Tuesday, 22 September 2015

ಹೆಣ್ಣು-9


“ಹೆಣ್ಣು ಹೆಂಗಸಾದಾಗಾ ಬದಲಾಗುತ್ತಾಳೇ ಅನಿಸುತ್ತದೆ ಅಲ್ವಾ ಸಾರ್!...”
ಈ ಹಿಂದಿನ ಸಂಚಿಕೆಗಳಲ್ಲಿ ಮೂಡಿಬಂದಿರುವ ಹೆಣ್ಣು ಅಂಕಣವನ್ನು ಓದಿದ ಓದುಗರೊಬ್ಬರು ಈ ಮೇಲಿನ ಪ್ರಶ್ನೆಯನ್ನು ಕರೆ ಮಾಡಿ ಕೇಳಿದ್ದರು.
 ‘ಹೌದು, ಖಂಡಿತ ನೋ ಡೌಟ್’ ಎಂದೆ.
‘ಹಾಗಾದರೆ ಅವಳು ಬದಲಾವಣೆಗೆ ಒಳಗಾದಾಗ ಸಹಜ ಸಂವೇದನೆಗಳನ್ನ ಕಳೆದುಕೊಳ್ಳುತ್ತಾಳಾ ಸರ್’ ಎಂದು ಮರುಪ್ರಶ್ನೆ ಪ್ರೀತಿಯಿಂದಲೇ ಕೇಳಿದರು.
 ‘ಸಹಜವಾದ ಸಂವೇದನೆಗಳನ್ನು ಕಳೆದುಕೊಂಡಾಗಲೇ ಬದಲಾವಣೆ ಕಾಣಲು ಸಾಧ್ಯ ಅಲ್ವಾ, ಇಲ್ಲವೆಂದರೆ ಬದಲಾವಣೆಯಾಗೋದು ಕಷ್ಟ ಸಾಧ್ಯ ಸರ್’ ಎಂದೆ.

 ಎಸ್.., ಈ ಮಾತು ನಿಜ. ಹುಡುಗಿ ಹೆಣ್ಣಾಗಿ ಹೆಂಗಸಾಗುವ ಪ್ರವರ್ಧಮಾನಕ್ಕೆ ತಿರುಗಿದಾಗ ತನ್ನಿಂದ ತಾನೇ ಬರುವ ಕಾತುರತೆ, ನಿರೀಕ್ಷೆ, ಲಜ್ಜೆ, ನಾಚಿಕೆ, ಕನಸು ಕಂಗಳು , ಕೆನ್ನೆ ಚುಂಬಿಸುತ್ತಲೇ ಇರುವ ರೆಪ್ಪೆಗಳು, ಬಳುಕೋ ವೈಯಾರ, ಬಿಂಕ ಭಿನ್ನಾಣಗಳು ಎಲ್ಲವೂ ತನ್ನಿಂದ ತಾನೇ ಅವಳ ಸಂವೇದನೆಗೆ ಅರಿಯದೆ ಪ್ರವೇಶಿಸುತ್ತದೆ.
ಬಾಲಕಿ ಹೆಣ್ಣಾಗುತ್ತಾಳೆ, ಸೀದಾ ಮಹಿಳೆಯೂ ಆಗುತ್ತಾಳೆ ಆಗ, ಅವಳಲ್ಲಿ ಬದಲಾವಣೆಯ ಮಹಾಪೂರವೇ ಹರಿಯುತ್ತದೆ. ಒಂಥರ ಗಾಂಭೀರ್ಯ, ದಿನಚರಿಯಲ್ಲಿ ಬದಲಾವಣೆ, ಆರೋಗ್ಯದ ಕಡೆ ಗಮನ, ತನ್ನ ತನದ ಕಾಳಜಿ, ಲೈಂಗಿಕತೆಯ ಬಗೆಗಿನ ಕುತೂಹಲ, ಹುಡುಗರ ಮೇಲಿನ ಸೆಳೆತ, ಉಡುಗೆ ತೊಡುಗೆಯ ಬದಲಾವಣೆ ಇವೇ ಮುಂತಾದವುಗಳು ತನ್ನಿಂದ ತಾನಾಗಿಯೇ ಯಾರ ಹೇಳಿಕೆಯನ್ನು ಪಡೆಯದೇ ಬರುವುದು. ಇದೆಲ್ಲ ಕಾಮನ್ ಬದಲಾವಣೆಯಾದರೆ, ಇನ್ನೊಂದು ಬದಲಾವಣೆಗಳನ್ನು ನಮಗೆ ನಾವೇ ಮಾಡಿಕೊಂಡು ಬಿಡುವ ಪ್ರಜ್ಞೆಯ ಬದಲಾವಣೆ. ಉದಾಹರಣೆಗೆ, ಅವಳು ಮದುವೆಯ ನಂತರ ಮನೆ ಹಾಗೂ ಗಂಡನ ಮನೆ ಎರಡನ್ನು ಹೊಂದಾಣಿಸಿಕೊಂಡು ಬದುಕುವುದು ಸಹಜ ಧರ್ಮವಾಗಿ ಬಿಡುತ್ತದೆ. ಹೊಂದಿಕೊಂಡು ಸರಿಸಮಾನವಾಗಬೇಕಾಗುತ್ತದೆ. ಆದರೆ ಇದರಲ್ಲಿ ಈಗೀಗ ಬದಲಾವಣೆಯನ್ನು ಕಾಣುತ್ತಿದ್ದೇವೆ.  ಇತ್ತೀಚಿನ ಮಹಿಳೆ ತಮ್ಮ ಕಾಲ ಮೇಲೆ ತಾನು ನಿಂತುಕೊಳ್ಳುವ ಉಸಾಬರಿಯಲ್ಲಿ ವೃತ್ತಿ ಮತ್ತು ಸಂಸಾರ ಎರಡನ್ನು ನೋಡಿಕೊಳ್ಳಬೇಕಾಗುತ್ತಿದ್ದು, ಹೊಂದಾಣಿಕೆ ಒಂದು ಹೆಜ್ಜೆ ಮುಂದೆ ಸಾಗಿ ಆಯತಪ್ಪುತ್ತಿದೆ. ಇತ್ತೀಚಿನ ಮಹಿಳೆಯರ ಹೊಂದಾಣಿಕೆ ನೆಮ್ಮದಿಗೆ ಅಡ್ಡಗಾಲಿಡುವುದರ ಜೊತೆಗೆ ಜೀವನದ ಸುಖ, ಸಂತೋಷವನ್ನು ಕೊಲ್ಲತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬದುಕೆ ಇಷ್ಟೆ. ಹೊಂದಿಕೊಳ್ಳಬೇಕು, ಹೊಂದಿಕೊಳ್ಳುತ್ತೇವೆ ಎಂದುಕೊಂಡರೆ ಸಡಗರ. ಇಲ್ಲವಾದರೆ ತಡಬಡ. ಗಂಡು-ಹೆಣ್ಣಿನಲ್ಲಿ ಹೆಚ್ಚು ಯಾತನಾದಾಯಕ ಬದುಕು ಹೆಣ್ಣಿದ್ದೆ ಆದರೂ ಅವಳ ಸಂವೇದನೆಗಳ ಮೇಲೆ ಬದುಕು ಕಟ್ಟಿಕೊಳ್ಳುವುದು ಅವರವರ ನೇರಕ್ಕೆ ನಿಂತಿರುತ್ತದೆ. ಪ್ರೀತಿ, ಪ್ರೇಮ, ಕಾಮ ಹೀಗೆ  ಕ್ಷಣದ ಮಾಯೆಯಾಗುತ್ತಾಳೆ. ಲವ್ ಅನ್ನುವ ಎರಡಕ್ಷರದ ಮಾಯೆ ಹೆಣ್ಣು ಹೆಂಗಸಾದಾಗ ಬಹುಮುಖ ಪ್ರತಿಭೆಯ ಆಟ ತರಿಸುತ್ತದೆ. ಅವಳು ಸಹಜ ಸಂವೇದನೆಗೆ ತಿರುಗಿದಾಗ ಕಾಣದ ಅಷ್ಟೂ-ಇಷ್ಟೂ ಎಲ್ಲವೂ ಆವರಿಸುತ್ತದೆ.
ಆದರೂ ‘ಬಿ ಕೇರ್‍ಫುಲ್’ ಈ ಸಮಯದಲ್ಲಿ ನಿಮ್ಮ ಜಾಗೃತೆ ನಿಮ್ಮಲ್ಲಿರಲಿ. ಸಂವೇದನೆಗಳು ಸಮಯಪ್ರಜ್ಞೆ ಕಳೆದುಕೊಳ್ಳದಿದ್ದರೆ ಚೆಂದ. ಅಂತ ಬದುಕು ನಿಮ್ಮದಾಗಲಿ.




ಹೊಸ ಮನೆಗೆ ಹೋಗುತ್ತಿದ್ದೀರಾ!? ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮನೆ...


          ಮನೆ ಬದಲಿಸಬೇಕು, ಸ್ವಲ್ಪ ದೊಡ್ಡ ಮನೆನೆ ನೋಡಿದ್ದೀವಿ, ಫೈನಲ್ ಸೆಟ್ಲಮೆಂಟ್ ಬಾಕಿ ಇದೆ ಅಷ್ಟೇ, ಅದೆಲ್ಲಾ ಹೇಗೋ ಆಗತ್ತೆ ಆದ್ರೇ ಇಲ್ಲಿರೋ ಸಾಮಾನು ಸರಂಜಾಮು ವರ್ಗಾವಣೆ ಮಾಡುವುದೇ ದೊಡ್ಡ ತಲೆ ನೋವು. ಇಲ್ಲಿ ನಮಗೆ ಎಲ್ಲವೂ ಚೆನ್ನಾಗಿತ್ತು. ಈ ಮನೆ ಒಂಥರಾ ಲಕ್ಕಿ ಕಣ್ರೀ.., ಏನ್ಮಾಡೋದು ಅಲ್ಲಿಯ ವಾತಾವರಣ ಹೇಗಿರುತ್ತೋ ಏನೋ? ಇದೆಲ್ಲಾ ಹೇಗೆ ಸರಬರಾಜಾಗಿ ಅಲ್ಲಿ ಹೋಗಿ ಸೆಟ್ ಆಗುತ್ತೋ ದೇವರೇ ಬಲ್ಲ..!. ಬಹುಶಃ ಇಂತಹ ಮಾತುಗಳು ಬಾಡಿಗೆ ಮನೆಯಲ್ಲಿ ವಾಸವಾಗಿರುವವರಿಗೆ ಸರ್ವೇಸಾಮಾನ್ಯವಾಗಿರುತ್ತದೆ. ನಿಜ.., ಅವರನ್ನು ತೀರದ ಭಾವಗಳು, ನೆನಪುಗಳು, ಕನಸುಗಳು, ಹೊಸಸ್ಥಳದ ಆತಂಕಗಳು ಕಟ್ಟಿ ಹಾಕುತ್ತವೆ. ತೀರಾ ಅಟ್ಯಾಚಮೆಂಟ್ ಇದ್ದರೆ ಹಾಗೆ ಆಗುವುದು ನೋಡಿ...!


