇ ಅವಳನ್ನು ಓಡುವಯಾವ ಗೋಜಿಗೂ ಹೋಗಿಲ್ಲ. ಆ ದಿನ ಅವಳಿಗೆ ಜ್ವರ ಅನ್ನೋ ವಿಷಯ ಕೇಳುತ್ತಿದ್ದಂತೆ ಹೃದಯದಲ್ಲಿ ಯಾಕೋ ಒಂಥರದ ನೋವು ನನ್ನನ್ನ ಕಾಡುತ್ತಾ ಇಡೀ ದಿನ ಮನಸ್ಸಲ್ಲಿ ಕೊರೆಯುತ್ತಿತ್ತು. ರಾತ್ರಿ ಮಲಗಿದಾಗಲೂ  ಮತ್ತೆ ಮತ್ತೆ ಅವಳದೇ ನೆನಪು  ಕಾಡಿ ಕಾಡಿ ಮನದಲ್ಲಿ ಮೂಡುತ್ತಿತ್ತು. ಆಗ ಏನು ಮಾಡಬೇಕೆಂಬುದು ತೋಚದೇ ಧಿಡೀರನೆ ಎದ್ದು ಕುಳಿತ ನನಗೆ ಭಾವನೆಗಳನ್ನ ಬರೆದಿಡೋ ರಯತನ ಮಾಡೋಣ ಎನಿಸಿ ಬಿಳಿಹಾಳೆ ತೆಗೆದು ಅವಳ ಬಗ್ಗೆ ನನಗಾದ ಮೊದಲ ಒಲವಿನ ಕುರಿತು ಬರೆಯತೊಡಗಿದೆ. ಅದುವರೆಗೂ ಪುಸ್ತಕಗಳನ್ನು ಓದುತ್ತಿದ್ದ ನನಗೆ ಬರವಣಿಗೆಗೆ ಪದಗಳ ಕರತೆಯಾಗಲಿ ವಿಷಯದ ಸಮಸ್ಯೆಯಾಗಲಿ ತಲೆದೋರಲಿಲ್ಲ. ಆದರೆ ಅದುವರೆಗೂ ನನ್ನ ಬರವಣಿಗೆಯನ್ನ ಪ್ರಾರಂಭವೇ ಮಾಡದಿದ್ದ ನನಗೆ ಅವಳ ಕಾಣದ ಪ್ರೀತಿಯಿಂದ ಬೆಳಗಾಗುವ ಹೊತ್ತಿಗೆ ಒಂದೊಳ್ಳೆ ಕವನವನ್ನು ರಚಿಸಲು ಪ್ರಚೋದಿಸಿತ್ತು. ಆ ರಾತ್ರಿಯ ನನ್ನೆಲ್ಲಾ ಭಾವನೆಗಳ ಮುಷ್ಠಿಯನ್ನು ಕ್ರೋಢಿಕರಿಸಿ ,ಕವಿತೆಯಾಗಿಸಿ, ನಾನೊಬ್ಬ ಪ್ರೇಮಕವಿ ಎನ್ನುಂತಕ್ಕೆ ಪೂರ್ಣಗೊಳಿಸಿದ್ದೆ ಅಲ್ಲಿಂದ ಪ್ರಾರಂಭವಾದ ನನ್ನ ಬರವಣಿಗೆ ಇಂದಿಗೂ ಮುಗಿದಿಲ್ಲ. ಆದರೆ ಒಂದು ಕೆಟ್ಟ ವಿಷಯವೆಂದರೆ ನನ್ನ ಭಾವನೆಗಳಿಗೆ ಬರವಣಿಗೆ ತೋರಿಸಿದ ಆ ಜಾನು ಯಾರು ಎಂದು ಇದುವರೆಗೂ ನಾ ನೋಡಿಲ್ಲ. ಅವಳನ್ನ ನೋಡಬೇಕೆಂಬ ಆಸೆಯೆನಿಲ್ಲ ಆದರೂ ಮರೆಯಲಾರೆ ಆಕೆಯನ್ನ. ಯಾಕೆಂದರೆ ನನಗೆ ಈ ಥರದ ಬಳುಕೋ ಭಾವನೆಗಳು ಯಾವಾಗಲೂ ಬೇಕು. ನನ್ನ ಹೃದಯ ಸದಾ ಮಿಡಿಯುತ್ತಿರಬೇಕು. ಇಂಥಾ ಫೀಲಿಂಗ್ ಗಳೇ ಮೊದಲ ನನ್ನ ಬರವಣಿಗೆಗಳಿಗೆ ಸ್ಫೂರ್ತಿ .ಅವಳನ್ನ ನೋಡಿದರೆ ಆ ಬೇರೆಯದೇ ಭಾವನೆ ಬಂದು ಈ ಮೌನ ಕಚಗುಳಿಗೆ ದಕ್ಕೆಯಾಗಬಹುದೇನೋ ಅಲ್ಲಾ.. ಅದೇನೆ ಇರಲಿ ಅವಳೆಲ್ಲಿದ್ದರೂ ಚೆನ್ನಾಗಿರಲಿ, ನೋಡುವ ತವಕ ಹೀಗೆ ಇರಲಿ ಎನ್ನುತ್ತಾ ಅವಳ ನೆನಪಲ್ಲಿ ನನ್ನ ಬರಹ ಮೂಡಿಸುತ್ತಾ ಕವಿಯಾಗಿ ಕಾಲ ಕಳೆಯುತ್ತಿರುವೆ ಅನುದಿನ ಅನುಗಾಲ..
ಆದರೊಂದು ಮಾತು,
ನನ್ನ ಬರವಣಿಗೆಗೆ ಸಿಕ್ಕ ದಾರಿ ಅವಳೇ...
