Saturday, 1 October 2016

ಸಿರಿ ಬುಲೆಟ್... ಕಾವೇರಿದೆ ಕಾವೇರಿ ಕೂಗು...


* ಗೋಳು ಕೇಳುತ್ತಿಲ್ಲ...ಬರೀ ನೋವೆ ಎಲ್ಲಾ...
* ಅಂದಿನಿಂದ ಇಂದಿನವರೆಗೂ ಕರ್ನಾಟಕಕ್ಕೆ ಅನ್ಯಾಯವೊಂದೆ ತೀರ್ಪು
* ಯಾಕೆ!? ಏನು!? ಎತ್ತ!? ಬನ್ನಿ ತಿಳಿಯೋಣ...

         
     ಪ್ರತಿಭಟನೆ...ಪ್ರತಿಭಟನೆ...ಪ್ರತಿಭಟನೆ... 
ಒಮ್ಮೆ ಬಸ್ ನೌಕರರದ್ದು, ಇನ್ನೊಮ್ಮೆ ಕೂಲಿ ಕಾರ್ಮಿಕರದ್ದು, ಮಗದೊಮ್ಮೆ ಬೃಹತ್ ಮಟ್ಟದ ಕಾವೇರಿಯದ್ದು...ಈ ವರ್ಷ ಈ ರೀತಿಯ ಸ್ಟ್ರೈಕ್‍ಗಳಿಗೆ ಬರಗಾಲವೇ ಇಲ್ಲ ಎನ್ನುವಂತಾಗಿದೆ.
ಒಂದೊಂದು ಕಡೆ ಹೊತ್ತಿ ಉರಿಯಿತು, ಇನ್ನೊಂದು ಕಡೆ ಲಾಠಿ ಏಟು ಬಿತ್ತು, ಮತ್ತೊಂದು ಕಡೆ ಆ ರಾಜ್ಯದವನು ಈ ರಾಜ್ಯದವನಿಗೆ, ಇಲ್ಲಿಯವನು ಅಲ್ಲಿಯವನಿಗೆ ಮನಬಂತಂತೆ ಹೊಡೆದು ಆಕ್ರೋಶ ತೀರಿತು. 
ಈಗ ಎಲ್ಲವನ್ನು ಬದಿಗಿಟ್ಟು ದಿನದಿಂದ ದಿನಕ್ಕೆ ಕಾವೇರುತ್ತಿರುವ ಕಾವೇರಿ ನದಿ ಮತ್ತು ಹೋರಾಟದ ಹಿಂದಿರುವ ಎಲ್ಲಾ ಅಂಶಗಳ ನಡುವೆ ಒಂದು ರೌಂಡ್ ಚಲಿಸಿ ತಿಳಿದುಕೊಂಡು ಬರೋಣ. ಯಾಕೆಂದರೆ ಪ್ರತಿಭಟನೆಯೆಂದು ಮಾಡುವ ಅದೆಷ್ಟೋ ಜನರಿಗೆ ಮ್ಯಾಟರ್ ಏನೆಂದೆ ತಿಳಿದಿರುವುದು ಕಡಿಮೆ!. ಇದರ ಇತಿಹಾಸವೇನು?, ಕರ್ನಾಟಕದವರಾದ ನಾವು ಹೋರಾಟ ಯಾಕೆ ಮಾಡಬೇಕು? ನಮಗಾಗುತ್ತಿರುವ ಅನ್ಯಾಯವೇನು? ನೀರನ್ನು ಬಿಡಲಾಗದು ಎಂದು ಖಡಾಖಂಡಿತ ಯಾಕೆ ಹೇಳಬೇಕು ಇತ್ಯಾದಿಗಳನ್ನೆಲ್ಲಾ ತಿಳಿಯೋಣ ಬನ್ನಿ...
ಕಾವೇರಿ ನದಿ ನೀರು ವಿವಾದಕ್ಕೆ ಶತಮಾನಗಳ ಇತಿಹಾಸವಿದೆ. 1892 ಮತ್ತು 1924ರಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಮಾಡಿಕೊಂಡ ಎರಡು ಒಪ್ಪಂದಗಳಿಂದ ವಿವಾದ ಪ್ರಾರಂಭವಾಯಿತು. ಅದು 19ನೇ ಶತಮಾನದ ಬ್ರಿಟೀಷ್ ಆಳ್ವಿಕೆಯ ಕಾಲ. ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಸಂಸ್ಥಾನಗಳು ಆಂಗ್ಲರ ಆಳ್ವಿಕೆಗೆ ಒಳಪಟ್ಟಿದ್ದವು. ಕಾವೇರಿ ನದಿ ನೀರಿನ ಬಳಕೆ ಕುರಿತು ಆಂಗ್ಲರು ಹಲವು ಯೋಜನೆಗಳನ್ನು ರೂಪಿಸಿದ್ದರು. ಇದೇ ವೇಳೆ ಬರಗಾಲ ಪ್ರಾರಂಭವಾಗಿದ್ದರಿಂದ  ಈ ಯೋಜನೆಗಳು ಜಾರಿಗೆ ಬಂದಿರಲಿಲ್ಲ. 1881ರಲ್ಲಿ ಮೈಸೂರು ಸಂಸ್ಥಾನ ಕಾವೇರಿ ನದಿ ನೀರಿನ ಬಳಕೆ ಬಗ್ಗೆ ಕೆಲವು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಯ್ತು. ಈ ಯೋಜನೆ ಜಾರಿಗೆ ಬರಬೇಕೆನ್ನುವಷ್ಟರಲ್ಲಿ ಮೈಸೂರು ಸಂಸ್ಥಾನ ಬ್ರಿಟೀಷ್ ಆಳ್ವಿಕೆಯಿಂದ ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿತು. ಆದರೆ ಮದ್ರಾಸ್ ಸಂಸ್ಥಾನ ಇನ್ನೂ ಬ್ರಿಟೀಷರ ಆಳ್ವಿಕೆಯಲ್ಲೇ ಇತ್ತು. ಆಗ ಮೈಸೂರು ಸಂಸ್ಥಾನ ಕಾವೇರಿ ಬಗ್ಗೆ ನೀರಿನ ಸದ್ಭಳಕೆ ಬಗ್ಗೆ ಮುಂದಾದಾಗ ಮದ್ರಾಸ್ ಸಂಸ್ಥಾನ ವಿರೋಧ ವ್ಯಕ್ತಪಡಿಸಿತು. ಬಿಕ್ಕಟ್ಟಿನ ಶಮನಕ್ಕಾಗಿ 1890ರಲ್ಲಿ ಮೈಸೂರು ಮತ್ತು ಮದ್ರಾಸ್ ಸಂಸ್ಥಾನಗಳ ನಡುವೆ ಮಾತುಕತೆ ಏರ್ಪಟ್ಟಿತು. 2 ವರ್ಷಗಳ ಬಳಿಕ 1892ರಲ್ಲಿ ಉಭಯ ಸಂಸ್ಥಾನಗಳು ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಅನ್ಯಾಯ ಪ್ರಾರಂಭವಾಗಿದ್ದೆ ಈ ಒಪ್ಪಂದದ ಮೂಲಕ. ಈ ಒಪ್ಪಂದಕ್ಕೆ ಮೈಸೂರು ಸಂಸ್ಥಾನ ವಿರೋಧ ವ್ಯಕ್ತಪಡಿಸಿತ್ತಾದರೂ ಸಹಿ ಮಾಡಿತ್ತು. ಮೈಸೂರಿನ ಸಂಸ್ಥಾನಕ್ಕೆ ಕಾವೇರಿ ನೀರಿನ ಹರಿವಿಕೆಯಲ್ಲಿ ಕಡಿಮೆ ಸ್ವಾತಂತ್ರ್ಯ ಹಾಗೂ ಮದ್ರಾಸ್  ಸಂಸ್ಥಾನಕ್ಕೆ ನದಿ ನೀರಿನ ವಿಚಾರದಲ್ಲಿ ಯಾವುದೇ ಕೊರತೆಯಾಗದಂತೆ  ನೋಡಿಕೊಳ್ಳಲಾಗಿತ್ತಲ್ಲದೇ ಮದ್ರಾಸ್ ಸಂಸ್ಥಾನಕ್ಕೆ ಸರ್ವಾಧಿಕಾರ ನೀಡಲಾಗಿತ್ತು.
           ಅಂದಿನಿಂದ ಸ್ವಾತಂತ್ರ್ಯಾ ನಂತರವೂ ಮೈಸೂರು ಸಂಸ್ಥಾನ 1892ರ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಇತ್ತು. 1910ರಲ್ಲಿ ಕನ್ನಂಬಾಡಿ ಎಂಬ ಹಳ್ಳಿಯಲ್ಲಿ ಕಾವೇರಿ ನದಿಗೆ ಅಣೆಕಟ್ಟು ಕಟ್ಟುವ ಯೋಜನೆಯನ್ನು ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅಂದಿನ ಇಂಜಿನಿಯರ್ ಸರ್.ಎಂ. ವಿಶ್ವೇಶ್ವರಯ್ಯ ರೂಪಿಸಿದರು. ಆ ಅಣೆಕಟ್ಟು 2 ಹಂತದಲ್ಲಿ ನಿರ್ಮಿಸುವ ಯೋಜನೆ ಹೊಂದಲಾಗಿದ್ದು, ಆ ಮೂಲಕ 41.5 ಟಿಎಂಸಿ ನೀರು ಸಂಗ್ರಹಿಸುವ ಯೋಜನೆ ಹೊಂದಲಾಗಿತ್ತು. ಆದರೆ ಈ ಯೋಜನೆಗೆ ಮದ್ರಾಸ್ ಸಂಸ್ಥಾನ ತೀವ್ರ ವ್ಯಕ್ತಪಡಿಸಿತಲ್ಲದೇ ನೀರಿನ ಹರಿವು ಕಡಿಮೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿತು. ಅಲ್ಲದೇ ಮೆಟ್ಟೂರು ಬಳಿ ತಾನೂ ಒಂದು ಅಣೆಕಟ್ಟು ನಿರ್ಮಿಸಲು ನಿರ್ಧರಿಸಿತು. ಅದರಲ್ಲಿ 80 ಟಿಎಂಸಿ ನೀರು ಸಂಗ್ರಹದ ಉದ್ದೇಶ ಹೊಂದಿತ್ತು. ಈ ವಿವಾದ ಬ್ರಿಟೀಷ್ ಆಡಳಿತದ ಭಾರತ ಸರ್ಕಾರದ ಮೆಟ್ಟಿಲೇರಿತು. ವಿವಾದವನ್ನು ಪರಿಶೀಲಿಸಿದ ಸರ್ಕಾರ ಮೈಸೂರು ಸಂಸ್ಥಾನಕ್ಕೆ ಅಣೆಕಟ್ಟು ನಿರ್ಮಿಸಲು ಅವಕಾಶ ಕೊಟ್ಟಿತಾದರೂ ಅದರಲ್ಲಿ 11 ಟಿಎಂಸಿ ನೀರು ಸಂಗ್ರಹಿಸಬೇಕು ಎಂದು ತಿಳಿಸಿತು. ಇದರಿಂದ ಉಭಯ ಸಂಸ್ಥಾನಗಳ ನಡುವಿನ ವಿವಾದ ಹಾಗೆಯೇ ಮುಂದುವರೆಯಿತು.
ಕಾವೇರಿ ನದಿ ನೀರಿನ ಇತ್ಯರ್ಥಕ್ಕಾಗಿ ಸರ್ಕಾರ ಅಲಹಾಬಾದ್ ಹೈಕೋರ್ಟ್ ನ್ಯಾ.ಸರ್.ಹೆಚ್.ಡಿ ಗ್ರಿಫಿನ್ ಹಾಗೂ ಇನ್ಸ್‍ಪೆಕ್ಟರ್ ಜನರಲ್ ಆಫ್ ಇರಿಗೇಷನ್ ಇನ್ ಇಂಡಿಯಾ ಮಧ್ಯಸ್ಥಿಕೆ ಹಾಗೂ ಪರಿಶೀಲನೆಗಾಗಿ ನೇಮಕ ಮಾಡಿತು. 1913ರ ವರದಿಯನ್ವಯ 1914ರಲ್ಲಿ ತೀರ್ಪು ನೀಡಿದ  ಸರ್ಕಾರ ಮೈಸೂರು ಸರ್ಕಾರ ಕಾವೇರಿ ಕೊಳ್ಳದಲ್ಲಿ ಕೃಷಿಭೂಮಿಯನ್ನು 1,10,000 ಎಕರೆಗಿಂತ ಹೆಚ್ಚಿಸಬಾರದು ಮದ್ರಾಸ್ ಸಂಸ್ಥಾನಕ್ಕೆ  3,01,000 ಎಕರೆವರೆಗೂ ಹೆಚ್ಚಿಸಿತು. ಈ ತೀರ್ಪಿನ ಬಗ್ಗೆ ಮತ್ತೆ ಮತ್ತೆ ವಿರೋಧಗಳು ವ್ಯಕ್ತವಾದವು.
ಉಭಯ ಸಂಸ್ಥಾನಗಳ ಮಾತುಕತೆ ಫಲವಾಗಿ 1924ರಲ್ಲಿ ಮತ್ತೊಂದು  ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ ಮದ್ರಾಸ್ ಸಂಸ್ಥಾನ ಮೆಟ್ಟೂರು ಅಣೆಕಟ್ಟು ಕಟ್ಟಲು ಹಾಗೂ ಮೈಸೂರು ಸಂಸ್ಥಾನ ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಲು ಒಪ್ಪಿಗೆ ಸೂಚಿಸಲಾಯಿತು. ಉಭಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ತಲೆದೋರದಂತೆ  ನೋಡಿಕೊಳ್ಳುವ ಭರವಸೆಗಳನ್ನು ಉಭಯ ರಾಜ್ಯಗಳು ನೀಡಿದ್ದವು. ಆದರೆ ಈ ಒಪ್ಪಂದ 1974 ಅಂದರೆ 50 ವರ್ಷಗಳು ಮಾತ್ರಾ ಜಾರಿಯಲ್ಲಿರುತ್ತದೆ ಎಂದು ದಾಖಲಿಸಲಾಗಿತ್ತು. ಬಳಿಕ 1956ರಲ್ಲಿ ರಾಜ್ಯಗಳ ಏಕೀಕರಣದ ಸಂಧರ್ಭದಲ್ಲಿ ಬಾಂಬೆ, ಕೊಡಗು ಹಾಗೂ ಆಂಧ್ರಪ್ರದೇಶದ ಹಲವು ಭಾಗಗಳು ಕರ್ನಾಟಕಕ್ಕೆ ಸೇರ್ಪಡೆಗೊಂಡವು. ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದ ಮಲಬರ್ ಕೇರಳ ರಾಜ್ಯವಾಗಿ ಹೊರಹೊಮ್ಮಿತು. ಇದರ ಜೊತೆಗೆ ಪದುಚೇರಿ ಕೂಡ ರಾಜ್ಯವಾಗಿ ಉದಯಿಸಿತು. ಹೀಗೆ ಕಾವೇರಿ ನದಿ ನೀರಿನ ವಿವಾದಕ್ಕೆ 4 ರಾಜ್ಯಗಳು ಸೇರ್ಪಡೆಗೊಂಡವು.
          1924ರಲ್ಲಿ ಮಾಡಿಕೊಂಡ ಒಪ್ಪಂದ ಪೂರ್ಣಗೊಳ್ಳುವ ಮೊದಲೇ ಅಂದರೆ 1970ರಲ್ಲಿ ಕರ್ನಾಟಕ ಮತ್ತು ಮದ್ರಾಸ್  ರಾಜ್ಯಗಳು ಮತ್ತೆ ಕಾವೇರಿ ನದಿ ವಿಚಾರವಾಗಿ ಚರ್ಚೆ ನಡೆಸಿದವು. ಈ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ‘ಕಾವೇರಿ ಸತ್ಯ ಶೋಧನಾ ಸಮಿತಿ’ ರಚಿಸಿತು. ಇದರ ವರದಿ ಪ್ರಕಾರ ಕಣಿವೆ ಪ್ರಾಧಿಕಾರ ಸ್ಥಾಪನೆಗೆ ಉಭಯ ರಾಜ್ಯಗಳು ಒಪ್ಪಿಗೆ ಸೂಚಿಸಿದರಾದರೂ ಕೇಂದ್ರ ಸರ್ಕಾರ ಇದಕ್ಕೆ ಅಧಿಕೃತ ಅನುಮೋದನೆ ನೀಡಲಿಲ್ಲ. ಬಳಿಕ 1976ರಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವರಾಗಿದ್ದ ಜಗಜೀವನ್ ರಾಂ ನೇತೃತ್ವದಲ್ಲಿ ಉಭಯ ರಾಜ್ಯಗಳು ಒಂದು ಒಪ್ಪಂದಕ್ಕೆ ಬಂದವು. ಈ ಒಪ್ಪಂದಕ್ಕೆ ಸಂಸತ್ತಿನಲ್ಲಿ ಅಂಗೀಕಾರ ದೊರೆಯುವ ವೇಳೆಗೆ ತಮಿಳುನಾಡಿನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ತುರ್ತು ಪರಿಸ್ಥಿತಿ ಹಿಂದಕ್ಕೆ ಪಡೆದ ಬಳಿಕ ಹೊಸ ಸರ್ಕಾರ ಎಐಡಿಎಂಕೆ ಅಧಿಕಾರಕ್ಕೆ ಬಂದಿತು. ಆಗ ಮುಖ್ಯಮಂತ್ರಿಯಾಗಿದ್ದ ಎಂ.ಜಿ ರಾಮಚಂದ್ರನ್ 1976ರಲ್ಲಿ ಹೊಸ ಒಪ್ಪಂದವನ್ನು ತಿರಸ್ಕರಿಸಿ 1924ರ ಒಪ್ಪಂದವೇ ನಿರ್ಧರಿಸಿದರು. ಈ ಸಂಧರ್ಭದಲ್ಲಿ  ತಮಿಳುನಾಡಿನಲ್ಲಿ 14,40000 ಎಕರೆಯಿಂದ 15,80,000 ಎಕರೆಗೆ ವಿಸ್ತರಣೆಗೊಂಡಿದ್ದರೆ ಕರ್ನಾಟಕ 1924ರ ಒಪ್ಪಂದದ ಬಿಗಿ ಹಿಡಿತಕ್ಕೆ ಸಿಲುಕಿ ತನ್ನ ಕೃಷಿ ಭೂಮಿಯನ್ನು 6,80,000 ಎಕರೆಗೆ ಸೀಮಿತಗೊಳಿಸಿತು.
1984ರಲ್ಲಿ ತಮಿಳುನಾಡಿನ ತಂಜಾವೂರು ಪ್ರಾಂತದ ರೈತ ಸಂಘಟನೆ ಕಾವೇರಿ ನದಿ ನೀರಿನ ಹಂಚಿಕೆ ವಿವಾದದ ಇತ್ಯರ್ಥಕ್ಕಾಗಿ ನ್ಯಾಯಾಧಿಕರಣ ರಚನೆ ಮಾಡಬೇಕೆಂದು  ಸುಪ್ರಿಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿತು. ಅರ್ಜಿಯ ವಿವಾರಣೆ ನಡೆಸಿದ ಸುಪ್ರೀಂ ಕೋರ್ಟ್ 1990ರಲ್ಲಿ ಉಭಯ ರಾಜ್ಯಗಳು ಪರಸ್ಫರ ಒಪ್ಪಂದಕ್ಕೆ ಬರಬೇಕು. ಇಲ್ಲವಾದಲ್ಲಿ ನ್ಯಾಯಾಧಿಕರಣ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅದೇ ವರ್ಷದಲ್ಲಿ ನ್ಯಾಯಾಧಿಕರಣವನ್ನು ರಚನೆ ಮಾಡಿತು.
1991ರಲ್ಲಿ ತೀರ್ಪು ನೀಡಿದ ನ್ಯಾಯಾಧಿಕರಣ ವಾರ್ಷಿಕ 205 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತು. ಅಲ್ಲದೇ ಹಾಲಿ ಇರುವ ಕೃಷಿ ಭೂಮಿಯನ್ನು ಇನ್ನಷ್ಟು ಹೆಚ್ಚಿಸದಂತೆ ತಿಳಿಸಿತು. ಈ ತೀರ್ಪನ್ನು ವಿರೋಧಿಸಿದ ಕರ್ನಾಟಕ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಿತು. ಸುಗ್ರೀವಾಜ್ಞೆ ವಜಾಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧಿಕರಣದ ಆದೇಶವನ್ನು ಪಾಲಿಸುವಂತೆ ಆದೇಶ ನೀಡಿತು. ಇದೇ ವೇಳೆ 1995-96ರ ವೇಳೆ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಕರ್ನಾಟಕಕ್ಕೆ ಸಂಕಷ್ಟದ ಸ್ಥಿತಿ ಬಂದೊದಗಿತು ಬಳಿಕ 1997ರಲ್ಲಿ ಕೇಂದ್ರ ಸರ್ಕಾರ ಕಾವೇರಿ ನದಿ ಪ್ರಾಧಿಕಾರ ಹಾಗೂ ಕಾವೇರಿ ಮೇಲುಸ್ತುವಾರಿ ಸಮಿತಿಯನ್ನು ರಚಿಸಿತು.
ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತು ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧಿಕರಣ 2007ರ ಫೆ. 5ರಂದು ಕಾವೇರಿ ನದಿ ಪಾತ್ರದಲ್ಲಿ 740ಟಿಎಂಸಿ ನೀರು ಲಭ್ಯವಿದ್ದು, ಇದರಲ್ಲಿ ತಮಿಳುನಾಡಿಗೆ 419 ಟಇಎಂಸಿ ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30ಟಿಎಂಸಿ ಹಾಗೂ ಪಾಂಡಿಚೇರಿಗೆ 7 ಟಿಎಂಸಿ ಮತ್ತು 4 ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಯುವಿಕೆ ಕುರಿತು ಅಂತಿಮ ತೀರ್ಪು ನೀಡಿತು. ಆದರೆ ಬೇರೆ ವರದಿಗಳಂತೆ ಅಲ್ಲಿ 740 ಟಿಎಂಸಿ ನೀರಿರಲಿಲ್ಲ. ಅಲ್ಲಿಯೂ ಮೋಸವಾಯ್ತು. 
ಅಂದಿನಿಂದ ಇಂದಿನವರೆಗೂ ಈ ವಿವಾದ ನಡೆಯುತ್ತಲೇ ಇದ್ದು, ಸದಾ ಒಂದಿಲ್ಲೊಂದು ವಿಭಾಗದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಸದ್ಯ ದಿನೇ ದಿನೇ ಸುಪ್ರೀಂ ಕೋರ್ಟ್ ತೀರ್ಪು ತಮಿಳುನಾಡಿನ ಪರವಾಗೇ ಇದ್ದು, ದಿನಗಟ್ಟಲೇ ಸಾವಿರ ಸಾವಿರ ಕ್ಯೂಸೆಕ್ ನೀರನ್ನು ಬಿಡಿ ಬಿಡಿ ಅನ್ನುತ್ತಲೇ ಇದೆ.
ಈ ಬಗ್ಗೆ ಸುಪ್ರೀಂ ನಮ್ಮ ಮಾತನ್ನು ಕೇಳಬೇಕು:
ನಮ್ಮ ಜಲಾಶಯದಲ್ಲಿ ನೀರಿಲ್ಲ...
ಈಶಾನ್ಯ ಮಳೆಯ ಮಾರುತಗಳು ತಮಿಳುನಾಡಿನಲ್ಲಿ ಸುರಿಸುವ ಸಾದ್ಯತೆ ಇದ್ದು, ಈಗಾಗಲೇ ಅವರ ಮೆಟ್ಟೂರು ಜಲಾಶಯದಲ್ಲಿ 50 ಟಿಎಂಸಿಗೂ ಅಧಿಕ ನೀರಿದೆ.
ನಮ್ಮಲ್ಲಿ ಮಳೆಯ ಪ್ರಮಾಣವೂ ಕಡಿಮೆ ಇದ್ದು ಕುಡಿಯುವ ನೀರಿಗೂ ಸಮಸ್ಯೆ ತಲೆದೋರುತ್ತಿದೆ. ಆದರೂ ನಮ್ಮ ಕುಡಿಯುವ ನೀರನ್ನು ಅವರು ಕೇಳುತ್ತಿರುವುದು ಎಷ್ಟು ಸರಿಯೋ ಗೊತ್ತಿಲ್ಲ.
         ಹಳೆಯ ಕಾಯ್ದೆಗೆ ಅಂಟಿಕೊಂಡು ಕುಳಿತಿರುವ ತಮಿಳುನಾಡಿನಿಂದ ಅನ್ಯಾಯವಾಗುತ್ತಲೇ ಇದ್ದರೂ ಕನ್ನಡದ ಮಂದಿ ಸಹಿಸಿಕೊಂಡಿದ್ದರು ಆದರೆ ನಮಗೆ ಇಲ್ಲದಿರುವಾಗ ಇನ್ನೊಬ್ಬರಿಗೆ ನೀರನ್ನು ನೀಡಿ ಎನ್ನುವ ಮಾತು ಸಮಂಜಸವಲ್ಲವೆಂದರಿತ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ!?, ಯಾವ ನ್ಯಾಯಾಧಿಕರಣ ಇದನ್ನು ಬಗೆ ಹರಿಸುತ್ತೆ!? ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ...ಹೀಗೆ ತೀರ್ಪು ತಮಿಳಿಗರ ಪರವಾಗಿಯೇ ಸಾಗುತ್ತಿದ್ದರೆ ಒಂದಿನ ಮಂಡ್ಯ, ಮೈಸೂರು ಮತ್ತು ಬೆಂಗಳೂರಿನ ಮಂದಿ ಎಲ್ಲವೂ ಬರಡಾಗಿ ನೀರಿಗೆ ಹಾಹಾಕಾರವಿತ್ತು ಸಾಯಬೇಕಾಗುವುದು ಗ್ಯಾರಂಟಿ...
ಈಗ ಯಾಕಾಗಿ ನಾವು ಹೋರಾಟಕಿಳಿದ್ದೇವೆಂದು ಎದೆ ತಟ್ಟಿ ಹೇಳಿ ಮುಂದಡಿಯಿಡೋಣ ಬನ್ನಿ...

