Friday, 6 May 2016

ಸಿರಿ ಬುಲೆಟ್-‘ಧರ್ಮೋ ರಕ್ಷತಿ ರಕ್ಷಿತಃ’


ಧರ್ಮಗಳ ಧ್ವಂಧ್ವ...


 ಒಂದಿಷ್ಟು ಧ್ವಂಧ್ವ ನಿಲುವುಗಳಿವೆ...
     ಮತ ಧರ್ಮಗಳ ನೆಲೆಯಲ್ಲಿ ನಿಂತರೆ ಪ್ರಮುಖವೆನಿಸಿರುವ ಒಂದೊಂದು ಮತಗಳು ಒಂದೊಂದು ಇತಿಹಾಸ ನೀಡುತ್ತವೆ. ಪ್ರಸಿದ್ಧ ಇತಿಹಾಸಕಾರ  ಇ.ಎಚ್ ಕಾರ್, ‘ಇತಿಹಾಸವೆನ್ನುವುದು ಕೆಲವೊಮ್ಮೆ ಅಂತಿಮ ಸತ್ಯದ ಅನಸ್ತಿತ್ವ ಎನ್ನುವ ನೆಲೆಯಲ್ಲಿ ಐಕ್ಯವಾಗುವುದರಿಂದ ವಾದ ವಿವಾದಗಳು ಸರ್ವೇಸಾಮಾನ್ಯವಾಗಿ ಹಾಸುಹೊಕ್ಕಾಗುತ್ತವೆ’ ಎನ್ನುತ್ತಾರೆ. ಬಹುಶಃ ಧರ್ಮಗಳ ನೆಲೆಯೂ ಅಂತಿಮದಲ್ಲಿ ಧ್ವಂಧ್ವವಾಗಿ ಅನಸ್ತಿತ್ವ ಎನಿಸುವುದರಲ್ಲಿ ಯಾವ ಸಂಶಯವಿಲ್ಲ...
ಹುಟ್ಟಿರುವ ಪ್ರತಿ ಮನುಷ್ಯನೂ ತನ್ನದೇ ಜಾತಿ, ಮತ, ಧರ್ಮ, ಸ್ವಭಾವ ಹೊಂದುತ್ತಾನಾದರೂ, ವಿಶ್ವಕ್ಕೆ ಯಾವ ಮತ ಸೂಕ್ತ!?, ಅಂತಿಮವಾಗಿ ವಿಶ್ವ ಯಾವ ಮತಕ್ಕೆ ಸೇರಿದ್ದು!?, ಇತ್ಯಾದಿಗಳ ಬಗ್ಗೆ ಯಾರಲ್ಲಿಯೂ ಉತ್ತರವಿಲ್ಲ. ಒಂದೊಂದು ದೇಶದಲ್ಲಿ ಒಂದೊಂದು ಮತ ಪ್ರಬಲವಾಗಿರುತ್ತೆ. ಸರಿದೂಗಿಸಿ ನೋಡಿದರೆ ಯಾರೂ ಮೇಲಲ್ಲ-ಕೀಳಲ್ಲ. ಎಲ್ಲರೂ ಒಂದೇ. ಆದರೆ ವೈಯಕ್ತಿಕವಾದ ಧರ್ಮ ಜಾತಿ, ಮತ, ಸ್ವಾಭಾವದಂತೆ ಧ್ವಂಧ್ವಗಳ ನೆಲೆಯಲ್ಲಿ ಧರ್ಮಗಳ ಮೇಲುಕೀಳನ್ನು ತೂಗುಹಾಕಬಹುದಾ!? ಎನ್ನುವುದೇ ಎಲ್ಲರೂ ಇಂದು ಅರಿಯಬೇಕಾಗಿರುವ ಅಧ್ಯಯುತ ಪ್ರಶ್ನೆ...
ಒಂದಿಷ್ಟು ಧರ್ಮೀಯರ ಪಂಗಡಗಳಿವೆ, ಒಂದಿಷ್ಟು ವಾದಕ್ಕಿಳಿಯುವ ತಂಡಗಳಿವೆ,  ಸೋಷಿಯಲ್ ಮೀಡಿಯಾಗಳಲ್ಲಂತೂ ಜಗಳವಾಡುತ್ತಾ, ನಾಗರೀಕತೆ ಮರೆತು ಕಚ್ಚಾಡುವ ಗುಂಪುಗಳಿವೆ. ಅವರವರಿಗೆ ಅವರವರ ಮಾತುಗಳು, ನಿಲುವುಗಳೇ ದೊಡ್ಡದು. ವಿಪರ್ಯಾಸವೆಂದರೆ, ಎರಡು ಪಂಥೀಯರು ಕಚ್ಚಾಡುತ್ತಾರೆ ಆದರೆ ಸೋಲುವುದಿಲ್ಲ...
ನನಗೂ ಗೊತ್ತು!!, ಆಧುನಿಕ ಜಗತ್ತಿನಲ್ಲಿ ಬದಲಾಗುತ್ತಿರುವ ಸಮಾಜದಲ್ಲಿ ಜನರ ಆದ್ಯತೆಗಳು ಬದಲಾವಣೆ ಆಗುತ್ತಿರುವಂತೆ ಸಾಮಾಜಿಕ ವ್ಯವಸ್ಥೆಗಳಲ್ಲಿ, ಧಾರ್ಮಿಕ ವ್ಯವಸ್ಥೆÉಗಳಲ್ಲಿ, ಹಾಗೂ ಪ್ರತಿಯೊಬ್ಬರ ಅಭಿವ್ಯಕ್ತ್ತ ಸ್ವಾತಂತ್ರ್ಯಗಳಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಎಲ್ಲವೂ ಮೇಲ್ನೋಟಕ್ಕೆ ಬದಲಾದಂತೆ ಕಂಡರೂ, ಒಳಗೆ ಬೆಂಕಿ ಉರಿಯುತ್ತಲೇ ಇರುತ್ತದೆ. ಅವಕಾಶವಾದಾಗಲೆಲ್ಲ ತನ್ನ ನಾಲಗೆಯನ್ನು ಚಾಚುತ್ತಾ ಸಮಾಜದಲ್ಲಿ ಅಸಹನೆಯನ್ನು ಸೃಷ್ಟಿಸುತ್ತಲೇ ಇರುತ್ತದೆ. ಧರ್ಮದ ಆಚರಣೆಗಳು ಸಿದ್ಧಾಂತಗಳು ಯಾವ ಕಾಲಕ್ಕೂ ಬದಲಾಗಲಾರದೇನೋ, ಅನ್ನುವಷ್ಟು ಜಿಡ್ಡುಗಟ್ಟಿದೆ. ಮೂಲಭೂತವಾದಿ ಮನಸ್ಸುಗಳಿಗೆ ಬದಲಾವಣೆ ಬೇಕಿಲ್ಲ. ಅದಕ್ಕೆಂದೇ ಸ್ಥಾಪಿತ ಹಿತಾಸಕ್ತಿಗಳ ಮೂಲಕ ಸದಾ ಕಾಲಕ್ಕೂ ಅದನ್ನು ಜೀವಂತವಾಗಿಡಲು ಯತ್ನಿಸುತ್ತಲೇ ಇದೆಯಾದ್ದರಿಂದ ಬದಲಾವಣೆಯ ನಿಯಮ ಅದಕ್ಕೆ ಅನ್ವಯಿಸದೆಂದು ವಿಷಾದದಿಂದಲೇ ಹೇಳಬೇಕಾಗಿದೆ...

     ಪ್ರಮುಖ ಮೂರು ಧರ್ಮಗಳನ್ನೇ ಕೈಗೆತ್ತಿಕೊಂಡರೆ :

ಮೊದಲನೆಯದು ಹಿಂದೂ ಧರ್ಮ:
            ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮವಾಗಿದ್ದು, ಅದು ಅನುಯಾಯಿಗಳಿಂದ ಹಲವು ವೇಳೆ ಶಾಶ್ವತ ಧರ್ಮವೆಂಬ ಅರ್ಥವನ್ನು ಕೊಡುವ ಸಂಸ್ಕøತ ಪದಗುಚ್ಚವಾದ ‘ಸನಾತನ’ ಧರ್ಮವೆಂದು ನಿರ್ಧೇಶಿಸಲ್ಪಡುತ್ತದೆ. ಸಂಕೀರ್ಣದೃಷ್ಟಿಗಳ ವೈವಿಧ್ಯಕ್ಕೆ ಸ್ಥಳ ಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ ಪ್ರಕಾರಗಳು, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ, ವೈಷ್ಣವ ಪಂಥದಲ್ಲಿರುವÀ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ‘ಭಗವದ್ಗೀತೆ’ಯನ್ನು ಆರಾಧಿಸುವ ಹಿಂದೂಗಳು ಯೋಗಿಕ ಸಂಪ್ರದಾಯ ಮತ್ತು ಕರ್ಮದ ಕಲ್ಪನೆಯನ್ನು, ಆಧರಿಸಿ ದೈನಿಕ ಸದಾಚಾರದ ವಿಶಾಲವಾದ ವೈವಿಧ್ಯದಿಂದ ಹಿಂದೂ ಧರ್ಮವು ಏಕದೇವತಾವಾದ, ಬಹುದೇವತಾವಾದ, ಸರ್ವದೇವತಾವಾದ, ಸರ್ವಬ್ರಹ್ಮವಾದ, ಅಧ್ವೈತವಾದ ಮತ್ತು ನಿರೀಶ್ವರವಾದಗಳಿಗೆ ವ್ಯಾಪಿಸುವ ನಂಬಿಕೆಗಳುಳ್ಳ ಕಲ್ಪನೆ ಈ ಧರ್ಮದಲ್ಲಿದ್ದು, ಉತ್ಕನನ ಅಧ್ಯಯನಗಳ ಪುರಾವೆಯಂತೆ ಕಿ.ಪೂ 5000 ವರ್ಷಗಳಿಗಿಂತ ಹಿಂದಿನದೆಂದು ಹೇಳಲಾಗುತ್ತದೆ.
ಎರಡನೆಯದಾಗಿ ಕ್ರೈಸ್ತ ಧರ್ಮ:
               ಕ್ರೈಸ್ತ ಧರ್ಮ ಏಸುಕ್ರಿಸ್ತನ ಜೀವನ ಮತ್ತು ಉಪದೇಶಗಳ ಮೇಲೆ ಆಧಾರಿತವಾದ, ಏಕದೇವತಾವಾದವನ್ನು ಅನುಸರಿಸುವ ಧರ್ಮಗಳಲ್ಲಿ ಒಂದು. 2001ರ ಅಂದಾಜಿನ ಪ್ರಕಾರ ಪ್ರಪಂಚದಲ್ಲಿ 2.1 ಬಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಜಗತ್ತಿನ ಅತೀ ದೊಡ್ಡದು ಎಂದು ಕ್ರೈಸ್ತರು ವಾದಿಸುತ್ತಾರೆ. ಐತಿಹ್ಯ ನೋಡಿದರೆ ಈ ಧರ್ಮಕ್ಕೆ 2000 ವರ್ಷಗಳ ಇತಿಹಾಸವಿದೆ. ‘ಜಗತ್ತಿಗೆ ಒಂದೇ ಧರ್ಮ, ಒಂದೇ ದೇವರು, ಅವರೇ ನಮ್ಮ ಏಸು’ ಎನ್ನುವ ಕ್ರೈಸ್ತ ಧರ್ಮೀಯರು ‘ಪವಿತ್ರ ಬೈಬಲ್’ನ ಕಟ್ಟು ಪಾಡಿನಲ್ಲಿ ಬದುಕುತ್ತಾ, ತಮ್ಮ ಪಂಗಡವನ್ನು ಬೆಳೆಸುತ್ತಾ ಮತ ಮಾಂತ್ರಿಕರಾಗಿದ್ದಾರೆ.

ಮೂರನೇಯದು ಇಸ್ಲಾಂ ಧರ್ಮ :
           ಅಲ್ಲಾನ ಅನುಸರಣೆ ಮಾಡುವುದು, ಆತನಿಗೆ ವಿಧೇಯತೆ ತೋರುವುದು ಮತ್ತು ಸರ್ವಸ್ವವನ್ನು ಆತನಿಗಾಗಿ ಸಮರ್ಪಿಸುವುದು  ಇಸ್ಲಾಂಮಿಕ್ ಗುಣ ಧರ್ಮಗಳಲ್ಲೊಂದು. ‘ಈ ಭೂಮಿಯ ಸೃಷ್ಟಿಕರ್ತ ಅಲ್ಲಾ, ನಮ್ಮದು ಏಕದೇವವಿಶ್ವಾಸ, ಅದುವೆ ನಮ್ಮ ಮೂಲಮಂತ್ರ, ವಿಶ್ವದ ಅಧಿಪ ಅವನೇ’ ಎನ್ನುವ ಇವರು ‘ಕುರಾನ್’  ಗ್ರಂಥದ ಮಾರ್ಗದರ್ಶನದಲ್ಲಿ ಧರ್ಮ ಪರಿಪಾಲನೆಯಲ್ಲಿರುತ್ತಾರೆ.

    ಮೇಲಿನ ಮೂರು ಧರ್ಮಗಳಲ್ಲಿ ಅನೇಕಾನೇಕ ಉಪಧರ್ಮಗಳಿದ್ದರೂ, ಉಪಜಾತಿಗಳ ಮೂಲ ಮೇಲಿನ ಮೂರರಲ್ಲಿ ಒಂದಾಗಿರುತ್ತದೆ. ಎಲ್ಲರಲ್ಲಿಯೂ ಅವರದೇ ಕಟ್ಟುಪಾಡುಗಳಿರುತ್ತವೆ, ಧ್ಯೇಯಗಳಿರುತ್ತವೆ, ಪೂರ್ವಜರು ಹಾಕಿಕೊಟ್ಟ ಮಾರ್ಗಗಳಿರುತ್ತವೆ. ಮೂರು ಧರ್ಮಿಯರಲ್ಲೂ ಬೇರೆ ಬೇರೆ ದೇವರುಗಳಿವೆ, ಶಾಂತಿಯಿದೆ, ಹಿಂಸೆಯಿದೆ, ಕ್ರೌರ್ಯವಿದೆ, ಭೀಭತ್ಸವಿದೆ. ಒಂದು ಧರ್ಮೀಯರಿಗೆ ಇನ್ನೊಂದು ಧರ್ಮ ಆಗಲ್ಲ. ಅವರು ಮಾಡಿರುವುದು ಇವರಿಗೆ ಸರಿ ಎನಿಸಲ್ಲ. ಮೊದಲೇ ಹೇಳಿದ ಪದದಂತೆ ಅಂತಿಮ ಸತ್ಯದ ಅನಸ್ತಿತ್ವದ ವಾದದಲ್ಲಿ ಧರ್ಮಗಳು ಧ್ವಂಧ್ವಕ್ಕೆ ಸಿಲುಕಿ ಸಂಕಷ್ಟಗೊಳಿಸುವುದು ಹೀಗೆಯೇ ಅಲ್ವಾ...

         
 ನಮ್ಮದೇ ದೇಶದ ವಿಚಾರಕ್ಕೆ ಬಂದರೆ 5000 ವರ್ಷಗಳಿಗಿಂತಲೂ ಹಳೆಯದಾದ ಹರಪ್ಪ ಮೊಹಂಜೋದಾರೋ ಸಂಸ್ಕøತಿ ಚಿಮ್ಮಿದಾಗ ಹಿಂದುಗಳಿಗೆ ಸುವರ್ಣ ಸಂಭ್ರಮದ ಗರಿ ಮೂಡುತ್ತದೆ!.. ತಮ್ಮ ಅನುಯಾಯಿಗಳ ಬಳಗ ದೊಡ್ಡದಾಗಿ ಬೆಳೆಯುತ್ತಿದೆ, ಕೋಟಿಗೆ ಮೀರಿದೆ ಅಂದೆನಿಸುತ್ತಿರುವಾಗ ಕ್ರೈಸ್ತರು ಅಂಕೆ ಮೀರಿದ್ದಕ್ಕೆ ಖುಷಿಯಾಗುತ್ತಾರೆ!.. ತಮ್ಮ ಪ್ರಾಬಲ್ಯದಲ್ಲಿ ಇನ್ನೊಬ್ಬರನ್ನು ಹತೋಟಿಗೆ ತೆಗೆದುಕೊಂಡು ಊರಿಗೆ ಊರನ್ನೆ ಬೆಳೆಸಿಕೊಳ್ಳುತ್ತಿರುವಾಗ ಮುಸ್ಲಿಂಮರು ಮಜವಾಡುತ್ತಾರೆ!..
ಐತಿಹಾಸಕವಾಗಿ ನೋಡೋದಾದರೆ ಭಾರತದ ಬಗ್ಗೆ ಮಾತನಾಡುವಾಗ ಹಿಂದುತ್ವ ಬಿಟ್ಟು ಮಾತನಾಡಲಾಗುವುದಿಲ್ಲ. ಯಾಕೆಂದರೆ ಈ ಧರ್ಮದ ಉಗಮವಾಗಿದ್ದೇ ಭರತಖಂಡದಲ್ಲಿ. ಇಲ್ಲಿ ಹಿಂದೂ ಧರ್ಮವೇ ಉಪಖಂಡದ ಪ್ರಧಾನ ಎಂದರೆ ತಪ್ಪಿಲ್ಲ. ಬೌದ್ಧ ಜೈನ ಪಂಥಗಳ ದೇವತೆಗಳು, ಪುರಾಣಗಳು, ದೇವಾಲಯಗಳಲ್ಲಿ ಹಿಂದೂ ಧರ್ಮದ ಸಾಮ್ಯತೆ ಪ್ರಭಾವಗಳು ಧಾರಾಳವಾಗಿ ಕಾಣುತ್ತವೆ. ಧರ್ಮದ ಉದಾತ್ತತೆಯಲ್ಲಿ ಹಿಂದುತ್ವ ದೊಡ್ಡದಾದರೂ, ಅನೇಕ ಮಹಾನುಭಾವರೇ ಹಿಂದೂ ಜಾತಿ, ಹಿಂದೂ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ಮರೆಯುತ್ತಾ ಅದನ್ನು ಅಪಮೌಲ್ಯಗೊಳಿಸುತ್ತಿದ್ದಾರೆ. ಧರ್ಮಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆ. ನಾವೇ ಸೃಷ್ಠಿಸಿಕೊಂಡಿದ್ದನ್ನು, ಕಚ್ಚಾಡಿಕೊಂಡು ಕೊಲ್ಲುತ್ತಿದ್ದೇವೆ!!. ಜಗತ್ತನ್ನು ಮಾರ್ಮಿಕವಾಗಿ ನೋಡಿದರೆ ಎಲ್ಲವೂ ಒಂದೇ ಎನಿಸುತ್ತೆ.., ಕಣ್ಮುಚ್ಚಿದರೆ ಶೂನ್ಯ ಅಡ್ಡಾಡುತ್ತೆ!!. ಇದು ಏಟು ನೀಡುತ್ತಿರುವುದು ಅವರವರ ಪರಂಪರೆಗೆ, ಸಂಸ್ಕøತಿಗೆ!!.

          ಭಾರತೀಯ ಪರಂಪರೆಯನ್ನು ಯಾವುದೋ ಒಬ್ಬ ಚಕ್ರವರ್ತಿ, ಒಬ್ಬ ಮಹರ್ಷಿ, ಒಬ್ಬ ಖಾನ್, ಒಬ್ಬ ಪ್ರವಾದಿ ಕಟ್ಟಿಕೊಟ್ಟಿದ್ದಲ್ಲ!. ಅದು ಕೆಲವೇ ಮೇಲ್ವರ್ಗದ ಸ್ವತ್ತೂ ಅಲ್ಲ!. ವೇದಗಳಲ್ಲಿ ಉಲ್ಲೇಖಿತವಾಗಿರುವಂತೆ ಅದು ಪ್ರತಿಯೊಂದು ವರ್ಗದ, ವರ್ಣದ ಮಾನವನ ಕೊಡುಗೆ...

ಗೋಪಾಲಕೃಷ್ಣ ಅಡಿಗರು ಹೇಳುವಂತೆ..,
“ಇದು ಬಾಳು ನೋಡು, ಇದ ತಿಳಿದೆನೆಂದರೂ,
ತಿಳಿದ ಧೀರನಿಲ್ಲ
ಹಲವು ತನದ ಮೈಮರೆಸುವಾಟವಿದು
ನಿಜವೂ ತೋರದಲ್ಲ...”


ನಿಜವಾಗಿಯೂ ಹೌದು ಎನಿಸುತ್ತಿದೆ. ಈ ಧ್ವಂಧ್ವಗಳು ಹೀಗೆ ಮುಂದುವರಿಯುತ್ತಿದ್ದರೆ ನಾವು ನಾವೇ ಕಚ್ಚಾಡುತ್ತಾ ಸಾಯಬೇಕಾಗುತ್ತದೆ!. ಇದು ಬಾಳು, ಇಲ್ಲಿ ಎಲ್ಲ ತಿಳಿದ ಧೀರನಿಲ್ಲ, ಎಲ್ಲ ಕಂಡರೂ ಯಾವುದು ಅಂತಿಮ ನಿಜವಲ್ಲ, ಮೈಮರೆಸುವಾಟವಷ್ಟೇ..!

