Friday, 9 December 2016

ಹನಿಯೊಂದು ಜಾರಿತು...


ಸಾರ್ಥಕವಾಯ್ತು...
ಒಂದೇ ವೇದಿಕೆಯಲ್ಲಿ ಮೂರು ವಿಶೇಷಗಳಿತ್ತು... ಒಂದು, ನನ್ನ ಕುಂದಾಪ್ರ ಕನ್ನಡ ಭಾಷೆಯ ‘ಗಂಡ್ ಹಡಿ ಗಂಡ್’                                                                                        ಆಲ್ಭಮ್ ಹಾಡುಗಳ ಧ್ವನಿಸುರುಳಿ ಬಿಡುಗಡೆ. ಇನ್ನೊಂದು ಅದೇ ದಿನ ನನ್ನ ಹುಟ್ಟು ಹಬ್ಬ. ಮತ್ತೊಂದು ನನಗೆ ಜನ್ಮವಿತ್ತ ಅಪ್ಪ ಅಮ್ಮಂದಿರನ್ನೂ ಬಹುಜನರ ಮಧ್ಯದಲ್ಲಿ ಸತ್ಕರಿಸಿ, ಸನ್ಮಾನಿಸಬೇಕೆನ್ನುವ ಆಸೆಯೂ ಒಂದೇ ವೇದಿಕೆಯಲ್ಲಿ ಫಲಪ್ರದ. ಇವೆಲ್ಲವೂ ನನ್ನಲ್ಲಿ ಮನಸೊಳಗೆ ಸಾರ್ಥಕತೆಯ ಮಿಡಿತ ಮೇಳೈಸಿತ್ತು... ಎಲ್ಲದಕ್ಕಿಂತ ಹೆಚ್ಚಾಗಿ ಕಾಡಿದ್ದು, ತಂದೆ ತಾಯಿಯರಿಗೆ ಸಲ್ಲಿದ ವಿಶೇಷ ಗೌರವ. ಆ ಕ್ಷಣ ಸವಿಯಲು ನನಗೆ 25 ವರ್ಷ ಬೇಕಾಯಿತು. 25 ವರ್ಷ ಅದಕ್ಕಾಗಿ ಕಾದೆ ಅನ್ನಿಸಿತು. ಆ ಹೊತ್ತು ನನ್ನಲ್ಲಿ ಮೂಡಿದ್ದು, ಮೂಡಿಸಿದ್ದು ಶೂನ್ಯಕ್ಕೆ ಮಿಡಿದ ಕಣ್ಣ ಹನಿಯೊಂದು ಮಾತ್ರ.

 ಬಹುಶಃ ನನ್ನೊಳಗೆ ನನಗೆ ಗೊತ್ತಿದ್ದದ್ದು ನನ್ನ ಇಷ್ಟವನ್ನು ಬೆನ್ನತ್ತಿ ಹೋಗಿ, ಖುಷಿ ಕಾಣುವ ನಲಿವು ಮಾತ್ರ.  ಅಂದೆಲ್ಲ ನಮ್ಮೂರ ಹಳ್ಳಿಯಲ್ಲಿ ಯಾವುದೋ ಗೌಜಿನ ಆಕ್ರೇಸ್ಟ್ರಾವನ್ನೋ, ಮನೆ ಮನೆಯ ಅಂಗಳದಲ್ಲಿ ಹರಕೆಯಾಟವೆಂಬಂತೆ ಆಡುತ್ತಿದ್ದ ಯಕ್ಷಗಾನವನ್ನೋ, ಕೋಲ ಕುಣಿತವನ್ನೋ, ದೂರದ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆ ಕುಣಿತವನ್ನೋ, ನೋಡಿ; ಮನೆಯಲ್ಲಿದ್ದ ಹಳೆ ಕಾಲದ ಫಿಲಿಪ್ಸ್ ರೇಡಿಯೋವನ್ನೋ ಕೇಳಿ, ಅದರಲ್ಲಿ ನಾದಿಸುತ್ತಿದ್ದ ಹಾಡು ಹಸೆಯಿಂದ ಪ್ರೇರೆಪಿತನಾಗಿ, ನಾನು ಕೂಡ ಯಾವುದಾದರೊಂದು ಕಲೆಯಲ್ಲಿ ತೊಡಗಿಕೊಳ್ಳಬೇಕಲ್ಲ ಎನ್ನುವ ಹುಚ್ಚುತನದಲ್ಲಿ ಅಲೆಯುತ್ತಿದ್ದದ್ದು ಇಂದು ಕಾರ್ಯಫಲವಾಯಿತೇನೋ ಅನಿಸುತ್ತಿದೆ. 

ನಮ್ಮೂರು ಪುಟ್ಟ ಹಳ್ಳಿಯಾದ್ದರಿಂದ ಅಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ನಿಂತಿದ್ದರೂ, ಶಾಲಾ ಕಾಲೇಜುಗಳ ಓದಿಗೆ ಅಡ್ಡಿಯಿರಲಿಲ್ಲ. ಮನೆಯ ಪ್ರತಿ ಮಕ್ಕಳು ಶಾಲೆಗಳಿಗೆ ಹೋಗಿ ವಿದ್ಯಾರ್ಜನೆ ಮಾಡುವುದು ಕಡ್ಡಾಯವೆಂಬಂತೆ ಎಲ್ಲರ ಮನೆಯಲ್ಲೂ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದರು ಅದಕ್ಕಾಗಿ ಇಂದಿಗೂ ಅಲ್ಲಿನ ಎಲ್ಲಾ ಮಕ್ಕಳು ವಿದ್ಯಾವಂತರೇ ಆಗಿದ್ದಾರೆ. ಆ ಶಾಲೆಯ ದಿನದಲ್ಲಿ ಯಾವುದೋ ದಿನಾಚರಣೆಗೋ, ಇನ್ಯಾವುದೋ ಜಯಂತಿಗೋ ಒಮ್ಮೊಮ್ಮೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದದ್ದೂ ಅಲ್ಲೆಲ್ಲ ನನ್ನ ಉಪಸ್ಥಿತಿ ಬಹುಮುಖ್ಯವಾಗಿದ್ದದ್ದೂ, ಆ ದಿನಗಳಲ್ಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಳ್ಳುವುದು ಅದೃಷ್ಟ ದೊರಕಿದ್ದದ್ದು ಹೀಗೆ ಎಲ್ಲವೂ ಕೂಡ ಇಂದು ಋಣಿ ಹೇಳುವ ಕಾಯಕ ಒದಗಿಸಿವೆ ಎಂದರೆ ತಪ್ಪಿಲ್ಲ.

ಅಂದು ರೇಡಿಯೋದಲ್ಲಿ ಬರುತ್ತಿದ್ದ ಚಲನಚಿತ್ರಗೀತೆ, ಭಾವಗೀತೆ, ಜಾನಪದಗೀತೆ ಮತ್ತು ಭಕ್ತಿಗೀತೆಯ ಹಾಡುಗಳನ್ನು ಕೇಳಿಸಿಕೊಂಡು, ಅವುಗಳ ಬಗ್ಗೆ ಆಸಕ್ತಿ ಮೂಡಿಸಿಕೊಂಡು, ಅದರಲ್ಲೇ ತಲ್ಲೀನತೆ ಮೆರೆದು, ಹಾಡುಗಳನ್ನು ಗುನುಗುತ್ತಾ ಗುನುಗುತ್ತಾ ನನ್ನ ಬಾಹ್ಯ ಪ್ರಪಂಚವನ್ನೇ ಮರೆಯುತ್ತಿದ್ದೆ. ಆ ಖುಷಿ, ಆ ನೆಮ್ಮದಿಯ ಕ್ಷಣ, ಆ ಸುಖ ಇಂದು ಇನ್ಯಾವುದರಲ್ಲೋ ಇದೆ ಅಂತ ನನಗನಿಸುವುದೇ ಇಲ್ಲ.
ಆ ಸಮಯ ಗುನುಗುತ್ತಿದ್ದ ಪ್ರತಿ ಹಾಡುಗಳು, ನಾನು ಒಬ್ಬ ಹಾಡುಗಾರನಾಗಬೇಕು, ಕೇಳಬೇಕು, ಹಾಡುಗಳನ್ನು ಕಲಿಯಬೇಕೆನ್ನುವ ಆಸೆಗಳನ್ನು ಮೊಳಕೆಯೊಡಿಸಿದ್ದವು. ಆ  ಮನಸ್ಸಿನ ಹಠ ನನಗರಿವಿಲ್ಲದೇ ನಾನೇ ಹಾಡುಗಳನ್ನು ಬರೆಯುವ ಕಾಯಕವನ್ನು ನನ್ನೊಳಗೆ ಕಲಿಸಿದ್ದವು. ದಿನದಿಂದ ದಿನಕ್ಕೆ ಎಲ್ಲಿಯೇ ಕೂರಲಿ, ಯಾವ ಸ್ವರವೇ ಕೇಳಲಿ ಅದಕ್ಕೊಂದು ಸ್ವರಸೇರಿಸುವ ಹುಚ್ಚು ಅತಿಯಾಗತೊಡಗಿದ್ದÀವು. ಆ ಕಾಡು ಮೇಡುಗಳ ಮಧ್ಯದಲ್ಲಿರುವ ಪ್ರತಿ ಗಿಡ ಮರಕ್ಕೂ ಅಂದಿನ ನನ್ನ ಹಾಡು ಕೇಳುತಿತ್ತೇ ವಿನಃ ಹೊರಗೆಲ್ಲೂ ಬಿದ್ದಿರಲಿಲ್ಲ.

ಪ್ರತಿದಿನದ ನನ್ನೊಳಗಿನ ಹಾಡು, ಎಲ್ಲಾದರು ದೂರ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಅಲ್ಲಿಗೆ ಓಡುತ್ತಿದ್ದ ನನ್ನ ಪರಿ ಇತ್ಯಾದಿಗಳೆಲ್ಲವೂ ಒಂದಿಷ್ಟು ಉತ್ಸಾಹ ತುಂಬಿ ನಿನ್ನಿಂದಲೂ ಸಾಧ್ಯ ನಡೆ ಮುಂದೆ ಎಂದು  ಸಣ್ಣಪುಟ್ಟ ವೇದಿಕೆಯ ಅವಕಾಶಗಳನ್ನು ನೀಡಿದ್ದು, ಸದ್ಭಳಕೆ ಎಂಬಂತೆ ನನಗೆ ವರಧಾನವಾಗಿತ್ತು.

‘ನಾ ಏನಿತು ಜೀವರುಗಳಿಗೆ ಋಣಿಯೋ’ ... 
ನನ್ನ ಹಾಡು, ನನ್ನೂರ ಭಾಷೆಯ ಹಾಡು ಲೋಕಾರ್ಪಣೆಗೊಂಡ ಸಮಯವದು. ಆ ಘಳಿಗೆ ಮುಂದೊಂದು ದಿನ ನನ್ನ ಬದುಕಲ್ಲಿ ಬರುತ್ತದೆ ಎಂದು ಏಣಿಕೆಯೇ ಇರಲಿಲ್ಲ. ಆ ದಿನ ಬಿಡುಗಡೆಯಾಗಿದ್ದು ನನ್ನ ಎರಡು ಆಲ್ಭಮ್ ಹಾಡುಗಳು. ಆ ಹಾಡುಗಳಿಗಾಗಿ ಸತತ 365 ದಿನಗಳು ಅಂದರೆ ಒಂದು ವರ್ಷ, ಅಲೆದಾಡದ ಸ್ಥಳಗಳಿಲ್ಲ, ಮಾಡದ ಕೆಲಸಗಳಿಲ್ಲ. ನೀವು ನಂಬುತ್ತೀರೋ ಬಿಡುತ್ತೀರೋ, ಕೇವಲ ಒಂದೇ ಒಂದು ಸಾಂಗನ್ನು ಮೂರು ಮೂರು ಸಲ ರೆಕಾರ್ಡಿಂಗ್ ಮಾಡಿಸಿದ್ದೆ. ಮೊದಲ ಎರಡು ಸಲ ರೆಕಾರ್ಡಿಂಗ್ ಮಾಡಿಸಿದಾಗಲೂ ಇನ್ನೂ ಏನೋ ಬೇಕು ಎನ್ನುವ ಆಸೆಯಿತ್ತೇ ಹೊರತು ಮನಸಿಗೆ ಖುಷಿಯಾಗಿರಲಿಲ್ಲ. ಮತ್ತದೇ ಪ್ರಯತ್ನ. ಮ್ಯೂಸಿಕ್ ಡೈರೆಕ್ಟರ್ ಹತ್ತಿರ ಹೋಗುವುದು, ಮನೆಗೆ ಬರುವುದು... ಎಲ್ಲಾ ಸೆಟ್ ಆಯ್ತು! ನೋ ಪ್ರಾಬ್ಲಂ!!, ಅನ್ನೋವಾಗ ಫೈನಾಶ್ಯೀಯಲಿ ಪ್ರಾಬ್ಲಂ ಆಗೋದು!.. ಹೀಗೆ ಕೇವಲ ಎರಡೇ ಎರಡು ಸಾಂಗ್‍ಗೆ ಬರೋಬ್ಬರಿ ಒಂದು ವರ್ಷ, ಕಾಲದ ಕಾಲು ಚಲಿಸಿತ್ತು. ಅಂತೂ ಇಂತೂ ಸತತ ಪ್ರಯತ್ನದ ನಡುವೆ ಅದ್ಧೂರಿ ಕಾರ್ಯಕ್ರಮದಲ್ಲಿ ಆ ಹಾಡುಗಳು ಬಿಡುಗಡೆಯಾಗುವ ಭಾಗ್ಯವೂ ದೊರಕಿತ್ತು..

ಬಹುದಿನದ ಕನಸನ್ನು ಹೇಗಾದರೂ ಮಾಡಿ ನೆರವೇರಿಸಿಕೊಳ್ಳಲೇಬೇಕೆನ್ನುವ ಆಸೆಯಿಂದ ಇಡೀ ಕಾರ್ಯಕ್ರಮವನ್ನು ಒಬ್ಬನೇ ವಹಿಸಿಕೊಂಡು ಮಾಡಿದ್ದರಿಂದ ಒಂದು ಕಡೆ ಕ್ಷಣಕ್ಷಣಕ್ಕೂ ಕಾರ್ಯಕ್ರಮ ಚೆನ್ನಾಗಿ ಬರಬೇಕು ಎನ್ನುವ ಮನದ ಒತ್ತಡ, ಇನ್ನೊಂದು ಕಡೆ ಅನೇಕರಿಗೆ ನನ್ನ ಕೊಡುಗೆ ಮುಟ್ಟುತ್ತಿದೆಯಲ್ಲಾ ಎನ್ನುವ ಸಂಭ್ರಮ. ಸಭೆ ಪ್ರಾರಂಭವಾಗಿ ಪ್ರಾಸ್ತಾವಿಕ ಮಾತಿಗೆ ಇಳಿದಾಗ, ನಾನು ಈ ಒಂದು ದಿನಕ್ಕಾಗಿ ಹಿಂದೆ ಪಟ್ಟ ಕಷ್ಟ, ಹಾಡಿನ ರಸದ ಹಿಂದಿರುವ ಕಹಿ ಸತ್ಯವನ್ನೆಲ್ಲಾ ಬಿಚ್ಚಿಡುವ ಮನವಿದ್ದರೂ, ಯಾಕೋ ಮನಸ್ಸು ಮೂಕವಾಗಿ ಪದಗಳೇ ಹೊರಡಲಿಲ್ಲ. ನನಗೆ ಬೆನ್ನ ಹಿಂದೆ ಇದ್ದು ಸಹಕರಿಸಿದ ಅನೇಕರಿಗೆ ಅಭಿನಂದಿಸಿ, ಕೊನೆಯದಾಗಿ ನನ್ನ ಹೆತ್ತವರಿಗೆ ಆ ಹಾಡುಗಳನ್ನು ಅರ್ಪಿಸಬೇಕೆನ್ನುವ ಆಸೆಯಿಂದ ನನ್ನ ಅಪ್ಪ ಅಮ್ಮನಿಗೆ ವಿಶೇಷ ಸನ್ಮಾನ ಮಾಡಿಸಬೇಕು ಎಂದು ಅತಿಥಿಯಾಗಿ ಆಗಮಿಸಿದ ಡಾ.ಶ್ರೀ ಶ್ರೀ ರಾಮಚಂದ್ರ ಗುರೂಜಿಯವರ ಬಳಿ ಕೇಳಿಕೊಂಡಾಗ ತಡೆÀಯಲಾರದ ಕಂಪನ ಮಮತೆಯಿಂದ ಮುದ್ದಿಸಿತು. ಬಹುಶಃ ನನ್ನ ಜೀವನದಲ್ಲಿ ನೀನೇನು ಮಹತ್ತರವಾದ ಕಾರ್ಯವನ್ನು ಮಾಡಿರುವೆ ಎಂದು ಕೇಳಿದರೆ ನನಗೆ ಇದಕ್ಕಿಂತ ದೊಡ್ಡ ಉತ್ತರ ಕೊಡಲು ಬೇರೇನೂ ಇಲ್ಲ.