ನನ್ನ ಭಾವನೆಗೆ ಬರಣಿಗೆ ನೀಡಿದ ಸ್ಫೂರ್ತಿ ಅವಳೇ...
ಸದಾ ನನ್ನ ಬರಹದಿ ಅವಳ ಬಿಂಬ ಹುಡುಕುವೇ...
ಅವಳಾರೆಂದು ಇನ್ನೂ ತಿಳಿದಿಲ್ಲ ಮತ್ತೆ ಮತ್ತೆ ಗೀಚುವೇ...


Tuesday, 13 January 2015

ಮರೆಯಾಗದಿರಲಿ ಕರಾವಳಿ ಕಲೆ ಯಕ್ಷಗಾನ

ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾದೊಡನೆ ಕರಾವಳಿಯ ಕಡೆ ಎಲ್ಲೆಂದರಲ್ಲಿ ಮೊಳಗುವುದು ಯಕ್ಷಗಾನದ ಪದ, ತಾಳ, ಹೆಜ್ಜೆ, ಚಂಡೆಯ ಸದ್ದು. ಮಳೆಗಾಲದಲ್ಲಿಯೂ ಒಳಾಂಗಣದಣದಲ್ಲಿ ಇದರ ಛಾಪಿದ್ದರು, ಚಳಿಗಾಲ, ಬೇಸಿಗೆಯ ಕಾಲದ ರಾತ್ರಿಗಳಲ್ಲಿ ಇದರ ಪ್ರದರ್ಶನದ ಮಜವೇ ಬೇರೆ. ಅದು ಹರಕೆ ಬಯಲಾಟವಾಗಿರಬಹುದು,  ಇಲ್ಲಾ ಖಾಸಗಿ ಮಾಲಿಕತ್ವದಲ್ಲಿ ನಡೆಯುವ ಪ್ರದರ್ಶನವಾಗಿರಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರೊರೆಗೂ ಭೇದ-ಭಾವವಿಲ್ಲದೆ ರಾತ್ರಿಪೂರ್ತಿ ಅತ್ಯಾಸಕ್ತಿಯಿಂದ ರಂಗಮಂದಿರದ ಎದರು ಕುಳಿತು ಮನೋರಂಜನೆ ಪಡೆಯುವ ಪ್ರದರ್ಶನ ಈ ಯಕ್ಷಗಾನ.
ವೇಷಭೂಷಣ, ಅಭಿನಯ, ಪದ ಹಾಗೂ ಮಾತುಗಾರಿಕೆಯಲ್ಲೇ ಅದ್ಭುತಲೋಕ ಸೃಷ್ಟಿಸುವುದರ ಜೊತೆಗೆ ಕನ್ನಡ ಸಂಸ್ಕ್ರತಿಯನ್ನು ಮಡಿಲಲ್ಲಿಟ್ಟುಕೊಂಡು ಬೆಳೆದು,ಬೆಳೆಸಿದ ಕಲೆ  ಕನ್ನಡ ಯಕ್ಷಗಾನ. ಕೇವಲ ಪಂಡಿತರಿಗಷ್ಟೆ ಸೀಮಿತವಾಗಿರದೆ ಜಾತಿ-ಮತಗಳೆನ್ನದೇ,ಎಲ್ಲರನ್ನೂ ಒಳಗೊಂಡ ಕಲೆ ಇದು.ಬಯಲಾಟ,ದಶಾವತಾರ ಆಟ ಎಂದು ಕರೆಯಲ್ಪಡುತ್ತಿದ್ದ ಕನ್ನಡದ ಪ್ರಾಚೀನ ರಂಗಭೂಮಿಗೆ, ಸುಮಾರು 100-150 ವರ್ಷಗಳ ಹಿಂದೆಯೇ ಬಂದ ಹೆಸರು 'ಯಕ್ಷಗಾನ'. ಇದು ಒಂದು ಮೂಲಗಳ ಅಭಿಪ್ರಾಯ.ಆದರೆ ಸುಮಾರು ಕ್ರಿ.ಶ 1500 ರಷ್ಟರಲ್ಲಿಯೆ 'ಯಕ್ಷಗಾನ'ವೆಂಬ ಪದ ರೂಢಿಗೆ ಬಂದಿದ್ದು "ಯಕ್ಕಲಗಾನ"ವು ಯಕ್ಷಗಾನವಾಗಿದೆ ಎಂದು ಇನ್ನೂ ಕೆಲವು ವಿದ್ವಾಂಸರು ಹೇಳುತ್ತಾರೆ.