 ಆ ಮನೆಯಲ್ಲಿ ಕಳೆದಿರುವುದು ಒಂದಿಷ್ಟೇ ದಿನವಾಗಿದ್ದರೂ, ಕಳೆದಿರುವ ಭಾವನೆಗಳು, ಜೊತೆಯಾಗಿ ಸವಿಯೂಟ ಮಾಡಿದ್ದ ಕ್ಷಣಗಳು,  ಎಲ್ಲೆಂದರಲ್ಲಿ ಕುಳಿತು, ನಿಂತು, ಮಲಗಿ, ಆಟವಾಡಿದ್ದ ಹಲವಾರು ಸವಿ ನೆನಪು, ಕಷ್ಟ- ಸುಖ- ದುಃಖಗಳಿಗೆ, ಪ್ರೀತಿಯ ನೆಮ್ಮದಿಗೆ ಕಾರಣವಾಗಿದ್ದ ಭಾವಾಂತರಂಗಗಳು ಹೀಗೆ ಎಲ್ಲವೂ ನಮ್ಮನ್ನು ಒಂದು ಕ್ಷಣ ಮಮಕಾರದ ಪ್ರೀತಿಯ ಸಂಕೋಲೆಯಿಂದ ಬಂಧಿಸುತ್ತವೆ.  ಆದರೇನು ಮಾಡೋದು ಸೂರನ್ನು ಬದಲಿಸಲೇಬೇಕಿದೆ. ಯಾಕೆಂದರೆ ಅದು ನಮ್ಮ ಸ್ವಂತದಲ್ಲವಲ್ಲ...
ಪ್ರತಿ ಬಾಡಿಗೆ ಮನೆಯೂ ಮುಂದಿನ ಮನೆಗೆ ಹೋಗುವರೆಗೂ ಸ್ವಂತದ್ದೇ ಆದ್ದರಿಂದ  ಪ್ರತಿ ಮನೆಯ ಮೇಲೂ ಅಕ್ಕರೆ, ಪ್ರೀತಿ, ದ್ವೇಷ, ಕೋಪ, ಇತ್ಯಾದಿ, ಇತ್ಯಾದಿ... ಮನುಷ್ಯ ನಿರ್ಮಿತ ಭಾವನೆಗಳು ಇದ್ದೆ ಇರ್ತವೆ. ಮನೆ ಬದಲಾಯಿಸುವುದೆಂದರೆ ಅದು ಕೇವಲ ಸಾಮಾನುಗಳ ಮೆರವಣಿಗೆಯಲ್ಲ ಬದಲಿಗೆ ನಮ್ಮನುಭವಗಳ ಪಾರಮ್ಯದಲ್ಲಿ ವಿಕಸಿತಗೊಂಡ ಕುಶಲ ಕಲೆ. ಒಂದಿಷ್ಟು ವರ್ಷಕ್ಕಾಗಿ ಹಿಂದೂ-ಮುಂದೂ ನೂರು ಬಾರಿ ಯೋಚಿಸಿ,  ಅಡ್ವಾನ್ಸ್ ಹಾಗೂ ಬಾಡಿಗೆ ವಿಚಾರವಾಗಿ ಓನರ್ ಎಷ್ಟೇ ಕಮ್ಮಿ ಹೇಳಿದ್ದರೂ ಅದರಲ್ಲೇ ಇನ್ನು ಸ್ವಲ್ಪ ಬೌಕಾಶಿಗಿಳಿದು, ಓ.ಕೆ ಫರ್ಫೆಕ್ಟ್ ಎಂದು ಶಿಫ್ಟಿಂಗ್ ಮಾಡಿ ಇನ್ನೇನು ಸೆಟ್ ಆಯ್ತು ಮನೆ ಎಂದು ಮನೆಯಿಂದ ಮನೆಗೆ ಲಗ್ಗೇಜು ಹೊತ್ತೊಯ್ದು ಹೈರಾಣಾಗಿ, ನಿಟ್ಟುಸಿರು ಬಿಟ್ಟು ಜೀವನದ ಬಂಡಿ ನೂಕುತ್ತಿರುವಾಗಲೇ ಎರ್ಗಿಮೆಂಟ್ ಮುಗ್ತಾಯವೋ, ವರ್ಗಾವಣೆಯ ಸಂದೇಶವೋ, ಓನರ್‍ನ ಕಿರಿಕ್ಕೋ, ನಮ್ಮನೆ ಇಂಗಿನ ಒಗ್ಗರಣೆಯ ವಾಸನೆ ಪಕ್ಕದಲ್ಲೇ ಇರುವ ಒನರ್ ಮಗಳಿಗೆ  ತಲೆನೋವು ಬರಿಸುತ್ತೆಯಂತಲೋ, ಪ್ರತಿ ಭಾನುವಾರ ಆಂಟಿ ಮನೆಯ ಕಿಚನ್‍ನಿಂದ ಹೊರಹೊಮ್ಮುವ ಗರಂ ಮಸಾಲೆಯ ವಾಸನೆ  ನನ್ನ ಹೆಂಡತಿಗೆ ವಾಕರಿಕೆ ತರಿಸುತ್ತೆಯಂತಲೋ, ಸ್ನಾನಕ್ಕೆ ಸರಿಯಾದ ನೀರನ್ನು ಕೊಡಲ್ಲ ಅಂತಲೋ, ಸಮ್‍ಥಿಂಗ್ ಪ್ರಾಬ್ಲಂ! ಮನೆಯ ವಾಸ್ತುನೇ ಸರಿಯಿಲ್ಲ ಅಂತಲೋ, ಯಾವುದೋ ಸ್ವಾಮೀಜೀ ಹೇಳಿದ ಅಡುಗೆ ಮನೆ ಸರಿಯಿಲ್ಲ ಎಂಬ  ಮಾತಿಗೆ ಮರುಳಾಗಿಯೋ, ಸಕ್ಸಸ್ ದೊರೆಯುತ್ತಿಲ್ಲ ಮನೆ ಬದಲಾಯಿಸೋಣ ಎಂತಲೋ, ಸ್ಕೂಲ್‍ಗೆ ಹೋಗಲು ಮಗನಿಗೆ ದೂರ ಪ್ರಯಾಣವಾಗುತ್ತದೆ ಹತ್ತಿರದಲ್ಲೇ ಮನೆ ಮಾಡೋಣವಂತಲೋ, ಪಾರ್ಕಿಂಗ್ ಪ್ರಾಬ್ಲಂ ಇದೆಯಂತಲೋ, ಜೀವನದ ಚಕ್ರಕ್ಕೆ ಕಲ್ಲುಬಂಡೆ ಸಿಕ್ಕಂತೆÉ ಜರ್ಕ್ ಹೊಡೆಸಿ ಮತ್ತೆ ನವ ದಾರಿ ಹಿಡಿದು ಹೊಸ ಮನೆಯ ಹುಡುಕಾಟಕ್ಕೆ ನಮ್ಮ ಚಂಚಲ ಚಿತ್ತವನ್ನು ಆಯಾಯ ಸಂಧರ್ಭಗಳು ಅಣಿಗೊಳಿಸುತ್ತವೆ.
ಬಹಳ ಹಿಂದೆ ಮಾನವ ನೆಲೆಸಲು ಉಪಯೋಗಿಸಿಕೊಂಡ ಸ್ಥಳದ ಸೂರುಗಳೇ ಇಂದು ಈ ಮನೆಗಳು ಎಂಬ ಧೈತ್ಯಕ್ಕೆ ಬಂದು ನಿಂತಿವೆ. ಸುಮಾರು 11,000 ವರ್ಷಗಳ ಹಿಂದೆ, ಮಾನವ ಮರದ ಪೊಟರೆ, ಗುಹೆ, ಕಲ್ಲು ಬಂಡೆಗಳ ಸಂಧಿನಿಂದ ತೊಡಗಿ ಇಂದಿನ ಗಗನಚುಂಬಿ ಗ್ರಹಗಳವರೆಗೆ ಬೆಳೆದ ಮನೆಗಳ ಬೆಳವಣಿಗೆ ಮಾನವ ಸಮಾಜದ ವಿಕಾಸದಲ್ಲಿ ದೊಡ್ಡ ಮುಖ ಎಂದರೆ ತಪ್ಪಿಲ್ಲ. ಮನೆಗಳು ನಾಗರಿಕತೆಯ ವಿಕಾಸದೊಂದಿಗೆ ನಿಕಟವಾಗಿ ಸಂಪರ್ಕ ಹೆಣೆದುಕೊಂಡು ಶತಶತಮಾನಗಳ ಹಿಂದಿನಿಂದಲೇ ಉದ್ಭವಿಸಿಕೊಂಡು ಬಂದಿದೆ. ತನಗಾಗಿ, ತನ್ನವರಿಗಾಗಿ, ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ ಕಲ್ಪನೆ ಮಾನವ ಹುಟ್ಟಿನ ಸ್ವಲ್ಪ ಕಾಲದಲ್ಲೇ ಉದ್ಬವಿಸಿದ್ದು ವಿಶೇಷವೇ ಆದರೂ, ಇವತ್ತು ಅದೆ ಬಾಡಿಗೆ, ಲೀಸ್ ಎಂಬ ನೆಪದಲ್ಲಿ ಅನೇಕ ಬಿಲ್ಡಿಂಗ್ ಮಾಲೀಕರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ಬಿಟ್ಟು, ಲಕ್ಷ ಲಕ್ಷ ಅಡ್ವಾನ್ಸ್ ಪಡೆದು, ಸರ್ಕಾರಕ್ಕೆ ತೆರಿಗೆಯನ್ನು ನೀಡದೆ ಹಗಲು ದರೊಡೆಯಲ್ಲಿ ಸಾಗುತ್ತಿರುವುದು ವಿಶೇಷವಲ್ಲದೇ ಮತ್ತೇನು?
ಮನುಷ್ಯ ನಿರ್ಮಿಸಿಕೊಂಡ ಮನೆ ಎಂಬ ನೆಲೆ, ಗುಹೆ-ಮರದ ಪೊಟರೆಯ ನಂತರ ಗುಡಿಸಲಿನಂತೆ ಇದ್ದು, ಅದು ಮೊದಲು ಅತೀ ಪ್ರಾಚೀನ ಕಾಲದಲ್ಲಿ ಅಸ್ಸೀರಿಯಾದ ಉಬೈದನ್ ಗ್ರಾಮದಲ್ಲಿ ಹಾಗೂ ನಂತರದ ನೆಲೆಗಳನ್ನು ಈಜಿಪ್ಟ್‍ನ ನೈಲ್ ನದಿಯ ರೊಸೆಟ್ಟಾ ಶಾಖೆಯ ಬಳಿ ಇರುವ ಮೆರಿಂದೆ ಎಂಬಲ್ಲಿತ್ತು ಎನ್ನುವುದು ಉತ್ಕನನದಲ್ಲಿ ಸಿಕ್ಕ ಅವಶೇಷಗಳಿಂದ ತಿಳಿದು ಬಂದಿದೆ. ಇನ್ನೂ ಭಾರತದ ವಿಚಾರಕ್ಕೆ ಬಂದರೆ  ಪ್ರಾಚೀನ ಗ್ರಹಾಶೇಷಗಳು, ಗಂಗಾನದಿಯ ಬಯಲಿನಲ್ಲಿರುವ ಸೂಕ್ಷ್ಮ ಶಿಲಾಯುಗದ ನೆಲೆಗಳಲ್ಲಿ ಆಯತ, ವೃತ್ತಾಕಾರ ಹೀಗೆ ಹಲವು ಬಗೆಂiÀಲ್ಲಿ  ಅವಶೇಷಗಳು,  ಮನೆಯ ಕುರುಹುಗಳು ಪತ್ತೆಯಾಗಿದ್ದು, ಹರಪ್ಪ, ಮೊಹೆಂಜೋದಾರೋ ನಾಗರಿಕತೆಯಲ್ಲೂ ಕೂಡ ಅದೇ ಸಂಸ್ಕøತಿಗೆ  ಹೊಂದಿಕೊಂಡಿರುವ ಕುರುಹುಗಳು ಲಭಿಸಿವೆ. ಅಂದರೆ ಮನೆ ನಿರ್ಮಾಣ ಇಂದು ನಿನ್ನೆಯ ಪ್ರಕ್ರಿಯೇ ಅಲ್ಲ ಎಂಬುದು ಸ್ಫಷ್ಟವಾಗುತ್ತದೆ.
 ಅದೇನೆ ಇರಲಿ. ಪ್ರಾರಂಭದಲ್ಲಿ ಪೊದೆ, ಪೊಟರೆ, ಗುಹೆ, ಆಮೇಲೆ ಹುಲ್ಲಿನ ಸೂರು, ನಂತರದಲ್ಲಿ ಬಿದಿರು, ಮರಗಳನ್ನು ಕಡಿದು ನಿರ್ಮಿಸುತ್ತಿದ್ದ ಮನೆ ಇಂದು ಸೀಮೆಂಟ್, ಕಬ್ಬಿಣ ರಾಡ್‍ಗಳ ಸಹಾಯದಿಂದ ದೈತ್ಯಾಕಾರಕ್ಕೂ ಬೆಳೆದು ನಿಂತಿರುವುದು ಮಾನವನ ಬೆಳವಣಿಗೆಯ ವಿಕಸನವನ್ನು ತೋರಿಸುತ್ತದೆ. ಇಂತಹ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಬಾಡಿಗೆ ಮನೆಯನ್ನು ಕೊಡಲು ಸಮರ್ಥವೆಂಬಂತೆ ಅದರಲ್ಲೂ ಹೊಸತನ ಕಂಡುಕೊಂಡು  ‘ಇನ್‍ಸ್ಟಾಲ್ ಮೆಂಟ್ ಕಟ್ಟಿ, ಅಪಾರ್ಟ್‍ಮೆಂಟ್ ಪಡೆಯಿರಿ’ ಎಂಬ ವ್ಯಾಪಾರೀಕರಣದಲ್ಲಿ’ ಹಣ ಮಾಡಲು ತೊಡಗಿದೆ ಇಂದಿನ ಜನತೆ.
 ಮನೆಯೆಂದರೆ ಹಾಗೆ ಅದಕ್ಕಾಗಿ ಎಷ್ಟು ದುಡ್ಡು ಬೇಕಿದ್ದರೂ ಸುರಿಯುತ್ತೇವೆ. ಅದು ಮನಕ್ಕೆ ಸುಸ್ತು ಬಡಿದಿದ್ದಾಗ ಶಾಂತಿ ನೀಡುವ ನೆಮ್ಮದಿಯ ಸೂರು. ಬೆಂಗಳೂರಿನಂತ ಮಹಾನಗರಿಯಲ್ಲಿ ವಾಸಿಸುವವರಿಗೆ ಮನೆ ಮಾಡುವುದು, ಬದಲಾಯಿಸುವುದು ಯಾವುದು ಅಸಾಮಾನ್ಯವಲ್ಲ. ಇಲ್ಲಿನ ಜನರಿಗಿಂತ, ಕೆಲಸವರಸಿ ವಲಸೆ ಬಂದಿರುವ ಜನರೇ ಮಹಾನಗರದಲ್ಲಿ ಜಾಸ್ತಿ ಇರುವುದರಿಂದ ಬಾಡಿಗೆ ಮನೆಗೆ ಬಹು ಬೇಡಿಕೆ ಇದೆ. ಎಷ್ಟು ಬೇಡಿದರು ಸಿಗುತ್ತೆ ಮನೆಗಳಿಗೆ ಕೊರತೆ ಇಲ್ಲ ಎನ್ನುವಂತ ಭೂಮಿ ಮಾಲೀಕರು ಸಣ್ಣ ರೋಡನ್ನು ಬಿಡದೆ  ಹಂತ ಹಂತವಾಗಿ ಸಿಕ್ಕ ಸಿಕ್ಕಲ್ಲಿ ಮನೆ ನಿರ್ಮಿಸಿ ಗ್ರಹ ರಚನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಬಾಡಿಗೆಗೆ ಬಿಟ್ಟು ಆರಾಮಾಗಿ ಅರಸರಾಗಿದ್ದಾರೆ. ಅಲ್ಲಲ್ಲಿ ಅಕ್ರಮ ಮನೆಗಳು ಕೆರೆ ಕಟ್ಟೆಗಳು ಇವೆ ಎಂದು ನೋಡದೆ ನಿರ್ಮಿಸಿಕೊಂಡ ಮಹಾನುಭಾವರು ಇಂದು ಸರ್ಕಾರದ ಕಟ್ಟು ನಿಟ್ಟಿನ ಅಕ್ರಮಗಳ ಮರುಕಬಳಿಕೆಗೆ ತುತ್ತಾಗಿ ಅನೇಕ ಬಾಡಿಗೆದಾರರಿಂದ ಲಕ್ಷಗಟ್ಟಲೇ ಅಡ್ವಾನ್ಸ್ ಪಡೆದು ಪಂಗನಾಮ ಹಾಕಿ ಓಡಿ ಹೋದವರು ಇದ್ದಾರೆ.
ಏನೇ ಹೇಳಿ ಆದ್ರೆ, ಸಾಯೋದ್ರೊಳಗೆ ಸ್ವಂತದೊಂದು ಮನೆ ಕಟ್ಟಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಮನುಜನ ಆಸೆ. ಇದನ್ನು ಸಾಕಾರಗೊಳಿಸಿಕೊಳ್ಳುವುದು ಬೆಂಗಳೂರಿನಂತಹ ಮಹಾ ನಗರಿಯಲ್ಲಿ ಇದು ದೊಡ್ಡ ಸಾಧನೆಯೇ ಸರಿ. ಇನ್ನು ಸ್ವಲ್ಪ ವರ್ಷ ಕಳೆದರೆ ಮನೆ ಕಟ್ಟೋದಿರಲಿ ಬಾಡಿಗೆ ಮನೆಯ ಬೆಲೆಯೂ ಗಗನಕ್ಕೇರಬಹುದೇನೋ!?
ಮನೆ ಮಾಡುವುದು, ಬದಲಾಯಿಸುವುದೆಲ್ಲವೂ ಜೀವನದ ಆಕಸ್ಮಿಕ ಘಟನೆಗಳಾದರೂ   ಅದು ಮನಸ್ಸು ಮನಸ್ಸುಗಳ ತೀರದ ಸ್ಪಂಧನ, ಕೂಡಿಕೆ ಅಗಲಿಕೆಗಳ ನಿರಂತರ ಸಮ್ಮಿಲನ. ಸಣ್ಣ ಮನೆಯಿಂದ ದೊಡ್ಡ ಮನೆಗೆ ಪ್ರಯಾಣಿಸುವ ಚಿಂತನೆ ಒಂದು ಕಡೆಯಾದರೆ, ಇರುವ ಮನೆಯನ್ನು ಬಿಟ್ಟು ಹೋಗಬೇಕಲ್ಲ ಎನ್ನುವ ಚಿಂತೆ ಇನ್ನೊಂದು ಕಡೆ. ತೀರಾ ಅಟ್ಯಾಚ್‍ಮೆಂಟ್ ಹಳೆ ಮನೆಯ ಬಗ್ಗೆ ಇದ್ದರೆ ನಮ್ಮ ಮನಸ್ಸು ಒಂದಿಷ್ಟು ದಿನ ಬೇಸರಿಕೆಯಿಂದ  ಅಳಲುಬಹುದು. ಆದರೆ ಸ್ವಲ್ಪ ದಿನವಾದ ಬಳಿಕ ಇದೇ ಚೆನ್ನಾಗಿದೆ ಎಂಬಂತೆ ಹೊಂದಿಕೊಳ್ಳುತ್ತದೆ. ನಾವು ಮಾನವರೇ ಹೀಗೆ ನೀರಿನ ಥರ. ಸಣ್ಣ ಮನೆಯಿಂದ ದೊಡ್ಡ ಮನೆಗೆ ಬಹುಬೇಗ ಅಡ್ಜಸ್ಟ್ ಆಗುತ್ತೇವೆ ಯಾವ ಸಂಶಯವೂ ಇಲ್ಲ. ಹಿಂದಿದ್ದ ಮನೆಗಿಂತ ಈಗ ಬಂದಿರುವ ಮನೆ ದೊಡ್ಡದೇ ಇದ್ದರೂ ಹೆಂಗಸರು ಮಾತ್ರ ಓಡಾಡುವ ಜಾಗ ಕತ್ತಲು ಎನ್ನುತ್ತಲೋ, ರೂಮಿಗೆ ಮಂಚ (ಕಾಟ್) ಹಾಕಿದ ಮೇಲೆ ಕಾಲಿಡಲು ಜಾಗ ಇಲ್ಲ ಎನ್ನುತ್ತಲೋ, ಹಿಂದಿನ ಮನೆಯಲ್ಲಿ ಇಟ್ಟಿದ್ದ ವಸ್ತುಗಳು ಇಲ್ಲಿ ಸರಿಯಾಗಿ ಜೋಡಿಸಲು ಆಗುತ್ತಲೇ ಇಲ್ಲ ಎನ್ನುತ್ತಲೋ, ಎಂದಿನ ತಮ್ಮ ಅಸಹನೆಯನ್ನು ತೋರ್ಪಡಿಸುತ್ತಲೇ ಇರುತ್ತಾರೆ. ಸತತ ಬದಲಾವಣೆ ಕಾಣುವ ನಮ್ಮ ದೈನಂದಿನ ಜೀವನದಲ್ಲಿ ಮನೆಗಳನ್ನು ಬದಲಾಯಿಸುತ್ತಾ ಇರುವಾಗ ನನಗೆ ಊರಲ್ಲಿರುವ ನಮ್ಮ ಸ್ವಂತ ಮನೆ ನೆನಪಿಗೆ ಬಂದು, ಅಲ್ಲಿ ಕಳೆದ ದಿನಗಳು, ಓಡಾಡಿಕೊಂಡಿದ್ದ ನಮ್ಮ ಬಾಲ್ಯಗಳೆಲ್ಲಾ ಕಚಗುಳಿ ಇಟ್ಟು, “ಅಲ್ಲಿರುವುದು ನಮ್ಮನೆ ಇಲ್ಲಿರುವುದು ಬಾಡಿಗೆ ಮನೆ, ಕಷ್ಟಪಟ್ಟು ದುಡಿಯುತ್ತಿರುವ ಹಣವನ್ನು ಹೋಮ್ ಓನರ್‍ಗಳಿಗೆ ನೀಡುತ್ತೇವೆ ಸುಮ್ಮನೆ, ಹೊಟ್ಟೆ ಪಾಡಿಗಾಗಿ ಈ ಒದ್ದಾಟ ಒಮ್ಮೊಮ್ಮೆ.., ನೆಮ್ಮದಿಯ ಜೀವನವಿದೆ ಊರಲ್ಲಿ ಬೆಚ್ಚನೆ.., ಏನಿದು ಬದುಕೇ ನಿನ್ನ ಮಹಿಮೆ...”ಎನಿಸುತ್ತದೆ.