      ಸನಾತನ ಪರಂಪರೆಯನ್ನು ಹೊಂದಿರುವ ಭಾರತ ದೇಶದಲ್ಲಿ ಅನೇಕ ಧಾರ್ಮಿಕ ಪಂಥಗಳಿವೆ. ಅದಕ್ಕನುಸಾರವಾಗಿ ಜನರು ಅವರಿಗಿಷ್ಟವಾದ ಧರ್ಮವನ್ನು ಅವರದ್ದೇ ಚೌಕಟ್ಟಿನಲ್ಲಿ ಅನುಸರಿಸಿಕೊಂಡು ಬರುತ್ತಿದ್ದಾರೆ. ಅದಕ್ಕೆ ಯಾವ ಅಭ್ಯಂತರವೂ ಇಲ್ಲ. ದೇಶದ ಸಂವಿಧಾನದಲ್ಲೂ  ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಸಮಸ್ಯೆ ಇರುವುದು ಅದರಲ್ಲಲ್ಲ. ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾದ ಕ್ರಿಯೆಗಳು ಸಾರ್ವತ್ರಿಕವಾಗಿ ವ್ಯಕ್ತವಾಗುವ ಹೇರಿಕೆಯಂತಹ ಕೃತ್ಯಗಳು ನಡೆದಾಗ, ಪ್ರಶ್ನಿಸುವ ಅನಿವಾರ್ಯ ಕೈಗೊಂಡಾಗ, ಮತ್ತೆ ಜಾತಿ, ಧರ್ಮ, ಪಂಥಗಳ ಮಾತು ಕೇಳಿ,ತಿಳುವಳಿಕೆ ಹೊಂದಿದವರನ್ನೂ, ಅವಿವೇಕರನ್ನಾಗಿಸಿ ಮತ್ತೆ ಧ್ವಂಧ್ವಕ್ಕೆ ಸಿಲುಕಿಸುತ್ತವೆ!.. ಒಂದು ಮಾತು ನಿಜ... ಮುಂದಿನ ದಿನಗಳಲ್ಲಿ ನಾವು ಕಟ್ಟಿಕೊಂಡಿರುವ ಧರ್ಮಗಳನ್ನು ಧರ್ಮಗಳೇ ರಕ್ಷಿಸಬೇಕಾಗಿದೆ...
ಹುಷಾರಾಗಿರಿ...ನಿಮ್ಮ ಧರ್ಮದ ವಿಚಾರಕ್ಕೆ ಯಾರಾದರು ಬಂದರೆ ನಿಮಗೂ ಸಿಟ್ಟು ಬರಬಹುದು!!.

Sunday, 3 April 2016

ನನ್ನಂತರಂಗದ ಹಾಯ್ಕುಗಳು



ವಾಟ್ ಇಸ್  ದಿಸ್!...
           ತೀರಾ ಮೊನ್ನೆ ಮೊನ್ನೆಯವರೆಗೂ ನಾರ್ಮಲ್ ಆಗಿದ್ದೆ. ಸಣ್ಣ ಮೈ ಕೈ ನೋವು ಬಂದಂತಾಯ್ತು. ನೋವಿನೊಂದಿಗೆ ಜ್ವರವೂ ಅಡಿ ಇಡುವುದು ಯಾಕೋ ಖಾತ್ರಿಯಾಯಿತು. ನಮ್ಮಂಥವರಿಗೆ ಪ್ರಥಮ ಚಿಕಿತ್ಸೆ ‘ಮೆಡಿಕಲ್ ಅಲ್ವಾ’ ಎನ್ನುತ್ತಾ, ಜ್ವರ, ಮೈ-ಕೈ ನೋವಿಗೊಂದು ಮಾತ್ರೆ ಕೊಡಿ ಎಂದು ಗುಳಂ! ಸ್ವಾಹ ಮಾಡಿದೆ. ಮಾತ್ರೆ ಕೊಟ್ಟವಳ ಕೈಗುಣವೋ ಏನೋ ಯಾವುದು ಬರಬಾರದೆಂದು ಮಾತ್ರೆ ನುಂಗಿದ್ದೇನೋ ಅದಷ್ಟೇ ಅಲ್ಲದೇ ಸಹಪರಿವಾರದಲ್ಲಿರುವ ಎಲ್ಲಾ ಖಾಯಿಲೆ ಮಿತ್ರರು ಪ್ರೀತಿಯಿಂದ ಬಾಚಿ ತಬ್ಬಿಕೊಂಡರು. ಒತ್ತಡದಲ್ಲೇ ಒಂದೆರಡು ದಿನ ಆಫೀಸ್ ಕೆಲಸವೂ ಆಯ್ತು. ಗಂಟಲಲ್ಲಿ ಊಟ ಅಲ್ಲ ನೀರಿಳಿಯುವುದೇ ಕಷ್ಟ ಎನಿಸಿತು. ದ್ವಿತೀಯಾರ್ಧ ಚಿಕಿತ್ಸೆ ಎಂಬಂತೆ ಪಕ್ಕದಲ್ಲೇ ಇದ್ದ ಹೊಸ್ಪಿಟಲ್‍ಗೆ ಓಡಿದೆ. ಒಂದು ಇಂಜೆಕ್ಷನ್ ಕೊಟ್ಟು, ‘ಹೋಗುತ್ತೆ ಬಿಡಿ ಏನೂ ಪ್ರಾಬ್ಲಂ ಇಲ್ಲ, ಟ್ಯಾಬ್ಲೇಟ್ ತಗೋಳಿ’ ಅಂದ್ರು. ಆಯ್ತೆಂದು ಮಾತ್ರೆ ತಂದು ಕುಡಿದೇ ಬಿಟ್ಟೆ. ಆದರೂ ವರ್ಕೌಟ್ ಇಲ್ಲ. ಮಾಮೂಲಿ ಜ್ವರ ದೀರ್ಘ ಮೆರವಣಿಗೆಯಲ್ಲಿ  ಐದನೇ ದಿನಕ್ಕೆ ಬಂದು ನಿಂತಿತು. ಕಳೆದ ಒಂದೂವರೆ ವರ್ಷದ ಹಿಂದೆಯೂ ಇದೇ ಮಾಮೂಲಿ ಜ್ವರ ಗೋಳು ಕೊಟ್ಟಿತ್ತು. ಆಗಲೇ ಸಾಯುತ್ತಿದ್ದೆ. ಆದರೆ ಡಾಕ್ಟರ್ ಹೋರಾಟ, ಅಮ್ಮನ ಹರಕೆಯಿಂದ ಬದುಕಿದ್ದೆ. ಈ ಬಾರಿ ಹಾಗಾಗಲಿಕ್ಕಿಲ್ಲವೆಂದುಕೊಂಡಿದ್ದೆ. ಆದರೂ ಹಾಗೇ ಫೀಲ್ ಆಯ್ತು. ಮನೆಯಲ್ಲಿ ಹೇಳಿದರೆ ಹೆದರುತ್ತಾರೆ. ಹೇಳಲಿಲ್ಲ...! ಹಾಗೋ ಹೀಗೋ ದಿನ ಸಂದೇಶ ಮಾಡುವ ಕೆಲವೊಂದಿಬ್ಬರಿಗೆ ಆರೋಗ್ಯ ಸ್ಥಿತಿ ಹದವಾಗಿದ್ದು ತಿಳಿಯಿತು. ಕೇರ್ ನೆಸ್ ಎಂಬಂತೆ ಸಂದೇಶದಲ್ಲೇ ಕಿರಿ ಕಿರಿಯ ವಿಚಾರಣೆ ಜಾಸ್ತ್ತಿಯಾಯಿತು. ರೆಸ್ಟ್ ಮಾಡೋಣ ಎಂದು ಹಾಸಿಗೆ ಹಿಡಿದೆ. ಮತ್ತೆ ಮತ್ತೆ ಮೆಸೇಜ್‍ಗಳು ಇನ್ ಬಾಕ್ಸ್‍ನಲ್ಲಿ ಸದ್ದುಮಾಡತೊಡಗಿದವು. ಬೇಸತ್ತು, ಯಾರೂ ಡಿಸ್ಟರ್ಬ್ ಮಾಡಬಾರದೆಂದು ವ್ಯಾಟ್ಸಾಪ್‍ನಲ್ಲಿ ಒಂದು ಸಣ್ಣ ಸ್ಟೇಟಸ್ ಬರೆದೆ. ಅಲ್ಲಿಯೇ ಮಾಡಿದ್ದು ಎಡವಟ್ಟು ನೋಡಿ!., ಒಂದಿಬ್ಬರಿಗೆ ತಿಳಿದಿದ್ದ ವಿಚಾರ ಎಲ್ಲರಿಗೂ ತಿಳಿದು ಮರುಘಳಿಗೆ ಸರದಿಯಲ್ಲಿ ವಿಚಾರಣೆ ಪ್ರಾರಂಭವಾಯ್ತು. ಎಂಥಾ ಮೂಡನಯ್ಯ ನಾನು, ಅಷ್ಟಿದ್ದ ರಗಳೆ ತಡೆಯಲು ಹೋಗಿ ಇಷ್ಟು ಮಾಡಿಕೊಂಡೆನಲ್ಲಾ ಎಂದು ನನ್ನಯ ಗೊಡ್ಡುತನಕ್ಕೆ ಬೈದುಕೊಂಡೆ.
            ಗೆಳೆಯರ್ಯಾರೂ ಸೀರಿಯಸ್ ಅಂದುಕೊಳ್ಳಲಿಲ್ಲ. ಅಷ್ಟೋ ಇಷ್ಟೋ ಒನ್ ಸೈಡ್ ಭಾವನೆಗಳನ್ನಿಟ್ಟುಕೊಂಡಿದ್ದ, ಪ್ರೀತಿಯಲ್ಲಿ ಜೋಲಾಡುತ್ತಿದ್ದ ಹುಡುಗಿಯರು ಏನೋ ಪ್ರಳಯವೇ ಆಗಿದೆ ಎನ್ನುವಂತೆ ಗೊಣಗತೊಡಗಿದರು. ನಿನಗೆ ಆರೋಗ್ಯ ವಿಚಾರದಲ್ಲಿ ಜಾಗೃತೆ ಇಲ್ಲ ಯಾವಾಗ ಬುದ್ದಿ ಬರುತ್ತೋ ಏನೋ ಎಂಬಂತೆ ಬೈದರು. ಹೂಃ ಅಂತ ಹೇಳು ಬಂದು ವಿಚಾರಿಸಿಕೊಳ್ತೀವಿ ಅಂತ ಕೆಲವೊಂದಿಬ್ಬರ ಆರ್ತನಾದ. ಎಲ್ಲಿ ಮನೆ!?, ಬಂದೇ ಬಿಡುವೆ ನೋಡಲು..! ಎಂಬಂತೆ ಇನ್ನೊಂದಿಷ್ಟು. ಬೆನ್ನು ಬಿದ್ದ ಮೆಸೇಜ್‍ಗೆ ಬೆನ್ನು ಕೊಟ್ಟು ಮಲಗಿದೆ. ಯಾವುದಕ್ಕೂ ಉತ್ತರಿಸಲಿಲ್ಲ...
            ಸಂಜೆ ಯಾಕೋ ಮಂಕು ಬಡಿದಂತಾಯ್ತು. ಮತ್ತೆ ಮೊಬೈಲ್ ಕೈಗೆತ್ತಿಕೊಂಡೆ. ಮೆಸೇಜ್ ಓದಿ ಅರ್ಧಕ್ಕರ್ಧ ಉತ್ತರವಿತ್ತೆ... ಡಬ್ಬಲ್ ಸುಸ್ತಾಯಿತು. ಬಂದ ಸಂದೇಶಗಳನ್ನು ಓದಿಯೇ ಹೈರಾಣಾದೆ. ಮೈ ಬಿಸಿಗೆ ಮೆಸೇಜ್ ರಿಪ್ಲೈ ಕೂಡ ಕಾರಣ ಏನಿಸಿತು. ಸಾವಾಸ ಸಾಕು ಎಂದು ಮರಳಿ ಮೊಬೈಲ್ ಸೈಲೆಂಟ್ ಇಟ್ಟು ಸುಮ್ಮನಾದೆ. ಈ ವಯಸ್ಸೇ ಹಾಗಲ್ವಾ! ಮತ್ತೇ ಮತ್ತೆ ತಪ್ಪು ಅನಿಸಿದರೂ ಕೆಟ್ಟ ವಿಚಾರದಲ್ಲಿ ಮನಸ್ಸು ಯಾವಾಗಲೂ ಸೆಳೆಯುತ್ತಲೇ ಇರುತ್ತದೆ. ಅನಾವಶ್ಯಕ ಟೈಮ್ ಪಾಸ್‍ಗೆ ಅತಿಹೆಚ್ಚು ಜನ ಮರುಳಾಗಿರುವ ಮೊಬೈಲ್‍ನ್ನು ನೋಡೋಣ ಎನಿಸುತ್ತಿತ್ತು, ಆದರೂ ಕಂಟ್ರೋಲ್ ಮಾಡಿಕೊಂಡೆ. ಪ್ರೀತಿಸುವವರನ್ನು ಯಾಕೆ ದ್ವೇಷಿಸಬೇಕು!?, ದೂರ ಮಾಡೋದು ಬೇಡ ಸೈಡಲ್ಲಿ ಭಾವನೆಯ ಪ್ರೀತಿ ಇರಲಿ ಎಂದು ಹಾಗೇ ಕಣ್ಮುಚ್ಚಿ ಮಲಗಿದೆ.
           ಮನದ ಮೂಲೆಯ ಬಿಳಿಪರದೆಯ ಮೇಲೆ ಯೋಚನಾ ಲಹರಿ ತೇಲಿತು. ಈ ಬದುಕೆ ಹೀಗೆ ಅಲ್ವಾ ಯಾವಾಗ ಏನೂ ಬೇಕಾದರೂ ಆಗಬಹುದು. ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ದುಃಖ, ಆರೋಗ್ಯ, ಅನಾರೋಗ್ಯ, ಯೋಗ್ಯ, ಅಯೋಗ್ಯ... ಹೀಗೆ ಎಲ್ಲವೂ ಒಂದಿಲ್ಲೊಂದು ಸರಣಿಯಲ್ಲೇ ನಡೆಯುತ್ತಿರುತ್ತದೆ. ಯಾವನಿಗೊತ್ತು ಬದುಕು ಯಾವಾಗ ಅಂತ್ಯವಾಗುತ್ತೆ ಅಂತ. ನನ್ನೇ ನೋಡಿ ಹೋದ ವರ್ಷವೇ ಅಂತ್ಯ ಕಾಣಬೇಕಾಗಿದ್ದವನು ಇನ್ನೂ ಬದುಕಿರುವೆ. ಬದುಕಿಲ್ಲವೆಂದಿದ್ದರೆ ಇಷ್ಟೆಲ್ಲಾ ಮಾಡಲಾಗುತ್ತಿರಲಿಲ್ಲ. ನಾನು ಯಾರೆಂದು ನಿಮಗೇನು!, ನಮ್ಮವರಿಗೆ ಗೊತ್ತಿರುತ್ತಿರಲಿಲ್ಲ. ಒಂದಿಷ್ಟು ಅಳು, ಒಂದಿಷ್ಟು ಮೌನ, ಒಂದಿಷ್ಟು ನೆನಪಿನೊಂದಿಗೆ ನಾನು ಕೂಡ ಗೋಡೆಯ ಮೇಲಿನ ಫೋಟೋವಾಗುತ್ತಿದ್ದೇನೋ ಏನೋ...!
     ವಿಷಯ ಅದಲ್ಲ... ಎಲ್ಲರೂ ಒಂದಲ್ಲ ಒಂದು ದಿನ ಸಾಯುವುದು ಗ್ಯಾರಂಟಿ... ಅಲ್ವಾ!??...
ಹೌದು..!ಅಂತೀರಾ...
ಇದರೊಳಗೆ ಇನ್ನೊಂದು ಸತ್ಯ ಇದೆ!...
ಏನ್ ಗೊತ್ತಾ!?,
           ನಾನ್ ಮಾತ್ರ್ರಾ ಅಲ್ಲಾ ನೀವು ಕೂಡ ಸಾಯ್ತೀರಾ...! ಇದು ಪಕ್ಕಾ ಗ್ಯಾರಂಟಿ. ಕೆಲವೊಂದು ವಿಚಾರಗಳು ಗೊತ್ತಿದ್ದರೂ ಇನ್ನೊಬ್ಬರೂ ಹೇಳಿದ ಮೇಲೆ ಕನ್‍ಫರ್ಮ್ ಆಗೋದಂತೆ... ಇದು ಕೂಡ ಹಾಗೆ. ಅಂತ್ಯ ಎಲ್ಲರಿಗೂ ಎಲ್ಲದಕ್ಕೂ ಕಟ್ಟಿಟ್ಟ ಬುತ್ತಿ. ಇರುವಷ್ಟು ದಿನ ಹೊಡೆದಾಡ್ತೀವಿ, ನಗ್ತೀವಿ, ರೇಗಿಸ್ತೀವಿ, ಪಾಪ-ಪುಣ್ಯ ಮಾಡ್ತೀವಿ, ಪಾ..ಪಾ ಅಂತೀವಿ, ರೋಗಿಯಾಗ್ತೀವಿ, ರೇಗಿ ನುಲಿತೀವಿ, ಸುಖ ಪಡ್ತೀವಿ, ಕಷ್ಟ ಅನುಭವಿಸ್ತೀವಿ, ಹೀಗೆ ಎಲ್ಲದಕ್ಕೂ ಅಂತ್ಯವಿದೆ... ಸಾಯ್ತೀರಿ ಅಂದಿದ್ದಕ್ಕೆ ಭಯ ಪಡಬೇಡಿ. ಹಾಗೆಯೇ ಜೀವದ ಬಗ್ಗೆಯೂ ಭಯ ಬೇಡ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ. ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃದ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರೀಯೆ.
             ಸಾಧು ಸಂತರೇ ಹೇಳಿರುವಂತೆ ಜೀವನ ನಾಲ್ಕು ದಿನದ ಹೋರಾಟ. ಅಲ್ಲಿ ಸಂಪಾದಿಸಬೇಕೆಂದು ಅನಗತ್ಯವಾಗಿ ಹೊಡೆದಾಡುತ್ತೇವೆ. ಒಮ್ಮೊಮ್ಮೆ ಎಷ್ಟಿದ್ದರೂ ಏನೂ ಮಾಡಲಾಗದಂತ, ಇದ್ದದ್ದನ್ನು ಕರಗಿಸಲಾಗದಂತ ದುರವಸ್ಥೆ. ಸರಿಯಾಗಿ ಗಮನಿಸಿದರೆ ಎಲ್ಲವೂ ಜೀರೋ... ಯಾರೋ ನಮಗಿಂತ ಮುಂದೆ ಸಾಗುವರೆಂದೋ, ನಮ್ಮನೆ ಜಾಗ ಅವರ ಮನೆಯ ಆರ್ಟಿಸಿ ಅಲ್ಲಿ ನಮೂದಾಗಿದೆಯೆಂತಲೋ, ಯಾರು ಸತ್ತರೆ ನಮಗೇನು ದುಡ್ಡು ಮಾಡಬೇಕು ಅಷ್ಟೇ ಎಂದೋ, ನಿಮ್ಮ ಕಷ್ಟ ನಮಗೆ ಬೇಡ, ನನಗೆ ಬರೋ ದುಡ್ಡು ಬರಬೇಕು ಅಂದೋ, ಮೊದಲು ನಾವ್ ಸೇಫ್ ಆಗಬೇಕು ಉಳಿದವರ ಚಿಂತೆ ನಮಗೆ ಬ್ಯಾಡ ಅಂತಲೋ,ಮಕ್ಕಳ್ಯಾರೂ ಇಲ್ಲ, ಕೈಯಲ್ಲಿ ದುಡ್ಡು ಬೇಕಾದಷ್ಟಿದೆ ಆದರೂ ಆ ಬಾಡಿಗೆ ಮನೆಯವ ಇನ್ನೂ ಬಾಡಿಗೆ ಕೊಟ್ಟಿಲ್ಲ, ಯಾಮಾರಿಸುತ್ತಾನೆಂತಲೋ, ವಸ್ತು ಹಾಳಾದರೆ ಕೊಟ್ಟ ದುಡ್ಡು ಮಾರಾಟಗಾರನ ಅಕೌಂಟ್‍ಗೆ ಹೋಗಿ ಅವನೇನಾದರೂ ಬಿಲ್ಡಿಂಗ್ ಕಟ್ಟುತ್ತಾನೆ ಎನ್ನುವ ಭಯದ ಚೌಕಾಸಿಗೋ, ಬೇರೆಯವರಿಗೆ ಅನ್ನ ಹಾಕಿದರೆ ನಮ್ಮನೆಗೆ ದಿನಾ ಬರುತ್ತಾರೆಯೇನೋ ಎನ್ನುವ ಮುಜುಗರದ ಅಸೂಯೆಗೋ, ಹೀಗೆ ಒಂದಿಲ್ಲೊಂದರಲ್ಲಿ ಬದುಕನ್ನು ಹೆಣಗಾಡುತ್ತಲೇ ಇರುತ್ತೇವೆ.

ಎಣ್ಣೆ ಕಾಣದಂಥ ಶಿರ...
ಕಿತ್ತು ಬಂದಿರೋ ಕೆರ...
ಬಣ್ಣ ಮಾಸಿರೋ ಚರ...
ಅನ್ನ ಕಾಣದ ಉದರ...
ಕಳೆ ಇಲ್ಲದ ಮುಖ...
ರೇಖೆ ಅಳಿಸಿರೋ ಕೆರ...
ಕೊಳೆ ತುಂಬಿದ ಸುಖ...
ಕೊನೆ ಕಾಣದ ದುಃಖ...
ಇಷ್ಟೇ ಜೀವನ!!!...
             ಎಲ್ಲವೂ ತಿಳಿಯುವುದು ಸಂತೋಷದ ಶುಭ ಸಮಯ ಅಲ್ಲ, ಬದುಕು ಕೊನೆಯಾಗಬಹುದೋ ಏನೋ ಎನ್ನುವ ವಿದಾಯ ಮುಹೂರ್ತ ತಬ್ಬಿಕೊಳ್ಳುವಾಗಲೆ...!!!.   ರತಿ ಕ್ರೀಡೆಯಲ್ಲಿ, ಮೈಥುನ ಸಂಧರ್ಭದಲ್ಲಿ, ಆಹಾ!! ಎಂತಾ ಸುಖವಪ್ಪಾ ಜೀವನವೆಂದೆನಿಸಿದ ಭಾವಗಳೆಲ್ಲವೂ ರೋಗ ಹಿಡಿದು ಅಲ್ಲೊಂದು ಇಲ್ಲೊಂದು ಇಂಜೆಕ್ಷನ್ ಚುಚ್ಚಿಸಿಕೊಳ್ಳುವಾಗ ನರಕವಪ್ಪಾ ಅಂತನಿಸದೇ ಇರದು. ಎಲ್ಲವೂ ಕಾಲ ಘಟ್ಟವಷ್ಟೇ. ಕಾಲಕ್ಕೆ ಕಾಲವೇ ತಲೆಭಾಗುವುದಂತೆ. ಇನ್ನೂ ನಾವು ನೀವೂ ಯಾವ ಲೆಕ್ಕ. ಸರಿಯಿರುವಾಗ ತಿಳಿಯದ ಜೀವನ ಹದಗೆಟ್ಟಾಗ ತಿಳಿಯುವುದೇ ಜಾಸ್ತಿ...


