Friday, 5 May 2017

ಗೋಲ್ಡನ್ ಸಿಂಗರ್ ಸೋನುನಿಗಮ್...


ಹೌದು... ನಿಜಕ್ಕೂ ಆತ ಗೋಲ್ಡನ್ ಸಿಂಗರ್...
ಖ್ಯಾತ ಗಾಯಕ ಸ್ವರಮಾಂತ್ರಿಕ ಎಸ್.ಪಿ.ಬಿ ಹೇಳಿದಂತೆ ಆತನದ್ದು ದೇವರ ಸ್ವರ... ಅವನಿಗದು ದೇವರು ಕೊಟ್ಟ ವರ...


       ಆತನೊಬ್ಬ ಗಾಯಕ, ನಟ, ಸಂಗೀತ ನಿರ್ದೇಶಕ, ಟೆಲಿವಿಷನ್ ಪ್ರಸೆಂಟರ್, ರೇಡಿಯೋ ಜಾಕಿ, ಕಾರ್ಯಕ್ರಮ ನಿರೂಪಕ... ಅಬ್ಬಾಬ್ಬಾ!.. ಪಟ್ಟಿ ಮಾಡಿದರೆ ಎಲ್ಲದರಲ್ಲೂ ಕೈ ಆಡಿಸಿ ಸೈ ಎನಿಸಿಕೊಂಡ ಮಹಾನ್ ಪ್ರತಿಭಾವಂತ. ಹಿಂದಿ, ಪಂಜಾಬಿ, ಕನ್ನಡ, ಬಂಗಾಳಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಹೀಗೆ ಹತ್ತು ಹಲವು ಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿರುವ ಹಿನ್ನೆಲೆ ಮಾಂತ್ರಿಕ. ಅನೇಕ ವರ್ಷಗಳ ಹಿಂದೆಯೇ ಕನ್ನಡಕ್ಕೆ ಬಂದು, ತನ್ನ ಗಾನ ಸುಧೆಯನ್ನು ಹರಿಬಿಟ್ಟಿದ್ದರೂ, ಅಪ್ಪಟ ಮನೆ ಮನೆಯ-ಮನಮನದ ಹುಡುಗ ಆಗಿ ಹಾಡಿನ ಮಳೆಯಲ್ಲಿ ಪ್ರತಿ ಕನ್ನಡಿಗನ ಸೋನ ಆಗಿದ್ದು, ‘ಮುಂಗಾರು ಮಳೆ’ ಚಿತ್ರದ ‘ಅನಿಸುತಿದೆ ಯಾಕೋ ಇಂದು’ ಎಂದು ಹಾಡಿದ ಮೇಲೆಯೇ... ಅವನೇ ನನ್ನ ನೆಚ್ಚಿನ, ನನ್ನ ಜೀವನದ ಅತ್ಯಮೂಲ್ಯವಾದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬರಾದ, ನನ್ನ ಇಂದಿನ ಹಾಡುಗಾರಿಕೆಗೆ, ಸಂಗೀತಕ್ಕೆÉ ಸ್ಫೂರ್ತಿಯ ಚಿಲುಮೆಯಾದ ಗಾಯಕ ಸೋನು ನಿಗಮ್.

ಚಿಕ್ಕಂದಿನಿಂದಲೂ ಕಾರ್ಯಕ್ರಮದಲ್ಲಿ, ಟಿ.ವಿ ಶೋಗಳಲ್ಲಿ ಹಾಡುತ್ತಿದ್ದ ಸೋನು ಕೇವಲ ಹಾಡುಗಾರಿಕೆಯಲ್ಲಿ ಮಾತ್ರವಲ್ಲದೇ ಬಗೆ ಬಗೆಯ ಕೇಶವಿನ್ಯಾಸ, ಡ್ರೆಸ್‍ಕೋಡ್, ಇತ್ಯಾದಿಗಳಲ್ಲಿ ಸದಾ ಸುದ್ದಿ ಮಾಡುತ್ತಲೇ ಬಂದವರು. ಅದರಂತೆ ಮೊನ್ನೆ ಮೊನ್ನೆಯೂ ಹೊಸತೊಂದು ನಡೆ-ನುಡಿಯಿಂದ ಸುದ್ದಿಯಾದರು ಎನ್ನುವ ವಿಶೇಷವೇ ಈ ಅಂಕಣ ಬರೆಯಲು ಕಾರಣ.
‘ದೇವ್ರು ಎಲ್ಲರÀನ್ನು ಹರಸ್ತಾನೆ, ನಾನು ಮುಸ್ಲಿಂ ಅಲ್ಲ. ಮುಂಜಾನೆ ಕೇಳುವ ಅಜಾನ್ (ದಿನಕ್ಕೆ 5 ಬಾರಿ ಪ್ರಾರ್ಥನೆ ಮಾಡುವುದಕ್ಕಾಗಿ ಇಸ್ಲಾಂ ಧರ್ಮೀಯರನ್ನು ಎಚ್ಚರಿಸುವ ಮಸೀದಿಯ ಕರೆ) ಯಿಂದಾಗಿ ಪ್ರತಿನಿತ್ಯ ಬೇಗ ಎಚ್ಚರಗೊಳ್ಳುವಂತಾಗಿದೆ. ಭಾರತದಲ್ಲಿ ಇಂತಹ ಬಲವಂತವಾಗಿ ಧಾರ್ಮಿಕತÉ ಹೇರುವ ಪರಿಪಾಠ ಕೊನೆಗೊಳ್ಳುವುದು ಎಂದು’!!.

‘ಇಸ್ಲಾಂ ಧರ್ಮ ಸ್ಥಾಪನೆಯಾದಾಗ ವಿದ್ಯುತ್‍ಚ್ಚಕ್ತಿಯನ್ನು ಇನ್ನೂ ಕಂಡು ಹಿಡಿದಿರಲಿಲ್ಲ. ಎಡಿಸನ್ ಅವರ ಸಂಶೋಧನೆಯ ಬಳಿಕ ನಾನೇಕೆ ಈ ಧ್ವನಿ ಕೇಳಬೇಕು’...

‘ನಾಸ್ತಿಕರನ್ನು ಎಬ್ಬಿಸುವುದಕ್ಕಾಗಿ ವಿದ್ಯುತ್‍ಚ್ಚಕ್ತಿ ಬಳಸುವ ಯಾವುದೇ ದೇವಸ್ಥಾನ ಅಥವಾ ಗುರುಧ್ವಾರಗಳನ್ನು ನಾನು ನಂಬುವುದಿಲ್ಲ... ಯಾಕೆ ನಂಬಬೇಕು!?, ನಿಜವಲ್ಲವೇ.!?
ಹೀಗೆ ಸರಣಿ ಟ್ವೀಟ್‍ಗಳನ್ನು ಮಾಡುವ ಮೂಲಕ ದೇಶದ ಗಮನ ಸೆಳೆದ ದಿಟ್ಟತನ ಮೆರೆದ ಗಾಯಕನ ಈ ಸಮಾಚಾರವನ್ನು ಬರೆಯಬೇಕಿನಿಸಿತು ಅದಕ್ಕಾಗಿ ಬರೆಯುತಿರುವೆ ಅದರ ಜೊತೆ ಅವರ ಪೂರ್ಣ ಜೀವನದ ಸಣ್ಣ ಪರಿಚಯವೂ ಇದರಲ್ಲಿಡುವ ಪ್ರಯತ್ನ ಮಾಡಿರುವೆ. 

ಈ ಮೇಲಿನ ಟ್ವೀಟ್ ಹೊರಬಿದ್ದಾಗ ನನ್ನೊಳಗೇನು ಗೊಂದಲವಾಗಲಿಲ್ಲ, ಕೋಮುಗಲಭೆಗೆ ಸ್ಫೂರ್ತಿಯಾಗುತ್ತೆ ಎನ್ನುವ ಭಯವೂ ಕಾಣಲಿಲ್ಲ ಕಾರಣ ನಿಜವಾಗಿಯೂ ದಿನನಿತ್ಯ ಅಥವಾ ಹಬ್ಬ ಹರಿದಿನಗಳಲ್ಲಿ ಮನಬಂದಂತೆ ಬೊಬ್ಬಿರಿಯುವ ಎಲ್ಲಾ ಮತಬಾಂಧವರೂ ಇದರ ಬಗ್ಗೆ ಗಮನ ಹರಿಸಬೇಕು ಅನಿಸಿತು. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರುವಂತಹ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೊಂದು ಎಲ್ಲೆಯೂ ಇದೆ ಎಂಬುದನ್ನು ನೆನಪಿಸುವ ಆಶಯ  ಅವರ ಸಂದೇಶದಲ್ಲಿ ಎದ್ದು ಕಂಡಿದ್ದನ್ನು ನಾನಂತೂ ಗ್ರಹಿಸಿಕೊಂಡೆ. ಇದನ್ನು ಪ್ರತಿಯೊಬ್ಬನು ಮನವರಿಕೆ ಮಾಡಿಕೊಳ್ಳಬೇಕಾದ ಅವಶ್ಯಕತೆಯೂ ಇಂದು ನಮ್ಮ ಮುಂದಿದೆ. ನಟಿ ಕಂಗನಾ, ನಟ ಸೈಫ್ ಅಲಿ ಖಾನ್‍ರವರು ತಮ್ಮ ಪ್ರೀತಿ ಪಾತ್ರರು, ಪಂಗಡವರಿಗಾಗಿ ಸೋನು ಹೇಳಿದ್ದು ತಪ್ಪೆಂದು ವಿರೋಧ ವ್ಯಕ್ತಪಡಿಸಿದರೂ, ಟ್ವೀಟ್‍ನಲ್ಲಿ ಅವರು ಬಳಸಿದ ಭಾಷೆ ಹಾಗೂ ತರ್ಕಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅದೇ ಪ್ರಮಾಣದ ಶ್ಲಾಘನೆಯೂ ಸಿಕ್ಕಿರುವುದು ಮತ್ತೊಂದು ವಿಶೇµವಾಯಿತು.