ಹೌದು!!.. ಯಕ್ಷಗಾನದ ಸೊಬಗೆ ಅಂತದ್ದು.,ಯಕ್ಷಗಾನದ ಮೂಲಸೆಲೆ ಇರುವುದು ಗ್ರಾಮೀಣ ಪ್ರದೇಶದಲ್ಲೆ.ವೃತ್ತಿ ಮತ್ತು ಹವ್ಯಾಸಿ ಮೇಳಗಳು,ಕಲಾವಿದರು ಪೋಷಕರು,ಸಂಘಟನೆಗಳು ಇರುವುದು ಇಲ್ಲಿಯೆ.ಎಲ್ಲಕಿಂತ ಪ್ರಮುಖವಾಗಿ ಯಕ್ಷಗಾನದ ಪ್ರೇಕ್ಷಕ ಸಮೂಹ ಗ್ರಾಮಾಂತರದ ಜನರೆ ಎಂದರೆ ತಪ್ಪಲ್ಲ.ಕರಾವಳಿಯ ಈ ಕಲೆ ಇಂದಿಗೂ ಮಹತ್ವದ ಕಲಾಪ್ರಕಾರಗಳಲ್ಲೊಂದಾಗಿದ್ದು,ಇಂದಿಗೂ ದೇಶ ವಿದೇಶಗಳಲ್ಲಿ ತನ್ನ ಘನತೆ ಉಳಿಸಿಕೊಂಡಿದೆ..ಸಾಮಾನ್ಯವಾಗಿ ರಾತ್ರಿ ವೇಳೆ ನಡೆಯುವ ಯಕ್ಷಗಾನ ದೇವಸ್ತಾನದ ಆಡಳಿತದಲ್ಲಿ ಮೇಳಗಳನ್ನು ಹೊಂದಿರುತ್ತವೆ.ಅಲ್ಲದೆ ಕಲಾಸಕ್ತ ಜನರು ತಮ್ಮದೆ ಸಂಘ ಮಾಡಿ  ಆಟ ಪ್ರದರ್ಶನ ಮಾಡುತ್ತಿರುತ್ತಾರೆ.ಯಕ್ಷಗಾನದಲ್ಲಿ 3 ರೀತಿಯ ಪ್ರಕಾರಗಳಿವೆ.ಅವುಗಳೆಂದರೆ ತೆಂಕುತಿಟ್ಟು,ಬಡಗುತಿಟ್ಟು,ಉತ್ತರದ ತಿಟ್ಟು(ಬಡಾ ಬಡಗು).ಸಾಮಾನ್ಯವಾಗಿ ಉತ್ತರ-ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತರದ ತಿಟ್ಟು ಬಯಲಾಟ ಕಂಡುಬಂದರೆ,ಉಡುಪಿಯಲ್ಲಿ ಬಡಗುತಿಟ್ಟು,ದಕ್ಷಿಣಕನ್ನಡ ಕಾಸರಗೋಡು ಜಿಲ್ಲೆಗಳಲ್ಲಿ ತೆಂಕುತಿಟ್ಟು ಶೈಲಿಯ ಬಯಲಾಟಗಳನ್ನು ಕಾಣಬಹುದಾಗಿದೆ.ವಿನ್ಯಾಸ,ನೃತ್ಯದ ಶೈಲಿ ಭಾಗವತಿಕೆ ಹಾಗೂ ಹಿಮ್ಮೇಳಗಳ ಕಂಡು ಬರುವ ವ್ಯತ್ಯಾಸಗಳ ಆಧಾರದ ಮೇಲೆ ಈ ವಿಂಗಡಣೆಯನ್ನು ಮಾಡಲಾಗಿದೆಯೇ ಹೊರತು,ಯಕ್ಷಗಾನದ ಮೂಲತತ್ವ ಆಶಯಗಳು 3 ಶೈಲಿಯಲ್ಲಿಯೂ ಒಂದೆಯೇ ಆಗಿವೆ.
ಭಾರತೀಯ ಸಂಧರ್ಭದಲ್ಲಿ ಎಲ್ಲ ಕಲೆಗಳಿಗೂ ಧಾರ್ಮಿಕ ಹಿನ್ನಲೆ ಇರುವುದನ್ನು ಸಾಮಾನ್ಯವಾಗಿ ಕಾಣುತ್ತೇವಾದರೂ,ಧಾರ್ಮಿಕ ಚೌಕಟ್ಟಿನಲ್ಲೇ ನಿಂತುಕೊಳ್ಳುವುದಿಲ್ಲ.ಅದನ್ನು ಮೀರಿ ಮನರಂಜನೆ,ಕುತೂಹಲ,ಆಸಕ್ತಿಗಳು ಕಲೆಯ ಒಳಗಡೆ ಸಾಮಥ್ರ್ಯಾನುಸಾರ ಸೇರಿಕೊಳ್ಳುತ್ತವೆ.ಇದನ್ನು ಒಟ್ಟಾಗಿ ಕಲಾತ್ಮಕ ದೃಷ್ಟಿಕೋನವೆನ್ನಬಹುದು.ಮಾನವನ ಸೃಜನಶೀಲ ಮನಸ್ಸು ತನ್ನ ಪರಿಸರದ ಕಲೆಯೊಂದರ ಜೀವಂತ ಪ್ರಕ್ರೀಯೆಯ ಜೊತೆಗೆ ಅನುಸಂಧಾನವನ್ನು ಮಾಡುತ್ತಿರುತ್ತದೆ.ಆಗೆಲ್ಲಾ ಜೀವಂತವಾದ ಕಲೆಗಳು ನಿರಂತರವಾಗಿ ಪರಿವರ್ತನೆಗೊಳ್ಳುತ್ತಾ ಹೋಗುತ್ತವೆ.ಯಕ್ಷಗಾನದ ಮಟ್ಟಿಗೆ ಇದು ನಿಜ.