ಇದು ಶಿಕ್ಷಣ ಇಲಾಖೆಯ ಅವಾಂತರ


ವಿದ್ಯಾರ್ಥಿಗಳ ಗೋಳಿಗೆ ಬೆಲೆಯಿಲ್ಲ, ಸರ್ಕಾರದ ಅವಾಂತರಕ್ಕೆ ಕೊನೆಯಿಲ್ಲ...
ಚಾಳಿಯಾಗಿದೆ ಸಮಸ್ಯೆಯ ಸಮಸ್ಯೆ...
ಪ್ರತಿವರ್ಷದ ಸೋರಿಕೆಯ ಅಧ್ವಾನ ಈ ವರ್ಷವೂ ಮುಂದುವರಿದಿದೆ...
ಶಾಪಿಂಗ್ ಮಾಲ್‍ಗಳಾಗಿವೆ ಖಾಸಗಿ ಶಿಕ್ಷಣ ಸಂಸ್ಥೆಗಳು...


           ಪ್ರತಿ ಬಾರಿ ಪತ್ರಿಕಾಗೋಷ್ಠಿ ಕುಳಿತುಕೊಂಡಾಗಲೂ ಮಾನ್ಯ ಶಿಕ್ಷಣ ಸಚಿವರಿಂದ ನಮ್ಮಂತ ಪತ್ರಿಕಾ ಮಿತ್ರರು ಕೇಳುವುದು ಇದೇ ಮಾತು...
“ವಿದ್ಯಾರ್ಥಿಗಳಲ್ಲಿ ಸದ್ಭಾವನೆ ಮೂಡಿಸುವ ಮತ್ತು ಅವರನ್ನು ಉತ್ತಮ ನಾಯಕರನ್ನಾಗಿಸುವ, ಶಿಕ್ಷಣ ಒದಗಿಸುವ, ವಿಚಾರದಲ್ಲಿ ಯಾವುದೇ ರಾಜಿ ಇಲ್ಲ...”
“ಶಾಲೆ ಆರಂಭವಾಗುವುದಕ್ಕೆ ಮುನ್ನವೇ ಪಠ್ಯ ಪುಸ್ತಕಗಳನ್ನು ಓದಗಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ...”
“ ರಾಜ್ಯದಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರದ ಅನುಧಾನಕ್ಕೆ ಒಳಪಡಿಸಿದ್ದು, ಸಮಿತಿ ರಚಿಸಿ ಮುಂದಿನ ಕ್ರಮ ಕೈಗೊಳ್ಳುಲಾಗುತ್ತದೆ”
“ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೂ ಸಾಧಿಸುತ್ತಿದ್ದೇವೆ, ಇದೊಂದು ಹೊಸ ರೀತಿಯ ಕ್ರಾಂತಿ ಎಂದರೂ ತಪ್ಪಿಲ್ಲ. ಅಕ್ರಮ, ಭ್ರಷ್ಟತೆ, ಡೊನೇಷನ್ ಹಾವಳಿ ಇತ್ಯಾದಿಗಳ ಬಗ್ಗೆ ಅತೀವ ಗಮನ ಇಟ್ಟಿದ್ದೇವೆ”
“ಪರೀಕ್ಷಾ ವಿಷಯದಲ್ಲಿ ಈ ಬಾರಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದೇವೆ ಯಾವ ರೀತಿಯ ನಕಲಿಗೂ ಅವಕಾಶವಿಲ್ಲ”..
 ............ಆದರೆ..!
           ಮೇಲ್ಕಂಡ ಯಾವ ಮಾತೂ ನೂರಕ್ಕೆ ನೂರು ಫಾಲೋ ಆಗಿದ್ದು ನಾನಂತೂ ನೋಡಿಲ್ಲ... ಹಾಗಾದ್ರೆ ಶಿಕ್ಷಣ ಸಚಿವರು, ಅವರ ಕೈಕೆಳಗಿರುವ ಉನ್ನತ ಅಧಿಕಾರಿಗಳು ಏನು ಮಾಡುತ್ತಿದ್ದಾರೆ!? ಶಿಕ್ಷಣ ಕ್ಷೇತ್ರ ಬಿಟ್ಟು, ನೀವು ಹಾಕಿಕೊಂಡಿರುವ ಪ್ಲಾನ್‍ಗಳನ್ನು ಬಿಟ್ಟು ಬೇರ್ಯಾವ ಘನಂಧಾರಿ ಕೆಲಸ ನಿಮ್ಮನ್ನು ಸೆಳೆಯುತ್ತಿದೆ ಮೊದಲು ಉತ್ತರವೀಯಿರಿ ನೋಡೋಣ..!
ಇನ್ನೂ ಎಷ್ಟು ಅಂತ ಸಹಿಸಿಕೊಳ್ಳಬೇಕು ನಾವು!??
          ಒಂದು ಕಡೆ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ, ಇನ್ನೊಂದು ಕಡೆ ಶಿಕ್ಷಕರ ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ, ಮತ್ತೊಂದು ಕಡೆ ಕನ್ನಡ-ಇಂಗ್ಲೀಷ್ ಎನ್ನುವ ಭಾಷೆಯ ನಡವಳಿಯಲ್ಲಿ ಶಾಲಾ ಫೀಸ್‍ಗಳ ಅಟ್ಟಹಾಸ ಇವಿಷ್ಟನ್ನೂ ದಾಟಿ ಮುಂದೆ ಹೋದರೆ ಪರೀಕ್ಷಾ ನಕಲು, ಪ್ರಶ್ನೆ ಪತ್ರಿಕೆಗಳ ಸೋರಿಕೆ... ಇದೊಂಥರ ಚಾಳಿಯಾಗಿ ಬಿಟ್ಟಿದೆ ಎನಿಸುತ್ತದೆ. ಪ್ರತಿ ವರ್ಷವೂ ಮತ್ತೆ ಮತ್ತೆ ಮರುಕಳಿಸುವ ಈ ಸಮಸ್ಯೆಗಳು ವಿದ್ಯಾರ್ಥಿಗಳ ಮನಸ್ಸಿಗೆ ಎಷ್ಟು ಪರಿಣಾಮ ಬೀರುವುದೆಂದು ಯಾರಿಗೂ ತಿಳಿದಿಲ್ಲ. ಪರೀಕ್ಷಾ ವಿಚಾರ ತೆಗೆದುಕೊಂಡರೆ, ಪ್ರತ್ಯೇಕ ಪರೀಕ್ಷಾ ಮಂಡಳಿ, ಅದಕ್ಕೆ ಸೂಕ್ತ ಸಿಬ್ಬಂದಿ, ಸಮರ್ಪಕ ಸೌಲಭ್ಯವಿದ್ದರೂ ಇಂಥ ಅಧ್ವಾನಗಳು ಏಕೆ ಮರುಕಳಿಸುತ್ತವೆ ಎನ್ನುವುದು ಪ್ರಶ್ನಾರ್ಹವಾಗಿದೆ!?. ವರ್ಷದಂತೆ ಈ ಬಾರಿಯೂ ಕೂಡ ದ್ವಿತೀಯ ಪಿಯು ರಸಾಯನಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಮೊನ್ನೆ ಮೊನ್ನೆ ಮರು ಪರೀಕ್ಷೆಯೂ ನಡೆಯಿತು. ಎಲ್ಲಾ ಆದ ಬಳಿಕ ಮರುಪರೀಕ್ಷೆಯಲ್ಲಿ ಯಾವ ಸೋರಿಕೆಯೂ ಆಗಿಲ್ಲ, ಕ್ಷಮೆ ಇರಲಿ ಮುಂದೆ ಈ ರೀತಿಯ ತಪ್ಪುಗಳು ನಡೆಯುವುದಿಲ್ಲ, ಎಂದು ಸರ್ಕಾರ ಸ್ಫಷ್ಟವಾಗಿ ಅರುಹಿ ತಣ್ಣಗಾಗಿದೆ ಹಾಗಾದರೆ ಈ ಹಿಂದಿನ ವರ್ಷಗಳಲ್ಲಿ ನಡೆದಿದ್ದಾಗ ನೀವಂದುಕೊಂಡ ಧ್ಯೇಯಗಳೇನು!? ಸ್ವಲ್ಫ ನಮಗೂ ತಿಳಿಸಿ... ಬಹುಶಃ ಮುಂದಿನ ವರ್ಷವೂ ಇದೇ ಡೈಲಾಗ್ ಮರುಬಳಕೆಯಾಗಬಹುದೇನೋ ಯಾರು ಬಲ್ಲರು ನಿಮ್ಮ ಸೋರಿಕೆಯ ಪರಾಕ್ರಮ. ಇದು ಇಲಾಖೆಗಳ ಬೇಜವಾಬ್ಧಾರಿಯೋ!?, ಅಧಿಕಾರಿಗಳ ನಿಷ್ಕಾಳಜಿಯೋ!?, ಗೊತ್ತಿಲ್ಲ...ಆದರೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಂತೂ ನಿಜ.
ನಮ್ಮಲ್ಲಿರುವ ಸಮಸ್ಯೆಗಳು ಇಂದು ನಿನ್ನೆಯದಲ್ಲ ಎಷ್ಟು ಸಿಲ್ಲಿ ಸಿಲ್ಲಿಯ ಸಮಸ್ಯೆಗಳೆಂದರೆ ಸೋಷಿಯಲ್ ಮೀಡಿಯಾದಲ್ಲಿ ಯಾರೋ ಮೊನ್ನೆ ಮೊನ್ನೆ ಒಂದು ಪೋಸ್ಟ್ ಮಾಡಿದ್ದರು ಅದನ್ನು ಓದಿ ನನಗಂತೂ ನಗು ತಡೆಯಲಾಗಲಿಲ್ಲ.., ನೀವೂ ಓದಿ ಒಮ್ಮೆ ನಕ್ಕು ಬಿಡಿ..,
1. “ನಮ್ಮ ಕಾಲದಲ್ಲೆಲ್ಲಾ ಚಿgತೆ ನೊಡೋಕೆ ಶಾಲೆಯಿಂದ ‘ಝೂ’ಗೆ ಟ್ರಿಪ್ ಹೋಗ್ತಾ ಇದ್ವು..,”
ಈಗ ಕಾಲ ಮುಂದುವರಿದಿದೆ.., ಬದಲಾವಣೆ ಕಂಡಿದೆ... ಅದಕ್ಕಾಗಿ..,
“ಇದೀಗ ಮಕ್ಕಳನ್ನೇ ನೊಡೋಕೆ ಚಿರತೆಯೇ ಸ್ಕೂಲಿಗೆ ಟ್ರಿಪ್ ಹೊಡಿತಾ ಇದೆ...”

2. “ವಿಬ್ಲಯಾರ್ ಶಾಲೆ ಸೇರಲು ಬಂದ ಚಿರತೆಯ ಅಡ್ಮಿಶನ್‍ಗೆ ನಕಾರ...
ಇಂಗ್ಲೀಷ್ ಮೀಡಿಯಂ ಸ್ಕೂಲ್‍ನಲ್ಲಿ ಓದಬೇಕೆಂಬ ಚಿgತೆಯ ಕನಸು ಭಗ್ನ...”

3. “ಹೆಚ್ಚಿನ ಡೊನೆಷನ್ ಕೇಳಿದ್ದಕ್ಕೆ ಆಕ್ರೋಶÀಗೊಂಡ ಚಿgತೆ..,
 ಶಾಲೆ ಸಿಬ್ಬಂದಿ ಸೇರಿ ಹಲವರ ಮೇಲೆ ದಾಳಿ...”

         ನೋಡಿ ಮುಂದೆ ಈ ರೀತಿ ಆದರೂ ಆಗಬಹುದು. ಸಿದ್ಧಾಂತಗಳನ್ನು ಎಲ್ಲಾ ಅಧಿಕಾರಿಗಳು ಬರೆಯುತ್ತಾರೆ ಆದರೆ ಅದನ್ನು ಫಾಲೋ ಮಾಡುವುದಿಲ್ಲ ಅಷ್ಟೇ. ಅದೇ ನಮ್ಮ ದೊಡ್ಡ ಸಮಸ್ಯೆ...ಮೊದಲೆಲ್ಲಾ ಮಕ್ಕಳು ಶಾಲೆಗೆ ಹೋಗೋದೆ ಕಷ್ಟ ಆಗಿತ್ತು. ಈಗೀಗ ಶಾಲೆಗೆ ಕಳಿಸೋದೆ ಕಷ್ಟ ಆಗಿದೆ...ಅಂತೂ -ಇಂತೂ ಕಷ್ಟ ಪಟ್ಟು ಶಾಲೆಗೆ ಕಳುಹಿಸಿದೀವಿ ಅಂದ್ಕೊಳ್ಳಿ ಈ ರೀತಿ ಸಮಸ್ಯೆಗಳು!!. ಹಿಂದೆ ಆಗಿದ್ದು ಆಯ್ತು ಮರೆತ್ವಿ ಎನ್ನುವಾಗಲೇ ಮೊನ್ನೆ ಮೊನ್ನೆ ಪರೀಕ್ಷಾ ನಕಲು ಹಾಗೂ ಸೋರಿಕೆಯ ಕರ್ಮಕಾಂಡ ಮತ್ತೇ ಶಿಕ್ಷಣ ಇಲಾಖೆಯ ಬೇಜಾವ್ಧಾರಿತನವನ್ನು ಎತ್ತಿ ಹಿಡಿದಿದೆ.
ಸಚಿವರೆ.., ಇನ್ನಾದರೂ ಒಂದಿಷ್ಟು ಸಮಯವನ್ನು ಮೀಸಲಿಟ್ಟು ಮೆಲ್ಗಾಣಿಸಿದ ಸಮಸ್ಯೆಗಳಿಗೆ ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಳ್ಳಿ ಸಮಸ್ಯೆಗಳ ಗೊಂದಲದಲ್ಲಿ ಶಿಕ್ಷಣಕ್ಕಿರುವ ಮೌಲ್ಯ ಹೊರಟು ಹೋದರೆ ಸಮಾಜದ ಗತಿ ಏನಾಗಬಹುದೋ ಹೇಳತೀರದು. ಇದಕ್ಕೆಲ್ಲಾ ಶಾಶ್ವತ ಪರಿಹಾರೋಪಾಯಕ್ಕಾಗಿ ಚಿಂತನೆಗಿಳಿಯಲು ಇದು ಸಕಾಲ. ಯಾವುದೇ ವ್ಯವಸ್ಥೆ ದೀರ್ಘಾವಧಿಯವರೆ ಬದಲಾವಣೆಗಳಿಲ್ಲದೇ ಮುಂದುವರಿದಿದ್ದೆ ಆದಲ್ಲಿ ಲೋಪದೋಷಗಳು, ಕೊರತೆಗಳು ನುಸುಳುವುದು ಸಾಮಾನ್ಯ. ಪ್ರಶ್ನೆ ಪತ್ರಿಕೆಯ ಸೋರಿಕೆ ಅವಾಂತರವೆನ್ನುವುದು ಇಂದು ನಿನ್ನೆಯ ಸಮಸ್ಯೆಯಲ್ಲ. ಪ್ರಶ್ನೆ ಪತ್ರಿಕೆಗಳನ್ನು ಸಂಬಂಧ ಪಟ್ಟ ಶಿಕ್ಷಣ ಸಂಸ್ಥೆಗಳಿಗೆ ರವಾನಿಸುವ ವಿಧಾನ ಹಲವು ವರ್ಷಗಳಿಂದ ಬದಲಾಗದೆ ಹಾಗೆ ಮುಂದುವರಿದಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಎಲ್ಲಿ ಯಾವ ಹಂತದಲ್ಲಿ  ಆಗುತ್ತದೆಂಬುದನ್ನು ಪತ್ತೆಹಚ್ಚಿ ನಿಯಂತ್ರಿಸುವ ಕ್ರಮ ಆಗಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಇಂದು ತಂತ್ರಜ್ಞಾನಗಳ ಬಳಕೆ ಹಾಸು ಹೊಕ್ಕಾಗಿದ್ದು ಪರೀಕ್ಷಾ ಮಂಡಳಿಗಳು ಪರೀಕ್ಷಾ ಪದ್ದತಿಯಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳುವತ್ತ ಗಮನವಹಿಸಬೇಕಿದೆ. ತಂತ್ರಜ್ಞಾನದ ನೆರವಿನಿಂದ ಪರೀಕ್ಷೆಗಳನ್ನು ಹೇಗೆ ಸುಲಲಿತವಾಗಿ ನಡೆಸಬಹುದು ಎಂಬುದಕ್ಕೆ ರಾಜೀವ್ ಗಾಂಧಿ ವಿಜ್ಞಾನ ವಿಶ್ವ ವಿದ್ಯಾಲಯ ಉತ್ತಮ ಉದಾಹರಣೆ. ಅಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆಗೆ ಒಂದು ಅಥವಾ  ಎರಡು ಗಂಟೆ ಮುಂಚಿತವಾಗಿ ಆನ್‍ಲೈನ್ ಸರ್ವರ್ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿಕೊಡಲಾಗುತ್ತದೆ, ಸೋರಿಕೆಗೆ ಅವಕಾಶವಿಲ್ಲದಂತಾಗಿದೆ.
            ಮಾನ್ಯ ಶಿಕ್ಷಣ ಸಚಿವರೇ.., ಖಾಸಗಿಯಾಗಿ ಎದ್ದು ನಿಂತಿರುವ ಶಿಕ್ಷಣ ಸಂಸ್ಥೆಗಳು ಶಾಪಿಂಗ್ ಮಾಲ್‍ಗಳಾಗಿ ಬೆಳೆಯುತ್ತಿವೆ. ತೀರಾ ಸಾಮಾನ್ಯ ಬಡವನಿಗೆ ಒಳಗೆ ಎಂಟ್ರಿಯೇ ಇಲ್ಲದಂತಾಗಿದೆ ಈ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳದೇ ಹೋದರೆ ಮುಂದೊಂದು ದಿನ ಶಿಕ್ಷಣವೆನ್ನುವುದು ದುಡ್ಡಿರುವವರಿಗೆ ಮಾತ್ರಾ ಲಭ್ಯ ಎನ್ನುವಂತಾಗದೆ ಇರದು. ಶಿಕ್ಷಣದ ಹೆಸರಲ್ಲಿ ವ್ಯಾಪಾರಿಕರಣವಾಗುತ್ತಿರುವುದನ್ನು ಮೊದಲು ನಿಲ್ಲಿಸಿ, ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೆತ್ತಿಕೊಳ್ಳಿ. ಉಳಿದಿರುವ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ, ಅನಾವಶ್ಯಕವಾಗಿ ಸಮಯ ಹಾಳು ಮಾಡುವ ವೆಸ್ಟೇಡ್ ಅಧಿಕಾರಿಗಳನ್ನು ಕೆಳಗಿಳಿಸಿ, ನಿಷ್ಠಾವಂತರನ್ನು ನೇಮಕ ಮಾಡಿ...
                                  
             ಶಿಕ್ಷಣ ಇಲಾಖೆಯಲ್ಲಿನ ಆಂತರಿಕ ಗೊಂದಲಗಳು, ವರ್ಗಾವಣೆ ವಿವಾಧಗಳು ಸಾಮಾಜಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ    ಬೀರುತ್ತಿದ್ದು, ಒಟ್ಟಾರೆ ದುರ್ಬಲ ವ್ಯವಸ್ಥೆಯೇ ಹಲವು ತೆರನಾದ ಸಮಸ್ಯೆಗಳಿಗೆ ಗುರಿಯಾಗಿದೆ. ಶಿಕ್ಷಣ ವ್ಯಾಪಾರೀಕರಣವಾಗಿದೆ, ಮಾರಿಕೊಳ್ಳುವ ಸಂತೆಯಾಗಿದೆ ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿನ  ಸಣ್ಣ ಪುಟ್ಟ ಲೋಪವೂ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆಂಬುದನ್ನು ಸಂಬಂದಪಟ್ಟವರು ಮರೆಯದಿರಲಿ... ವಿದ್ಯಾರ್ಥಿ ಹಾಗೂ ಶಿಕ್ಷಣಕ್ಕಿರುವ ಮೌಲ್ಯ ಎಲ್ಲರೂ ಅರಿಯಲಿ...




Monday, 14 March 2016

ಕರ್ಮದ ಕಡಲಲ್ಲಿ...