ಅವಳು ನೆನಪಾದಳು!.. ನಗಬೇಡಿ ಬಿ ಸೀರಿಯಸ್...



“ಅಭ್ಯಾಸ ಕಡಿಮೆ ನಂಗೆ ಅನುಭವದ ಅಭಾವ
ಕಣ್ಮುಚ್ಚಿದರೂ ಕಾಣುತ್ತದೆ ಒಮ್ಮೊಮ್ಮೆ ಅವಳದೇ ಹಾವ ಭಾವ...”
ಗೊತ್ತಿಲ್ಲ!.. ಅವಳು ಮತ್ತೆ ಮತ್ತೆ ನೆನಪಾಗುತ್ತಾಳೆ. ಯಾವ ದೈವಲೀಲೆಯೋ ತಿಳಿದಿಲ್ಲ!!! ಮೊನ್ನೆ ಮೊನ್ನೆ ಮತ್ತೆ ನೆನಪಾದಳು!.. ಸುಮ್ಮನಿದ್ದ ನನ್ನಲ್ಲಿ ಇತ್ತೀಚಿಗೆ ಕಾಡಲು ಶುರುವಿಟ್ಟಿದ್ದೆ ಅವಳ ಅಂದಿನ ವೈಯಾರದ ನೆಪ, ವಿಧವಿಧದಲ್ಲಿ ಮಿಡುಕಿ ನನ್ನ ಮನಸ್ಸನ್ನು ಕದ್ದು ಹೋದವಳು ಅವಳು. ಅಂದು ನಾ ಅವಳಿಗೆ ಬಿದ್ದೋಗಲು ಭವಣೆ ಸಮಾಚಾರ ಬೇಡವಾಗಿತ್ತು ಬದಲಾಗಿ ಅವಳ ಹವ ಭಾವವೊಂದೇ ಸಾಕಾಗಿತ್ತು.
“ಬಾಳ ಸಂತೆಯ ತುಂಬಾ
ಅವಳದೇ ವೈಖರಿ...
ಬಿಟ್ಟು ಹೋದ ಕ್ಷಣದಿಂದ
ಎದೆಯ ರಂಗದಲ್ಲಿ ಮುನ್ನಡೆಯುತ್ತಲೇ ಇದೆ ಮಂಜರಿ...”
ಅವಳೆಂದರೆ ನನಗೊಂದು ಸಂತೆ, ತುದಿಯನ್ನೇ ಕಾಣದ ಆನಂತ ರೇಖೆ. ಹಲವಾರೂ ಅದ್ಭುತಗಳ ಕಂತೆ. ಅನೇಕಾನೇಕ ಮೂಲ ಪರಿಕರಗಳ ಕುಂಟೆ. ಹೀಗೆಲ್ಲ ಆಗಿರುವ ಅವಳು ನೆನಪೋದರೆ ತಾನೆ ನೆನಪಿಸಿಕೊಳ್ಳಲು!!. ಗೊತ್ತಿಲ್ಲ..,ಕಳ್ಳಿ ಅವಳು!, ನೆನಪಲ್ಲೂ ಬಿಟ್ಟೋಗುತ್ತಾಳೆ!.. ನೆನಪೋಗಿ, ನೆನೆಸಿ ಮತ್ತೆ ಮತ್ತೆ ನೆನಪಾಗುತ್ತಾಳೆ.

“ಪಯಣದ ಮಧ್ಯೆ ಇದಿರಾಗುವ ಮಂದಿಯಲ್ಲೇ ಅವಳ ಗೋಚರ...
ಒಂದರೆಘಳಿಗೆ  ಕಂಡು, ಮತ್ತೇ ಕಾಣದೆ ಅಘೋಚರ...”
ರಸ್ತೆ ಬದಿಯಲ್ಲಿ ನಿಂತಿದ್ದ ಹುಡುಗಿಯೊಬ್ಬಳನ್ನು ಕಂಡು ನನ್ನವಳ ನೆನಪು ಇತ್ತೀಚಿಗೆ ಮತ್ತೆ ಮನದ ಕದ ತೆರೆಯಿತು. ಬದುಕಲ್ಲಿ ಪ್ರತಿ ದಿನವೂ ನೂತನ ನೆಪವೊಡ್ಡಿ ಇದಿರಾಗುವ ಆಕೆಯ, ನೆನಪ ಸುಂಟರ ಗಾಳಿಗೆ ಸಿಲುಕಿ ಅದೆಷ್ಟೋ ಬಾರಿ ಗಿರ ಗಿರನೇ ತಿರುಗಿ ತಲೆಕೆಡಿಸಿಕೊಂಡಿದ್ದರೂ, ಮನಕ್ಕೆ ಮಾತ್ರಾ ಇನ್ನೂ ಬುದ್ಧಿ ಬಂದಿಲ್ಲ!!. ಎಷ್ಟೋ ಬಾರಿ ಅವಳ ಬಗ್ಗೆ ಕಂಪಿಸಿದ್ದೆ, ಮೌನಿಸಿದ್ದೆ, ಕೋಪಿಸಿದ್ದೆ... ಆದರೂ, ಅವಳ ನೆನಪು ನನ್ನ ಬಿಟ್ಟೋಗುವ ಲಕ್ಷಣ ಮಾತ್ರಾ ಕಾಣುತ್ತಿಲ್ಲ!..

ಪ್ರಶ್ನೆ ಏನೆಂದರೆ ಅವಳೇ ಯಾಕೆ ನೆನಪಾಗಬೇಕು... ಈ ಹಾಳು ಹೃದಯ ಬತ್ತಿ ಹೋದ ಎದೆಯಲ್ಲಿ ಮತ್ತೆ ಪ್ರೀತಿ ಸಿಂಚನ ಸಿಂಪಡಿಸಲು ಮತ್ಯಾರಿಗೂ ಅವಕಾಶ ನೀಡುತ್ತಿಲ್ಲವ್ಯಾಕೆ!?...  . ಅವಳೆಂದರೆ ಅದಕ್ಯಾಕೆ ಅಷ್ಟೊಂದು ಇಷ್ಟ!?, ನಾ ಇಷ್ಟು ನೆನಪಿಸಿಕೊಂಡರೂ ಅವಳಿಗ್ಯಾಕೆ ಇವ್ಯಾವುದು ಚುಚ್ಚುತ್ತಿಲ್ಲ!?, ಎಲ್ಲಾ ಕಡೆ ವೃಬ್ರೇಟ್ ಶಕ್ತಿ ಇದೆ ಅಂತಾರೆ ಹಾಗಾದರೆ ಇವಳಲ್ಲಿ ನನ್ನಲ್ಲಿ ಅದು ಇಲ್ಲವಾ!? ಕಣ್ಣಿಗೆ ಬೀಳೋರೆಲ್ಲಾ ಅವಳಂತೆ ಕಾಣುತ್ತಾರೆ. ತತ್ ಕ್ಷಣ ನನ್ನ ಹೃದಯ ಬಡಿದಾಡಿಕೊಂಡು ಸಾಯುತ್ತದೆ. ಇನ್ನೇನು ಉಳಿದಿಲ್ಲ ಸತ್ತೇ ಎನ್ನುವಾಗ ಮತ್ತೆ ಹೃದಯ ನೆನಪುಗಳನ್ನು ಹಾಡಿ ಬದುಕಿಸುತ್ತದೆ...
ಇತ್ತೀಚಿಗೆ ಎಲ್ಲವೂ ರುಟೀನ್ ಆಗಿದೆ. ಹಳೆ ಹುಡುಗಿಯರೆಲ್ಲಾ ಮಗುವೆಯಾಗಿ ಮಗುವನ್ನಾಡಿಸುತ್ತಿರುವುದು ಕಂಡು ಬಂದಿದೆ. ಒಬ್ಬರು ಒಬ್ಬರಿಗೆಂದು ಬರೆದಿಡುವ ಬ್ರಹ್ಮ ನನ್ನವಳನ್ನು ಎಲ್ಲಿಟ್ಟಾದೆನೆಂದು ಅರಸುವುದೇ ಕಾಯಕವೆನಿಸಲು ಶುರುವಾಗಿದೆ. ಮೊದಲೆಲ್ಲ ಹುಡುಗರು ಹುಡುಗಿಯರಿಗೆ ಕಾಟ ಕೊಡುತ್ತಿದ್ದರೆಂದು ಕೇಳಿದ್ದೆ ಆದರೆ ಇದೀಗ ಹುಡುಗೀಯರೆ ಹುಡುಗರಿಗೆ ಕಾಟವೀಯುವಷ್ಟು ಜಗತ್ತು ಬದಲಾಗಿದೆ. ಆದರೆ ಅವಳೊಬ್ಬಳು ಎಲ್ಲೋ ಮಿಸ್ ಆಗಿ ಜನ್ಮಿಸಿರಬೇಕು. ಅವಳಿನ್ನು ಹಳೆ ಕ್ವಾಲಿಟಿಯಳೆನಿಸುತ್ತದೆ. ಹೊಸ ಟ್ರೆಂಡ್ಯಾವುದು ಅವಳರಿವಿಗೆ ಬಂದಿಲ್ಲವೋ ಅಥವಾ ನನ್ನ ಇಷ್ಟಾರ್ಥ ಅವಳು ಹಾಗೆ ಜನ್ಮಿಸಿರುವಳೋ ನಾ ಕಾಣೆ!!. ಹಳೆ ಹುಡುಗಿ ಯಜಮಾನನಿದ್ದರೂ, ಫ್ರೀ ಟೈಮ್ ಮಾಡಿಕೊಂಡು ಮಿಸ್ ಕಾಲ್ ಮಾಡುತ್ತಾಳೆ. ಹೊಸ ಹುಡುಗಿಯೊಬ್ಬಳು ಕರೆಯಲ್ಲೇ ಹೃದಯ ಕೆರೆಯುತ್ತಿದ್ದಾಳೆ.  ಮನಸ್ಸು ಹುಚ್ಚು ಅನಿಸಿದರೂ ಈ ವಿಚಾರದಲ್ಲೆಲ್ಲಾ ನನ್ನ ಮನ ಕೆಟ್ಟ ದಾರಿ ಹಿಡಿಯುವುದಿಲ್ಲ. ಆದರೆ ಅವಳ ವಿಚಾರದಲ್ಲಿ ಹಿಂದೆ ಬೀಳುವುದನ್ನು ಮರೆತಿಲ್ಲ. ಅವಳೇ ಬೇಕು ಅನ್ನುತ್ತದೆÉ. ಈ ಬೇಕು ಬೇಡಗಳೆಲ್ಲ ಮತ್ತೊಬ್ಬಳಿಗೆ ಗೊತ್ತಾಗಿ ವೈಶಮ್ಯ ನೆಲೆಗೊಳಿಸುತ್ತಿದ್ದಾಳೆ... ಇದು ತಪ್ಪು ಕಣೇ! ಹೋಗು ನನ್ನ ಮನಸಿಂದ ಎಂದರೂ ಕೇಳದೆ ಮತ್ತೆ ಮತ್ತೆ ನೆನಪಾಗುತ್ತಲೇ ನನ್ನಲ್ಲಿ ನೆಲೆನಿಂತಿದ್ದಾಳೆ. 
“ವಿಪರೀತ ಬಗೆಯವಳು
ಅಪರಿಮಿತದ ಆಸೆಯವಳು
ನಗುವೇ ಸೋಜಿಗವೆನಿಸುವವಳು
ತುಸು ದೂರವೂ ಬಿಟ್ಟು ಕೊಡದವಳು”
ಅನೇಕ ಕನಸುಗಳ ರಾಶಿಯಲ್ಲಿ ಬುಸ್ಸೆಂದು ಯಾವಾಗಲೂ ಎದ್ದು ಬಿದ್ದು ಬರುವ ಆ ನನ್ನ ಬೆಡಗಿ... ವರ್ಷಗಳ ಹಿಂದೆ ನಮ್ಮೆದುರು ಮನೆಯ ಮಹಡಿಯಲ್ಲಿ ನಗು ಬೀರುತ್ತಿದ್ದ ಸುಂದರಿ. ನೀಳ ಜಡೆಯ ವರ ಪಡೆದಿದ್ದಾಕೆ, ತಲೆ ಸ್ನಾನ ಮಾಡಿ ಮಹಡಿ ಮೇಲೆ ಪ್ರಕಾಶಿಸುವ ಸೂರ್ಯ ಕಿರಣಕೆ ತಲೆಯೊಡ್ಡಿ ಕೂದಲನ್ನು ಒಣಗಿಸುತ್ತಿದ್ದ ಮೊದಲ ದಿನವೇ ನನಗಿಷ್ಟವಾದªಳು.  