ಗುರುತ್ವ ... ಇದು ಗುರು ಶಿಷ್ಯರ ಸಂಬಂಧ


      ಪ್ರೀತಿಯ ಮಾತುಗಳಲ್ಲಿ ಸಿಹಿಮುತ್ತು ಎಷ್ಟು ಮುಖ್ಯವೋ? ಹೆಮ್ಮೆಯ ದೇಶಕ್ಕೆ ಪ್ರಭುತ್ವ ಎಷ್ಟು ಮುಖ್ಯವೋ? ಹಾಗೆ ನಲ್ಮೆಯ ಮುಗ್ಧಮನಸಿನ ಮಕ್ಕಳಿಗೆ ಗುರು ಅಥವಾ ಗುರುತ್ವ ಇವೆಲ್ಲಕ್ಕಿಂತ ಮುಖ್ಯ. ಇದೇ ಇಂದಿನ ಜನಾಂಗದ ಕೊರತೆ. ಗುರು ಎಂದರೆ ಭಾರ. ಶಿಷ್ಯನೆಂದರೆ  ಹಗುರವೆಂದರ್ಥವಲ್ಲ. ಗುರು ಎಲ್ಲ ರೀತಿಯಲ್ಲೂ ಭಾರ. ತಿಳಿವಿನಲ್ಲಿ, ಅರಿವಿನಲ್ಲಿ, ಆನಂದದಲ್ಲಿ, ವಿಧ್ಯೆಯಲ್ಲಿ, ಬಗೆ ಬಗೆಯ ಜ್ಞಾನದಲ್ಲಿ.
ಆದರೆ ಶಿಷ್ಯ ಶೂನ್ಯ. ಇನ್ನೂ ಹೆಚ್ಚಿನ ಮಾತಲ್ಲಿ ಹೇಳಬೇಕೆಂದರೆ ಶಿಷ್ಯನೇನನ್ನೂ ಬೇಡುವುದಿಲ್ಲ. ಗುರು ಏನನ್ನೂ ಭರವಸೆ ನೀಡುವುದಿಲ್ಲ. ಶಿಷ್ಯನಲ್ಲಿ ತೃಷೆಯಿದೆ, ಗುರುವಿನಲ್ಲಿ ತಕ್ಕ ಭರವಸೆಯಿದೆ. ಈ ಸಾಮೀಪ್ಯದಲ್ಲಿ ಯಾರೂ ಮೇಲಲ್ಲ, ಯಾರು ಕೀಳಲ್ಲ.
 ಶಿಷ್ಯತ್ವ ಒಂದು ಸ್ತ್ರೀತ್ವ. ಶಿಷ್ಯನೊಂದು ಧ್ವಾರ, ಶಿಷ್ಯನೊಂದು ಗರ್ಭ, ಶಿಷ್ಯನೊಂದು ಸ್ವೀಕೃತಿ. ಗುರುತ್ವ ಎಂದೂ ಪುರುಷತ್ವ. ಗುರು ಕೊಡುಗೈ ತುಂಬಿದ ಕೊಡ. ಕೊಡುವುದೊಂದು ಗೊತ್ತು. ಅವನು ಕೊಡಬೇಕು ಅದು ಮಳೆ ತುಂಬಿದ ಮೋಡ.