         
                   ಅವಳು ಮಾತೆ. ಪ್ರಾಯ 80 ಆಗಿರಬಹುದು. ಬೆನ್ನು ಬಾಗಿದೆ. ನೇರವಾಗಿ ನಿಲ್ಲುವುದು ಬಿಡಿ, ನೆಟ್ಟಗೆ ಕಾಲು ಚಾಚಿ ಮಲಗಲು ಕಷ್ಟಪಡುವ ಸ್ಥಿತಿಯಲ್ಲಿದ್ದಾಳೆ. ಜೀವ ಇದ್ದು ಸಾಯಿಸುತ್ತಿರುವ ಉಬ್ಬಸ, ವಿಪರೀತ ಕೆಮ್ಮು ಖಾಯಂ ಆಗಿ ಸತಾಯಿಸಿ ಪ್ರತಿ ದಿನವೂ ನಿದ್ದೆಗೆಡಿಸುತ್ತಿದೆ. ಆಗಾಗ ಹಳೆ ನೆನಪುಗಳಿಗೆ ಹೋಗಿ ಹೋಗಿ ಬರುತ್ತಿದ್ದ ಅವಳ ಕಣ್ಣಂಚಿನಲ್ಲಿ  ಕಣ್ಣೀರು ಸುಮಾರು ವರ್ಷಗಳಿಂದ ಮಾಮೂಲಾಗಿ ಜಿನುಗುತ್ತಿದೆ.  ಒಂದು ಕಾಲದಲ್ಲಿ ತನ್ನದೇ ಸ್ವಂತ ಮನೆ, ಮಗ, ಗಂಡ ಆಸ್ತಿ ಎಲ್ಲವನ್ನು ಹೊಂದಿದ್ದ ಅವಳ ಜೀವನ ಇಂದು ಸಾಗುತ್ತಿರುವುದು ವೃದ್ಧಾಶ್ರಮದಲ್ಲಿ. ಅಂದು ಅದೆಷ್ಟೋ ಜನರಿಗೆ ಊಟ ನೀಡಿದ್ದ ಕೈಗಳು ಇಂದು ಅನ್ನ ಪಡೆಯಲು ಹವಣಿಸುತ್ತಿದೆ. ಜೀವಕ್ಕೆ ಜೀವವಾಗಿದ್ದ ಗಂಡ ಆ ದಿನ ಹೃದಯಾಘಾತದಿಂದ ತೀರಿಕೊಂಡ ಬಳಿಕ ಎಲ್ಲಾ ನೋವನ್ನು ಬಿಗಿಹಿಡಿದುಕೊಂಡು ಇದ್ದ ಒಬ್ಬ ಮಗನಿಗೆ ಅಲ್ಲೋ ಇಲ್ಲೋ ಸಾಲ ಮಾಡಿ ಮದುವೆ ಮಾಡಿಸಿ, ಬಡ ಕುಟುಂಬದ ಹುಡುಗಿಯನ್ನೇ ಆರಿಸಿಕೊಂಡು ಮನೆ ಬೆಳಗಿಸಿಕೊಂಡಿದ್ದಳು. ಒಂದಷ್ಟು ದಿನ ಹೊಸತನದಲ್ಲೇ ಮನೆಯೇನೋ ಬೆಳಗಿತು. ಮಗನಿಗೆ ಬರೆದ ಸರ್ಕಾರಿ ಪರೀಕ್ಷೆಯೊಂದು ಪಾಸಾಗಿ ಕೆಲಸವೂ ದೊರೆಯಿತು. ಕೈ ತುಂಬ ಸಂಬಳ, ಮನೆ ತುಂಬ ನಗು ಕಾಣುತ್ತಿದೆ ಎನ್ನುವಾಗಲೇ ಸೊಸೆಯ  ನಾಟಕೀಯ ಬದುಕು ನರ್ತಿಸಲು ಪ್ರಾರಂಭಿಸತೊಡಗಿತು. ಕುಂತರೂ ತಪ್ಪು, ನಿಂತರೂ ತಪ್ಪು... ಐಶ್ವರ್ಯ ಹೇಗೆ ಜಾಸ್ತಿಯಾಗತೊಡಗಿತೋ ಅಂತೆಯೇ ಮನೆಯ ಸುಖ, ಶಾಂತಿ, ನೆಮ್ಮದಿಗಳೂ ಮೂಲೆ ಸೇರಿ ದಿನಾಲೂ ಗಲಾಟೆ ಗೌಜುಗಳಲ್ಲೇ  ನೆಮ್ಮದಿಯ ದೀಪ ಆರತೊಡಗಿತು. ಮಗ ಇತ್ತ ವಯಸ್ಸಿನ ಅಮ್ಮನನ್ನೂ, ಅತ್ತ ಪ್ರಾಯದ ಹೆಂಡತಿ ಇಬ್ಬರನ್ನೂ ಬಿಟ್ಟುಕೊಡಲಾಗದೇ ಒದ್ದಾಟ ದಿನದೂಡತೊಡಗಿದ. ಕೊನೆಗೂ ಮಾತೆಯೇ ಸೋತಳು. ‘ಎಲ್ಲವೂ ನಿನ್ನದೇ ಮಗನೆ ವೃದ್ಧರಿಗಾಗಿಯೇ ಒಂದು ಆಶ್ರಮವಿದೆಯಂತೆ ನನ್ನನ್ನೂ ಅಲ್ಲಿಗೆ ಸೇರಿಸಿಬಿಡು’ ಎಂದು ಶ್ರಮದ ಬೆವರಲ್ಲಿ ಕಟ್ಟಿದ್ದ ಮನೆಗೆ ಬೀಳ್ಕೊಡುವ ಮಾತನ್ನು ಆಡಿದ್ದಳು. ಮಗನೂ ದೊಡ್ಡ ಮನಸ್ಸು ಮಾಡಿ ಆಶ್ರಮಕ್ಕೆ ಸೇರಿಸಿಯೇ ಬಿಟ್ಟಿದ್ದ.
                                         
                                                  *****************************

                       
ಗೆಳೆಯರೊಬ್ಬರ ಮನೆ ಮದುವೆ. ಊಟದ ಪಂಕ್ತಿಯಲ್ಲಿ ಕುಳಿತಿದ್ದೆ. ಅದು ಕೊನೆಯ ಪಂಕ್ತಿಯಾದ್ದರಿಂದ ನನ್ನೆದುರು ಅನೇಕ ಜನ ಕೂಲಿ ಕೆಲಸಗಾರರೂ ಊಟಕ್ಕೆ ಕುಳಿತಿದ್ದರು. ಅವರ ಮಧ್ಯದಲ್ಲಿ ಸಾಧಾರಣ ಉಡುಗೆ ತೊಟ್ಟ ಸುಮಾರು 70-80 ವಯಸ್ಸಿನ ಗಂಡ ಹೆಂಡತಿ ಅನಾಮಿಕರಂತೆ ಬಂದು ಕುಳಿತಿರುವುದು ಗಮನಸೆಳೆಯಿತು. ಗಂಡನ ಕೈ ನಡುಗುತ್ತಿತ್ತು. ಮುಷ್ಟಿಯನ್ನು ಬಾಯಿಗೆ ಹಾಕಲು ಕಷ್ಟ ಪಡುತ್ತಿದ್ದ. ಹೆಂಡತಿ ಮಗುವಿನಂತೆ ಊಟ ಮಾಡಿಸುತ್ತಿದ್ದಳು. ಬಹುಶಃ ಬಹಳ ದಿನಗಳಿಂದ ಇದ್ದ ಹಸಿವಿಗೋ ಏನೋ ಅವರಿಬ್ಬರು ಗಬಗಬನೇ ಊಟ ಮಾಡುತ್ತಿದ್ದರು.  ಊಟ ಮುಗಿಸಿ ಕೈ ತೊಳೆಯುವ ಹೊತ್ತಿಗೆ ಅವರ ಬಳಿ ಹೋಗಿ. ‘ಏನಾಯ್ತು ಅಮ್ಮ ಅಂಕಲ್‍ಗೆ!’ ಎಂದೆ. ಅಳೋಕೆ ಶುರುವಿಟ್ಟರು. ‘ದಯಮಾಡಿ ಅಳದಿರಿ ಏನಾಯ್ತು ಹೇಳಿ!’ ಎಂದು ಮತ್ತೆ ಪ್ರಶ್ನೆಯನಿತ್ತೆ. ಉತ್ತರಿಸಲಿಲ್ಲ... ‘ಅತ್ತರೆ ಯಾವುದು ಸರಿಹೋಗುವುದಿಲ್ಲ ಅಲ್ವಾ ಹೇಳಿ? ಏನಾಯ್ತು?’ ಎಂದೆ...
ಉತ್ತರ ಪಂಕ್ತಿ ಬಡಿಸುವ ಅಡುಗೆ ಭಟ್ಟರಿಂದ ಬಂತು...
ಅವರಿಗೆ ಒಬ್ಬನೇ ಮಗನಂತೆ. ತುಂಬಾ ಪ್ರೀತಿಯಿಂದ ಓದಿಸಿದ್ರಂತೆ. ತಕ್ಕಂತೆ ಟ್ಯಾಲೆಂಟ್‍ಗನುಸಾರ ಅಮೇರಿಕಾದಲ್ಲಿ ವೈಧ್ಯಕೀಯ ಸಂಸ್ಥೆಯೊಂದರಲ್ಲಿ ವೃತ್ತಿಯನ್ನು ನಿರ್ವಹಿಸಲು ಅವಕಾಶ ದೊರೆತು ಅಲ್ಲಿಗೂ ಅವನನ್ನು ಕಳುಹಿಸಿಕೊಟ್ಟಿದ್ದರಂತೆ. ಆದರೆ ವಿದೇಶಕ್ಕೆ ಹೋದ ಮಗ ಒಂದೆರಡು ಬಾರಿ ಬಂದು ಹೋದವ ಮತ್ತೆ ವಾಪಸ್ಸು ಬರಲೇ ಇಲ್ಲ. ಅಲ್ಲಿಯೇ ಮದುವೆಯಾಗಿ ಸೆಟ್ಲ್ ಆದ ಆತ ಇವರನ್ನು ಹೇಗೆ ಮರೆತನೋ, ಅದ್ಯಾವ ಮನಸ್ಸು ಮರೆಯುವಂತೆ ಮಾಡಿತೋ ಇದುವರೆಗೂ ತಿಳಿದಿಲ್ಲ. ಸದ್ಯ ಸರ್ಕಾರದಿಂದ ಬರುವ 500 ರೂಪಾಯಿ ಮಾಸಾಶನದಿಂದ ಜೀವನ ದೂಡುತ್ತಿದ್ದಾರೆ. ಇªರು ಮಾತ್ರಾ ಇಂದಿಗೂ ಅವನ ಬರುವಿಕೆಗೆ ಕಾಯುತ್ತಲೇ ಇದ್ದಾರೆ. ಅಮೇರಿಕಾದಂತ ದೊಡ್ಡ ಕಂಟ್ರಿಯ ಜನರಿಗೆ ಮೆಡಿಸಿನ್ ಕೊಡುವ, ಖಾಯಿಲೆ ಗುಣಪಡಿಸುವ ಆತನಿಗೆ ತನ್ನ ತಂದೆ ತಾಯಿ ಇಲ್ಲಿ ಅನಾರೋಗ್ಯದಿಂದ, ನಿರಾಶಾಭಾವದಿಂದ, ಹೊಟ್ಟೆಗೂ ಹಿಟ್ಟಿಲ್ಲದೇ ಬದುಕುತ್ತಿರುವುದು ಕಾಣದೇ ಹೋಗಿದೆ!?.
ಇದು ಓನ್ಲಿ ಸ್ಯಾಂಪಲ್ ಅನಿಸುವ ಸ್ಟೋರಿ ಅಷ್ಟೇ. ಇದೇ ರೀತಿಯ ಇನ್ನೆಷ್ಟೋ ಸಮಸ್ಯೆಗಳು, ಕತೆಗಳು ನಮ್ಮೊಳಗೆ ಇವೆಯೋ ಪಟ್ಟಿ ಮಾಡುತ್ತಾ ಹೋದರೆ ಅಂತ್ಯವೇ ಕಾಣಲ್ಲ ಬಿಡಿ. ಸಮಾಜ ಯಾಕೆ ಹೀಗೆ ಆಗ್ತಿದೆ!?, ಸಾಮಾಜಿಕ ಸಂಬಂಧಗಳು ಯಾಂತ್ರೀಕೃತವಾಗುತ್ತಿವೆಯಾ? ಹಣದ ಮೋಹ ಸಂಬಂಧಗಳ ಮೌಲ್ಯವನ್ನು ಮರೆಯುತ್ತಿದೆಯಾ? ಜೀವವನ್ನೇ ಇತ್ತು ಜೀವ ನೀಡಿರುವ ಹೆತ್ತವರ್ಯಾಕೆ ನಮಗೆ ಭಾರವಾಗುತ್ತಿದ್ದಾರೆ!?. ಚಿಕ್ಕಂದಿನಲ್ಲಿ ಮಲಗಲು ಹಾಸಿಗೆಯಿಲ್ಲದಿದ್ದರೂ ಹೊದೆಯಲು ಬೆಡ್ ಶೀಟ್ ಇಲ್ಲದಿದ್ದರೂ , ಅಪ್ಪನ ಪಂಚೆಯನ್ನೋ, ಅಮ್ಮನ ಸೆರಗನ್ನೋ ಎಳೆದು ಹೊದ್ದು ಮಲಗಿದ್ದ ಮಕ್ಕಳಿಗೆ ಬೆಳೆದು ದೊಡ್ಡವರಾದ ಮೇಲೆ ಅರಮನೆಯಂತ ಬಂಗಲೆಯಲ್ಲಿ ವಾಸಿಸುತ್ತಿರುವಾಗ ತಂದೆ ತಾಯಿಯನ್ಯಾಕೆ ವೃದ್ದಾಶ್ರಮದ ಗೋಣಿಚೀಲದಲ್ಲಿ ಮಲಗಿಸಬೇಕನಿಸುತ್ತೆ!?, ಮಾನವೀಯತೆಯ ಮೌಲ್ಯ ನಮಗಿಲ್ವಾ!? ಅಥವಾ ಭಾವನೆ ಬಿಕಾರಿಯಾಗಿದೆಯಾ!? ತಿಳಿಯುತ್ತಿಲ್ಲ. ನೀವು ಸ್ವಲ್ಫ ಯೋಚಿಸಿ...
ವರ್ಷವಿಡೀ ಒಂದೇ ಮಾಸಿದ ಸೀರೆ ಉಟ್ಟರೂ, ಯಾವತ್ತೂ ಸಿಡುಕದೆ, ಚಳಿಗಾಲದ ಚಳಿಯಲ್ಲಿ ಮಗು ನಡುಗುವಾಗ ಅದೇ ಮಾಸಿದ ಸೀರೆಯಿಂದ ತನ್ನಪ್ಪುಗೆಯಲ್ಲೇ ಸುತ್ತಿ, ಬಿಸಿ ಉಸಿರಿನಿಂದ ಚಳಿಯನ್ನು ಬಡಿದೊಡಿಸಿದ ಅಮ್ಮನ ನೆನಪು ಬೆಳೆದು ದೊಡ್ಡವರಾದ ಮೇಲೆ ಯಾಕೆ ಮನಪಟಲದಲ್ಲಿ ಮೂಡುವುದಿಲ್ಲ. ಕೂಡಿಟ್ಟ ಅಷ್ಟು ದುಡ್ಡನ್ನು ಅನಾರೋಗ್ಯದ ಸಂಧರ್ಭ ಖಾಲಿ ಮಾಡಿದರೂ ಸಾಕಾಗದೆ ಇದ್ದಾಗ, ಕೈ ತುಂಬ ಸಾಲ ಮಾಡಿ ಹಗಲಿರುಳು ದುಡಿದು ದೇವರನ್ನು ಪ್ರಾರ್ಥಿಸಿ ಹರಕೆ ಹೊತ್ತುಕೊಳ್ಳುವ ತಂದೆಯ ಮಮತೆ ಮರೆಯಲು ಮನಸ್ಸಾದರೂ ಹೇಗೆ ಬರುತ್ತಿದೆಯೋ ಅರಿಯೋದೆ ಕಷ್ಟವಾಗಿದೆ.
ಒಂದು ತಿಳಿದುಕೊಳ್ಳಿ  ಹೆತ್ತವರಿಗೆ ಇಳಿವಯಸ್ಸಲ್ಲಿ ಬೇಕಾಗಿರುವುದು ತಮ್ಮ ಕರುಳಬಳ್ಳಿಯ ಪ್ರೀತಿ, ವಾತ್ಸಲ್ಯ, ಮತ್ತು ಮಮತೆ ಅಷ್ಟೆ. ಮಕ್ಕಳ ಅರಮನೆ, ಆಡಂಬರ ಐಶ್ವರ್ಯ, ಫಿಜಾ-ಬರ್ಗರ್, ಬಿರಿಯಾನಿಗಳಲ್ಲ. ನಮ್ಮ ಪೂರ್ವಜರ ಮನೆಗಳು ಅವಿಭಕ್ತ ಕುಟುಂಬದಲ್ಲೇ ಕೂಡಿದ್ದರಿಂದ ನಮ್ಮ ತಂದೆ ತಾಯಿಗಳು ಹೆಚ್ಚಾಗಿ ಅಂತಹ ವಾತಾವರಣದಲ್ಲೇ ಬೆಳೆದಿರುತ್ತಾರೆ ಅವರಿಗೆ ಒಂಟಿತನದಲ್ಲಿ ಬದುಕಲು ಬಿಟ್ಟರೆ ಅದು ಅಸಾಧ್ಯ. ಮನೆಯಲ್ಲಿ ಮಕ್ಕಳು-ಮೊಮ್ಮಕ್ಕಳು ಇದ್ದರೆ ಅವರ ಜೊತೆಗೂಡಿ ತಮ್ಮ ವೃದ್ದಾಪ್ಯವನ್ನು ಮರೆತು ಯವೌನದ ದಿನಗಳಿಗೆ ತಿರುಗಿ ನೋವನ್ನು ಮರೆತು ಸುಖಿಯಾಗಿರುತ್ತಾರೆ. ಮೊಮ್ಮಕ್ಕಳ ಆಟ ಪಾಠ ಮತ್ತು ಒಡನಾಟಗಳಲ್ಲಿ ಮಗದೊಮ್ಮೆ ಬದುಕಿನ ವಸಂತವನ್ನು ಪಡೆಯುತ್ತಾರೆ. ಒಂದು ನೆನಪಿಡಿ ಮಿತ್ರರೇ, ಬಾಳಿನ ಮುಸ್ಸಂಜೆಯ ಹೊತ್ತಲ್ಲಿ ಬೇಕಿರುವುದು ಬೋಗಾಭೋಗಗಳಲ್ಲ ಬದಲಾಗಿ ಕುಟುಂಬ ಭದ್ರತೆ ಮತ್ತು ನೆಮ್ಮದಿ. ಅದನ್ನು ನೀಡಿಲ್ಲವಾದರೆ ಅಂತಹ ಮಕ್ಕಳಿಂದ  ಸಮಾಜಕ್ಕೆ ಪ್ರಯೋಜನವಿಲ್ಲ, ಹೀಗೆ ಸಾಗಿದರೆÉ ಸಮಾಜದ ಅಧಃಪತನ ತಪ್ಪಿದಲ್ಲ.
ನಿಮಗೆ ಗೊತ್ತಾ!?...  ಪುಟ್ಟದಾಗಿ ಬಂದ ಈ ಜೀವಕೆ, ಪುಟಗಟ್ಟಲೇ ವಿದ್ಯೆಯ ಕೊಟ್ಟು, ಪ್ರಪಂಚಕ್ಕೆ ಪರಿಚಯಿಸುವ ಪ್ರಸ್ತಾವನೆ ತಂದೆಯಾದರೆ, ನೀರಿಲ್ಲದ ಈ ಬೇರಿಗೆ ನೀರುಣಿಸಿ , ನಯವಿನಯವ ತಿಳಿಪಡಿಸಿ ನಲ್ಮೆಯ ನಲಿವನ್ನು ಉಣಬಡಿಸಿ ಸಾರ್ಥಕತೆಯ ಜೀವನ ಕೊಡುವವಳೆ ತಾಯಿ. ಅಂತಹವರನ್ನು ದೇವರಂತೆ ಪೂಜಿಸಿ ಆರಾಧಿಸದರೆ ಪುಣ್ಯ ಬರುತ್ತದೆಯೇ ಹೊರತು ಮನೆಯಿಂದ ಹೊರಗಟ್ಟಿದರೆ ಸುಖಿಯಾಗುವೆ ಎನ್ನುವ ಗೊಡ್ಡು ನಂಬಿಕೆಯಿದ್ದರೆ ಬಿಟ್ಟು ಬಿಡಿ. ತಂದೆ ತಾಯಿಯರ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದು ಸಿಕ್ಕವನು ನಿಜವಾಗಿಯೂ ಪುಣ್ಯವಂತ.  ಈ ಮೇಲೆ ಹೇಳಿರುವ ಎರಡು ಉದಾಹರಣೆಯನ್ನು ದೀರ್ಘವಾಗಿ, ಆಳವಾಗಿ ಅರಿಯಬೇಕಾದರೆ ಒಮ್ಮೆ ನಿಮಗೆ ಹತ್ತಿರವಿರುವ ಅನಾಥಾಶ್ರಮಗಳಿಗೆ ಭೇಟಿ ಕೊಡಿ. ಅಲ್ಲಿ ಸಿಗುವ ಯಾರಾದರೂ ಒಬ್ಬರನ್ನು ಕುಳ್ಳಿರಿಸಿಕೊಂಡು ನಿಮ್ಮ ನೋವೇನು? ಎಂದು ಕೇಳಿ, ತಮ್ಮ ಇಳಿವಯಸ್ಸಿನಲ್ಲೂ ಅದುಮಿಟ್ಟುಕೊಂಡು ಬದುಕುತ್ತಿರುವ ಅವರ ನೋವು ಸಂಕಟವನ್ನೆಲ್ಲಾ ಒಮ್ಮೆ ಕೇಳಿದರೆ ನಿಜವಾಗಿಯೂ ಪ್ರಪಂಚ ಇಷ್ಟೊಂದು ಕೆಟ್ಟದಾಗಿದೆಯಾ ಎಂದು ಅನ್ನಿಸದಿರದು.
                    ಇಲ್ಲಿ ಪ್ರತಿಯೊಂದಕ್ಕೂ ಬೆಲೆಯಿದೆ ಆದರೆ ಮಾನವನ ಸಂಬಂಧಗಳಿಗೆ ಇಲ್ಲ. ಇಂಗ್ಲೀಷ್ ಸಂಸ್ಕøತಿ ನಮಲ್ಲೂ ಅಗಾಧವಾಗಿ ಲಗ್ಗೆ ಇಟ್ಟು ಕೆಡಿಸಲು ಇನ್ನೇನೂ ಬಾಕಿ ಇದೆ ಎನ್ನುವಷ್ಟು ಹದಗೆಡಿಸಿದೆ. ಒಟ್ಟಿನಲ್ಲಿ ಕರ್ಮದ ಭೂಮಿ ಕೆಟ್ಟ ಕರ್ಮದ ಕಡಲಾಗಿ ತೆರೆಕಾಣುತ್ತಿದೆ. ಏನೆ ಇರಲಿ ಹಿಂದಿನ ನಡೆ ನುಡಿಗಳಲ್ಲಿ ನಾವೆಷ್ಟೇ ಬದಲಾವಣೆ ಮಾಡಿಕೊಂಡರೂ, ನಮ್ಮ ಕರ್ಮ ಫಲಗಳಿಗೆ ಯಾವ ಬದಲಾವಣೆಯೂ ಇರುವುದಿಲ್ಲ. ನೀನೆನೂ ಮಾಡುತ್ತೀಯಾ? ನೀನದನ್ನೇ ಪಡೆಯುತ್ತೀಯಾ!! ಅದು ಇಲ್ಲಿಯೇ ಪಡೆದುಕೊಂಡೆ ಹೋಗುತ್ತೀಯಾ!!! ಅಷ್ಟೆ... ನಮ್ಮ ಮುಂದೆ ಅನೇಕ ದೇವರು ಇರಬಹುದು. ಆದರೆ ಕಣ್ಮುಂದೆ ಇರುವ ಒಂದೇ ದೇವರೆಂದರೆ ಅದು ನಮ್ಮ ಅಪ್ಪ ಅಮ್ಮ ಮಾತ್ರಾ... ಎಂಥಾ ಸಂಧರ್ಭದಲ್ಲೂ ಅವರಿಗೆ ನೋವು ಕೊಡೊ ಕೆಲಸಕ್ಕೆ ಕೈ ಹಾಕಬೇಡಿ. ಇಷ್ಟು ದಿನ ಪಾಪದಲ್ಲೇ ಕರ್ಮದ ಕಡಲು ಹರಿಸಿದ್ದರೆ ಇನ್ನಾದರೂ ಎದ್ದೇಳಿ... ಪುಣ್ಯವಂತರಾಗೋಣ...ಹಾಗಂತ ಎಲ್ಲರೂ ತಪ್ಪು ಮಾಡುತ್ತಿದ್ದಾರೆ ಎನ್ನುವುದು ನನ್ನ ವಾದವಲ್ಲ. ಮಾಡಿರುವವರು ಅವರವರೇ ಅರಿತುಕೊಳ್ಳಬೇಕು ನಮ್ಮ ಆಶಾವಾದ ಎಷ್ಟು ನಿಜವಾಗಿದೆ ಮತ್ತು ಎಷ್ಟು ನಿರೀಕ್ಷಣಾ ರಹಿತವಾಗಿದೆ ಎಂದು ಮನನ ಮಾಡಿಕೊಳ್ಳಬೇಕು. ಒಂದಂತು ನಿಜ!!, ಸಮಾಜದಲ್ಲಿ ಇಂದು ಹೆಚ್ಚುತ್ತಿರುವ ಅಸಹನೆ, ಧ್ವೇಷ ವಂಚನೆಗಳಿಗೆ ಮರೆಯಾಗುತ್ತಿರುವ ಮೌಲ್ಯ ಶಿಕ್ಷಣದ ಕೊರತೆ ಒಂದು ಕಡೆಯಾದರೆ, ವ್ಯಾಪಾರೀಕರಣದ ಇಂದಿನ ಶಿಕ್ಷಣ ಪದ್ದತಿಯಲ್ಲಿ ಕೇವಲ ಹಣ ಗಳಿಕೆ ಮತ್ತು ಉನ್ನತ ಹುದ್ದೆಗಳನ್ನು ಪಡೆಯುವ ಕುರಿತು ಭೋಧಿಸಲಾಗುತ್ತಿರುವುದು ಇನ್ನೊಂದು ಕಾರಣ. ಮಾನವೀಯ ಸಂಬಂಧಗಳ ಅಡಿಪಾಯವನ್ನು ಗಟ್ಟಿಗೊಳಿಸುವ ಮೌಲ್ಯ ಶಿಕ್ಷಣವನ್ನು ಯಾರೂ ನೀಡುತ್ತಿಲ್ಲ. ಸಂಬಂಧಗಳು ಕಮರ್ಷಿಯಲ್ ಆಗುತ್ತಿರುವ ಇಂದಿನ ಜೀವನ ಪದ್ದತಿ ಬದಲಾಗಬೇಕಿದೆ. ಭೋಗ ಸಂಸ್ಕøತಿಯಿಂದ ಹೊರಬರಬೇಕಿದೆ. ಹಣ ಗಳಿಸುವ ಶಿಕ್ಷಣದ ಬದಲಾಗಿ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಭಾರತೀಯ ಸನಾತನ ಸಂಸ್ಕøತಿಯನ್ನು, ಅದರ ಅಗತ್ಯವನ್ನು, ಶ್ರೇಷ್ಠತೆಯನ್ನು ಕಲಿಸಬೇಕಿದೆ, ಕಲಿಯಬೇಕಿದೆ...