ಹೊಸ ಹೊಸವಾದ  ನಿರಂತರ ಪ್ರಯೋಗಗಳ ಜೊತೆಗೆ ಅನಿವಾರ್ಯತೆಗೋ,ಆಧುನಿಕತೆಯ ನೂತನತೆಗೊ ಅಲ್ಲಲ್ಲಿ ಅಲ್ಪ-ಸ್ವಲ್ಪ ಬದಲಾವಣೆಯನ್ನು ಕಂಡಿದೆ.ಹಿಂದೆ 'ದೊಂಬಿ'ಯ ಬೆಳಕಲ್ಲಿ ಇದ್ದ ಆಟ ಇಂದು 'ದಿಗ್ಭೆಳ'ಕಾಗಿದೆ.ಹಿಂದಿದ್ದ 'ಹೊಳೆ ಮುಂಡಿಗೆ' ಎಂಬ ಹಗುರ ಮರದಿಂದ ಮಾಡುತ್ತಿದ್ದ ವೇಷ ಇದೀಗ  thermocol ಗೆ ಬಂದಿದೆ. ರಂಗಸ್ಥಳದ ಮಧ್ಯದಿಂದ ಇದ್ದ ಪ್ರವೇಶ ಎಡಬಲಕ್ಕೆ ತಿರುಗಿದೆ.ಹೆಚ್ಚಾಗಿ ಪೌರಾಣಿಕ ಕಥೆಯನ್ನೇ ಆಧರಿಸಿ ಬಯಲಾಟವಿರುವುದು ಸಾಮಾನ್ಯವಾದರೂ,ಇತ್ತೀಚಿಗೆ ಪಾಂಡಿತ್ಯ ಹಾಗೂ ನವ ಬರಹಗಾರರ ಕಥೆಗಳೂ ಪ್ರಸಂಗಗಳಾಗಿ ರಂಗಸ್ಥಳದಲ್ಲಿ ಮಿಂಚಿ ಹೊಸ ಆಯಾಮ ಪಡೆಯುತ್ತಿವೆ. ಆದರೂ ನಗರಪ್ರದೇಶದಲ್ಲಿರುವ ಜನರು ಇಂದಿನ ವಿದೇಶಿ ಸಂಸ್ಕ್ರತಿಯ ಕಲೆಗಳನ್ನೆ ನೋಡುವ,ಮಾಡುವ ಪ್ರವೃತ್ತಿ ಹೊಂದಿದ್ದು,ಅದು ನಮಗೆ ಅರ್ಥವಾಗಲ್ಲಪ್ಪ ಎಂಬ ಉದ್ಗಾರ ತೆಗೆಯುತ್ತಾರೆ.ಎಲ್ಲೋ ದೂರದ ದೇಶದ ಸಂಸ್ಕ್ರತಿಯ ಕಲೆಯನ್ನು ಕಲಿಯುವ ನಾವು ಪಕ್ಕದಲ್ಲೇ ಇರುವುದನ್ನ ಮರೆಯುತ್ತಿದ್ದೆವೆ.ಇದು ನಮ್ಮ ದೌರ್ಭಾಗ್ಯ ಅಲ್ಲದೆ ಮತ್ತೇನು ಅಲ್ವಾ!!? ಇದು ಯಕ್ಷಗಾನವೆಂಬ ಕಲೆಗೆ ಮಾತ್ರಾ ಸಂಬಂದಿಸಿದ್ದಲ್ಲ.,ಸಾಮಾನ್ಯವಾಗಿ ಹಳ್ಳಿ-ಹಳ್ಳಿಗಳಲ್ಲಿ ಅನಾದಿಕಾಲದಿಂದ ಬಂದಿರುವ ಎಲ್ಲಾ ಕಲೆಗೂ ನಾವು ಕೊಡುತ್ತಿರುವ,ನಾವು ಉಳಿಸುತ್ತಿರುವ ಬೆಲೆ. ಅದೇನೆ ಇರಲಿ ಕರಾವಳಿ ಕಡೆಯ ಈ ಕಲೆಗೆ ಸರಿ-ಸಮಾನವಾದ ಕಲೆ ಬೇರೊಂದಿಲ್ಲ ಎಂಬುದಂತೂ ನಿಜ.
ಇಂತಹ ಅಪೂರ್ವವಾದ ಕಲೆ ಹಿರಿಯರಿಂದ ನಮ್ಮಲ್ಲಿಗೆ ಅನೂಚಾನವಾಗಿ ಬಂದಿದೆ.ನಮ್ಮ ಸಂಸ್ಕ್ರತಿ ಪ್ರಜ್ಞೆ ಮತ್ತು ಪುರಾಣ ಜ್ಞಾನ ಹೆಚ್ಚಿಸುವ ಬಯಲಾಟದ ಮೂಲ ಪ್ರಕಾರವನ್ನ ಪರಿಪಕ್ವವಾಗಿ ಎಲ್ಲರೂ ಗೌರವಿಸುವಂತೆ ಮಾಡಿದ ಯಕ್ಷಗಾನವನ್ನು ಉಳಿಸಿ ಅದರ ಅಂದಚಂದ ಹಾಳಾಗದಂತೆ ಕಾಪಾಡಿಕೊಳ್ಳುದು ನಮ್ಮೆಲ್ಲರ ಹೊಣೆ.ಇದು ಇತ್ತೀಚಿಗೆ ವ್ಯಾಪಾರಿಕಣದತ್ತ ಸಾಗುತ್ತಿದ್ದು ಅದನ್ನು ಮೂಲಸ್ವರೂಪದಲ್ಲೆ  ಉಳಿಸಿ ಬೆಳೆಸುವುದು ಕಲಾವಿದರ ಹೊಣೆ ಕೂಡ ಆಗಿದೆ.ಕಲಾಸಕ್ತರು,ಕಲಾವಿದರು ತಪ್ಪಿದಾಗ ನಿಷ್ಠುರವಾಗಿ  ಸರಿಪಡಿಸುವ ಅವಶ್ಯಕತೆ ಎಂದಿಗಿಂತ ಈಗಿದೆ.ಆದಷ್ಟು ಅಭಿರುಚಿಯನ್ನು ಹಾಳು ಮಾಡದೆ ಕಲೆಯ ಮೂಲ ಅಂಶಗಳನ್ನ ತಲುಪಿಸುವ ಹೊಣೆ ಕಲಾವಿದರ ಮೇಲೂ ಇದೆ.