  ಗುರು ಶಿಷ್ಯ ಪರಿಕಲ್ಪನೆಯೇ ಭಿನ್ನವಾದುದು. ಗುರು ಜ್ಞಾನವನ್ನು ಕೊಡುವುದಿಲ್ಲ. ತನ್ನ ಅಸ್ತಿತ್ವವನ್ನೇ ಸಮಗ್ರವಾಗಿ ಶಿಷ್ಯನೊಂದಿಗೆ ಹಂಚಿಕೊಳ್ಳುತ್ತಾನೆ. ಶಿಷ್ಯನೂ ಅರಸುತ್ತಿರುವುದು ಜ್ಞಾನವನ್ನಲ್ಲ ಬದಲಾಗಿ ತನ್ನ ಸಮಗ್ರ ಅಸ್ತಿತ್ವ ಅಷ್ಟೆ. ಅವನಿದ್ದಾನೆ ಆದರೂ ಅವನಾರಿದ್ದಾನೆಂಬುದು ಅವನೇ ಅರಿತಿಲ್ಲ. ಅದನ್ನೇ ಅರಿಯುವ ಗಾಢ ಯತ್ನ ಅವನದು. ತನಗೆ ತಾನೇ ಬತ್ತಲಾಗುವ ತೃಷೆ ಅವನದು. ಹೀಗೆ ಗುರು ಶಿಷ್ಯರ ಸಂಬಂಧ ಶಿಷ್ಯನಿಗೋ ಒಂದು ಹುಡುಕಾಟ. ಹಾಗೆ ಗುರುವಿಗೂ ಕೂಡ. ಈ ಹುಡುಕಾಟವನ್ನು ಪೂರ್ಣಗೊಳಿಸಲು ಶಿಷ್ಯನಲ್ಲಿ ಆತ್ಮವಿಶ್ವಾಸವನ್ನು ಸೃಷ್ಟಿಸುವುದೇ ಅವನ ಕಾರ್ಯ ಉಳಿದೆಲ್ಲವೂ ತಂತಾನೇ ಘಟಿಸುವುದು.
ಮನೆಯಲ್ಲಿ ತಾಯಿಯ ಪ್ರೀತಿ, ಅವಳ ಪಾಠಗಳೆಷ್ಟು ಮುಖ್ಯವೋ ಅಂತೆಯೇ ಶಾಲೆಯಲ್ಲಿ ಒಬ್ಬ ಒಳ್ಳೆಯ ಗುರು ಅವನ ಮಾರ್ಗದರ್ಶನವೂ ಅಷ್ಟೆ ಅಗತ್ಯ. ಗುರುವಿನ ಕೈಯಲ್ಲಿ ಅಸಾಧ್ಯವಾದದ್ದು ಏನೂ ಇಲ್ಲ . ಹೀಗೆ ಹೇಳುವಾಗ ಒಂದು ಮಾತು ಬಹಳ ಹತ್ತಿರಕ್ಕೆ ನೆನಪಾಗುತ್ತದೆ. ಪ್ರಾರ್ಥನೆಗಾಗಿ ಜೋಡಿಸಿರುವ ಸಾವಿರ ಕೈಗಳಿಗಿಂತ ಹಿರಿದಾದ್ದನ್ನು, ಕೆಲಸ ಮಾಡುತ್ತಿರುವ ಎರಡು ಕೈಗಳು ಸಾಧಿಸಬಲ್ಲದು. ಈ ಮಾತು ನಿಜವಾಗಿಯೂ ಹೌದು ಏನಿಸುತ್ತದೆ. ಗುರು ಎನ್ನುವ ಏರಡು ಅಕ್ಷರದಲ್ಲಿ ಎಷ್ಟು ಭಾವ, ಭಕ್ತಿ, ಭಯ ಅಡಗಿದೆಯೋ ಹಾಗೆಯೇ ಅವರ ಕೆಲಸದಲ್ಲೂ ಕೂಡ ಅಷ್ಟೆ ಪರಿಶ್ರಮ ಅಗತ್ಯವಿದೆ. ಈ ಮೊದಲೇ ಹೇಳಿದ ಹಾಗೆ ನಮ್ಮ ದೇಶದ ಪ್ರಭುತ್ವ ನಿಂತಿರುವುದು ಈ ಗುರು ಅಥವಾ ಗುರುತ್ವದ ಮೇಲೆ ಯಾಕೆಂದರೆ ನಮ್ಮ ಹೆಮ್ಮೆಯ ರಾಷ್ಟ್ರದ ಮಕ್ಕಳನ್ನು ತಿದ್ದಿ, ಬುದ್ದಿ, ಬೆಳೆಸುವುದು ಗುರುವಾದವನ ಕೈಯಲ್ಲೇ ಅಡಗಿದೆ. ಮಾನ್ಯ ಸಿದ್ಧೇಶ್ವರ ಸ್ವಾಮಿಯವರ ಒಂದು ಮಾತು ಎಷ್ಟು ಚಂದಕ್ಕಿದೆ ನೋಡಿ, “ದೋಷಗಳನ್ನು ಬಿಟ್ಟು ಸದ್ಗುಣಗಳನ್ನು ಅರಸೋದು ಗುಣಗ್ರಾಹಿತವಾಗುತ್ತದೆ. ದಿನಪತ್ರಿಕೆ ಹಿಡಿದು  ಒಂದೆರಡು ಗಂಟೆ ಓದಿನೋಡಿ  ಆಮೇಲೆ ನೀವು ಬರೆದಿಟ್ಟ ವಿಷಯಗಳು ಯಾವುದಕ್ಕೆ ಸಂಬಂಧಿಸಿದ್ದೆಂದು ಕಣ್ಣಾಟಿಸಿ. ನಿಮಗೆ ಅಚ್ಚರಿಯಾಗುತ್ತದೆ ಯಾಕೆಂದರೆ ಶೇ. 90 ರಷ್ಟು ಕೆಡುಕಿನ ವಿಚಾರಗಳೇ  ಬರೆದಿಟ್ಟ ಹಾಳೆಯಲ್ಲಿರುತ್ತದೆÉ. ದೃಷ್ಟಿಯನ್ನು ಬದಲಿಸಿ ಒಳ್ಳೆಯದನ್ನೇ ಹುಡುಕುವ ಕೆಲಸ ಶುರುಹಚ್ಚಿ ಕೆಲವೇ ತಿಂಗಳಲ್ಲಿ ಉಲ್ಟಾ ಫಲಿತಾಂಶ ಬಂದಿರುತ್ತದೆ”. ಹೌದು ಇದು ಗ್ಯಾರಂಟಿ. ಬಹುಶಃ ಈ ಮಾತು ಎಲ್ಲದಕ್ಕೂ ಹೋಲಿಕೆಯಾಗುತ್ತದೆ ಎನಿಸುತ್ತದೆ. ಹಾಗೆ ಇಲ್ಲಿ ಕೂಡ. ಒಬ್ಬ ಶಿಕ್ಷಕ ಅಥವಾ ಗುರು ಎಂದರೆ ಕೇವಲ ಹೆಸರಿಗೆ ಮಾತ್ರಾ ಅಲ್ಲ. ಇಡೀ ಸಮಾಜವನ್ನೇ ಉಳಿಸಿ ಬೆಳೆಸುವ ಜವಾಬ್ಧಾರಿ ಅವನ ಕೈಯಲ್ಲಿದೆ. ಅಂತೆಯೇ ಗುರುವೊಬ್ಬ ಒಳ್ಳೆಯವನಾಗಿದ್ದರೆ ಖಂಡಿತಾ ಶಿಷ್ಯಂದಿರು ಒಳ್ಳೆಯವರಾಗಿ ಬೆಳೆಯಲು ಸಾಧ್ಯ. ಮಕ್ಕಳು ಒಳ್ಳೆಯವರಾದರೆ ಸಮಾಜ ಒಳ್ಳೆಯದಾಗಲೂ ಸಾಧ್ಯ. ಯಾಕೆಂದರೆ ಇಂದಿನ ಮಕ್ಕಳೆ ನಾಳೆಯ ಪ್ರಜೆಗಳಲ್ಲವೇ!?...
          ಗುರು ಶಿಷ್ಯವೆಂಬ ಎರಡೂ ಬಿಂದುಗಳು ನಿಧಾನವೋ, ಶೀಘ್ರವೋ ಸ್ಫಂಧಿಸುವವು, ಒಂದಾಗುವವು. ಇಲ್ಲಿ ಮಿಲನ ಶರೀರದಲ್ಲ, ಮನಸ್ಸಿನದ್ದಲ್ಲ, ಬದಲಾಗಿ ಆತ್ಮದ್ದು.
ಎರಡು ದೀಪಗಳು ಸನಿಹ  ಬಂದಾಗ ಒಂದೇ ಜ್ವಾಲೆಯಾದಂತೆ. ಗುರು ಶಿಷ್ಯ ಎರಡು ಒಂದಾದರೆ ಬೆಳಕು ಉನ್ನತಿಯಲ್ಲಿ ಉರಿಯುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಅಷ್ಟು ಸುಲಭವಲ್ಲ. ಭಾವಗಳ ಭಾವೈಕ್ಯ ಒಂದಾಗಬೇಕು. ಗುರು ಶಿಷ್ಯರ ಪರಂಪರೆ, ಸಂಸ್ಕ್ರತಿ ಪ್ರವಹಿಸಲು, ನಿರರ್ಗಳವಾಗಿ ಹರಿಯಲು, ಹೆಸರುವಾಸಿಯಾಗಲು ಗುರು ಶಿಷ್ಯರ ಶ್ರಮವೂ ಅತ್ಯಗತ್ಯ. ತಾನು ಗುರುವಿನಿಂದ ಕಲಿತ ವಿದ್ಯೆಯನ್ನು ತನ್ನ ಸೃಜನಾತ್ಮಕತೆಯಿಂದ ಪರಿಪಕ್ವಗೊಳಿಸಿ ಶಿಷ್ಯನಿಗೆ ಧಾರೆಯೆರೆಯುವವನೇ ಪರಮ ಶ್ರೇಷ್ಠ ಗುರು. ಸಂಪ್ರದಾಯವೆನ್ನುವುದು ನಿಂತ ನೀರಲ್ಲ, ಪ್ರವಹಿಸುವ ಮಹಾಪೂರ. ಗುರು ಶಿಷ್ಯರಿಬ್ಬರೂ ಒಂದರ ಮುಂದೊಂದು ಹಿಡಿದ ಕನ್ನಡಿಗಳಂತೆ. ಒಂದರೊಳಗೊಂದು ಕಾಣುವ ಪ್ರತಿಬಿಂಬದಂತೆ. ಗುರುವಿನಿಂದ ಶಿಷ್ಯ ಹೇಗೆ ಕಲಿಯುತ್ತಾನೋ, ಗುರು ಶಿಷ್ಯನಿಗೆ ಪಾಠ ಹೇಳುತ್ತಾ ಅನೇಕ ವಿಚಾರಗಳನ್ನು ಅರಿತು, ಓರೆಕೋರೆಗಳನ್ನು ತಿದ್ದಿ ತೀಡಿ ಮುಂದುವರಿಯುತ್ತಾನೆ.
ಶಿಷ್ಯ ಪ್ರವರ್ಧಮಾನನಾಗುತ್ತಾ ಗುರುವಿನ ಹೆಗ್ಗಳಿಕೆಯೂ ವೃದ್ಧಿಸುತ್ತಾ ಹೋಗುತ್ತದೆ. ಇದೇ ಗುರು ಶಿಷ್ಯ ಪರಂಪರೆಯ ಧ್ಯೇಯ, ಆದರ್ಶ. ಹಿಂದಿನಿಂದ ಬಂದಿರುವ ಈ ಗುರು ಶಿಷ್ಯ ಪರಂಪರೆ ಇಂದು ಹಲವಾರೂ ಬದಲಾವಣೆಗಳೊಂದಿಗೆ ಮುಂದುವರಿಯುತ್ತಿದೆ. ಆ ಪರಂಪರೆಗೂ ಸಂಪ್ರದಾಯದ ಸಂಸ್ಕಾರಕ್ಕೂ ಆಧುನೀಕತೆ ಅನೇಕ ಬದಲಾವಣೆಯ ಗಾಳಿ ಸೋಕಿಸಿದೆ. ಆದರೆ ಒಂದಂತು ನಿಜ.
“ಗುರು ಎಂದೂ ಶಿಷ್ಯನ ಕಡೆಗೆ ಆಕರ್ಷಿತ,
ಶಿಷ್ಯನೆಂದೂ ಗುರುವಿನ ಕಡೆಗೆ ಆಕರ್ಷಿತ”...

“ನಮ್ಮೆಲ್ಲಾ ಓದುಗರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು”