ಸಿರಿ ಬುಲೆಟ್ - ಉಗ್ರವಾದದ ಭೀತಿಯಲ್ಲಿ ಭಾರತ...



ಭಾರತದಲ್ಲಿ ಬೇರು ಬಿಡುತ್ತಿದ್ದಾರೆ ಐಸಿಸ್ ಉಗ್ರರು...
ಎನ್‍ಐಎ ಯಿಂದ ಬೆಚ್ಚಿಬೀಳಿಸುವ ಮಾಹಿತಿ.
30 ಸಾವಿರ ಭಾರತೀಯ ಯುವಕರು ಐಸಿಸ್ ಸೇರಲು ಉತ್ಸುಕ...
ಈ ಹಣೆಬರೆಕ್ಕೆ ಹೊಣೆಯಾಗುವವರ್ಯಾರು!??.


                     ‘ಉಗ್ರ’ವಾದ ಎನ್ನುವುದು ಮಾನವ ಕುಲಕ್ಕೆ ಅಂಟಿದ ಶಾಪ. ಅದು ನಾಗರಿಕಾ ಸಮಾಜ ನೆಮ್ಮದಿಯಿಂದಿರಲು ಬಿಡದ ಒಂದು ಬಹುರೂಪಿ ಬಾಹು. ‘ಕೊಲ್ಲು’ ಅಥವಾ ‘ಕೊಲ್ಲಲ್ಪಡು’ ಎಂಬ ತತ್ವಕ್ಕೆ ಪ್ರಾಧಾನ್ಯತೆ ನೀಡುವ ಉಗ್ರವಾದ ಇಂದು ತನ್ನ ಧೈತ್ಯ ಹಿಡಿತದ ಮೂಲಕ ಇಡೀ ವಿಶ್ವವನ್ನಲ್ಲದೇ, ಭಾರತವನ್ನೂ ಬಿಡದೆ ಬೆಚ್ಚಿ ಬೀಳಿಸುವಂತಹ ದುಷ್ಕøತ್ಯಗಳನ್ನು ಎಸಗುತ್ತಿರುವುದು ಆತಂಕಕಾರಿ ಬೆಳವಣಿಯಾಗಿದೆ. ಇದೀಗ ದೇಶವ್ಯಾಪಿ ಹರಡುತ್ತಿರುವ ಇದು ಅಮಾಯಕ ಜನರ ಜೀವ ಮತ್ತು ಆಸ್ತಿ ಪಾಸ್ತಿಗಳ ಮಾರಣಹೋಮ ಮಾಡುತ್ತಿರುವುದು ಶೋಚನೀಯ ಎನಿಸುತ್ತದೆ.
ಉಗ್ರವಾದವು ಜಾತಿ ವಾದದಿಂದಲೋ!, ಒಂದು ರಾಷ್ಟ್ರದ ಪ್ರಗತಿ ಇನ್ನೊಂದು ರಾಷ್ಟ್ರದ ಕೋಮುವಾದಿಗಳಿಗೆ ಸಹಿಸಲಾಗದೆಯೋ!, ನೊಂದ ಜೀವನ ಬೇಸತ್ತು ಒಳಗಿನ ಉರಿ ಕೋಪವನ್ನು ಧಮನ ಮಾಡಿಕೊಳ್ಳುವ ಸಲುವಾಗಿಯೋ!, ಸಿಗದ ಸ್ವಾತಂತ್ರ್ಯ ಪಡೆಯಲೋಸುಗವಾಗಿಯೋ!!, ಸದಾ ಒಂದಿಲ್ಲೊಂದು ಬೇಡಿಕೆಯನ್ನಿಟ್ಟು ಚಾಕು, ಚೂರಿ, ಬಂದೂಕು, ಬಾಂಬ್ ಹಿಡಿದು ನಿಷ್ಕರುಣೆ ತಲೆದೋರಿಸಿಕೊಂಡು ರಕ್ತದೋಕುಳಿ ಹರಿಸುತ್ತಲೇ ಎಲ್ಲರನ್ನು ಭಯಪಡಿಸುತ್ತಿದೆ.
ಈ ಹಿಂದೆ ಅನೇಕ ಉಗ್ರಗಾಮಿ ಸಂಘಟನೆಗಳು ರೂಪ ತಳೆದು, ಅಟ್ಟಹಾಸ ಮೆರೆದು ಕಳಚಿ ಹೋಗಿದ್ದು, ಇದೀಗ ಎಲ್ಲವೂ ಒಂದು ಹಂತಕ್ಕೆ ನಿರಾಳವಾಗಿದೆ ಎನ್ನುವಾಗಲೇ ಮತ್ತೊಂದು ಉಗ್ರ ಸಂಘಟನೆ ತಲೆಯೆತ್ತಿ ನಿಂತಿದೆ.  ಅದರಲ್ಲೂ ನಮ್ಮ ಭಾರತಕ್ಕೂ ಆ ಸಂಘಟನೆ ಕಾಲಿಟ್ಟು ಇಲ್ಲಿನ ಜನರನ್ನೂ ತನ್ನತ್ತ ಸೆಳೆದುಕೊಂಡು ಅತೀ ಕಡಿಮೆ ಅವಧಿಯಲ್ಲಿ ಕೆಡವಲು ಕಷ್ಟವೇನೋ ಎಂಬಂತೆ ಬಲವಾಗಿ ನಿಂತಿದೆ ಎಂದರೆ ನೀವು ನಂಬಲಿಕ್ಕಿಲ್ಲ...
           ಎಸ್!... ಅದುವೇ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆ. ಅಮೇರಿಕಾದಂತ ದೊಡ್ಡ ರಾಷ್ಟ್ರಕ್ಕೆ ತಲೆನೋವು ನೀಡಿರುವ ಈ ಉಗ್ರರ ಕೃತ್ಯಗಳು ನಮ್ಮಲ್ಲಿಲ್ಲ ಬಿಡು ಎಂದು ಬೆಚ್ಚಗೆ ಕುಳಿತು ಎಲ್ಲೋ ತಲೆ ಕತ್ತರಿಸಿರುವ, ಬಾಂಬ್ ಸಿಡಿಸಿರುವ ದೃಶ್ಯಗಳನ್ನು ಕಣ್ಣು ಮುಚ್ಚಿ ನೋಡಿಕೊಂಡು ಸಮ್ಮನಾಗಿದ್ದೆವು. ನಾವು ಭಾರತೀಯರಲ್ಲವೇ ನಮ್ಮ ಮನೆಯ ದೋಸೆ ತೂತಾದರೂ ನಮಗೆ ತಿಳಿಯಲ್ಲ, ಬೇರೆಯವರ ಮನೆಯ ದೋಸೆ ತೂತಾಗಿದ್ದರ ಬಗ್ಗೆಯೇ ಮಾತಾಡುವುದು ಜಾಸ್ತಿ. ಇದು ಕೂಡ ಹಾಗೆ ಆಗಿದೆ ಅನ್ನಿಸುತ್ತಿದೆ. ಅವರ ಸಂಘಟನೆ ಬೆಳೆದು ಎಲ್ಲೋ ಪ್ರತಾಪ ತೋರುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಕುಳಿತು ಇದೀಗ ನಮ್ಮೂರಲ್ಲೇ ಉಗ್ರ ಸಂಘಟನೆ ಬಲವಾಗಿ ನಿಂತಿದೆ, ನಮ್ಮನ್ನು ನುಂಗುವುದು ಗ್ಯಾರಂಟಿ ಎನ್ನುವಾಗಲೇ ತಲೆಯಲ್ಲಿ ಎದ್ದೇಳುವ ಅಲಾರಾಂ ಗೊಣಗಿದ್ದು ನೋಡಿ!!.
        ಎಲ್ಲೋ ಇದ್ದ ಐಸಿಸ್ ಉಗ್ರರು ಇದೀಗ ಭಾರತವನ್ನೂ ಟಾರ್ಗೆಟ್ ಮಾಡಿದ್ದು, ಮೊನ್ನೆ ಮೊನ್ನೆ ನಡೆದ ಗಣರಾಜ್ಯೋತ್ಸವದ ಮುನ್ನಾದಿನ ನಡೆದ ವಿಶೇಷ ಕಾರ್ಯಚರಣೆಯಲ್ಲಿ ಬಂಧಿತರಾಗಿರುವವರು ಭಾರತದಲ್ಲಿ ಐಸಿಸ್ ಸಂಘಟನೆಯ ಪ್ರಮುಖರು ಎನ್ನುವ ಅಘಾತಕಾರಿ ಮಾಹಿತಿಯನ್ನು ನಮ್ಮ ರಾಷ್ಟ್ರೀಯ ತನಿಖಾ ತಂಡ (ಎನ್‍ಐಎ)ದ ಅಧಿಕಾರಿಗಳು ಹೊರಹಾಕಿದಾಗಲೇ ತಿಳಿದದ್ದು ಅವರು ನಮ್ಮೊರೆಗೂ ಬಂದಿದ್ದಾರೆಂದು!. ಅಷ್ಟೇ ಅಲ್ಲದೇ ಇತ್ತೀಚಿನ ವರದಿಗಳ ಪ್ರಕಾರ ಐಸಿಸ್ ಮತ್ತು ಇಂಡಿಯನ್ ಮುಜಾಹಿದ್ದೀನ್ ಜೊತೆಯಾಗಿ ವಿದ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿತ್ತು  ಎನ್ನುವುದೂ ಬಹಿರಂಗವಾಗಿದೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿಗಳ ಮೇರೆಗೆ, ಆರು ರಾಜ್ಯಗಳಲ್ಲಿ ಏಕಕಾಲಕ್ಕೆ  ದಾಳಿ ನಡೆಸಿದ್ದ ಎನ್‍ಐಎ ಅಧಿಕಾರಿಗಳು ಐಸಿಸ್ ಜೊತೆಗೆ ನಂಟು ಹೊಂದಿದ ಆರೋಪದ ಮೇಲೆ ಒಟ್ಟು 14 ಜನರನ್ನು ಬಂದಿಸಿದ್ದರು. ಈ ಆರೋಪ ಇದೀಗ ನಿಜವಾಗಿದ್ದು, ಬಂಧಿತರಿಗೆ ಐಸಿಸ್ ಜೊತೆಗೆ ನಂಟಿರುವುದು ಖಚಿತವಾಗಿದೆ. ಬಂಧಿತರು ಐಸಿಸ್ ಅಂಗ ಸಂಸ್ಥೆ ‘ಅನ್ಸರ್ ವುಲ್ ತವಾಹಿದ್ ಫಿ ಬಿಲಾಲ್ ಅಲ್ ಹಿಂದ್’ (ಎಯುಪಿ) ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಎಂದು ತಿಳಿದುಬಂದಿದೆ. ಜೊತೆಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಿ, ಶರಿಯಾ ಕಾನೂನು ತರಲು ಸಂಚು ರೂಪಿಸಿದ್ದರು ಎಂಬ ಅಂಶ ಕೂಡ ಬಟ್ಟಂಬಯಲಾಗಿದೆ.
ತಿಂಗಳ ಹಿಂದೆ ಐಸಿಸ್ ಉಗ್ರರನ್ನು ಮಣಿಸಲು ಅಮೇರಿಕಾ, ಬ್ರಿಟನ್, ಫ್ರಾನ್ಸ್ ಹಾಗೂ ಸೌದಿ ಅರೇಬಿಯಾದಂಥ ಮುಸ್ಲಿಂ ರಾಷ್ಟ್ರಗಳು ಒಂದುಗೂಡಿದ್ದು, ಅದರೊಂದಿಗೆ ಭಾರತವೂ ಕೂಡ ಕೈಜೋಡಿಸುವುದಾಗಿ ಹೇಳಿಕೆ ನೀಡಿತ್ತು. ಹೇಳಿಕೆಯ ಮೊದಲೇ ಉಗ್ರರು ನಮ್ಮದೇಶವನ್ನು ಟಾರ್ಗೆಟ್ ಮಾಡಿದ್ದು, ಈಗಾಗಲೇ ಬೀಡುಬಿಟ್ಟು, ದೇಶದ ಅನೇಕ ಯುವಕರನ್ನು ಒಟ್ಟುಗೂಡಿಸಿ ತಂಡ ಕಟ್ಟಿ ವಿದ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದೆ ಎನ್ನುವುದನ್ನು ಕೇಳಿ ರಕ್ಷಣಾ ಇಲಾಖೆ ಇದೀಗ ನಿದ್ದೆಗೆಟ್ಟಿದೆ.
ನಮ್ಮ ದೇಶದ ಅಲ್ಪಸಂಖ್ಯಾತ ಸಮುದಾಯಯದ ಹಲವಾರು ಯುವಕರಿಗೆ ಐಸಿಸ್ ಉಗ್ರ ಸಂಘಟನೆಯಿಂದ ಭಾರೀ ಆಮಿಷಗಳು ಬರುತ್ತಿದ್ದು, ಸಂಘಟನೆಗೆ ಸೇರುವಂತೆ ಉತ್ತೇಜಿಸಲಾಗುತ್ತಿದೆ. ಈ ಬಗ್ಗೆ ಸಂಶಯಾಸ್ಪದವಾಗಿ ಮುಂಬೈನ ಕಲ್ಯಾಣ್ ಪ್ರದೇಶದ ನಾಲ್ವರು ಇಂಜಿನಿಯರ್ ವಿದ್ಯಾರ್ಥಿಗಳು ಹಾಗೂ ಇತರ ಏಳು ಮಂದಿ ಭಾರತೀಯ ಯುವಕರು 2015 ರಲ್ಲೇ ಸಿಕ್ಕಿ ಹಾಕಿಕೊಂಡಿದ್ದರು. ಆದರೆ ನಂಬಿಕೆ ಮಹಾಶಯರಾದ ನಾವುಗಳು ಹುಡುಗರು ಅಮಾಯಕರು, ಹಾಗೇನಿಲ್ಲ ಎಂದು ನಂಬಿರಲಿಲ್ಲ. ಆದರೆ ಈಗ ಹೌದಿರಬಹುದೇನೋ ಅನಿಸುತ್ತಿದೆ ಆದರೆ ಪ್ರಯೋಜನವಿಲ್ಲ ಐಸಿಸ್ ಎಂಬ ಬೀಜ ಮೊಳಕೆಯೊಡೆದು ಮgವಾಗಿ ಗಟ್ಟಿತನದಲಿ ಬೆಳೆದು ನಿಂತಾಗಿದೆ.
           ವರ್ಷದ ಹಿಂದೆ  ಅಮೇರಿಕಾದ ಇಬ್ಬರು ಪತ್ರಕರ್ತರನ್ನು ಹತ್ಯೆಗೈದ ಐಸಿಸ್ ಉಗ್ರರ ವಿರುದ್ಧ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಆಕ್ರೋಶಗೊಂಡು ಐಸಿಸ್ ಉಗ್ರರ ಹುಟ್ಟಡಗಿಸುತ್ತೇನೆಂದು ಬೊಬ್ಬಿರುವಾಗಲೇ ವಿಶ್ವವ್ಯಾಪಿ ತನ್ನ ಕಬಂಧ ಬಾಹುವನ್ನು ಚಾಚಿತ್ತು ಈ ಉಗ್ರಗಾಮಿ ತಂಡ. ಅದಾದ ನಂತರ ಅಲ್ಲಿಷ್ಟು ಜನ, ಇಲ್ಲಿಷ್ಟು ಜನ, ಅಲ್ಲಿಷ್ಟು ಹೆಂಗಳೆಯರು, ಇಲ್ಲಿಷ್ಟು ಮಕ್ಕಳ ತಲೆ ಕತ್ತರಿಸಿ, ನೇಣಿಗೇರಿಸಿ, ಬಾಂಬ್ ಸಿಡಿಸಿ ವಿಡಿಯೋ ತುಣುಕನ್ನು ಹರಿಯ ಬಿಟ್ಟು ಭಯ ಹುಟ್ಟಿಸಿದ್ದರೂ, ಇನ್ನೂ ಅವರ ಹುಟ್ಟಡಗಿಸುವ ಮಾತುಕತೆಗಳು ನಡೆಯುತಿವೆಯೇ ಹೊರತು ನಿರ್ದಿಷ್ಟ ಶಾಸನ ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲ.
            ಗುಪ್ತಚರ ಇಲಾಖೆ ನೀಡಿರುವ ಇನ್ನೊಂದು ಮಾಹಿತಿಯ ಪ್ರಕಾರ ಐಸಿಸ್ ಸೇರುವವರಿಗೆ  ಆನ್ ಲೈನ್‍ನಲ್ಲೇ ಬಾಂಬ್ ತಯಾರಿಯ ತರಬೇತಿ ನೀಡಲಾಗುತ್ತಂತೆ. ಮಹಾರಾಷ್ಟ್ರ ಎಟಿಸ್ ಈ ಮಾಹಿತಿ ನೀಡಿದ್ದು, ಐಸಿಸ್ ಜತೆ ನಂಟಿರುವ ಬಹುತೇಕರು ಬಾಂಬ್ ತಯಾರಿಯಲ್ಲಿ ನಿಪುಣತೆ ಹೊಂದಿದ್ದಾರಂತೆÉ. ಇವುಗಳ ಮೂಲಕ ವಿದ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದಾರೆ ಎನ್ನುವುದು ವಿಚಾರಣೆಯಲ್ಲಿ  ತಿಳಿದುಬಂದಿದೆ. ಇನ್ನೊಂದು ಸ್ಪೋಟಕ ಮಾಹಿತಿಯ ಪ್ರಕಾರ, ಐಸಿಸ್ ಉಗ್ರರ ನೇಮಕಕ್ಕೆ ಸಿರಿಯಾ ಮತ್ತು ಇರಾಕ್‍ನಲ್ಲಿರುವವರಿಂದ ಸಾಧ್ಯವಾದಷ್ಟು ಹಣ ಸಿಗುತ್ತಿರಲಿಲ್ಲ. ಹೀಗಾಗಿ ಸಿಕ್ಕ ಸಿಕ್ಕವರನ್ನು ದೋಚಿ, ಹಫ್ತಾ ವಸೂಲಿ ಮಾಡಿ ಕಳ್ಳತನ ಮಾಡಿ ಎಂದು ನಾಯಕ ಮುದ್ದಾಬಿರ್ ಮುಸ್ತಾಕ್ ಶೇಖ್ ಭಾರತದಲ್ಲಿದ್ದ ಉಗ್ರರಿಗೆ ಆದೇಶ ನೀಡಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಎಲ್ಲ ಉಗ್ರ ಸಂಘಟನೆಗಳನ್ನು ಒಟ್ಟು ಗೂಡಿಸಲು ಮುದ್ದಾಬಿರ್ ಶೇಖ್ ಚಿಂತಿಸಿದ್ದ ಎನ್ನಲಾಗಿದೆ. ಈ ಮೂಲಕ  ಐಸಿಸ್ ಮೂಲ ಸಂಘಟನೆ ಹೊಂದಿರುವ ಎಲ್ಲ ಜಿಹಾದಿಗಳು ಒಟ್ಟಾಗಿ  ಕೆಲಸ ಮಾಡಬೇಕು ಎಂಬುದನ್ನು ಪ್ರತಿಪಾದಿಸುತ್ತಿದ್ದ ಎಂದು ತಿಳಿದುಬಂದಿದೆ. ಸಂಘಟನೆ ಬಲಪಡಿಸಲು ಹಣದ ಅವಶ್ಯಕತೆ ಇದೆ ಇದಕ್ಕಾಗಿ ನಿಮ್ಮಲ್ಲಿರುವ ಹಣ ನೀಡಿ, ಜೊತೆಗೆ ನಿಮಗೆ ಹೇಗೆ ಸಾಧ್ಯವಾದರೂ ಸಂಪಾದನೆ ಮಾಡಿ ಎಂದು ಹೇಳಿದ್ದ. ಅಲ್ಲದೇ ತನ್ನ ಬಳಿಯಿದ್ದ 1.4 ಲಕ್ಷ ಹಣವನ್ನು  ಮುದ್ದಾಬಿರ್ ಐಸಿಸ್ ಸಂಘಟನೆಗೆ ಖರ್ಚು ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
           ಈ ಸಂಘಟನೆಯಲ್ಲಿ ಬಹುತೇಕ ಯುವಕರೇ ಇದ್ದು, ಹೊಸ ಸೇರ್ಪಡೆಗೆ ಈಗಾಗಲೇ 30,000 ಭಾರತೀಯ ಯುವಕರು ಉತ್ಸುಕ ತೋರಿದ್ದಾರೆಂದು ಹೇಳಲಾಗಿದೆ. ಭಾರತದಲ್ಲಿ ಕೆಲಸ ಮಾಡುವ ಐಸಿಸ್ ಹುಡುಗರನ್ನು ವಿದೇಶದಿಂದಲೇ ನಿಯಂತ್ರ¸ಲಾಗುತ್ತಿದ್ದು, ಇಲ್ಲಿರುವ ಉಗ್ರರು ಮಾಹಿತಿ ರವಾನಿಸಿದರೆ ವಿದೇಶದಲ್ಲಿ ದಾಳಿಯ ಸಂಚು ರೂಪುಗೊಳ್ಳುತ್ತಂತೆ. ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವುದರಿಂದ ಐಸಿಸ್ ಸಂಘÀಟನೆ ಬೆಳೆಸುವ ಉದ್ದೇಶ ಹೆಚ್ಚಾಗಿಯೇ ಹೊಂದಲಾಗಿದೆ. ಐಸಿಸ್ ಸೇರಿದ ತಕ್ಷಣ ವಿಧ್ವಂಸಕ ಕೃತ್ಯ ಮಾಡಲು ತಿಳಿಸಿಲ್ಲ, ಬದಲಾಗಿ ಜನಬಲ ಮಾಡಿ ಆನಂತರ ಉಳಿದ ಕಾರ್ಯಕ್ಕೆ ಸಂಚು ರೂಪಿಸಲಾಗಿದೆ ಎಂದು ಸೆರೆ ಸಿಕ್ಕ ಉಗ್ರರಿಂದ ತಿಳಿದುಬಂದಿದೆ.
         ಅಧಿಕ ಪ್ರಮಾಣದಲ್ಲಿ ಐಸಿಸ್ ಸೇರಲು ಉತ್ಸುಕತೆ ತೋರಿಸಿರುವ ಯುವಕರು ಯಾಕೆ ಈ ರೀತಿ ನಿರ್ಣಯ ತೆಗೆದುಕೊಂಡಿದ್ದಾರೆನ್ನುವ ಜಾಡು ಹಿಡಿದರೆ ನಮ್ಮ ದೇಶದಲ್ಲಿ ಸಿಗುವ ಸಂಬಳವೇ ಕಾರಣ ಎನ್ನಲಾಗಿದೆ. ದೇಶ ಬಡತನ, ಭ್ರಷ್ಟಾಚಾರ ಇತ್ಯಾದಿಗಳಿಂದ ಈಗಾಗಲೇ ಬರಡಾಗಿದ್ದು, ಈ ಹಿಂದಿನ ಉಗ್ರರ ಹೊಡೆತಕ್ಕೆ ಸಿಲುಕಿ ನಡುಗಿ ಹೋಗಿರುವಾಗಲೇ ಇದೀಗ ಐಸಿಸ್ ಎನ್ನುವ, ಬೆಚ್ಚಿಬೀಳಿಸುವ ಉಗ್ರ ಸಂಗಟನೆಯಿಂದ ಮತ್ತಷ್ಟು ಫಜೀತಿಗೆ ಸಿಲುಕಿದೆ. ಈ ಬೆಳವಣಿಗೆಯ ಬಗ್ಗೆ ಪ್ರತಿ ಭಾರತೀಯ ಪ್ರಜೆಯೂ ಯೋಚಿಸಬೇಕಿದೆ. ಕೇವಲ ಬಡತನ, ಹಸಿವು ಇತ್ಯಾದಿ ಕಾರಣವೊಡ್ಡಿ ಉಗ್ರವಾದಕ್ಕೆ ಪ್ರೇರೆಪಣೆಯಾಗುವುದನ್ನು ನಿಲ್ಲಿಸಬೇಕಿದೆ...ಇಂದಿನ ತಲೆಮಾರು ಎತ್ತ ಸಾಗುತ್ತಿದೆ, ಏನಾಗುತ್ತಿದೆ ಎಂಬುದನ್ನು ಚಿಂತಿಸಿ.., ಹೀಗೆ ಆದರೆ ನಮ್ಮ ಮುಂದಿನ ಪೀಳಿಗೆಯ ಹಣೆಬರ ಏನಾಗಬಹುದು!? ಮತ್ತು ಅವರ ಹಣೆಬರಕ್ಕೆ ಹೊಣೆಯಾರು...!? ಎಂಬುದನ್ನು ಯೋಚಿಸಬೇಕಿದೆ.
       ಎಚ್ಚರವಹಿಸಿ, ನಾವೆಂದಿಗೂ ದೇಶ ದ್ರೋಹಿಯಾಗೋದು ಬೇಡ, ಕ್ರಾಂತಿಯಲ್ಲಿ ರಕ್ತ ನೋಡಲು ಹವಣಿಸುವುದು ಬೇಡ, ಕಷ್ಟವಿದೆಯೆಂದು ರಕ್ತಪಾತಕ್ಕೆ ಧುಮುಕಿದರೆ ನಮಗೂ ನಿದ್ರೆಯಿರದು, ಇನ್ನೊಬ್ಬರಿಗೂ ಸುಖವಿರದು...ಯುವಕರೇ ನಾವು ಎದ್ದೇಳಬೇಕಿರುವುದು ಹೊಸ ಪ್ರಭೆಯಿಂದಲೇ ಹೊರತು ಕಾಣದ ಕ್ರಾಂತಿಯಿಂದಲ್ಲ...