ಹರೆಯದ ಹರಿತವಿದು ತುಡಿತದ ಅಮಲಿದು...
ಹುಚ್ಚು ಹೆಚ್ಚೆ ಕಾಡುವುದು, ಪ್ರೀತಿ ಹಚ್ಚಿ ಸತಾಯಿಸುವುದು...
ಹದಿ ಹರೆಯದ ನಮ್ಮಂತವರಲ್ಲಿ ಕಾಣದ ಪ್ರೀತಿಯನ್ನು ಅರಸುವ ಮಜಭೂತೇನು  ಕಡಿಮೆ ಇಲ್ಲ. ಅದರಂತೆ ನಾನು ಒಬ್ಬ. ಹುಡುಗತನ ಹಿಂಬಾಗಿಲಿನಲ್ಲಿ ಮೆಲ್ಲಗೆ ಹೊರಡುತ್ತಿರುವುದು ಒಂದೆಡೆಯಾದರೆ, ಜವಾಬ್ಧಾರಿ ಅನ್ನೋದು ಮುಂಬಾಗಿಲಿನಲ್ಲಿ ಕಾಲಿಂಗ್ ಬೆಲ್ ಒತ್ತುತ್ತಾ ಇರುತ್ತದೆ. ಈ ಹುಡುಗತನ ಪ್ರಾರಂಭದಲ್ಲಿ ಅನೇಕ ಸತ್ಕಾರಗಳ ಸಂತೋಷ ಕೊಟ್ಟರೂ, ಆಮೇಲೆ ನೋವು ನೋವೆ... ಆದರೆ ಒಂದತೂ ನಿಜ!!, ಜೀವನದಲ್ಲಿ ಈ ಪ್ರೀತಿ-ಪ್ರೇಮದ ಮಳೆಗೆ ಸ್ವಲ್ಫ ಆದ್ರೂ ಮೈ ನೆನಸಿಕೊಳ್ಳದವರು ಯಾರೂ ಇಲ್ಲ. ನಮ್ಮನ್ನ ಪ್ರಡ್ಯೂಸ್ ಮಾಡಿದ ದೇವಾನು ದೇವತೆಗಳೇ ಪ್ರೀತಿಯ ಮಳೆಗೆ ನೆನೆದು ಚಳಿ ಜ್ವರ ಆಗಿ ಕಂಬಳಿ ನೆನೆದುಕೊಂಡವರೆ...
ಅವಳನ್ನು ನಾನೆಂದು ಮಾತಾಡಿಸಿಲ್ಲ, ರೌಡಿಯ ಥರ ರೊಡಿಗಡ್ಡಗಟ್ಟಿ ಚುಡಾಯಿಸಿಲ್ಲ, ನೀನೇ ನನ್ನ ಪ್ರೀತಿ, ನೀನೇ ನನ್ನ ಸಿಂಡ್ರೇಲಾ, ನೀನೇ ನನ್ನ ಮಜನೂ ಅಂತ ಪೋಸಿ ಹೊಡೆದಿಲ್ಲ, ಆದರೆ ಅವಳಿಗರಿವಿಲ್ಲದಂತೆ ಕದ್ದು ಮುಚ್ಚಿ ನೋಡಿದ್ದು ಮಾತ್ರಾ ಹೆಚ್ಚಾಗಿಯೇ ಇದೆ. ಅದೇಕೋ ಗೊತ್ತಿಲ್ಲ ಪದೆ ಪದೇ ನೊಡುತ್ತಿದ್ದಂತೆ ಜಾಸ್ತ್ತಿ ಜಾಸ್ತೀಯೇ ಇಷ್ಟವಾಗುತ್ತಿದ್ದಳು. ನಾನವಳ ಕಣ್ಣಿಗೆ ಅಪ್ಪಿ ತಪ್ಪಿ ಎದುರಾಗುತ್ತಿದ್ದರೆ, ಪರವಾಸಿಯೆಂಬಂತೆ ದೂರ ಸರಿಯುತ್ತಿದ್ದದ್ದು, ಇನ್ನೆಲ್ಲೋ ನೋಡುತ್ತಾ ಕೆನ್ನೆಗಿಳಿದಿರುತ್ತಿದ್ದ ಕೂದಲನ್ನು ಮೇಲೆತ್ತಿ ಕಿವಿಯ ಮೇಲ್ಭಾಗಕ್ಕೆ ಪೋಣಿಸುತ್ತಾ, ನಾಚುತ್ತಾ ನೆಲ ನೋಡಿಕೊಂಡು ನಡೆಯುತ್ತಿದ್ದದ್ದು, ಓಪನ್ ಹೇರ್ ಬಿಟ್ಕೊಂಡು ಆಗಾಗ ಸ್ಕೂಟಿಯಲ್ಲಿ ಹೋಗುತ್ತಿದ್ದದ್ದು, ಪಕ್ಕಾ ಟ್ರೆಡಿಷನಲ್ ಎಲಿಮೆಂಟ್ ಎಂಬಂತೆ ಬಟ್ಟೆಗಳನ್ನು ಧರಿಸುತ್ತಿದ್ದದ್ದು, ಇತ್ಯಾದಿಗಳೆಲ್ಲ ನನ್ನನ್ನು ಅವಳತ್ತ ತೀರಾ ಹತ್ತಿರ ಸೆಳೆಯಲು ಖಾತ್ರಿಯಾದ ವಿಚಾರವೆಂದರೆ ತಪ್ಪಿಲ್ಲ. ಮೈನೆರೆದು ನಿಂತಿದ್ದ ಅವಳ ಪ್ರಾಯದ ಬಿಸುಪಿಗೆ ನನ್ನ ಹರೆಯದ ಆಸೆಗಳು ಗರಿಗೆದರಿದ್ದವು. ನಾನೊಬ್ಬನೇ ಅಲ್ಲ ಅನೇಕ ಹುಡುಗರೂ ಅವಳಿಗೆ ಗಾಳ ಹಾಕಿದ್ದರು, ಸಿನೀಮೀಯ ಚರ್ಯೆಯಲ್ಲಿ ರಾಜಕುಮಾರರಾಗಲೂ ಹೊರಟಿದ್ದರು. ನನಗದೇನೂ ಬೇಕಿರಲಿಲ್ಲ!. ಅವಳ್ಯಾರು!?, ಎಲ್ಲಿಂದ ಬಂದವಳು!? ಹೀಗೆ ಯಾವುದನ್ನು ಹುಡುಕುವ ಪ್ರಯತ್ನ ನನ್ನ ಸತಾಯಿಸಲಿಲ್ಲ... ಕೇವಲ ಅವಳನ್ನು, ಅವಳ ನಡೆ ನುಡಿಯನ್ನು ಮಾತ್ರಾ ಗರಬಡಿದವನಂತೆ ನೋಡುತ್ತಾ ನಿಲ್ಲುವುದಷ್ಟೇ ನನ್ನ ಕಾಯಕವಾಗಿತ್ತು.

ಮುಂಜಾನೆ ಕನಸಲ್ಲಿ ಮನಸಿಗೆ ಗಾಯ
ಮನಸೆಂಬ ಮಸಣದಲಿ ಕನಸುಗಳ ಮಾರಣಹೋಮ...
ಕೋಣೆಯ ಮಂಚದ ಮೇಲೆ ಅದೆಷ್ಟೋ ದಿನ ಅವಳನ್ನೇ ನೆನದು ಮಲಗುತ್ತಿದ್ದ ನನಗೆ ಅವಳು ಹತ್ತಿರ ಬಂದು ಕುಂತಂತೆ, ನಿಂತಂತೆ, ಬಿಗಿದಪ್ಪಿಕೊಂಡಂತೆ, ಕತ್ತನ್ನೆತ್ತಿ ಮುತ್ತಿಕ್ಕಿದಂತೆ, ಕಾಣದ ಮೊಗಸಾಲೆಯಲ್ಲಿ ಪ್ರೀತಿ ತುಂಬಿ ತುಂಬಿ ಕೊಟ್ಟಂತೆ. ಆಕೃತಿ ಅನುಭವದಲ್ಲಿ ಒಮ್ಮೊಮ್ಮೆ ಮಧು ಮಂಚ ಏರಿದಂತೆ. ಯಾವುದೋ ಐಶಾರಾಮಿ ಬಂಗಲೆಯಲ್ಲಿ ನಾನೇ ರಾಜ ಅವಳೇ ರಾಣಿಯಾದಂತೆ, ನಮಗೆರಡು ಮಕ್ಕಳಾದಂತೆಲ್ಲಾ ಕನಸು ಬೀಳುತ್ತಿತ್ತು. ಕನಸು ಮಾತ್ರಾ ನನ್ನ ಅವಳನ್ನು ಒಂದು ಮಾಡಿ ಬಂಧಿಸಿ ಫ್ಯಾಮಿಲಿ ನಡೆಸುವ ರೆಂಜ್‍ಗೆ ಲಗ್ಗೆ ಇಟ್ಟಿತ್ತು. ಅವಳನ್ನು ಮುದ್ದಿಸಲು ಮನಸಾಗುತ್ತಿತ್ತು, ಖುಷಿಯಾಗುತ್ತಿತ್ತು. ಕಂಡಿದ್ದೆಲ್ಲವೂ ರಾತ್ರಿಯ ಕನಸು ಎಂದರಿತ ಕ್ಷಣ ನೋವಾಗುತ್ತಿತ್ತು. ಬಿಟ್ಟರೇ ಮದುವೇನೇ ಮಾಡಿಕೊಳ್ಳುತ್ತೇನೆ! ಎನ್ನುವ ಜೋಷ್ ಕೂಡ ಇತ್ತು ಆದರೆ ಮನದಭಯ, ಮನೆಯವರ ಭಯ, ಸಮಾಜದ ಭಯ, ಅರಿವಿನ ಭಯ, ಪ್ರೀತಿ ಭಯ ಇವೆಲ್ಲವೂ ನನ್ನನ್ನ ಕಡೆಯವರೆಗೂ ತಡೆದು ನಿಲ್ಲಿಸಿ ಮಾತೂ ಆಡದಂತೆ, ಮಾತೇ ಬಾರದಂತೆ ಕಟ್ಟಿಹಾಕಿತ್ತು. ಅದೆಷ್ಟೋ ಹೇಳಬೇಕೆಂದಿದ್ದ ಮಾತು ನನ್ನೊಳಗೆ ಮೀಟಿ ಒದ್ದಾಡಿ ಕನಸಿನ ಮಾರಣ ಹೋಮ ಮಾಡಿಕೊಂಡಿತ್ತು. ಇಂದು ಅವಳನ್ನು ಪದೆ ಪದೇ ನೆನದುಕೊಳ್ಳಲು ಅದೂ ಕೂಡ ಒಂದು ಕಾರಣವಾಗಿತ್ತು.




ಮರೆವೆನೆಂದರೂ ನೆನಪಾಗುವೆಯಲ್ಲೆ..
ಬೇಡವೆಂದರೂ ಕಾಡುವಿಯಲ್ಲೆ...
ಈಗೆಲ್ಲಿರುವೆ ಹೇಳೆ ನಲ್ಲೆ...
ಅಲ್ಲೇ ಬಂದು ಹುಡುಕುವೆ ನಿಲ್ಲೆ...
ಆ ದಿನ ಎಲ್ಲಿಗೋ ಬ್ಯಾಗ್ ಕಟ್ಟಿಕೊಂಡು ಹೊರನಡೆದ ನೀನು ಇಂದಿಗೂ ಆ ಮನೆಯ ಬಾಡಿಗೆಗೆ ತಿರುಗಿ ಬಂದಿಲ್ಲ. ನೀ ಹೋದ ಮೇಲೆ ಅದೆಷ್ಟೋ ಜನ ಹುಡುಗಿಯರು, ಹುಡುಗರು ಬಂದು ಬಂದು ಹೋಗಿದ್ದನ್ನು ನೋಡಿರುವೇ ಆದರೆ ಅಲ್ಲಿಗೆ ನಿನ್ನ ಸುಳಿವೇ ಇಲ್ಲ. ನಿನಗದೇನಾಯಿತೋ ತಿಳಿದಿಲ್ಲ. ಆದರೆ ಕೊನೆಯದಾಗಿ ಒಂದೆರಡು ಮಾತು ನಿನಗಾಗಿ ಹೇಳುವೆ ಕೇಳು...
ನೀ ನನಗೊಂದು ತೆರೆ ನೀರ ಭಾವನೆ. ನಿನ್ನ ನೆನಪು ನನಗಿನ್ನು ಗಾಳಿಯಲ್ಲಿ ಒಣಗಿದ ಹೂವಿನ ಗಂಧದಂತೆ. ನಾಳೆಯ ದಿನಗಳ ಪ್ರತಿಷ್ಠಿತ ಭರವ¸ಯಂತೆ. ಬಿಂದಿಗೆಗೆ ಬಿದ್ದ ಬೆಳದಿಂಗಳಂತೆ. ಅವೆಲ್ಲವನ್ನೂ ನಾನಿರುವವರೆಗೂ ಕಾಪಾಡಿಕೊಂಡು ಅದರಲ್ಲೇ ನಿನ್ನ ನೆನೆಸಿಕೊಂಡು ದಿನ ಕಳೆಯುವೆ. ನೀನ್ಯಾರೋ ಎಲ್ಲಿದ್ದೀಯೋ ಗೊತ್ತಿಲ್ಲ!! ಆದರೆ, ನೀ ಅಡಿಗಡಿಗೆ ನೆನಪಾಗುತ್ತೀಯಾ!! ಎಡಬಿಡದೇ ಹಿಂಬಾಲಿಸುತ್ತೀಯಾ!! ನನ್ನ ಹಾದಿಯಲ್ಲಿ ಯಾರದೋ ರೂಪದಲ್ಲಿ ಪ್ರತ್ಯಕ್ಷವಾಗುತ್ತೀಯಾ!! ಈಗಲೂ ನೋಡು ಕಾಣದ ರೂಪದಲ್ಲಿ ನನ್ನನ್ನು ಬರೆಸುತ್ತಿದ್ದೀಯಾ!! ಎಲ್ಲೇ ಇರು ಚೆನ್ನಾಗಿರು... ಈ ಮೌನದೊಳಗೂ ಒಂದು ಪ್ರೀತಿ ಭಿತ್ತಿದ ನಿನಗೆ ನಾನಾಗಲು ಭಯಸುವೆ ಎಂದಿಗೂ ಪುಟ್ಟ ಮಗು...
ಅಯ್ಯೋ ರಾಮ ರಾಮ ಅವಳು ಮತ್ತೆ ನೆನಪಾದಳು...

ಕವಿ ಕನವರಿಕೆ: ಪ್ರೇಮಾಯಣ - #4


     ಅವನು ಒಂಥರಾ!!! ಅವಳು ಒಂಥರಾ!!! 
ಅವಳು ಹೇಳುವುದನ್ನು ಬಿಟ್ಟಿಲ್ಲ!, ಅವಳು ಹೇಳಿದ್ದನ್ನು ಅವನು ಕೇಳುವುದಿಲ್ಲ!.. ಅವನಿಗೆ ಅವಳೆಂದರೆ ಇಷ್ಟ ಆದರೆ ಅವಳ ನಡೆ ನುಡಿ, ಸುತ್ತಮುತ್ತಲ ಪರಿಕರಗಳೆಲ್ಲ ಒಮ್ಮೊಮ್ಮೆ ಇಷ್ಟವಾದರೂ ಸಹಿಸಿಕೊಳ್ಳುತ್ತಾನೆ, ಕೋಪಿಸಿಕೊಳ್ಳುತ್ತಾನೆ, ಒಂದರ್ಧ ಗಂಟೆ ಬಿಟ್ಟು ಮುದ್ದಿಸುತ್ತಾನೆ. ಅವಳಿಗೆ ಅವನ ಎಲ್ಲವೂ ಇಷ್ಟ. ಪ್ರೀತಿಯಲ್ಲಿ ಅವಳು ಹೆಚ್ಚೆನಿಸಿದರೂ ಅವನೇ ಒಂದು ಬೊಗಸೆ ಜಾಸ್ತಿಯೇ ತೂಗುತ್ತಾನೆ... ಗಜಗಯಿಸಿ ಕಚ್ಚಾಡುತ್ತಾರೆ, ಅಷ್ಟಕ್ಕಷ್ಟೇ ಪ್ರೀತಿಸುತ್ತಾರೆ...

ಇಬ್ಬರಲ್ಲೂ ಪ್ರೀತಿ ಪರಿಣಾಮ ಬೀರಿದೆ, ಕಾಣದ ಸುಖ ನೀಡಿದೆ. ಒಂದಿನವೂ ಒಬ್ಬgನ್ನೊಬ್ಬರು ಬಿಟ್ಟಿದ್ದರೆ ಆ ದಿನ ಇಬ್ಬರೂ ಏನೋ ಕಳೆದಂತೆ, ಕಳೆದುಕೊಂಡಂತೆ!!. ವಾರಕೊಮ್ಮೆ ಸಂಧಿಸದಿದ್ದರೆ ಎಲ್ಲವೂ ಮೋಸದಂತೆ, ಇಲ್ಲಿ ಪ್ರೀತಿ ಕುರುಡೋ, ಅವರಿಬ್ಬರ ನಂಬಿಕೆ ಕುರುಡೋ ಇಬ್ಬರಿಗೂ ಗೊತ್ತಿಲ್ಲ!.

ಬೆಳಗೆದ್ದು ಗುಡ್ ಮಾರ್ನಿಂಗ್ ಹೇಳುವುದರಿಂದ ಹಿಡಿದು ಸಂಜೆ ಮಲಗುವವರೆಗೂ ನಡೆದಿದ್ದೆಲ್ಲವೂ ವಿನಿಮಯವಾಗಲೇಬೇಕು. ಸುತ್ತಮುತ್ತ ಸುನಾಮಿಯೇ ಬರಲಿ ಅವರಿಗ್ಯಾವ ಪರಿಯೂ ಇಲ್ಲ. ಕಳ್ಳ-ಕಾಕರು, ಮದ-ಮತ್ಸ್ಯರು, ಉರಿ-ಗರಿಗಳಲ್ಲಿ ಜಗ ಬೇಯುತ್ತಿದ್ದರೂ ಇವರಿಗದ್ಯಾವುದರ ಪರಿವೇ ಕಾಣದು. ಇಬ್ಬರು ಜೊತೆಯಾದರೆ ಜಗವನ್ನೇ ಮರೆತುಬಿಡುತ್ತಾರೆ. ಪ್ರತಿದಿನವೂ ಕಂಪಿಸುವ ಪ್ರೀತಿಯ ಇಂಪಿಗೆ ಹಾತೊರೆಯುತ್ತಾರೆ. ಅವನ ಬಿಸಿಯುಸಿರಿಗೆ ಆಕೆ ಆವಿಯಾಗುತ್ತಾಳೆ. ಕಚ್ಚಾಡಿಕೊಂಡರು ಕೋಪಿಸಿಕೊಂಡರೂ ಅವನೆದೆಯ ತೆಕ್ಕೆಯಲ್ಲಿ ಅವಳು ಆರಾಮಾಗಿಯೇ ಅಪ್ಪಿ ಅಮಲ ಪಾಶದಲ್ಲಿ ನಿದ್ದೆಗೆ ಜಾರುತ್ತಾಳೆ. ಪ್ರೇಮಾಯಣದಲ್ಲಿ ಅವರಿಬ್ಬರ ಹೃದಯವೂ ಒಂದಾಗಿ ಮತ್ತೆ ಮತ್ತೆ ಹುಟ್ಟಿ ಮತ್ತೆ ಮತ್ತೆ ಪ್ರೀತಿಯಲ್ಲಿ ಬದುಕಬಹುದೆಂದು ಎಲ್ಲರಿಗೂ ತೋರಿಸುತ್ತಿದ್ದಾರೆ.