Tuesday, 11 August 2015

"ನಮ್ಮ ಭಾರತ" - ಭಾರತಕ್ಕೆ ಭಾರತವೇ ಸಾಟಿ



    ಭಾರತ ಅಥವಾ ಭಾರತೀಯತೆಯ ಬಗ್ಗೆ ಮಾತನಾಡುವಾಗ ಯಾರಿಗೆ ಆಗಲಿ ಆತ್ಮದೊಳಗಿನಿಂದ ಉತ್ಸಾಹ ಭಾವಕತೆ, ದೇಶಾಭಿಮಾನದ ಜ್ವಾಜ್ವಲ್ಯ ಮೂಡಿ ಬರುತ್ತದೆ. ಯಾಕೆಂದರೆ, ಭಾರತದಲ್ಲಿ ಅನೇಕ ಭಾರತಗಳಿವೆ. ನೂರಕ್ಕೂ ಹೆಚ್ಚು ಭಾಷೆಗಳು ಹತ್ತಕ್ಕೂ ಪ್ರಮುಖ ಹಾಗೂ ಅನೇಕ ಅಪ್ರಮುಖ ಲಿಪಿ ವ್ಯವಸ್ಥೆಗಳು ಅಸಂಖ್ಯಾತ ಕುಲ, ಪಂಗಡಗಳಿಂದೊಡಗೂಡಿದ ಅನೇಕ ಪ್ರಾಚೀನ ಮತ ಧರ್ಮಗಳು, ಸಾವಿರಾರು ವರ್ಷಗಳಲ್ಲಿ ನಡೆದಿರುವ ವರ್ಣಸಂಕರಗಳು, ಬಗೆ ಬಗೆಯ ಭೂಪ್ರದೇಶಗಳು, ನಾನಾ ತೆರನಾದ ಹವಾ ಗುಣಗಳು ಇವೇ ಮುಂತಾದವುಗಳಿಂದಾಗಿ ಪರಂಪರೆ ಹಾಗೂ ವಿರುದ್ಧ ಪರಂಪರೆಗಳ ಅತ್ಯಂತ ಸಂಕೀರ್ಣವಾದ ಜಾಲ ನಿರ್ಮಾಣವಾಗಿದೆ. ಇನ್ನೊಂದು ವಿಷ್ಯ ಏನಪ್ಪ ಅಂದ್ರೆ ನೀವು ಭಾರತದ ಬಗೆಗೆ ಇದು ಸತ್ಯ ಎಂದು ಎನನ್ನೇ ಹೇಳಿದರೂ, ಅದಕ್ಕೆ ತೀರ ವಿರುದ್ಧವಾದುದನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಕೂಡ ಹೇಳಬಹುದು.
   ‘ಭಾರತ’ ಎಂದರೆ ಹೆಮ್ಮೆ. ಅದೊಂದು ಗರಿಮೆ, ಹಿರಿಮೆ. ನಮ್ಮ ದೇಶಕ್ಕೆ ನಮ್ಮ ದೇಶವೇ ಸಾಟಿ ಯಾಕೆಂದರೆ ಭಾರತ ತನ್ನ ದೀರ್ಘ ಇತಿಹಾಸದಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡಿದೆ. ಹಲವು ಬಾರಿ ಪರರ ದಾಳಿಗೆ, ಆಕ್ರಮಣಗಳಿಗೆ ತುತ್ತಾಗಿದೆ. ಎದುರಾದ ಎಲ್ಲಾ ವಿಷಮ ಸಂಧರ್ಭಗಳನ್ನೆಲ್ಲಾ ತಾಳ್ಮೆಯಿಂದ ಆತ್ಮ ವಿಶ್ವಾಸದಿಂದ ಎದುರಿಸಿದೆ. ನಮ್ಮ ಭಾರತ ಆಕ್ರೋಶದಿಂದ ಬಿರಿಯುತ್ತಾ ಮೇಲೆದ್ದು ನಿಂತು ಹೋರಾಡುವುದಿಲ್ಲ ಬದಲಾಗಿ ತನ್ನ ಸಮಯಕ್ಕಾಗಿ ತಾಳ್ಮೆಯಿಂದ ಕಾದು ನಿಲ್ಲುತ್ತದೆ. ಈ ದೇಶ ತಗ್ಗ ಬಲ್ಲದು, ಬಗ್ಗ ಬಲ್ಲದು ಆದರೆ ಮುರಿದು ಬೀಳುವುದಿಲ್ಲ. ಸಮಾಧಾನದಿಂದ ತನ್ನ ಅಂತಃಶ್ಚೈತನ್ಯವನ್ನು ಕೂಡಿಕೊಂಡು ಎದ್ದು ನಿಲ್ಲುತ್ತದೆಯೇ ಹೊರತು ಕುಗ್ಗುವುದಿಲ್ಲ.
   1757 ರಿಂದ ಭಾರತವನ್ನು ಬ್ರಿಟೀಷರು ಆಕ್ರಮಿಸಿಕೊಳ್ಳುತ್ತಾ ಬಂದಾಗ ಸಾಮಾನ್ಯ ಜನರಲ್ಲಿ ಉಂಟಾದ ಪ್ರತ್ರಿಕ್ರೀಯೇನು ಎಂಬುದನ್ನು ನಾವು ಅರಿತುಕೊಳ್ಳಬೇಕು ಮತ್ತು ನಮ್ಮ ಜನ ಆಗಲೇ ಪ್ರತಿಕ್ರಿಯಿಸಿದ್ದರೆ ಬ್ರಿಟೀಷರ ಸ್ಥಿತಿ ಏನಾಗುತ್ತಿತ್ತು ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗದೇ ಇರದು. ಪ್ಲಾಸಿ ಕದನವನ್ನು ರಾಬರ್ಟ್‍ಕ್ಲೈವ್‍ನ ನಾಯಕತ್ವದಲ್ಲಿ ಬ್ರಿಟಿಷರು ಗೆದ್ದರೇನೋ ನಿಜ. ಆದರೆ ಆ ನಂತರ ಅವನು 200 ಇಂಗ್ಲೀಷ್ ಸೈನಿಕರು ಹಾಗೂ 500 ಭಾರತೀಯ ಸಿಪಾಯಿ ದಳಗಳೊಂದಿಗೆ ಬಂಗಾಳದ ರಾಜಧಾನಿಯಾಗಿದ್ದ ಮುರ್ಷಿದಾ ಬಾದಿನಲ್ಲಿ ಒಂದು ವಿಜಯೋತ್ಸವ ನಡೆಸಿದ್ದ. ಸಹಸ್ರಾರು ಪ್ರಜೆಗಳು ಆ ಮೆರವಣಿಗೆಯನ್ನು ನೋಡಿದ್ದರು. ಅದನ್ನು ಕುರಿತು ಕ್ಲೈವ್ ಪಾರ್ಲಿಮೆಂಟರಿ ಸಮಿತಿಗೆ ವರದಿ ನೀಡುವಾಗ, ಮೆರವಣಿಗೆಯ ಸಂಧರ್ಭದಲ್ಲಿ ಲಕ್ಷಾಂತರ ಮಂದಿ ಭಾರತೀಯರು ಕೂಡಿದ್ದು, ಅವರು ಮನಸ್ಸು ಮಾಡಿದ್ದರೆ ಕಲ್ಲು, ದೊಣ್ಣೆಗಳಿಂದಲೇ ಯುರೋಪಿಯನ್ನರನ್ನು ನಾಶ ಮಾಡಬಹುದಾಗಿತ್ತು ಎಂದಿದ್ದನಂತೆ. ಅವನಾಡಿದ ಅಂದಿನ ಆ ಮಾತಿನಿಂದಲೇ ತಿಳಿಯುತ್ತದೆ ನಮ್ಮ ಭಾರತೀಯರು ಎಷ್ಟು ಪರಾಕ್ರಮಿಗಳು ಜೊತೆಗೆ ಎಷ್ಟು ಮುಗ್ಧರು ಎಂದು. ನಮ್ಮ ಅಂದಿನ ಮುಗ್ಧತೆಯನ್ನು ಬ್ರಿಟೀಷರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು 18ನೇ ಶತಮಾನದ ಮಧ್ಯಭಾಗದಲ್ಲಿ ಸಮೃದ್ಧ ದೇಶವೆಂದು ಖ್ಯಾತಿ ಪಡೆದಿದ್ದ ಭಾರತವನ್ನು 19ನೇಯ ಶತಮಾನದ ಕೊನೆಯ ವೇಳೆಗೆ ಜಗತ್ತಿನ ಅತ್ಯಂತ ಧೀನ ಧರಿದ್ರ ದೇಶ ಎಂಬ ಸ್ಧಿತಿಗೆ ತಂದರು. ಆದರೆ ಭಾರತ ಎಂದೂ ತನ್ನ ಅಸ್ಧಿತ್ವವಾಗಲಿ, ಹಿರಿಮೆಯಾಗಲಿ, ತನ್ನತನವನ್ನಾಗಲಿ ಕಳೆದುಕೊಳ್ಳಲಿಲ್ಲ. ಅದು ಕಣ್ರೀ ನಮ್ಮ ಭಾರತದ ಅಂತಸ್ತು.
   ಆಗತಾನೆ ಇಂಗ್ಲೆಂಡಿನಲ್ಲಿ ನಡೆದ ಔಧ್ಯಮಿಕ ಕ್ರಾಂತಿಯು ಭಾರತಕ್ಕೆ ‘ಹಳ್ಳಕ್ಕೆ ಬಿದ್ದವನ ಮೇಲೆ ಬಂಡೆ ಎಳೆದಂತೆ’ ಮಾಡಿತ್ತು. ಇದರ ಸರಿದೂಗುವಿಕೆಗೆ ಭಾರತದ ಪಾತ್ರ ಎಷ್ಟು ಆಳವಾಗಿತ್ತೆಂದು ಆಲೋಚಿಸಿದರೆ ತಲೆ ಕೆಡುತ್ತದೆ. ಯಾಕೆಂದರೆ ನಮ್ಮಲ್ಲಿಯ ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪಾರ ಇಂಗ್ಲೆಂಡಿಗೆ ಹಣದ ಹೊಳೆ ಹರಿಸಿ ಬೃಹತ್ ಉದ್ಯಮಗಳು ತಲೆ ಎತ್ತಲು ಅಗತ್ಯವಾದ ಬಂಡವಾಳವನ್ನು ಓದಗಿಸಿತ್ತು. ಹತ್ತಿ ಉದ್ಯಮ, ಸಣ್ಣ ಕೈಗಾರಿಕೆಯ ಇತರ ಉದ್ಯಮ ಇತ್ಯಾದಿಗಳಿಂದಲೇ ಇಂಗ್ಲೆಂಡಿಗೆ ದುಡ್ಡಿನ ಸುರಿಮಳೆಗಳೇ ಬರುತ್ತಿದ್ದವು ಹೊರತು, ಅವರು ಮಾಡಿದ ಕ್ರಾಂತಿಯಿಂದಲ್ಲ ಅದು ನಮ್ಮ ಭಾರತದ ಕೌಶಲ್ಯತೆ.
   ಅದು 1919 ಏಪ್ರಿಲ್ 11. ಆ ಸಂಧರ್ಭ ಡಯರ್ ಎಂಬ ಸೇನಾಧಿಕಾರಿಯನ್ನು ಭಾರತಕ್ಕೆ ಕರೆಸಿ ಮಾರ್ಷಲ್ ಲಾ ಜಾರಿ ಮಾಡಲಾಗಿತ್ತು. ಏಪ್ರಿಲ್ 13 ರಂದು ಜಲಿಯನ್ ವಾಲಾಬಾಗ್‍ನಲ್ಲಿ ಒಂದು ಜಾತ್ರೆಗಾಗಿ ಜನ ಕೂಡಿದ್ದರು. ಬಹುತೇಕ ಜನ ಹಳ್ಳಿಗರಾಗಿದ್ದು, ಅವರಿಗೆ ಬ್ರಟಿಷ್ ನಾಯಿಗಳ ಪ್ರತಿ ಬಂಧಕ ವಿಚಾರವೇ ತಿಳಿದಿರಲಿಲ್ಲ. ಆ ಮೈದಾನಕ್ಕೆ ಸುತ್ತಲೂ ಗೋಡೆ ಇದ್ದು ಒಂದೇ ಒಂದು ಧ್ವಾರ ಇತ್ತು. ಡಯರ್ ತಾನೇ ಮುಂದೆ ನಿಂತು ನಿಶ್ಯಸ್ತ್ರ ಗುಂಪಿನ ಮೇಲೆ ಯಾವ ಮುನ್ನಚ್ಚರಿಕೆಯನ್ನು ನೀಡದೆ ಗುಂಡಿನ ಮಳೆಗೆರೆದಿದ್ದ. ಆ ದಿನ ಅಲ್ಲಿ ಸತ್ತವರ ಸಂಖ್ಯೆ 379 ಎಂದು ಸರ್ಕಾರವೇ ತಿಳಿಸಿತ್ತು. ಇದಾದ ಬಳಿಕ ಮಾತನಾಡಿದ್ದ ಡಯರ್ ಈ ಅಮಾನುಷ ಕೃತ್ಯಕ್ಕೆ ಗುಂಡುಗಳು ಸಾಲದಾದವು, ಗಲ್ಲಿಗಳು ಕಿರಿದಾದವು, ಕಾರಣ ಅರ್ಮರ್ಡ ಕಾರುಗಳನ್ನು ತರಲಾಗಲಿಲ್ಲವೆಂದು ವಿಷಾದ ವ್ಯಕ್ತಪಡಿಸಿದ್ದ. ಇದರಿಂದಲೇ ತಿಳಿಯುತ್ತದೆ ನಿಶ್ಯಸ್ತ್ರಧಾರಿಗಳಾದ ನಮ್ಮನ್ನು ಕೊಲ್ಲಲು ಅವನಿಗೆ ಅಷ್ಟು ಗಂಡುಗಳು ಸಾಲಲಿಲ್ಲ. ಇನ್ನು ನಾವು ಅವರಂತೆ ಶಸ್ತ್ರಧಾರಿಗಳಾಗಿದ್ದರೆ ನಮ್ಮ ಮೈಯನ್ನೇ ಅವರಿಗೆ ಮುಟ್ಟಲಾಗುತ್ತಿರಲಿಲ್ಲವೇನೋ ಅಲ್ಲವೇ...
      17 ಮತ್ತು 18ನೇಯ ಶತಮಾನಗಳಲ್ಲಿ ಭಾರತ ಸಂಪದ್ಭರಿತ ದೇಶವಾಗಿತ್ತು ಎಂದು ಹೇಳಿದರೆ ಅದನ್ನು ನಂಬುವುದು ಕಷ್ಟ ಆದರೂ ಈ ಮಾತು ಅಕ್ಷರಶಃ ನಿಜ ಈ ಅಭಿಪ್ರಾಯವನ್ನು ಸ್ಫಷ್ಟ ಪಡಿಸಲು ಎರಡು ಮೂರು ಉಲ್ಲೇಖಗಳಿವೆ ನನ್ನ ಬಳಿ. ಹೇಳ್ತೀನಿ. ಓದಿದ ನಂತರ ನಮ್ಮ ದೇಶಕ್ಕೆ ಯಾವ ದೇಶವೂ ಸಾಟಿ ಆಗಲಾರದು  ಬಿಡಿ ಎಂದು ನಿಮಗೆ ಅನಿಸಬಹುದು. ಇಲ್ಲಿನ ಅಂಕಿ ಅಂಶಗಳನ್ನು ಗಮನಿಸಿದರೆ ಆಗಲೇ ಅಷ್ಟಿದ್ದ ಶ್ರೀಮಂತಿಕೆ ಇಂದಿದ್ದರೆ ಎಷ್ಟು ಕೋಟಿ ಆಗುತ್ತಿತ್ತೋ ಎಂದು ನಿಬ್ಬೆರಗಾಗಬಹುದು.
ಪಿಯರ್ ಸೆನ್ ಎಂಬಾತ 1572ರಲ್ಲಿ ಭಾರತದ ಸಮುದ್ರ ವ್ಯಾಪಾರ 8 ಕೋಟಿ ರೂಪಾಯಿಗಳಷ್ಟು ಎಂದು ಅಂದಾಜು ಮಾಡಿ ಹೇಳಿದ್ದ. (ಗಮನಿಸಬೇಕು ನೀವು ಇದು ಸಾವಿರ ಅಲ್ಲ ಲಕ್ಷ ಅಲ್ಲ ಬದಲಾಗಿ ಕೋಟಿ)
ಬ್ರಿಟೀಷರು ಭಾರತಕ್ಕೆ ಬರುವ ಮುಂಚಿನ ಮಾತು ಇದು 1601 ರಿಂದ 1623ರವರೆಗೆ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ತಂದ ವಸ್ತುಗಳಲ್ಲಿ ಶೇ 68.2 ಪಾಲು ಚಿನ್ನ ಬೆಳ್ಳಿ ಯಾಗಿತ್ತಂತೆ.
ಆಗ ಭಾರತಕ್ಕೆ ವಿನಿಮಯವಾಗಿ ಕಳುಹಿಸಲು ಯೋಗ್ಯವಾದ ವಸ್ತುಗಳು ಬ್ರಿಟನ್‍ನಲ್ಲಿ ತಾಯಾರಾಗುತ್ತಿರಲಿಲ್ಲ ಹಾಕ್ಸಿನ್ ಎಂಬಾತ ಎಲ್ಲ ರಾಷ್ಟ್ರಗಳು ಇಲ್ಲಿಗೆ ನಾಣ್ಯ (ಚಿನ್ನ,ಬೆಳ್ಳಿ) ತಂದು ಸರಕುಗಳನ್ನು ಒಯ್ಯುತ್ತವÉ. ಎಂದು ತನ್ನ ಪ್ರವಾಸ ಕಥನದಲ್ಲಿ ತಿಳಿಸಿದ್ದಾನೆ.
ಈಸ್ಟ್ ಇಂಡಿಯಾ ಕಂಪೆನಿ ತನ್ನ ವ್ಯಾಪಾರ ಕುದುರಿಸಿಕೊಂಡ ನಂತರವೂ 1710-1759 ರ ಅರ್ಧ ಶತಮಾನದ ಅವಧಿಯಲ್ಲಿ ಇಂಗ್ಲೆಂಡು ಪೂರ್ವ ದೇಶಗಳೊಂದಿಗೆ ಮಾಡಿದ ರಪ್ತು ವ್ಯಾಪಾರದ ಒಟ್ಟು 3 ಕೋಟಿ 60 ಲಕ್ಷ ಪೌಂಡು ಆಗಿತ್ತಂತೆ.  ಅವುಗಳಲ್ಲಿ 92 ಲಕ್ಷ ಮಾತ್ರ ಸರಕು ರೂಪದಲ್ಲಿ ಉಳಿದ 2 ಕೋಟಿ 68 ಲಕ್ಷ ಚಿನ್ನ, ಬೆಳ್ಳಿ, ರೂಪದಲ್ಲಿ ಇದ್ದವಂತೆ.