ಐಸಿಸ್ ಸಂಘಟನೆಯ ನೇಮಕ ಪ್ರಕ್ರಿಯೆ:
ಸಾಮಾಜಿಕವಾಗಿ ಹಿಂದುಳಿದು ನೊಂದ ನಿರುದ್ಯೋಗಿಗಳನ್ನು ಟಾರ್ಗೆಟ್ ಮಾಡುವುದು .
ಬಡ ಹಾಗೂ ಹಣಕಾಸಿನ ಅವಶ್ಯಕತೆ ಇರುವವರಿಗೆ ಶರಿಯಾ ಕಾನೂನಿನ ಬೋಧನೆ
ಅಂತರ್ಜಾಲ ಬಳಕೆಯ ಸಂಪೂರ್ಣ ಮಾಹಿತಿ ಇರುವ ಯುವಕರನ್ನು ಪತ್ತೆ ಹಚ್ಚುವುದು.
ಐಸಿಸ್ ಸಂಘಟನೆ ಸೇರಿದ ಮೇಲೆ ಪ್ರತ್ಯೇಕ ಕೋಣೆಗಳಲ್ಲಿ ವಾಸಕ್ಕಿಡುವುದು.
ಆ ಪ್ರತ್ಯೇಕ ಕೋಣೆಗಳಲ್ಲಿ ಐಸಿಸ್ ವಾದದ ಉಪದೇಶ ಬಿತ್ತುವುದು.
ಶಸ್ತ್ರಾಸ್ತ್ರಗಳ ಬಳಕೆ, ಬಾಂಬ್ ತಯಾರಿಕೆಯ ತರಬೇತಿ ನೀಡುವುದು
ತರಬೇತಿ ಮಧ್ಯದಲ್ಲಿ ಐಸಿಸ್ ತ್ಯಜಿಸಲು ನಿರ್ಧರಿಸಿದರೆ ಮರಣದಂಡನೆ.
ಮನಪರಿವರ್ತನೆ ಆಗಿರುವ ಬಗ್ಗೆ ಖಚಿತವಾದ ಮೇಲೆ ದುಷ್ಕತ್ಯಕ್ಕೆ ಬಳಕೆ.
 

Saturday, 13 February 2016

ಭಾವದ ಬೆನ್ನೇರಿ...ಈ ಗುಟ್ಟಲ್ಲಿ ಶಾಮೀಲು ನೀನು...



(ಪ್ರೇಮಿಗಳ ದಿನದ ವಿಶೇಷವಾಗೊಂದು ಲೇಖನ. ಓದುವ ಮುನ್ನ ಎಚ್ಚರಿಕೆಯ ಮಣೆ, ಹುಡುಗಿಯರೇ ನಿಮ್ಮ ಹಾರ್ಟ್‍ಗೆ ನೋವಾದರೆ ನಾನಲ್ಲ ಹೊಣೆ)
ಹಾಯ್ ಡಿಯರ್,
ಇ...
“ ಎಲ್ಲಿಂದ ಬಂದೆ ನೀನೊಬ್ಬಳೆ..,
ಊಹೆಗೂ ಮೀರಿದ ಗಂಧರ್ವಳೆ..,
ಕಾಡಿಹೆ ನೀನು ಇಂದಿಗೂ ನನ್ನೊಬ್ಬಳೆ...”