ಮುಂದೆ, ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಬಗ್ನಾನ್ ಎಂಬಲ್ಲಿನ ಖಾನ್ಕಾ ಷರೀಫ್Àನ ಧಾರ್ಮಿಕ ಮುಖ್ಯಸ್ಥ ಸೈಯದ್ ಷಾ ಅತೇಫ್ ಅಲಿ ಅಲ್ ಖಾದ್ರಿ ಫತ್ವಾ ಹೊರಡಿಸಿ ಸೋನು ನಿಗಮ್ ಕೇಶ ಮುಂಡನ ಮಾಡಿದವರಿಗೆ  10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದರು. ಈ ಸವಾಲನ್ನು ಸ್ವೀಕರಿಸಿದ ಸೋನು ಅವರೇ ಕೂಡಲೇ ತಮ್ಮ ಕೇಶ ವಿನ್ಯಾಸಗಾರ ಹಕೀಮ್ ಅಲೀಮ್ ಅವರನ್ನು ಕರೆಸಿಕೊಂಡು ಕೇಶ ಮುಂಡನ ಮಾಡಿಸಿಕೊಂಡರು. ‘ನಾನೊಬ್ಬ ಹಿಂದೂ, ನನ್ನ ಕೇಶ ಮುಂಡನ ಮಾಡಿದ ವ್ಯಕ್ತಿ ಮುಸ್ಲಿಮ್. ಇಲ್ಲಿ ಶತ್ರುತ್ವ ಎಲ್ಲಿ ಬಂತು!? ಫತ್ವಾದ ಭಾಷೆಗೆ ‘ಪ್ರೀತಿ’ಯ ಭಾಷೆಯಲ್ಲಿ ಉತ್ತರ ನೀಡಿರುವೆ. ಮೌಲ್ವಿ 10 ಲಕ್ಷ ರೂಪಾಯಿ ಸಿದ್ಧ ಪಡಿಸಿಕೊಳ್ಳಲಿ’ ಎಂದರು. ಈ ನಡೆ ನುಡಿ ನೋಡಿ ಜನ ದಿಗ್ಭ್ರಮೆಗೊಂಡು ವಿಷಯ ಇಡೀ  ರಾಷ್ಟ್ರವ್ಯಾಪಿ ಸುದ್ದಿಗೊಂಡಿತು. ಆದರೆ ಸೈಯದ್ ಷಾ ಅತೇಫ್ ಅಲಿ ಅಲ್ ಖಾದ್ರಿ ಅವರು ಇಮಾಮ್ ಅಥವಾ ಮೌಲಾನಾ ಅಲ್ಲ. ಅವರಿಗೆ ಧಾರ್ಮಿಕವಾಗಿ ಯಾವುದೇ ಅಧಿಕಾರವಿಲ್ಲ ಎಂಬ ವಿಷಯ ಆ ಬಳಿಕ ಬಹಿರಂಗವಾಯಿತು. ಅದೇನೆ ಇರಲಿ, ಇದ್ದು ಬೀಗಲಿ ಆದರೆ ಗಾಯಕನೊಬ್ಬನ ವಿಷಯ ಸ್ಫಷ್ಟತೆ, ಮಾತಿನ ಮೇಲೆ ಅವರಿಗಿರುವ ಪ್ರಭುದ್ಧತೆ, ಬದ್ಧತೆ ಮತ್ತು ಅಭಿವ್ಯಕ್ತತತೆಯ ಆಳತೆ ಎದ್ದು ಕಾಣುವುದನ್ನು ಪ್ರತಿಯೊಬ್ಬರೂ ಅಭಿನಂದಿಸಲೇಬೇಕು. ಒಂದು ದಾರ್ಮಿಕತೆಯ ಬಂಡಾಯ ಸಾರಲು ಕೂಗಿ  ಎಲ್ಲ ನಿಶ್ಯಬ್ಧದದ ಪರಿಸರದಲ್ಲಿ ಚೀರಾಟದ ನಡುವೆ ಮೌನ ಒಡೆಯಬೇಕಿಲ್ಲ. ಹಿಂದೂ ಸಂಸ್ಕøತಿ ಹೇಳುವಂತೆ ಧ್ಯಾನವೇ ದೇವರನ್ನು ಒಲಿಸಿಕೊಳ್ಳುವ ಮಾರ್ಗ. ಧ್ಯಾನವೆಂದರೆ ಮೌನತ್ವದಿಂದ ನಿಶ್ಯಬ್ಧರಾಗಿ ಮನಸಿನಾಳದ ಆಲಾಪನೆಗೆ ಕೂತು ದೇವರನ್ನು ಭಜಿಸುವುದು ಆದರೆ ಈ ಅಜಾನ್‍ನಲ್ಲಿ ಯಾಕೇ ಮೈಕ್‍ನ ಕೂಗೇ ಹೆಚ್ಚು ಪ್ರಾಮುಖ್ಯವಹಿಸುತ್ತೋ ತಿಳಿದಿಲ್ಲ!.

ಹಾಡಿನಲ್ಲಿ ಕನ್ನಡದ ಜನತೆ ಸೋನು ನಿಗಮ್‍ರನ್ನು ಯಾವಾಗಲೋ ಮೆಚ್ಚಿಕೊಂಡಿತ್ತು. ‘ಮುಂಗಾರು ಮಳೆ’ ಚಿತ್ರದಲ್ಲಿ ಅವರ ಗಾಯನ ಕೇಳಿ ಮಿಂದೆದ್ದ ಕನ್ನಡಿಗರು ಇಂದಿಗೂ ಅವರ ಹಾಡುಗಳೆಂದರೆ ಕಿವಿ ನಿಮಿರಿಕೊಂಡು ಕೇಳಿ ಸಂತಸಪಡುತ್ತಾರೆ. ಗಾಂಧೀನಗರದುದ್ದಕ್ಕೂ ಸಿನಿಮಾ ಸೆಟ್ಟೇರುವಾಗಲೇ ಸೋನು ನಿಗಮ್‍ರಿಂದ ಒಂದು ಹಾಡು ಹಾಡಿಸಿ ಅಂತ ಅದೆಷ್ಟೋ ಪ್ರೋಡ್ಯೂಸರ್‍ಗಳು ಸಂಗೀತ ನಿರ್ದೇಶಕರಿಗೆ ಹೇಳಿಯೇ ತೀರುವ ಎಷ್ಟೋ ಉದಾಹರಣೆಗಳಿವೆ. ಸೋನು ನಿಗಮ್‍ರ ಹಾಡಿಗೆ ಸುರಿಯುವ ಅಷ್ಟೂ ದುಡ್ಡು ವಾಪಾಸ್ಸು ಬಂದೇ ಬರುತ್ತೆ ಎನ್ನುವ ನಂಬಿಕೆ ಈಗಲೂ ಹಾಗೆಯೇ ಇದೆ. ಜಯಂತ್ ಕಾಯ್ಕಿಣಿಯಂತ ಉತ್ತಮ ಸಾಹಿತಿಯ ಬರವಣಿಗೆಗಳಿಗೆ ಧ್ವನಿಗೂಡಿಸಿದರಂತೂ ಸತ್ವವಿಲ್ಲದ ಸಿನಿಮಾವಾದರೂ ಅದನ್ನು ಹಾಡಿನಲೆಯಲ್ಲೇ ಗೆಲ್ಲಿಸುವ ತಾಕತ್ತು ಅವರ ಕಂಠಕ್ಕಿದೆ. ಅದಕ್ಕಾಗಿಯೇ ಕರ್ನಾಟಕದ ಜನತೆ ಅವರಿಗೆ ‘ಗೋಲ್ಡನ್ ಸ್ಟಾರ್ ಸಂಗೀತಗಾರ’ ಎಂಬ ಬಿರುದನ್ನು ನೀಡಿ ಗೌರವಿಸಿದೆ. ಜುಲೈ 30 1973ರಲ್ಲಿ ಹರಿಯಾಣದ ಫರಿದಾಬಾದ್‍ನಲ್ಲಿ ಜನಿಸಿದ ಇವರು ತಂದೆ ಆಗಂ ಕುಮಾರ್ ನಿಗಮ್‍ರಿಂದಲೇ ಸಂಗೀತಾಭ್ಯಾಸವನ್ನು ಬಳುವಳಿಯಾಗಿ ಪಡೆದವರು. ಸಣ್ಣ ಪುಟ್ಟ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಸೋನುಗೆ 1990ರಲ್ಲಿ ‘ಜಾನಮ್’ ಎಂಬ ಸಿನಿಮಾದಲ್ಲಿ ಮೊದಲಬಾರಿಗೆ ಹಾಡುವ ಅವಕಾಶ ಸಿಕ್ಕರೂ ದುರಾದೃಷ್ಟವಶಾತ್ ಆ ಸಿನಿಮಾ ಅಧಿಕೃತವಾಗಿ ತೆರೆಕಾಣಲಿಲ್ಲ. ಆನಂತರ 1992ರಲ್ಲಿ ತೆರೆಕಂಡ ‘ಆಜಾ ಮೇರಿ ಜಾನ್’ ಸಿನಿಮಾದಲ್ಲಿ ‘ಓ ಆಸ್ಮಾನ್ ವಾಲೇ’  ಹಾಡು ಸೋನು ಅವರ ಮೊದಲ ಹಾಡೆನಿಸಿತು. ಅಲ್ಲಿಂದ ಪ್ರಾರಂಭವಾದ ಜರ್ನಿ 1997ರಲ್ಲಿ ಅನು ಮಲಿಕ್ ಸಂಗೀತ ನಿರ್ದೇಶನದಲ್ಲಿ ‘ಬಾರ್ಡ್‍ರ್’ ಸಿನಿಮಾದ ‘ಸಂದೇಸೆ ಆತೇ ಹೈ’ ಹಾಡನ್ನು ಹಾಗೂ ‘ಪರ್ದೇಸೆ’ ಚಿತ್ರದ  ‘ಯೇ ದಿಲ್ ಹೈ ದೀವಾನ’ ಹಾಡನ್ನು ಹಾಡಿ ಜನಮೆಚ್ಚುಗೆ ಪಡೆದರು. ಮೊದಮ್ಮದ್ ರಫೀ ಅವರ ಹಾಡುಗಳ ಸಂಗ್ರಹ ‘ ರಫೀ ಕೀ ಯಾದೇ’ ಸೇರಿ ಒಟ್ಟು 100 ಹಾಡುಗಳ ಆರು ಡಿಸ್ಕ್‍ಗಳನ್ನು ‘ಕಲ್ ಆಜ್ ಜೌರ್ ಕಲ್’ ಶೀರ್ಷಿಕೆಯಲ್ಲಿ ಸಪ್ಟೆಂಬರ್ 2007ರಲ್ಲಿ ಬಿಡುಗಡೆ ಮಾಡಿದ್ದು ಅವರ ವೃತ್ತಿ ಬದುಕಿನ ಮಹಾನ್ ಸಾಧನೆಗಳಲ್ಲೊಂದು.

    ಇನ್ನೂ ಹಾಡುಗಾರಿಕೆಯಲ್ಲಿ ಕನ್ನಡಕ್ಕೆ ಅವರ ಕೊಡುಗೆಗಳನ್ನು ಗಮನಿಸಿದರೆ 1996ರಲ್ಲಿ ವಿಷ್ಣುವರ್ಧನ್ ಅವರ ‘ಜೀವನದಿ’ ಸಿನಿಮಾದಲ್ಲಿ ‘ಎಲ್ಲೋ ಯಾರೋ ಹೇಗೋ’ ಹಾಡಿನ ಮೂಲಕ ಸ್ಯಾಂಡಲ್ ವುಡ್ ಜರ್ನಿ ಪ್ರಾರಂಭಿಸಿ ಇದುವರೆಗೂ 600ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು ಒಂದಕ್ಕಿಂತ ಒಂದು ಅಂದವಾಗಿ, ಭಿನ್ನವಾಗಿವೆ. ಬಾಲಿವುಡ್ ಬಿಟ್ಟರೆ ವೃತ್ತಿ ಬದುಕಲ್ಲಿ ಹೆಚ್ಚು ಹಾಡಿದ್ದು ಕನ್ನಡದ ಹಾಡುಗಳೇ ಎನ್ನುವುದು ನಮ್ಮ ಹೆಮ್ಮೆ ಹಾಗೂ ಅವರ ವಿಶೇಷತೆ. ಇಂದಿಗೂ ‘ಸ್ನೇಹಲೋಕ’ ಚಿತ್ರದ ‘ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ’, ‘ಗಟ್ಟಿಮೇಳ’ ಚಿತ್ರದ ‘ಹಂಸವೇ ಹಂಸವೇ’, ‘ಮುಂಗಾರು ಮಳೆಯ’ ‘ಅನಿಸುತಿದೆ ಯಾಕೋ ಇಂದು’, ‘ಮಿಲನ’ ಚಿತ್ರದ ‘ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ’... ಸೇರಿದಂತೆ ಸಿನಿಪ್ರಿಯರು ಆಯಸ್ಸು ಇರುವವರೆಗೂ ಗುನುಗುನಿಸುವಷ್ಟು ಅಂದದ ಹಾಡುಗಳನ್ನು ಕೊಟ್ಟಿರುವುದು ಸೋನು ನಿಗಮ್‍ರಿಂದ ನಮಗೆ ಸಿಕ್ಕಿರುವ ಕೊಡುಗೆ.