ನೋಡಿ ನಾವೆಷ್ಟು ಶ್ರೀಮಂತರಲ್ವಾ...ಎಂಥಹ ಅರ್ಥವ್ಯವಸ್ಥೆ ನಮ್ಮದಲ್ವಾ...!!!
  ಈ ಅಂಕಿ ಸಂಖ್ಯೆಗಳ ಅರ್ಥ ಇಷ್ಟು. ಭಾರತ 18ನೇಯ ಶತಮಾನದ ನಡು ಭಾಗದವರೆಗೆ ಸಿದ್ಧ ವಸ್ತುಗಳನ್ನು ರಫ್ತು ಮಾಡಿ ಸಂಪತ್ತನ್ನು ಗಳಿಸುತ್ತಿತ್ತು. ಹಲವಾರು ಆಕ್ರಮಣಗಳು, ಯುದ್ಧಗಳು ನಡೆಯುತ್ತಿದ್ದ ಆ ಕಾಲದಲ್ಲಿಯೂ ಸುಭದ್ರವಾಗಿದ್ದ ನಮ್ಮ ಅರ್ಥವ್ಯವಸ್ಥೆ ಸುಮಾರು 10 ಕೋಟಿಯಷ್ಟಿದ್ದ ಅಂದಿನ ಜನ ಸಂಖ್ಯೆಯ ಅಗತ್ಯಗಳನ್ನು ಪೂರೈಸಿ, ದೇಶದ ಒಳ ಮಾರುಕಟ್ಟೆಗೆ, ಬೆಳೆಯುತ್ತಿದ್ದ ವಿದೇಶಿ ಮಾರುಕಟ್ಟೆಗೆ , ಮೊಘಲ್ ಸಾಮ್ರಾಜ್ಯದ ಸೈನ್ಯಕ್ಕೆ ಹಾಗೂ  ಬೃಹತ್ ಸಾರ್ವಜನಿಕ ಕಟ್ಟಡ ಮತ್ತಿತರ ನಿರ್ಮಾಣ ಕಾರ್ಯಗಳಿಗೆ  ವಿವಿಧ ಸಿದ್ಧವಸ್ತುಗಳನ್ನು ಒದಗಿಸುತ್ತಿದ್ದು ಅಂತಹ ಅರ್ಥ ವ್ಯವಸ್ಥೆಯನ್ನು ನಿರ್ಬಲವಾಗಿತ್ತೆಂದೋ ಶಿಥಿಲವಾಗಿತ್ತೆಂದೋ ಹೆಸರಿಸುವುದು ಅಪಚಾರವೇವಾಗುತ್ತದೆ ಅಲ್ವಾ!?
  ಈ ಅರ್ಥ ವ್ಯವಸ್ಥೆಯ ಪ್ರಮುಖ ಲಕ್ಷಣಗಳನ್ನು ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳುವುದು ಅಗತ್ಯ. ಆದರೆ ಇಲ್ಲಿ ನಾ ಹೇಳಿರುವುದು ಅತ್ಯಂತ ಸ್ಥೂಲ ರೂಪ. ದೂರದಿಂದ ಬೆಟ್ಟ ತೋರಿಸಿದ ಹಾಗೆ. ಈ ವಿಷಯಗಳನ್ನು ಬಹಳ ಕೂಲಂಕುಶವಾಗಿ ವಿವರಿಸಲು ವಿಧ್ವಾಂಸರೇ ಹಿಂಜರಿಯುತ್ತಿದ್ದಾರೆ ಅಂದರೆ ಅವರಿಗೂ ನಮ್ಮ ಭಾರತದ ಸಂಪತ್ತನ್ನು ಅರಿಯಲು ಇಂದಿಗೂ ಕಷ್ಟ ಸಾಧ್ಯವಾಗಿದೆ.
  ಇದು ನಮ್ಮ ಭಾರತ ಬಹಳ ಪುರಾತನ ಕಾಲದಿಂದ ಪರಕೀಯ ದಾಳಿ ಆಕ್ರಮಣಗಳನ್ನು ಎದುರಿಸಿದ ದೇಶ. ಆದರೆ ಅಮೇರಿಕಾದ ಮೆಕ್ಸಿಕೋ, ಪೆರುಗಳಂತೆ ತಳ್ಳಿದರೆ ಬೀಳುವಂತಹ ದುಃಸ್ಥಿತಿಯಲ್ಲಿರಲಿಲ್ಲ 8-10 ಶತಮಾನಗಳ ಕಾಲ ಅರಬರ, ತುರ್ಕರ, ಅಫ್ಘ್‍ನ್ನರ ದಾಳಿಗಳನ್ನು ಅನುಭವಿಸಿ ಒಂದೊಂದರ ಪರಿಣಾಮವಾಗಿಯನ್ನು ಒಂದೊಂದು ಹೊಸ ಸಮತೋಲನವನ್ನು ಸಾಧಿಸಿಕೊಂಡ ಹೆಮ್ಮೆ ಇದ್ದರೆ ಅದು ನಮ್ಮ ಭಾರತದ್ದು ಮಾತ್ರಾ.
ಹೀಗೆ ಒಂದೊಂದು ವಿಷಯ ವೈವಿಧ್ಯವನ್ನು ಹೋಲಿಸುತ್ತಾ ವಿಮರ್ಶಿಸುತ್ತಾ ಸಾಗಿದರೆ ನಂಬಲಾರದ ಅದೆಷ್ಟೋ ಸತ್ಯಗಳು ಕಣ್ಮುಂದೆ ಮತ್ತೊಂದು ಇತಿಹಾಸ ಸೃಷ್ಟಿಸುತ್ತಾ ಸಾಗುತ್ತವೆ. ಈಗ ಹೇಳಿ ನಾವು ಪುಣ್ಯಾತ್ಮರಲ್ಲವೇ. ಮತ್ತೆ ಎಲ್ಲರಿಗೂ ಎದೆತಟ್ಟಿ ಕೂಗಿ ಹೇಳಿ ಇದು “ನಮ್ಮ ಭಾರತ”...

ಅತ್ತೆ ಸೊಸೆ...ಕಿರಿಕ್...


          ಮನಸ್ತಾಪ, ಜಗಳ, ವೈಮನಸ್ಸು ಇದು ಮಹಿಳೆಯರ ಸಹಜ ದೌರ್ಬಲ್ಯ...ಅವರ ಕಷ್ಟ ಕಾರ್ಪಣ್ಯ ಎಷ್ಟಿದ್ದರೂ, ಒಳಗೊಳಗೆ ಪ್ರಾರಂಭವಾಗುವ ಮುನಿಸು, ಜಲಸು, ಬೇರೆಯದನ್ನು ತನ್ನದಾಗಿಸಿಕೊಳ್ಳಲು ನಡೆಸುವ ಹೋರಾಟ ಎಲ್ಲವೂ ರೌದ್ರಾವತಾರದಂತೆ ಹೊಡೆದಾಡುತ್ತಲೇ ಇರುತ್ತವೆ.ಇನ್ನೂ ಇಬ್ಬರು ಹೆಂಗಸರ ಕಚ್ಚಾಟ ಪ್ರಾರಂಭವಾದರಂತೂ ಸಾಮಾಜಿಕವಾಗಿ ಪಸರಿಸದಿದ್ದರೆ ಅವರಿಗೆ ಸಮಾಧಾನ ಇರಲ್ಲ ಬಿಡಿ. ಇಲ್ಲಿ ಬರುವ ಎರಡು ಪಾತ್ರಗಳು ಹೆಣ್ಣೆ ಆದರೂ ಭಾವಗಳು ಬೇರೆ, ಅದೇ ಅವರ ಜಿದ್ದಿಗೆ ಹೆಚ್ಚು ಕಾರಣವಾದರೂ ಅರಿತು ಬಾಳಲು ಆಗುವುದಿಲ್ಲ ಎಂದರ್ಥವಲ್ಲ. ಬರವಣಿಗೆಗೂ ಮುನ್ನ ಈ ಪೀಠಿಕೆ ಯಾಕೆಂದರೆ  ಇದು ಸಾಮಾನ್ಯ ವಿಷಯವಲ್ಲ ಏರಡು ಹೆಂಗಳೆಯರ ಮಧ್ಯೆ ಕಂಡು ಬರುವ, ಪರಸ್ಫರ ಅಧಿಕಾರದಿಂದಲೋ, ಸ್ಥಾನ ಮಾನದ ಘನತೆಯಿಂದಲೋ  ಕೂಡಿರುವ ವಾದ ವಿವಾದ ಅದುವೇ ಅತ್ತೆ ಸೊಸೆಯರ ವಿಕಾರ ನಾದ...
          ಅತ್ತೆ ಸೊಸೆ ಕಾನ್ಸೆಪ್ಟ್ ತಲೆಗೆ ಮೂಡಿದಾಗಲೇ ನಮಗೆ ತೋಚುವುದೇ ದಿನಂಪ್ರತಿ ಕಾಣುತ್ತಿರುವ ಜಗಳದ ಅವರಿಬ್ಬರ ಜಲಕು. ಈ ಅತ್ತೆ ಸೊಸೆ ಜಗಳ ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ  ಇತ್ತು ಇಂದು ಇದೆ. ಆದರೆ ಅದು ಮುಂದೆ ಪ್ರವೃತ್ತಿ ಆಗುವುದು ಬೇಡ ಎನ್ನುವ ನಿಟ್ಟಿಲ್ಲಿ ಈ ಬರಹ ಅಷ್ಟೆ.