ಅದು ನನ್ನ ಜೀವನದ ಅತ್ಯಂತ ಅಮೂಲ್ಯವಾದ ಕ್ಷಣ. ಇಡೀ ಸಭೆಗೆ ಸಭೆಯೇ ಎದ್ದು ನಿಂತಿತ್ತು. ಮನಸ್ಸಿನೊಳಗಿರುವ ಭಾವಾಂತರಂಗದ ಮನಸು ಎದ್ದು ಕುಳಿತಿತ್ತು. ಅಪ್ಪ ಅಮ್ಮ ಎನ್ನುವ ಸೋಜಿಗ ನವಿರಾದ ಪುಳಕವಿಟ್ಟಿತ್ತು.
 ಆಗಲಿಲ್ಲ... ನನ್ನ ಬಳಿ ಆ ಪ್ರೀತಿಯನ್ನು ಕಂಟ್ರೋಲ್ ಮಾಡಿಕೊಳ್ಳೋಕೆ ಆಗಲಿಲ್ಲ... ಕಣ್ಣೊಳಗಿರುವ ಹನಿಯೊಂದು ಕಟ್ಟೆಯೊಡೆದು ಕೆನ್ನೆಯ ಮೇಲೆ ದಾರಿ ಅರಸಿತು.  
 ಕಣ್ಣಾಲಿಗಳು ತೇವಗೊಂಡವು... ಇಂದಿಗೂ ಆ ಕ್ಷಣವನ್ನು ಎಣಿಸಿಕೊಳ್ಳುತ್ತಲೇ ಇರುವೆ. ಬಹುಶಃ ಅಲ್ಲಿ ನೆರೆದಿರುವ ಎಲ್ಲರಿಗೂ ಸೆಂಟಿಮೆಂಟ್ ಟಂಚ್ ಆಗಿ ಅವರೂ ಅತ್ತಿರಬಹುದು. ನಾ ಕಂಡ ಕನಸು ಸಾಕಾರವಾಯಿತು. ಹಾಡುಗಳು ಅಷ್ಟೇ ಜಬರ್‍ದಸ್ತ್ ಹಿಟ್ ಎನ್ನುವ ಮಾತುಗಳು ಕೇಳಿಬಂದಿವೆ. ನಲಿವಿಗೆ ಬೇರೇನೂ ಬೇಕು ಇಷ್ಟೇ ಸಾಕಲ್ಲವಾ ನೀವೇ ಹೇಳಿ!??

ಅಂದು ಮರದಡಿಯಲ್ಲೋ, ಗದ್ದೆ ಕಡೆಯಲ್ಲೋ ಹಾಡುಗಳನ್ನು ಕಟ್ಟಿ, ಸಣ್ಣ ಟೇಪ್‍ರೆಕಾರ್ಡ್‍ನ್ನ ತಟ್ಟಿ ಹಾಡುತ್ತಿದ್ದ, ಕೇಳುತ್ತಿದ್ದ ಪುಟ್ಟ ಹುಡುಗನ ಎದೆಯಾಂತರಾಳದಲ್ಲಿ ಅದೇನೋ ಖುಷಿಕೊಡುವ ಸಾಧನೆ ಏರಿದ ಖುಷಿಯಿದೆ ಅದರಂತೆ ಬಗಲಲ್ಲಿ ಮುಂದೆಯೂ ಒಳ್ಳೊಳ್ಳೆ ಕಾರ್ಯ ಮಾಡುವ, ಗುರಿಯನ್ನು ಬೆನ್ನತ್ತುವ ಬಾಕಿ ಮೊತ್ತಗಳಿವೆ.. .ನಿಮ್ಮೆಲ್ಲರ ಸಹಕಾರ, ಅಭಿಮಾನದ ಋಣವಿದೆ... ಎಲ್ಲರಿಗೂ ಇವನ ವಂದನೆ ಅಭಿನಂದನೆ... ಕಾರ್ಯಕ್ರಮ ಮುಗಿಸಿ ಹೊರಬಂದ ಮೇಲೆ ಸಾಧನೆಯ ಹಿಂದೆ ಕಷ್ಟವಿರುತ್ತದೆ ಮತ್ತು ಕಷ್ಟದ ಮುಂದೆ ಸುಖದ ಸವಿಯೂ ಇರುತ್ತದೆ ಎನ್ನುವುದು ಸಾಭೀತಾಯಿತು ಎನ್ನುವ ಸತ್ಯವನ್ನು ಕಂಡು ನನಗೆ ನಾನೇ ಅಪ್ಪಿಕೊಂಡೆ...

ಕವಿ ಕನವರಿಕೆ: ಪ್ರೇಮಾಯಣ:6




         ಅವಳಿಂದ ಪದೆ ಪದೇ ನನಗೆ ನೋವಾಗುತ್ತಲೇ ಇರುತ್ತೆ. ಅವಳು ಒಂದೊಂದು ವಿಚಾರದಲ್ಲಿ ಒಂದೊಂದು ಥರ. ಒಮ್ಮೆ ನಗಿಸುತ್ತಾಳೆ. ಒಮ್ಮೆ ಮುದ್ದಿಸುತ್ತಾಳೆ, ಒಮ್ಮೆ ಅಳಿಸುತ್ತಾಳೆ.
 ಮೊದಲೆಲ್ಲ ಅವಳಿಗೆ ನಾ ತುಂಬಾ ಇಷ್ಟವಾಗುತ್ತಿದ್ದೆ. ಆ ಪರಿವೆಯಲಿ ಅವಳ ಇಷ್ಟ ಕಷ್ಟ ಎಲ್ಲವನ್ನು ಸಹಿಸಿಕೊಂಡು ಮನಸಾರೆ ನಾನು ಇಷ್ಟಪಟ್ಟೆ. ಆದರೆ ಇಂದು ಅದೇನೋ ಗೊತ್ತಿಲ್ಲ, ನನಗೇನು ಇಷ್ಟವಿಲ್ಲವೋ, ನನಗ್ಯಾವುದು ಸರಿ ಅನಿಸುವುದಿಲ್ಲವೋ ಅದನ್ನೇ ಹುಚ್ಚಿಯಂತೆ ಮಾಡಿ ಖುಷಿ ಪಡುತ್ತಾಳೆ. ಮತ್ತೆ ನನಗೆ ಬೇಜಾರಾಯ್ತು ಅಂತ ತಿಳಿದು ಅದನ್ನೇನೋ ಸರಿ ಮಾಡಲು ಹೊರಟು ಮತ್ತೆ ಮಗುವಾಗಿ ಅಳುತ್ತಾಳೆ... ಸಾರಿ ಕೇಳಿ ಅವಳಿಗವಳೇ ವಿಷಾಧಿಸುತ್ತಾಳೆ.
ಅವಳು ಸ್ವಲ್ಪ ಶ್ರೀಮಂತೆ, ನಾನೋ ಹುಟ್ಟು ಬಡವ. ಬಹುಶಃ ನಾನು ನೋಡುವ ಎಲ್ಲಾ ವೆರೈಟಿ ವೆರೈಟಿ ಸುಖಾನುಭವಗಳನ್ನು ಈಗಾಗಲೇ ಅವಳು ನೋಡಿ ಮುಗಿಸಿರಬಹುದು ಆದರೆ ನನಗೆ ತಿಳಿದಿರುವಷ್ಟು, ನನ್ನ ಸಣ್ಣ ಬದುಕಿಗೆ ಆಗಿರುವಷ್ಟು ಕಷ್ಟ ನಷ್ಟದ ಎಕ್ಸ್‍ಫೀಯರೆನ್ಸ್ ಅವಳಿಗಿಲ್ಲ.


         ಪ್ರತಿ ಸಲ ಜಗಳವಾದಾಗಲೂ ನಾವು ಪರಸ್ಫರ ಭೇಟಿಯಾಗುತ್ತೇವೆ. ಒಂದಿಷ್ಟು ಸಮಯ ದೂರ ಕುಳಿತು ಮತ್ತೆ ಹತ್ತಿರಾಗಿ ಅಪ್ಪಿಕೊಳ್ಳುತ್ತೇವೆ. ಆದರೆ ಯಾಕೋ ಇಂದು ಅವಳು ನನ್ನ ಕರೆದಿಲ್ಲ. ಮತ್ತೆ ತಪ್ಪು ಮಾಡಿದ್ದಾಳೆ. ಆದರೂ, ನಿಂದೇ ತಪ್ಪು ಅಂತ ಕೂಗಾಡುತ್ತಿದ್ದಾಳೆ. ದಿಕ್ಕೇ ತೋಚದ ಸಪ್ಪೆ ಕುದುರೆಯ ಹಾಗೆ ಒಬ್ಬನೇ ಕುಳಿತು ಎದೆಯೊಳಗಿನ ಉರಿಯಲ್ಲಿ ಬೇಯುತ್ತಿದ್ದೇನೆ. ಅವಳ ಕರೆಗಾಗಿ ಸಾಯುತ್ತಿದ್ದೇನೆ... ಕರೆಯುತ್ತಾಳೋ, ಕರೆಯದಿರುತ್ತಾಳೋ ಅವಳಿಗಾಗಿ ಯಾವಾಗಲೂ ಕಾಯುತ್ತೇನೆ... ಬದುಕು ಉತ್ತರವಿಲ್ಲದ ಪ್ರಶ್ನೆಯಾಗಿ ಹೀಗೆ ಸುಮಾರು ಸಲ ಸತ್ತು ಬದುಕಿದ್ದೇನೆ. ಬದುಕುತ್ತಿದ್ದೇನೆ.

ಸಿರಿ ಬುಲೆಟ್-ದೇಶಕ್ಕೆ ದೇವರಾಗಿ...ದೆವ್ವಗಳಾಗಬೇಡಿ...

ದೇಶಕ್ಕೆ ದೇವರಾಗಿ...ದೆವ್ವಗಳಾಗಬೇಡಿ...
ಪ್ರಾಮಾಣಿಕ ದುಡಿಮೆಯ ತಾಕತ್ತು ನಮ್ಮಲ್ಲಿರಲಿ...
ಪರ್ಸಂಟೇಜ್ ಮೊತ್ತದಲ್ಲಿ ಹಣವಿನಿಮಯ ಮಾಡಿಕೊಳ್ಳಬೇಡಿ...
ಇದು ನಮ್ಮೆಲ್ಲರ ಹೊಣೆ, ದೇಶದ ಬದಲಾವಣೆ, ಬದಲಾಗೋಣ...

ರಾಜಮೂಲೋ ಹಿ ಧರ್ಮಶ್ಚ, ಜಯತಾಂ ವರ|
ತಸ್ಮಾತ್ ಸರ್ವಾಸು, ಅವಸ್ಥಾಸು ರಕ್ಷಿತವ್ಯಾಃ ನರಾಧಿಪಾಃ||
ದೊರೆಯು ಸರಿಯಾಗಿದ್ದರೆ ರಾಷ್ಟ್ರದಲ್ಲಿ ಧರ್ಮ, ಯುದ್ಧದಲ್ಲಿ ಜಯ, ಕಾರ್ಯಸಿದ್ಧಿಗಳು ಸಾಧ್ಯ. ದೊರೆಯನ್ನು ಹೇಗೂ ಅಪಮಾರ್ಗದಲ್ಲಿ ಹೋಗಗೊಡದಂತೆ ಬುದ್ಧಿವಂತರು ರಕ್ಷಿಸಬೇಕು. ಹತೋಟಿಯಲ್ಲಿಡಬೇಕು... 

ಆದರೆ  ಹೆಚ್ಚಿನರು ಇಂದು ಏನು ಮಾಡುತ್ತಿದ್ದಾರೆ!!? 
ಬಹುದಿನಗಳ ಬಳಿಕ, ಅಲ್ಲಲ್ಲ..!, ಬಹುವರ್ಷದ ಬಳಿಕ ಒಬ್ಬ ಒಳ್ಳೆಯ ಪ್ರಧಾನಿ ದೇಶಕ್ಕೆ ಸಿಕ್ಕಿದ್ದಾನೆ ಅವನ ಗುರಿ, ಉದ್ದೇಶಗಳೆಲ್ಲವೂ ನೇರವಾಗಿದೆ ಆದರೆ ಅನೇಕ ಕಪ್ಪು ಹಣದ ದೆವ್ವಗಳು ಅವರನ್ನು ದೇಶದ ಮಂತ್ರಿಯಾಗಿ, ರಾಜನಾಗಿ ಮುಂದುವರಿಯಲು ಅಸಾಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಇಂತಹವರಿಗೆ ಏನ್ ಹೇಳಬೇಕು!? ನೀವೇ ಹೇಳಿ!!!.

ಕಾಳಧನ, ಖೋಟಾನೋಟು, ಭ್ರಷ್ಟಾಚಾರ ಎಂಬ ಪಿಡುಗುಗಳ ಮೂಲೋತ್ಪಾಟನೆಯ ಯತ್ನದ ಒಂದು ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕ ಮುಖಬೆಲೆಯ ನೋಟು ರದ್ಧತಿಯ ಐತಿಹಾಸಿಕ ನಿರ್ಧಾರ ಘೋಷಿಸುತ್ತಿದ್ದಂತೆಯೇ ಸಮಾಜದ ವಿವಿಧ ಸ್ತರಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ಹೊರಹೊಮ್ಮಿದವು. ನೀಯತ್ತಾಗಿ ತೆರಿಗೆ ಕಟ್ಟುವವರಿಂದ ಹರ್ಷೋದ್ಗಾರ ಹೊಮ್ಮಿದರೆ, ತೆರಿಗೆ ವಂಚಿಸಿ ಕಪ್ಪುಹಣ ಕೂಡಿಟ್ಟುಕೊಂಡವರಲ್ಲಿ ನಡುಕ ನಿರಂತರವಾಯಿತು. ನಿಗಧಿತ ಅವಧಿಯೊಳಗೆ ಹಳೆಯ ನೋಟುಗಳನ್ನು ತಂತಮ್ಮ ಖಾತೆಗೆ ಜಮೆ ಮಾಡಬೇಕಾದ, ಹೊಸದಕ್ಕೆ ಬದಲಿಸಿಕೊಳ್ಳಬೇಕಾದ ಹಾಗೂ ದಿನಕ್ಕಿಷ್ಟು ವಾರಕ್ಕಿಷ್ಟು ಎಂಬ ಲೆಕ್ಕಾಚಾರದಲ್ಲಿ ಸೀಮಿತ ಮೊತ್ತವನ್ನಷ್ಟೇ ಹಿಂಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ, ಶ್ರೀ ಸಾಮಾನ್ಯರು ದೈನಂದಿನ ಖರ್ಚಿನ ನಿಭಾವಣೆಯ ಕುರಿತು ಚಿಂತಿತರಾದರೂ ತಲ್ಲಣಗೊಳ್ಳಲಿಲ್ಲ. ಅದು ಪ್ರಾಮಾಣಿಕ ದುಡಿಮೆಯ ತಾಕತ್ತು.

ಆದರೆ ರಂಗೋಲಿ ಕೆಳಗೆ ತೂರಿಕೊಳ್ಳುವ ಚಾಣಾಕ್ಷ ಕಾಳಧನಿಕರು, ಕಾಳ ಧನವನ್ನು ಬಿಗಿಯಾಗಿಸುವ ಕಸರತ್ತಿನಲ್ಲಿ ವಾಮಮಾರ್ಗವನ್ನು ಆಯ್ದುಕೊಂಡಿದ್ದಂತೂ ಹೌದು. ಇದ್ದಬದ್ಧ ಸ್ನೇಹಿತರನ್ನು ನೆಂಟರಿಷ್ಟರನ್ನೆಲ್ಲಾ ಬ್ಯಾಂಕಿನ ಸರತಿ ಸಾಲಿನಲ್ಲಿ ನಿಲ್ಲಿಸಿ ಸಾಧ್ಯವಾದಷ್ಟು ಮಟ್ಟಿಗೆ ಹೊಸ ನೋಟನ್ನು ವಿನಿಮಯ ಮಾಡಿಕೊಳ್ಳುವ ಸರ್ಕಸ್‍ಗೆ ಮೊರೆಹೋದರು. ಪರಿಚಿತ ಶ್ರೀಸಾಮಾನ್ಯರ ‘ಜನಧನ’ ಬ್ಯಾಂಕ್ ಖಾತೆಗಳಿಗೂ ಹಣಹಾಕಿಸಿ ನಂತರ ಅವರಿಂದ ಪೀಕಿಸುವ ಚಿಂತನೆಯೂ ಅವರಿಂದ ಹೊರಹೊಮ್ಮಿತು. ಕೆಲವರಂತೂ ಹಳೆತು-ಹೊಸತು, ಎಪ್ಪತ್ತು-ಮೂವತ್ತು, ಐವತ್ತು-ಐವತ್ತು ಎಂದೂ ಹಳೆ ನೋಟು- ಹೊಸ ನೋಟನ್ನು ವಿನಿಮಯ ಮಾಡಿಕೊಂಡು, ಅದರಲ್ಲೂ ದಲ್ಲಾಳಿಗಳನ್ನಿಟ್ಟುಕೊಂಡು, ಅವರಿಗೂ ಒಂದಿಷ್ಟು ಹಣವನ್ನು ಕೊಟ್ಟು ಬ್ಲ್ಯಾಕ್ ಮನಿಯನ್ನು ವೈಟ್‍ಮನಿಯಾಗಿಸಿಕೊಳ್ಳುವುದು ಅಲ್ಲಲ್ಲಿ ನಡೆಯುತ್ತಿದೆ.