ಹಿಂದಿಯಲ್ಲಿ ಅನೇಕ ಆಲ್ಭಮ್ ಹಾಡುಗಳ ಮೂಲಕ ಮನೆಮಾತಾಗಿರುವ ಸೋನು ನಿಗಮ್ ವರ್ಷಕ್ಕೊಮ್ಮೆಯಾದರೂ ಒಂದೊಂದು ಹೊಸ ಹೊಸ ಪ್ರಯೋಗಗಳನ್ನು ಜನರ ಮಧ್ಯೆಯೇ ಇದ್ದು ಸಮಾಜಕ್ಕೆ ಒಳ್ಳೆಯದನ್ನು ಸಾರುತ್ತಲೇ ಇರುತ್ತಾರೆ. ಹಿಂದೆ ಭ್ರಷ್ಟಾಚಾರದ ವಿರುದ್ಧವಾಗಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆದಾಗಲೂ ಸೋನು ಸತ್ಯಾಗ್ರಹದಲ್ಲಿ ಭಾಗವಹಿಸಿ ದೇಶದ ಕಳಕಳಿಗೆ ಭಾಜನರಾಗಿದ್ದರು. ಅಲ್ಲದೇ ಕಳೆದ ಬೇಸಿಗೆಯ ಒಂದು ಘಟನೆಯನ್ನು ನಿಮಗೆ ನಾನು ಹೇಳಲೆಬೇಕು. ಸೋನು ನಿಗಮ್  ತಮ್ಮ ಯೂ ಟ್ಯೂಬ್‍ಗೆ ‘ದ ರೋಡ್ ಸೈಡ್ ಉಸ್ತಾದ್’ ಎಂಬ ಹಣೆಪಟ್ಟಿಯ ಆರು ನಿಮಿಷದ ವಿಡಿಯೋ ಅಪ್ಲೋಡ್ ಮಾಡಿದ್ದರು. ಅದರಲ್ಲಿ ಅವರು ಮುಂಬೈನ ವಿವಿಧ ರಸ್ತೆ ಬದಿಯಲ್ಲಿ ಮಾಸಿದ ಬಟ್ಟೆ ತೊಟ್ಟು ವೃದ್ಧನ ವೇಷದಲ್ಲಿ ಸರಿಸುಮಾರು 25 ಹಾಡುಗಳನ್ನು ಹಾಡಿದ ದೃಶ್ಯವಿತ್ತು. ಈ ಕುರಿತು ಅವರು ಪ್ರತಿಕ್ರಿಯಿಸಿದ ಬಗೆ ನಿಜಕ್ಕೂ ‘ನಾನ್ಯಾರು’ ಎಂಬ ಪ್ರಶ್ನೆಗೆÉ ಸ್ವತಃ ಅವರೇ ಉತ್ತರ ಕಂಡುಕೊಂಡ ಹಾಗಿತ್ತು.

‘ನನ್ನ ಉಡುಗೆ ತೊಡುಗೆಯಷ್ಟೇ ಬದಲಾಗಿತ್ತು. ಹಾಡುಗಾರಿಕೆಯ ಶೈಲಿ, ಧ್ವನಿ ಯಾವುದರಲ್ಲೂ ಬದಲಾವಣೆ ಇರಲಿಲ್ಲ. ಅದಾಗ್ಯೂ ಜನ ನನ್ನನ್ನು ಗುರುತಿಸಲಿಲ್ಲ ನನಗದು ದೊಡ್ಡ ಅನುಭವ’ ಎಂದು ಹೇಳಿಕೊಂಡಿದ್ದರು.

ಹೀಗೆ ಒಂದಿಲ್ಲೊಂದು ಬಗೆಯಲ್ಲಿ ಜಾಣ್ಮೆಯಲ್ಲೇ ಉತ್ತರ ನೀಡುವ, ಪ್ರ್ಯಾಕ್ಟಿಕಲ್ ಅನುಭವ ನೀಡುವ, ಒಳ್ಳೆಯ ನಡಿಗೆಯಲ್ಲಿ ಸದಾ ಸುದ್ದಿ ಮಾಡುವ ಸೋನುನಿಗಮ್ ಈ ಬಾರಿ ಅಜಾನ್‍ನ ಬಗ್ಗೆ ಟ್ವೀಟ್ ಮಾಡಿ, ಸೈಯದ್ ಷಾ ಹೇಳಿದ ಮಾತಿನಂತೆ ನಡೆದುಕೊಂಡು, ಮುಜುಗರವಾಗುವಂತೆ ಮಾಡಿ ಸೈ ಎನಿಸಿಕೊಂಡಿರುವ ಅವರ ಅಭಿವ್ಯಕ್ತತೆಯಲ್ಲೂ ಸತ್ವವಿದೆ ಎನ್ನುವುದನ್ನು ಎಲ್ಲಾ ಜನಾಂಗದವರು ಯೋಚಿಸಬೇಕು. ಇನ್ನೊಬ್ಬರಿಗೆ ತೊಂದರೆ ನೀಡುವ ದೇವರನ್ನು ಕೂಗುವ ಶಬ್ದಮಾಲಿನ್ಯಕ್ಕೆ ಕಡಿವಾಣ ಹಾಕಬೇಕು... ಈ ಬಗ್ಗೆ ಚಿಂತನೆ ನಡೆಯಬೇಕು...
ಏನಂತೀರಾ!?...

ಪ್ರೇಮಾಯಣ...ಕವಿ ಕನವರಿಕೆ: 9


           ಅವಳೇ ಹಾದು ಹೋದಂತಾಯಿತು...
ಮೊನ್ನೆ ಮೊನ್ನೆ ನಾನೋದಿದ ಡಿಗ್ರಿ ಕಾಲೇಜ್ ಎದುರಲ್ಲಿ ಪಾಸಾಗುವಾಗ ಹಿಂಬದಿಯಲ್ಲಿ ಅದೇ ತಿಳಿಕಂಪು ಬಣ್ಣದ ಲಾಂಗ್ ಚೂಡಿಯ ಯುನಿಫಾರ್ಮ್ ತೊಟ್ಟ ಹುಡುಗಿಯೊಬ್ಬಳು ಚಕ್ಕನೆ ಹಾದು ಹೋದಾಗ ಎದೆಯಲ್ಲೇನೋ ಕಳವಳ, ಕಂಪು, ಬಣ್ಣ ಬಣ್ಣದ ವಿಚಿತ್ರ ವೇಷದ ಡೊಳ್ಳುಕುಣಿತ ತಾಳ ಹಾಕಿದಂತಾಗಿ ಮತ್ತೆ ಕಣ್ಣು ಮಿಟುಕಿಸದೇ ಅವಳೇಯೇನೋ ಎಂಬಂತೆ ಹಾದು ಹೋದವಳನ್ನೇ ಮಿರಿ ಮಿರಿ ದಿಟ್ಟಿಸಿ ನೋಡುತ್ತಾ ನಿಂತೆ... 

ಪಕ್ಕದಲ್ಲಿದ್ದ ಗೆಳೆಯ, ಲೋ..! ಅವಳು ನಿನ್ ಡೌ ಅಲ್ಲಪ್ಪಾ... ಅವಳಿಗ ಯಾರ ಹೆಂಡತಿಯಾಗಿ ಎಲ್ಲಿದ್ದಾಳೋ, ಅಷ್ಟಕ್ಕೂ ಅವಳ್ಯಾಕೆ ಇಲ್ಲಿಗೆ ಆ ಡ್ರೆಸ್ ಹಾಕೊಂಡ್ ಬರ್ತಾಳೆ, ಅವಳಿನ್ನೂ ಇಲ್ಲೇ ಕಲಿತಿರ್ತಾಳಾ, ನೀನು ಹೇಗೆ ಕಲಿತು ಹೋದ್ಯೋ ಹಾಗೆ ಅವಳು ಹೋಗಿದ್ದಾಳೆ ಆಯ್ತಾ...’ ಎಂದಾಗಲೇ ಹಳೆ ಸೆಳೆತದ ಬಲೆಯಿಂದ ಹೊರಬಂದೆ.

   ಇಂದಿಗೂ ಆ ಕಾಲೇಜಿನಲ್ಲಿ ಅದೇ ಯುನಿಫಾರ್ಮ್ ಕಂಪಲ್ಸ್‍ರಿ ವೇರ್ ಆಗುತ್ತಲೇ ಇದೆ. ಅಂದು ಉದ್ದ ಜಡೆ ಬಿಟ್ಟು, ಬಗಲಿಗೊಂದು ಬ್ಯಾಗ್ ತೊಟ್ಟು, ಹೈ ಹೀಲ್ಡ್ ನಡಿಗೆಯಲ್ಲಿ, ಊರೇ ಅವಳನ್ನು ಕಂಡರೂ ಅವಳು ಮಾತ್ರಾ  ಕಾಲಡಿಯನ್ನೇ ನೋಡುವಂತೆ ತಲೆ ತಗ್ಗಿಸಿಕೊಂಡು ಗೆಳತಿಯರ ಜೊತೆ ಸಾಗುತ್ತಿದ್ದ ಕ್ಷಣಗಳೆಲ್ಲ ಇಂದು ಮತ್ತೆ ಮನದಂಚಲಿ ಜನಿಸಿ ಆರ್ತನಾದ ಮಾಡಿದಂತಾಯ್ತು. ಆ ಚೆಲುವೆಯ ಪರಿಗೆ ನಾನಂತೂ ನನ್ನ ಸಂಗಾತಿ ಇವಳೇ ಎನ್ನುವಷ್ಟು ಫಿದಾ ಆಗಿದ್ದೆ.

     ಒಂದು ಉದ್ದನೆಯ ಚೂಡಿದಾರದ ವೇಲ್, ಒಂದೆರಡು ಬುಕ್ ಎದೆಗೊತ್ತಿಕೊಂಡು ಆಕೆ ಎದುರಲ್ಲಿ ಸುಳಿದಾಡಿದರೆ ಸಾಕು!!, ನಮ್ಮದು ಭೂತ ಹಿಡಿದ ಭಾವ. ನವಿಲಾಗಿ ನೋಡಿ ಮುಗುಳ್ನಕ್ಕರಂತೂ ಇಡೀ ಕಾಲೇಜು ನಂದೇ ಎನ್ನುವಷ್ಟು ಸಡಗರ ಸಂಭ್ರಮ. ಒಂದಿನ ಅವಳು ಕಾಲೇಜಿಗೆ ಬಂದಿಲ್ಲವೆಂದರೆ ಅದೇನೋ ಕಳೆದುಕೊಂಡಂತೆ ಸತ್ವವಿರುವ ಎಲ್ಲವೂ ಅಸತ್ವ ತಳೆದಂತೆ, ಹೃದಯ ಕಂಪನವೇ ಇಲ್ಲದಂತೆ ಅವಳಿಗಾಗಿ ಸಾಯುತ್ತ ಬದುಕುತ್ತಿರುವಂತೆ ಅನುಭವ ಮೇಳೈಸುತ್ತಿತ್ತು.

    ಇಂದು ಅವಳಿಲ್ಲ!. ಎಲ್ಲಿರುವಳೋ ತಿಳಿದಿಲ್ಲ!, ಆದರೂ ಆ ದಾರಿ, ಆ ಸವೆತ, ಆ ನೈಜತೆಯ ಕುರುಹು ಎಲ್ಲವೂ ಹಾಗೆಯೇ ಇದೆ. ಹಳೆ ಮೇಷ್ಟ್ರು, ಹೊಸ ಹುಡುಗ್ರು, ಹುಡುಗೀರು ಎಲ್ಲದರ ಸೋಂಕು ಲಲನೆಯಲ್ಲೇ ತೂಗುತ್ತಿದೆ... ಗರಿಗೆದರಿದ ಭಾವನೆಗಳು ಆಕೆಯನ್ನು ನೆನಸಿಕೊಳ್ಳುತ್ತಿದೆ ವಿಷಯವೆಂದರೆ ಆಕೆಗೆ ನನ್ನ ನೆನಪಿದೆಯೋ, ಅರಿವಿದೆಯೋ, ತಿಳಿವಿದಿಯೋ ಎನ್ನುವುದೇ ಯಕ್ಷಪ್ರಶ್ನೆಯಾಗಿ ಈ ಕ್ಷಣವೂ ಕಾಡುತ್ತಿದೆ...

ಸಿರಿ ಬುಲೆಟ್: ಸೇಫಾದ ಸೇಫ್ಟಿ ಎಲ್ಲಿದೆ ತೋರ್ಸಿ..: ಸೇಫ್ಟಿ... ಸೇಫ್ಟಿ... ಸೇಫ್ಟಿ... ಸೀಟ್ ಬೆಲ್ಟೇ ಸೇಫ್ಟೀ...