ಸಿರಿ ಬುಲೆಟ್ - ಸೋಜಿಗದ ಸೋಷಿಯಲ್ ಮೀಡಿಯಾ...


ಬಳಸುವಾಗ ನಲಿ-ಕಲಿ, ಯಾಮಾರಿದರೆ ನೀನೇ ಬಲಿ...
ಹೊಟ್ಟೆಗೆ ಹಿಟ್ಟು ಬೇಡ, ಮೊಬೈಲ್‍ಗೆ ನೆಟ್ಟು ಮಾತ್ರಾ ಬೇಕು...
ಚರ್ಚೆಯ ವಿಮರ್ಶೆ, ಕಚ್ಚಾಡುವ ಪರಾಮರ್ಶೆ...
ಇನ್‍ಫಾರ್ಮೆಷನ್ ಸಹವಾಸ, ಅಡಿಕ್ಟ್ ಆಗಿಬಿಟ್ಟಿದ್ದೇವೆ; ಹೆಚ್ಚಿನವರಿಗೆ ಜಾಲತಾಣವೇ ವಾಸ.

                ಈಗೇನಿದ್ದರೂ ಇಂಟರ್‍ನೆಟ್ ಆಟ. ಮೊದಲೆಲ್ಲ ವಿರಳ ಅತೀ ವಿರಳ ಎನ್ನುವಂತಿದ್ದ ಅಂತರ್ಜಾಲ ಇಂದು ಅದೇ ಒಂದು ದೊಡ್ಡ ಜಾಲವೆಂಬಂತೆ ಹಬ್ಬಿಕೊಂಡಿದೆ. ಇದರಿಂದ ಎಲ್ಲವೂ ಬದಲಾವಣೆಗೊಂಡಿದೆ. ನಿಂತಲ್ಲೇ ಏನನ್ನು ಬೇಕಾದರೂ ನೋಡಬಹುದಾದ, ಏನನ್ನು ಬೇಕಾದರೂ ಕೇಳಬಹುದಾದ, ಇನ್‍ಫಾರ್ಮೆಷನ್‍ನನ್ನು ಪಾಸ್ ಮಾಡುವ ಸೋಜಿಗ ಸೃಷ್ಟಿಯಾಗಿದೆ.

  ಒಂದು ಹಂತದವರೆಗೆ ಸ್ಥಿರವಾಗಿದ್ದ, ವೆಬ್ ಪುಟಗಳನ್ನು, ಸಂವಹನಾತ್ಮಕವಾಗಿ ಬದಲಾಗುತ್ತಿದ್ದ ವಿದ್ಯಮಾನವನ್ನು ಪ್ರತಿಯೊಬ್ಬರು ಕಣ್ಣಾರೆ ಕಂಡವರೆ!! ಮತ್ತು ಅದರಿಂದ ಪ್ರಯೋಜನ ಪಡೆಯುತ್ತಿರುವವರೇ!!.ಆಗಿದ್ದಾರೆ.
 ಎಲ್ಲೋ ಒಂದು ಕಡೆ ಕುಳಿತು ಊಡಿಸಿದ ಮಾಹಿತಿಗಳನ್ನು ಜಾಲಿಗರು ಓದುವ ಸ್ಥಿತಿ ಬದಲಾಯಿತು. ಓದುತ್ತಲೇ ಅದಕ್ಕೆ ಪ್ರತಿಕ್ರಿಯಿಸವ ಅವಕಾಶ ದೊರೆಯಿತು. ಮಾಹಿತಿಯ ಬಳಕೆದಾರರೇ ಮಾಹಿತಿಯನ್ನು ಸೃಷ್ಟಿಸುವ ಅವಕಾಶವನ್ನು ಜಾಲತಾಣಗಳು ಬಳಸಿಕೊಳ್ಳಲು ಆರಂಭಿಸಿದ ನಂತರ ಒಂದು ಮೌನ ಕ್ರಾಂತಿಯೂ ನಡೆಯಿತು. ಅಲ್ಲಿಯ ತನಕ ಜಾಲ ತಾಣಗಳನ್ನು ನೋಡುವ ಅವಕಾಶ ಕಲ್ಪಿಸಿದ್ದ ಬ್ರೌಸರ್ ಮಾಹಿತಿಯನ್ನು ಸೃಷ್ಟಿಸುವ ಉಪಕರಣವಾಗಿಯೂ ಬಳಕೆಯಾಯಿತು.
ಇಂದು ಭಾರತದ ಮಟ್ಟಿಗೆ ಇದೊಂದು ದೊಡ್ಡ ಬೆಳವಣಿಗೆ. ಇಂಟರ್‍ನೆಟ್ ಬಳಕೆ ಹೆಚ್ಚಿರುವ ಪಾಶ್ಚಾತ್ಯ ದೇಶಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳ ಸೇವಾ ಲೋಪವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟಿಸುವ ಮಾದರಿಗಳಿವೆ. ಹಾಗೆಯೇ ಮರಗಳನ್ನು ಕಡಿಯುವುದು ಪ್ರಾಣಿಗಳನ್ನು ಉಳಿಸುವುದು ಮುಂತಾದ ಅನೇಕ ಹೋರಾಟಗಳಿಗೂ ಈ ಮಾಧ್ಯಮ ಬಳಕೆಯಾಗುತ್ತಿದೆ.  ಜಗತ್ತಿನ ಯಾವುದೇ ಮೂಲೆಗಳಲ್ಲಿ ಕುಳಿತಿರುವರನ್ನು ಒಂದು ಉದ್ದೇಶಕ್ಕಾಗಿ  ಒಂದುಗೂಡಿಸುವ ಕೆಲಸವನ್ನು ಈ ಸಾಮಾಜಿಕ ಜಾಲತಾಣಗಳು ಮಾಡುತ್ತಿವೆ. 
ಸಾಂಪ್ರದಾಯಿಕ ಸುದ್ಧಿ ಮೂಲಗಳ ಬುಡವನ್ನು ಅಲುಗಾಡಿಸುವಂತಹ ಸಿದ್ಧಿಯ ವಿಶ್ವಾಸಾರ್ಹತೆಯ ವಿಮರ್ಶೆ ಟ್ವಿಟರ್, ಫೇಸ್ ಬುಕ್, ಯೂಟ್ಯೂಬ್, ವ್ಯಾಟ್ಸಾಪ್, ಹೀಗೆ ಹತ್ತು ಹಲವು ಮುಖಗಳಲ್ಲಿ ಅಣುಬಾಂಬ್‍ನ ಸ್ಫೋಟಕ ಕಾಣುವ ವಿದಳನಾ ಕ್ರಿಯೆಯಂತೆ ಮುಂದುವರಿಯುತ್ತ್ತಿದೆ. ಒಬ್ಬ ವ್ಯಕ್ತಿ ತನ್ನ ಫೇಸ್‍ಬುಕ್, ವ್ಯಾಟ್ಸಾಪ್, ಟ್ವೀಟರ್ ನಲ್ಲಿ ಬರೆದು ಶೇರ್ ಮಾಡಿದ ವಿಷಯ ಆತನ ಹಿಂಬಾಲಕರ ಕಂಪ್ಯೂಟರ್, ಮೊಬೈಲ್, ನೆಟ್‍ಬುಕ್, ಲ್ಯಾಪ್ಟಾಪ್ ಇತ್ಯಾದಿಗಳ ಪರದೆಯ ಮೇಲೆ ಬರುತ್ತಿದ್ದಂತೆಯೇ ಆ ವಿಷಯದ ಪರ ಅಥವಾ ವಿರೋಧ ಮಾತುಕತೆಗಳು ಸಂವಾದದ ರೂಪದಲ್ಲಿ ಇಂಟರ್‍ನೆಟ್ ಒಡಲು ತುಂಬುತ್ತಾ ಹೋಗುತ್ತದೆ.
        ಅರಳಿ ಕಟ್ಟೆಯಲ್ಲಿ ಕೂತು ಹರಟುವ ಹಾಗೂ ರಾಜ್ಯ ಮತ್ತು ದೇಶದ ಸುದ್ಧಿಗಳ ಬಗ್ಗೆ ವಿಚಾರ ವಿನಿಮಯ  ಮಾಡಿಕೊಂಡು ಅದಕ್ಕೆ ನಮ್ಮದೇನಾದರೂ ಕಾಣಿಕೆ ಕೊಡಲಿಕ್ಕೆ ಸಾಧ್ಯವೇ ಎಂದು ಯೋಚಿಸಿ ಪತ್ರವ್ಯವಹಾರ ಮುಖೇನ ವ್ಯವಹರಿಸಿ ವರ್ಷಾನುಗಟ್ಟಲೆ ಕಾದು ಕೂರುವ ದಿನಗಳಲ್ಲಿ ಈಗ ನಾವಿಲ್ಲ. ಹಳ್ಳಿಗನೂ ಇಂದು ವಿಶ್ವದ ಇನ್ಯಾವುದೋ ಮೂಲೆಯ ವಿಜ್ಞಾನಿಯ ನೆರವನ್ನು ಪಡೆದು ತನ್ನ ಉತ್ಫತಿಯನ್ನು ಹೆಚ್ಚಿಸಿಕೊಳ್ಳುವ ಕಾಲವಿದು. ಮೊದಲೆಲ್ಲ ಸ್ಥಿರ ದೂರವಾಣಿಯನ್ನು ಬಳಸುತ್ತಿದ್ದವರು ಇಂದು ಕೈಗೆಟುಕುವ ಬೆಲೆಯಲ್ಲಿ ಮೊಬೈಲ್! ಅಲ್ಲಲ್ಲ.., ಆ್ಯಂಡ್ರಾಯ್ಡ್ ಮೊಬೈಲ್‍ನ್ನೇ ಖರೀದಿಸಿಕೊಂಡು ಇಂಟರ್ ನೆಟ್ ಮೂಲಕ ಬೇಕಾದÀ ಗೆಳೆಯರ ಸಂಘವನ್ನು ಸೇರಬಹುದು. ಯಾರು ಯಾರನ್ನು ಬೇಕಾದರೂ ಸಂಧಿಸಬಹುದು.
ಇಲ್ಲಿಯವರೆಗೆ ಎಲ್ಲವೂ ಚೆನ್ನಾಗೆ ಇತ್ತು. ಯಾವಾಗ ಚಿಲ್ಲರೆ ಖಾಸಿಗೂ ಇಂಟರ್‍ನೆಟ್ ದೊರೆಯಲು ಪ್ರಾರಂಭವಾಯ್ತೋ ಅಲ್ಲಿಂದಲೇ, ಏನೋ ಒಂದು ಯಡವಟ್ಟು ಪ್ರದೇಶಕ್ಕೆ ನಾವು ಕಾಲಿಟ್ಟುಬಿಟ್ಟೆವು ಏನಿಸಿದಂತಾಗಿದೆ. ಮುಖ್ಯವಾಗಿ ಇಂದಿನ ಯುವ ಜನತೆ ಈ ಸೋಷಿಯಲ್ ಮೀಡಿಯಾಗಳಿಂದ ಹಾದಿ ತಪ್ಪುತ್ತಿದ್ದಾರೆ. ಕೋಮುವಾದದ ದಳ್ಳುರಿಗೆ ಈಡಾಗುತ್ತಿದ್ದಾರೆ. ತಮ್ಮ ನಿಲುವನ್ನು ವಿರೋಧಿಸುವವರ ಧ್ವೇಷ ಕಟ್ಟಿಕೊಳ್ಳುತ್ತಿದ್ದಾರೆ. 
         ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದು ವರ್ಷದಲ್ಲಿ ನಗರ ಪ್ರದೇಶಗಳಲ್ಲಿ ಸಾಮಾಜಿಕ ಬಳಕೆದಾರರ ಸಂಖ್ಯೆ ಶೇ. 35ರಷ್ಟು ಹೆಚ್ಚಾಗಿದೆ ಎಂದು ಇಂಟರ್ ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಷನ್ ಇಂಡಿಯಾ ಮತ್ತು ಐಎಂಬಿಆರ್‍ಬಿ ಇಂಟರ್ ನ್ಯಾಷನಲ್ ತನ್ನ ವರದಿಯಲ್ಲಿ ಹೇಳಿದೆ.
ಇಂದು ಒಂದಲ್ಲ ಒಂದು ಸಾಮಾಜಿಕ ಜಾಲತಾಣ ನಮ್ಮ ಜೀವನದ ಅವಿಭಾಜ್ಯ ಅಂಗದಂತೆಯೇ ಆಗಿಬಿಟ್ಟಿದೆ. ನಾವು ಕೆಲಸ ಮಾಡುವ ಸ್ಥಳದಲ್ಲೂ ಸೋಷಿಯಲ್ ಮೀಡಿಯಾ ಬಳಸದೇ ಸುಮ್ಮನಿರಲು ಆಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಅಡಿಕ್ಟ್ ಆಗಿಬಿಟ್ಟಿದ್ದೇವೆ. ಬ್ಲೂ ಕೋಟ್ ಸಂಸ್ಥೆಯ ಸಮೀಕ್ಷೆ ಪ್ರಕಾರ, ವಿಶ್ವದಾದ್ಯಂತ ಪ್ರತೀ 5 ಉದ್ಯೋಗಿಗಳಲ್ಲಿ  ಇಬ್ಬರು ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಾರಂತೆ. ಅಂದರೆ ಕೆಲಸದ ಸ್ಥಳಗಳಲ್ಲಿ ಶೇ.40 ರಷ್ಟು ಮಂದಿ ಸೋಷಿಯಲ್ ಮೀಡಿಯಾ ಬಳಸುತ್ತಾರೆ ಎಂದಾಯ್ತು.
ನಿಜಕ್ಕೂ ಇದು ಅಘಾತಕಾರಿ!. ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ನಮಗೆ ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗವಾಗುತ್ತಿದೆಯೋ ಅಷ್ಟೇ ಕೆಡುಕೂ ಇದೆ. ಒಂದು ಸಣ್ಣ ಮಾಹಿತಿಯನ್ನೇ ಎತ್ತಿಕೊಂಡು ಕ್ಷಣಮಾತ್ರದಲ್ಲಿ ಜಗತ್ತಿನ ಮೂಲೆ ಮೂಲೆ ತಲುಪುವಿಕೆಯನ್ನು ಕಾಣಬಹುದಾದ ಉಪಯೋಗವಿರುವ ಇಂಟರ್‍ನೆಟ್ ಅದೆಷ್ಟೋ ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿದೆ. ಹಲವು ಅತೀರೇಖತೆಗಳು, ಜನಾಂಗೀಯ ಘರ್ಷಣೆಗಳು, ಮಾನ ಹರಣಗಳು, ಅಶ್ಲೀಲತೆಯ ಗುಂಗು ಇತ್ಯಾದಿಗಳಿಗೆ ಎಡೆಯಿಕ್ಕುತ್ತಿದೆ. ಇಂದು ಅನೇಕರು ಸೋಷಿಯಲ್ ಮೀಡಿಯಾಗಳನ್ನೇ ಬ್ಯುಸಿನೆಸ್ ಆಗಿ ಕನ್‍ವರ್ಟ್ ಮಾಡಿಕೊಂಡು ಹಲವರಿಗೆ ಹಣದ ಆಮಿಷವಿತ್ತು ಅದೆಷ್ಟೋ ಭ್ರಷ್ಟತನಕ್ಕೆ, ಅನ್ಯಾಯಕ್ಕೆ, ಅತ್ಯಾಚಾರಕ್ಕೆ ನಾಂದಿ ಹಾಡಿಕೊಂಡಿದ್ದಾರೆ.
ಸಾಮಾಜಿಕ ಸೈಟ್‍ನಿಂದ ಯಾರು ಯಾರನ್ನು ಬೇಕಾದರೂ ಫ್ರೇಂಡ್ ಮಾಡಿಕೊಳ್ಳಬಹುದು, ಫ್ರೇಂಡ್ ಶಿಪ್ ಮುಂದೆ ಎಂತಹ ಕೆಟ್ಟ ಕೆಲಸಗಳನ್ನು ಮಾಡಿಸಬಹುದು. 
ಉದಾಹರಣೆಗೆ;
1. ಅವಳಿಗೆ ಅವನು ಯಾರೆಂದೇ ಗೊತ್ತಿರುವುದಿಲ್ಲ. ಸಾಮಾಜಿಕ ತಾಣದ ಮೆಸೇಜ್‍ನಿಂದ ಪರಸ್ಫರ ಬಾಂಧವ್ಯ ಬೆಳೆಸಿ, ಒಂದಿಷ್ಟು ದಿನ ಕಳೆದ ಮೇಲೆ ಈಕೆ ಅವನ ಹಗಲಾಸೆಗೆ ಮಾರು ಹೋಗಿ, ಯಾರೂ ಕಾಣದ ಗುಡ್ಡದ ಮೇಲೆ ಅತ್ಯಾಚಾರಗೊಂಡು ಅನಾಥೆಯಾಗಿ ಸತ್ತು ಬಿದ್ದಿದ್ದಾಳೆ.
2. ನಿಮಗೆ ನಿಮ್ಮಿಷ್ಟ ಬೆಲೆಯ ಸೈಟ್ ಮಾಡಿಸಿಕೊಡುತ್ತೇವೆಂದು ಪ್ರಚಾರಗಿಟ್ಟಿಸಿಕೊಂಡು, ಹಣ ಹೊಡೆದು ಪರಾರಿಯಾಗಿ ನಾಮ ಏಳೆದುಕೊಂಡವರೂ ಇದ್ದಾರೆ. 
  ಇಷ್ಟೇ ಯಾಕೆ ಮೊನ್ನೆ ಮೊನ್ನೆ ಯಾವುದೋ ಪತ್ರಿಕೆಯಲ್ಲಿ ಓದಿದ ನೆನಪು, ‘ಇದೀಗ ದೇವರ ದರ್ಶನ, ಪ್ರಸಾದವೆಲ್ಲವೂ ಇಂಟರ್‍ನೆಟ್‍ನಲ್ಲಿ ತೋರಿಸುತ್ತಿದ್ದಾರಂತೆ. ಜನ ಮನೆಯಲ್ಲೇ ದೇವರನ್ನು ನೋಡಿ ಬೇಡಿಕೊಳ್ಳುತ್ತಿದ್ದಾರಂತೆ ಆ ಬ್ಲಾಗ್ ನ ವೀವರ್ ಸಂಖ್ಯೆ ಲಕ್ಷದ ಗಡಿ ದಾಟಿದೆಯಂತೆ” ಇದಕ್ಕೆ ನಗಬೇಕೋ ಅಳಬೇಕೋ ನೀವೇ ಹೇಳಿ.
ಮುಖ್ಯವಾಗಿ ಇಂದಿನ ಮಕ್ಕಳು ಅತೀ ಹೆಚ್ಚು ಸಮಯವನ್ನು ಇಂಟರ್‍ನೆಟ್ ನೊಂದಿಗೆ ಕಳೆಯುತ್ತಿದ್ದಾರೆ. ಒಂದು ಕಡೆ ಓದು ಹಾಳಾದರೆ ಇನ್ನೊಂದು ಕಡೆ ಬಾಲ್ಯ ಜೀವನದ ಅತೀ ಅಮೂಲ್ಯ ಸಮಯವನ್ನು ಹಾಳುಗೆಡವಿಕೊಳ್ಳುತ್ತಿದ್ದಾರೆ. ಪೋಷಕರೇ ಪ್ಲೀಸ್, ನಿಮ್ಮ ಐಶ್ವರ್ಯ ನಿಮ್ಮ ಮಗನಿಗೆ ಮುಂದೆ ಉಪಯೋಗಿಸಿಕೊಳ್ಳಲು ಸಮಯ ಸಿಕ್ಕೆ ಸಿಗುತ್ತೆ. ಹಾಗಂತ ಈಗಲೇ ಮಕ್ಕಳ ಮಂಡೇಗೆ ಅನಾವಶ್ಯಕ ಎಲೆಕ್ಟ್ರಾನ್‍ಗಳ ಗೋಜು ಕೊಡಬೇಡಿ. ನೀವು ಅಷ್ಟೇ ಅವರೆದುರು ಸೋಷಿಯಲ್ ಮೀಡಿಯಾಗಳಲ್ಲಿ ಬ್ಯುಸಿಯಾಗಿ ಅನಾವಶ್ಯಕ ಕಾಲಹರಣ ಮಾಡಬೇಡಿ. ಯಾವುದೋ ಲೈಕ್ ಕಮೆಂಟ್‍ನಿಂದ ಬರುವ ಖುಷಿಗೆ ಮಾರುಹೋಗದೆ ಅದೇ ಖುಷಿಯನ್ನು ನಿಮ್ಮ ಮನೆ ಮಂದಿಯೊಂದಿಗೆ ಕಳೆಯಿರಿ.
           ಹೇಳಿದ ತಕ್ಷಣಕ್ಕೆ ಎಲ್ಲವೂ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ನಮ್ಮ ಜಾಗೃತಿ, ನಮ್ಮವರ ಕಾಳಜಿ ಇರಬೇಕು ಅಷ್ಟೆ. ಯಾವುದನ್ನು ಎಷ್ಟು ಬೇಕೋ ಅಷ್ಟು ಬಳಸಿಕೊಳ್ಳೋಣ. ಸೋಷಿಯಲ್ ಮೀಡಿಯಾ ಇಂದು ಜನರ ಹವ್ಯಾಸವಾಗಿ ಬೆಳೆಯುತ್ತಿದೆ. ಅದಕ್ಕೆ ಸಾಂಪ್ರದಾಯಿಕ ಮಾಧ್ಯಮಗಳ ಸುದ್ಧಿ ಹರಿವಿನಷ್ಟು ಪ್ರಭಾವ ಬೀರಲು ಇನ್ನೂ ತಂತ್ರಜ್ಞಾನದ ಪ್ರಸರಣೆಯ ದೃಷ್ಟಿಯಿಂದ ಸಾಧ್ಯವಾಗದಿದ್ದರೂ, ವಿದ್ಯಾವಂತರ ನಡುವೆ ಬಹಳಷ್ಟು ಬಳಕೆಯಲ್ಲಿದೆ. ದಿನನಿತ್ಯ ಈ ತಂತ್ರಜ್ಞಾನದಿಂದ ಅನೇಕ ಪಾಠಗಳನ್ನು ಕಲಿಯುತ್ತಿದ್ದೇವೆ, ಅದರ ಅನೇಕ ಮುಖಗಳ ದರ್ಶನವನ್ನೂ ಈಗಾಗಲೇ  ಕಂಡಿರುತ್ತೇವೆ. ಇನ್ನಾದರೂ ಎಷ್ಟು ಬೇಕೋ ಅಷ್ಟನ್ನು ಉಪಯೋಗಿಸಿಕೊಳ್ಳುತ್ತಾ, ಅನಾವಶ್ಯಕವಾಗಿ ಮೈದೊರವ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯ ಹೆಜ್ಜೆಯಿಡುತ್ತಾ ಮುನ್ನುಗ್ಗೋಣ.