           ಒಂದು ಕಡೆ ಮನೋವೈಧ್ಯರು ಹೇಳುತ್ತಾರೆ ಅತ್ತೆ ಸೊಸೆಯ ಜಗಳಕ್ಕೆ ಮುಖ್ಯ ಕಾರಣ ಅವರ ಪರಸ್ಫರ ಧನಾತ್ಮಕ ನಿರೀಕ್ಷೆಗಳೇ ಕಾರಣವಂತೆ. ಆದರೆ ಕೆಲವೊಮ್ಮೆ ಅಧಿಕಾರ, ನಾನು ನನ್ನದು ಎನ್ನುವ ಭಾವೈಕ್ಯವೂ ಬರಬಹುದೇನೋ ಹೇಳಲಾಗದು. ನಾವೆಲ್ಲ ಸಮಾಜದಲ್ಲಿ ಮಹಿಳೆ ನಿರ್ಲಕ್ಷ್ಯಕ್ಕೊಳಪಟ್ಟಿದ್ದರೂ, ಆಕೆಯನ್ನು ದೇವತೆಯ ಸ್ಥಾನದಲ್ಲಿಯೇ ನೋಡುತ್ತೇವೆ., ಭೂಮಿಯನ್ನು ನೀರನ್ನು ಕೂಡ ಸ್ತ್ರೀ ರೂಪಿಯಾಗಿ, ಅಮ್ಮನ ಪಾತ್ರದಲ್ಲಿ ದೇವತೆಯಾಗಿ ಕಾಣುತ್ತೇವೆ. ಇಷ್ಟೆಲ್ಲಾ ಆದರೂ ಹೆಣ್ಣನ್ನೂ ಹೆಣ್ಣೆ ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.ಇನ್ನೂ ಗಹನವಾಗಿ ಆಲೋಚನೆಗೆ ಕುಳಿತರೆ, ಬಲಗಾಲಿಟ್ಟು ಬಂದ ಸೊಸೆಗೆ ಅತ್ತೆ ರಾಕ್ಷಸಿಯಂತೆ ಕಾಣುವುದ್ಯಾಕೆ?, ಸಂಧರ್ಭಕ್ಕೆ ತಕ್ಕಂತೆ ಸೊಸೆಯ ಪಾಲಿಗೆ ಅತ್ತೆ ಯಾಕೆ ತಾಯಿಯಾಗುತ್ತಿಲ್ಲ?, ಅತ್ತೆಯ ಬುದ್ಧಿ ಮಾತುಗಳ್ಯಾಕೆ ಸೊಸೆಗೆ ತಾಯಿಯ ಬುದ್ಧಿ ಮಾತುಗಳಾಗುತ್ತಿಲ್ಲ?, ಗಂಡನ ಮನೆಗೆ ಬಂದಾಗ  ಅತ್ತೆಯೂ ತನ್ನ ತಾಯಿಯಂತೆ ಎಂದು ಯಾಕೆ ಅಂದುಕೊಳ್ಳುವುದಿಲ್ಲ?, ಮಗನನ್ನು ಕಂಡುಕೊಂಡ ಪ್ರೀತಿಯಲ್ಲಿಯೇ ಅತ್ತೆ ಯಾಕೆ ಸೊಸೆಯನ್ನು ಕಾಣುವುದಿಲ್ಲ?, ಸಂಧರ್ಭದ ಆಧಾರದಲ್ಲಿ  ನಮ್ಮ ಮನಸ್ಥಿತಿಗಳು ಬದಲಾಗುತ್ತವೆಯಾ?, ತಾಯಿ ಮನೆ ಸ್ವರ್ಗ, ಅತ್ತೆ ಮನೆ ನರಕ ಎನ್ನೋ ಮನೋಕ್ಲಿಷೆ ಸರ್ವವ್ಯಾಪಿಯಾಗಿ ಬಿಟ್ಟಿದೆಯಾ?, ಅತ್ತೆ ಸೊಸೆಯರ ಸಂಬಂಧ ವ್ಯತಿರಿಕ್ತವಾಗೋದ್ಯಾಕೆ?, ಅತ್ತೆ ಸೊಸೆಯನ್ನು ಮಗಳಂತೆ, ಸೊಸೆ ಅತ್ತೆಯನ್ನು ಅಮ್ಮನಂತೆ ಯಾಕೆ ನೋಡಿಕೊಳ್ಳಬಾರದು!? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ. ಬಹುಶಃ ಕವಿ ಜಿ.ಎಸ್. ಶಿವರುದ್ರಪ್ಪ ಬಹಳ ಹಿಂದೆಯೇ “ಸ್ತ್ರೀ ಎಂದರೆ ಅಷ್ಟೇ ಸಾಕೆ ..!?” ಎಂಬ ಪ್ರಶ್ನೆ ಮಾಡಿದ್ದು ಇದಕ್ಕೆ ಎನಿಸುತ್ತದೆ.
          ದಿನಂಪ್ರತಿ ಎನ್ನದೇ ಅತ್ತೆ ಸೊಸೆಯರ ಬಗೆಗಿನ ಸುದ್ಧಿಗಳಂತೂ ಕಿವಿಗೆ ಬೀಳುತ್ತಲೇ ಇರುತ್ತವೆ. ಅತ್ತೆಯ ಕಾಟಕ್ಕೆ ನೇಣು ಬಿದಿದುಕೊಂಡ ಸೊಸೆ, ವರದಕ್ಷಿಣೆಗಾಗಿ ಅತ್ತೆಯಿಂದ ಹಿಂಸೆ, ಮಾವ ಹಾಗೂ ಅತ್ತೆಯ ಮೇಲೆ ಕೇಸ್ ದಾಖಲಿಸಿದ ಸೊಸೆ... ಹೀಗೆ ಒಂದರ ಮೇಲೊಂದರಂತೆ ದಿನಂಪ್ರತಿ ಘಟನೆಗಳು ಘಟಿಸುತ್ತಲೇ ಇವೆ.  ಆದರೆ ಯಾರೊಬ್ಬರು ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೇ, ಬಗೆ ಹರಿಸಿಕೊಳ್ಳದೇ, ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದನ್ನು ಚಿಂತಿಸುತ್ತಿಲ್ಲದಿರುವುದೇ ಸಮಸ್ಯೆಯ ಜ್ವಾಲಕ್ಕೆ ಇನ್ನಷ್ಟು ತುಪ್ಪ ಎರೆದಂತಾಗಿದೆ. ಇನ್ನೂ ಮಾಧ್ಯಮಗಳಂತೂ ಏಕಾಏಕಿ ಸಂಧರ್ಭದ ಲಾಭ ಪಡೆದು ಸುಮ್ಮನಾಗುತ್ತಿವೆ. ಎಂಟರ್ ಟೈನ್ ಮೆಂಟ್ ಹೆಸರಿನಲ್ಲಿ ಮನೆಮಂದಿಗೆ ಜಗಳಗಳನ್ನು ತಂದಿಕ್ಕಿ ರಂಪಾಟ ಮಾಡುತ್ತಾ ಬೇಳೆ ಬೇಯಿಸಿಕೊಳ್ಳುತ್ತಿವೆ. ಬೇಸರದ ಸಂಗತಿ ಎಂದರೆ ಪೋಸಿಟಿವ್ ವಿಷಯ ನೀಡಿ ಇಂತಹ ಕೌಟಂಬಿಕ ವಿಚಾರಗಳನ್ನು ತಿಳಿ ಹೇಳಲು ಯಾವ ಮಾಧ್ಯಮವೂ ಪುಷ್ಟಿ ನೀಡುತ್ತಿಲ್ಲ...
 ಇದು ಕೇವಲ ಒಂದೆರಡು ಮನೆಗಳ ಸಮಸ್ಯೆಯಲ್ಲ. ಪ್ರಪಂಚದ ಮುಕ್ಕಾಲು ಭಾಗ ಸಂಸಾರಗಳಲ್ಲಿ ಅತ್ತೆ ಸೊಸೆ ವೈಮನಸ್ಸು ಇದ್ದದ್ದೆ. ಅತ್ತೆ  ಒಳ್ಳೆಯವಳಾದರೆ ಸೊಸೆ ಕೆಟ್ಟವಳು. ಅತ್ತೆ ತಾಟಕಿಯಾದರೆ ಸೊಸೆಗೆ ಗೋಳು. ಇವರ ಮಧ್ಯೆ ಸಾಮರಸ್ಯವೇ ಸಾಧ್ಯವಿಲ್ಲವಾ ಎನ್ನುವುದು ವಿದ್ವಾಂಸರ ಮುಂದಿರುವ ಯಕ್ಷ ಪ್ರಶ್ನೆ.
ಮಗನಿಗೆ ಹೆಂಡತಿ ಬರುತ್ತಾಳೆ ಎಂದರೆ ಅತ್ತೆ ಸ್ಥಾನಕ್ಕೇರುವ ಆ ಮನೆಯ ಸೊಸೆಯ ಮನಸ್ಸಿನಲ್ಲೊಂದು ಸಣ್ಣ ಏರುಪೇರು ಉಂಟಾಗುತ್ತದೆ.  ಸೊಸೆ ತನ್ನ ಮಗನನ್ನು ತನ್ನಿಂದ ಕಸಿದುಕೊಂಡು  ಬಿಡುತ್ತಾಳೇನೋ ಎನ್ನುವ ಆತಂಕ ಪ್ರತಿಯೊಂದು ಅಮ್ಮನಲ್ಲೂ ಇರುತ್ತೆ. ಇದು ಹೆತ್ತವಳ ಪ್ರೀತಿಯ ಚಡಪಡಿಕೆ ಅಷ್ಟೆ. ಮದುವೆಯ ನಂತರ ಮಗ ಪತ್ನಿಯನ್ನು ಕರೆದಾಗ ತಾಯಿ ಸಣ್ಣದೊಂದು ಶಾಕ್ ಅನುಭವಿಸುತ್ತಾಳೆ.   ಜತನದಿಂದ ಸಾಕಿದ ಮಗನನ್ನು ಸೊಸೆ ಬಂದು ಕೈವಶ ಮಾಡಿಕೊಂಡಳೆಂಬ ಭಾವನೆ ಅತ್ತೆಗೆ. ಮಗ ವಯಸ್ಸಿಗೆ ಬಂದಿದ್ದಾನೆ ಈಗವನಿಗೆ ಹೆಂಡತಿ ಪ್ರೀತಿಯೂ ಅಷ್ಟೆ ಮುಖ್ಯ ಎಂದಾಲೋಚಿಸಿದರೆ ಏನಾಗುತ್ತದೆ!?? ಇನ್ನೂ ಏನಾದರೂ ಮಗ ಅಮ್ಮನ ಮಾತೇ ಸರಿ ಎಂದು ಪುಸಲಾಯಿಸಿದರೆ  ಸೊಸೆಗೆ ಮಗನನ್ನು ತನ್ನ ಕೈಮುಷ್ಠಿಯಲ್ಲೇ ಇರಿಸಿಕೊಂಡು ಆಡಿಸುತ್ತಿದ್ದಾಳೆ ಎನ್ನೋ ಭಾವನೆ ಅದನ್ನೆ ಯಾಕೆ ಸೊಸೆಯಾದವಳು ದೊಡ್ಡದು ಎಂದು ಗೊಗೆರೆದುಕೊಳ್ಳಬೇಕು. ಎಲ್ಲವೂ ಸ್ವಲ್ಪ ಸಮಯ ಕೊಟ್ಟು ಆಲೋಚಿಸಿದರೆ ಯಾವುದು ಸಮಸ್ಯೆ ಅಥವಾ ತಪ್ಪು ಅನ್ನಿಸುವುದಿಲ್ಲ.. ಇದು ಜಗಳವಲ್ಲ, ಮನಸು ಮನಸುಗಳ ಹೊಡೆದಾಟ.  ನಮ್ಮ ಎದುರಾಗುವ ಎಲ್ಲಾ ಪೂರ್ವಾಗ್ರಹಗಳಿಂದ ಹೊರಬಂದು ನೋಡಿದಾಗ ಅತ್ತೆ ಮಾತ್ರಾ ಕೆಟ್ಟವಳು ಅಂತ ಎಲ್ಲಿಯೂ ಹೇಳಲಾಗದು. ಎಷ್ಟೋ ಬಾರಿ ಅತ್ತೆ ಹೊಂದಿಕೊಂಡರೂ, ಸೊಸೆ ಅತ್ತೆಯನ್ನು ನಿರ್ಲಕ್ಷ್ಯದಿಂದ ನೋಡುತ್ತಾಳೆ. ಮನೆಕೆಲಸ ಮಗುವಿನ ಆರೈಕೆ ಎಲ್ಲವನ್ನೂ ಅತ್ತೆಗೊಪ್ಪಿಸಿ, ತಾವು ಮಾತ್ರಾ ಕ್ಲಬ್, ಪಬ್ ಎನ್ನುತ್ತಾ ಕಾಲ ಕಳೆಯುವ ಸೊಸೆಯಂದಿರೂ ಇದ್ದಾರೆ.
              ಅವಳು ಸರಿ ಇಲ್ಲ. ಇವಳಿಗೆ ಅಹಂಕಾರ ಅಂತೆಲ್ಲ ಪರಸ್ಫರ ಆರೋಪ ಮಾಡಿಕೊಳ್ಳುವುದಕ್ಕಿಂತ ಸಾಮರಸ್ಯದ ಬದುಕು ನಡೆಸಬೇಕು. ಇದೇನೂ ಕಷ್ಟದ ಕೆಲಸವಲ್ಲ. ಪರಸ್ಫರ ಗೌರವ, ಪ್ರೀತಿ ಇದ್ದರೆ ಅತ್ತೆ ಸೊಸೆ ತಾಯಿ- ಮಗಳಂತಿರಬಹುದು. ಅತ್ತೆಯಾದವಳು ತನ್ನ ಹಿರಿತನದಿಂದ ಸೊಸೆಯನ್ನು ವಾತ್ಸಲ್ಯದಿಂದ ಮಗನ ಜವಾಬ್ಧಾರಿ ಅವಳಿಗೊಪ್ಪಿಸಿದರೆ ಸೊಸೆಯೂ ಅತ್ತೆಯನ್ನು ಪ್ರೀತಿಯಿಂದ ಕಾಣುತ್ತಾಳೆ. ಹಿರಿಯರನ್ನು ಗೌರವದಿಂದ ಕಂಡು ಅವರನ್ನು ಪ್ರೀತಿಯಿಂದಾಗಿ ನೋಡಿಕೊಂಡು ಸೊಸೆಗೂ ಗಂಡನ ಪ್ರೀತಿ ಹಿರಿಯರ ವಾತ್ಸಲ್ಯ ದೊರಕುತ್ತದೆ. ಎಲ್ಲ ಸಂಸ್ಕಾರವಂತರೊಳಗೂ ಜಗಳವನ್ನು ನಿಯಂತ್ರಿಸುವ ಶಮನಗೊಳಿಸುವ, ಹತ್ತಿಕ್ಕುವ, ನಂದಿಸುವ ಒಂದು ಅದ್ಭುತ ಇನ್ ಬ್ಯುಲ್ಟ್ ಸಿಸ್ಟಮ್ ರಚನೆ ಇರುತ್ತದೆ. ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿಕೊಳ್ಳಬೇಕಷ್ಟೆ. ನಾವು ನಮ್ಮೊಳಗೆ ವಿಕಾರತೆಯ ಅನಾವರಣ ಮಾಡಿಕೊಂಡು ಅಪ್ರಬುದ್ದ ಮನಸ್ಸಿನ ಬಡಬಡಿಕೆಯ ತಾಂಡವವನ್ನು ಪ್ರದರ್ಶಿಸುತ್ತಾ ಇರುತ್ತೇವೆಯೋ ಹೊರತು ಸಂಸಾರ ದೋಣಿ ಬಳುಕುವ ನೃತ್ಯ ನಿಲ್ಲಿಸಿಕೊಂಡು ಸರಿದೂಗಿಸಿಕೊಳ್ಳುವುದಿಲ್ಲ. ಸೊಸೆಯಂದಿರೆ ನಿವೇಕೆ ಅತ್ತೆಯನು ಕೆಟ್ಟವಳಂತೆ ಕಾಣುತ್ತೀರಿ. ಅತ್ತೆ ಯಾವಾಗಲೂ ಸೊಸೆಯಿಂದ ನಿರೀಕ್ಷಿಸುವುದು, ನಯವಾದ ಮಾತು, ಉತ್ತಮ ನಡತೆ, ಗುಣ, ಆಡಮಬರವಿಲ್ಲದ ಸೌಂದರ್ಯಪ್ರಜ್ಞೆ, ಮನೆಯವರನ್ನೆಲ್ಲಾ ಪ್ರೀತಿಯಿಂದ ಓಲೈಸುವ ಮನೊಭಾವ ಅಷ್ಟೆ. ಮಗ ಪ್ರತಿ ದಿನ ಆಫೀಸ್‍ಗೆ ಹೋಗುವಾಗ ಅಮ್ಮ ಟಿಫಿನ್ ರೆಡಿ ಮಾಡಿ ಕೊಡುವುದು ಹೊಸತೇನಲ್ಲ ಆದರೆಸೊಸೆ ಬಂದ ಮೇಲೆ ಇದು ಬದಲಾಗಬೇಕು ಅತ್ತೇ ನಾನೀದಿನಲ್ಲಾ ಇನ್ನೂ ನೀವ್ಯಾಕೆ ಇದನ್ನೆಲ್ಲಾ ಮಾಡ್ಬೇಕು. ಅನ್ನುವ ಸೊಸೆಯ ಪ್ರೀತಿ ತುಂಬಿದ ಮಾತು ಬದುಕೆಂಬ ಕ್ರಿಕೆಟ್ ಜಗತ್ತಿನಲ್ಲಿ ಕ್ರಿಕೆಟ್ ಖಾತೆ ತೆರೆದಂತೆ. ಅಲ್ಲಿ ಅತ್ತೆ ನಿಮ್ಮೆದುರು ಏನೇ ಗೊಣಗಿದರೂ ಮರೆಯಲ್ಲಿ ನಿಂತು ಆನಂದದ ಕಣ್ಣೀರು ಸುರಿಸುತ್ತಾಳೆ. ಹೆಣ್ಮಕ್ಕಳೆ ಒಂದು ನೆನಪಿಟ್ಟುಕೊಳ್ಳಿ ಇಂದು ನೀವು ಸೊಸೆಯಾಗಿ ಮನೆ ಬೆಳಗಿದರೆ ನಾಳೆ ನಿಮಗೆ ಸಿಗುವ ಸೊಸೆ ಮುತ್ತಿನಂತವಳಾಗಿರುತ್ತಾಳೆ.