“ಜಾಗೃತಿ ಮಗಾ... ಹುಷಾರು ಮಗಾ”...
ಮಾಮೂಲಾಗಿ ಪ್ರತಿ ಮನೆಯಿಂದ ಹೊರಬೀಳುವ ಮನುಷ್ಯನಿಗೆ ಅಪ್ಪನೋ, ಅಮ್ಮನೋ, ಮಡದಿಯೋ, ಅಕ್ಕನೋ, ತಂಗಿನೋ, ಅಣ್ಣನೋ, ತಮ್ಮನೋ ಅಥವಾ ಯಾರೋ ಒಬ್ಬರು, ಪ್ರೀತಿ ಪಾತ್ರರು ಹೇಳುವ ಅಕ್ಕರೆಯ ಮಾತಿದು. ಹಾಗೆ ಆಳವಾಗಿ ನೋಡಿದರೆ ಇದು ಸಣ್ಣ ಪದವಲ್ಲ ಅದರಲ್ಲಿ ತುಂಬಾ ಭಾರವಿದೆ, ತುಂಬಾ ಕಾಳಜಿ ಇದೆ, ತುಂಬಾ ನಿರೀಕ್ಷೆ ಇದೆ, ಅವಾಂತರ ತಪ್ಪಿಸಿಕೋ ಎನ್ನುವ ಜನ್ಮಾಂತರದ ಅರ್ಥವಿದೆ ಆದರೆ ಎಲ್ಲವೂ ಹೇಳಿಕೆಗಷ್ಟೇ ತೂರುತ್ತಿದೆ ಯಾರೂ ಜಾಗೃತರಾಗಿ ಹೊರಬೀಳುತ್ತಿಲ್ಲ ಅದುವೇ ನಮ್ಮ ಸಮಸ್ಯೆ ... ಇದುವೇ ಈ ಬಾರಿಯ ಬುಲೆಟ್ ಸೇಫಾದ ಸೇಫ್ಟಿ ಎಲ್ಲಿದೆ ತೋರ್ಸಿ...

ಒಂದು ಅಧ್ಯಯನದ ಪ್ರಕಾರ, ನಮ್ಮ ದೇಶದಲ್ಲಿ ಯಾವೊಂದರಲ್ಲೂ ಸೇಫ್ಟಿಯಿಲ್ಲ. ಕಿಚನ್‍ನಲ್ಲಿ ಕೆಲಸ ಮಾಡುವ ಮಹಿಳೆಗೆ, ಸ್ಕೂಲ್‍ಗೆ ಹೋಗುವ ಮಕ್ಕಳಿಗೆ, ಕಾರ್ಖಾನಾ ಕಾರ್ಮಿಕರಿಗೆ, ದಿನಗೂಲಿಗರಿಗೆ, ಬೈಕ್ ಸವಾರರಿಗೆ, ಕಾರ್ ಪ್ರಯಾಣಿಕರಿಗೆ, ಬಸ್ ಲಾರಿಗಳಿಗೆ, ಅಷ್ಟೇ ಯಾಕೆ ದಾರಿಹೋಕನಿಗೂ ಸೇಫ್ಟಿ ಇಲ್ಲ...
ನಾವಿಂದು ಅನೇಕ ಬಗೆಯ ಪ್ರಗತಿಯಲ್ಲಿ ಮುನ್ನಡೆ ಕಾಣುತ್ತಿದ್ದೇವೆ. ಆಧುನಿಕತೆಯ ಟ್ರೆಂಡ್ ನಮ್ಮನ್ನು ಕ್ಷಣಿಕ ಸುಖ ಕೊಟ್ಟು ಕಟ್ಟಿ ಹಾಕುತ್ತಿದೆ ಅದರಿಂದಾಗಿ ನಾವ್ಯಾರು ಕ್ವಾಲಿಟಿಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೊಡಬೇಕಾದ ವಿಚಾರಕ್ಕೆ ಹೆಚ್ಚಿನ ಪ್ರಯೋರಿಟಿ ನೀಡುತ್ತಿಲ್ಲ. ಮುಂದೇನಾಗುತ್ತದೆ ಎನ್ನುವ ಅರಿವನ್ನು ಮೈದಳೆಯುತ್ತಿಲ್ಲ!..
ತುಂಬಾ ಸಿಂಪಲ್ ಆಗಿ ಹೇಳುವುದಾದರೆ ಸೇಫ್ಟಿ ಅಂದ್ರೆ ‘ಜಾಗೃತೆ’. ಅದನ್ನರಿತು ಮುಂದೆ ಹೋಗೋಣ. ಜೀವನದ ಮೊದಲ ಧ್ಯೇಯವಾಗಿ ಕ್ರಮವಾಗಿ, ಸ್ಫಷ್ಟವಾಗಿ, ವಿಸ್ತಾರವಾಗಿ ಕೆಲಸ ಮಾಡುವಂತಹ ಸರಕ್ಷಿತ ನಿರ್ವಹಣೆ ವ್ಯವಸ್ಥೆಗೆ ಬದ್ಧರಾಗಿ, ಸೇಫ್ಟಿ ಸಿಸ್ಟಮ್‍ಗಳನ್ನು ಆದಷ್ಟು ಹೆಚ್ಚು ಅಳವಡಿಸಿಕೊಂಡು ಬರುವ ಅನೇಕ ಗಂಡಾಂತರಗಳಿಂದ ದೂರವಿರುವ ಪ್ರಯತ್ನ ಮಾಡೋಣ ಎನ್ನುತ್ತಾ ಈ ತಿಂಗಳು ಸೀಟ್ ಬೆಲ್ಟ್‍ನ ಅವಾಂತರ ಮತ್ತು ಅದನ್ನು ಅಳವಡಿಸಿಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಪ್ರಯತ್ನವಿದು. ಓದಿ ಅಳವಡಿಸಿಕೊಳ್ಳಿ...