ಇದೂ ತಿಳಿದಿರಲಿ:
ಸದ್ಯಕ್ಕೆ ಪೋರ್ನ್ ವೀಕ್ಷಣೆಯ ವಿಷಯದಲ್ಲಿ ಭಾರತ ಟಾಪ್ 3 ಪಟ್ಟಿಯಲ್ಲಿದೆ. ಕಛೇರಿಯಲ್ಲಿ ಐಟಿ ವಿಭಾಗದವರ ಕಣ್ತಪ್ಪಿಸಿ ಹೊಸ ಅಪ್ಲೀಕೇಷನ್ ಬಳಕೆ ಮಾಡುವುದರಲ್ಲಿ ಭಾರತೀಯರಾದ ನಾವು ಸಿದ್ಧ ಹಸ್ತರು. ಶೇ. 30 ರಷ್ಟು ಭಾರತೀಯ ನೌಕರರು ಅಕ್ರಮವಾಗಿ ಅಪ್ಲೀಕೇಷನ್ ಯೂಸ್ ಮಾಡುತ್ತಾರಂತೆ. ಈ ವಿಷಯದಲ್ಲಿ ಸಿಂಗಾಪುರ ಮತ್ತು ಬ್ರಟನ್ ಮೊದಲೆರಡು ಸ್ಥಾನದಲ್ಲಿದೆ.

ಅಭಿವ್ಯಕ್ತ ಸ್ವಾತಂತ್ರ್ಯ ಎತ್ತಿ ಹಿಡಿಯುವ ಬೆಳವಣಿಗೆ:
ಇದೀಗ ಸಾಮಾಜಿಕ ಜಾಲತಾಣಗಳಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತಾಗಿನ ಮಾಹಿತಿ, ಸಂದೇಶಗಳನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು  ಸುಪ್ರೀಂ ಕೋರ್ಟ್‍ಗೆ  ಕೇಂದ್ರ ಸರಕಾರವು ವಿವರಣೆ ನೀಡಿದೆ. ವ್ಯಕ್ತಿಯ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಸರ್ಕಾರ ಇಚ್ಚಿಸುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯು ದಾಖಲಿಸುವ ಅಭಿಪ್ರಾಯಗಳು ಅಪರಾಧವಾಗುವುದಿಲ್ಲ. ಆದರೆ, ಐಟಿ ಕಾಯ್ದೆಗಳು ಸೈಬರ್ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‍ಗೆ ತಿಳಿಸಿದೆ.

Wednesday, 10 August 2016

ನಾನೊಬ್ಬ ಸತ್ತೋದರೆ!?...


      ನಾನೊಬ್ಬ ಸತ್ತೋದರೆ!?... ಹೀಗೊಂದು ಪದ ಕಾಡಲು ಶುರುವಿಟ್ಟಿದ್ದು ಮೊನ್ನೆ ಮೊನ್ನೆಯಿಂದ... ಸರಿಸುಮಾರು ಐದಾರು ವರ್ಷಗಳಿಂದ ನನ್ನದು ಸದಾ ಒಂದಿಲ್ಲೊಂದು ವಿಭಾಗದಲ್ಲಿ ಹೋರಾಟದ ಬದುಕೆಂದರೆ ತಪ್ಪಿಲ್ಲ. ಇಲ್ಲಿ ಪ್ರತಿದಿನದ ಬದುಕನ್ನು ತುಂಬಾ ಪ್ರೀತಿಸುವ, ಹೆಚ್ಚು ಪರಿಪೂರ್ಣವಾಗಿಸಿಕೊಳ್ಳುವ ಹಂಬಲ ನನ್ನದು. ನನ್ನ ಕೆಲಸ ಕಾರ್ಯಗಳಿಗೆ ಹುಂಬತನದಲ್ಲೋ, ಹೊಟ್ಟೆಕಿಚ್ಚಿನಿಂದಲೋ ಅಡ್ಡಗಟ್ಟುವವರ ಸಂಖ್ಯೆ ಹೆಚ್ಚಿದ್ದರೂ, ನನ್ನದು ನಿಲ್ಲದ ಹೋರಾಟ. ಎಂ.ಕಾಂ ಕಲಿಕೆಯಲ್ಲಿ ಉನ್ನತ ದರ್ಜೆ ಪಡೆದಿದ್ದರೂ, ನಾನಾಯ್ಕೆ ಮಾಡಿಕೊಂಡಿದ್ದು ನನ್ನ ನೆಚ್ಚಿನ ಪತ್ರಿಕೋದ್ಯಮವನ್ನೇ. ಇದು ನನ್ನ ಹುಚ್ಚು. ಇದರಿಂದ ಪಡೆದುಕೊಂಡೆನೇ ವಿನಃ, ಏನನ್ನೂ ಕಳೆದುಕೊಂಡಿಲ್ಲ. ಐದಾರು ವರ್ಷದ ಹಿಂದೆ ಬದುಕಿನ ಸಣ್ಣ ಏರುಪೇರಿಂದ ಎಲ್ಲವನ್ನೂ ಕಳೆದುಕೊಂಡಿದ್ದಾಗ!, ವಿಶ್ವಾಸಿಗರೆಂದುಕೊಂಡಿದ್ದ ಎಲ್ಲರಿಂದ ಬಸವಳಿದು ನನ್ನಾತ್ಮ ನಂಬುಗೆ ಕಳೆದುಕೊಂಡಾಗ!, ಕಷ್ಟವೆಂದಿದ್ದಾಗ ಕೈ ಬಿಟ್ಟು ನಡೆದಿದ್ದ ಎಲ್ಲರಿಂದಲೂ ದೂರವಿರೋಣವೆಂದು ದೊಡ್ಡ ನಗರಿಗೆ ಬಂದು ನೆಲೆನಿಂತಾಗ!, ಜೊತೆಯಿದ್ದ ಅಣ್ಣನೊಬ್ಬನನ್ನ ಬಿಟ್ಟರೆ, ಹಿಂದೆ-ಮುಂದೆ, ಆಚೆ-ಈಚೆ ಕಂಡು ಬಂದಿದ್ದೆಲ್ಲಾ ವೈರಿಗಳೇ. ಕಣ್ಮುಚ್ಚಿದರೂ, ಕಣ್ತೆರೆದರೂ ಜಡಿಯುವ ಅವರ ಅಟ್ಟಹಾಸದ ದರ್ಪವೇ ಕಾಣುತ್ತಿತ್ತು. ಆದರೂ ಎಲ್ಲೂ ಭಯ ಮಿಶ್ರಿತಗೊಂಡಿರಲಿಲ್ಲ. ನನ್ನ ಎದೆಗಾರಿಕೆಗೆ ಧೃತಿ ಗೆಡುವ ಮಾತೇ ಇರಲಿಲ್ಲ... ಬಿಕಾಸ್ ನನ್ನ ಗುರಿ ನೇರವಾಗಿತ್ತು. ನಡಿಗೆ ಗುರಿ ಮುಟ್ಟುವುದ್ದಾಗಿತ್ತು. ದಾರಿ ನನಗರಿವಿಲ್ಲದೇ ನಡೆಸುತಿತ್ತು. ಏನಾದರೂ ಸಾಧಿಸಿ ತೋರಿಸಬೇಕೆನ್ನುವ ಛಲ ಸದಾ ಬೆನ್ನಿಗಂಟಿತ್ತು...

      ಬಹಳ ಹಿಂದೆಯೇ ನಿನ್ನನ್ನು ಕೊಲ್ಲುತ್ತೇನೆಂದು ಕತ್ತಿ ಹಿಡಿದು ದಾರಿ ಅಡ್ಡಗಟ್ಟಿದ್ದ ತಂಡದಿಂದ ಹೋರಾಡಿ ಉಳಿದಿರುವ ಈ ಜೀವಕ್ಕೆ ಇಂದಿಗೂ ಒಂದೆರಡು ಕೊಲೆ ಬೆದರಿಕೆಗಳಿವೆ!!, ದಿನ ಬೆಳಗಾದರೆ ಹೆದರಿಸುವ ಬೆದರಿಕಾ ಫೋನ್ ಕರೆಗಳಿವೆ!!. ಆದರೂ ನಿಲ್ಲದ ಹೋರಾಟ ದಿನದೂಡುತ್ತಲೇ ಇದೆ. ಎಷ್ಟೇ ಭಯವಿಲ್ಲದಿದ್ದರೂ ಎದೆಗಾರಿಕೆಗೆ ಹೆದರಿಸಲು ಒಮ್ಮೊಮ್ಮೆ ಕಾಡುವ ಪ್ರೀತಿ-ಗೀತಿ ಇತ್ಯಾದಿಗಳ ಹೂರಣವೂ ಇದೆ.
ಸಫೋಸ್ ನಾನೊಬ್ಬ ಸತ್ತೋದರೆ!?... 
ಏನಾಗಬಹುದು!?...
  ನಿನಗೇನು ಹುಚ್ಚಾ ಸಾಯೋ ಮಾತ್ಯಾಕೆ ಈಗ ಎಂದು ನೀವು ಕೇಳಬಹುದು!,  ಆದರೆ ನೆನಪಿರಲಿ ಚಿಂತನೆಯಿಂದ ಯಾರೂ ಅಳಿಯರು. ಹಾಗೆಯೇ ಈ ಜೀವವು ಅಳಿಯದು...
 ಚಿಂತಿಸೋಣ!?...
(ಇದನ್ನು ಓದುವಾಗ ನಿಮ್ಮ ಜೀವವೂ ನಿಮ್ಮ ಕೈಯಲ್ಲಿರಲಿ-ನೀವೊಬ್ಬ ಸÀತ್ತೋದರೆ!? ಅಂದುಕೊಂಡೆ ಓದಿ - ಆಗ ಮಾತ್ರಾ ಪ್ರತಿ ಪದಗಳಿಗೂ ವಿಶಾಲಾರ್ಥ ದೊರಕಬಹುದು, ಲೇಖನದ ಒಳಾರ್ಥ ಮತ್ತು ನಿಮ್ಮ ಜೀವ ಬೆಲೆಯ ಸಂದೇಶವನ್ನು ಅರಿಯಬಹುದು)

ಚಿಂತಿಸಿದರೆ ದ್ವಂಧ್ವ ಪ್ರಶ್ನೆಗಳ ಅಲೆ ಏಳುತ್ತದೆ...

ಏನಾಗಬಹುದು!?...
ಏನಾಗದಿರಬಹುದು!?..,

ನಾಲ್ಕು ಜನ ಅಳಬಹುದು, ಬಾಸ್ ರಜೆ ಘೋಷಿಸಬಹುದು, ಸಹಪಾಠಿಗಳು ಖೇಧಗೊಳ್ಳಬಹುದು, ಅಮ್ಮ ಅಳಬಹುದು, ಅಪ್ಪ ಚಿಂತಿಸಿ ಮರುಗಬಹುದು, ಅಣ್ಣಂದಿರು  ಸಾವಿಗೆ ಕಾರಣವರಸಬಹುದು, ಅವನು ಆತಂಕಗೊಳಗಾಗಬಹುದು, ಅವಳು ಬಿಕ್ಕಿ ಬಿಕ್ಕಿ ಅಳಬಹುದು, ಇನ್ನೊಬ್ಬಳು ಖುಷಿ ಹಂಚಿಕೊಳ್ಳಬಹುದು, ಆಂಟಿ ಊಟ ಬಿಡಬಹುದು, ಅಂಕಲ್ ಫೋಟೋಗೊಂದು ಹಾರ ಹಾಕಬಹುದು, ಗೆಳೆಯರೊಂದಿಷ್ಟು ಮಂದಿ ಒಳ್ಳತನವನ್ನೋ, ಕೆಟ್ಟತನವನ್ನೋ ಆಡಿಕೊಳ್ಳಬಹುದು, ಒಂದಿಷ್ಟು ಮಂದಿ ಆಶ್ಚರ್ಯದಲ್ಲಿ ಗರಬಡಿದವರಂತೆ ನಂಬಲಾರದೇ ಪ್ಲಾಶ್ ನ್ಯೂಸ್‍ನ ಅಪ್ಢೇಟ್ ಏನಾದ್ರೂ ಇದ್ಯಾ ಎಂದು ನೋಡಿ ಆಮೇಲೆ ಸತ್ತಿದ್ದು ನಿಜ! ಎನ್ನುವ ಕನ್‍ಫರ್ಮ್‍ಮೇಷನ್ ಮಾಡಿಕೊಳ್ಳಬಹುದು. ಸೋಶಿಯಲ್ ಮೀಡಿಯಾಗಳಲ್ಲಿ, ಸತ್ತ ‘ಸಂದೀಪನಿಗೆ ಶ್ರದ್ಧಾಂಜಲಿ’ ಎನ್ನುವಂತೆ ಆತ್ಮಕ್ಕೆ ಶಾಂತಿಕೋರುವ ಫೋಟೋಗಳು ಡಿಸೈನ್-ಡಿಸೈನ್ ಆಗಿ ಅಡ್ಡಾಡಬಹುದು. ಹಲವರಿಗೆ ಅದು ಫಾರ್ವಡ್ ಮಾಡಲು ಮಜ ನೀಡಲೂಬಹುದು, ಗ್ರೂಪ್‍ನಿಂದ ಗ್ರೂಪ್‍ಗೆ ನಾನು-ನನ್ನ-ಇತ್ಯಾದಿಗಳ ಬಯೋಡೇಟಾ ಹರಿದಾಡಬಹುದು. ಹಲವರ ಫ್ರೋಫೈಲ್ ಪಿಕ್‍ನಲ್ಲಿ ನನ್ನ ಭಾವಚಿತ್ರದ ನಗುಬೀರಬಹುದು. ಫೇಸ್ ಬುಕ್‍ನಲ್ಲಿ ಲೈಕ್ ‘ಸಾ’ವಿರದ ಗಡಿದಾಟಬಹುದು. ತೀರಾ ಹತ್ತಿರದಿಂದ ನನ್ನ ನೋಡಿದ್ದ ಆತ್ಮೀಯರು ನಮ್ಮನೆಗೆ ಬಂದು ಕೊನೆ ನೋಟ ಎಂಬಂತೆ ನೋಡಿ ಕೈಮುಗಿದು ಕಣ್ಣೀರಿತ್ತು ಸಾಗಬಹುದು, ವೈರಿಯೊಬ್ಬ ಖುಷಿಪಡಬಹುದು, ಕೊಂದಾತ ಅಡಗಬಹುದು, ಊರಿಗೆ ಊರೇ ಪ್ರತಿಭಟಿಸಬಹುದು, ಮತ್ತೆ ತಂಪಾದ ಗಾಳಿ ಬೀಸಬಹುದು...
ಇಷ್ಟೇ..,ಇಷ್ಟೇ..,ಇಷ್ಟೇ!!...
ನಿಜ ಅಲ್ವಾ!?
ಎಸ್!!!...
ಹೀಗೊಂದು ಕಲ್ಪನೆ ನನ್ನೊಳಗೆ, ನಾನೊಬ್ಬ ಸತ್ತೋದರೆ!?... ಎಂದು ಚಿಂತನೆಗೆ ಅಡಿಯಿಟ್ಟ ಕ್ಷಣದಿಂದ, ದೇಹ ಭಾಷೆಯಿಂದಲೋ, ಸ್ವರಭಾಷೆಯಿಂದಲೋ, ಮನದಭಾಷೆಯಿಂದಲೋ, ಎಲ್ಲಿಂದೆಂದು ನಿಖರವಾಗಿ ತಿಳಿಯಲಾರದೇÀ ಅಸಹಾಯಕ ಕಂಪನದಿಂದ ಮನಸ್ಸಿನೊಳಗೆ ಮೇಳೈಸಹತ್ತಿದೆ. ಒಂಥರಾ ‘ಬೇಸ್‍ವಾಯ್ಸ್’ ತಳದಿಂದ ಜಿನುಗಿದಂತಿದೆ... ಸಾವಧಾನವಾಗಿ ಶಿಸ್ತಿನಿಂದ ಸುರುಳಿ ಸುರುಳಿಯಾಗಿ ಕರುಳಿನಿಂದ ಮೇಲೆದ್ದ ಸ್ವರ ವ್ಯಂಜನಗಳು, ಅನುಸ್ವಾರ ವಿಸರ್ಗಗಳು ಕೊರಳ ವಯಾ ಲೋಕಾರ್ಪಣೆಯಾಗುತ್ತಿರುವಂತೆ ವಿರಳ ಧ್ವನಿತ ಶ್ರುತಿಗೊಂಡು ಕಲಾಪ ನಡೆಸಿದಂತಿದೆ. ಕಾಲಕಾಲಕ್ಕೆ ಉಂಟಾಗುವ ಪ್ರತಿಯೊಂದು ಭ್ರಮಾಭಂಗವೂ ನಮ್ಮನ್ನು ಇನ್ನೊಂದು ಸಾಕ್ಷಾತ್ಕಾರಕ್ಕೆ ನೂಕುತ್ತದಂತೆ. ಅದು ಇದೇನಾ!? ಅಥವಾ ಇದೂ ಅದೇನಾ!? ಎನ್ನುವಂತೆ ಗೊಮದಲದ ಗೂಡಿಗೆ ನೂಕಿದೆ.