ಅವೆಲ್ಲವನ್ನು ನಾವು ಗಮನದಲ್ಲಿಟ್ಟುಕೊಂಡು ನಮ್ಮ ಕಲೆಯನ್ನು ಗೌರವಿಸಬೇಕು,ಬೆಳೆಸಬೇಕಾಗಿದೆ.ಹಿಂದೆ ಶಿವರಾಮ ಕಾರಂತರು,ಜಾನಪದೀಯ ಕಲೆ ಯಕ್ಷಗಾನದಿಂದ ಪ್ರಭಾವಿತರಾಗಿ ಅದನ್ನು ಉಳಿಸಿ ಬೆಳೆಸುವಲ್ಲಿ ಪರಿಶ್ರಮ ವಹಿಸಿದ್ದರು. ಇಂದಿನ ಸಿನಿಮಾ,ಸುಗಮ ಸಂಗೀತಾ,ಟಿ.ವಿ,ಮತ್ತು ಶಾಸ್ತ್ರೀಯ ಎನಿಸಿಕೊಂಡ ಕಲೆಗಳ ಹಾವಳಿಯಿಂದ ನಮ್ಮ ಜಾನಪದೀಯ ಕಲೆಗಳು ದೊಡ್ಡ ಹೊಡೆತ ಅನುಭವಿಸುತ್ತಿವೆ.ಕರಾವಳಿಯ ಕಡೆ ಲಕ್ಷಾಂತರ ಅಭಿಮಾನಿಗಳಿರುವ ಯಕ್ಷಗಾನಕ್ಕೂ ಈ ಹೊಡೆತ ತಪ್ಪಿದಲ್ಲ..ಆದರೆ ಅದಕ್ಕೆ ಅಸ್ಪದಕೊಡದೆ ಕಲೆಯನ್ನ ಬೆಳೆಸಬೇಕು. ಅದರ ಹಮ್ಮೆಯನ್ನು ಹೆಮ್ಮರವಾಗಿಸಬೇಕು. ಅದರಲ್ಲಿರುವ ಕಲಾ ಸೌಂದರ್ಯವನ್ನು ಸವಿಯಬೇಕು ಏನಂತೀರಾ???



Sunday, 11 January 2015

ಕನ್ನಡಕ್ಕಾಗಿ ಕೈ ಎತ್ತೋಣ, ಕನ್ನಡಕ್ಕಾಗಿ ಚಿಂತಿಸೋಣ...

'ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೇ ಕನ್ನಡ ಮಣ್ಣನ್ ಮೆಟ್ಟಬೇಕು'


ಎಂಬ ಅಣ್ಣಾವ್ರ ಹಾಡು ಇಂದಿಗೂ ಕೇಳಿದೊಡನೆ ಮೈಯಲ್ಲಿ ರೋಮಾಂಚನ ವಾಗುತ್ತದೆ. ಅಷ್ಟೆ ಏಕೆ ಸುಮಾರು 10ನೇ ಶತಮಾನದಲ್ಲಿಯೇ ಬನವಾಸಿ ಕರ್ನಾಟಕವೆಂದು, ಪ್ರಪ್ರಥಮ ಕನ್ನಡ ಸಾಮ್ರಾಜ್ಯವೆಂದು ಖ್ಯಾತವಾಗಿದ್ದು, ಬನವಾಸಿಯ ಬಗ್ಗೆ ಆದಿಕವಿ ಪಂಪ ಅದಾಗಲೇ, ಅಂಕುಶದಿಂದ ತಿವಿದರೂ ನೆನೆವುದೆನ್ನ ಮನಂ ಬನವಾಸಿ ದೇಶಮಮ್, ಹುಟ್ಟಿದರೆ ಬನವಾಸಿಯಲ್ಲಿ ಹುಟ್ಟಬೇಕು ಅದು ಸ್ವರ್ಗದ ನಂದನ, ಮನುಷ್ಯನಾಗಿ ಹುಟ್ಟದಿದ್ದರೂ, ದುಂಬಿಯಾಗಿ ಅಥವಾ ಕೋಗಿಲೆಯಾಗಿ ಹುಟ್ಟಬೇಕು ಎಂದಿದ್ದ... ಇದು  ಕರ್ನಾಟಕಕ್ಕಿರುವ ಶಕ್ತಿ ಎನಿಸದೇ ಇರಲಾರದು. ಅಲ್ಲದೇ...
ಕರ್ನಾಟಕ, ಕನ್ನಡದ ಆ ವೈಶಾಲ್ಯತೆ ಅಂದಿನಿಂದ-ಇಂದಿನವರೆಗೂ ಹಾಗೇ ಉಳಿಸಿಕೊಂಡಿದ್ದು ಇಂದಿಗೂ ಅಮರವಾಗಿದೆ. ಅದು ಕನ್ನಡದ ಪವರ್...ಕರ್ನಾಟಕದ ಖದರ್......ಇಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಇನ್ನೇಳು ಜನ್ಮವಿದ್ದರೆ ಇಲ್ಲೆ ಹುಟ್ಟಬೇಕು ಎಂಬ ಮಮಕಾರ ಬರದೆ ಇರದು... ಹಿಂದಿನ ಹಿರಿಯ ರಾಜಮನೆತನದಿಂದ ಹಿಡಿದು ಇಂದಿನ ವಿಜ್ಞಾನ ಯುಗದ ಮಂಗಳನ ಅಂಗಳದ ಯಶಸ್ವಿ ಪಯಣದವರೆಗೂ ಕರ್ನಾಟಕದವರ ಗರಿಮೆ, ಹಿರಿಮೆ, ಸಾಧನೆ ಅಪಾರ..........

ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಈಗಿನ ಕರ್ನಾಟಕವು ಹಲವು ಸಾಮಂತರ ಹಾಗೂ ರಾಜರುಗಳ ನಡುವೆ ಹಂಚಿ ಹೋಗಿತ್ತು. ಇದಾದ ನಂತರ ಭಾರತಕ್ಕೆ ಬಂದ ಬ್ರಿಟಿಷರ ಕಾಲದಲ್ಲಿ ಆಡಳಿತದ ಅನೂಕೂಲಕ್ಕಾಗಿ 20 ವಿವಿಧ ಸಂಸ್ಥಾನಗಳಲ್ಲಿ ಕರ್ನಾಟಕ ಹಂಚಿ ಹೋಯಿತು, ಇದರಲ್ಲಿ ಪ್ರಮುಖವಾಗಿ ಮೈಸೂರು ಸಂಸ್ಥಾನ, ನಿಜಾಮರ ಸಂಸ್ಥಾನ, ಬಾಂಬೆ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ, ಹಾಗೂ ಕೊಡಗು ಪ್ರಾಂತ್ಯಗಳು ಪ್ರಮುಖವಾಗಿದ್ದವು. ಆಗ ಮೈಸೂರು ಪ್ರಾಂತ್ಯದಿಂದ ಮೂರನೇ ಎರಡು ಭಾಗದಷ್ಟು ಕನ್ನಡಿಗರು ಹೊರಗಿದ್ದರು. ಬಾಂಬೆ ಪ್ರಾಂತ್ಯದಲ್ಲಿ
ಮರಾಠಿ, ಮದ್ರಾಸ್‍ನಲ್ಲಿ ತಮಿಳು ಆಡಳಿತ ಭಾಷೆಯಾಗಿ ಮೆರೆಯುತ್ತಿತ್ತು. ಇವೆಲ್ಲದರ ನಡುವೆ ಕನ್ನಡ ಅನಾಥವಾಗಿತ್ತು, ಆಗಲೇ ಕನ್ನಡಿಗರಿಗೆ ಅನಿಸಿತ್ತು ನಾವು ಪರಕೀಯರಂತೆ ಬಾಳುತ್ತ್ತಿದ್ದೇವೆ. ನಮ್ಮ ಮೇಲೆ ಅನ್ಯಭಾಷೆಯ ಹೇರಿಕೆಯಾಗುತ್ತಿದೆ.

ನಮಗೂ ಒಂದು ರಾಜ್ಯ ವಿರಬೇಕು, ಎಲ್ಲಾ ಹಕ್ಕುಗಳು ದೊರೆಯುವಂತಿರಬೇಕು ಎಂದು  ಈ ಹಂಬಲ ಎಲ್ಲರ ಮನದಲ್ಲಿ ಮನೆ ಮಾಡಿತು ಇದೇ ಕರ್ನಾಟಕದ ಏಕೀಕರಣಕ್ಕೆ ನಾಂದಿಯಾಯಿತು.
ನಾಡಿನ ಹಿರಿಯ ಸಾಹಿತಿಗಳು, ಪತ್ರಕರ್ತರು, ಮಕ್ಕಳು, ವಿದ್ಯಾರ್ಥಿಗಳು, ಹಿರಿಯ ಮಹನೀಯರು,ಮಹಿಳೆಯರು, ಎಲ್ಲರ ಹೋರಾಟದಿಂದ 1956 ನವೆಂಬರ್ 1 ರಂದು ಹರಿದು ಹಂಚಿದ್ದಪ್ರಾಂತ್ಯಗಳೆಲ್ಲವನ್ನು ಒಂದಾಗಿಸಿಏಕೀಕರಣಗೊಳಿಸಲಾಯಿತು, ಅಂದಿನ ಈ ದಿನವನ್ನೇ ಕನ್ನಡ ರಾಜ್ಯೋತ್ಸವದಿನ ಇಂದುಆಚರಿಸಲಾಗುತ್ತಿದೆ. ಹಾಗೆಯೇ ಕೇವಲ ನವೆಂಬರ್‍ಮಾತ್ರವಲ್ಲದೇ ಇಡೀ ನವೆಂಬರ್ ತಿಂಗಳನ್ನ
ರಾಜ್ಯ್ಸೋತ್ಸವ ತಿಂಗಳೆಂದು ಕೆಲವು ಕಡೆಆಚರಿಸುತ್ತಿರುವುದು ಸಂತೋಷದ ವಿಚಾರ.ಆದರೆ ಈ ನಮ್ಮ ಸಂಭ್ರಮ ಸಡಗರ ನವೆಂಬರ್‍ತಿಂಗಳಿಗೆ ಮಾತ್ರ ಯಾಕೆ ಸೀಮಿತವಾಗಿಟ್ಟುಕೊಳ್ಳಬೇಕು.ವರ್ಷಪೂರ್ತಿ ಆಚರಿಸಿದರೇನಾಗುತ್ತದೆ ? ನಾಡು ನುಡಿಯನ್ನ ಸಂಪದ್ಭರಿತ, ಶ್ರೀಮಂತಗೊಳಿಸುವಬಗೆ ಹೇಗೆ? ನಾವು ಎದುರಿಸುತ್ತಿರುವ ಸಮಸ್ಯೆಎನು? ನಾವು ಕನ್ನಡಿಗರಾಗಿ, ಮಾಡಬೇಕಾದಸಂಗತಿಗಳೆನು ಎಂಬುದರ ಕುರಿತು ಗಂಭೀರ
ಸ್ವರೂಪದ ಚರ್ಚೆ, ವಿಚಾರ ಸಮಾಲೋಚನೆಚಿಂತನೆಗಳನ್ನ ಮಾಡಬೇಕಾಗಿರುವುದು
ನಮ್ಮ ಕರ್ತವ್ಯವಾಗಿದೆ. ರಾಜ್ಯೋತ್ಸವವೆನ್ನುವುದುಒಂದು ವಾರ್ಷಿಕ ಜಾತ್ರೆಯಾಗಿರುವುದು ವಿಪರ್ಯಾಸ.ಅಂತೆಯೇ ನವೆಂಬರ್ ತಿಂಗಳಾದ ಬಳಿಕ ಕನ್ನಡ
ನಾಡು-ನುಡಿಯ ಬಗ್ಗೆ ನಾವ್ಯಾರು ತಲೆಕೆಡಿಸಿಕೊಳ್ಳಲುಹೋಗದಿರುವುದು ವಿಷಾದಕರ ಅದು ನಮ್ಮ