ನೈಜ ಘಟನೆಯಿದು:
ಹಾಸನದಿಂದ ಐಶಾರಾಮಿ ಕಾರಿನಲ್ಲಿ ಪ್ರಕಾಶ್ ಮತ್ತವರ 5 ಜನ ಸ್ನೇಹಿತರು ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದರು. ಹೊಸ ಕಾರಾದ್ದರಿಂದ ಶರವೇಗದಲ್ಲಿ ಪವನರಾಜನಂತೆ ನನಗಾರು ಸಾಟಿಯಿಲ್ಲವೆಂಬಂತೆ ಗಾಳಿಯನ್ನು ಸೀಳಿಕೊಂಡು ಕಾರು ಮುನ್ನುಗ್ಗುತ್ತಿತ್ತು. ಕಾರು ಚಾಲನೆ ಮಾಡುತ್ತಿದ್ದ ಪ್ರಕಾಶ ಹತ್ತಾರು ವರ್ಷದ ನುರಿತ ಚಾಲಕನೂ ಆಗಿದ್ದ. ತಕ್ಷಣವೇ ಹೆದ್ದಾರಿಯ ಎಡಭಾಗದಲ್ಲಿ ನಿಧಾನವಾಗಿ ಸಾಗುತ್ತಿದ್ದ ಚಿಕ್ಕ ಕಾರೊಂದಕ್ಕೆ ಈ ಐಶಾರಾಮಿ ಕಾರು ಸ್ವಲ್ಪವೇ ತಾಗಿದಂತಾಗಿ ಪ್ರಕಾಶ್ ತನ್ನ ಕಾರನ್ನು ಬಲಭಾಗಕ್ಕೆ ತಿರುಗಿಸಿದ. ಪವರ್ ಸ್ಟೇರಿಂಗ್ ಇದ್ದ ಕಾರು ಸ್ವಲ್ಪ ಹೆಚ್ಚಾಗಿಯೇ ತಿರುಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಕಾಶನ ಐಶಾರಾಮಿ ಕಾರು ನಾಲ್ಕು ಪಲ್ಟಿ ಹೊಡೆದು ಚಕ್ರಗಳನ್ನು ಮೇಲ್ಮುಖ ಮಾಡಿಕೊಂಡು ನಿಂತಿತ್ತು. ಹಿಂಭಾಗ ತಾಗಿಸಿಕೊಂಡಿದ್ದ ಚಿಕ್ಕ ಕಾರು ಕೂಡ ಒಂದು ಪಲ್ಟಿ ಹೊಡೆದು ರಸ್ತೆಯ ಎಡಭಾಗದಲ್ಲಿ ಹಿಂದೆ ತಿರುಗಿ ನಿಂತಿತ್ತು.
ಸ್ಥಳದಲ್ಲಿ ಕೂಗಾಟ, ಚೀರಾಟ, ಆಕ್ರಂಧನದ ಜೊತೆಗೆ ರಕ್ತದೋಕುಳಿ ಹರಿದಿತ್ತು. ಸ್ಥಳಕ್ಕೆ ಪೊಲೀಸ್‍ರು ಮತ್ತು ಅಂಬುಲೆನ್ಸ್ ವಾಹನ ಬಂದು ಪರೀಶೀಲಿಸಿದಾಗ ಐಶಾರಾಮಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮರಣಹೊಂದಿದ್ದರು, ಉಳಿದಿಬ್ಬರಿಗೆ ತೀವ್ರ ಪೆಟ್ಟಾಗಿತ್ತು. ಆದರೆ ಚಿಕ್ಕ ಕಾರ್‍ನಲ್ಲಿದ್ದ ನಾಲ್ಕು ಜನರಿಗೆ ಸಣ್ಣ ಪುಟ್ಟ ಗಾಯಗಳನ್ನು ಹೊರತುಪಡಿಸಿದರೆ ಬೇರೇನೂ ಆಗಿರಲಿಲ್ಲ. ಕಾರಣ ಐಶಾರಾಮಿ ಕಾರಿನಲ್ಲಿದ್ದವರು ಸೀಟ್ ಬೆಲ್ಟ್ ಧರಿಸಿರಲಿಲ್ಲ, ಚಿಕ್ಕ ಕಾರ್‍ನಲ್ಲಿದ್ದ ಎಲ್ಲರೂ ಸೀಟ್ ಬೆಲ್ಟ್ ಧರಿಸಿದ್ದರು.
ಇನ್ನೊಂದು ಪ್ರಕರಣದಲ್ಲಿ ಹಿರಿಯ ಕಾನೂನು ಅಧಿಕಾರಿಯೊಬ್ಬರು ರಾಮನಗರ ಬಳಿ ತಮ್ಮ ಕಾರನ್ನು ತಾವೇ ಚಾಲನೆ ಮಾಡಿಕೊಂಡು ಬೆಂಗಳೂರಿನ ಕಡೆ ಬರುತ್ತಿರುವಾಗ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬ್ರೇಕ್ ಹಾಕಿದಾಗ ಹಿಂಬದಿಯಿಂದ ಬಂದ ಖಾಸಗಿ ಬಸ್ಸೊಂದು ಹಿಂದಿನಿಂದ ಗುದ್ದಿದ ರಭಸಕ್ಕೆ ಕಾರು ಪಲ್ಟಿ ಹೊಡೆದು ಪಕ್ಕದ ರಸ್ತೆಯಲ್ಲಿ ನೇರವಾಗಿ ನಿಂತಿತ್ತು. ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರೆಲ್ಲಾ ಸಹಾಯಹಸ್ತ ಚಾಚಿ ಅಧಿಕಾರಿಯನ್ನು ರಕ್ಷಿಸಲು ಮುಂದಾದಾಗ ಆ ಅಧಿಕಾರಿ, ಯಾವುದೇ ಸಣ್ಣ ಪುಟ್ಟ ಗಾಯಗಳು ಆಗದೆ ಕಾರಿನಿಂದ ಹೊರಬಂದರು. ಕಾರಣ ಆ ಅಧಿಕಾರಿ ಸೀಟ್ ಬೆಲ್ಟ್ ಧರಿಸಿದ್ದರು...
  ಎಸ್..! ಸೀಟ್ ಬೆಲ್ಟ್‍ಗಳಿಗೆ ಪ್ರಾಣ ಕಾಪಾಡುವ ಮಾಂತ್ರಿಕ ಶಕ್ತಿಯಿದೆ. ಸ್ವೀಡನ್ ದೇಶದ ನಿಲ್ಸ್ ಬೊಹ್ಲಿನ್ ಎಂಬ ವಿಜ್ಞಾನಿ ಪ್ರಪಥಮ ಬಾರಿಗೆ ಈ ಸೀಟ್ ಬೆಲ್ಟ್‍ನ್ನು ವಾಹನಗಳಲ್ಲಿ ಅಳವಡಿಸಿದ ಕೀರ್ತಿಗೆ ಭಾಜನರಾಗುತ್ತಾರೆ. ಯಾವುದೇ ವಾಹನವು ವೇಗವಾಗಿ ಚಲಿಸುತ್ತಿರುವಾಗ ಅದರ ಒಳಾಂಗಣದ ಪ್ರತಿಯೊಂದು ವಸ್ತುವೂ- ಪ್ರಯಾಣಿಕರೂ ಸೇರಿದಂತೆ ಎಲ್ಲವೂ ಅಷ್ಟೇ ವೇಗದಲ್ಲಿ ಚಲಿಸುತ್ತಿರುತ್ತದೆ. ಒಂದು ವೇಳೆ ಆಕಸ್ಮಿಕವಾಗಿ ನಿಲ್ಲಿಸಿದಾಗ ಅಥವಾ ಡಿಕ್ಕಿ ಹೊಡೆದಾಗ ವಾಹನ ಮಾತ್ರಾ ನಿಲ್ಲುತ್ತದೆ ಹೊರತು ಅದರೊಳಗಿರುವ ಪ್ರಯಾಣಿಕನೂ ಅಲ್ಲ, ವಸ್ತುಗಳೂ ಅಲ್ಲ!. ಒಳಗಿರುವ ಎಲ್ಲವೂ, ಎಲ್ಲರೂ, ವೇಗಕ್ಕೆ ಅನುಗುಣವಾದ ವಾಹನದ ಮೊಮೆಂಟಮ್‍ನಿಂದಾಗಿ ಹೊರಗೆಸೆಯಲ್ಪಡುತ್ತಾರೆ. ಕವಣೆಯಿಂದ ಬಿಸಾಕುವ ಕಲ್ಲು ಹಾರುವುದೂ ಇದೇ ಬಗೆಯಲ್ಲಿ. ಕವಣೆ ಬೀಸು ನಮ್ಮ ಕೈಯಲ್ಲೇ ಸ್ಥಗಿತಗೊಂಡಾಗ ಕಲ್ಲು ಹೇಗೆ ಸಿಡಿದು ಮುಂದಕ್ಕೆ ಸಾಗುತ್ತದೆಯೋ ಹಾಗೆ!!...
ವಾಹನಗಳ ಅಪಘಾತದ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಎಷ್ಟೆಂದರೆ ಡಬ್ಲ್ಯೂ.ಎಚ್.ಓ ನ 2015ರ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ 3 ನಿಮಿಷಕ್ಕೊಂದು ಅಪಘಾತ ಸಂಭವಿಸುತ್ತಂತೆ. ಅಂದರೆ ಒಂದು ವರ್ಷದಲ್ಲಿ 5 ಲಕ್ಷಕ್ಕೂ ಅಧಿಕ ಅಪಘಾತ ಸಂಭವಿಸುತ್ತದಲ್ಲದೇ 1,43,000ಕ್ಕೂ ಅಧಿಕ ಮಂದಿ ಈ ರಸ್ತೆ ಅಪಘಾತಗಳಿಂದಲೇ ಜೀವ ಕಳೆದುಕೊಳ್ಳುತ್ತಿದ್ದಾರಂತೆ. ಇದರಲ್ಲಿ ದ್ವಿಚಕ್ರವಾಹನ ಅತೀ ಹೆಚ್ಚು ಅಪಘಾತಕ್ಕೆ ಕಾರಣವಾಗಿದೆ ಎಂಬ ವರದಿಯೂ ಇದೆ. ಮುಖ್ಯವಾಗಿ ಅಪಘಾತದಲ್ಲಿ ಹೆಲ್ಮೆಟ್ ಧರಿಸದೆ ದ್ವೀ ಚಕ್ರವಾಹನ ಸವಾರರು ಜೀವ ಕಳೆದುಕೊಳ್ಳುತ್ತಿದ್ದರೆ, ಕಾರು ಹಾಗೂ ಇನ್ನಿತರ ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದೆ, ಸರಿಯಾದ ಏರ್‍ಬ್ಯಾಗ್ ಸೌಲಭ್ಯವಿಲ್ಲದೆ ಸಾಯುತ್ತಿದ್ದಾರೆ ಎನ್ನುವ ಮಾಹಿತಿಯೂ ಅದರಲ್ಲಿ ಹೊರಬಿದ್ದಿದೆ.
ವಾಹನದ ವೇಗ ಮತ್ತು ಅದರ ಅಶ್ವಶಕ್ತಿಗೆ ಹೋಲಿಸಿದಾಗ ಮಾನವನ ದೇಹವು ತುಂಬಾ ದುರ್ಬಲವಾಗಿರುವುದರಿಂದ ವಾಹನದಿಂದ ಎಸೆಯಲ್ಪಟ್ಟಾಗ ಅಥವಾ ವಾಹನದ ಒಳಾಂಗಣದ ಯಾವುದೇ ಭಾಗಕ್ಕೆ ತಾಗಿದಾಗ ಮಾರಣಾಂತಿಕ ಗಾಯಗಳಾಗಿ ಬಿಡುತ್ತವೆ. ಆದುದ್ದರಿಂದ ಪ್ರತಿಯೊಬ್ಬ ಪ್ರಯಾಣಿಕ/ಚಾಲಕನೂ ಸಹ ತಮ್ಮನ್ನು ತಾವು ಯಾವುದಾದರೂ ಒಂದು ಸ್ಥಿರವಸ್ತುವಿಗೆ ತಮ್ಮನ್ನು ಬಂಧಿಸಿಕೊಳ್ಳುವುದು ಅತ್ಯವಶ್ಯಕ. ಸೀಟ್ ಬೆಲ್ಟ್‍ಗಳು ಈ ‘ಬಂಧನ’ ಕ್ರಿಯೆಯನ್ನು ನೆರವೇರಿಸುತ್ತವೆ.
ಸಾಮಾನ್ಯವಾಗಿ ಡ್ರೈವಿಂಗ್ ಸೀಟ್‍ನಲ್ಲಿ ಕುಳಿತು ಕೊಂಡಾಗ ಆ ಬೆಲ್ಟ್‍ನ್ನು ತೊಟ್ಟುಕೊಳ್ಳುವಷ್ಟು ಸಮಯವಿಲ್ಲ, ಶರ್ಟ್‍ನ ಐರನ್ ಹಾಳಾಗುತ್ತೆ, ಕುತ್ತಿಗೆಗೆ ಸರಿಯುತ್ತೆ, ನಾನು ಸೇಫ್ ಡ್ರೈವರ್, ಅನುಭವವಿದೆ, ಏನಾದರೂ ನಾನು ಕುಳಿತಲ್ಲಿಂದ ಜಗ್ಗಲ್ಲ ಸ್ಟ್ರಾಂಗ್ ಇದÉ್ದನೆ.., ಹೀಗೆ ಬಗೆ ಬಗೆಯಲ್ಲಿ ಸಮಜಾಯಿಸಿ ಮಾಡಿಕೊಳ್ಳುವ ಅನೇಕರು ಅಜಾಗರೂಕತೆಯಿಂದ ಪ್ರಾಣಕ್ಕೆ ಕುತ್ತು ತಂದೊಡ್ಡಿಕೊಳ್ಳುತ್ತಿದ್ದಾರೆ. ಮೂರು ಮತ್ತು ಐದು ಪಾಯಿಂಟ್‍ಗಳಲ್ಲಿ ಫಿಕ್ಸ್ ಮಾಡಿರುವ ಸೀಟ್ ಬೆಲ್ಟ್‍ನ ಎದೆಯ ಭಾಗದ ಬೆಲ್ಟ್ ಕಡಿಮೆ ಬಿಗಿ ಇರುವಂತೆ ಕಂಡು ಬಂದರೂ ಸಹ ವಾಹನವು ವೇಗವಾಗಿ ಚಲಿಸುವಾಗ ದಿಢೀರೆಂದು ಮುಂದಕ್ಕೆ ಬಾಗಿದರೂ ಬೆಲ್ಟ್‍ನ ಹಿಡಿತ ಹೆಚ್ಚಾಗುವಂತೆ ವಿನ್ಯಾಸಗೊಲಿಸಲಾಗಿರುತ್ತದೆ. ಇದರಿಂದ ಪ್ರಯಾಣಿಕರು ಸುರಕ್ಷಿತವಾಗಿ ಸೀಟಿಗೆ ಅಂಟಿಕೊಂಡಂತೆಯೇ ಕುಳಿತುಕೊಳ್ಳಲು ಸಹಕಾರಿಯಾಗಿರುತ್ತದೆ.

     ಭಾರತದಲ್ಲಿ ರೋಡ್ ಸೇಫ್ಟಿ ಮತ್ತು ವಾಹನ ಸವಾರರ ಸೇಫ್ಟಿ ಇನ್ನೂ ಸುಧಾರಿಸಬೇಕಾಗಿದೆ. ಕೆಲವೊಂದು ಹೈ ಎಂಡ್ ಕಾರ್‍ಗಳನ್ನು ಹೊರತು ಪಡಿಸಿದರೆ ಯಾವ ಕಂಪೆನಿಯ ಕಾರುಗಳು ಸುರಕ್ಷಿತವಾಗಿಲ್ಲ. ಇದಕ್ಕಾಗಿ  ಸರ್ಕಾರ 2020ರ ವೇಳೆಗೆ ‘ಭಾರತ್ ಎನ್ಕ್ಯಾಪ್’ ಎಂಬ ಯೋಜನೆಯಲ್ಲಿ ಸೇಫ್ಟಿ ಕಾರುಗಳನ್ನು ಮಾತ್ರಾ ರೋಡ್‍ಗೆ ಬಿಡಲು ನಿರ್ಧರಿಸಿ, ಎಲ್ಲಾ ಕಾರುಗಳ ಡೆಮೋ ಡ್ರೈವ್ ಮತ್ತು ಅಪಘಾತವಾದಾಗ ಅದರ ಸುರಕ್ಷತೆಯ ಕ್ವಾಲಿಟಿಯನ್ನು ಈಗಾಗಲೇ ದೆಹಲಿಯಲ್ಲಿ ನೆರವೇರಿಸಿದೆ.
ನ್ಯೂಟನ್‍ನ ಮೊದಲ ನಿಯಮದಂತೆ ‘ಜಡತ್ವ’ವೇ ಸೇಫ್ಟಿ ಎನ್ನಬಹುದು. ಅದುವೇ ಕಾರುಗಳ ಏರ್‍ಬ್ಯಾಗ್ ಮತ್ತು ಸೀಟ್ ಬೆಲ್ಟ್‍ನ ಜಡತ್ವ. ಮೋಟಾರು ವಾಹನ ಕಾಯ್ದೆ 1998ರ ಅನ್ವಯ ಎಲ್ಲಾ ವಿಧದ ಕಾರುಗಳಲ್ಲಿ ಪ್ರತಿಯೊಬ್ಬ ಪ್ರಯಾಣಿಕ ಹಾಗೂ ಚಾಲಕ ಸಹ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ಅಲ್ಲದೇ ಸೇಫ್ಟಿಯ ಇನ್ನೊಂದು ಭಾಗವಾದ ಏರ್‍ಬ್ಯಾಗ್ ಕೂಡ ಉತ್ತಮ ತಾಂತ್ರಿಕೆಯಲ್ಲಿದ್ದು ಜನರ ಜೀವವನ್ನು ರಕ್ಷಿಸುತ್ತಿದೆ ಅದನ್ನು ಪ್ರತಿವಾಹನವೂ ಹೊಂದಲು ಸೂಚಿಸಲಾಗಿದೆ. 
     ಪ್ರತಿವರ್ಷ ನಮ್ಮ ದೇಶದಲ್ಲಿ ಲಕ್ಷಾಂತರ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದು, 10 ರಿಂದ 20 ಲಕ್ಷ ಜನರು ತೀವ್ರವಾಗಿ ಗಾಯಗೊಳ್ಳುತ್ತಿರುವ ಈ ಸಮಯದಲ್ಲಿ ರಸ್ತೆ ನಿಯಮದ ಮುಂಜಾಗ್ರತಾ ಕ್ರಮದ ಜೊತೆ ವಾಹನಗಳಲ್ಲಿರುವ ಸೇಫ್ಟಿಗಳನ್ನು ಸರ್ಕಾರ ಕೂಲಂಕುಶವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ರಸ್ತೆ ಮಾರ್ಗಗಳನ್ನು ಆದಷ್ಟು ವಿಸ್ತರಿಸಿ ನೇರ ಮಾರ್ಗವನ್ನು ಹೊಂಡ-ಗುಂಡಿಗಳ ಮುಕ್ತತೆತೆಗೆ ಸಂಕಲ್ಪಿಸಬೇಕಿದೆ.  ಇನ್ನಾದರೂ ನಮಗಿರುವ ಸೇಪ್ಟಿಯನ್ನು ಸರಿಯಾಗಿ ಪಾಲಿಸೋಣ, ನಮ್ಮ ಜೀವ ನಮ್ಮ ಕೈಯಲ್ಲೇ ಇದೆ ಆದ್ದರಿಂದ ರೋಡ್ ಸೇಫ್ಟಿಯ ಬಗ್ಗೆ ಎಚ್ಚರರಾಗಿರೋಣ... ಏನಂತೀರಾ!? 