ಓಶೋರವರು ಹೇಳುವಂತೆ ಜಗತ್ತಿನಲ್ಲಿ ಪ್ರತಿಯೊಬ್ಬನೂ ಶೂನ್ಯನೇ!. ಇರುವಷ್ಟು ದಿನ ಹೊಡೆದಾಟ, ಬಡಿದಾಟ ಅಷ್ಟೇ. ಸತ್ತಮೇಲೆ ಎಲ್ಲರಾಗುವುದು ಇಷ್ಟೇ!. ‘ಆಸೆಯ ಬಸಿರಿಗೆ ನಿರಾಶೆಯೇ ಹೆರಿಗೆ’ ಎಂಬಂತೆ ಎಂತಹ ಆತ್ಮಸ್ಥೈರ್ಯವಿದ್ದರೂ ಸಾವು ಸನ್ನಿಹಿತ ಎಂದರಿತ ಕ್ಷಣದಿಂದ ಏನೂ ಮಾಡಲಾಗದ ಕೈಕಟ್ಟಿದ ಅನುಭವ ನಮ್ಮನ್ನೂ ಶೂನ್ಯಕ್ಕೆ ತಳ್ಳುತ್ತದೆ ಮತ್ತು ಕೆಳಸ್ಥರಕ್ಕೆ ಮಂತ್ರಿಸುತ್ತದೆ, ಸತ್ತರೇ ಮುಂದೇನು!?, ಎನ್ನುವ ನಿರಾಶೆ ಇದ್ದ-ಬದ್ದ ಎಲ್ಲಾ ಆಸೆಗಳನ್ನು ತನ್ನ ತೆಕ್ಕೆಯಲ್ಲಿ ಸಾಯಿಸುತ್ತದೆ ಎನ್ನುವಲ್ಲಿ ಅನುಮಾನವೇ ಇಲ್ಲ!..

ನಿಜಕ್ಕೂ ನಾನು ಒಂದಲ್ಲ ಒಂದು ದಿನ ಸಾಯುತ್ತೇನೆ. ಅದರಲ್ಲಿ ಯಾವ ಅನುಮಾನವಿಲ್ಲ. ಸತ್ತ ನಂತರ ನಾನೇನಾಗಬಹುದು!. ಎಲ್ಲಿಗೋಗಬಹುದು! ಯಾರಿಗೂ ತಿಳಿದಿಲ್ಲ. ಆದರೂ ಏನಾಗಬಹುದೆಂದು ತಿಳಿಯುವ ಕಾತರದ ಯೋಚನಾ ನಡೆ, ಪ್ರತಿಯೊಬ್ಬರಲ್ಲೂ ಹರಿದಾಡೇ-ಆಡಿರುತ್ತದೆ. 

     ನನ್ನ ಸ್ವರೂಪ ಬದಲಾಗಬಹುದು. ಪಾತ್ರ ಬದಲಾಗಬಹುದು, ಸ್ಥಳ ಬದಲಾಗಬಹುದು, ವಾತಾವರಣ ಬದಲಾಗಬಹುದು, ಮೌಲ್ಯಗಳು ಕುಸಿಯಬಹುದು, ಬದುಕಿನ ಶೈಲಿ ಬದಲಾಗಬಹುದು. ಇವಿಷ್ಟೇ ಅಲ್ಲದೇ ಇನ್ನಿಷ್ಟು ಯಕ್ಷಪ್ರಶ್ನೆಗಳು ಕುಣಿದಾಡಿರುತ್ತವೆ!.. ಸತ್ತ ನಂತರ ಆತ್ಮದ ನಿಯಮ ಹೇಗಿರಬಹುದು, ನಾನಿಲ್ಲೇ ಇರುತ್ತೇನಾ!?,  ನನ್ನಾತ್ಮ ಇಲ್ಲೇ ಸುತ್ತಬಹುದಾ!? ನಾನಂತೂ ಅವರಿಗೆ ಕಾಣಿಸುವುದಿಲ್ಲ,.. ಇವರೆಲ್ಲಾ ನನಗೆ ಕಾಣಿಸಬಹುದಾ!? ಯಾರ್ಯಾರು ನನ್ನ ಬಗ್ಗೆ ಏನೆಲ್ಲಾ ಹೇಳಬಹುದು!?, ನಾನು ಆ ಕಡೆ ಸ್ವರ್ಗಕ್ಕೂ ಹೋಗದೇ, ಈ ಕಡೆ ನರಕಕ್ಕೂ ಹೋಗದೇ ಮನೆಯಂಗಳದ ಹುಣಸೇ ಮರದಲ್ಲಿ ವಾಸಿಸಲು ಯಮಧರ್ಮರಾಯ ಪರ್ಮಿಷನ್ ನೀಡಬಹುದಾ!? ಆತ್ಮದ ಅಲೆದಾಟವಿದೆ ಎನ್ನುವ ನನ್ನ ಕಾಣದ ಕಲ್ಪನೆ ಸುಳ್ಳಿರಬಹುದಾ!? ಸತ್ತ ಮೇಲೆ ಏನೂ ಇಲ್ಲವಾ!? ಇತ್ಯಾದಿಗಳೆಲ್ಲ ಹೊಸ ಭ್ರಮೆಯಲ್ಲಿ ಕಾಡತೊಡಗಿರುತ್ತವೆÉ. ಹಿಂದಿದ್ದ ಎಲ್ಲಾ ಆಶಾಭಾವನೆ, ಆತಂಕ, ಆಧ್ಯಾತ್ಮಿಕ ಪ್ರಜ್ಞಾವಾಹಿನಿಯ ಮೂಲ ಪ್ರೇರಪಣೆಯಾಗಿ ಕಾರ್ಯ ನಿರ್ವಹಿಸುವುದು ಇಲ್ಲಿ ವಿಪರ್ಯಾಸವಾದರೂ ಸತ್ಯ.

ಪ್ರತಿ ದಿನವನ್ನೂ ನಾವು ಆರಾಮದಾಯಕವಾಗಿ ವ್ಯರ್ಥಮಾಡುತ್ತಲೇ ಸಾಗುತ್ತೇವೆ. ಆಗಾಗ ಒಮ್ಮೊಮ್ಮೆ ಸೆಟೆದು ನಿಂತು ಮಹತ್ಕಾರ್ಯದತ್ತ ಗೌಡಾಯಿಸುತ್ತೇವೆ. ಸಾಧನೆ ಆದಾಗ ಹಿಗ್ಗುತ್ತೇವೆ, ಸೋಲಾದಾಗ ಕುಗ್ಗುತ್ತೇವೆ. ಒಬ್ಬರೂ ಇನ್ನೊಬ್ಬರನ್ನು ನೋಡಿ ಉರಿದುಕೊಳ್ಳುತ್ತೇವೆ, ಸಾಯಿಸಬೇಕೆಂದು ಹೊಂಚುಹಾಕುತ್ತೇವೆÉ. ಎಲ್ಲವೂ ನನ್ನದು, ನನಗೆ ಸೇರಬೇಕೆಂದು ಪಾಪದ ಕೂಪದಲ್ಲಿ ಬೀಳುತ್ತಿರುತ್ತೇವೆ. ಆದರೆ ಬದುಕ ಅಂತಿಮ ಸತ್ಯ ಅಡಗಿರುವುದು ಸಾವಲ್ಲಿ ಎನ್ನುವುದನ್ನು ಮರೆತಿರುತ್ತೇವೆ.

    ನಾನೊಬ್ಬ ಸತ್ತೋದರೆ!?... ಎಂದುಕೊಂಡು ಮನಸಿಗೆ ಚಿಂತನೆಯ ಬೆಂಕಿ ಹತ್ತಿಸಿಕೊಂಡಾಗಲೇ, ಬದುಕಿನ ಅಪರಿಮಿತ ಮುಖಗಳೆಲ್ಲವೂ ವಿನ್ಮಿತ ಕಣ್ಣುಗಳಲ್ಲಿ ತೆರೆದುಕೊಂಡಂತಾಗುವುದು. ಆ ಬೆರಗಿನ ಭಾವ ಕ್ಷಣ ಕ್ಷಣವನ್ನು ಲೆಕ್ಕಹಾಕಿಸುತ್ತದೆ. ಯಾವ್ಯಾವುದೋ ವಿಚಾರದಲ್ಲಿ ತರ್ಕತೆ ಬೇಡ ಎಂದು ಅನುಸಂಧಾನ ಕಾಣಿಸುತ್ತದೆ. ಭಯ ತರಿಸುತ್ತದೆ, ಅನುಕಂಪ ಮೂಡಿಸುತ್ತದೆ. ಎಲ್ಲರನ್ನೂ, ಎಲ್ಲವನ್ನೂ ಬಿಟ್ಹೋಗುತ್ತೀನಲ್ಲಾ ಛೇ ಎಂದೆನಿಸಿ, ಇನ್ನೊಂದಿಷ್ಟು ದಿನವಾದರೂ ಬದುಕೋ ಹಾಗೆ ಮಾಡಪ್ಪಾ ಅನಿಸುತ್ತದೆ. ಅಲ್ಲದೇ ಸಾವಿಗೆ ಮುಂಚೆ ಉಳಿದಿರುವ ಸಮಯ ಬರಿಯ ಕಳೆದ ದಿನಗಳ ಯೋಚನೆ ಮತ್ತು ಸರಿ-ತಪ್ಪುಗಳನ್ನು ಸರಿದೂಗಿಸಿಕೊಳ್ಳುವ ನಿಷ್ಠೆಯಲ್ಲಷ್ಟೇ ಕಾಲ ಸವೆಸುತ್ತಿರುತ್ತದೆ ಹೊರತು, ದೇಹ, ಮನ ಯಾವ ಮಹತ್ಕಾರ್ಯಕ್ಕೂ ಅಡಿಯಿಡುವುದಿಲ್ಲ. ಅದು ಸಾಧ್ಯವಾಗುವುದು ಇಲ್ಲ. ಯಾಕೆಂದರೆ ಅಲ್ಲಿ ಆತ್ಮದ ನಡುಕ ಗಡ ಗಡಿಸಲು ಶುರುವಿಟ್ಟಿರುತ್ತದೆ. ಎಲ್ಲವೂ ಶೂನ್ಯಕ್ಕೆ ವಾಲಿರುತ್ತದೆ. ಹೊಸ ಭಯ ಬೆವರಿಳಿಸುತ್ತಿರುತ್ತದೆ.

    ಸಿಂಪಲ್ ಮಾತಲ್ಲಿ ಹೇಳಬೇಕೆಂದರೆ, ಜೀವಿತದಲ್ಲಿ ಸಾವಿನ ಭಯವಿಲ್ಲದ ದಿನಗಳನ್ನು, ವೀರ್ಯ ಸ್ಖಲನದ ಬಳಿಕವೂ ಹೆಣ್ಣನ್ನು ಸಂಭೋಗಿಸುವ ‘ಸ್ಫಿರಿಟ್’ ಕಾಪಾಡಿಕೊಂಡೇ ತಿರುತ್ತೇನೆಂದು, ಮುನ್ನವೇ ಪ್ರತಿಜ್ಞೆ ಮಾಡಿ ಪಲ್ಲಂಗವೇರುವ ಪ್ರತಿಪುರುಷನ ಉನ್ಮತ್ತ ಭ್ರಮೆಯಾದರೆ, ಸಾವಿನ ಭಯ ಕಂಡಿರುವ ದಿನಗಳನ್ನು ವೀರ್ಯ ಸ್ಖಲನ ನಂತರದ ಅವಸ್ಥೆ ಎನ್ನಬಹುದು. ಪೂವೋತ್ತರ ಸ್ಥಿತಿಗಳೆರಡೂ ಭ್ರಮೆಯೇ ಆದರೂ, ಪೂರ್ವದಲ್ಲಿ ಚೈತನ್ಯಕ್ಕೆ ಮಿತಿಯೇ ಇರುವುದಿಲ್ಲ, ಉತ್ತರದಲ್ಲಿ ಇದುವೇ ನನ್ನ ಶಾಶ್ವತ ವಿರಕ್ತಿಯೆನ್ನುವ ಭ್ರಮೆ ಕಾಡದೇ ಬಿಡುವುದಿಲ್ಲ.

   ನೀವಿದನ್ನೂ ಏನು ಬೇಕಾದರೂ ಅಂದುಕೊಳ್ಳಿ!, ವಿವೇಕ-ಅವೀವೇಕದ ಕೊಂಡಿಯಂತಲೋ, ಬೆಳಕು ಮತ್ತು ಕತ್ತಲೆಯ ನಡುವಿನ ಕೊಂಡಿಯಂತಲೋ, ಅನಾದಿ ಮತ್ತು ಅನಂತದ ನಡುವಿನ ಕೊಂಡಿಯಂತಲೋ, ಉತ್ಫತಿ, ಲಯ, ಜಡ-ಚೇತನ, ಧ್ವೈತ-ಅಧ್ವೈತ ಹೀಗೆ ಯಾವುದಾದರೂ ಮಧ್ಯದ ಕೊಂಡಿಯಂತಲೋ, ಬಾಳಿನ ದುರ್ಬಲ ಸ್ಥರದ ಸತ್ಯವಂತಲೋ, ಒಳಿತು ಕೆಡುಕಿನ ಸತ್ಯಾಸತ್ಯತೆ ಅರಿಯುವ ಮೂಲ ಗಟ್ಟವೆಂತಲೋ ಹೀಗೆ, ಏನೂ ಬೇಕಾದರೂ ಅಂದುಕೊಳ್ಳಿ ಆದರೆ ಪ್ರತಿಯೊಬ್ಬ ನಾನಿಂದು ಸಾಯುತ್ತೇನೆಂದು ತಿಳಿದರೆ ಅರಿಯುವ ಸತ್ಯ ಈ ಮೇಲಿನದ್ದೆ ಅಂದರೆ ತಪ್ಪಿಲ್ಲ.

ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ, ಮನುಷ್ಯನು ಈ ಲೋಕದಲ್ಲಿ ಪಡುವ ಪ್ರಯಾಸವೆಲ್ಲವೂ ವ್ಯರ್ಥ, ಹಾಗಾದರೆ ಲಾಭವೇನು!?. ಒಂದು ತಲಾಂತರವೂ ಗತಿಸುವುದು, ಇನ್ನೊಂದು ತಲಾಂತರವೂ ಬರುವುದು. ಭೂಮಿಯಾದರೋ ಅಮರವಾಗಿ ನಿಲ್ಲುವುದು. ಸೂರ್ಯನು ಏರುವನು, ಸೂರ್ಯನು ಇಳಿಯುವವನು. ಗಾಳಿ ಬೀಸುವುದು, ನದಿಗಳೆಲ್ಲಾ ಸಮುದ್ರಕ್ಕೆ ಹರಿಯುವುದು. ಕಣ್ಣು ನೋಡಿ ತೃಪಿಗೊಳ್ಳದು, ಕಿವಿ ಕೇಳಿ ದಣಿಯದು. ಇದ್ದದ್ದೇ ಇರುವುದು, ನಡೆದದ್ದೇ ನಡೆಯುವುದು. ಹೊಸದೆಂದಿದ್ದು ತಲಾಂತರದಲ್ಲಿ ಹಳೆಯದೇ ಆಗುವುದು, ಮಣ್ಣು ಭೂಮಿಗೆ ಸೇರುವುದು ನಾವು ಒಂದಲ್ಲಾ ಒಂದಿನ ಮಣ್ಣಿಗೆ ಸೇರುವುದು...

     ಹೀಗೆ ಗತ, ಭವಿಷ್ಯ, ಪ್ರಸಕ್ತತೆಗಳು ಒಂದರೊಳಗೊಂದು ಅವಿತುಕೊಳ್ಳುತ್ತಾ ಲೀಲಾಮಯವಾದ ವರ್ತುಲವನ್ನೇ ಹೆಣೆದು ಬಿಡುವ ನಮ್ಮತನಕ್ಕೆ ಮತ್ತೇ ಮತ್ತೇ ಕಾಡಿ ಕೆಟ್ಟತನವನ್ನು ಸುಟ್ಟುಕೊಳ್ಳಲು ನಮಗಿರುವ ಒಂದೇ ನಡೆಯೆಂದರೆ... ನೇರವಾಗಿ ಮನಸ್ಸಿನೊಳಗೆ ಏಕಾಂಗಿಯಾಗಿ ಚಿಂತನೆಗಿಳಿಯಬೇಕು...

‘ನಾನೊಬ್ಬ ಸತ್ತೋದರೆ!?’......................................