ದುರದೃಷ್ಟವೇ ಹೌದು. ಹಿಂದೆ ಅನ್ಯಭಾಷೆಯಿಂದಕನ್ನಡವನ್ನ ರಕ್ಷಿಸಬೇಕೆಂಬ ದೆಸೆಯಿಂದ
ಕರ್ನಾಟಕ ಏಕೀಕರಣ ಮಾಡಿದರು.ಆದರೆ ಇಂದು ನಾವು ಅದನ್ನ
ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಿದ್ದೇವೆ.ಎಂಬುದು ನಮ್ಮ ಮುಂದಿರುವ
ಪ್ರಶ್ನೆಯಾಗಿದೆ. ಈ ಕುರಿತುಪ್ರಾಮಾಣಿಕವಾಗಿ ಆಲೋಚಿಸಿದರೆ,
ಹೊಳೆಯವ ಸತ್ಯಸಂಗತಿಯೆಂದರೆ ಕನ್ನಡದಅಳಿವಿಗೆ ಕನ್ನಡ ಮೂಲೆಗುಂಪಾಗುತ್ತಿರುವುದಕ್ಕೆ
ಕನ್ನಡಿಗರೇ ಕಾರಣ. ಕನ್ನಡಿಗರ ಸಂಖ್ಯೆ ಒಂದು ಸಣ್ಣ ಸಂಖ್ಯೆಯಲ್ಲ. ಅದು ಐದುಕೋಟಿಯಿಂದ
6ಕೋಟಿಗೆ ಹೆಜ್ಜೆಯಿಟ್ಟಿರುವ ಒಂದು ದೊಡ್ಡಬೆಟ್ಟ. ಇವರಿಷ್ಟು ಜನ ಮನಸ್ಸು ಮಾಡಿದರೆ,
ಅದೇನೋ ಸಾಧನೆಯಾಗುತ್ತದೆಯೇ ಎಂಬುದೂಸಹ ಕಲ್ಪನೆಗೆ ನಿಲುಕದು. ಆದರೆ ಇಂದಿನ ಜನ
ನಮ್ಮ ಭಾಷೆಯನ್ನು ಬಿಟ್ಟು ಅನ್ಯಭಾಷೆಗೆಮಾರುಹೋಗುತ್ತಿರುವುದು ವಿಪರ್ಯಾಸವಾಗಿದೆ.
ಅದರಲ್ಲೂ ಬೆಂಗಳೂರಿನಲ್ಲಿವಾಸಿಸುವ ಕನ್ನಡಿಗರು ಅತ್ತ ಕನ್ನಡವೂಅಲ್ಲದೆ ಇತ್ತ ಇಂಗ್ಲೀಷೂ ಅಲ್ಲದೆ ಕಂಗ್ಲಿಷ್‍ನಮೊರೆ ಹೋಗುತ್ತಿರುವುದುಯಾವ  ಪುರುಷಾರ್ಥಕ್ಕಾಗಿಯೋ ತಿಳಿಯುತ್ತಿಲ್ಲ....
ನಮ್ಮ ಭಾಷೆಗೆ ಮತ್ತು ನಮಗೆ ಒಂದೂವರೆ ಸಾವಿರ ವರ್ಷಗಳ ಭವ್ಯ ಇತಿಹಾಸವಿದ್ದರೂ ನಮ್ಮವರಿಗೆ ನಮ್ಮ ನಾಡು-ನುಡಿಯ ಬಗ್ಗೆ ಅಭಿಮಾನ. ಕೇವಲ ನವೆಂಬರ್ ಮಾಸಕ್ಕೆ ಮಾತ್ರ ಸೀಮಿತವಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಇಂದಿಗೂ ಸಹ ಕನ್ನಡ ಮತ್ತು ಕರ್ನಾಟಕವನ್ನ್ನು ಹೆಚ್ಚಾಗಿ ಮೆಚ್ಚುವವರು ಕನ್ನಡಿಗರೇ ಎಂದು ಹೇಳಲಾಗುತ್ತದೆ. ಅದನ್ನು ಸರಿಯಾಗಿ ಗಮನಿಸಿದರೆ ಹೌದು ಎನಿಸುತ್ತದೆ. ಎಲ್ಲೋ ದೂರದಲ್ಲಿದ್ದ ಕನ್ನಡಿಗ ನಾನು ಕರ್ನಾಟಕದವನು, ಕನ್ನಡದವನು ಎಂದು ದಿನಕ್ಕೊಮ್ಮೆಯಾದರೂ ಎಣಿಸಿಕೊಳ್ಳುತ್ತಾನಂತೆ. ಆದರೆ ಇಲ್ಲೇ ಇರುವ ನಾವುಗಳು ಇದೆಲ್ಲವನ್ನು ಮರೆತು ಅನ್ಯರಂತೆ ವರ್ತಿಸುತ್ತಾ ಕಾಲಹರಣ ಮಾಡುತ್ತೇವೆ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಬಗ್ಗೆ ಕನ್ನಡೇತರರು ವ್ಯಕ್ತಪಡಿಸುವುದಕ್ಕಿಂತ ಜಾಸ್ತಿ ಪ್ರೀತಿ ನಾವು ಬೆಳೆಸಿಕೊಳ್ಳಬೇಕು, ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ನಮ್ಮ ಸ್ವತ್ತು. ಅದನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮ ದಾಗಬೇಕು. ಕನ್ನಡವನ್ನು ಬೆಳೆಸಲು ಕನ್ನಡದ ಮೇಲಿನ ಪ್ರೀತಿ ಸಾಕು,ಹೋರಾಟದ ಅಗತ್ಯವಿಲ್ಲ.