ಯಾರು ಏನೇ ಹೇಳಲಿ... ದೇಶದ ಸಮಾನಾಂತರ ಅಥವಾ ಛಾಯಾ ಅರ್ಥವ್ಯವಸ್ಥೆಯನ್ನು ನಿವಾರಿಸುವುದಕ್ಕಾಗಿ 500, 1000ರೂ. ಮುಖಬೆಲೆಯ ನೋಟುಗಳ ಮಾನ್ಯತೆ ರದ್ದುಗೊಳಿಸಿರುವ ಪ್ರಧಾನಿಯವರ ನಿರ್ಧಾರ ಐತಿಹಾಸಿಕವಾದುದು. ಈ ಮೂಲಕ ಅನೇಕ ಕಾಳಧನಿಕರಿಗೆÀ ಮರ್ಮಾಘಾವನ್ನೇ ನೀಡಿದಂತಾಗಿತೆ. ಈ ಎರಡು ನೋಟುಗಳ ಮೌಲ್ಯ, ದೇಶಾದ್ಯಂತ ಚಲಾವಣೆಯಲ್ಲಿದ್ದ ನೋಟುಗಳ ಮೌಲ್ಯದ ಶೇಕಡಾ 86ರಷ್ಟಿತ್ತು ಎಂದರೆ ಅದರ ಅಗಾಧತೆಯನ್ನು ನೀವೇ ಊಹಿಸಬಹುದು!!.

ಅರ್ಥವ್ಯವಸ್ಥೆಯಲ್ಲಿ ನಕಲಿ ನೋಟುಗಳ ಹೆಚ್ಚಳ ಮತ್ತು ಅದು ಉಂಟುಮಾಡುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕಾರಣಕ್ಕಾಗಿಯೇ, ಇಂತಹ ಪ್ರಮುಖ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿ ಬಂತು. ಚಲಾವಣೆಯಲ್ಲಿದ್ದ ನಕಲಿ ನೋಟುಗಳ ಮೌಲ್ಯವು 400 ಕೋಟಿ ರೂ.ಗಳಷ್ಟಿತ್ತು. ಈ ಹೊಸ ನೀತಿಯಂತು ಹಳೇ 500, 1000 ರೂಪಾಯಿ ನೋಟುಗಳ ಮಾನ್ಯತೆ ರದ್ದುಗೊಳಿಸಿದ್ದಷ್ಟೇ ಅಲ್ಲ, ನಕಲಿ ನೋಟುಗಳ ಚಲಾವಣೆಗೂ ಇತಿಶ್ರೀ ಹೇಳುವಂತೆ ಮಾಡಿದೆ.  ಹೊಸ ನೋಟುಗಳಲ್ಲಿ ಹೆಚ್ಚಿನ ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದೆ. ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಹಣಕಾಸಿನ ವಹಿವಾಟಿನ ಮೇಲೆ ನಿಗಾ ಇರಿಸುವುದು ಸಾಧ್ಯವಾಗುತ್ತಿದೆ. ಇದಕ್ಕೆಲ್ಲಾ ಮಿಗಿಲಾಗಿ ನೂರು ರೂಪಾಯಿ ವಹಿವಾಟು ನಡೆಸುವಾಗಲೂ ಎಚ್ಚರದಿಂದಿರುವಷ್ಟು ಹಣಕಾಸು ವಹಿವಾಟಿನ ಜಾಗೃತಿ ಎಲ್ಲರಲ್ಲಿ ಮೂಡುವಂತಾಗಿದೆ.
ಕೇಂದ್ರ ಸರ್ಕಾರದ ಸಮಾನಾಂತರ ಅರ್ಥವ್ಯವಸ್ಥೆ ಮತ್ತು ನಕಲಿ ನೋಟುಗಳನ್ನು ಇಲ್ಲವಾಗಿರಿಸುವ ಈ ಕ್ರಮಕ್ಕೆ ಅನೇಕ ಟೀಕೆಗಳು, ಪ್ರತಿಭಟನೆಗಳು ಕೇಳಿಬರುತ್ತಿವೆ. ಇದನ್ನೆಲ್ಲಾ ಸೋ ಕಾಲ್ಡ್ ಅಧಿಕಾರ ಮತ್ತು ಹಣದಾಸೆಯ ರಾಜಕೀಯಪಕ್ಷಗಳು ನಡೆಸುತ್ತಿವೆ ಯಾಕೆಂದರೆ ಅವರ ಹತ್ತಿರ ಇರುವ ಹಣವೆಲ್ಲಾ ಈ ದೇಶದ ಮೂಲೆ ಮೂಲೆಯಿಂದ ಕೊಳ್ಳೆ ಹೊಡೆದ ಕಪ್ಪುಹಣ. ವಾಸ್ತವದಲ್ಲಿ ನೋಡಿದರೆ ಇದರಿಂದ ಹೆಚ್ಚು ತೊಂದರೆಗೊಳಗಾದವರು ಬಡವರಲ್ಲ, ಶ್ರೀಮಂತರು!!. ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಅಲ್ಪ ಪ್ರಮಾಣದ ಸಂಕಷ್ಟಗಳನ್ನು  ಎದುರಿಸುವುದಕ್ಕೆ  ಜನರೂ ಸಿದ್ಧರಾಗಿದ್ದಾರೆ. ಆಯಾಯಾ ರಾಜ್ಯಗಳ ಆಯಾಯ ಸರ್ಕಾರ ಪಕ್ಷಬೇಧ ಮರೆತು ಇದಕ್ಕೆ ಸ್ಪಂಧಿಸಬೇಕಿದೆ ಅಷ್ಟೆ.
ಮೋದಿಯವರ ನೀತಿ ನಿರೂಪಣೆಯು ದಿಟ್ಟ ನಿಲುವಿನಿಂದ ಕೂಡಿದ್ದು, ಆರ್ಥಿಕ ನೀತಿಯನ್ನು ಅದರ ಮಿತಿಯನ್ನು ಮೀರಿ ಉತ್ತೇಜಿಸುವಂತಿದೆ. ಅನಾಣ್ಯೀಕರಣವು ಸದ್ಯ ಅರ್ಥವ್ಯವಸ್ಥೆಯನ್ನು ಕುಗ್ಗಿಸಿರುವುದು ನಿಜವಾದರೂ, ಸರ್ಕಾರದ ಈ ಕ್ರಮವು ಅರ್ಥವ್ಯವಸ್ಥೆಯನ್ನು ಹೊಸ ಶುರುವಾತನ್ನು ನೀಡುವುದರ ಜತೆಗೆ ಎಲ್ಲ ಭಾರತೀಯರನ್ನೂ ಡಿಜಿಟಲ್ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡುವ ಪ್ರಯತ್ನ ಎಂದೇ ಹೇಳಬೇಕು. ಈ ಕ್ರಮವು ಜನರಿಗೆ ಡಿಜಿಟಲ್ ವಹಿವಾಟಿನ ಪ್ರಯೋಜನವನ್ನು ಅರ್ಥೈಸಿಕೊಳ್ಳುವುದಕ್ಕೆ ಅವಕಾಶ ನೀಡಿದೆ. 
ಜನಸಾಮಾನ್ಯರೇ, ಎಲ್ಲವನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಹತ್ತಿರವಿರುವ ಅಲ್ಪ ಸ್ವಲ್ಪ ಹಣಕ್ಕೆ ಯಾವ ತೊಂದರೆಯೂ ಇಲ್ಲ. ಅನೇಕ ಹಳ್ಳಿಯಲ್ಲಿ ಹೆಚ್ಚಿನವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿಗಳಿಲ್ಲದೆ ಅಲ್ಲಲ್ಲಿ ಗೊಂದಲಗಳು, ಗಲಭೆಗಳು, ಸಾವು ನೋವುಗಳು ಸಂಭವಿಸಿರಬಹುದು ಆದರೆ ನೀವುಗಳು ಇಷ್ಟೆಲ್ಲಾ ಹರಸಾಹಸ ಮಾಡುವ ಅವಶ್ಯಕತೆಯೇ ಇಲ್ಲ. ದಯವಿಟ್ಟು ತಾಳ್ಮೆ ವಹಿಸಿ. ತಾಳ್ಮೆಯೊಂದಿದ್ದರೆ ನಮ್ಮ ಮುಂದಿನ ತಲೆಮಾರಿನವರು ತಲೆಬಿಸಿಯಿಲ್ಲ ಬಾಳಬಹುದು.
ನೆನಪಿಡಿ ನಿಜವಾಗಿಯೂ ನಮ್ಮ ದೇಶಕ್ಕೆ ಇದು ಬದಲಾವಣೆಯ ಕಾಲ.
ಹಣವನ್ನು ಕೂಡಿಟ್ಟ ಅನೇಕರು ನಿದ್ದೆಗೆಟ್ಟು ಅದೆಷ್ಟೋ ದಿನಗಳಾಯ್ತು. ನಾವು ಭಾರತೀಯರು, ಮಹಾನ್ ಬುದ್ಧಿವಂತರು. ಆದರಂತೆ ಈ ಕಾಯ್ಧೆ ಹೊರಬಿದ್ದ ಮರುದಿನವೇ  ಪರ್ಸಂಟೇಜ್ ಮೊತ್ತದಲ್ಲಿ ಹಳೆನೋಟು ಹೊಸನೋಟುಗಳ ವಿನಿಮಯವೂ ಅಲ್ಲಲ್ಲಿ ನಡೆಯುತ್ತಿರುವುದು ಕಂಡು ಬಂತು. ಮಹನೀಯರೇ ದಯವಿಟ್ಟು ಅನೇಕರು ತೋರಿಸುವ ಕೆಟ್ಟ ಆಸೆಗೆ ಬಲಿಯಾಗಬೇಡಿ. ಸೈಬರ್ ಕ್ರೈಂ ಈ ಬಗ್ಗೆ ಗುಪ್ತ ಮಾಹಿತಿಗಳನ್ನು ಕಲೆಹಾಕುತ್ತಿದೆ. ಅಪ್ಪಿ ತಪ್ಪಿ ಸಿಕ್ಕಿಬಿದ್ದರೆ ನೀವು ಹೊರಬರುವುದು ತುಂಬಾ ಕಷ್ಟವಿದೆ.

ಇದರಿಂದ ನೀವೇನೋ ಅಲ್ಪ ಸ್ವಲ್ಪ ಹಣಮಾಡಬಹುದೆಂಬುದನ್ನು ಬಿಟ್ಟರೆ ಬೇರೇನೂ ಸಾರ್ಥಕತೆಯಿಲ್ಲ. ನೀವು ಸ್ವಲ್ಪ ತಾಳ್ಮೆ ವಹಿಸಿದರೆ  ಈ ನೋಟು ರದ್ಧತಿ ನಮಗೆಲ್ಲರಿಗೂ ವರದಾನವಾಗಲಿದೆ ಎನ್ನುವುದರಲ್ಲಿ ಯಾವ ಸಂಶಯವಿಲ್ಲ. ಸದ್ಯ ಅನೇಕ ಒತ್ತಡದಿಂದ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದ್ದರೂ ಶ್ರೀ ಸಾಮಾನ್ಯರು ಸರ್ಕಾರದ ಕ್ರಮದ ಪರವಾಗಿ ನಿಂತಿದ್ದು, ನಿಜಕ್ಕೂ ನಮ್ಮ ದೇಶದ ಹೆಮ್ಮೆ ಮತ್ತು ಪ್ರಗತಿಯ ಲಕ್ಷಣ.

ಈ ಕ್ರಮದಿಂದಾಗಿ ಮೊದಲೇ ಹೇಳಿದಂತೆ ಕಪ್ಪುಹಣದ ನಿಯಂತ್ರಣ, ಖೋಟಾನೋಟಿನ ನಿರ್ಮೂಲನೆ ಸೇರಿದಂತೆ ಉಗ್ರರು-ನಕ್ಸಲರಿಗೆ ಆಗುವ ಹಣದ ಸರಬರಾಜಿಗೆ ಹೊಡೆತ ಬೀಳುತ್ತದೆ. ಭ್ರಷ್ಟರಿಗೆ ಸಮಸ್ಯೆಯಾಗುತ್ತದೆ. ಮುಖ್ಯವಾಗಿ ಬಡವರಿಗೆ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆದಾರರಿಗೆ ಇದು ಸಹಕಾರಿಯಾಗುತ್ತದೆ ಎಂಬುದು ಇಲ್ಲಿ ಮುಖ್ಯ.
ಅಲ್ಲದೇ ತಮ್ಮ ಒಡೆಯರಿಂದ, ಬಡ್ಡಿ ವ್ಯವಹಾರಸ್ಥರಿಂದ ಹೆಚ್ಚಿನ ಬಡ್ಡಿಗೆ ಸಾಲಪಡೆದು ಶೋಷಣೆಗೆ ಒಳಗಾಗುತ್ತಿರುವ ಬಡವರು, ಕೂಲಿ ಕಾರ್ಮಿಕರು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡರೆ, ಇಂಥ ಉಪಟಳದಿಂದ  ಮುಕ್ತರಾಗಬಹುದು. ಕೇಂದ್ರ-ರಾಜ್ಯ ಸರ್ಕಾರಗಳು ನೀಡುವ ಕಡಿಮೆ ಬಡ್ಡಿದರದ ಸಾಲಸೌಲಭ್ಯವನ್ನು ಪಡೆಯಬಹುದು. ಅಷ್ಟೇಕೆ ‘ಪ್ರಧಾನಮಂತ್ರಿ ಮುದ್ರಾ ಯೋಜನೆ’ಯಂಥ ಸ್ವ ಉದ್ಯೋಗ ಯೋಜನೆಗಳ ಲಾಭವು ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತದೆ. ಒಟ್ಟಾರೆಯಾಗಿ, ಅಂತ್ಯೋದಯದ ಕನಸುಗಳು ಸಾಕಾರಗೊಳ್ಳುವಲ್ಲಿ ನೋಟು ರದ್ಧತಿ ಐತಿಹಾಸಿಕ ಹೆಜ್ಜೆಯಾಗಲಿದೆ ಎನ್ನಲು ಯಾವ ಅನುಮಾನವಿಲ್ಲ...
ಹುಷಾರಾಗಿರಿ ದೇಶಕ್ಕೆ ದೇವರಾಗಿ...ದೆವ್ವಗಳಾಗಬೇಡಿ...

ಭಾವದ ಮುಂಗಾರು ಮಳೆ...


             ಭಾವನೆಗಳು ಒಮ್ಮೊಮ್ಮೆ ನನಗೆ ತಂಪೆನಿಸುತ್ತವೆ. ನೆನಪುಗಳ ಲಾಲಿತ್ಯದಲ್ಲಿ ಮೀಯಿಸುತ್ತವೆ. ಭಾವನೆಗಳೇ ಹೊಸ ಭಾವವನ್ನು  ನೀಡುತ್ತವೆ. ಏದೆಯಾಳದಿಂದ ನೀರುಕ್ಕಿಸಿ, ಕಣ್ಣಲ್ಲಿ ಭಾಷ್ಫಾಂಜಲಿಯ ಒರತೆ ಉಕ್ಕಿಸುತ್ತವೆ. ಹೆಚ್ಚು ಜಾಗ ಪಡೆಯುವ, ಅತೀ ಹೆಚ್ಚು ಮೌಲ್ಯ ಪಡೆಯುವ, ಮುದ್ದಾಗಿ ಮುದ್ದು ಮಾಡಿಕೊಳ್ಳುವ, ಮೊದಲ ಪ್ರಾಶ್ತಸ್ತ್ಯ ಪಡೆಯುವ  ಮೊದಲಿಗ ಎಂದರೆ ಈ ಭಾವಾಂತರಂಗ... 

ಅದೇನೋ ಗೊತ್ತಿಲ್ಲ!!. ಮೊದಲಿನಿಂದಲೂ ಹಾಗೆ.., ನಾನೊಬ್ಬ ನಾನೇ!, ಆಗಿರುವುದಕ್ಕೆ ಇಷ್ಟ ಪಡುತ್ತೇನೆ. ಯಾರನ್ನೇ ಆಗಲಿ ಜಾಸ್ತಿ ಫಾಲೋ ಮಾಡಲ್ಲ!.. ಫಾಲೋ ಮಾಡಿದರೂ 50 ಪ್ರತಿಷತ ಮಾತ್ರಾ ಆಗಿರುತ್ತದೆ. ಯಾರನ್ನು ದೇವರೆನ್ನಲ್ಲ!.. ನನಗೆ ನಾನೇ ದೇವರೆನ್ನುವುದನ್ನು ಮರೆತಿಲ್ಲ. ದೇವರು ಎಲ್ಲಿಯೋ ಇದ್ದಾನೆ ಎನ್ನುವುದಕ್ಕಿಂತ ನಮ್ಮೊಳಗೆ ಇದ್ದಾನೆ ಎನ್ನುವ ತತ್ವ ನನಗೆ ಪದೇ ಪದೇ ಇಷ್ಟವಾಗುತ್ತೆ. ಎಲ್ಲಾ ಎಡಗೈಗೆ ವಾಚ್ ಕಟ್ಟಿದರೆ ನಾನು ಬಲಗೈಗೆ ಕಟ್ಟುತ್ತೇನೆ, ಬಿಕಾಸ್ ಟೈಮ್ ಶುಡ್ ಬಿ ರೈಟ್ ರೈಟ್... ಎಲ್ಲಾ ಎಡದಿಂದ ಬಲಕ್ಕೆ ತಲೆ ಬಾಚಿಕೊಂಡರೆ ನಾನು ಬಲದಿಂದ ಎಡಕ್ಕೆ ಬಾಚಿಕೊಳ್ಳುತ್ತೇನೆ. ಒಬ್ಬೊಬ್ಬನೇ ಎಲ್ಲೆಲ್ಲೋ ಅಲೆಯುತ್ತೇನೆ. ಸಂಜೆಯ ಸಮಯ ನದಿ ಪಕ್ಕ ಹೋಗಿ ಕೂರಲು ಇಷ್ಟ ಪಡುತ್ತೇನೆ. ಹಳೆ ಹುಡುಗಿಯ ನೆನಪಲ್ಲಿ ಮರುಗುತ್ತೇನೆ. ಹೊಸ ಹುಡುಗಿಗಾಗಿ ಮಿಡಿಯುತ್ತೇನೆ. ಪ್ರೇಮವನ್ನು ಅಂದವೆನ್ನುತ್ತೇನೆ, ಕಾಮವನ್ನು ಚಂದವೆನ್ನುತ್ತೇನೆ. ಯಾರಿಗೂ ಆಶ್ವಾಸನೆ ಕೊಟ್ಟು ಬದುಕೊಲ್ಲ, ಯಾರ ವಿಶ್ವಾಸದಲ್ಲೂ ಮುಳುಗೊಲ್ಲ. ಟೋಟಲ್ಲಿ ಭಿನ್ನ ವಿಭಿನ್ನವಾಗಿಯೇ ಇರುತ್ತೇನೆ. 