“ನನ್ನ ಪ್ರಕಾರ ಸೇಫ್ಟಿ ಅಂದರೆ ‘ಜಾಗೃತಿ’ ಎಂದರ್ಥ. ನಮ್ಮಲ್ಲಿ ಹೆಚ್ಚಿನವರಿಗೆ ಆ ಜಾಗೃತಿ ಇಲ್ಲ. ಈಗ ಕಾರುಗಳನ್ನೇ ತೆಗೆದುಕೊಂಡರೆ ಅದನ್ನು ಓಡಿಸುವ ಮುಂಚೆ ಸೀಟ್ ಬೆÉಲ್ಟ್ ತೊಟ್ಟುಕೊಳ್ಳಲು ಎರಡು ನಿಮಿಷ ಸಾಕು ಆದರೆ ಅದು ದೊಡ್ಡ ಕೆಲಸವೆಂಬಂತೆ ಹೆಚ್ಚಿನವರು ಅದನ್ನು ಮಾಡುತ್ತಿಲ್ಲ. ಇನ್ನೂ ಹೆಚ್ಚಿನ ಕಾರುಗಳಲ್ಲಿ ಸೀಟ್ ಬೆಲ್ಟ್‍ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಎಲ್ಲಕ್ಕಿಂತ ಜಾಸ್ತಿಯಾಗಿ ನಮಗೆ ಸೇಪ್ಟಿಗಾಗಿ ಇರುವ ಪರಿಕರಗಳ ಬಗ್ಗೆ ಪ್ರಾಥಮಿಕ ಜ್ಞಾನಗಳೂ ಇಲ್ಲ. ಅದಕ್ಕಾಗಿ ಈ ಜ್ಞಾನಗಳು ಸಾಮಾನ್ಯರಿಗೂ ತಲುಪುವ ಹಾಗೆ ಸರ್ಕಾರ ಯೋಜನೆಗಳನ್ನು ಕೈಗೊಳ್ಳಬೇಕಾದ ಅಗತ್ಯತೆ ಇದೆ”.

- ವಿಜಯ್ ಶೆಟ್ಟಿ.
ಸೇಪ್ಟಿ ಬೆಲ್ಟ್ ಇಂಜೀನಿಯರಿಂಗ್ ಹೆಡ್, ಆಟೋಲೀವ್ ಕಂಪೆನಿ.

ಪ್ರೇಮಾಯಣ...ಕವಿ ಕನವರಿಕೆ: 8

   ನನಗ್ಯಾರು ಇಲ್ಲ. ಅವಳಿಗೆ ಗಂಡನಿದ್ದಾನೆ. ಮನೆಯಲ್ಲಿ ಪ್ರೀತಿಯ ಸುರಿಮಳೆಯಿದೆ. ಆದರೆ ನನಗೆ ಸವಿ ಮಾತೂ ಇಲ್ಲ. ಪ್ರೀತಿಯ ಬಿಂಕ ಪ್ರಾರಂಭದಲ್ಲಿ ಮಳೆಯಂತೆ ಸುರಿಯುತ್ತಿದ್ದರೂ, ಈಗ ಹಿಮದಂತೆ ಕರಗಿದೆ.

    ಅವಳೆಂದರೆ ಈಗಲೂ ನನಗಿಷ್ಟ. ಅವಳ ಭಿನ್ನಾಣದ ನಾಟಕ ಮಾತ್ರ ನನಗಾಗಲ್ಲ. ಹಾಗಂತ ಅವಳಿಗೆ ನನ್ನ ಮೇಲೆ ಪ್ರೀತಿ ಇಲ್ಲವೆಂತಲ್ಲ. ತುಂಬಾ ಪ್ರೀತಿಸುತ್ತಾಳೆ ಆದರೆ ನನಗದೂ ವ್ಯಕ್ತಿನಿಷ್ಠತೆ ಅನಿಸುತ್ತದೆ. ಇದು ನನ್ನ ಸ್ವಾರ್ಥವೋ, ಸರ್ವಾರ್ಥವೋ ಸಂಬಂಧವೇ ತಿಳಿಯದೇ ಹಗ್ಗ ಬಿಗಿದ ಕುತ್ತಿಗೆ ಆ ಕಡೆ ಸರಿಯದೆಯೂ ಈ ಕಡೆ ಬಿಗಿಯದೆಯೂ ನಡುಮಧ್ಯೆ ಕುಳಿತು ಜೀವ ಹಿಂಡುವಂತೆ ಪರಿಸ್ಥಿತಿ ಹದಮೀರಿ ನನ್ನ ಹಂತ ಹಂತವಾಗಿ ಕೊಲ್ಲುತ್ತಿರುವುದು ನನ್ನ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ.

    ನನ್ನ ಪ್ರೀತಿ ಇಂದಿಗೂ ಅವಳ ಮೇಲೆ ಅಷ್ಟೇ ಇದೆ. ಅವಳು ಒಮ್ಮೊಮ್ಮೆ ನನ್ನ ಖುಷಿಯಲ್ಲಿ ಬಿಗಿದಪ್ಪಿಕೊಳ್ಳುವುದನ್ನು ನೋಡಿದರೆ ನನಗೆ ನನ್ನ ಬಗ್ಗೆ ಹೊಟ್ಟೆ ಉರಿಯುತ್ತೆ. ಎಷ್ಟು ಒಳ್ಳೆಯವಳು ನಾನ್ಯಾಕೆ ಅವಳನ್ನು ಅರಿತಿಲ್ಲ ಎನ್ನುವ ಸಂಕಟವೂ ಕಾಡುತ್ತದೆ. 'ಅದ್ಯಾರೆ ಆಗಿರಲಿ ತಾನು ಇಷ್ಟ ಪಡುವ ಹುಡುಗ/ಹುಡುಗಿ, ಇನ್ನೊಬ್ಬನ/ಳ ಜೊತೆ ಸ್ವಲ್ಪ ಅಟ್ಯಾಚ್ ಆದ್ರೂ ತಡೆದುಕೊಳ್ಳೋ ಶಕ್ತಿ ಯಾರಿಗೂ ಆ ಭಗವಂತ ನೀಡಿಲ್ಲ' ಇದು ನಿಜವಾದ ಮಾತು.  ಬೇಡ ಕಣೋ ನೀನು ನಇನ್ನ ಸಂಸಾರದ ಜೊತೆ ಹೊಂದಿಕೊಂಡು ಚೆನ್ನಾಗಿರು ಎಂದು ಅವಳಿಗೆ ಹಲವು ಬಾರಿ ಮನಮುಟ್ಟುವಂತೆ ಹೇಳಿದ್ದೆ. ಆದರೂ ಅವಳಿಗದು ಸಾಧ್ಯವಿಲ್ಲ. ನಾನು ಬೇಕೇ ಬೇಕು ಎನ್ನುತ್ತಾಳೆ!!. ನನ್ನ ಜೊತೆ ಇರಲೇಬೇಕೆಂದು ಹಠ ಹಿಡಿಯುತ್ತಾಳೆ. ನನಗೋ ಅವಳ ಬಿಂಕ ಬಿಟ್ಟುಕೊಡಲಾಗುತ್ತಿಲ್ಲ. ನನ್ನ ಹೃದಯ ಶ್ರೀಮಂತಿಕೆಯ ಗುಟ್ಟು ಅವಳಿಗೆ ತಿಳಿದಿಲ್ಲ. ಮದುವೆಯಾದೊಡೆ ಪ್ರೀತಿ ಸುಡುವುದೋ!?, ಪ್ರೀತಿ ಸ್ಥಾನಕೆ ಮತ್ತೊಬ್ಬ ಬಂದೊಡೆ ಬರೀ ಕತ್ತಲೇ ತುಂಬುವುದೋ!? ಎನ್ನುವ ಸಂಕೋಲೆಯ ಅರಿಯದೇ ತೀರ ನೋಡುತ ಕಣ್ಗಳು ಕೆಂಪಗಾಗಿವೆ. ಮತ್ತೆ ಮತ್ತೆ ಅವಳೇ ಬರುತ್ತಾಳೆ. ನೋವನ್ನು ಸಹಜವಾಗೇ ನೀಡುತ್ತಾಳೆ. ಅದಕ್ಕಾಗಿ ಅವಳು ಅವಳಾಗಿಯೇ ಇರಲಿ. ಅವಳ ಸಂಸಾರದಲಿ ಪ್ರೀತಿ ತುಂಬಿರಲಿ ಎನ್ನುತ ಅವಳಿಂದ ದೂರ ತ್ಯಾಗಿಯಾಗಿ ಹೆಜ್ಜೆಯಿಡುತ್ತಿದ್ದೇನೆ... ಓ ಪ್ರೀತಿಯೇ ಕಾಯ್ದಿರಿಸಿ ಕಾಪಾಡುತಿರು ನನ್ನವಳ...

ಸ್ಯಾಂಡಿ...


ಎಸ್..! ಎಕ್ಸಾಕ್ಟ್ಲೀ ಒನ್ ಇಯರ್...
ಈ ಜನವರಿ 1ಕ್ಕೆ  ಸ್ಯಾಂಡಿಗೆ ಒಂದು ವರ್ಷವಾಯ್ತು... ಆದರೆ ನನಗೆ ಹಾಗನ್ನಿಸುತ್ತಾ ಇಲ್ಲ. ಮೊನ್ನೆ ಮೊನ್ನೆ  ಮನೆಗೆ ಬಂದಂತೆ ಇದ್ದಾನೆ. ಇಷ್ಟು ಬೇಗ ಒಂದು ವರ್ಷವಾಯ್ತು ಎಂದರೆ ನಂಬೋಕೆ ಆಗ್ತಿಲ್ಲ. ಆದ್ರೂ ನಿಜ ಒಂದು ವರ್ಷವಾಗಿದೆ!!. ವರ್ಷಗಳು ಹಾಗೇ ಅಲ್ವಾ!!, ಫಾರ್ ಎಕ್ಸಾಂಪಲ್  ನಮ್ಮನ್ನೇ ತಗೊಳ್ಳಿ , ಚಡ್ಡಿ ಹಾಕೊಂಡ್ ಆಡ್ತಾ ಇದ್ದ ಬಾಲ್ಯ ಜೀವನ ಮೊನ್ನೆ ಮೊನ್ನೆ ಮುಗಿತಷ್ಟೇಯೇನೋ ಅನ್ನಿಸುವಷ್ಟರ ಮಟ್ಟಿಗೆ ಸ್ಫೀಡ್ ಲಿಮಿಟ್ ಇಲ್ಲದೇ ದಿನಗಳನ್ನು, ತಿಂಗಳುಗಳನ್ನು, ವರ್ಷಗಳನ್ನು ಕಳೆದುಕೊಂಡಿದ್ದೇವೆ. ಮೊನ್ನೆ ನಿನ್ನೆ ಕಂಡಿದ್ದ ದಿನಗಳು ಆಗಲೇ ಒಂದು ವರ್ಷ ಆಯಿತು ಎಂಬ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿವೆ. ಹಾಗೆ ನಮ್ಮ ಸ್ಯಾಂಡಿ ವಯಸ್ಸು ಕೂಡ ಕಳೆದದ್ದೆ ಗೊತ್ತಾಗಲಿಲ್ಲ.