ಇಲ್ ಕೇಳು...
ನೋ ಡೌಟ್...
 ನಾನೊಬ್ಬ ತ್ಯಾಗಿಯಾಗಿ ತಂತಿ ಮೀಟುವುದು ಖಚಿತ, ಅದಕ್ಕೆ ಮನಪೂರ್ಣ ಸಿದ್ಧನಾಗಿರುವುದು ನಿಜ...ಆರಾಮಾಗಿ ಸ್ವಚ್ಚಂದದಿ ಬಾನಂಗಳದಲ್ಲಿ ಹಾರಾಡಿಕೊಂಡಿದ್ದ ನನ್ನ ಭ್ರಾಂತಿ ಮಂಪರಿಗೆ ಬಲೆ ಬೀಸಿ ಮನವ ಕದ್ದಿದ್ದು ನೀನಾ!? ನಿನ್ನಾ ಚೆಲುವಾ!!? ಎನ್ನುವ ಸಂಶಯ ಇಂದಿಗೂ ನನ್ನೊಳಗೆ ಪ್ರಶ್ನೆಯಾಗಿಯೇ ಉಳಿದಿದೆ. ನಿಂಗೊತ್ತಾ!?..,ನಿನ್ನ ಮೋಹಕತೆ ಈಗಲೂ ನನ್ನನ್ನ ಬಡಿದೆಬ್ಬಿಸುತ್ತೆ, ಪುಟಿದೆಬ್ಬಿಸುತ್ತೆ, ಕಳವಳಗೊಳ್ಳುವಂತೆ ಮಾಡುತ್ತೆ, ಆದರೂ ಇದ್ಯಾವುದು ನಿನಗೆ ತಿಳಿದಿಲ್ಲ ಬಿಡು. ನಾನೊಂತರ ಹೂವಿನ ಸಂತೆಗೆ ಬಂದಿರೋ ದುಂಬಿ ಅನಿಸಿದರೂ, ನನ್ನ ಮನಸಿಗೆ ಸುವಾಸನೆ ಬೀರಿದ ಹೂ ಮಾತ್ರಾ ನೀನೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಒಮ್ಮೊಮ್ಮೇ ಹೀಗೇ ಕಳೆಯಲಿ ಜೀವನಾ, ಹೀಗೆ ಮೆರೆಯಲಿ ತನುಮನ ಅನಿಸಿದರೂ ಮುಂದೊಂದು ದಿನ ನೀ ಸಿಗಲಾರೆಯೇನೋ ಅನ್ನಿಸಿ ಬೇಡ ಸುಮ್ಮನಿರು ಎನ್ನುವ ಮೌನದಲ್ಲೇ ನಿಟ್ಟುಸಿರಿಯುತ್ತೇನೆ.
ಬೇಜಾರಿಲ್ಲ.., 
ಈಗಲೂ ರಾತ್ರಿ ಸಮಯ ಬಾನಂಗಳಕ್ಕೆ ಮುಖ ಮಾಡಿ ನಿಂತರೆ ಅಗೋಚರಕ್ಕೆ ನಕ್ಷತ್ರಗಳ ರಾಶಿ ಮಧ್ಯೆ ನಿನ್ನ ನಗು ಹೊಳೆದಂತಾಗಿ ಭಾವನೆಗಳ ಮೆರವಣಿಗೆ ರಥಭೀದಿ ತುಳಿಯಲು ಆರಂಭಿಸಿಯೇ ಬಿಡುತ್ತದೆ. ಬಹುಶಃ ಸರಿಸುಮಾರು 7 ವರ್ಷಗಳಿಂದ ಕಾಣುತ್ತಿದ್ದ ನಿನ್ನ ಮುಖದ ಸೊಬಗೂ ಇನ್ನೂ ಮಾಸದೇ ಹಾಗೆ ಉಳಿದಿದ್ದರೂ, ಕಾಂತಿ ಹೆಮ್ಮರವಾಗಿ ಬೆಳೆಯುತ್ತಲೇ ಹೆಜ್ಜೆ ಇಡುತ್ತಿದ್ದರೂ, ನನ್ನೊಳಗಿರುವ ಭಾವನೆಯನ್ನು ಮಾತ್ರಾ ಒಂದಿನಿತು-ಒಂದಿನವೂ ಹೇಳಲಾಗದೇ ತಡಬಡಿಸುತ್ತಿರುವುದು, ನನ್ನ ದೌರ್ಭಾಗ್ಯವೋ, ನಿನ್ನ ಸೌಭಾಗ್ಯವೋ ತಿಳಿದಿಲ್ಲ ಕಣೇ...
ನಂಗೊತ್ತು ನಾ ಭಾವಗಳ ಬೆನ್ನೇರಿ ಸಾಗುತ್ತಿರುವ ಪಯಣಿಗ ಎಂದು, ಆದರೆ ನಾ ಇಷ್ಟು ದೂರ ಸಾಗಿ ಬರಲು, ಎತ್ತರಕ್ಕೇರಲು, ಈ ಮಾರ್ಗ ಕಂಡುಕೊಳ್ಳಲು ಕಾರಣ ಇದ್ದರೇ  ಅದು ನೀನೇ ಬಂಗಾರಿ.  ಈ ನನ್ನ ಒಂಟಿಯಾದ ಭಾವನೆಗಳಿಗೆ ಗೊಬ್ಬರವಿತ್ತು ಪೋಷಿಸುತ್ತಿರುವ, ಏಕಾಂಗಿ ತನದಲ್ಲಿ ಒಮ್ಮೊಮ್ಮೆ ನೋವು-ನಲಿವನ್ನು ಝಳಪಿಸುವಂತೆ ಮಾಡುವ ಮನ್ಮಥೆಯೂ ನೀನೆ. ಸದಾ ಕಾಡುವ ನೆನಪೂ ನಿನೆ...  ಹಾ...ನೀನೊಂತರ ತಿಳಿನೀರು, ನಾನೊಂಥರ ಭೂಮಿಗಾವು. ಆದರೆ, ಮರುಭೂಮಿಯ ಭಂಜರಲ್ಲ್ಲಿ ಬಿದ್ದಿದ್ದ ನನ್ನ ಬದುಕಿಗೆ ನೀರುಣಿಸಿ ಮೊಳಕೆಯೆಬ್ಬಿಸಿ ಭಾವದ ಜೀವ ಬೆಳೆಸಿ ಬಳಿಕ ಸುಳಿವಿಲ್ಲದೇ ಸಾಗಿದ ನಿನಗೆ ನಿನ್ನ ಪಾಪುವಿನ ಚಿಂತೆಯಿಲ್ಲದಿರುವುದು ಪಾಲನೆಯ ಕೊರತೆಯಾಗುತ್ತೆಂದು ಒಂದಿನವು ಅನಿಸಿಲ್ಲವೇ ಗೆಳತಿ!?.
ಯಾಕೀತರ!!?, 
ನೀ ಎದುರು ಬಂದಾಗೆಲ್ಲಾ ಏನೋ ನಿರೀಕ್ಷೆ, ಸಡಗರ, ಸಂತೋಷ, ಜೊತೆಗೊಂದಿಷ್ಟು ಅಳುಕು, ಬೆವರು, ಭ್ರಾಂತಿ, ನಡುಕ. ಆದರೆ ಅವುಗಳಲ್ಲೂ ಎಷ್ಟೊಂದು ಸುಖವಿತ್ತು ಗೊತ್ತಾ... ನಡುರಾತ್ರಿಯಲ್ಲಿ ಕೆಟ್ಟ ಕನಸು ಕಂಡು ಹೆದರಿದವನೊಬ್ಬ ಬೆಳಿಗ್ಗೆ ಎದ್ದಾಗ ಜ್ವರದಿಂದ ಬೇವತ ಸುದ್ದಿ ಸುಮಾರು ಬಾರಿ ಅಜ್ಜಿ ಬಾಯಲ್ಲಿ ಕೇಳಿದ್ದ ನನಗೆ ಈ ಪ್ರೀತಿ ಜ್ವರ ಎಬ್ಬಿಸಿ ತೋರಿಸಿದ್ದು ಬರವಣಿಗೆಯ ನಿರಾಳ ವೇಧ...
ನನಗೆ ಗೊತ್ತು..,
ಈ ಎಳು ವರ್ಷ ನಾ ಕಳೆದಿದ್ದು ಮೌನ ಕ್ರಾಂತಿಯಲ್ಲಿಯೆ. ನೀನೂ ಅಮವಾಸೆಗೋ, ಹುಣ್ಣಿಮೆಗೋ ಒಮ್ಮೊಮ್ಮೆ ಬಳಿ ಬಂದು ಹತ್ತಿರ ನಿಂತು ಕೈ ಹಿಡಿದು ಮಾತನಾಡಿಸುತ್ತಿದ್ದರೂ, ನಿಜಾನಾ-ಸುಳ್ಳಾ, ಕನಸಾ-ನನಸಾ ಎನ್ನುವ ಮಂಪರಿನಿಂದ ಹೊರಬರಲಾರದೇ ಗದ್ಗಧಿತನಾಗಿ ಮಾತಾಡದೆ ನಿಂತಿದ್ದು, ನಿನಗೆ ನನ್ನ ಒಳಭಾವ ಅರಿಯಲು ಅಸಮರ್ಥಳನ್ನಾಗಿ ಮಾಡಿರಬಹುದು...ಕ್ಷಮೆ ಇರಲಿ... ಯಾಕೆಂದರೆ ಎಲ್ಲರಂತಲ್ಲ ಈ ನಿನ್ನ ಪ್ರೇಮಿ.
ಪರಿತಾಪವಿದೆ ಮುದ್ದು..,
 ಹಳೆಯ ದಿನಗಳ ಮೆಲುಕು ಹಾಕಿದರೆ ಕಣ್ಣು ಹನಿಯ ದಾರಿ ನೋಡುತ್ತದೆ. ನೆನಪಿದ್ಯಾ ನಿಂಗೆ, ನಾವಿಬ್ಬರೂ ಬಹಳ ಹತ್ತಿರವಿದ್ದರೂ ಮಾತಾಡದೇ ದೂರ ನಿಂತಿದ್ದೆವು, ನಿನಗೆ ನಾನು, ನನಗೆ ನೀನು ಅನೇಕ ಬಾರಿ ಕಷ್ಟ ಸುಖ, ನೋವು ನಲಿವನ್ನು ಹಂಚಿಕೊಂಡಿದ್ದೇವು. ಆದರೆ ಅದೆಲ್ಲಾ ಪ್ರೀತಿ ಅಲ್ಲಾ ಎಂದು ಹೇಗೆ ಹೇಳಲಿ ಇಂದು...
ಕನ್ಫ್ಯೂಷನ್ ಆಗ್ತಿದೆ ನಂಗೆ..,
 ಒಟ್ಟಿಗೆ ಹಿಂದೆ ಮುಂದೆ ನಡೆದ ದಾರಿಗಳು ಇವತ್ತಿಗೂ ಒಂಟಿ ಪಯಣಮಾಡುತ್ತಿದ್ದಾಗ ಎದ್ದು ನಿಂತು ನಿನ್ನ ಬಗ್ಗೆ ಕೇಳುವವು!?, ಮೊದಲು ಮಾತನಾಡಿ ಇಟ್ಟ ಫೋನ್ ಇಂದಿಗೂ  ಮತ್ತೆ ಯಾವಾಗ ನಿಮ್ಮ ಮಾತು ಎನ್ನುವ ಪ್ರಶ್ನೆ ಮಾಡುವುದು!?, ರಜೆ ತನ್ಮಧ್ಯೆ ನಮ್ಮನೆಗೆ ನೀ ಭೇಟಿ ಇಟ್ಟಾಗ ವರಾಂಗಣ ಸುತ್ತಿ ಬರೋಣವೆಂದು ಕರೆದಾಡಿದ ಸ್ಥಳಗಳು ಇಂದು ನನ್ನೊಬ್ಬನ ನಡಿಗೆ ನೋಡಿ ಎಲ್ಲಿ ಅವಳು ಎನ್ನುವವು!?,  ಒಂದೇ ಮರದಡಿ ಮಾತಾಡದೇ ಒಂದರ್ಧ ಗಂಟೆ ಕಳೆದ ಸಮಯ ಇಂದಿಗೂ ನಿಮ್ಮ ಸಂಕೋಚ ಹೋಗಿಲ್ಲವೇ ಎಂದು ಮುಜುಗರ ಪಡಿಸುತ್ತಿರುವುದು, ಮೊದಲ ಬಾರಿ ಹತ್ತಿಸಿಕೊಂಡು ಹಳ್ಳಿ ಸುತ್ತಿಸಿದ್ದ ನನ್ನ  ಬೈಕ್ ನಿಮ್ಮಿಬ್ಬರ ಅಂತರ  ಇನ್ನೂ ಅಷ್ಟೇಯೇ ಇದೆಯಾ ಎಂದು ಗುರಾಯಿಸುತ್ತಿರುವುದು, ಅಂದಿಂದ ಇಂದಿಗೂ ಹೇಳಲಾಗದೇ ಉಳಿದಿರುವ ಮಾತುಗಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವುದು,  ಕೆಲವೊಂದಿಷ್ಟು ಆತ್ಮಹತ್ಯೆಗೂ ಮನಸ್ಸು ಮಾಡಿರುವುದು ಸಂಕಟ ತಂದೊಡ್ಡಿದೆ, ಬಾ ಇವರೆಲ್ಲರಿಗೆ ನೀನೆ ಉತ್ತರ ಹೇಳು, ಭವಿಷ್ಯ ನೀಡು.
ಕಾರಣ ಕಂಡವರ್ಯಾರು..,
 ಬಹುಶಃ ನನ್ನ ಪ್ರೇಮ ಪವಿತ್ರವಿರಬಹುದು. ಪವಿತ್ರ ಪ್ರೇಮದ ಹಿನ್ನೆಲೆಯಲ್ಲಿ ಅದೆಷ್ಟೋ ದಂತ ಕತೆಗಳಿವೆ, ಗ್ರಂಥಗಳಿವೆ, ಮರೆಯಲಾರದ ಹಾಡುಗಳಿವೆ, ಅದ್ಭುತ ಸ್ಮಾರಕಗಳಿವೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಯೆಂದರೆ , ದಿನಕ್ಕೊಂದು ಕಡೆ ಪಾರ್ಕು, ಸಿನೆಮಾ, ಔಟಿಂಗ್, ಡೇಟಿಂಗ್ ಅಂತ ಬಾಯ್ ಫ್ರೆಂಡ್/ಗರ್ಲ್ ಫ್ರೆಂಡ್ಸ್ ಜೊತೆ ಸುತ್ತಾಡಿ, ರಾತ್ರಿ ಇಡೀ ಚಾಟಿಂಗ್ ನಡೆಸಿ, ಇನ್ ಬಾಕ್ಸ್ ಫುಲ್ ಆದ ಮೇಲೆ ಡಿಲೀಟ್ ಮಾಡುವ ಮೆಸೇಜ್‍ನಂತೆ ಹುಡುಗ ಹುಡುಗಿಯರ ಭಾವಗಳು ಬದಲಾಗುತ್ತಿರುವುದು ನಿಜಕ್ಕೂ ನನ್ನ ಪ್ರೀತಿಗೆ ಅನ್ವಯವಾಗುದಿಲ್ಲ ಆದರೂ ಹೋಗುವ ಮುಂಚೆ ಹೇಳಿ ಹೋಗು ಕಾರಣ ಮರೆಯದಿರು!..
ನಿಂಗೊತ್ತಾ ಚಿನ್ನಿ.., 
ಪ್ರೀತಿಯೆನ್ನುವುದು ಬಹುಮುಖ ಹಾಗೂ ಬಹುರೂಪವುಳ್ಳದ್ದು, ಅದರ ಬಾಹುಗಳ ವಿಸ್ತಾರ ಅಳತೆಗೆ ಮೀರಿದ್ದು, ಕಣ್ಣಿಗೆ ಕಾಣದ್ದು, ವಯಸ್ಸಿನ ಅಂಕೆಗೆ ಒಳಪಡದೆ ಇದ್ದದ್ದು.  ಸ್ವಾರ್ಥಕ್ಕೆ ಎಷ್ಟು ದೂರವಾದುದ್ದೋ, ಅಷ್ಟೇ ಹತ್ತಿರವಾದದ್ದು. ಇದುವರೆಗೂ ಎಷ್ಟೋ ಕವಿಗಳ, ಎಷ್ಟೋ ರಸಿಕರ ಕಾವ್ಯ ಕಾರಂಜಿಯ ಲಹರಿಯಲ್ಲಿ ಬಗೆ ಬಗೆಯಲ್ಲಿ ಬಣ್ಣಿಕೆ ಕಂಡದ್ದು, ಹೇಗೆ ವರ್ಣಿಸಿದರೂ ಮತ್ತೆ ಮತ್ತೇ ಎಲ್ಲೆಲ್ಲೋ, ಯಾರ್ಯಾರಿಂದಲೋ ಯಾರ್ಯಾರ ಮನದಲ್ಲೋ, ಕಲ್ಪನೆಯಲ್ಲೋ, ನರನಾಡಿಗಳ ಮಿಡಿತದಲ್ಲೊ ಚಿಗುರೊಡೆದು ಹೊಸ ಬಗೆಯ ರೂಪ, ಹೊಸ ಬಗೆಯ ಭಾವ, ಹೊಸಬಗೆಯ ಉತ್ಸಾಹ ಎಲ್ಲವನ್ನೂ ಪಡೆದು ಮತ್ತೆ ಮತ್ತೆ ವರ್ಣಿಸಲ್ಪಟ್ಟಿದ್ದು, ಮತ್ತೆ ಮತ್ತೆ ಬಣ್ಣಿಸಲ್ಪಟ್ಟಿದ್ದು. ಇಷ್ಟೆಲ್ಲಾ ಇದ್ದರೂ ನಿನಗ್ಯಾಕೆ ಅದರಂದ ನನ್ನ ಮನದಲ್ಲಿದೆ ಎಂಬುದು ಅರಿವಾಗಲಿಲ್ಲ ಎನ್ನುವುದೇ ಇಂದಿನ ನನ್ನ ಚಿಂತೆಯ ಚಿಂತನೆ...
ಸಮಸ್ಯೆ ಇದೆ..,
ತಿಳುವಳಿಕೆ ಬರಲು ಈ ಸಮಸ್ಯೆಯೂ ಇರಬಹುದೇನೋ!? ಒಂದು ದಿನವೂ ನಾವು ಪ್ರಾಪಂಚಿಕ ಜಗತ್ತಿನಲ್ಲಿ ಪ್ರೇಮಿಗಳ ಥರ ಜೋಕಾಲಿ ಆಡಲಿಲ್ಲ, ಪ್ರೀತಿ ಎನ್ನುವ ಕಾರಣಕ್ಕೆ ನಾ ನಿನ್ನ ಪೀಡಿಸಿಲ್ಲ, ನಿನ್ನ ಸಾನಿಧ್ಯಕ್ಕೆ ನಾ ತುಂಬಾ ಹತ್ತಿರವಾಗಿ ನಿಂತಿದ್ದರೂ, ನೀ ಅದನ್ನು ಕೆಟ್ಟದೆಂದು ಗ್ರಹಿಸಿಲ್ಲ, ಗೆಳೆಯ ಗೆಳತಿಯ ಹಸಿಬಿಸಿ ಕಣ್ಣ ಸುದ್ದಿಗೆ ಒಂದೆರಡು ಬಾರಿ ನಾವು ಪ್ರೇಮಿಗಳೆನಿಸಿದ್ದರೂ ನಾವು ಪ್ರೇಮಿಗಳಾಗಿದ್ದೇವಂದುಕೊಂಡಿಲ್ಲ. ಅನೇಕ ಸ್ಥಳಗಳಲ್ಲಿ ಒಟ್ಟಿಗೆ ಕುಳಿತು ಕನಸು ಕಂಡಿದ್ದರೂ ಒಂದೇ ಮನೆ ಮಾಡಿ ಒಂದಾಗುವ ಆಸೆ ತೋರಿಲ್ಲ. ಮುಖ್ಯವಾಗಿ ನನ್ನ ಮನಸ್ಸಲ್ಲಿ ಮೂಡಿದ ಭಾವಾರ್ಥ ನಾ ನಿನಗೆ ಹೇಳಿರಲಿಲ್ಲ... ಇದು ಪ್ರೀತಿಯಲ್ವಾ ಹಾಗಾದರೆ, ಅದು ಸರೀನಾ!!? ಇದು ತಪ್ಪಾ!!?...ಲೆಕ್ಕಕ್ಕೆ ಸಿಗುತ್ತಿಲ್ಲ.ಬಿಟ್ಟೋಗು ಬೇಜಾರಿಲ್ಲ...
ನೀ ನನ್ನ ಪ್ರೀತಿಸಿದ್ದೀಯೋ, ಬಿಟ್ಟಿದ್ದಿಯೋ ಗೊತ್ತಿಲ್ಲ ಕಣೋ, ಆದರೆ ನಿನ್ನಿಂದ ನನ್ನೊಳಗೊಂದು ಅಪರೂಪದ ಭಾವಾತ್ಮ ಮರಿ ಹಾಕುವಂತೆ ಮಾಡಿರುವೆ. ನೀ ಬಳಿ ಬಂದಾಗೆಲ್ಲಾ ನಾ ದಿಕ್ಕೆಟ್ಟು ಓಡುವ ಕನಸುಗಳ ರಭಸಕ್ಕೆ ಎದೆಯೊಡ್ಡಿ ನಿಂತು ನಿನ್ನ ಬೀಳ್ಕೊಡುತ್ತಿದ್ದೆ. ಒಮ್ಮೊಮ್ಮೆ ನನ್ನ ಮೇಲೆ ಸಿಟ್ಟಾಗಿದ್ದೆ, ಒಮ್ಮೊಮ್ಮೆ ಹಲ್ಲು ಕೆರೆದಿದ್ದೆ, ಒಮ್ಮೊಮ್ಮೆ ಪ್ರೀತಿಯಿಂದ ಮುದ್ದು ಮಾಡಿದ್ದೆ, ಮಾತನಾಡಿಸಿದ್ದೆ. ಇವುಗಳೇ ನನ್ನ ಜೀವನದ ಬರವಣಿಗೆಗೆ ಸ್ಫೂರ್ತಿಯಾಗಿತ್ತೆಂದರೆ ಅತಿಶಯೋಕ್ತಯಲ್ಲ ಬಿಡು. ನಿನ್ನ ಸ್ಫೂರ್ತಿ ಚಿಲುಮೆಯೇ ನನ್ನ ಈ ಬರವಣಿಗೆ. ಎಷ್ಟೋ ಬಾರಿ ಅರ್ಧಂಬರ್ಧ ಬರವಣಿಗೆ ಕಂಡಿದ್ದ  ನನ್ನ ಕವನಗಳು ನಿನ್ನುಸಿರು ಕೇಳುತ್ತಿದ್ದಂತೆ ಪೂರ್ತಿಯಾಗಿದ್ದು ಎಂದೂ ಮರೆಯಲಾಗದು ಬಿಡು. ಸಂಜೆ ಮಬ್ಬುಗತ್ತಲ ನಡುವೇ ಅಂದು ಪಾನೀಪೂರಿ ಸವಿದ ಕ್ಷಣದ ಜೊತೆ, ಓಲೈಕೆ ಇಲ್ಲದೇ ದೂರವಾಗಿರುವ ಈ ನಿಮಿಷಕ್ಕ್ಕೆ ಅಜಗಜಾಂತರ ವ್ಯತ್ಯಾಸವಿದ್ದರೂ, ಇಂದಿಗೂ ನಾ ಹೇಳಬೇಕೆಂದ ಪದ ಬಾಯಿಂದ ಹೊರಬೀಳದೆ ಸತಾಯಿಸುತ್ತಿದೆ ಪುಟ್ಟಾ. ನನಗೆ ಗೊತ್ತು ನೀ ಸಿಗುವುದಿಲ್ಲವೆಂದು, ಹಾಗಂತ ನೀ ಸಿಗದೇ ಇದ್ದರೆ ಅದನ್ನೆ ರಂಪಾಟಕ್ಕೆ ತಂದಿಟ್ಟು ಸೆಡ್ಡು ಹೊಡೆಯುವ ಭಗ್ನ ಪ್ರೇಮಿಯ ಹುಚ್ಚು ವರ್ತನೆ ನನ್ನಲ್ಲಿಲ್ಲ. ನನ್ನ ಭಾವ ಹೇಗೆ ನನ್ನದೋ ಹಾಗೆ ನಿನ್ನ ಭಾವ ನಿನ್ನದು. ಆದರೂ ನನ್ನ ಜೀವನದಲ್ಲಿ ನಿನಗೊಂದು ಸಣ್ಣ ವಂದನೆ ಒಂಉ ಬಾರಿ ಬಂದು ಹೇಳಿ ಹೋಗು ಬೇಕಿದ್ದರೆ ಆಮೇಲೆ ಕಾಲ್ತೋಳೆದು ಬಿಳ್ಕೋಡುವೆ ಭಯ ಪಡದಿರು.

ವಿಷಯ ತಿಳಿದು ಅಳದಿರು...
ಜೀವನದ ಪಯಣದಿ ಯಾವುದೋ ಒಂದು ನಿಲ್ದಾಣದಲ್ಲಿ ಸಿಕ್ಕವಳು ನೀನು. ಹಾಗೇ ಇಳಿದು ಹೋಗುವೆ ಎನ್ನುವ ಪರಿವೆ ಇಲ್ಲದಿದ್ದರೂ ಖಾಲಿ ಜೇಬಿನ ಮಜುನೂಗೆ ಪ್ರೀತಿ ಚಿಲ್ಲರೆಯ ಬಸಿದು ಹೋದೆ ಎನ್ನುವ ಸಾಂತ್ವಾನ ನನ್ನೊಳಗೆ ನನಗೆ ಎರಕವೈದುಕೊಂಡಿರುವೆ. ಮುಂದೆಯೂ ಹಾಗೇ ಅಂದುಕೊಂಡೆ ಬಾಳುವೆ...ಅಕಾಲದಲ್ಲಿ ಮಳೆ ಬಂದ ಹಾಗೆ ನಿರೀಕ್ಷೆಯೇ ಇಲ್ಲದ ಹೊತ್ತಲ್ಲಿ ಬದುಕೊಳಗೆ ಸಲೀಸಾಗಿ ನಡೆದು ಬಂದ ನೀನು ನನ್ನ ಮತ್ತೊಂದು ಮಗ್ಗಲು ಬದಲಾಯಿಸಿಬಿಟ್ಟೆ. ನಂಗೊತ್ತು ಇಷ್ಟು ವರ್ಷ ಕಳೆದರೂ ಹೇಳಲಾರದ ಪ್ರೀತಿ ಭಾವ ಇನ್ನೂ ಮುಂದೆಯೂ ಹೇಳಲಾಗದು. ಇನ್ನೂ ಮುಂದೆ ನಾ ಒಬ್ಬಂಟಿ, ನನ್ನ ಕಾಡಿದಷ್ಟು ನಿನ್ನ ಕಾಡದು ಈ ಒಂಟಿತನ, ಕಾಡದಿರಲಿ ಅವ್ಯಾವುದೂ ನಿನ್ನ ತನುಮನ...
‘ಕೊನೆಯ ಮಾತು ಪ್ರೇಮಿಗಳ ದಿನದ ಶುಭಾಶಯಗಳು...’
ಇತೀ ನಿನ್ನ
ಅ...
(ಭಗ್ನ ಪ್ರೇಮಿ)

ಮಂಡೆ ಬಿಸಿ ಮಾಡಿರುವ ಮಂಡೆ ಕವಚ...


* ರಕ್ಷಣೆಯೇನೋ ಸರಿ, ಸೇಫ್ಟಿ ಫಾಲೋ ಯಾರ ಗುರಿ...
* 2006ರಲ್ಲಿ ಒಬ್ಬರಿಗೆ, 2016ರಲ್ಲಿ ಇಬ್ಬರಿಗೆ...
* ಉಪಕಾರಿ ಎನಿಸಿದ್ದು, ಉಪದ್ರವಕಾರಿಯಾಗದಿದ್ದರೆ ಒಳಿತು...
*ರಸ್ತೆ ಗುಂಡಿಗಳನ್ನು ಮೊದಲು ಮುಚ್ಚಿಸಿ, ಸಾವನ್ನು ತಪ್ಪಿಸಿ...