ನಮ್ಮ ಸ್ವಂತಿಕೆ ಯಾವಾಗಲೂ ನಮ್ಮ ಕೈಯಲ್ಲಿರ ಬೇಕು. ಕೇವಲ ನವೆಂಬರ್‍ತಿಂಗಳಿಗೆ ಮಾತ್ರ ಸೀಮಿತವಾಗಿರದೇ ಇಡೀ ವರ್ಷ ಕನ್ನಡದ ಹಬ್ಬವನ್ನು ಆಚರಿಸಬೇಕು ನಮಗೆ ನಮ್ಮದೇ ಆದ ಸಂಸ್ಕ್ರತಿ ಇದ್ದು ಅದನ್ನು ಬೆಳೆಸಬೇಕು ಈಗಾಗಲೇ ಹಲವಾರು ನಡಿಗೆಯಲ್ಲಿ ನಾವೇ ಪ್ರಮುಖರಾಗಿದ್ದು, ಇನ್ನೂ ಹೊಸ-ಹೊಸ ಸಾಧನೆ ಸಾಧಿಸುವ ಛಲನಮ್ಮದಾಗಬೇಕು. ನಾವು ಮೊದಲು ಕನ್ನಡಿಗರಾಗಿರಬೇಕು ಹಾಗೇ ಕನ್ನಡದ ಕಾವಲಿಗರು ಆಗಬೇಕು. ಹಾಗಂತ ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರ ಭಾಷೆಗಳನ್ನು ದ್ವೇಷಿಸಬೇಕೆಂಬ ತಪ್ಪುಕಲ್ಪನೆ ಖಂಡಿತ ಸರಿಯಲ್ಲ. ಭಾರತದಂತಹ ವಿಶಾಲ ಬಾಹುಳ್ಯವಿರುವ ದೇಶದಲ್ಲಿ ರಾಜ್ಯಕ್ಕೊಂದು, ಜಿಲ್ಲೆಗೊಂದು ಭಾಷೆಗಳಿವೆ. ಹಲವು ಹೂಗಳ ಸುಂದರ ತೋಟವಿದ್ದಂತೆ, ಹಲವು ಭಾಷೆಗಳ ವೈವಿಧ್ಯಪೂರ್ಣ ದೇಶ ನಮ್ಮದು. ಕನ್ನಡದಲ್ಲೇ ಗಮನಿಸಿದರೆ ಹಲವಾರು ಬಗೆಗಳಿವೆ. ಬೆಂಗಳೂರಿನಲ್ಲಿ ಕಂಗ್ಲೀಷ್ ಕನ್ನಡ, ಮೈಸೂರಿನಲ್ಲಿ ಮೆಲುದನಿ ಕನ್ನಡ, ಧಾರಾವಾಡದಲ್ಲಿ ಗಂಡು ಕನ್ನಡ, ದಕ್ಷಿಣ ಕನ್ನಡದಲ್ಲಿ ಗ್ರಾಂಥಿಕ ಕನ್ನಡ, ಕಾಸರಗೋಡಿನಲ್ಲಿ ಮಲೆಯಾಳಿ ಕನ್ನಡ,   ಹೈದರಾಬಾದ್ ಕರ್ನಾಟಕದಲ್ಲಿ ಉರ್ದುಮಿಶ್ರಿತ ಕನ್ನಡ, ಹೀಗೆ ಹತ್ತು ಹಲವು ಭಾಷೆಗಳ ವೈವಿಧ್ಯದ ಬೀಡು ನಮ್ಮ ಕರ್ನಾಟಕ. ಎಲ್ಲವೂ ನಮ್ಮಮ್ಮನವಿವಿಧ ರೂಪಗಳು ನಾವು ಅಮ್ಮನ ಮಕ್ಕಳು. ಕರ್ನಾಟಕದ ಮಾತೆಯ “ಸಿರಿ” ಇದು  ಕೇವಲ ನಾನು ನಮ್ಮದು ಎಂದು ಸಂಘರ್ಷಕ್ಕಿಳಿಯುವ ಬದಲು ಸಾಮರಸ್ಯದಿಂದ ನಮ್ಮದು ಎಂದು ಒಗ್ಗಟ್ಟಿನಲ್ಲಿ ಬೆಳೆಯೋಣ. ಪ್ರತಿಮನೆ ಮನದಲ್ಲೂ ಕನ್ನಡದ ಕಂಪನ್ನ ಪಸರಿಸಿ, ರಾಜ್ಯದ ಹಿತರಕ್ಷಣೆಯ ಜೊತೆಗೆ ರಾಷ್ಟ್ರದ ಹಿತರಕ್ಷಣೆಯನ್ನು ಕಾಪಾಡೋಣ.
ಕನ್ನಡಕ್ಕಾಗಿ ಕೈಯೆತ್ತೋಣ......
ಕನ್ನಡಕ್ಕಾಗಿ ಚಿಂತಿಸೋಣ.......
ಹೊಸ ಹೊಸ ಆಯಾಮಗಳ ಜೊತೆ ಕಲೆ ಸಂಸ್ಕøತಿ, ಸಾಹಿತ್ಯ, ಸಂಪರ್ಕದಲ್ಲಿ ಕನ್ನಡವನ್ನೇ ಎತ್ತಿ ಹಿಡಿಯೋಣ. ಪ್ರತಿ ದಿನವೂ ರಾಜ್ಯದಲ್ಲಿ ಕನ್ನಡ ಉತ್ಸವ ಮಾಡೋಣ....