ಇದು ಹತ್ತು ವರ್ಷಗಳ ಹಿಂದಿನ ಭಾವನೆ ಇಂದು ಹೊಸ ಮನ್ವಂತರದಿಂದ ಮರುಕಳಿಸಿದ ಸಂದರ್ಭದಲ್ಲಿ ಬರೆಯುತ್ತಿರುವ ಅಂಕಣ. 

ನಾನಾಗ ಎಸ್ಸೆಸ್ಸೆಲ್ಸಿ ಮುಗಿಸಿ ಪಿ.ಯು.ಸಿ ಕಲಿಕೆಗೆ ನೆರೆದು ನಿಂತಿದ್ದೆ. ಆ ಸಂದÀರ್ಭ ಕನ್ನಡ ಚಿತ್ರರಂಗದಲ್ಲಿ ‘ಮುಂಗಾರು ಮಳೆ’ ಎನ್ನುವ ಹೊಸ ಬಗೆಯ ಹನಿ ಹನಿಯ ಪ್ರೇಮ್ ಕಹಾನಿ’ಹೊಸ ಮಳೆಯನ್ನೇ ಸುರಿಸಿತ್ತು. ಅದು ಸುಮಾರು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ಎಂದರೆ ತಪ್ಪಾಗಲಾರದು. ಪಟ್ಟಣದಿಂದ ಹಳ್ಳಿ ಹಳ್ಳಿಯವರೆಗೂ ಜನ ಆ ಚಿತ್ರವನ್ನು ಮುಗಿಬಿದ್ದು ನೋಡೋಕೆ ಚಿತ್ರ ಮಂದಿರದ ಕಡೆ ಹೋಗುತ್ತಿದ್ದದ್ದನ್ನು ನಾನು ಪೇಪರ್‍ಗಳಲ್ಲಿ ಓದಿ ತಿಳಿದಿದ್ದೆ. ನಮಗೆ ಆಗೆಲ್ಲಾ ಸಿನಿಮಾ ಅಂದರೆ ಏನು ಅನ್ನುವುದೇ ತಿಳಿದಿರಲಿಲ್ಲ. ಆದರೆ ‘ಮುಂಗಾರು ಮಳೆ’ ಸಿನಿಮಾ ಸೂಪರ್ ಇದೆಯಂತೆ, ಟಿಕೆಟ್ ಸಿಕ್ತಾನೆ ಇಲ್ವಂತೆ, ಹೌಸ್ ಫುಲ್ ಪ್ರದರ್ಶನ ಕಾಣ್ತಾ ಇದ್ಯಂತೆ ಎನ್ನುವ ಸಂದೇಶ ನಮ್ಮ ಊರಲ್ಲಿ ಓಡಾಡುತ್ತಿದ್ದದ್ದನ್ನು ನೋಡಿ, ನಾನು ಒಮ್ಮೆ ಆ ಸಿನಿಮಾವನ್ನು ನೋಡಬೇಕು ಅಂತ ಹಪಹಪಿಸಿದ್ದೆ. ಆದರೆ ಸಿನಿಮಾ ನೋಡಲು ಸುಮಾರು 35 ಕಿ.ಮೀ ದೂರದ ಕುಂದಾಪುರ ಎನ್ನುವ ತಾಲೋಕು ಪಟ್ಟಣಕ್ಕೆ ಹೋಗಿ ಅಲ್ಲಿ ಇದ್ದ ಚಿತ್ರಮಂದಿರದಲ್ಲಿ ನೋಡಬೇಕಿತ್ತೇ ಹೊರತು ಬೇರೆಲ್ಲೂ ಕಾಣಲು ಸಿಕ್ತಾ ಇರಲಿಲ್ಲ. ಅಷ್ಟು ದೂರ ಒಬ್ಬೊಬ್ಬರಿಗೆ ಹೋಗಲು ಮನೆಯಲ್ಲೂ ಬಿಡ್ತಾ ಇರಲಿಲ್ಲ... ಹಾಗೆಲ್ಲ ಸಿನಿಮಾಗೆ ಹೋಗಿದ್ದ ನೆನಪು ನನಗಿಲ್ಲ. ಆದರೆ ಅದೊಂದು ದಿನ ಕಾಲೇಜಿಗೆ ನೋಟ್ ಬುಕ್ ಖರೀದಿಸಬೇಕು ಎನ್ನುವ ಕಾರಣಕ್ಕಾಗಿ ಅಮ್ಮನ ಜೊತೆಯಲ್ಲಿ ಕುಂದಾಪುರಕ್ಕೆ ಹೋದ ನಾನು ಪಿಚ್ಚರ್‍ಗೆ ಹೋಗೋಣ್ವಾ ಅಮ್ಮಾ!!, ಚೆನ್ನಾಗಿದೆಯಂತೆ... ಸಂಜೆ ಮನೆಗೆ ಹೋಗೋಕೆ ಬಸ್ ಸಿಗತ್ತೆ... ನೋಡಿಯೇ ಹೋಗೋಣ ಎಂದು ಹಠಕ್ಕೆ ಬಿದ್ದೆ. ಅಮ್ಮನಿಗೂ ಅದೇನು ಅನಿಸಿತ್ತೋ ಗೊತ್ತಾಗಲಿಲ್ಲ. ಸರಿ ಹೋಗೋಣ... ಎಂದು ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕಿದೆವು. 

ಉದ್ದ ಸಾಲು, ಬಹುಶಃ ಅಂತಹ ಸಾಲನ್ನು ಇಂದು ನಾ ಯಾವ ಚಿತ್ರಮಂದಿರದಲ್ಲೂ ಕಂಡಿಲ್ಲ. ಟಿಕೆಟ್‍ಗಾಗಿ ಅದೆಷ್ಟೋ ಜನ ಪಣತೊಟ್ಟು ನಿಂತಿದ್ದರು. ಮಕ್ಕಳು, ಹೆತ್ತವರು, ಲವರ್ಸ್‍ಗಳು ಹೀಗೆ ಎಲ್ಲರೂ ಲೈನ್‍ನಲ್ಲಿ ನಿಂತು ಸಾಯುತ್ತಿದ್ದರು. ನನಗೆ ಮೊದಲಿನಿಂದಲೂ ಈ ಸರತಿಯಲ್ಲಿ ನಿಲ್ಲುವುದೆಂದರೆ ಆಗುತ್ತಿರಲಿಲ್ಲ. ಅದಕ್ಕಾಗಿ ನಾನು ದೇವಸ್ಥಾನ ಹಾಗೂ ಸರ್ಕಾರಿ ಇಲಾಖೆಯಲ್ಲಿ ಕೊಡುವ ರೇಷನ್ ಸೆಂಟರ್‍ಗಳಿಗೆ ಹೋಗುತ್ತಲೇ ಇರಲಿಲ್ಲ. ಇಲ್ಲೂ ಅದೇ ಫೀಲ್ ಆಯ್ತು. ಉದ್ದ ಇದ್ದ ಸರತಿ ಸಾಲನ್ನು ನೋಡಿ ಭಯಪಟ್ಟು, ‘ಬೇಡ ಅಮ್ಮ ಇದೆಲ್ಲಾ ನಮಗೆ ಆಗಲ್ಲ, ಇಲ್ಲಿ ಟಿಕೆಟ್ ಕೂಡ ಸಿಗುವಂತೆ ಕಾಣುತ್ತಿಲ್ಲ. ಹೊರಟು ಬಿಡೋಣ ಬಾ’, ಎಂದು ವಾಪಾಸ್ಸು ಮನೆಗೆ ಹೊರಡುವ ಪ್ಲಾನ್ ಮಾಡಿದ್ದೆ. ಆದರೆ ಅಮ್ಮನಿಗೆ, ಇಷ್ಟು ದೂರ ಬಂದಿದ್ವಿ ನೋಡೇ ಹೋಗೋಣ ಬಿಡು ಎನ್ನುವ ಧೃಡಕಾಯ ಮನದಲ್ಲಿತ್ತು. ನೋಡೋಣ ಇರು. ಎನ್ನುತ್ತಿರುವಾಗಲೇ ಫಸ್ಟ್ ಕ್ಲಾಸ್ ಟಿಕೆಟ್ ಸೋಲ್ಡ್ ಔಟ್ ಎನ್ನುವ ಮಾತು ಕೌಂಟರ್ ನಿಂದ ಕೇಳಿಬಂತು. ಆದರೂ ಅಮ್ಮ ಇಷ್ಟು ಹೇಳುತ್ತಿದ್ದಾಗ ನಾನು ಟಿಕೆಟ್ ತಗೊಂಡು ಬಂದಿಲ್ಲ ಅಂದ್ರೆ ಸರಿಹೋಗುತ್ತಾ ಎಂದು ಸೆಕೆಂಡ್ ಕ್ಲಾಸ್ ಟಿಕೆಟ್‍ಗೆ ಟ್ರೈ ಮಾಡಿದೆ. ಅಂತೂ ನಿಂತು ನಿಂತೂ ಟಿಕೆಟ್ ಸಿಕ್ಕೆ ಬಿಡ್ತು.

ಸಿನಿಮಾ ನೋಡಿ ಹೊರ ಬಂದ್ವಿ. ಆವತ್ತಿಗೆ ಆ ಸಿನಿಮಾ ಅಷ್ಟೇನೂ ತಲೆಗೆ ಹೋಗದಿದ್ದರೂ ಅದೊಂದು ಅದ್ಭುತ ಸಿನಿಮಾ ಓಳ್ಳೆಯ ನಿರ್ದೇಶನ, ನಟನೆ ಇರುವ ಚಿತ್ರವೆನ್ನುವುದು ಕೆಲವು ದಿನಗಳ ಬಳಿಕ ಮನನವಾಗಿತ್ತು.

ಆದರೆ ಇಂದು ಹತ್ತು ವರ್ಷದ ಬಳಿಕ ಮತ್ತೆ ಮುಂಗಾರು ಮಳೆ-2 ಬಂದಿದೆ... ದೈವಲೀಲೆ ಎಂಬಂತೆ ಅಂದು ಊರಿನಲ್ಲಿದ್ದ ಅಮ್ಮ ಬೆಂಗಳೂರಿಗೆ ಬಂದಿರುವ ಕಾರಣ ಈ ಸಿನಿಮಾಗೆ ಅಮ್ಮನನ್ನು ಕರೆದುಕೊಂಡು ಹೋಗುವ ಸುಸಮಯ ನನಗೆ ಬಂದಿರುವುದು ಭಾವಗಳ ಅದೃಷ್ಟೋ ನನ್ನ ಅದೃಷ್ಟವೋ ತಿಳಿಯದೇ ಖುಷಿಪಟ್ಟೆ. ವಿಷಯ ಸಿಂಪಲ್ ಆದರೆ ಭಾವಗಳ ಗರಿಗೆದರುವಿಕೆ ಒಮ್ಮೊಮ್ಮೆ ವೆರಿ ಇಮೋಷನಲ್ ಆಗುವ ಛಾನ್ಸಸ್ ಕೂಡ ಇರುತ್ತವೆ ಎನ್ನುವ ಮಾತು ನಿಜ. ಅಂದು ಪುಟ್ಟ ಹಳ್ಳಿಯಲ್ಲಿ ಏನೊಂದು ತಿಳಿಯದೇ ಪರದೆ ಮುಂದೆ ಕುಳಿತಿದ್ದ ಆ ದಿನಗಳಿಗೂ, ಇಂದು ಅಂದರೆ 10 ವರ್ಷದ ಬಳಿಕ ಕುಳಿತಿರುವ ಈ ದಿನಮಾನಸಗಳಿಗೂ ಅಜಗಜಾಂತರ ವ್ಯತ್ಯಾಸ ಕಾಣುತ್ತಿದೆ. ಮೊದಲೆಲ್ಲ ಸಿನಿಮಾ ನಟರನ್ನು ನೋಡುವುದೇ ಒಮದು ಮಹತ್ಕಾರ್ಯದಷ್ಟೂ ಸಂಭ್ರಮವಾಗಿತ್ತು. ಆದರೆ ಇಂದು ಅವರೆದುರೆ ಕುಳಿತು ಗಂಟೆಗಟ್ಟಲೇ ಹರಟಿ ಕಾಫಿ,ಟೀ ಕುಡಿದು ಬರುವ ನನಗೆ ಸಿನಿಮಾ, ಶೂಟಿಂಗ್ ಇತ್ಯಾದಿಗಳ ನಂಟನ್ನು ತೋರಿಸಿಕೊಟ್ಟಿದೆ. ಅಂದು ಏನೊಂದು ಭಾವವಿರದೇ ಸಿನಿಮಾ ನೋಡಿದ್ದ ಅಮ್ಮಾ ಇಂದು ಎದೆಯಾಳದಲ್ಲಿ ಮುಂದೊಂದು ದಿನ ನನ್ನ ಮಗನೂ ಆ ಪರದೆ ಮೇಲೆ ಬರುವನೇನೋ!?,ಬಂದರೆ ಹೇಗೆ ಕಾಣುವನು!? ಇತ್ಯಾದಿ ಇತ್ಯಾದಿ ಆಸೆಗಳನ್ನು ಕಟ್ಟಿಕೊಂಡು ನೋಡಿದ್ದು ನನಗೂ ಕಣ್ಣಾಲಿ ತೇವಗೊಳಿಸಿತ್ತು.

ಅಮ್ಮ ನನಗೆ ಸಿಕ್ಕ ಒಳ್ಳೆಯ ದೇವರು. ಹೆಣ್ಣಿನ ಎಲ್ಲಾ ತನವೂ ನನ್ನಮ್ಮನಲ್ಲಿದೆ, ಹರೆಯದಲ್ಲಿ ಯಾವುದೋ ಹುಡುಗಿಯನ್ನ ಲವ್ ಮಾಡಿ ಅವಳಿಗೇನೋ ತಿನ್ನಿಸುವ ಹುಡುಗರನ್ನು ನೋಡಿದರೆ ಅವರಮ್ಮ ಏನು ಮಾಡುತ್ತಿರಬಹುದೆಂಬ ನೋವು ನನಗಾಗುತ್ತೆ. ಆದರೆ ನನ್ನಮ್ಮನಿಗೆ ಆ ನೋವೆಲ್ಲಾ ಏನೂ ಇಲ್ಲ. ನಾನು ಅವಳ ಉಪಸ್ಥಿತಿ ಎಲ್ಲ ಕಡೆಗಳಲ್ಲೂ ಕಂಡುಕೊಳ್ಳಲು ಇಷ್ಟ ಪಡುತ್ತೇನೆ. ಅವಳಿಗಾಗಿಯೇ ಮಿಡಿಯುತ್ತೇನೆ. ಸುಮಾರು ಜನ ತುಂಬಾ ಒಳ್ಳೆಯ ಮಗನನ್ನು ಹೆತ್ತಿದ್ದೀರಾ ಅಮ್ಮಾ ಎನ್ನುವ ಪ್ರಶಂಸೆಯ ಮಾತುಗಳನ್ನಾಡಿರುವುದನ್ನು ದೂರದಿಂದಲೇ ಕೇಳಿ ಖುಷಿ ಪಟ್ಟಿದ್ದೇನೆ.
ಬದುಕು ಸಿನಿಮಾ ಅಲ್ಲಾ. ಆದರೆ ಸಿನಿಮೀಯಾ ಆಗಬಹುದಲ್ವಾ!? ಆದರೆ ತಾಯಿ ಪ್ರೀತಿ ಎಂದೂ ಸಿನಿಮೀಯ ಅಲ್ಲ. ಪ್ರೇಮಕ್ಕೆ ಬೇರಿನ್ನಾವ ಅರ್ಥವೂ ಇಲ್ಲ. ಪ್ರತಿಯೋರ್ವನೂ ತಾನು ಯಾರನ್ನಾದರೂ ಪ್ರೀತಿಸಬೇಕೆಂದೂ, ಯಾರಿಂದಲಾದರೂ ಪ್ರೀತಿಯನ್ನು ಪಡೆಯಬೇಕೆಂದು ಅಪೇಕ್ಷಿಸುವನು...ಆದರೆ ತಾಯಿ ಪ್ರೀತಿ ಎಂದೂ ಅಂತಹ ಸಾಲಿಗೆ ಸೇರದು. ನೀವು ಪ್ರೀತಿಸಿ, ಪ್ರೀತಿಸದೆ ಇರೀ ಅದು ಎಂದೂ ಮಿಡಿಯುತ್ತಲೇ ಇರುತ್ತದೆ.