ಜಾಸ್ತಿ ಪ್ರೀತಿಸುವವರನ್ನು  ಬಿಟ್ಟಿದ್ದರೆ ದಿನಗಳು ವರ್ಷಗಳಾಗುತ್ತವೆ, ಹತ್ತಿರ ಇಟ್ಟುಕೊಂಡರೆ ವರ್ಷಗಳು ದಿನಗಳಾಗುತ್ತವೆ ಎನ್ನುತ್ತಾರಲ್ಲ ಹಾಗಾಯ್ತು ನನ್ನ ಕತೆ. ಸ್ಯಾಂಡಿ ಪ್ರತಿ ದಿನವೂ ನನ್ನ ಜೊತೆ ಇದ್ದ. ನನ್ನೆಲ್ಲಾ ನಡಿಗೆಗೆ, ಓಡಾಟಕ್ಕೆ, ಸಭೆ ಸಮಾರಂಭಕ್ಕೆ ಅವನೇ ಸಾರಥಿಯಾಗಿ ಕುದುರೆಯಂತೆ ಮುನ್ನುಗ್ಗಿ ಓಡುತ್ತಿದ್ದ, ಅದಕ್ಕೆ ನಾನು ಅವನಿಗೆ ಮುಂದಿನ ಕಾಲಿನ ಮೇಲ್ಭಾಗದ ರಕ್ಷಣಾ ಕವಚದಲ್ಲಿ ಕಾಲೆತ್ತಿ ಜಿಗಿಯುತ್ತಿರುವ ಕುದುರೆಯನ್ನು ಕಟ್ಟಿ ನೀನು ಸಾರಥಿ ಕಣೋ ಎನ್ನುವ ಬಿರುದನ್ನು ನೀಡಿದ್ದು ಬಿಟ್ಟರೆ ಮತ್ತಿನ್ನೇನು ಜಾಸ್ತಿ ಕೊಟ್ಟಿಲ್ಲ...

ಹಾಗೇ ನೋಡಿದರೆ ಸ್ಯಾಂಡಿ ಇಡೀ ಒಂದು ವರ್ಷದಲ್ಲಿ ಇಡೀ ಬೆಂಗಳೂರನ್ನು ಮಾತ್ರವೇ ಓಡಿದ್ದು. ಮತ್ತೆಲ್ಲೂ ಓಡಾಡೋಕೆ ಹೋಗಿಲ್ಲ. ಆಸೆಯಿದ್ದರೂ ಹೊಟ್ಟೆಪಾಡಿನ ಬದುಕು ಎಲ್ಲಿಗೂ ಕರೆಸಿಕೊಳ್ಳಲಿಲ್ಲ. ಅದನ್ನು ಲೆಕ್ಕಹಾಕಿದರೆ ಟೋಟಲ್ಲಾಗಿ ಬರೋಬ್ಬರಿ 13,000 ಕಿ.ಮೀ...ಎನ್ನುವ ನಿಖರತೆ ಮೀಟರ್ ತೋರಿಸುತ್ತಿದೆ. ನೀವು ಹೇಗೆ ಅಂದಾಜು ಹಾಕಿ ನೋಡಿದರೂ ಇಲ್ಲಿಂದ ಕನ್ಯಾಕುಮಾರಿಯವರೆಗೆ 9 ರಿಂದ 10 ಬಾರಿ ಹೋಗಿ ಬರಬಹುದು ಅಷ್ಟು ದೂರ ಓಡಾಡಿದ್ದಾನೆ. ಆದರೂ ಎಂದು ಅವÀನ ಉತ್ಸಾಹ ಸುಸ್ತಾಗಿಲ್ಲ, ಬೆಂಡಾಗಿಲ್ಲ.
ಸ್ಯಾಂಡಿನ ನಾನು ತುಂಬಾ ಇಷ್ಟ ಪಟ್ಟೆ ಕೊಂಡಿದ್ದು. ಅವನು ಬರುವಾಗ ಹೇಗೆ ಪಳ ಪಳ ಅಂತಿದ್ದನೋ ಇಂದಿಗೂ ಹಾಗೆ ಇರುವಂತೆ ನೋಡಿಕೊಂಡಿರುವುದು ನಾನವನನ್ನು ಎಷ್ಟು ಕೇರ್ ಮಾಡ್ತೀನಿ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ. ಇದು ನನಗೂ ಗರ್ವ ಹೆಮ್ಮೆ.

ತೀರಾ ಚಿಕ್ಕವನಿರುವಾಗ ಊರಲ್ಲೊಬ್ಬ ಶ್ರೀಮಂತ ವ್ಯಕ್ತಿ ಗುಡು ಗುಡು ಸದ್ದು ಮಾಡುತ್ತಾ ಬುಲೆಟ್ ಏರಿ ಬರುತ್ತಿದ್ದ ಅವನು ಮಾರು ದೂರದಲ್ಲಿ ಬರುವಾಗಲೇ ನಾವದನ್ನು ನೋಡಲು ಮನೆಯ ಪಕ್ಕದಲ್ಲೇ ಇದ್ದ ರಸ್ತೆ ಬದಿಗೆ ಓಡಿ ಬಂದು ನಿಲ್ಲುತ್ತಿದ್ದೆವು. ಅವನು ನಮ್ಮನ್ನ ನೋಡಿ ಇನ್ನೂ ಒಂದಿಂಚು ಜಾಸ್ತಿನೇ ಫೋಸ್ ಕೊಟ್ಟು ರಾಜನಂತೆ ಗಾಂಭೀರ್ಯದಲಿ ಮುಗುಳ್ನಗೆ ಬೀರುತ್ತಾ ಹೋಗುತ್ತಿದ್ದ. ಆದರೆ ಎಂದೂ ಇಂತಹ ಒಂದು ಬುಲೆಟ್‍ನ ಒಡೆಯ ನಾನೂ ಆಗತ್ತೇನೆ ಎನ್ನುವ ಯಾವ ಕನಸೂ ನನ್ನಲ್ಲಿರಲಿಲ್ಲ. ಅವನ್ನೆಲ್ಲಾ ಎಣಿಸಿದರೆ ನನ್ನಿಷ್ಟದ ಆ ಕನಸನ್ನು ನೆರವೇರಿಸಿದ ಹೆಮ್ಮೆ ಸ್ಯಾಂಡಿಗೆ ಸಲ್ಲುತ್ತದೆ... ಥ್ಯಾಂಕ್ಸ್ ಕಣೋ ಸ್ಯಾಂಡಿ.

ಕೇವಲ ನನಗಷ್ಟೇ ಅಲ್ಲ... ಮನೆಯಲ್ಲಿ ಎಲ್ಲಿರಿಗೂ ಅವನೆಂದರೆ ಇಷ್ಟ. ಸದಣ್ಣ ನಿತ್ಯಣ್ಣನಿಗೂ ಇವನ ಓಟ ಇಷ್ಟ. ಅವನೊಂತರ ಗಾಳೀಲಿ ನುಗ್ಗೋ ಬುಲೆಟ್ ಥರಾ... ಅವನ ಮುಂದೆ ಯಾವ ಸಹಪಾಠಿಯ ಆಟವೂ, ಓಟವೂ ನಡೆಯದು. ಕೇವಲ ನನಗೆ, ನನ್ನ ಮನೆಯವರಿಗೆ ಮಾತ್ರಾ ಯಾಕೆ, ಅನೇಕ ಹುಡುಗೀಯರು ಇವನಿಗೆ ಲೈನ್ ಹಾಕುತ್ತಾರೆ. ನಂಗೋತ್ತರಾ ಹೊಟ್ಟೆ ಉರಿಯುತ್ತೆ ಆದರೂ ತಾಳ್ಮೆ ವಹಿಸುತ್ತೇನೆ ಕಾರಣ ಸ್ಯಾಂಡಿ ನನ್ನೋನಲ್ವಾ ಅದಕ್ಕೆ. ಎಲ್ಲಾ ಗೊತ್ತಿದ್ದೂ ಗೊತ್ತಿದ್ದೂ ಒಂದಿಬ್ಬರೂ ಗೆಳತಿಯರು ನನಗೆ ಅನೇಕ ಬಾರಿ ಆಫರ್ ಮಾಡಿದ್ದರು. ಸ್ಯಾಂಡಿ ಜೊತೆ ನಾವೂ ಬರ್ತೀವಿ ಕರ್ಕೊಂಡು ಹೋಗು ಎಂದಿದ್ದರು. ಆದರೆ ನಾವ್ಯಾರಿಗೂ ಮಣೆ ಹಾಕೋದಿಲ್ಲ ಬಿಕಾಸ್ 'ನಾನು ಸ್ಯಾಂಡಿ ದೋಸ್ತಿ'...

ನಮ್ಮದೀಗ ಖಾಸಾ ಸಂಬಂಧ, ಮನಸ್ಸಿನ ಆಸೆಯ ಪ್ರಕಾರ ಕೊನೆಯವರೆಗೂ ಸ್ಯಾಂಡಿ ನನ್ನ ಜೊತೆಗೆ ಇರುತ್ತಾನೆ. ನನ್ನ ಹಲವು ಫ್ಯೂಚರ್ ಪ್ರಯಾಣಗಳಲ್ಲಿ ಸ್ಯಾಂಡಿಯೇ ಸಾರಥಿಯಾಗಿ ನನ್ನನ್ನು ಯಾವ ತೊಂದರೆಯೂ ಇಲ್ಲದೇ ಕರೆದುಕೊಂಡು ಹೋಗುತ್ತಾನೆ ಎನ್ನುವ ಕನಸು ಬಗಲಲ್ಲಿದೆ. ಈಗಾಗಲೇ ಸಾಕಷ್ಟು ಓಡಾಡಿದ್ದೀವಿ. ಆದರೆ ಯಾವತ್ತೂ ಸ್ಯಾಂಡಿ ಬೇಜಾರು ಮಾಡಿಕೊಂಡಿಲ್ಲ. ಒಮ್ಮೊಮ್ಮೆ ರಣ ರಣ ಬಿಸಿಲಲ್ಲಿ ನಿಲ್ಲಿಸಿ ಇಲ್ಲೇ ಇರು ಬೇಗ ಬರ್ತೀನಿ ಎಂದು ಹೇಳಿ ಹೋಗಿದ್ದಾಗಲೂ ಬೆಂಡಾಗದೇ ನಾನು ಬರುವವರೆಗೂ ಹಾಗೆಯೇ ನಿಂತು ನನ್ನ ಗೆಳೆತನಕ್ಕೆ ಋಣಿಯಾಗಿದ್ದೆಲ್ಲಾ ಏಣಿಸಿದರೆ ಅವನ ಮುಂದೆ ನನಗ್ಯಾರು ಅತೀ ಆತ್ಮೀಯರು ಇಲ್ಲ ಎನಿಸುತ್ತದೆ. ಇದನ್ನೆಲ್ಲಾ ನೋಡಿ ನನ್ನ ಕಣ್ಣಲ್ಲೂ ಭಾವನೆಯ ಕಣ್ಣೀರು ಬಂದಿದ್ದೂ ಇದೆ.

 ಅವನ ಆರೋಗ್ಯ ವರ್ಷದಲ್ಲಿ ಒಮ್ಮೆಯೂ ಕೆಟ್ಟಿಲ್ಲ, ಆದರೆ ಎರಡು ಬಾರಿ ಹಿಂ’ಗಾಲಿ’ಗೆ ಮೊಳೆ ಚುಚ್ಚಿ ಮುಂದೆ ಚಲಿಸಲಾರೆ ಎಂದು ಖಡಾಖಂಡಿತವಾಗಿ ಕುಳಿತುಬಿಟ್ಟಿದ್ದ. ಒಮ್ಮೆ ಉಸಿರಾಟದ ಸಮಸ್ಯೆ ತಲೆದೋರಿ ಮಧ್ಯೆ ಮಧ್ಯೆ ನಿಂತು-ನಿಂತು ಓಡಿದ್ದ. ಹೀಗೆಲ್ಲಾ ಆದಾಗ ತಡಮಾಡದೇ ಅವನಿಗೆ ಬೇಕಾದ ಚಿಕಿತ್ಸೆ ನೀಡಿ ಜಾಗೃತೆವಹಿಸಿ ಮತ್ತೆ ಚೇತರಿಸಿಕೊಳ್ಳುವಂತೆ ಮಾಡಿದ್ದೆ.  