ಕವಿ ಕನವರಿಕೆ-ಪ್ರೇಮಾಯಣ #3


ಅವಳು ಅವನ ತೆಕ್ಕೆಗೊರಗಿ ನಿದ್ರಿಸುವವಳಿದ್ದಳು!.. ಆದರೆ ಹಾಗಾಗಲಿಲ್ಲ...
ತೆಕ್ಕೆಯು ರೆಕ್ಕೆಯಂತೆ ಹಾರಿತ್ತು!..
ಅವರದು ಆರು ವರ್ಷದ ಲವ್. ಅವನಿಗೆ ಅವಳ ಮೇಲೆ ಅಘಾದ ಪ್ರೀತಿ. ಅವಳಿಗೂ ಅವನ ಮೇಲೆ ಅನಂತ ಪ್ರೇಮ. ಸಾಗುತಾ ದೂರಾ ದೂರಾ!.. ಎಂಬಂತೆ ಆರು ವರ್ಷಗಳು ಸದಾ ಇಬ್ಬರು
ಒಂದಿಲ್ಲೊಂದರಲ್ಲಿ ಕೈ ಕೈ ಹಿಡಿದು ನಲಿದು ಬಂದವರೇ!..
      ಒಂದು ಭಾಗದಿಂದ ಪ್ರಾರಂಭವಾಗಿ, ಇನ್ನೊಂದು ಭಾಗಕ್ಕೆ ತಾಗಿ, ಇಬ್ಭಾಗ ಒಮ್ಮುಖವಾಗಿ ಸಂಧಿಸಿ, ಪರಸ್ಫರ ಎಲ್ಲವನ್ನು ಹಂಚಿಕೊಂಡು ಮುನ್ನಡೆಗೆ ಅಣಿಯಿಟ್ಟಿದ್ದ ಪ್ರೇಮ ಮಂದಿರದ ತಳಪಾಯ ಇತ್ತೀಚೆಗೆ ಇನ್ನೊಬ್ಬಳು ಮಾಯಾಂಗನೆಯ ಮರ್ಮದಿಂದ ಗುಡಲಿ ಪೆಟ್ಟು ಬಿದ್ದಂತೆ ಕುಸಿಯುತ್ತಿತ್ತು.
     ಮಾಯಾಂಗನೆ ಇವರ ಹಟ್ಟಿಗೆ ಕರೆಯದೇ ಬಂದವಳು. ಮನೆಯೊಳಗೆ ಅನಾಥೆಯೆಂದು ಕರೆ ತಂದ ಮಾವನ ಮಗಳಾಕೆ. ಊರಿಗೆ ಬಂದು!, ನೀರಿಗೂ ಬಂದೂ!, ಬಲೆ ಬೀಸಿ ಹುಡುಗನನ್ನ ಹಿಡಿದ ಚದುರೆಯವಳು.  ಸಲುಗೆ ಸೆಳೆತದಿಂದÀ ಅತ್ತೆ ಮಗನ ಕಾಳಜಿಗೆ ಕರಗಿ ಮನಸು ಮಾರಿಕೊಂಡಿದ್ದಳು. ಇವನ ಇನ್ನೊಂದು ಪ್ರೀತಿಯ ಗುಟ್ಟೇ ಅವಳಿಗರಿವಿರಲಿಲ್ಲ. ಅಂತೂ ಇಂತೂ ಅತ್ತೆಗೂ ತಿಳಿಸಿ ಮದುವೆ ಫಿಕ್ಸ್ ಮಾಡಿಸಿಕೊಂಡೇ ಬಿಟ್ಟಳು.
    ಇತ್ತ ತುಟಿ ಮಿಟುಕಿಸದ ಹುಡುಗ, ತನ್ನ ಒಡಲ ಪ್ರೀತಿಯನ್ನು ಕುಕ್ಕಿ ಕೊಂದಿದ್ದ. ಸಂಸ್ಕøತಿ-ಸಂಸ್ಕಾರಕ್ಕೆ ಜೋತು ಬಿದ್ದು ಪ್ರೀತಿ ತೆಕ್ಕೆಯನ್ನು ದೂರ ಸರಿಸಿದ್ದ. ಅತ್ತ ಇವನನ್ನೇ ನಂಬಿದ್ದ ನೀರೆ ಕಣ್ಣೀರ ಪಾಲು!, ಇತ್ತ ಬೆವತು ಬೆಂಡಾದ ಈತ ಭಯದ ಪಾಲು. ಮನೆಯವರನ್ನು ತೊರೆಯಲಾರದೇ, ಬಯಸಿದ್ದ ಪ್ರೀತಿಯನ್ನು ಹೇಳಲಾರದೆ ಸೋತು ಸುಣ್ಣವಾಗಿದ್ದ. ತ್ಯಾಗಕ್ಕೆ ಪ್ರೀತಿ ದೊಡ್ಡದು, ಪ್ರೀತಿಗೆ ತ್ಯಾಗವೇ ದೊಡ್ಡದು ಎನ್ನುವ ದೊಡ್ಡತನಕ್ಕೆ ಶರಣಾಗಿ ಮೌನವಂತನಾಗಿದ್ದ.
      ಅತ್ತ ಅವಳು ಕಾದು ಸೋತಳು. ಇವಳು ಕರೆದು ಗೆದ್ದಳು. ಇತ್ತ ಪ್ರೀತಿ ಹುಟ್ಟುತ್ತಿದೆ, ಅತ್ತ ಪ್ರೀತಿ ಸಾಯುತ್ತಿದೆ...ನೆತ್ತಿ ನಡುವೆ ಸೂರ್ಯನ ಕಿರಣ ಮೋಡದ ಮರೆಯಲ್ಲಿ ಜಾರಿದೆ. ಗಟ್ಟಿಮೇಳ ಮೊಳಗಿದೆ, ಹುಸಿ ಪ್ರೇಮ ಕಮರಿದೆ...

ಸಿರಿ ಬುಲೆಟ್...ಜೀವಕ್ಕಿಲ್ಲ ಶ್ರೀರಕ್ಷೆ...ಮಕ್ಕಳಿಗಿಲ್ಲ ಸುರಕ್ಷೆ...ಕುಂದಾಪುರದಲ್ಲಿ ನಡೆದ ಶಾಲಾ ಮಕ್ಕಳ ಅಪಘಾತದ ಸುತ್ತ


ತೂಗುಯ್ಯಾಲೆಯಲ್ಲಿದೆ ವಿದ್ಯಾರ್ಥಿಗಳ ಭವಿಷ್ಯ, ಆಯತಪ್ಪಿದರೆ ಸಾವು ಖಚಿತ...
ಒಂದು ಬಾರಿ ಕೂಗಾಡಿ ಸುಮ್ಮನಿರಲು, ಇದು ಸಣ್ಣ ವಿಷಯವಲ್ಲ...
ಆಟಕ್ಕುಂಟು ಲೆಕ್ಕಕ್ಕಿಲ್ಲ ಶಾಲಾ ಮಕ್ಕಳ ಮಾರ್ಗಸೂಚಿ...
ಸುರಕ್ಷತೆಯ ಪರದಾಟ.., ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ...
ಜೀವಕ್ಕಿಲ್ಲ ಶ್ರೀರಕ್ಷೆ...ಮಕ್ಕಳಿಗಿಲ್ಲ ಸುರಕ್ಷೆ...

    ಆ ಮಗು ಈಗಷ್ಟೇ ಅರಳುತ್ತಿರುವ ಮೊಗ್ಗು.., ಒಂದಿಷ್ಟು ವರ್ಷದ ಪ್ರೀತಿಯ ಜೋಪಡಿಯಲ್ಲಿ ಬೆಳೆದಿದ್ದ ಪುಟ್ಟಿ ಶಾಲೆಗೂ ಅಪ್ಪ ಅಮ್ಮನ ಪ್ರೀತಿಯಿಂದಲೇ, ದಿನಾ ಚಾಚೂ ತಪ್ಪದೇ ಹೋಗುತ್ತಿದ್ದಳು. ಎಂದಿನಂತೆ ಅಂದೂ ಕೂಡ ಬೇಗನೆ ಎದ್ದು, ತನ್ನೆಲ್ಲಾ ಹೋಮ್ ವರ್ಕ್ ಮಾಡಿಕೊಂಡು, ಟಿಫಿನ್ ಮಾಡುವಷ್ಟೊತ್ತಿಗೆ, ‘ಅಪ್ಪಾ ನಾನು ಮುಂದೆ ಡಾಕ್ಟರ್ ಆಗಬೇಕು, ಚೆನ್ನಾಗಿ ಓದುತ್ತೇನೆ, ನೀನು ಓದಿಸ್ತೀಯಾ ಅಲ್ವಾ!’... ಎನ್ನುತ್ತಾ ನಗುನಗುತ್ತಲೇ ಕೇಳಿದ್ದಳು ಪುಟ್ಟಿ. 
ಅದಾಗಲೇ ಹೊರಗಿಂದ ಶಾಲಾ ವಾಹನವೊಂದರ ಹಾರ್ನ್ ಕೇಳಿ ಬರುತ್ತದೆ. ಗಡಿಬಿಡಿಯಲ್ಲೇ ಬ್ಯಾಗು, ಟಿಫಿನ್ ಬಾಕ್ಸು ಕೈಗೇರಿಸಿಕೊಂಡು ಹೊರನಡೆದ ಪುಟ್ಟಿಗೆ ಅಮ್ಮನ ಕೈ ಬೀಸುವಿಕೆಯ ಟಾಟಾ ಕನಸಿನ ಮೆಟ್ಟಿಲ್ಲನ್ನು ಇನ್ನಷ್ಟು ಪುಷ್ಟಿಸಿತ್ತು. ಆ ವಾಹನದಲ್ಲಿ ಪುಟ್ಟಿಯ ಕನಸಂತೆ ಇನ್ನೂ ಅನೇಕ ಕಂದಮ್ಮಗಳಿಗೆ ಕನಸ ಕಂತೆಯ ಜೋಪಡಿಯಿತ್ತು... 
ಮಗುವನ್ನು ಶಾಲೆಗೆ ಕಳಿಸಿರುವೆ ಯಾವ ಭಯವಿಲ್ಲ...ಸಂಜೆ ಬರುವಷ್ಟರ ಹೊತ್ತಿಗೆ ಅವಳಿಗಿಷ್ಟವಾದ ತಿಂಡಿಯನ್ನು ಮಾಡಿಡೋಣ ಎಂದುಕೊಳ್ಳುತ್ತಿದ್ದ ತಾಯಿಗೆ ಅಚಾನಕ್ ಆಗಿ ಬಂದ ಫೋನ್ ಕರೆ ತಲೆತಿರುಗಿ ಬೀಳುವಂತೆ ಮಾಡುತ್ತದೆ... ಅಪ್ಪನನ್ನು ಮುಂದೇನೂ ಎಂದು ತೋಚದ ಭಯಾನಕ ಕೂಪಕ್ಕೆ ಬೀಳಿಸುತ್ತದೆ. ಕಾರಣ ಮಗಳಿದ್ದ ‘ಶಾಲಾ ವಾಹನ ಪಲ್ಟಿ, ಸ್ಥಳದಲ್ಲೇ ಮಕ್ಕಳ ಸಾವು’...
ಚಿಗುರಬೇಕಿದ್ದ ಕನಸುಗಳು ಕರಟೋಯಿತು, ಕಟ್ಟಿದ್ದ ಆಸೆಯ ಮೆಟ್ಟಿಲು ಕುಸಿದೋಯಿತು, ವರ್ಷಾನುವರ್ಷ ಅದೆಷ್ಟೋ ನೋವು, ಕಷ್ಟ, ನಷ್ಟವನ್ನು ಹೊಟ್ಟೆಯಲ್ಲಿ ಕಟ್ಟಿಕೊಂಡು ಬೆಳೆಸಿದ್ದ ಮನೆ ದೀಪ ಬೆಳಗುವ ಮುನ್ನವೇ ಆರೋಯಿತು... ಇದು ಒಂದು ಮನೆಯ ಮಗಳನ್ನು ಕಳೆದುಕೊಂಡ ವಿದ್ರಾವಕ ಕಥೆಯಾದರೆ, ಇದಕ್ಕಿಂತ ಭಿನ್ನವಾದ ಅದೆಷ್ಟು ನೋವಿನ ಮಡಿಲುಗಳು ನಮ್ಮ ನಿಮ್ಮ ಮಧ್ಯೆ ಇದೆಯೋ ಹೇಳತೀರದು... ಅಬ್ಬಾ! ಆ ಆಕ್ರಂಧನ ನೋಡೋದಲ್ಲ, ದೂರಿಂದ ಕೇಳಿದರೇನೆ ಭಯ ಹುಟ್ಟಿಸುತ್ತೆ...
ವರ್ಷಗಳ ಹಿಂದೆ ಕಾಲ್ನಡಿಗೆಯಲ್ಲಿ ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳು ಸುರಕ್ಷರಾಗಿದ್ದರು. ಆದರೆ ಇಂದು ಯಾವುದನ್ನು ಸುರಕ್ಷವೆಂದು ವಾಹನ ಹತ್ತಿಸಿ ಕಳಿಸುತ್ತೇವೋ ಅದೇ ಅಸುರಕ್ಷಿತವಾಗಿದೆ.
ನಿಮಗೆಲ್ಲಾ ಗೊತ್ತಿರಬಹುದು ಇತ್ತೀಚೆಗೆ  ಕುಂದಾಪುರ ತಾಲೋಕಿನ ತ್ರಾಸಿ ಎಂಬಲ್ಲಿ ನಡೆದ ಶಾಲಾ ಓಮಿನಿ ಹಾಗೂ ಖಾಸಗಿ ಬಸ್ ಒಂದರ ಡಿಕ್ಕಿ 8 ಮಕ್ಕಳನ್ನು ದಾರುಣವಾಗಿ ಬಲಿ ಪಡೆದದ್ದು  ಎಲ್ಲರ ಹೃದಯ ಕರಗಿಸಿತ್ತು. ಮುದ್ದು ಕಂದಮ್ಮಗಳ ಸಾವು ಇಡೀ ರಾಜ್ಯವನ್ನೇ ಶೋಕತೆಯಲ್ಲಿ ಮುಳುಗಿಸಿತ್ತು. ಇದೊಂದೆ ದುರ್ಘಟನೆ ಅಲ್ಲ. ಅದಾದ ಮೇಲೆ, ಬೆಂಗಳೂರಿನಲ್ಲೊಂದು, ಹೊಳೆ ಹೊನ್ನೂರು ಪಟ್ಟಣದ ಹನುಮಂತಪುರದಲ್ಲೊಂದು ಹೀಗೆ ಒಂದು ಮಾಸುವ ಮುನ್ನವೇ ಮತ್ತೊಂದು ಅನಾಹುತಗಳು ಸಂಭವಿಸುತ್ತಲೇ ಇದೆ. ಇವೆಲ್ಲ ಅನಾಹುತಗಳನ್ನು ನೋಡುತ್ತಿರುವ  ಮನೆಯವರಿಗೆ ಇದೀಗ ಮಕ್ಕಳನ್ನು ಶಾಲೆಗೆ ಕಳಿಸುವುದೆಂದರೆ, ಜೀವ ಕೈಯಲ್ಲಿ ಹಿಡಿದು ದಿನದೂಡಿದಂತೆ ಎನ್ನುವ ಪರಿಸ್ಥಿತಿ ಬಂದಿದೆ.
ಒಂದಿಷ್ಟು ದಿನ ಎಲ್ಲಾ ಪತ್ರಿಕೆಗಳು, ವಾಹಿನಿಗಳು, ಸೋಷಿಯಲ್ ಮೀಡಿಯಾಗಳು ಅವೆರ್‍ನೆಸ್,.. ಎಂಬಂತೆ ವರದಿಗಳನ್ನು, ಡಿಬೆಟ್‍ಗಳನ್ನು, ಮೆಸೇಜ್‍ಗಳನ್ನು,  ಅನಿಯಮಿತವಾಗಿ ಪ್ರಸರಿಸಿದವು... ಆದರೆ ಯಾವುದು ಬದಲಾಗಿಲ್ಲ... ವಾಹನಗಳಿಗೆ ಮಕ್ಕಳ ತುಂಬುವಿಕೆ ಇಳಿದಿಲ್ಲ.
 ಕುಂದಾಪುರದಲ್ಲಿ ನಡೆದ ಅಪಘಾತದಲ್ಲಿ ಓಮಿನಿಯೊಳಗೆ 18 ಮಕ್ಕಳಿದ್ದರಂತೆ!. ಇದು ಸುರಕ್ಷವಲ್ಲ ಎಂದು ಎಲ್ಲರಿಗೂ ಅರವಿದ್ದರೂ ಮತ್ತೆ ಮತ್ತೆ ಅದೇ ತಪ್ಪನ್ನು ದಿನನಿತ್ಯ ಮಾಡುತ್ತಲೇ ಇದ್ದೇವೆ. ಅಂತಹ ಭಯಾನಕ ಸನ್ನಿವೇಶ ನಡೆದ ಮೇಲೂ ನಮ್ಮ ಕಣ್ಣೆದುರೇ ಇಂದಿಗೂ ಅದೆಷ್ಟೋ ಶಾಲಾ ವಾಹನಗಳು ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ. ಇದು ಯಾರ ದುರ್ದೈವವೋ ಯಾರಿಗೂ ತಿಳಿದಿಲ್ಲ... 
ಕಾಯ್ದೆ ಕಾನೂನುಗಳ ತಡಕಾಡಿದಾಗ!!;
ಶಾಲಾ ಮಕ್ಕಳ ಸುರಕ್ಷತೆ ಕುರಿತು ರಾಜ್ಯ ಸರಕಾರ ಸಾಕಷ್ಟು ಹಿಂದೆಯೇ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದರೂ, ಅವುಗಳನ್ನು ಪಾಲಿಸುವಲ್ಲಿ ಶಾಲೆಗಳು ಮತ್ತು ವಾಹನಗಳ ಚಾಲಕರು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ.
ಕಾನ್ವೆಂಟ್ ಸಂಸ್ಕøತಿಯಿಂದಾಗಿ ಹೊಸ ಟ್ರೆಂಡ್ ಎಂಬಂತೆ ಯಾವೊಂದು ಮಕ್ಕಳನ್ನು ಇಂದು ನಡೆದುಕೊಂಡು ಹೋಗಲು ಬಿಡದೆ ಅಟೋದಲ್ಲಿ ಓಮ್ನಿಯಲ್ಲಿ, ಮಿನಿವ್ಯಾನ್‍ಗಳಲ್ಲೇ ಹೆತ್ತವರು ತಿಂಗಳ ಬಾಡಿಗೆ ಕೊಟ್ಟು ಕಳಿಸುತ್ತಿದ್ದಾರೆ. ಬಹುತೇಕ ಭಾಗಗಳಲ್ಲಿ ಮಕ್ಕಳನ್ನು ಯರ್ರಾ ಬಿರ್ರಿ ತುಂಬುವುದು ಮಾಮೂಲಾಗಿದೆ. ಇದು ಅನಿಯಮವಾದರೂ ಹೆಚ್ಚು ಲಾಭಾಂಶ ಪಡೆಯುವ ದೃಷ್ಟಿಯಿಂದ ಖಾಸಗಿ ವಾಹನ ಮಾಲೀಕರು ವಾಹನದ ಗುಣಮಟ್ಟ ಹಾಗೂ ಆಸನಗಳ ಸಾಮಥ್ರ್ಯ ಗಮನಿಸಿದೆ ದುಡ್ಡು ಮಾಡುತ್ತಿದ್ದಾರೆ ಎಂಬುದು ಒಂದೇ ನೋಟಕ್ಕೆ ಅರಿಯುವ ವಿಷಯವಾಗಿದೆ. ನಾ ಕಂಡಂತೆ ಬಹುತೇಕ ಭಾಗಗಳಲ್ಲಿ ಬ್ಯಾಗಗಳನ್ನು ಹೊರಕ್ಕೆ ನೇತಾಕಿ ಮಕ್ಕಳನ್ನು ಕುರಿಗಳಂತೆ ಒಳಗೆ ತುಂಬಿ, ಮಿತಿಮೀರಿದ ವೇಗದಲ್ಲಿ ಚಲಿಸುತ್ತಿರುವ ಶಾಲಾ ವಾಹನವಗಿ ಮಾರ್ಪಾಟಾಗಿರುವ ಆಟೋರಿಕ್ಷಾ, ಓಮಿನಿ, ಇತ್ಯಾದಿಗಳನ್ನು ನೋಡಿದರೆ ಎದೆ ಝಲ್ ಎನ್ನುತ್ತದೆ.
ನಿಯಮಗಳ ಪ್ರಕಾರ, ಶಾಲಾಮಕ್ಕಳನ್ನು ಕೊಂಡೊಯ್ಯುವ ವಾಹನದ ಆಸನಗಳ ಸಾಮಥ್ರ್ಯ 12 ಪ್ಲಸ್ 1 ಮೀರದಂತೆ ಇರಬೇಕು. ಇಷ್ಟಲ್ಲದೇ ನಿಗದಿತ ಆಸನ ಸಾಮಥ್ರ್ಯ ಹೆಚ್ಚಿಸುವಂತೆಯೂ ಇಲ್ಲ. ಆದರೆ, ಸಾರಿಗೆ ನಿಯಮಗಳನ್ನು ಗಾಳಿಗೆ ತೂರುತ್ತಿರುವ  ಖಾಸಗಿ ವಾಹನಗಳು ಮನಸೋ ಇಚ್ಚೆ ಮಕ್ಕಳನ್ನು ತುಂಬುವುದು ಸಾಮಾನ್ಯವಾಗಿದೆ. ಮೋಟಾರು ವಾಹನ 1988ರ ಕಲಂ 74ರ ಪ್ರಕಾರ, ‘ಒಪ್ಪಂದ ವಾಹನ ಕಡ್ಡಾಯವಾಗಿ ರಹದಾರಿ ಹೊಂದಿರಬೇಕು. ಅಲ್ಲದೇ, ಅನುಮೋದಿತ ಸ್ಫೀಡ್ ಗೌರ್ನರ್ ಅಳವಡಿಸಿಕೊಳ್ಳುವ ಮೂಲಕ ವೇಗಮಿತಿ ಗಂಟೆಗೆ 40 ಕಿ.ಮೀ ಮೀರಬಾರದು. ವಾಹನಗಳ ನೊಂದಣಿ 15 ವರ್ಷ ಹಳೆಯದಾಗಿರಬಾರದು. ವಾಹನಗಳಲ್ಲಿ ಕರೆದೊಯ್ಯುವ ಮಕ್ಕಳ ಹೆಸರು, ತರಗತಿ, ಮನೆವಿಳಾಸ, ದೂರವಾಣಿ ಸಂಖ್ಯೆ, ರಕ್ತದ ಗುಂಪು, ಮಾರ್ಗದ ವಿವರ ಪಟ್ಟಿಯನ್ನು ವಾಹನದಲ್ಲಿ ಅಳವಡಿಸಬೇಕು’ ದುರದೃಷ್ಟವೆಂದರೆ, ಬಹುತೇಕ ವಾಹನಗಳಲ್ಲಿ ಈ ನಿಯಮಗಳನ್ನು ಇಂದಿಗೂ ಪಾಲಿಸುತ್ತಿಲ್ಲ.
    ಇಂತಹ ದುರಂತಗಳು ನಡೆದಾಗಲೆಲ್ಲ ವ್ಯವಸ್ಥೆಯ ಲೋಪಗಳು ಕಣ್ಣಿಗೆ ರಾಚುತ್ತವೆ, ಅದನ್ನು ಸರಿಪಡಿಸುವ ಕೂಗು ಮೊಳಗುತ್ತದೆ, ಆರ್.ಟಿ.ಓ ಮಾರ್ಗ ಸೂಚಿಗಳನ್ನು ಪ್ರಕಟಿಸುತ್ತದೆ, ಸಂಚಾರಿ ಪೊಲೀಸರು ಚುರುಕಾಗುತ್ತಾರೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ದೊಡ್ಡ ಗಂಟಲಿನ ಭರವಸೆ ಸಿಗುತ್ತದೆ. ಆದರೆ ಇವೆಲ್ಲವೂ ಒಂದೆರಡು ವಾರಗಳು ಅಷ್ಟೆ!!. ಆನಂತರ ನೀತಿ ನಿಯಮಗಳನ್ನು ಗಾಳಿಗೆ ತೂರುವ ಅರಾಜಕ ಸ್ಥಿತಿ ರಾಜ್ಯಭಾರ ಮಾಡತೊಡಗುತ್ತದೆ. ಕಾನೂನುಗಳು ಇರುವುದೇ ಮುರಿಯುವುದಕ್ಕೆ ಎನ್ನುವ ಮನೋಭಾವ ಬಹುತೇಕರಲ್ಲಿ ರಕ್ತಗತವಾಗಿ ಬಿಟ್ಟಿದೆ. ಇಂಥ ದುರಂತಗಳು ನಡೆದಾಗ ಮಾತ್ರಾ ಅಯ್ಯೋ ಎನ್ನುವ ಉದ್ಗಾರ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎನ್ನುವ ಪ್ರಜ್ಞೆ ಮೂಡುತ್ತದೆ. ಆದರೆ ಇವ್ಯಾವುದು ಅಚಲವಾಗಿ ಬೇರೂರುವುದಿಲ್ಲ.
ಸಂಚಾರ ಪೊಲೀಸರು ಹಾಗೂ ಆರ್.ಟಿ.ಒ ಅಧಿಕಾರಿಗಳು ಕೊಂಚ ಎಚ್ಚರ ವಹಿಸಿದರೆ ಇಂತಹ ದುರಂತಗಳನ್ನು ಸುಲಭವಾಗಿ ನಿವಾರಿಸಬಹುದು. ಕಾಯಿದೆ ಕಾನೂನಿನ ಪಾಲನೆಗಾಗಿ ಮಾಡುವ ಪ್ರತಿನಿತ್ಯದ ಕರ್ತವ್ಯ ನೂರಾರು ಜನರನ್ನು ಬದುಕಿಸುತ್ತದೆ ಎನ್ನುವ ಅರಿವೇ ಈ ಮಂದಿಗಿಲ್ಲ. ಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುವುದರಿಂದ ವೈಯಕ್ತಿಕ ಸುರಕ್ಷತೆಯ ಖಾತ್ರಿ ಜೊತೆಗೆ  ಇನ್ನೊಬ್ಬರ ಜೀವವನ್ನು ಉಳಿಸುತ್ತೇವೆ ಎನ್ನುವ ಭಾವನೆ ಚಾಲಕರಿಗೂ ಇಲ್ಲ.
ಶಾಲಾ ವಾಹನಗಳ ಸುರಕ್ಷತೆ ಕುರಿತು ಎರಡು ವರ್ಷಗಳ ಹಿಂದೆ ಸುಪ್ರಿಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತ್ತು. ‘ಮುಗ್ಧ ಮಕ್ಕಳನ್ನು ದನ-ಕರುಗಳಂತೆ ತುಂಬಿಸಿ ಸಾಗಿಸುವುದು ಅಮಾನವೀಯ. ಗ್ಯಾಸ್ ಸಿಲಿಂಡರ್‍ಗಳ ಮೇಲೆ ಮಕ್ಕಳನ್ನು ಕೂರಿಸುವುದು ಬಾಂಬ್‍ಗಳ ಮೇಲೆ ಕೂರಿಸಿದಂತೆ’ ಎಂದು ತರಾಟೆಗೆ ತೆಗೆದುಕೊಂಡಿತ್ತು. ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಎಲ್ಲಾ ರಾಜ್ಯಗಳಿಗೂ ಅದೇಶಿಸಿತ್ತು. ಕರ್ನಾಟಕ ಹೈಕೋರ್ಟ್ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪೋಲೀಸ್ ಇಲಾಖೆಗೆ ನೊಟೀಸ್ ಜಾರಿ ಮಾಡಿತ್ತು. ಇದರ ಪರಿಣಾಮವಾಗಿ ಶಾಲಾ ವಾಹನಗಳ  ಸುರಕ್ಷತಾ ಮಾರ್ಗ ಸೂಚಿಯನ್ನು ಜಾರಿಗೊಳಿಸಲಾಯಿತು. ಆದರೆ ಅಧಿಕಾರದ ಕೇಂದ್ರ ಬೆಂಗಳೂರಲ್ಲಿ ಇರುವ ಕಾರಣ ಇದರ ಬಗ್ಗೆ ಬೆಂಗಳೂರು ಪೊಲೀಸರು ಒಂದಿಷ್ಟು ಜಾಗರೂಕರಾಗಿರುವುದನ್ನು ಹೊರತು ಪಡಿಸಿದರೆ ರಾಜಧಾನಿಯಿಂದಾಚೆಗೆ ಮಾರ್ಗ ಸೂಚಿಗಳು ಯಾವಾಗಲೂ ದಿಕ್ಕು ತಪ್ಪಿದ ಸ್ಥಿತಿಯಲ್ಲೇ ಇವೆ.