ಆಗೆಲ್ಲಾ ಟ.ವಿಗಳ ಹವಾ ಜೋರಿರಲಿಲ್ಲ, ಆಕಾಶಾಣಿಯ ಅಶರೀರ ವಾಣಿ ಕೇಳಿ ಖುಷಿಪಡುತ್ತಿದ್ದೆವು. ಅಂದು ಯಾವ ಪರಿಯೂ ಇಲ್ಲದೆ ಪರಿವೆ ಮೀರಿ ಆನಂದಿಸಿಕೊಳ್ಳುತ್ತಿದ್ದೆವು. ಅಂದು ಒಂದು ಸಿನಿಮಾ ನೋಡಬೇಕೆಂದರೆ 50 ರೂಪಾಯಿ ಹೆಚ್ಚಾಗುತ್ತಿತ್ತು. ಇಂದು 500  ರೂ ಕೂಡ ಕಡಿಮೆ ಆಗುತ್ತದೆ. ನಿಜಕ್ಕೂ ಒಮ್ಮೊಮ್ಮೆ ಕಣ್ಮುಚ್ಚಿ ಎಣಿಸಿ ಕುಳಿತರೆ ಹಳೆಯ ದಿನಗಳು ಹೊಸ ಆಯಾಮದಲ್ಲಿ ಮನಸ್ಸಿಗೆ ಉಲ್ಲಸಿತವಾಗುತ್ತವೆ. ನಾನು ಮೇಲೆ ಹೇಳಿದ ವಿಷಯ ಸಣ್ಣ ಸಿನಿಮಾಗೆ ಹೋಗಿದ್ದ ಸ್ಟೋರಿ ಅಷ್ಟೆ. ಆದರೆ ಅದರ ಹಿಂದಿನ ನೆನಪುಗಳನ್ನು ಹತ್ತು ವರ್ಷದ ಮೇಲೆ ಎಣಿಸಿಕೊಳ್ಳುವ ಮಜವಿದೆಯಲ್ಲ ಅದು ಇಂದು ಎಷ್ಟು ಕೋಟಿ ಕೊಟ್ಟರೂ ಸಿಗಲಿಕ್ಕಿಲ್ಲ. ನಿಮಗೆ ನಗು ಬರಬಹುದು ಆದರೆ ನನಗೆ ಅದಕ್ಕಿಂತ ದೊಡ್ಡ ವಿಚಾರ ಬೇರೊಂದಿದೆ ಎನಿಸುತ್ತಿಲ್ಲ. 

ಹೇಗೆ ರೂಪದೊಳಗೆ ಅರೂಪವಿದೆ, ದೃಶ್ಯದೊಳಗೆ ಅದೃಶ್ಯವಿದೆಯೋ ಹಾಗೆ ಪ್ರತಿಯೊಂದು ಸಮಯದ ಹಿಂದೆಯೂ ಅರಿಯದ ಭಾವವಿರುತ್ತದೆ. ಒಮ ಮನಸ್ಸು ಬಿಚ್ಚಿ ಹದಮೀರಿ ಹಳೆ ಹಾಡನ್ನು ಕಿವಿಗೆ ಸಿಕ್ಕಿಸಿಕೊಂಡು ಶೂನ್ಯನಾಗಿ ವಿರಮಿಸಲು ನಿಂತಾಗ ಅವೆಲ್ಲವೂ ಮತ್ತೆ ನಿನ್ನೊಳಗೆ ಬಂದು ಹೊಸ ಸಜ್ಜಿಕೆಯಲ್ಲಿ ನೃತ್ಯ ಮಾಡುವುದ ಖಂಡಿತ. ನೆನಪಿರಲಿ ಯಾವುದನ್ನೇ ಸ್ವೀಕಾರ ಮಾಡಿದಷ್ಟೂ ನಾವು ಮುಕ್ತರಾಗುತ್ತಾ ಸಾಗುತ್ತೇವೆ...ಆದ್ದರಿಂದ ನಿಮ್ಮೊಳಗಿನ ಭಾವನೆಗಳನ್ನು ಇಂದೇ ಎಡೆಯಿಲ್ಲದೇ ಸ್ವೀಕರಿಸಿ...ನಿಮ್ಮೋಳಗೆ ನೀವೂ ಮುಕ್ತರಾಗಿರಿ...


ಸಿರಿ ಬುಲೆಟ್- • ಶೀಲ ಕಳೆದುಕೊಳ್ಳುತ್ತಿದೆಯಾ!? ಕನ್ನಡ ಚಿತ್ರರಂಗ!!?


ಶೀಲ ಕಳೆದುಕೊಳ್ಳುತ್ತಿದೆಯಾ!? ಕನ್ನಡ ಚಿತ್ರರಂಗ!!?
ಡಬಲ್ ಮೀನಿಂಗ್ ನೀಡುತ್ತಿದ್ಯಾ ಡಬಲ್ ಕಾಸು!!?
ಇದರಿಂದ ಮನಸ್ಸಿಗೆ ನಿಜವಾದ ಮನೋರಂಜನೆ ಸಿಗುತಿದ್ಯಾ!?
ಎತ್ತ ಸಾಗುತ್ತಿದೆ ಹೊಸಬರ ನಿರ್ದೇಶನ!?

           ಮೊನ್ನೆ ಮೊನ್ನೆ ಯೂಟ್ಯೂಬ್‍ನಲ್ಲಿ ವರನಟ ಡಾ. ರಾಜ್‍ಕುಮಾರ್‍ರವರ ಸಂದರ್ಶನವನ್ನು ನೋಡುತ್ತಿದ್ದೆ. ಸಂದರ್ಶನದ ಕೊನೆಯ ಭಾಗದಲ್ಲಿ ಸಂದರ್ಶಕ ಚಿತ್ರರಂಗದ ಬಗ್ಗೆ ಅವರ ಅನಿಸಿಕೆಯನ್ನು ಕಲೆ ಹಾಕುವ ನಿಟ್ಟಿನಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದ. ಅದಕ್ಕೆ ಉತ್ತರವಾಗಿ ರಾಜ್ ಅವರ ಮಾತುಗಳು ಹೀಗಿದ್ದವು.
‘ನಾವಿನ್ನು ಹೇಳಿಕೊಳ್ಳುವ ಯಶಸ್ಸಿನ ಮೆಟ್ಟಿಲನ್ನು ಏರಿಲ್ಲ, ಕನ್ನಡ ಚಿತ್ರರಂಗದಲ್ಲಿ ಸಾಧಿಸಬೇಕಾಗಿದ್ದು ಬಹಳಷ್ಟಿದೆ. ಚಿತ್ರಗಳಲ್ಲಿ ಅಶ್ಲೀಲತೆಗಳನ್ನು ಕಡಿಮೆ ಮಾಡಬೇಕು, ಆದಷ್ಟೂ ಸಮಾಜಕ್ಕೆ ಉಪಯುಕ್ತವಾಗಿರುವ, ಯಾರಿಗೂ ಮುಜುಗರವಾಗದೇ ಇರುವಂತಹ ಮನೋರಂಜನಾ ಭರಿತ ಚಿತ್ರಗಳನ್ನು ನೀಡಬೇಕು. ನಿರ್ದೇಶಕರು ಅಶ್ಲೀಲತೆಗಳನ್ನು ದೂರವಿಟ್ಟು ಕತೆಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು’... 

ಆದರೆ ಇಂದು!??...

ನಾವೇನು ಮಾಡುತ್ತಿದ್ದೇವೆ!?

ಆಧುನಿಕ ಜಗತ್ತಿನಲ್ಲಿ, ಪ್ರಗತಿಶೀಲರಾಗಿ ಸಾಗುತ್ತಿರುವ ಈ ದಿನಗಳಲ್ಲಿ ನೆಮ್ಮದಿಯನ್ನು ಕಳೆದುಕೊಂಡು, ಅದನ್ನೆಲ್ಲಿಯಾದರೂ ಅರಸುವ ಪ್ರಯತ್ನದಲ್ಲಿ ಮನೋರಂಜನೆಗೋಸ್ಕರ ಸಿನಿಮಾ, ನಾಟಕ, ಅಥವಾ ಯಾವುದೋ ದೃಶ್ಯ ಮಾಧ್ಯಮಗಳನ್ನವಲಂಭಿಸಿದರೆ ಅಲ್ಲಿ ಕಾಣಸಿಗುವುದು ನಮಗೆ ನಾವೇ ಮುಜುಗರಕೊಟ್ಟುಕೊಳ್ಳಬೇಕಾದ ಅಶ್ಲೀಲತೆಗಳು.
ಅಲ್ಲಾ ಸ್ವಾಮಿ!!, ಅಂದು ಒಂದು ಕನ್ನಡ ಚಿತ್ರ ಬಿಡುಗಡೆಗೊಂಡರೂ, ಪೂರ್ತಿ ಫ್ಯಾಮಿಲಿ ಚಿತ್ರಮಂದಿರಕ್ಕೆ ಹೋಗಿ ಮನೋರಂಜನೆ ಪಡೆದು ಬರಬಹುದಿತ್ತು, ಆದರಿಂದು ವಾರವೊಂದಕ್ಕೆ 5/6 ಸಿನಿಮಾಗಳು ರಿಲೀಸ್ ಆದರೂ ಫ್ಯಾಮಿಲಿಯನ್ನು ಚಿತ್ರಮಂದಿರದ ಕಡೆಗೆ ಕರೆದುಕೊಂಡು ಹೋಗೋಕಾಗುತ್ತಾ ನೀವೇ ಹೇಳಿ!?
ಅದೇನೋ ---ಲವ್ ಸ್ಟೋರಿಯಂತೆ, ---ಚಕ್ರವಂv, ---ಕೋಟ್ ಅಂತೆ, ---ದೋಸೆಯಂತೆ, ---ವಿಲೇಜ್ ಅಂತೆ.... ಏನ್ರೀ ಇದು... ಲವ್ ಮಾಡುವ ಯಾವೊಬ್ಬ ಹುಡುಗ/ಹುಡುಗಿ ತನ್ನವನು/ಳು, ಡಬ್ಬಲ್ ಮೀನಿಂಗ್ ಅಲ್ಲಿ ಮಾತಾಡ್ತಾ ಇದ್ದರೆ ಸಹಿಸಿಕೊಂಡು ಸಿನ್ಸಿಯರ್ ಆಗಿ ಲವ್ ಮಾಡೋಕೆ ಸಾಧ್ಯನಾ!? ನೀವೇ ಹೇಳಿ!?.

ನಿಮಗೆ ಗೊತ್ತಾ!?

ಧ್ವಂಧ್ವಾರ್ಥ ಹಾಗೂ ಅಶ್ಲೀಲ ಸಂಭಾಷಣೆÉಗಳು ಮತ್ತು ಅರೆನಗ್ನ ನೃತ್ಯಗಳಿಂದ ಇಂದು ಚಿತ್ರರಂಗ ನೆಲೆಕಳೆದುಕೊಳ್ಳುತ್ತಿದೆ. ಹೌದು! ಯುವಜನತೆಗಿಂದು ಹಸಿ-ಬಿಸಿ ದೃಶ್ಯಗಳು, ಡಬಲ್ ಮೀನಿಂಗ್ ಡೈಲಾಗ್‍ಗಳು, ಕಣ್ಣು ಕೋರೈಸುವ ತಳುಕು ಬಳುಕು ಬೇಕಾಗಿದೆ ಆದರೆ ಅದನ್ನೆ ಬಂಡವಾಳವನ್ನಾಗಿಟ್ಟುಕೊಂಡು ಹಣ ಲೂಟುವ ದಂಧೆಯಾಗಿಸಿಕೊಳ್ಳುವುದು ಎಷ್ಟು ಸರಿ!?
 ನಾವು ಹಾಗೆ.., ನಾವು ಹೀಗೆ.., ಸಮಾಜದಲ್ಲಿ ಶೀಲತೆಯನ್ನು ಗೌÀರವಿಸುತ್ತೇವೆ... ಫ್ಯಾಮಿಲಿ ಎಂಟರ್ ಟೈನ್ ಸಿನಿಮಾಗಳಿಗೆ ಜಾಸ್ತಿ ಪ್ರಾಶಸ್ತ್ಯ ನೀಡುತ್ತೇವೆ ಎನ್ನುವ ವಾಣಿಜ್ಯ ಮಂಡಳಿಯೂ ಇಂತಹ ಸಿನಿಮಾಗಳನ್ನು ನೋಡಿಯೂ ಕೈಕಟ್ಟಿ ಕುಳಿತುಕೊಂಡಿರುವುದು ಏನನ್ನು ದಬಾಕುವುದಕ್ಕೋ ನಾ ಕಾಣೆ!?
ನಾವು ಎತ್ತಾ ಸಾಗುತ್ತಿದ್ದೇವೆ!?, ಶ್ರೇಷ್ಠವಾದ ಕಲೆಯನ್ನು ಹೇಗೆ ಕೆತ್ತುತ್ತಿದ್ದೇವೆ!?, ಡಬಲ್ ಮೀನಿಂಗ್ ಎನ್ನೋ ಡೈಲಾಗ್‍ಗಳಿಂದ ಏನನ್ನು ಸಮಾಜಕ್ಕೆ ನೀಡುತ್ತಿದ್ದೇವೆ!?, ಟೊಳ್ಳು ಕಥೆ, ಅಶ್ಲೀಲ ಸಾಹಿತ್ಯ, ಅಬ್ಬರದ ಸಂಗೀತಗಳಿಂದ ವೀಕ್ಷಕನ ಮನಸ್ಸನ್ನು ಎಷ್ಟು ಕೆರಳಿಸುತ್ತಿದ್ದೇವೆ!?, ಇತ್ಯಾದಿಗಳ ಬಗ್ಗೆ ಯಾರೂ ಚಿಂತೆ ಮಾಡುತ್ತಿಲ್ಲ...

ಮಗಳು ಅಪ್ಪನ ಜೊತೆ ಸಿನಿಮಾ ನೋಡೋಕೆ ಆಗುತ್ತಿಲ್ಲ, ಮಗ ಅಮ್ಮನನ್ನು ಕರೆದುಕೊಂಡು ಥೀಯೇಟರ್ ಕಡೆಗೆ ಹೋಗಲಾಗುತ್ತಿಲ್ಲ... ಆದರೂ ಕಲಾತ್ಮಕ ಚಿತ್ರಗಳಿಗೆ ಸಿಗದಿರುವ ಬೆಲೆಯನ್ನೆಲ್ಲಾ ಕ್ರೋಢಿಕರಿಸಿ ಅದ್ಯಾವುದೋ ಕಾಟು-ಪೋಟು ಚಿತ್ರಕ್ಕೆ ಇದ್ದ ಥೀಯೇಟರ್‍ನೆಲ್ಲಾ ಬಿಟ್ಟುಕೊಟ್ಟು, ಅಯ್ಯೋ!!, ಆ ಚಿತ್ರ ಬರೋಬ್ಬರಿ ಕಲೆಕ್ಷನ್ ಅಂತೆ, ಕೋಟಿ ಬಂತಂತೆ ಎನ್ನುವ ಬಿಟ್ಟಿ ಪ್ರಚಾರ ಕೊಟ್ಟು, ಲಾಸ್ ಆದರೂ ಲಾಭ ಬಂತೆಂಬ ವಿವರ ನೀಡಿ, ಗೆದ್ದೆ ಎಂದು ನಗು ಬೀರುವ ನೀವ್ಯಾರು ಸಮಾಜ ಸ್ವಾಸ್ಥ್ಯ ಕಾಪಾಡುವವರ ಪಟ್ಟಿಗೆ ಸೇರಲು ಅರ್ಹರಲ್ಲ...

ಮನೋರಂಜನೆ ಮನಕ್ಕೆ ಸಿಗಬೇಕು ನಿಜ ಆದರೆ, ಅದನ್ನು ಗೆಲ್ಲೋದೆ ಕಾಯಕವಾಗಿಸಿಕೊಂಡು, ಅನೇಕರ ಮನಸ್ಸಿನ ಮೇಲೆ ಪರಿಣಾಮ ಬೀರುವ ಅಂಧಕಾರವಾಗಬಾರದು.
ಬಾಲಿವುಡ್ ನಟ ‘ಹಿಮ್ಮತ್‍ವಾಲಾ’ ಅಜಯ್ ದೇವ್‍ಗನ್ ಮೊನ್ನೆ ಮೊನ್ನೆ, ‘ನಾನು ಇನ್ನು ಅಭಿನಯಿಸುವ ಚಿತ್ರಗಳು ಕುಟುಂಬ ಸಮೇತ ನೋಡುವಂತಿರಬೇಕು. ಅಶ್ಲೀಲತೆ ತುಂಬಿರುವ ಚಿತ್ರಗಳಲ್ಲಿ ಇನ್ನು ಮುಂದೆ ನಟಿಸೊಲ್ಲ’ ಎಂದಿದ್ದ. ಇದು ನಿಜಕ್ಕೂ ಎಲ್ಲರೂ ಪ್ರಶಂಸಿಸಬೇಕಾದ ವಿಚಾರ.