ಮೊನ್ನೆ ರೈಲು ಪ್ರಯಾಣದ ವೇಳೆ ನನ್ನೆದುರಿಗೊಬ್ಬ ವ್ಯಕ್ತಿ ಕುಳಿತುಕೊಂಡು ತನ್ನಷ್ಟಕ್ಕೆ ತಾನೆ ಗೊಣಗಿಕೊಂಡು ಪೇಪರ್ ಓದುತ್ತಾ, ಹಿಡಿ ಹಿಡಿ ಶಾಪ ಎನ್ನುವಂತೆ ಕರಕಿರಿಸುತ್ತಿದ್ದ. ಏನಾಯ್ತಪ್ಪಾ!, ಯಾಕೆ ಹೀಗಾಡುತ್ತಿದ್ದೀಯಾ? ಎಂದು ಕೇಳಿದ್ದೆ ತಡ ಅವನ ಕೋಪ ತಾಪವೆಲ್ಲ ನನ್ನ ಬಳಿ ತೋರಿಸುವನಂತೆ ವರ್ತಿಸಿ, ‘ನೋಡಿ ಸ್ವಾಮಿ!, ಇಷ್ಟು ದಿನ ಏನೋ ಒಂದು ನಡೆದು ಹೋಯ್ತು, ಆದರೆ ಇನ್ನೂ ಮುಂದಿನ ದಿನಗಳಲ್ಲಿ ಜೀವನ ಕ್ರಮ ಬಹಳ ಕಷ್ಟವಿದೆ.., ಆಳುವವರ ದಬ್ಬಾಳಿಕೆ ಹಿಂದಿದ್ದ ಕಾಲಕ್ಕೆ ಮತ್ತೆ ನಮ್ಮನ್ನ ದೂಡಿ ಬ್ರಿಟೀಷ್ ಕಾಲದಲ್ಲಿದ್ದಂತೆ ಹೆದರಿ ಬದುಕುವುದೇ ಮಾಮೂಲಿಯಾಗಿ ಬಿಡುತ್ತದೇನೋ ಎನ್ನುವ ಭಯ ಮೂಡುತ್ತಿದೆ.!, ಅಲ್ಲಾ ಸಾರ್!, ಇದನ್ನ ನೋಡಿ ಆಮೇಲೆ ನೀವೆ ಹೇಳಿ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಂತೆ ಇದು ಬೇಕಿತ್ತಾ...??? ಎಂದ
 ಉತ್ತರವಾಗಿ, ಹು.., ಹೌದು. ಇದು ಸರ್ಕಾರದ ಆಜ್ಞೆ ಪಾಲಿಸಲೇಬೇಕಲ್ಲ ಅದಕ್ಯಾಕೆ ಇಷ್ಟು ಟೆನ್ಷನ್ ಮಾಡ್ಕೊಂಡಿದ್ದೀರಾ ಎಂದೆ.
ಹಾಗಲ್ಲಾ ಸಾರ್, ಈಗ ನೀವೊಬ್ಬರೇ ಮನೆಗೆ ಹೋಗ್ತಾ ಇರುತ್ತೀರಾ, ನಿಮ್ಮ ಆತ್ಮೀಯ ಸ್ನೇಹಿತ ಎದುರಿಗೆ ಸಿಗುತ್ತಾನೆ. ಅವನನ್ನು ನಿಮ್ಮ ಮನೆಗೆ ಕರೆದುಕೊಂಡು ಹೊರಡುತ್ತೀರಿ. ಮಧ್ಯದಾರಿಯಲ್ಲಿ ಬಿಳಿ ಖಾಕಿವೆತ್ತ ಪೊಲೀಸರು ತಡೆದು ಪ್ರಶ್ನಿಸುತ್ತಾರೆ. ‘ಹಿಂಬದಿ ಸವಾರರ ಹೆಲ್ಮೆಟ್ ಎಲ್ಲಿ?, ಕಟ್ಟಿ ಫೈನ್!!’ ಎಂದು ರಿಸಿಟ್ ಹರಿದೇ ಬಿಡುತ್ತಾರೆ. ನೀವು ಲಂಚಾನೋ ಅಥವಾ ಫೈನ್ ಬಿಲ್‍ನ ಮೊತ್ತವನ್ನೋ ಪ್ರಾಮಾಣಿಕನಂತೆ ಕೈಗಿತ್ತು ಬರುತ್ತೀರಿ. ಇಲ್ಲವಾದರೆ ನೀವೆನ್ ಮಾಡ್ತೀರಾ!? ಹೇಳಿ ಎಂದ.
ನನಗೆ ಉತ್ತರ ದೋಚಲಿಲ್ಲ. ಸುಮ್ಮನೆ ಕುಳಿತೆ. ಅದಾಗಲೇ ಆತ ಮಾತನ್ನು ಮುಂದುವರಿಸಿ ಹಾಗೆ ಮಾಡಲೇಬೇಕು ಬೇರೆ ಉಪಾಯವೇ ಇಲ್ಲ ಬಿಡಿ..,!? ಏನು ಸರ್ಕಾರವೋ ಏನೋ, ಎಂದು ಎದ್ದು ಪಕ್ಕದಲ್ಲಿದ್ದ ಲ್ಯಾಟ್ರಿನ್ ಒಳಹೋದ.
ಹೌದಲ್ವಾ!!!..,ಈ ಹೆಲ್ಮೆಟ್ ಎಷ್ಟು ಉಪಕಾರಿ ಎನಿಸುತ್ತೋ ಅಷ್ಟು ಉಪದ್ರವಕಾರಿಯಾಗಿಯೂ ಕಿರಿಕಿರಿ ಉಂಟು ಮಾಡುತ್ತಿದೆ ಎನಿಸಿದ್ದೇ ಆಗ.
ಅಪಘಾತ ಪ್ರಕರಣಗಳಲ್ಲಿ ಹಿಂಬದಿ ಸವಾರರು ಸಾವು ನೋವುಗಳಿಗೆ ತುತ್ತಾಗುವ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಇಗಾಗಲೇ ಗೆಜೆಟ್ ನೋಟಿಫಿಕೇಷನ್ ಹೊರಡಿಸಿ ಈ ಹಿಂದೆ ದೆಹಲಿ, ಕೋಲ್ಕತ್ತಾ ಹಾಗೂ ಜೈಪುರಗಳಲ್ಲಿ ಜಾರಿಯಲ್ಲಿದ್ದ ಕಾಯ್ದೆಯನ್ನು ಇದೀಗ ನಮ್ಮ ರಾಜ್ಯದಲ್ಲೂ ಜಾರಿಗೊಳಿಸಿದೆ. ಹಾಗಾಗಿ ಮೋಟಾರು ವಾಹನ ಕಾಯ್ದೆ ಕಲಂ 129ರ ಅನ್ವಯ ‘ಬ್ಯುರೋ ಆಫ್ ಇಂಡಿಯನ್ ಸ್ಟಾಂಡರ್ಡ್’ನಿಂದ ಪ್ರಾಮಾಣೀಕೃತ ಐ.ಎಸ್.ಐ ಮಾರ್ಕ್ ಇರುವ ಹೆಲ್ಮೆಟ್‍ಗಳನ್ನೇ ಬೈಕ್ ಸವಾರರು ಬಳಸಬೇಕು, ಹೆಲ್ಮೆಟ್ ಬಳಸಿ ಜೀವ ಉಳಿಸಿಕೊಳ್ಳಬೇಕು. ಹಿಂಬದಿ ಸವಾರ ಹೆಲ್ಮೆಟ್ ಧರಿಸದಿದ್ದರೆ  ಬೈಕ್ ಚಲಾಯಿಸುವ ವ್ಯಕ್ತಿಗೆ ದಂಡ ವಿಧಿಸಲಾಗುತ್ತದೆ ಎನ್ನುವ ಮಾನದಂಡದ ಘೋಷವಾಕ್ಯ ಎಲ್ಲೆಲ್ಲೂ ಇತ್ತೀಚಿಗೆ ಪ್ರಭೆ ಬಿರುತ್ತಾ ಮಂಡೆ ಬಿಸಿ ಮಾಡಿದೆ. ದಂಡದ ಪ್ರಮಾಣವೂ ಹೀಗಿದೆ, ಮೊದಲಬಾರಿಗೆ 100ರೂ, ಎರಡನೇ ಬಾರಿಗೆ 200ರೂ, ಹಾಗೂ ಮೂರನೇ ಬಾರಿಗೆ ನಿಯಮ ಉಲ್ಲಂಘಿಸಿದರೆ ಸವಾರನ ಚಾಲನಾ ಪರವಾನಗಿ (ಡಿ.ಎಲ್) ಅಮಾನತು ಮಾಡುವ ವಿಶೇಷ ಅಧಿಕಾರವನ್ನು  ಸಾರಿಗೆ ಇಲಾಖೆಯು ಹೊಂದಿರುತ್ತದೆ. ಈ ಕಡ್ಡಾಯದ ಕಷಾಯ ಚಿಕ್ಕ ಮಕ್ಕಳಿಗೂ ಅನ್ವಯಿಸುತ್ತದೆ. ಅದಕ್ಕಾಗಿ ಇನ್ನೂ ಮುಂದೆ ಮಕ್ಕಳಿಗೆ ಶಾಲಾ ಬ್ಯಾಗು, ಕೈಯಲ್ಲೊಂದು ಟಿಫಿನ್ ಬಾಕ್ಸ್ ಜೊತೆಗೆ ಹೆಲ್ಮೆಟ್‍ನ್ನು ಹಿಡಿದುಕೊಂಡು ಸ್ಕೂಲ್‍ಗೆ ಹೋಗುವ ಸೌಭಾಗ್ಯವೂ ದೊರತಿದೆ.
ರೂಲ್ಸ್ ಇರಲಿ ಅದೆಂತಹದ್ದೆ ಆಗಿರಲಿ ಫಾಲೋನೂ ಮಾಡೋಣ.., ಆದರೆ ಇರುವ ಸಿದ್ಧಾಂತಗಳೇ ನೆಲಕಚ್ಚಿ ಕಾಲ ಮುನ್ನುಗ್ಗುತ್ತಿರುವ ಸಂಧರ್ಭದಲ್ಲಿ ತಾಪತ್ರಯಗಳನ್ನು ಸರಿ ಮಾಡುವ ಬದಲಾಗಿ ಇನ್ನೂ ಬೇರೆ ಬೇರೆ ಹೊಸ ಹೊಸ ಸಿದ್ಧಾಂತಗಳನ್ನು ಹೊರಡಿಸಿದರೆ ಯಾರು ಫಾಲೋ ಮಾಡೋರು ನೀವೆ ಹೇಳಿ!?.
ದಿನದ ತಿರುಗಾಟದಲ್ಲಿ ಒಂದು ಹೆಲ್ಮೆಟ್‍ನ್ನು ಕ್ಯಾರಿ ಮಾಡುವುದೇ ಕಷ್ಟ ಅಂತಹದ್ದರಲ್ಲಿ ಎಲ್ಲೆಲ್ಲೋ ಸಿಗುವ ಹಿಂಬದಿ ಸವಾರರಿಗಾಗಿ (ಗೆಳೆಯರು, ಸಂಬಂಧಿಕರು,ದಾರಿಹೋಕರು) ನಾವು ಇನ್ನೊಂದು ಹೆಲ್ಮೆಟ್‍ನ್ನು ಹೇಗೆ ಕ್ಯಾರಿ ಮಾಡಬಹುದು ಸಣ್ಣ ಐಡಿಯಾ ಕೊಡಿ ಪ್ಲೀಸ್...
ಮದುವೆ ಪಾರ್ಟಿ ಇರುತ್ತೆ. ಗಂಡ-ಹೆಂಡತಿ ಇಬ್ಬರೂ ರೆಡಿಯಾಗಿ ಹೊರಡುತ್ತಾರೆ. ಗಂಡ ಮಾಮೂಲಿಯಂತೆ ಹೆಲ್ಮೆಟ್ ಹಾಕಿಕೊಂಡು ಬೈಕ್ ಚಲಾಯಿಸುತ್ತಿರುತ್ತಾನೆ. ಹೆಂಡತಿಯಾದವಳು ಜರಿ ಸೀರೆಯುಟ್ಟು, ಒಡವೆತೊಟ್ಟು ತಲೆಗವಚುವ ಹೆಲ್ಮೆಟ್ ಹಾಕಿ ಬೈಕ್ ಹಿಂದೆ ಕುಳಿತು ಸವಾರಿಯಾರಂಭಿಸಿದರೆ ಮೇಕಪ್ ಭರಿತ ಅವರ ಬ್ಯುಟಿ ಎಷ್ಟು ಕೆಟ್ಟದಾಗಿ ನೋಡುವವರಿಗೆ ಕಾಣಬಹುದು ನೀವೇ ಹೇಳಿ..!?
ಈ ಸಮಸ್ಯೆ ತಡೆಯಲು ಕಾರ್ ಖರೀದಿಸುವ ಗೋಜಿಗೆ ಬಿದ್ದರೆ ಈಗಲೇ ತಡೆಯಲಾರದ ಟ್ರಾಫಿಕ್ ಸಮಸ್ಯೆ ತಡೆಯಲು ಯಾವ ಬುದ್ಧಿ ಶಿಖಾಮಣಿ ಬರುತ್ತಾನೆ ಉತ್ತರಿಸಿ!?...
ಇತ್ತೀಚಿನ ದಿನUಳಲ್ಲಿ ಜನ ಅವರ ಜೀವಕ್ಕೆ ಭಯ ಪಡುವುದಕ್ಕಿಂತ, ಪೊಲೀಸರಿಗೆ ಭಯ ಪಡುವುದೇ ಜಾಸ್ತಿಯಾಗಿದೆ. ವಾಹನವಿರುವ ಪ್ರತಿ ವ್ಯಕ್ತಿಗೆ ಮೂಲಭೂತವಾದ ಒಂದಿಷ್ಟು ಡಾಕ್ಯುಮೆಂಟ್, ನಿಯಮಾವಳಿ ಇತ್ಯಾದಿಗಳ ಹಾವಳಿಯಿಂದ ಸ್ವಲ್ಫ ಯಾಮಾರಿದರೂ ಫೈನ್ ಬೀಳುತ್ತಪ್ಪಾ ಎನ್ನುವ ಸಂಕಟದಿಂದ ಅನೇಕರು ಪೋಲೀಸರನ್ನು ಕಂಡ ಕÀಡೆ ವಾಹನ ಚಲಾಯಿಸಲು ಭಯಭೀತರಾಗುತ್ತಿದ್ದಾರೆ. ಒಂದು ವರದಿಯ ಪ್ರಕಾರ 2014 ರಲ್ಲಿ ಒಟ್ಟು 16,67,248 ಹಾಗೂ 2015 ರಲ್ಲಿ 17,70,890 ಹೆಲ್ಮೆಟ್ ಧರಿಸದ ಸವಾರರ ವಿರುದ್ಧ ಕೇಸ್ ದಾಖಲಾಗಿವೆಯಂತೆ. ಇದರಿಂದ ಸರ್ಕಾರಕ್ಕೆ ಎಷ್ಟು ಆದಾಯ ಬಂದಿರಬಹುದು ನೀವೆ ಹೇಳಿ, ಒಂದು ಹೆಲ್ಮೆಟ್ ಕಡ್ಡಾಯದಿಂದಲೇ ಇಷ್ಟೊಂದು ಆದಾಯ ಬಂದಿದೆ ಎಂದರೆ ಇನ್ನೂ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂಬ ಕಾಯ್ದೆಯಿಂದ ಇನ್ನೆಷ್ಟು ಆದಾಯ ಹರಿದಾಡಬಹುದು ಮತ್ತು ಹೆಲ್ಮೆಟ್ ಕಂಪೆನಿಗಳಿಂದ ಸರ್ಕಾರಿ ಬೊಕ್ಕಸ ಎಷ್ಟು ತುಂಬಬಹುದು, ತುಂಬಿರುತ್ತೆ ಎಂಬುದನ್ನು ಪ್ರತಿಯೊಬ್ಬನೂ ಯೋಚಿಸಬೇಕಾಗಿದೆ.
  ಡೈರೆಕ್ಟ್‍ಶೂಟ್ ಎನ್ನುವಂತೆ ನಾನಿಂದು ಒಬ್ಬ ಸಾಮಾನ್ಯ ಪ್ರಜೆಯಾಗಿ ಸರ್ಕಾರಕ್ಕೆ ಹೇಳ ಹೊರಟಿರುವುದು ಇಷ್ಟೆ. ಅಪಘಾತ ಎನ್ನುವುದು ದ್ವಿಚಕ್ರ ವಾಹನಗಳಿಂದ ಮಾತ್ರಾ ಉಂಟಾಗುವುದಲ್ಲ. ರಸ್ತೆಗಳ ದುರ್ಬಲೀಕರಣದಿಂದಲೂ ಇವು ಪ್ರತಿನಿತ್ಯ ನಡೆಯುತ್ತಿರುತ್ತದೆ. ಮೊದಲು ರಸ್ತೆ ಸರಿ ಮಾಡಿ.  ಈ ಹೊಸ ಹೊಸ ಕಾಯ್ದೆಯನ್ನು ತರುವ ಬದಲು ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸಲು ವ್ಯವಸ್ಥೆ ಮಾಡಿ. ಗಾಡಿ ಓಡಿಸುವ ವ್ಯಕ್ತಿ ನಿರ್ದಿಷ್ಟ ವಯಸ್ಸು ತಲುಪಿದ್ದಾನೆಯೇ?, ಲೈಸನ್ಸ್ ಪಡೆದಿದ್ದಾನೆಯೇ? ಎಂಬುದನ್ನು  ಸರಿಯಾಗಿ ಪರಿಗಣಿಸಿ ನಿಯಮ ಪಾಲಿಸಿ. ಇಂದು ನಾವು ನೀವು ನೋಡುತ್ತಿರುವಂತೆ ಪೊಲೀಸರು ಧರಿಸುತ್ತಿರುವ ಹೆಲ್ಮೆಟ್‍ಗಳೇ ಸರಿಯಾಗಿ ಅವರ ಕಿವಿಗಳನ್ನು ಮುಚ್ಚುತ್ತಿಲ್ಲ, ಆ ರೀತಿಯ ಅನ್ ಸೇಫ್ಟಿ  ಹೆಲ್ಮೆಟ್‍ಗಳನ್ನು ಯಾರದೋ ಕಣ್ತಪ್ಪಿಸಲು ಹಾಕಿಕೊಂಡು ಓಡಾಡುವ ಮುಂಬದಿ ಸವಾರನನ್ನೇ ಮೊದಲು ಹಿಡಿದು ನಿಲ್ಲಿಸಿ. ಅಂತಹ ಹೆಲ್ಮೆಟ್‍ಗಳನ್ನು ಮೊದಲು ಬ್ಯಾನ್ ಮಾಡಿ. ಅಷ್ಟೇ ಅಲ್ಲದೇ ಸಾಮಾನ್ಯ ಮನುಷ್ಯನಿಗೂ ಸ್ಟಾಂಡರ್ಡ್ ಸೇಫ್ಟಿ ಎನ್ನುವಂತೆ ಕಡಿಮೆ ದರೆದಲ್ಲಿ ಒಳ್ಳೆಯ ಹೆಲ್ಮೆಟ್ ದೊರೆಯಲು ಅನುವು ಮಾಡಿಕೊಡಿ... ಇಷ್ಟು ಮಾಡಲಾಗುತ್ತದಾ!? ಹಾಗಿದ್ದರೆ ಹೊಸ ಹೊಸ ಕಾಯಿದೆ ತನ್ನಿ. ಮನಪೂರ್ವಕವಾಗಿ ಫಾಲೋ ಮಾಡ್ತೇವೆ ಡೌಟೇ ಬೇಡ.
ಇನ್ನೂ ನಮ್ಮ ರಾಜಧಾನಿ ಬೆಂಗಳೂರನ್ನು ದ್ವಿಚಕ್ರ ವಾಹನಗಳ ನಗರಿ ಎಂದು ಕರೆದರೂ ತಪ್ಪಲ್ಲ ಬಿಡಿ. ಇಂದು ನಗರದ ರಸ್ತೆಗಳಲ್ಲಿ ಓಡಾಡುವ ಬೈಕ್, ಸ್ಕೂಟರ್, ಮುಂತಾದ ದ್ವಿಚಕ್ರ ವಾಹನಗಳ ಪ್ರಮಾಣ ಶೇ.70 ಕ್ಕೆ ಮುಟ್ಟಿದೆ. ಅವನ್ನು ಓಡಿಸುವುದೆಂದರೆ ಸರ್ಕಸ್ ಮಾಡಿದಷ್ಟೇ ಕಷ್ಟ ಕರ. ಆಯತಪ್ಪಿದರೆ ಮೂಳೆಮುರಿತ. ಮತ್ತೂ ಎಡವಟ್ಟಾದರೆ ಪ್ರಾಣಕ್ಕೆ ಕುತ್ತು. ಜವರಾಯನಿಗೆ ವಾಹನ ಚಾಲನೆ ಮಾಡುವವರು, ಹಿಂಬಂದಿ ಸವಾರರೂ, ಎಂದು ಬೇಧಭಾವವಿಲ್ಲ!!. ‘ನಿಮ್ಹಾನ್ಸ್’ ಅಧ್ಯಯನದ ಪ್ರಕಾರ,  ದ್ವಿ ಚಕ್ರವಾಹನ ಅಪಘಾತದಲ್ಲಿ ದುರ್ಮರಣಕ್ಕೀಡಾದ 116 ಮಂದಿಯಲ್ಲಿ 33 ಮಂದಿ ಹಿಂಬದಿ ಸವಾರರೆ ಆಗಿದ್ದಾರಂತೆ. ಹೆಲ್ಮೆಟ್ ಧರಿಸುವುದು ಮೂಲಭೂತವಾದ ಒಂದು ಸುರಕ್ಷ ಕ್ರಮ ನಿಜ  ಅಪಘಾತದಿಂದ ತಲೆಗೆ ಆಗಬಹುದಾದ ಪೆಟ್ಟಿನ ತೀವೃತೆಯನ್ನು ಹೆಲ್ಮೆಟ್ ತಗ್ಗಿಸಬಲ್ಲದು. ಇದೀಗ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದ್ದರಲ್ಲಿ ರಾಜ್ಯ ಸರ್ಕಾರದ ಈ ಮೇಲಿನ ಸಮರ್ಥನೆಯಂತೂ ಇದ್ದೆ ಇದೆ. ಆದರೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದರೆ ಸಾಲದು. ಇದೇ ನಿಟ್ಟಿನಲ್ಲಿ ದ್ವಿಚಕ್ರವಾಹನರ ಜೀವರಕ್ಷಣೆಗೆ ಬೇರೇನೂ ಬೇಕಿಲ್ಲ ಎಂದು ಆಳುವ ಮಂದಿ ಯೋಚಿಸುತ್ತಿರುವುದು ತಪ್ಪು. ಇಂದು ದ್ವಿಚಕ್ರವಾಹನಗಳ ಅಪಘಾvಗಳಿಗೆ ರಸ್ತೆಯ ಗುಂಡಿಗಳೇ ಕಾರಣವಾಗಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಅಪಾರ ಹಣ ವೆಚ್ಚವಾಗುತ್ತಿದ್ದರೂ ಪದೇ ಪದೇ ಇಂತಹ ಗುಂಡಿಗಳು ಉದ್ಭವವಾಗಲೂ ಏನು ಕಾರಣ ಎನ್ನುವುದೇ ತಿಳಿಯದಾಗಿರುವುದು ವಿಪರ್ಯಾಸವೇ ಸರಿ.

ಕೊನೆಯ ಮಾತು;
ನಾವು ನಿಮ್ಮ ತತ್ವಕ್ಕೆ ಬದ್ದರಾಗುತ್ತೇವೆ. ಆದರೆ ಹೊಸ ಯೋಜನೆಗೆ ಅಡಿ ಇಡುವ ಮೊದಲು ಈ ಕೆಳಗಿನವುಗಳ ಬಗ್ಗೆ ಒಂದಿಷ್ಟು ಗಮನಹರಿಸಿ ಮಾನ್ಯ ಮುಖ್ಯಮಂತ್ರಿಗಳೇ...
*ನಗರ ಸ್ಥಳೀಯ ಸಂಸ್ಥೆಗಳಿಗೆ ಗಂಭೀರ ವಾರ್ನಿಂಗ್ ನೀಡಿ ರಸ್ತೆ ನಿರ್ವಹಣೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ.
*ಪಾದಚಾರಿ ಮಾರ್ಗ ಹಾಗೂ ರಸ್ತೆ ನಡುವೆ ನಿಗಧಿತ ವ್ಯತ್ಯಾಸ ರೂಪಿಸಿ
*ದುರಸ್ತಿ ಎನ್ನುವ ದಂಧೆ ತಡೆಯಿರಿ
*ಸರ್ಕಾರದ ನೀತಿ ನಿಯಮಗಳಲ್ಲಿ ಪಾರದರ್ಶಕತೆ ರೂಪಿಸಿ
*ನಿಯಮ ಅನುಷ್ಠಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ
* ಕಾಟಾಚಾರದ ಹೆಲ್ಮೆಟ್ ಧರಿಸುವುದು, ಅತೀ ವೇಗ, ಮಧ್ಯಸೇವಿಸಿ ವಾಹನ ಓಡಿಸುವುದು ಇತ್ಯಾದಿಗಳ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಿ.
ಮಾಡ್ತೀರಲ್ವಾ.../ ಡೌಟ್ ಇದೆ ನನಗೆ... ಆದರೂ ಚಿಂತೆಯಿಲ್ಲ, ಇದೇ ರೀತಿ ಬರವಣಿಗೆಯಲ್ಲೇ ಆಗಾಗ ಎಬ್ಬಿಸುತ್ತಿರುತ್ತೇನೆ...