ನನಗೀಗಲೂ ಗೊತ್ತು, ಸ್ಯಾಂಡಿ ಮೇಲೆ ಅನೇಕರಿಗೆ ಕಣ್ಣಿದೆ. ಅನೇಕರ ಕಣ್ಣೂ ಬಿದ್ದಿದೆ. ಆದರೆ ಸ್ಯಾಂಡಿ ಸ್ವಲ್ಫವೂ ಜಗ್ಗಿಲ್ಲ. ಅವನ ವರ್ಚಸ್ಸು, ಘನತೆ, ಮಿಡುಕಾಡೋ ಹೊಳಪು ಹಾಗೆ ಇದೆ. ಒಮ್ಮೆಯಂತೂ ನಡು ದಾರಿಯಲ್ಲಿ ಬಂದ ಕಾರ್‍ಗೆ  ಬುದ್ಧಿ ಹೇಳೋ ನೆಪದಲ್ಲಿ ತನ್ನ ರಕ್ಷಣಾ ಕವಚವಾದ ಗಾರ್ಡ್‍ನ್ನೇ  ಬಂಗಿಸಿಕೊಂಡು ಕಾರ್‍ನ ಮುಂಬಾಗವನ್ನೇ ಜಜ್ಜಿ ತನ್ನ ಕೋಪ ತೋರಿಸಿದ್ದ. ಆದರೆ ನನಗೇನೂ, ಕೊಂಚವೂ ನೋವು ಮಾಡದೇ ರಕ್ಷಣೆಯಲ್ಲೇ ಹರಿಹಾಯ್ದು ಸಮಾಧಾನವನ್ನು ಪಡೆದುಕೊಂಡಿದ್ದ.
ಅವನೊಂಥರ ಮುಗ್ಧ, ಏನೂ ಗೊತ್ತಿಲ್ಲ. ಅವನಿಗೆ ಹೊಟ್ಟೆಗೆ ಪೆಟ್ರೋಲ್, ಟೈಮ್ ಟು ಟೈಮ್‍ಗೆ ಸರಿಯಾದ ಜೀವನಾವಶ್ಯಕ ಸರ್ವೀಸ್ ಬಿಟ್ಟರೇ ಬೇರೇನೂ ಬೇಡ. ಆದರೆ ನನಗೆ ಅವನ ಆರೋಗ್ಯದ ಜೊತೆಗೆ ಅವನಂದವೂ ಇಂಪಾಟೆಂಟ್. ಅದಕ್ಕಾಗಿ ಅವನನ್ನು ಮನೆಗೆ ಕರೆದುಕೊಂಡು ಬಂದಿದ್ದ ಮೊದಲಲ್ಲೇ, ಅವನಿಗೆ ಬೇಕಾಗಿರುವ ಸಿಂಗಾರವನ್ನೆಲ್ಲಾ ಮಾಡಿಸಿದ್ದೆ. ಹಿತ್ತಾಳೆಯ ಓಲೆಗಳು, ಹಿಂದಿನ ಕೆಂಬಂಣ್ಣದ ದೀಪಕ್ಕೆ ಗಾಯವಾಗಬಾರದೆಂದು ಕಪ್ಪನೆಯ ಹೊದಿಕೆಯನ್ನು ಮುಂದಿನ ಚಕ್ರದ ಮೇಲೆ ಸಾರಥಿಯನ್ನು  ಹಾಕಿ ಅವನಂದವನ್ನು ಕಣ್ತುಂಬಿಕೊಂಡಿರುವೆ.

ನನಗೂ ಅಷ್ಟೇ ಒಂದಿನವೂ ಅವನ ಮೇಲೆ ಬೇಜಾರಾಗಿದ್ದಿಲ್ಲ. ಅವನು ಒಂದು ಸ್ವಲ್ಪ ಕೊಳಕ ಯಾಕೆಂದರೆ ದಿನಾ ಸ್ನಾನ ಮಾಡುವುದಿಲ್ಲ. ದೇಹತೂಕದಲ್ಲಿ ಆನೆ ಮರಿಯನ್ನೇ ಹೋಲುವಂತಿದ್ದರೂ, ಇನ್ನೂ ಪುಟ್ಟ ಮಗುವಿನ ಥರ ಸುಮ್ಮನೆ ನಿಂತು ಬಿಡುತ್ತಾನೆ. ಸ್ನಾನ ಕೂಡ ನಾನೇ ಮಾಡಿಸಬೇಕು. ನನಗೂ ಅವನನ್ನ ದಿನಾ ಸ್ನಾನ ಮಾಡಿಸೋಕೆ ಆಗಲ್ಲ ಅದಕ್ಕಾಗಿ ವಾರಕ್ಕೊಮ್ಮೆ ಟೈಮ್ ತಗೊಂಡು ಮೈಯನ್ನೆಲ್ಲಾ ತೊಳೆಸುತ್ತೇನೆ. ಒಮ್ಮೊಮ್ಮೆ ಸಮಯ ಇಲ್ಲದಾಗ 15 ದಿನಕ್ಕೊಮ್ಮೆ ಸ್ನಾನ ಮಾಡಿದರೂ ವಿಪರ್ಯಾಸವೇನಿಲ್ಲ.

ಇವನೊಂಥರ ನನ್ನ ಅರ್ಧಾಂಗಿ ಇದ್ದ ಹಾಗೆ. ಎಲ್ಲಾ ಕೆಲಸದಲ್ಲೂ ಇವನ ಕಾರ್ಯವೇ ಜಾಸ್ತಿ ಇರುತ್ತೆ. ಅದು ಸಂದರ್ಶನವಾಗಿರಬಹುದು, ಆಫೀಸ್ ಬಿಟ್ಟು ನನ್ನ ಪರ್ಸನಲ್ ಕೆಲಸವಾಗಿರಬಹುದು ಅಥವಾ ಯಾವ ಕಾರ್ಯಕ್ರಮಗಳೇ ಆಗಬಹುದು ಅದನ್ನೆಲ್ಲಾ ಆಯೋಜನೆ ಮಾಡಲು, ಭಾಗವಹಿಸಲು ನನ್ನನ್ನು ಕರೆದುಕೊಂಡು ಓಡಾಡುವವನು ಇವನೊಬ್ಬನೇ.

ಸ್ಯಾಂಡಿ ನನ್ನ ಬ್ಯುಸಿ ಬದುಕಿನ ಒಂದು ಭಾಗ. ಆದ್ದರಿಂದ ನನ್ನ ಹೆಸರಿನ ಅರ್ಧ ಹೆಸರನ್ನು ಅವನಿಗೆ ಕೊಟ್ಟು ಸ್ಯಾಂಡಿ ಎಂದು ಹೆಸರಿಟ್ಟಿದ್ದು. ಕಪ್ಪಗಿರಲಿ, ಕೊಳಚಾಗಿರಲಿ ಇವನು ಸದಾ ಮಿಡುಕುವ ಮಡಿವಂತನೇ ಆಗಿದ್ದಾನೆ. ಹಿ ಇಸ್ ಮೈ ಬೆಸ್ಟ್ ಫ್ರೆಂಢ್... ನಿನ್ನ ನನ್ನ ಸ್ನೇಹ ಹೀಗೆ ಇರಲಿ, ನಮ್ಮಿಬ್ಬರ ಭಾವ ಸದಾ ಬಳುಕುತ್ತಿರಲಿ, ಆರೋಗ್ಯ ಆಯುಷ್ಯ ಏರಡನ್ನು ಆ ಭಗವಂತ ನನಗಿಂತ ನಿನಗೆ ಜಾಸ್ತಿ ನೀಡಲಿ ಎನ್ನುತ್ತಾ ಕೊನೆಯದಾಗಿ ಹೇಳುತ್ತಿರುವೆ 'ವಿಶ್ ಯೂ ಹ್ಯಾಪಿ ಬರ್ತ್ ಡೇ ಕಣೋ'...

Monday, 12 December 2016

ಪ್ರೇಮಾಯಣ...ಕವಿ ಕನವರಿಕೆ: 7


       ಅವಳಿಗೆ ನನ್ನ ಫ್ರೆಂಡ್ಸ್ ಕರೆಯೋದು ಸೋಡಾಬುಡ್ಡಿ ಎಂದು. ನಾನು ಕರೆಯುವುದು ಕನ್ನಡಕ ಎಂದು...ಹ ಹ್ಹ ಹ್ಹಾ...ಇದೇನೂ ಹೊಸ ಬಗೆಯಲ್ಲಿದೆಯಲ್ಲಾ ಹೆಸರು ಎಂದು ನಗುತ್ತಿದ್ದೀರಾ!..
      ನನ್ನೊಳಗೆ ಯಾವಾಗಲೂ ಅವಳಿಗಿಂತ ಅವಳ ಕಣ್ಣಿನ ಮುಂಬಾಗದಲ್ಲಿರುವ ಕನ್ನಡಕವೇ ಜಾಸ್ತಿ ಆಕ್ರಮಿಸಿ ಎದ್ದು ಕಾಣುತ್ತಿತ್ತು. ಅದು ಇರುವುದರಿಂದಲೇ ಅವಳೊಂಥರ ಅಂದವಾಗಿ ಕಾಣುತ್ತಿದ್ದಳು ಎನಿಸುತ್ತಿತ್ತು. ಅದಕ್ಕಾಗಿ ಹಾಗೆ...
ಅಂದಹಾಗೆ ಒಬ್ಬ ಹುಡುಗನಿಗೆ ಹುಡುಗಿಯೊಬ್ಬಳು ಸೆಳೆಯಲು ಯಾವ ನಿಗಧಿತ ಕಾರಣ ಬೇಕಿಲ್ಲ ಬಿಡಿ!,
ಅವಳ ಗುಂಡು ಮುಖ, ಕೆಂಪನೆಯ ತುಟಿ, ಗುಳಿಬಿಳುವ ಕೆನ್ನೆ.., ಇವುಗಳ ಮಧ್ಯೆ ನಾನೂ ಇದ್ದೇನೆ ಎಂದು ಉಪಸ್ಥಿತಿ ಕಂಡಿರುವ ಕನ್ನಡಕ!, ಅವಳ ಡ್ರೆಸ್ ಕೋಡ್, ಸಣ್ಣಗೆ ಕನ್ನಡಕದೊಳಗಿನಿಂದ ಕದ್ದು ನೋಡುವ ಕಣ್ಣು ಇವುಗಳೆಲ್ಲ ನನ್ನ ಮಾಮೂಲಿಗಿಂತ ಹೆಚ್ಚಿಗೆ ಹಾಳು ಮಾಡಿದ್ದವು.
ಕ್ಲಾಸ್‍ನಲ್ಲಿ ಅವಳು ನನ್ನ ನೋಡುತ್ತಿದ್ದಳು, ನಾನಂತೂ ಸ್ವಲ್ಪ ಜಾಸ್ತಿಯೇ ಅವಳ ಕಡೆ ಇಣುಕುತ್ತಿದ್ದೆ. ಮಾತು ಬರುತ್ತಿರಲಿಲ್ಲ...
ಎದುರು ಬಂದರೆ ಮೀಟರೂ ಇರುತ್ತಿರಲಿಲ್ಲ. ಅಂತೂ ಪದವಿ ಶಿಕ್ಷಣದ ಮೂರು ವರ್ಷವೂ ಹಾಗೇ ಸಾಗಿತ್ತು. ಕೊನೆಗೂ ಮಾತನಾಡಿಸುವ ಧೈರ್ಯ ಬರಲೇ ಇಲ್ಲ. ಒಂದಿನ ಅವಳೇ ಬಂದು ಲೆಟರ್ ಕೈಗಿತ್ತಳು. ನೆಕ್ಸ್ಟ್ ವೀಕ್ ನನ್ನ ಮದುವೆ...ಬರಬೇಕು ಎಂದಳು...ಮುಂದೇನಾಗುತ್ತದೆ ಎಂದು ಅರಿಯುವುದರೊಳಗೆ ಹಿಂತಿರುಗಿ ಹೋಗಿದ್ದಳು. ಎದೆಯೊಳಗಿದ್ದ ಮಾತು ಬಳುಕಿನ ಬೆನ್ನಡಿಗೆ ನೋಡಿ ಒಳಗೊಳಗೆ ಕಂಪಿಸುತ್ತಾ ಮೂಖವಾಗಿದ್ದವು.