ಇಲ್ಲ... ಖಂಡಿತ ಇಂತಹ ಚಿತ್ರಗಳನ್ನು ನಾವು ಬ್ಯಾನ್ ಮಾಡೊಲ್ಲ.. ಬಿಕಾಸ್ ಹೇಗಾದರೂ ಸೈ ದುಡ್ಡು ಮಾಡಬೇಕು. ಇಂತಹ ಸಂಭಾಷಣಾ ಭರಿತ ಡೈಲಾಗ್‍ಗಳನ್ನಿಟ್ಟು ಜನರ ಮನಸ್ಸನ್ನು ಹಾಳುಗೆಡವಿ, ಸೆಕ್ಸ್‍ಗಳನ್ನು ಇಂಡೈರೆಕ್ಟ್ ಆಗಿ ಪ್ರಚೋದಿಸಿ, ಯುವ ಜನತೆಯನ್ನು ದಾರಿ ತಪ್ಪಿಸಬೇಕಲ್ಲ!!!...
ಮೊನ್ನೆ ಮೊನ್ನೆ ಮತ್ತೊಂದು ಟ್ರೈಲರ್ ಕನ್ನಡದಲ್ಲಿ ರಿಲೀಸ್ ಆಗಿದೆ... ವಿಲೇಜವರು ತರ್ಲೇಗಳಂತೆ... ಅದರ ಸಂಭಾಷಣೆಗಳು, ಸಂಸಾರವನ್ನೇ ಕಳೆದುಕೊಂಡಂತಿದೆ. ಅರಿಯದ ಮುಗ್ದ ಕಲಾವಿದರಿಗೆ ಬಣ್ಣ ಹಚ್ಚಿ, ಹಣ ದೋಚುವ ಊರಿಗೆ ಕಾಲಿಟ್ಟಂತಿದೆ. ಒಂದಂಥು ನಿಜ. ಸಿನಿಮಾಗಳಿಗೆ ಹೆಚ್ಚು ಬೇಡಿಕೆ ಸಿಗುತ್ತಿದೆ. ಒಟ್ಟಿನಲ್ಲಿ ಅಸಹ್ಯಕರವಾಗಿ ನಮ್ಮ ಚಿತ್ರರಂಗ ರೂಪುಗೊಳ್ಳುತ್ತಿದೆ.
ಬೇಜಾರಾಗುತ್ತಿದೆ...

ಸಿನಿಮಾ ನಮಗೆ ಬರಿಯ ಮನರಂಜನೆ. ಅದನ್ನು ಮನದ ಮಾತುಗಳನ್ನು ಹೇಳುವ ಮಾಧ್ಯಮವಾಗಿ ಬಳಸಿಕೊಳ್ಳಬೇಕು. ದಾದಾ ಸಾಹೇಬ್ ಪಾಲ್ಕೆ ಕಾಲದಲ್ಲಿ ಈ ಮಾದ್ಯಮದ ಬಗ್ಗೆ ಜನರಿಗಿದ್ದ ನಿರೀಕ್ಷೇಗಳೇ ಬೇರೆಯಾಗಿತ್ತು ಆದರೆ ನಮ್ಮ ಇಂದಿನವರಿಗೆ ಅದರ ಪರಿವೇ ಇಲ್ಲ. ಸಿನಿಮಾ ಮಾರುಕಟ್ಟೆ ಇಂದು ವ್ಯಾಪಾರಿ ಸರಕಾಗಿ ಹೋಗಿದೆ. ಅಲ್ಲಿ ಬಿಕರಿ ಐಟಂ ಮಾರಲಾಗುತ್ತಿದೆ. ಪರಿಣಾಮ ಆರೋಗ್ಯಕರ ಮನೋರಂಜನೆ ಸಾಧ್ಯವಾಗುತ್ತಿಲ್ಲ.

ಇಂಟರ್‍ನೆಟ್‍ಗಳಲ್ಲಿ ಬೇಕಾದವರಿಗೆ ಬೇಕಾದಷ್ಟು, ವೀಡಿಯೊ, ಡಿ.ವಿ.ಡಿ, ಪೋರ್ನೋ ಸಿಗುತ್ತಿರುವ ನಡುವೆಯೂ, ಸಿನಿಮಾ ಅಂತಹ ವಸ್ತುವಿನ ಸುತ್ತಲೇ ಗಿರಕಿ ಹೊಡೆಯುತ್ತಿರುವುದ್ಯಾಕೆ? ಎನ್ನುವ ಪ್ರಶ್ನೆ ಆಗಾಗ ಕಾಡುತ್ತದೆ. ಈ ವಿಷಯದಲ್ಲಿ ಇಂಗ್ಲೀಷ್ ಚಿತ್ರಗಳನ್ನು ನಾವೆಲ್ಲ ಮೆಚ್ಚಬೇಕು ಯಾಕೆಂದರೆ ಅವರೀಗ ಇಂಥಹದನ್ನೆಲ್ಲಾ ಅಷ್ಟು ಪ್ರಮುಖವಾಗಿ ಕಾಣುವುದೇ ಇಲ್ಲ. ಮಾಧ್ಯಮದ ಸಾಧ್ಯತೆಗಳನ್ನು ಹೆಚ್ಚಿಸುವ ಅವರ ಯತ್ನಗಳನ್ನು ನಾವು ಕಂಡು ಕಲಿಯಬೇಕಿದೆ. ನಮ್ಮಲ್ಲಿ ಅವರ ಹಾಗೆ ಯೂನಿವರ್ಸೆಲ್ ಥಿಂಕಿಂಗ್ ಇಲ್ಲ. ಕೇವಲ ಹಿಂಸೆ, ಸೆಕ್ಸ್ ಮತ್ತು ಪ್ರಚೋದಿತ ಯತ್ನಗಳು, ಡಬಲ್ ಮೀನಿಂಗ್ ಡೈಲಾಗ್‍ಗಳು ಮಾತ್ರವೇ ತುಂಬಿ ಹೋಗಿವೆ. ನಮ್ಮೊಳಗಣ ಜಗತ್ತಿಗೂ ಮತ್ತು ಸಂಗತಿಗಳಿಗೂ ನೇರವಾದ ಸಂವಾದವೇ ನಡೆಯುತ್ತಿಲ್ಲ. ನೋಡುಗನ ಮನಸ್ಸನ್ನು ಅರಳಿಸುತ್ತಲೇ ಇಲ್ಲ, ಆದರೂ ರೀಲು ಸುತ್ತುವುದು ನಿಲ್ಲುವುದಿಲ್ಲ.

ಹಾಗಾದರೆ ಎತ್ತ ಸಾಗುತ್ತಿದೆ ಚಿತ್ರರಂಗ!!?

ಬಹುತೇಕ ನಿರ್ದೇಶಕರು ಡಬಲ್ ಮೀನಿಂಗ್  ಡೈಲಾಗ್‍ಗಳಿಗೆ ಜೋತು ಬಿದ್ದಿದ್ದಾರೆ. ನಿಜ!.. ಮನೋರಂಜನೆ ಎಂದರೆ ಎಲ್ಲವೂ ಅದರಲ್ಲಿ ಅಡಕವಾಗಿರುತ್ತವೆ ಹಾಗಂತ ಅವಶ್ಯಕತೆಗಿಂತ ಹೆಚ್ಚಾಗಿ ಅದನ್ನೇ ಭೋಗವಾಗಿ ಸ್ವೀಕರಿಸಿ ಸಮಾಜವನ್ನು, ಸಮಾಜದ ಮನರಂಜನೆಯನ್ನು ಅಸಹ್ಯವಾಗಿ ಪರಿವರ್ತಿಸುವ ಕೆಲಸ ನಿಜಕ್ಕೂ ಸರಿಯಲ್ಲ. ಒಪ್ಪಿಕೊಳ್ಳೋಣ.., ಹೊಸ ನಿರ್ದೇಶಕರ ಸಿನಿಮಾಗಳು ಬಹು ಆಯಾಮದಲ್ಲಿ ಬಹುವಿಧದಲ್ಲಿ ಮೂಡಿಬರುತ್ತಿದೆ ಈ ಬಗ್ಗೆ ಎಲ್ಲರಿಗೂ ಪ್ರಶಂಸೆಗಳಿವೆ ಆದರೆ ನಿಮ್ಮ ಪ್ರತಿಭೆಗಳು ಇನ್ನೊಬ್ಬರಿಗೂ ಮಾದರಿಯಾಗಿರಬೇಕೇ ಹೊರತು ಮಾರಿಯಾಗಬಾರದು.
ಹೀಗೆ ಆದರೆ ಸಿನಿಮಾ ಮಂದಿ ಜನರಿಗೆ ಮಾದರಿ, ಸಿನಿಮಾಗಳು ಜನರಿಗೆ ಆದರ್ಶ, ಎಂದು ಹೇಳುವುದು ಕಷ್ಟ ಬದಲಾಗಿ, ಅದೊಂದು ಕೇವಲ ಮನೋರಂಜನೆಯ ಮಾಧ್ಯಮ, ದುಡ್ಡು ಮಾಡಲು, ಜೀವನ ನಡೆಸಲು ಒಂದು ವೃತ್ತಿ ಎಂದಕೊಂಡರೆ ಗೊಂದಲವಿಲ್ಲ... 

ಸಮಾಜದ ಮೇಲೆ ದುಷ್ಫರಿಣಾಮ ಬಿರುವ ಇಂತಹ ಧ್ವಂಧ್ವಾರ್ಥ ಹಾಗೂ ಅಶ್ಲೀಲ ಸಂಭಾಷಣೆ ಮತ್ತು ಅರೆನಗ್ನ ನೃತ್ಯಗಳಿಗೆ ಕಡಿವಾಣ ಹಾಕಿ ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವ ಸಾಮಾಜಿಕ ನಾಟಕ ಪ್ರದರ್ಶಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಗಮನ ಹರಿಸಬೇಕು.

ಕೆಟ್ಟ ಕೊಳಕು ಮಾತಿಗೆ ನಾಯಕಿ ನಕ್ಕರೆ, ನಾಚಿದರೆ...ನಾಯಕನಿಗೆ ಸಂತೋಷವಾಗುತ್ತದೆ...ಚೀ!!, ಎಂತಾ ಅಸಹ್ಯ... ನಾವು ಕಲಿಯೋದು ತುಂಬಾ ಇದೆ. ಹೊಸ ನಿರ್ದೇಶಕರೇ, ನಿಮ್ಮ ಸುತ್ತ ನಿಮ್ಮನ್ನು ಫಾಲೋ ಮಾಡುವ, ಸಮಾಜವನ್ನು ಬೆಳೆ¸ಬೇಕಿರುವ ಹದಿಹರೆಯದ ರಟ್ಟೆಗಳಿವೆ. ಕೇವಲ ದುಡ್ಡಿಗೋಸ್ಕರ ಜವಾಬ್ಧಾರಿಯಿಂದ ನುಣುಚಿಕೊಳ್ಳುವುದು ಹೇಡಿತನ. ಪರಿಣಾಮದತ್ತ  ಗಮನಹರಿಸದೆ ಕ್ರೀಯೆ  ಮಾಡಿದರೆ ಹೊತ್ತ ಬಸಿರಿನ ಜವಾಬ್ಧಾರಿ ಹೊರುವವರು ಯಾರು!? ನೆನಪಿರಲಿ ಹೆರಿಗೆ ಆಗಿಯೇ ಆಗುತ್ತದೆ...



Saturday, 1 October 2016

ಮೂರು ಕಣ್ಣ ಅಹೋರಾತ್ರ ...ಮೂರ್ಖನಲ್ಲ...

ಸಂಭ್ರಮ!.. 
ಆ ದಿನ ನನ್ನೊಳಗೊಂದು ಹೊಸ ಬಗೆಯ ಹರುಷದ ಸಂಭ್ರಮ. ಮನಸ್ಸು ಆ ವ್ಯಕ್ತಿಯನ್ನು ನೋಡಲು ತುಂಬಾ ದಿನದಿಂದ ಮಿಡಿಯುತ್ತಿತ್ತು. ಒಳಗಿದ್ದ ಒಂದಿಷ್ಟು ಭಾವಗಳು ಪ್ರೀತಿಯಲಿ ತುಡಿಯುತ್ತಿತ್ತು. ವೃತ್ತಿ ಜೀವನದಲ್ಲಿ ಅನೇಕ ನಟ-ನಟಿಯರು, ರಂಗಭೂಮಿ ಕಲಾವಿದರು, ಸಾಧನೆಯ ಶಿಖರವೆತ್ತಿರುವ ಸಾರಥಿಗಳು, ರಾಜಕೀಯ ನಾಯಕರು ಹೀಗೆ ಸಂದರ್ಶನಕ್ಕೆ ನನಗೆ ಬರಗಾಲವೇ ಇರಲಿಲ್ಲ ಮತ್ತು  ಅವರವರ ಪೂರ್ತಿ ಬಯೋಡೆಟಾವನ್ನು ವಿಶಾಲ ಓದುಗರಿಗೆ ಇದುವರೆಗೂ ಮುಟ್ಟಿಸುತ್ತಾ ಇರುವುದಕ್ಕೆ ಲೆಕ್ಕವೇ ಇರಲಿಲ್ಲ. ಅದೇನೋ ಗೊತ್ತಿಲ್ಲ!. ಹಿಂದಿನ ಎಲ್ಲಾ ಸಂದರ್ಶನಕ್ಕಿಂತಲೂ ಇದು ಭಿನ್ನ ಎನಿಸುತ್ತಿತ್ತು. ಕಾರಣ ಆ ದಿನ ನನ್ನೆದುರು ಸಂದರ್ಶನಕ್ಕೆ ಕೂರುವ ವ್ಯಕ್ತಿ ಅಂತಿಂತವರಾಗಿರಲಿಲ್ಲ. ಸಾಕ್ಷಾತ್ ದೇವಮಾನವ. ಈ ಹಿಂದಿನ ನನ್ನ ಎಲ್ಲಾ ಸಂದರ್ಶನವೂ ‘ಗೆದ್ದ’ಲಾದರೆ, ಸಂದರ್ಶನ ಮುಗಿಸಿ ಹೊರಬಂದಾಗ ‘ಇದ್ದಲಿನ ಪ್ರಭೆ’ ಎನ್ನಿಸಿತ್ತು.
ಗೊತ್ತಿಲ್ಲ!.. 
ಆ ದಿನ ಅವರನ್ನು ಭೇಟಿಯಾಗುವುದಿರಲಿ, ಮಾತನಾಡಲು ಸಮಯವೇ ಸಿಗುತ್ತದೆ ಅಂದುಕೊಂಡಿರಲಿಲ್ಲ. ಆಪ್ತರಾದ ಸಾವಣ್ಣ ಪ್ರಕಾಶನದ ವ್ಯವಸ್ಥಾಪಕ ಜಮೀಲ್‍ರವರಿಗೆ ಹಿಂದಿನ ದಿನವೇ ನಿಮ್ಮ ಕಛೇರಿಗೆ ಅವರೇನಾದರೂ ಬಂದರೆ ನನಗೆ ತಿಳಿಸಿ, ಸಂದರ್ಶಿಸಬೇಕೆಂದುಕೊಂಡಿರುವೆ ಎಂದು ಹಲುಬಿದ್ದೆ. ಅದು ನನ್ನ ಪುಣ್ಯವೋ, ನಿಮ್ಮ ಅದೃಷ್ಟವೋ ಗೊತ್ತಿಲ್ಲ, ಯಾರಿಗೂ ಸಮಯ ನೀಡದೆ, ಲೆಕ್ಕಾಚಾರ ಹಾಕಿ ಸಿಕ್ಕೇ ಸಿಗುತ್ತೇನೆ ಎಂದು ಮಾತನ್ನು ನೀಡದೆ, ಸದಾ ಸಾಗುತ್ತಿರುವ ಅವರು ‘ನಿನಗಾಗಿಯೇ ಈ ಸಮಯ ಕಣೋ, ದೇವರೇ ನಮ್ಮಿಬ್ಬರನ್ನು ಭೇಟಿಮಾಡಿಸಿದ. ನಾ ನಿನ್ನ ಅಭಿಮಾನಿ ಅಪ್ಪಿ’ ಎಂದು ಪ್ರೀತಿಯ ಕಂಗಳ್ಳಲ್ಲಿ, ಮಂದಾರದ ಮನಸ್ಸಲ್ಲಿ ನನ್ನ ಭರಮಾಡಿದಾಗ ಜಗತ್ತು ಗೆದ್ದ ಖುಷಿಯಲ್ಲಿ ಧಾವಿಸಿದ್ದು ಈ ಲೇಖನಕ್ಕೆ ಪೂರಕವಾಯಿತು.
ಹೌದು!., ಆ ವ್ಯಕ್ತಿ ಬೇರೆ ಯಾರೂ ಅಲ್ಲ!! ತನ್ನನ್ನು ತಾನು ಮೂರ್ಖ ಎಂದು ಕರೆದುಕೊಂಡು, ನಾನೇನು ಅಲ್ಲ, ಇವನು (ಮೂರು ಕಣ್ಣ) ಹೇಳಿದಂತೆ ನುಡಿವ ಪಾತ್ರಧಾರಿ ಎನ್ನುವ ‘ಅಹೋರಾತ್ರ’...
‘ಜ್ಞಾನವೆನ್ನುವುದು ಶ್ರೇಷ್ಠ ಆದರೆ ಧ್ಯಾನ ಅದಕ್ಕಿಂತ ಶ್ರೇಷ್ಠ’ ಎನ್ನುವ ಮಾತು ಭಗವದ್ಗೀತೆಯಲ್ಲಿದೆ. ಅಂತೆಯೇ ನನಗೆ ಇವರನ್ನು ಸಂದರ್ಶಿಸಿದಾಗ ಇವರು ಅವೆರಡಕ್ಕಿಂತಲೂ ಶ್ರೇಷ್ಠವಾಗಿದ್ದಾರೆಂದು ಅನಿಸಿತು. ಪ್ರತಿಯೊಬ್ಬರನ್ನು ಪ್ರಚೋದಿಸುವ, ಮಾತನಾಡಿಸುವ, ಉನ್ಮಾದಿಸುವ, ನಯ-ವಿನಯತೆಯ ಸರಳ ಸಜ್ಜನಿಕೆ ಇವನಿಗೆ ಹೇಗೆ ಬಂತೋ ನಾ ಕಾಣೆ!!. ಡಿ.ವಿ.ಜಿಯವರ ಮಾತಿನಂತೆ ‘ಹಳೆ ಬೇರನ್ನು ಇಟ್ಟುಕೊಳ್ಳೋಣ ಹೊಸ ಚಿಗುರು ಬದಲಿಸೋಣ’ ಎನ್ನುವ ತತ್ವ ಇವರದು.
ನಿಮಗೆಲ್ಲಾ ಗೊತ್ತಿರಬಹುದು ಬಹಳ ಇತ್ತೀಚೆಗೆ ‘ಮೂರ್ಖನ ಮಾತುಗಳು’ ಎನ್ನುವ ಪುಸ್ತಕ ಬಿಡುಗಡೆಯಾಗಿ ಎಲ್ಲೆಲ್ಲೂ ಅನೇಕಾನೇಕರು ಅದರ ಬಗ್ಗೆ ಮಾತನಾಡಿದ್ದರು. ಆ ಪುಸ್ತಕವನ್ನು ನೀವೊಮ್ಮೆ ಓದಿದರೆ ಇವನ್ಯಾರು?, ಅವನ್ಯಾರು?, ನಾನ್ಯಾರು? ನೀನ್ಯಾರು? ಇವನ ಅಂತರಂಗದ ಶಕ್ತಿಯೇನು?, ಬಹಿರಂಗದ ಆಸೆಗಳೇನು? ಆತ್ಮದ ಮಾತುಗಳೇನು? ಇವನ ನಡೆಯ ಗುಟ್ಟೇನು? ಹೀಗೆ ಎಲ್ಲವೂ ತಿಳಿಯಬಹುದು. 
ಈಗ ನನ್ನ ಮುಂದಿರುವ ಕನ್‍ಫ್ಯೂಷನ್ ಏನೆಂದರೆ ಇವರ ಬಗ್ಗೆ ಬರೆಯಲಾ!? ಇವರೊಳಗಿರುವ ಅವನ ಬಗ್ಗೆ ಬರೆಯಲಾ!? ಸಾಧನೆಗಳನ್ನು ಪಟ್ಟಿ ಮಾಡಲಾ!? ಇವರ ಪುಸ್ತಕದ ಬಗ್ಗೆ ಬರೆಯಲಾ!? ಇಲ್ಲಾ ಇವರ ಜ್ಞಾನಾರ್ಜನೆ ಮತ್ತು ಸಾಧನಾತೀತತೆಗಳ ಬಗ್ಗೆ ಬರೆಯಲಾ ಎನ್ನುವುದಾಗಿದೆ.