ಏನ್ಮಾಡಬಹುದು!?:
ಕಾಯ್ದೆಗಳು ಏನನ್ನೇ ಸಾರಲಿ. ಮಕ್ಕಳ ಸುರಕ್ಷತೆ ಎನ್ನುವುದು ಶಾಲೆ ಮತ್ತು ಮಕ್ಕಳ ಪೋಷಕರ ಜವಾಬ್ಧಾರಿಯಾಗಿರುತ್ತದೆ. ಕೆಲ ಪೋಷಕರು ವಾಹನಗಳನ್ನು ಪರೀಕ್ಷೆ ಮಾಡದೆಯೇ ಮಕ್ಕಳನ್ನು ಕಳಿಸುತ್ತಾರೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಆಟೋ, ಓಮಿನಿಗಳಂತಹ ವಾಹನಗಳನ್ನು ಪೋಷಕರು ವಿರೋಧಿಸಬೇಕು. ಪೋಷಕರು ವಿರೋಧಿಸಿದರೆ ಇಂತಹ ವಾಹನಗಳನ್ನು ಶಾಲೆಗಳು ನಿಯೋಜಿಸುವುದಿಲ್ಲ.
ಮಕ್ಕಳ ಸುರಕ್ಷತೆಗೆ ಒತ್ತು ನೀಡುವುದು  ಆಡಳಿತ ಮಂಡಳಿಗಳ ನೈತಿಕ ಹೊಣೆ. ಆದರೆ, ಇದರಿಂದ ನುಣುಚಿಕೊಳ್ಳುವ ಶಾಲೆಗಳು, ಮಕ್ಕಳನ್ನು ಶಾಲೆಗೆ ಕರೆತಂದು, ಮನೆಗೆ ಬಿಡುವ ಕೆಲಸವನ್ನು ಖಾಸಗಿ ವಾಹನಗಳಿಗೆ ವಹಿಸಿವೆ. ಇದರಿಂದ ಮಕ್ಕಳ ಸುರಕ್ಷತೆಯ ಪ್ರಶ್ನೆಗೆ ಉತ್ತರವೇ ದೊರಕುತ್ತಿಲ್ಲ. ಇದನ್ನು ಮೊದಲು ನಿಲ್ಲಿಸಬೇಕು.
ಈ ಬಗ್ಗೆ ಕಳೆದ ಒಂದು ವರ್ಷದಲ್ಲಿ ಅಧಿಕಾರಿಗಳು ಜಪ್ತಿಗಿಳಿದಾಗ 61 ವಾಹನಗಳು ದೊರಕಿದರೂ ವ್ಯವಸ್ಥೆ ಸುಧಾರಿಸಿಲ್ಲ. ಹೆಚ್ಚಾಗಿ ನಗರವ್ಯಾಪ್ತಿಯೊಳಗೆ ಮಾತ್ರಾ ನಡೆಯುತ್ತಿರುವ ಈ ಕಾರ್ಯಾಚರಣೆ ರಾಜ್ಯದ ಮೂಲೆ ಮೂಲೆಯಲ್ಲೂ ನಡೆಯಬೇಕಾದ ಅವಶ್ಯಕತೆ ಇದೆ.
ಇನ್ನಾದರೂ ಎಚ್ಚೆತ್ತುಕೊಳ್ಳಿ;
ಲಾಭದಾಸೆಯಿಂದ ಸ್ಕೂಲು ಕಾಲೇಜುಗಳು  ಸುರಕ್ಷತೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಎಲ್ಲವನ್ನು ಗಾಳಿಗೆ ತೂರಿ ಮುಗ್ಧ ಮಕ್ಕಳ  ಜೀವದ ಜೊತೆ ಚೆಲ್ಲಾಟವಾಡುವ ಈ ಕ್ರೂರ ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಕಷ್ಟವಾದರೂ ಸರಿ ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಟ್ಟು ನಿಟ್ಟಾಗಿ ಸದಾ ಪಾಲಿಸಬೇಕು. ಸತ್ತ ಮಕ್ಕಳ ನೋಟ, ಅವರ ಪಾಲಕರ ಕಣ್ಣೀರು ಅಧಿಕಾರಿಗಳು ಮತ್ತು ಸಾರ್ವಜನಿಕರ ಆತ್ಮಸಾಕ್ಷಿಗೆ ಮಾರ್ಗದರ್ಶನವಾಗಬೇಕು.
ಒಮ್ಮೆ ಅಲೆ ಅಪ್ಪಳಿಸಿದಂತೆ ಕೂಗಾಡಿ-ರೇಗಾಡಿ ಸುಮ್ಮನಾಗಬಾರದು. ಅಲೆ ಪದೇ ಪದೇ ನಿಧಾನವಾದರೂ ದಡಮುಟ್ಟುವ ಕಾಯಕ ಮಾಡುತ್ತಲೇ ಇರುತ್ತದೆ ಅದರಂತೆ ನಾವುಗಳು ಈ ಅವ್ಯವಸ್ಥೆ ಸರಿಯಾಗುವವರೆಗೂ ಹೋರಾಟವನ್ನು ನಡೆಸುತ್ತಲೇ ಇರಬೇಕು.

ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ವಹಿಸಬೇಕಾದ ಎಚ್ಚರಿಕಾ ಕ್ರಮಗಳ ಬಗ್ಗೆ ಇಲಾಖಾ ವತಿಯಿಂದ ಪದೇ ಪದೆ ಸೂಚಿಸಲಾಗುತ್ತಿದೆ. ಈ  ನಿಯಮಗಳನ್ನು ಶಾಲಾ ಆಡಳಿತ ಮಂಡಳಿಗಳು ಮತ್ತು ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನ ಮಾಲೀಕರು ಕಟ್ಟು ನಿಟ್ಟಾಗಿ ಪಾಲಿಸಬೇಕು. ನಿಯಮ ಮೀರಿದರೆ ಕಾನೂನು ಕ್ರಮ ಅನಿವಾರ್ಯ.


- ಎನ್.ಎಸ್. ಮೇಘರಿಖ್
ನಗರ ಪೋಲೀಸ್ ಕಮಿಷನರ್






ಸುಪ್ರೀಂ ಕೋರ್ಟ್ ಮತ್ತು ಶಿಕ್ಷಣ ಇಲಾಖೆ ಹೊರಡಿಸಿದ ಸುರಕ್ಷತಾ ಕ್ರಮಗಳೇನು ಗೊತ್ತಾ!?
ಶಾಲಾ ವಾಹನಗಳ ಮೇಲೆ ಶಾಲೆಯ ಹೆಸರು ಮತ್ತು ದೂರವಾಣಿ ಸಂಖ್ಯೆ ಬರೆದಿರಬೇಕು.
ಶಾಲಾ ವಾಹನಗಳ ಕಿಟಕಿಗಳಿಗೆ ಗ್ರಿಲ್‍ಗಳನ್ನು ಅಳವಡಿಸಿರಬೇಕು.
ವಾಹನಗಳಲ್ಲಿ ಪ್ರಾಥಮಿಕ ಚಿಕಿತ್ಸೆಯ ಕಿಟ್‍ಬ್ಯಾಗ್ ಇಟ್ಟಿರಬೇಕು.
ಅಗ್ನಿ ಅವಘಡ ತಪ್ಪಿಸುವ ಸಲಕರಣೆ ಶಾಲಾ ವಾಹನಗಳಲ್ಲಿ ಇರಬೇಕು.
ಸಿಲಿಂಡರ್‍ಗಳನ್ನು ಶಾಲಾ ವಾಹನಗಳಿಗೆ ಅಳವಡಿಸಿದ್ದರೆ ಸಂಬಂಧಪಟ್ಟ ಅಗ್ನಿ ಶಾಮಕ ಇಲಾಖೆಯಿಂದ ಪರವಾನಗಿ ಪಡೆದಿರಬೇಕು.
ಎಲ್‍ಪಿಜಿ ಅಳವಡಿಸಿರುವ ಜಾಗದಲ್ಲಿ ಸೀಟುಗಳನ್ನು ಅಳವಡಿಸಿರಬಾರದು.
ವೇಗ ನಿಯಂತ್ರಕಗಳನ್ನು ಅಳವಡಿಸಿರಬೇಕು, 40 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಓಡಿಸಬಾರದು.
ಪ್ರತಿ ಶಾಲಾ ವಾಹನಗಳಲ್ಲೂ ಮಹಿಳಾ ಅಟೆಂಡರ್, ವಾಹನಗಳಲ್ಲಿ ಸಿಸಿಟಿವಿ ಮತ್ತು ಜಿಪಿಎಸ್ ನಿರ್ವಹಣೆ ಇರಬೇಕು.
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕರೆದೊಯ್ಯುವ ವಾಹನಗಳಲ್ಲಿ ಒಟ್ಟು ಸೀಟು ಸಾಮಥ್ರ್ಯಕ್ಕಿಂತ ಶೇ.50ರಷ್ಟು ಮಕ್ಕಳನ್ನು ಮಾತ್ರಾ ಹೆಚ್ಚಿಗೆ ಕೂರಿಸಬಹುದು.
ಬ್ಯಾಗ್‍ಗಳನ್ನು ಶಾಲಾ ವಾಹನದ ಹೊರಗೆ ನೇತು ಹಾಕದೆ ವಾಹನದಲ್ಲೇ ಪ್ರತ್ಯೇಕ ವ್ಯವಸ್ಥೆ ಕಲ್ಪಸಿರಬೇಕು.
ಶಾಲಾ ವಾಹನ ಚಾಲಕರ ಪೂರ್ವಾಪರ ಇತಿಹಾಸವನ್ನು ಪೊಲೀಸ್ ಇಲಾಖೆ ಮೂಲಕ ಪರಿಶೀಲಿಸಬೇಕು.
ಚಾಲನಾ ಪರವಾನಗಿ ಪಡೆದು ಕನಿಷ್ಠ 5 ವರ್ಷ ಚಾಲನಾ ಅನುಭವ ಹೊಂದಿದವರಾಗಿರಬೇಕು.
ವಾಹನ ಚಾಲಕರು ಶಾಲಾ ಆವರಣಕ್ಕೆ ಅನಗತ್ಯವಾಗಿ ಪ್ರವೇಶಿಸುವುದು, ಮಕ್ಕಳ ಜತೆ ಸಲುಗೆ ಬೆಳೆಸಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು.
ಬಸ್ಸಿನ ಮೆಟ್ಟಿಲುಗಳ ಎತ್ತರ ಮಕ್ಕಳಿಗೆ ಎಟುಕುವಂತಿರಬೇಕು.
ಗುರುತಿನ ಚೀಟಿ ತರುವ ಪೋಷಕರ ಕೈಗೆ ಮಾತ್ರ ಮಕ್ಕಳನ್ನು ವಹಿಸಬೇಕು.