          ಎಲ್ಲವನ್ನು ಚ್ಯುತಿ ಬಾರದಂತೆ ನಿಮಗೆ ವಿವರಿಸಬೇಕು, ಅದು ಅವರದೇ ಮಾತುಗಳಲ್ಲಿ ವ್ಯಕ್ತವಾದಂತಿರಬೇಕು, ‘ಬೇಡ ಕಣೋ ಅಪ್ಪಿ’ ಎನ್ನುವ ಅವರ ಮಗುವಿನಂಥ ಭಾವಕ್ಕೆ ಋಣಿಕಾಂತಿ ನಾವಾಗಬೇಕು ಆದ್ದರಿಂದ ಅವರದೇ ‘ಮೂರ್ಖನ ಮಾತು’ಗಳ ದಾಟಿಯಲ್ಲಿ ಅವರೇ ಹೇಳಿದಂತೆ ನಿಮಗೆ ಭಟ್ಟಿ ಇಳಿಸುತ್ತೇನೆ. ಗುರುವರ್ಯಾ ತಪ್ಪಿದ್ದಲ್ಲಿ ಕ್ಷಮೆ ಇರಲಿ...
ಇವರ ಮೂಲ ಹೆಸರು ನಟೇಶ್ ಪೋಲಿಪಳ್ಳಿ. ಜಗಜ್ಜಾಹೀರವಾಗಿರುವುದು ‘ಅಹೋರಾತ್ರ’ ನಾಮಾಂಕಿತದಿಂದ. ‘ಅಹೋರಾತ್ರ’ ಎಂದರೆ ಹಗಲು ಮತ್ತು ಬೆಳಕನ್ನು ಪ್ರತಿನಿಧಿಸುವ ‘ಅಹೋ’ ಹಾಗೂ ರಾತ್ರಿ ಮತ್ತು ಕತ್ತಲನ್ನು ಪ್ರತಿನಿಧಿಸುವ ‘ರಾತ್ರ’ ಸೇರಿ ಸಂಪೂರ್ಣತೆಯ ಸಂಕೇತವಾಗಿ ‘ಅಹೋರಾತ್ರ’ವಾಯಿತು ಎನ್ನುತ್ತಾರೆ.
(ಮಾತಿನಲ್ಲಿ ‘ಇವನು’ ಎಂದು ಸಂಭೋದಿಸುವ ‘ಅಹೋರಾತ್ರ’ರ ಮಾತಲ್ಲೇ ಬರವಣಿಗೆಯನ್ನು ನಿಮ್ಮ ಮುಂದಿಡುತ್ತೇನೆ. ಆಗ ಅಂಕಣಕ್ಕೊಂದು ಅರ್ಥಬರಬಹುದು. -ಇಲ್ಲಿ ‘ಇವನು’ ಎಂದರೆ ಮೂರು ಕಣ್ಣ ಎನ್ನುವ ಅರ್ಥವೂ ಬರುತ್ತದೆ)
 ಇವನ ಬಾಲ್ಯವೇ ಇವನ ಆಧ್ಯಾತ್ಮಿಕ ಜೀವನಕ್ಕೆ ಅಡಿಪಾಯ. ತುಂಬಾ ಪುಟ್ಟ ಗ್ರಾಮವಾದ ಕೋಲಾರ ಜಿಲ್ಲೆಯ ಬಾಗೆಪಲ್ಲಿ ತಾಲೋಕಿನ ಪಾತಪಾಳ್ಯ ಎನ್ನುವ ಹಳ್ಳಿಯಲ್ಲಿ ಇವನ ಜನನವಾಗುತ್ತದೆ. ತಾತ ಸ್ವಾತಂತ್ರ್ಯ ಹೋರಾಟಗಾರರು. ಕ್ರೀಡೆ, ವಾಲಿಬಾಲ್ ಅಕಾಡೆಮಿ, ಸ್ವಾತಂತ್ರ್ಯ ಹೋರಾಟ ಇವುಗಳಲ್ಲೇ ಸದಾ ಕಾಲ ಕಳೆದ ಬಾಲ್ಯ ಜ್ಞಾನಿ. ಸುಮಾರು 32 ಬಾಗಿಲಿನ ದೊಡ್ಡ ಮನೆ. ಅಪ್ಪ ಕಷ್ಟಪಟ್ಟು ಮನೆಗೆ ದುಡಿಯುತ್ತಿದ್ದರು.ಮನೆಯ ಎಲ್ಲಾ ವಾತಾವರಣವನ್ನು ಅವರೇ ಸಂಭಾಳಿಸಬೇಕಾಗಿತ್ತು. ಆ ಸಮಯ ಇವನು ತನ್ನನ್ನು ತಾನೂ ಪೂರ್ಣ ಶರಣಾಗಿಸಿಕೊಂಡಿದ್ದು ಹೆತ್ತಮ್ಮನಿಗೆ ಮಾತ್ರಾ.
ಚಪ್ಪಲಿ ಹಾಕಿಕೊಳ್ಳುತ್ತಿರಲಿಲ್ಲ. ಅದರ ಅವಶ್ಯಕತೆಯೂ ಇರಲಿಲ್ಲ. ಪ್ರಕೃತಿ ಮಧ್ಯೆ ಹೊಲಗದ್ದೆಗಳಲ್ಲಿ ಓಡಾಡಿಕೊಂಡು ಬೆಳೆದವನು ಈತ. ಚಿಕ್ಕಂದಿನಲ್ಲೇ ಹರಿಕಥೆಗಳು, ಭುರ್ರ ಕತೆಗಳು, ಮಂದಿರದ ಉತ್ಸವಗಳೆಲ್ಲ ಇವನಿಗಿಷ್ಟವಾಗತೊಡಗಿತ್ತು. ಜೀವನದಲ್ಲಿ ಮನೆಗೋಸ್ಕರ ಬದುಕಬಾರದು, ಇದಕ್ಕೆ ಮೀರಿ ಬದುಕಬೇಕು ಅಂದುಕೊಳ್ಳತೊಡಗಿದನು. ಮನೆಯಲ್ಲಿ ಸಮೃದ್ಧಿ ಇತ್ತು. ತೋಟದ ತುಂಬೆಲ್ಲಾ ಇರುತ್ತಿದ್ದ ಮಾವು, ಉಗ್ರಾಣದ ತುಂಬೆಲ್ಲಾ ತುಳುಕುತ್ತಿದ್ದ ಧಾನ್ಯಗಳು ಇವನಿಗೆ ಹೊಟ್ಟೆಪಾಡಿಗಾಗಿ ಬದುಕಬೇಕು ಎನ್ನುವ ಆಸೆಗಳನ್ನೇ ತುಂಬಲಿಲ್ಲ.
ಓದು ಪ್ರಾರಂಭಿಸಿದಾಗ ತಾಯಿ, ‘ದೊಡ್ಡ ಆಫೀಸರ್ ಆಗು’ ಎಂದು ಹೇಳಲೇ ಇಲ್ಲ. ಚಿಕ್ಕಂದಿನಿಂದಲೂ ಕೂರಿಸಿಕೊಂಡು ಚಂದಮಾಮನ ಕತೆ ಹೇಳಿ ಇದೊಂದಿದ್ದರೆ ಸಾಕು ಜೀವನ ಅರಿಯಬಹುದು ಎಂದು ತಿಳಿ ಹೇಳ್ತಾ ಇದ್ರು. ಅದನ್ನೇ ಇವನು ಸೀರಿಯಸ್ಸಾಗಿ ತೆಗೆದುಕೊಂಡ. ಪ್ರತಿಯೊಂದು ಕಥೆಯಲ್ಲೂ ಜೀವನ ಸಿಕ್ತು. ಇವನಿಗೆ ಪ್ರಕೃತಿಯ ಸಹಜತೆಯನ್ನು ತಾಯಿ ಬಹಳ ಅಂದವಾಗಿ ತೋರಿಸಿದ್ದರು. ಹಾವಿನ ಪೊರೆ ಬಿಡುವುದು, ನವಿಲಿನ ನರ್ತನ, ಜೀವಿಗಳ ಮಿಲನ ಇತ್ಯಾದಿಗಳೆಲ್ಲವನ್ನು ತೋರಿಸಿ, ಬಿಡಿಸಿ ಹೇಳುತ್ತಿದ್ದರು, ‘ಫೇಲಾದರೆ ನೀನು ನನ್ನ ಜೊತೆ - ಪಾಸಾದರೆ ನಾನು ನಿನ್ನ ಜೊತೆ ಇದ್ದೀನಿ ಬಿಡೋ’ ಎಂದು ಧೈರ್ಯ ತುಂಬಿ ಸಹಜತೆಯ ಬದುಕಿಗೆ ದಾರಿ ಮಾಡಿದ್ದರು. 
ಶಾಲೆಯಲ್ಲಿ ಗುರುಗಳು ಇವನನ್ನೇ ಜಾಸ್ತಿ ಪ್ರೀತಿ ಮಾಡುತ್ತಿದ್ದರು. ‘ಇವನ ಜೊತೆ ವೈವಿಧ್ಯಮಯ ಪ್ರಶ್ನೆಗಳಿವೆ!, ಇವನು ಇಲ್ಲಿರಬಾರದು, ಬೇರೆ ಎಲ್ಲಾದರೂ ಕಳಿಸಿ’ ಅಂತಿದ್ರು, ಅಮ್ಮನ ಬಗ್ಗೆ ವಿಶೇಷ ಮಮತೆ ಹೊಂದಿದ್ದ ಇವ, ‘ಈ ಪ್ರಶ್ನೆಗಳೇ ನನ್ನನ್ನು ತಾಯಿಯಿಂದ ದೂರ ಮಾಡುತ್ತವೋ ಎನೋ’ ಎಂದು ಕೆಲವೊಮ್ಮೆ ಪ್ರಶ್ನೆಯನ್ನೇ ಕೇಳದೆ ಇರುತ್ತಿದ್ದ. ಕಾರಣ ಅಮ್ಮನಿಲ್ಲದೇ ಇರುವ ಧೈರ್ಯ ಇವನಿಗಿರಲಿಲ್ಲ. 
ಹೀಗೆ ಇವನ ಬಾಲ್ಯ ಜೀವನ ತುಂಬಾ ಉತ್ತಮವಾದ ಆಕಾರವಾಯಿತು. ಎಲ್ಲಾ ಜಾತಿ ಬೇಧಗಳನ್ನು ತೊರೆದು ನಿಂತಿತು. ‘ಪಾಸಾಗುವುದಕ್ಕೆ ಓದಬೇಡ ತಿಳಿದುಕೊಳ್ಳುವುದಕ್ಕೆ ಓದು’ ಎನ್ನುವ ಮನಸ್ಥಿತಿ ಇವನದಾಯಿತು. ಇವನ ತಾತನಿಗೆ ಜ್ಯೋತಿಷ್ಯ ಜ್ಞಾನವಿತ್ತು. 4ನೇ ತರಗತಿ ಇರುವಾಗಲೇ ತಾತ ಮಂದ ದೂರದೃಷ್ಟಿ ಹೊಂದಿದ್ದರಿಂದ ಜಾತಕಗಳನ್ನು ಇವನ ಕೈಯಿಂದಲೇ ಬರೆಸಲು ಆರಂಭಿಸಿದರು. ಅಲ್ಲಿಂದ ಜಾತಕಗಳನ್ನು ಬರೆಯುವ ಕಾಯಕ ಪ್ರಾರಂಭವಾಯಿತು.

ತಿಳಿದ ಹಾಗೆ ಮಾತಾಡುವ ಜಾಯಮಾನ ಇವನದಾಯ್ತು. ಅದೃಷ್ಟವೋ ಏನೋ ಎಂಬಂತೆ ಓದಿದ ಎಲ್ಲ ವಿಷಯಗಳು ಉತ್ತಮ ಅಂಕವನ್ನೇ ಹೊತ್ತು ಬಂದವು. ಒಳ್ಳೆಯ ಮಾರ್ಕ್ ಬಂದರೆ ಮಾರಕ ಎನ್ನುವ ಅಂಶವೂ ತಿಳಿಯಿತು. ಇಂಜೀನಿಯರಿಂಗ್ ಓದಲು ಸೀಟ್ ಸಿಕ್ತು. ಆದರೆ ಜನರನ್ನು ಓದಬೇಕೋ!?, ಇಂಜಿನಿಯರಿಂಗ್ ಓದಬೇಕೋ!? ಎನ್ನುವ ಪ್ರಶ್ನೆಗಳು ಇವನನ್ನು ಕಾಡತೊಡಗಿತು. ದಿನ ಮುಗಿಸುವಷ್ಟರಲ್ಲಿ ಆಧ್ಯಾತ್ಮದ ಸೆಳವು ಇವನನ್ನು ಓವರ್ ಟೇಕ್ ಮಾಡಿತು. ‘ನಾನು ಇದಕ್ಕೋಸ್ಕರ ಹುಟ್ಟಿಲ್ಲ, ನನ್ನಿಂದ ಬೇರೇನೋ ಆಗಬೇಕಿದೆ ಅಂದೆನಿಸಿ ಅಮ್ಮನ ಬಳಿ ಅತ್ತು ಹೇಳಿ’ ಅಮ್ಮನ ಪೂರ್ಣ ಹಾರೈಕೆಯೊಂದಿಗೆ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಹೋಗಿ ಕುಳಿತುಕೊಂಡು ಮಾತು ಆರಂಭಿಸುತ್ತಾನೆ. ಜನರ ಸೆಳೆವು ಆರಂಭವಾಗುತ್ತದೆ. ಅಂತೆಯೇ ಜನರ ಸಂಖ್ಯೆ ಜಾಸ್ತ್ತಿಯಾಗುತ್ತದೆ. ಕಠಿಣವಾದ ವಿಚಾರ, ದೇವರ ಪ್ರೀತಿ ಧ್ಯಾನ, ಭಗವದ್ಗೀತೆಯ ಓದು, ಸಾಹಿತ್ಯದ ಒಲವು ಹೀಗೆ ಎಲ್ಲವೂ ಇವನನ್ನ ಸೆಳೆಯುತ್ತದೆ.
ಮುಂದೆ ಈತ ಹೇಳಿದ್ದೆಲ್ಲಾ ನಿಜವಾಗುತ್ತಾ ಸಾಗಿತು. ಅಂದಿನ ದಿನಗಳಲ್ಲಿ, ಬರೇ ಮನುಷ್ಯರೊಡನೆ ಮಾತನಾಡುತ್ತಿದ್ದ ಇವ, ಮಾತು ಕಿರಣದ ಹಾಗೆ, ಪ್ರತಿಕಿರಣದ ಅವಶ್ಯಕತೆ ಅದಕ್ಕಿಲ್ಲ ಎಂದು ಅರಿತು ನಂತರ ಮಾತು ಮಾತಿನ ಮಾತಲ್ಲೇ ಮುಳುಗಿ ಹೋದ. ಇರುವೆಯೊಡನೆಯೂ ಮಾತು, ಕರುವಿನೊಡನೆಯೂ ಮಾತು, ಬಳ್ಳಿಯೊಡನೆಯೂ ಮಾತು, ಕಲ್ಲಿನೊಡನೆಯೂ ಮಾತು. ಅದೊಂದು ರೋಮಾಂಚನ ಅನುಭವ. ದೇವನೆಂದೂ ಮಾತನಾಡುವುದಿಲ್ಲ, ಅದೊಂದು ಬಯಸಿದಾಗೆಲ್ಲ ಓದುವಂತಹ ಪುಸ್ತಕ ಎಂಬುದು ತಿಳಿಯುತ್ತಲೇ ಹೋಯಿತು. ಜಗತ್ತಿಗೆ ಅದರ ಅರಿವನ್ನು ಸಾರಲು ಎದ್ದು ನಿಂತನು.
ಇವನಿಗೆ ಚಿಕ್ಕಂದಿನಿಂದಲೂ ಅಮ್ಮನೇ ಅಪಾರ ಧೈರ್ಯ. ಅಮ್ಮನಿಲ್ಲದಿದ್ದರೆ ನಾನಿರಲು ಸಾಧ್ಯವಿಲ್ಲವೆಂಬಂತೆ ಬದುಕುತ್ತಿದ್ದವನಿಗೆ ಒಮ್ಮೆ ದೇವಾಲಯದ ಬಳಿ ಕುಳಿತಿದ್ದಾಗ ಜ್ಞಾನೋದಯವಾಗಿತ್ತು. 
ಭದ್ರತೆ ಭಯದ ತಾತ್ಕಾಲಿಕ ವಿರಾಮ, ಭದ್ರತೆ ಇಲ್ಲದೆ ನಿರ್ಭಯತೆ ಪೂರ್ಣವಿರಾಮ, ಅದೇ ಮುಕ್ತಿ, ದೇಹ ಕಳಚಿದ ಆಕಾಶ. ಆವರಣವಿಲ್ಲದ ಸ್ವಾತಂತ್ರ್ಯ, ಗಡಿಯಿಲ್ಲದ ದೇಶ, ವಿದೇಶವೂ ಸ್ವದೇಶವೂ ಒಂದಾಗುವುದು. ಯುದ್ಧವಿಲ್ಲದಂತಾಗುವುದು. ದೇಹ, ದೇಶಗಳು ದೇವನಲ್ಲಿ ಲೀನವಾಗುವ ಕ್ರೀಯೆ, ಸಮ್ಯಕ್ಮುಕ್ತಿ, ಬಯಸುವಿಕೆಯಿಂದ ಹುಟ್ಟುವ ಮೊದಲ ವೈರಿ ಭಯ. ಅಹಂಕಾರದೊಂದಿಗಿನ ನಿರ್ಭಯತೆ ನಾಟಕವಷ್ಟೇ. ಅಹಂಕಾರ ತೊರೆದ ನಿರ್ಭಯತೆ ಸೌಜನ್ಯವಾಗುತ್ತದೆ. ಸೌಜನ್ಯ ನಿರ್ಭಯದ ಸರೋವರದಲ್ಲಿ ಅರಳುವ ಕಮಲ. ಭಯ ದುಃಖದ ತಾಯಿ, ದುಃಖವು ದೇಹ ದೇಶ ದೇವರನ್ನು ವಿಭಜಿಸುತ್ತದೆ. ಭಯ ನಿರ್ಮೂಲನೆಯ ಪ್ರಯೋಗಗಳು ಆವರಣಗಳನ್ನು ಭೇಧಿಸುತ್ತದೆ ಎಂಬುದನ್ನು ಅರಿತೇ ಬಿಟ್ಟ್ಟ. ಅಂದಿನಿಂದ ಭಯವಿಲ್ಲದೇ ಬದುಕಲಾರಂಭಿಸಿದ.
ಹೀಗೆ ಇವರ ಬದುಕು ಕರ್ನಾಟಕದಿಂದ ದೂರದ ಮುಂಬೈವರೆಗೂ ಚಲನೆ ಕಂಡು ಇಂದು ಮುಂಬೈನಲ್ಲೇ ವಾಸವಾಗಿ ತಾಯ್ನಾಡಿಗೆ ಆಗಾಗಾ ಬಂದು ಹೋಗುತ್ತಿದ್ದಾರೆ. ಆಧ್ಯಾತ್ಮ, ಧ್ಯಾನ, ಸಾಹಿತ್ಯ, ಸಂಸ್ಕøತಿ, ಓದು, ವಿಚಾರ-ವಿನಿಮಯ ಇತ್ಯಾದಿಗಳೆಲ್ಲದರಲ್ಲೂ ತಾನೊಬ್ಬ ನಿಷ್ಣಾತನಾದರೂ ಎಲ್ಲಿಯೂ ಯಾರ ಬಳಿಯೂ ಏನನ್ನೂ ತೋರಿಸಿಕೊಳ್ಳದೇ ಮಾಮೂಲಿಯಾಗಿಯೇ ನಡೆದುಕೊಂಡೆ ಹೋಗುತ್ತಾರೆ. ದುಡ್ಡಿಗಾಗಿ ಕಲಿಯುವ, ಮುನ್ನಡೆಸುವ ಅದೆಷ್ಟೋ ಜ್ಯೋತಿಷ್ಯ ಶಾಸ್ತ್ರ ಸಮಾಜದಲ್ಲಿಂದು ತಲೆಯೆತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಆದರೆ ಇವರೆಂದು ಆ ಶಾಸ್ತ್ರವನ್ನು ಓದಿ ವಾಡಿಕೆ ಮಾಡಿಕೊಂಡವರಲ್ಲ ಮತ್ತು ಅದನ್ನು ಹಣಕ್ಕಾಗಿ ದುರುಪಯೋಗ ಪಡಿಸಿಕೊಂಡವರಲ್ಲ. ಬರಿಯ ಪ್ರೀತಿ ಬಿಟ್ಟರೆ ಯಾರಿಂದ ಏನನ್ನೂ ಬಯಸದ ಮಗುವಿನ ಮನಸು ಅವರದು. ಅವರ ಜ್ಞಾನಕ್ಕೆ, ಅವರಿರುವ ಗೌರವಕ್ಕೆ ಇಂದು ಬಂಗಲೆಯನ್ನೇ ನಿರ್ಮಿಸಿಕೊಂಡು ಐಷಾರಾಮಿಯಾಗಿ ಬದುಕಬಹುದು ಆದರೆ ಹತ್ತು ಮನೆಗಳನ್ನು ಬದಲಿಸಿದರೂ ಅವರಿಂದಿರುವುದು ಬಾಡಿಗೆ ಮನೆಯಲ್ಲೇ ಎಂದರೆ ನೀವು ನಂಬಲಸಾಧ್ಯ.
ಶೂನ್ಯತ್ವ, ಮಾನವ ಧರ್ಮ, ಭಗವಂತ ಎನ್ನುವ ಶಕ್ತಿ, ಪುರಾಣತೆಯ ಸ್ಪಷ್ಟನೆ, ದೇವ-ದೇಶ-ದೇಹ ಇವು ಮೂರರ ಸಂಬಂಧ ಇತ್ಯಾದಿಗಳೆಲ್ಲವೂ ಇವರಲ್ಲಿ ನಾವು ಕಾಣದ ಗೋಚರಗಳಾಚೆ ಮಿಡಿಯುತ್ತವೆ. ಪ್ರತಿ ಮಾತಲ್ಲೂ ನಯತೆ, ವಿನಯತೆ, ನಾನೇನೂ ಅಲ್ಲ, ಎಲ್ಲವೂ ಮೂರು ಕಣ್ಣಿನ ಸುತನೇ ಹೇಳುವವ ಎಂದೆನ್ನುವ ಅಹೋರಾತ್ರರು ನಾನು ಮೂರ್ಖ ಎನ್ನುತ್ತಲೇ ಜಗತ್ತಿಗೆ, ಜನರಿಗೆ ತಮ್ಮ ನುಡಿಗಳನ್ನು ನೀಡುತ್ತಲೇ ಸಾಗುತ್ತಿದ್ದಾರೆ. ಕನ್ನಡದ ಬಗ್ಗೆ ಅಪಾರ ಅಭಿಮಾನವೀಯುತ್ತಾ ಕಬೀರರಂತೆ ರಸಗವಳದ ಸಾಲುಗಳನ್ನು ನುಡಿಯುತ್ತಾ ಹೀಗೆ ಸಾಗುತ್ತಾರೆ.
ಅಂದು ಹೊರಟವ ಇವ...
ಎಲ್ಲಿಯೂ ನಿಲ್ಲಲಿಲ್ಲ...
ಮನೆಯನೆಂದೂ ಕಟ್ಟಲಿಲ್ಲ...
ಕೊನೆಯನಿನ್ನೂ ಮುಟ್ಟಲಿಲ್ಲ...


‘ವೃಕ್ಷ-ರಕ್ಷ’
‘ಮೂರ್ಖನ ಮಾತು’ಗಳು ಪುಸ್ತಕ ಬರೆದಾಗ, ಅದರ ಹಣ ನನಗೆ ಬೇಡವೆಂದು ಹಣವನ್ನು ಸಾವಣ್ಣ ಪ್ರಕಾಶಕರಿಗೆ ಹಿಂದಿರುಗಿಸುವ ಹೊತ್ತು, ಪ್ರಕಾಶಕ ಜಮೀಲ್ ಮತ್ತು ಅಹೋರಾತ್ರರಿಬ್ಬರು ಒಟ್ಟಿಗೆ ಯೋಚಿಸಿ ನಾನ್ ಮನಿ ಸಂಸ್ಥೆಯನ್ನು ಸ್ಥಾಪಿಸಿ ‘ವೃಕ್ಷ-ರಕ್ಷ’ ಎನ್ನುವ ಹೆಸರಿನೊಂದಿಗೆ, ಮನುಷ್ಯನ ಹೃದಯಕ್ಕೆ ಮತ್ತು ವೃಕ್ಷಕ್ಕೆ ನೇರ ಸಂಪರ್ಕ ಒದಗಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಿ ಎಲ್ಲೆಲ್ಲೂ ವೃಕ್ಷದ ಬೀಜಾಂಕುರ ಮಾಡುವ ಕೆಲಸವನ್ನು ಮಾಡುವ ಯೋಜನೆಗೂ ಕೈ ಹಾಕಿದ್ದಾರೆ.
‘ವೃಕ್ಷ-ರಕ್ಷ’ದ ಚಿಹ್ನೆ ಹೇಳುವಂತೆ, 32 ಜನ, 16 ಜೋಡಿಗಳು ವೃಕ್ಷದ ಸುತ್ತುವರಿದಿದ್ದಾರೆ, ವೃಕ್ಷದ ಮೇಲೆ ಮಕ್ಕಳು ಆಟವಾಡುತ್ತಿದ್ದಾರೆ.

ಕವಿ ಕನವರಿಕೆ: ಪ್ರೇಮಾಯಣ - #5

       ಅವನಿನ್ನು ಬ್ಯಾಚುಲರ್. ಅವಳಿಗೀಗ ಮದುವೆಯಾಗಿದೆ. ಒಂದೆರಡು ವರ್ಷಗಳ ಹಿಂದೆ ಇವರಿಬ್ಬರು ಪ್ರೇಮ ಪಕ್ಷಿಗಳು...ಅವನಿಗೆ ಅವಳ ಜೊತೆ ಕಳೆದಿರುವ ನೆನಪುಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಅವಳಿಗೆ ಗಂಡನನ್ನು ಬಿಟ್ಟರೆ ಜೊತೆಗೊಂದು ಮಗುವಿದೆ.
ರಾತ್ರಿ ಮಲಗಿದರೆ ಆಕೆ ನೆನಪಾಗುತ್ತಾಳೆ. ಹೊರ ಪ್ರಪಂಚಕ್ಕೆ ಕಾಲಿಟ್ಟರೆ ಜೊತೆ ನಡೆದ, ಜೊತೆ ಕಳೆದ ಸಮಯಗಳು ನೆನಪುಗಳನ್ನು ಒತ್ತುವರಿ ಪಡೆದು ಅಳಿಸುತ್ತವೆ. ಆಕೆಯ ದೇಹವನ್ನು ಇನ್ನೊಬ್ಬ ಹಕ್ಕುದಾರ ಮುಟ್ಟಬಹುದು ಎನ್ನುವ ಅಂಶ ತಿಳಿದೂ, ಮುಟ್ಟಬಾರದು ಎಂದು ಮನಸು ಹಾಹಾಕಾರ ವ್ಯಕ್ತಪಡಿಸಿ ಹೃದಯ ಚುಚ್ಚುತ್ತದೆ. ಬಾಯಿಗೆ ಬಂದಿರುವ ಮಾತುಗಳು ಆಡದೇ ಮಣ್ಣು ಸೇರಿ ಇವನನ್ನು ಮಣ್ಣಾಗಿಸುತ್ತಿದೆ.
      ಇಬ್ಬರದೂ ಪ್ರೀತಿಯ ಮನಸು. ಯಾವುದೋ ಅನ್ಯ ಶಿಕಾರಿಗೆ ಶಿರ ಕಳೆದಿದೆ. ಸಂಜೆಯಾದರೆ ಅವಳ ನೆನಪು ಆತನಿಗೆ ಮಾರಕವಾಗಿದೆ. ಕುಂತಲ್ಲಿ ಕೂರದೆ, ನಿಂತಲ್ಲಿ ನಿಲ್ಲದೇ, ಯಾರ ಸಂಪರ್ಕಕ್ಕೂ ಮನ ಒಪ್ಪದೇ, ಮನ ಕಾರಾಗ್ರದ ಬಂಧಿಯಾಗಿ ಬವಣೆ ನೋವನ್ನು ಪಡೆಯುತ್ತಿರುವ ಆತನ ಎದೆಯೊಳಗೆ ಅವಳು ಸಉಖವಾಗಿರಲಿ ಎನ್ನುವ ಹಸಿರ ಹೃದಯ ವೈಶಲ್ಯತೆ ಅಷ್ಟೋ ಇಷ್ಟೋ ತ್ಯಾಗದ ಸುಖವನ್ನು ಸಿಂಪಡಿಸುತ್ತಿದೆ...
   
      ಅತ್ತ ಅವಳು ಒಂದಿಷ್ಟು ದಿನ ಏನೂ ಅರಿಯದಂತೆ ಕಾಲ ಕಳೆದು ಎಲ್ಲವನ್ನು ಮರೆತು ಸಂಭ್ರಮಿಸಿದ್ದಕ್ಕೆ ಬಸುರಿಯಾಗಿ ಮಗನನ್ನು ಹೆತ್ತಿದ್ದಳು. ಈಗೀಗ ಮತ್ತೆ ಅವನ ನೆನಪಾಗುತ್ತಿದೆ. ಛೇ!, ನಾನು ಮೋಸ ಮಾಡಿದೆ ನನ್ನ ಹುಡುಗನಿಗೆ ಎನ್ನುವ ಸಾಕ್ಷ್ಯ ಪ್ರಜ್ಞೆ ಅವಳನ್ನು ಕಾಡ ಹತ್ತಿದೆ...ಇತ್ತ ತನ್ನದಲ್ಲ ಎನ್ನುವ ಅವನ ಅನಾಥ ಪ್ರಜ್ಞೆ, ಆತ ನನ್ನವನು ಎನ್ನುವ ಇವಳ ಸಮಯ ಪ್ರಜ್ಞೆಗಳೆರಡು ಕಾಲದ ಹೊಡೆತಕ್ಕೆ ಸಿಕ್ಕಿ ನೋವಲ್ಲೇ ಕನವರಿಸುತ್ತಿವೆ...