"ಅತ್ತೆ ಸೊಸೆ ಜಗಳವೆಂಬುದು ಅನಾಧಿಕಾಲದಿಂದಲೂ ಇದೆ. ಅದೊಂಥರ ಇನ್‍ಬಾರ್ನ್ ಸಿಸ್ಟಮ್. ಅತ್ತೆಯಾದವಳು ಅವಳ ಅತ್ತೆಯಿಂದ ಅನುಭವ ಪಡೆದಿರುತ್ತಾಳೆ ಅದನ್ನು ಅವಳು ತನ್ನ ಸೊಸೆ ಮೇಲೆ ತೀರಿಸಿಕೊಳ್ಳುತ್ತಾಳೆ. ಆದರೆ ಸೊಸೆಯಂದಿರು ಅತ್ತೆ ಮೇಲೆ ಹರಿಹಾಯಲು ಕಾರಣ ತಾನು ಸ್ವತಂತ್ರ ವಾಗಿರಲು ಭಯಸುವುದೇ ಆಗಿರುತ್ತದೆ. ಇದನ್ನು ಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಆದರೆ ಇಂತಹ ದೌರ್ಜನ್ಯ ಕಂಡುಬಂದಾಗ ‘ಕೌಟುಂಬಿಕ ದೌರ್ಜನ್ಯ ಕಾಯ್ದೆ’ಯಡಿ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ದೂರು ನೀಡಬಹುದಾಗಿದೆ."
-ಪ್ರಮೀಳಾ ನೇಸರ್ಗಿ.
ವಕೀಲರು, ಶಿಕ್ಷಣ ತಜ್ಞರು, ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ.

ಹೆಣ್ಣು-8


        ಈ ಸ್ಟೋರಿ ಪ್ರಾರಂಭವಾಗುವುದಕ್ಕೆ ಮುಂಚೆ ಅವಳೊಬ್ಬಳು ಪಾಪದ ಹುಡುಗಿ. ಸುಂದರ ಕನಸುಗಳನ್ನು ಹೊತ್ತ ಸುಂದರಿ. ಅವಳಿಗಿತ್ತು ಅವಳದೇ ಕೆಲವೊಂದು ರೀತಿ-ನೀತಿ, ನಲಿವಿನ ಪರಿಚಯ ಮಾತ್ರವೇ ಇತ್ತು.  ಆ ಬಾಲೆಗೆ ಮುಂದೊಂದು ದಿನ ಬದುಕೆಂಬ ದೋಣಿ ಬಿರುಗಾಳಿಗೆ ಸಿಲುಕಿ ಮುಳುಗಿ ಹೋಗುತ್ತದೆಯೇನೊ ಎಂಬ ಪರಿವೆಯೇ ಇರಲಿಲ್ಲ. ಟೋಟಲ್ ಆಗಿ ಅವಳೊಬ್ಬಳು ಮುಗ್ಧೆ ಎಂದರೆ ತಪ್ಪಿಲ್ಲ.
ತಂದೆ ತಾಯಿಯರಿಗೆ ಕಷ್ಟವಿದ್ದರೂ ಮಗಳಿಗೆ ಅದರ ಗುರುತು ನೀಡಿರಲಿಲ್ಲ. ಬೇಕೆಂದಿದ್ದನೆಲ್ಲಾ ಕೊಡಿಸಿ ಶ್ರೀಮಂತಿಕೆಯ ರಕ್ಷಾ ಕವಚ ಪರಿಚಯಿಸಿದ್ದರು. ಆಗಲೇ ಲೈಫ್ ಈಸ್ ಬ್ಯೂಟಿಫುಲ್ ಎನ್ನುತ್ತಾ ಮೆಲ್ಲನೆ ಎಸ್.ಎಸ್.ಎಲ್.ಸಿ ಮುಗಿಸುತ್ತಾ ಪಿ.ಯು.ಸಿ ಗೆ ಕಾಲಿರಿಸಿದ್ದಳು ಆಕೆ. ಈಗವಳು ಹರೆಯಕ್ಕೆ ಕಾಲಿಟ್ಟ ಚೆಲುವೆ. ಅದೊಂದು ರೀತಿಯ ಹೊಸ ಬಗೆ, ನವನವೀನ ಹುರುಪು, ಚಲ್ಲಾಟಕ್ಕೆ ಬ್ರೇಕ್ ಕೊಟ್ಟು ಸ್ವಲ್ಪ ಗಂಭೀರಕ್ಕೆ ತಿರುಗುವ ಜೋಷ್, ಬೇಡವೆಂದರೂ ಕನ್ನಡಿಯ ಮುಂದೆ ನಿಲ್ಲಿಸಿ ಮೇಕಪ್ ಮಾಡುವ ವಯಸ್ಸು. ಅದಾಗಲೇ ಹಳೆಯ ಗೆಳತಿಯರ ಜೊತೆಗೆ ಒಂದಿಷ್ಟು ಹೊಸ ಗೆಳತಿಯರು ದೊರಕಿರುವ ಖುಷಿ. ಹೀಗೆ ಎಲ್ಲವೂ ಭಿನ್ನ ಭಿನ್ನವಾಗಿದ್ದವು. ಪುಟ್ಟ ಹಳ್ಳಿಯಲ್ಲಿ ಬೆಳೆದು ಓದಿರುವ ಅವಳು ಆ ಹೊತ್ತಿಗಾಗಲೇ ಬಸ್ಸ್‍ನಲ್ಲಿ ಪಟ್ಟಣದ ಕಾಲೇಜಿಗೆ ಹೋಗಿ ಬರುತ್ತಿದ್ದಳು. ನಮ್ಮ ಹಾಗೆ ನಮ್ಮ ಮಗಳು ಆಗಬಾರದು, ಆಧುನಿಕತೆ ಅವಳಿಗೂ ಒಗ್ಗಲಿ ಎಂದೆನಿಸಿಕೊಂಡು ಮೂಲಭೂತ ಸೌಕರ್ಯ ಎಂಬಂತೆ ಒಂದೊಳ್ಳೆ ಮೊಬೈಲ್‍ನ್ನು ತೆಗೆಸಿಕೊಟ್ಟರು ತಂದೆ ತಾಯಿ.
‘ಮನೆಗೆ ಬರುವುದು ಲೇಟಾದರೆ, ಬಸ್ಸ್ ಮಿಸ್ ಆದರೆ, ಕಾಲ್ ಮಾಡಿ ತಿಳಿಸು ಮಗಳೆ’ ಎಂದು ಮುದ್ದಿಸಿ ಇನ್ನು ಸ್ವಲ್ಪ ಜಾಸ್ತಿ ಶ್ರೀಮಂತಿಕೆ ನೀಡಿ ಸಂಧರ್ಭಗಳ ಸವಿಯನ್ನು ಸವಿದಿದ್ದರು.
ಪ್ರಾರಂಭದಲ್ಲಿ ಎಲ್ಲ್ಲವೂ ನೀಟಾಗಿಯೇ ಇತ್ತು. ಸಂಬಂಧಿಕರು ಗೆಳತಿಯರು ಎಂದು ಕಾಂಟಾಕ್ಟ್ ಸೇವ್ ಆಗುತ್ತಿದ್ದ ಮೊಬೈಲ್‍ಗೆ ಮಸೇಜ್, ಕಾಲ್‍ಗಳು ಮಾಮುಲಿಯಾಗಿ ಬಂದು ಹೋಗುತ್ತಿದ್ದವು. ಇದೆಲ್ಲದರ ಮಧ್ಯೆ ಒಂದು ದಿನ ಅಚಾನಕವಾಗಿ ಬಂದ ಮಿಸ್‍ಕಾಲ್ ಅವಳ ಮೊಬೈಲ್  ಪರದೆಗೆ ಅಪ್ಪಳಿಸಿತ್ತು. ಅಂದಿನ ಆ ಮಿಸ್ಸ್ ಕಾಲ್‍ಗೆ ಶುರುವಾದ ಕ್ಯೂರ್ಯಾಸಿಟಿ ಯಾವಾಗ ಆಕೆ ಪದೆ ಪದೇ ಮೊಬೈಲ್ ನೋಡುವಂತೆ ಮಾಡಿತ್ತೋ, ಅಲ್ಲಿಂದಲೇ ಬದಲಾವಣೆಯ ಗಾಳಿ ಬೀಸಿತ್ತು ನೋಡಿ. ಅದೊಂದು ಕಳ್ಳಾಟಿಕೆ ತನ್ನ ಲೈಫ್‍ನ್ನೇ ಮುಂದೊಂದು ದಿನ ಮಿಸ್ ಮಾಡುತ್ತೆ ಎಂದು, ತಿಳಿದಿರಲಿಲ್ಲ ಆಕೆಗೆ. ಆನಾಮಿಕನಂತೆ ಮಿಸ್ ಕಾಲ್‍ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಇವಳಿಗೆ ದಿನ ಕಳೆದಂತೆ ಅವನ ವನಪು, ವಯ್ಯಾರವನ್ನು ಮೆಸೇಜ್ ಎಂಬ ಮಾಯೆಯಲ್ಲಿ ಕಳುಹಿಸುತ್ತಾ, ತನ್ನೆಡಗೆ ಸೆಳೆದು, ಬಗೆಬಗೆಯ ಆಸೆ ಹುಟ್ಟಿಸುತ್ತಾ ಮೊದಲು ಮೀಟಿಂಗ್ ಮಾಡೋಣ ಎಂದು ಕಾಲ್ ಮಾಡುವ ಸಾಹಸಕ್ಕೆ ಕೈ ಹಾಕಿ, ನಂತರ ಡೇಟಿಂಗ್‍ವರೆಗೂ ಕರೆದು ಮುಂದೇನು ಎಂಬುವಷ್ಟರಲ್ಲಿ ಜೇನು ರಸವನ್ನು ಹೀರಿ ಗೂಡು ಬಿಟ್ಟು ಪರಾರಿ ಎಂಬಂತೆ ಮಾಯವಾಗಿದ್ದ. ಜೊತೆಗೆ ತನ್ನ ಲೀಲೆಯ ಮಹಿಮೆಯನ್ನು ಸೋಷಿಯಲ್ ಆಗೂ ತಿಳಿಯುವಂತೆ ಮಾಡಿ ಪರಾರಿಯಾಗಿದ್ದ. ಮನೆಗೆ ದೀಪವಾಗಿದ್ದ ಅವಳ ಬೆಳಕು ಆ ಕ್ಷಣದಿಂದಲೇ ಬಿರುಗಾಲಿಗೆ ಸಿಲುಕಿ ನಂದಿ ಹೋಗುವ ಹಣಾಹಣಿಯಲ್ಲಿ ಸಾಗಿತ್ತು.  ವಿಷಯ ತಿಳಿದ ಅಪ್ಪ ಅಮ್ಮನ ಪ್ರೀತಿ ಅಷ್ಟಕಷ್ಟೆ ಆಗಿತ್ತು. ಕಾಲೇಜುಗಳಲ್ಲಿಯೂ ಎಲ್ಲರದೂ ಇವಳ ಜೊತೆ ನೀರವ ಮೌನ. ಸೆಳೆದು ಅಬ್ಬರಿಸುತ್ತಿದ್ದ ಅವಳ ಅಂದಕ್ಕೆ ನೋಡುವವರೆ ಗತಿ ಇರಲಿಲ್ಲ. ಅವಳಿಗೆ ಇದೀಗ ಎಲ್ಲವೂ ಸಾಕಾಗಿದೆ. ಅಂದು ಅವನ ಒಂದು ಮೆಸ್ಸೇಜ್‍ಗೆ ತಡಬಡಿಸಿ ಕಾಯುತ್ತಿದ್ದವಳು ಇಂದು ಅವನನ್ನು ನೆನೆಸಿದರೆ ಮೈಪರಚಿದಂತೆ ಪರಿತಪ್ಪಿಸುತ್ತಿದ್ದಳು. ಜೀವನವೇ ಬೇಡ ಎನಿಸಿ ಕೊನೆಗೂ ತೀರ್ಮಾನಿಸಿಯೇ ಬಿಟ್ಟಿದ್ದಳು. ಕಣ್ಣು ಮುಚ್ಚಿ ತೆರೆಯುವುದರೊಳಗೆ ಪರಲೋಕ ಸೇರಿದ್ದಳು.
ಈ ನೋವಿನ ಘಟನೆ ನಾ ಕಂಡ ನಿಜವೇ ಆದರೂ ಇದು ಒಂದು ಹುಡುಗಿಯ ಜೀವನದ ಗಾಥೆಯಲ್ಲ. ಅದೆಷ್ಟೋ ಹೆಣ್ಣು ಮಕ್ಕಳು ಅನುಭವಿಸಿರುವ ಘಟನೆ. ನಾನು ಹೇಳುವುದು ಇಷ್ಟೇ, ಹರೆಯದ ಹುಡುಗಿಯರೇ ಯಾವುದೂ ಎಷ್ಟೂ ಬೇಕೋ ಅಷ್ಟೇ ಇರಲಿ ಅತಿಯಾದರೆ ಅಮೃತವು ವಿಷ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಒಂದಿಷ್ಟು ಜನ ಬಣ್ಣ ಹಚ್ಚುವುದರಲ್ಲೆ ಬೇರೆಯವರ ಜೀವನದ ಓಕುಳಿಯನ್ನು ಆಡುತ್ತಿರುತ್ತಾರೆ, ಆಡಿರುತ್ತಾರೆ. ಕೆಲವೊಂದು ವರ್ಗ ಅದಕ್ಕಾಗಿ ನೆಲೆನಿಂತುಕೊಂಡು ಅಂದದ ಹುಡುಗಿಯರು, ಅಮಾಯಕ ಮಹಿಳೆಯರ ಜೊತೆ ಆಟವಾಡಿ ಮಜಾ ತೆಗೆದುಕೊಂಡು ಸಂಸ್ಕøತಿಯ ರೂಪು ರೇಷೆಯನ್ನು ಹಾಳುಗೆಡವುತ್ತಿದೆ. ಹೆಣ್ಣನ್ನು ಭೋಗಕ್ಕೆಂದೆ ಉಪಯೋಗಿಸುವ ಸಾಮಾಜಕ್ಕೆ ಸೋಷಿಯಲ್ ಮೀಡಿಯಾಗಳು ಪುಷ್ಟಿಕೊಟ್ಟು ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ಮೊಬೈಲ್ ಫೋನ್ ಗಳನ್ನು ಬಳಸಿ ಆದರೆ ಬಳಕೆಯಲ್ಲಿ ಮಿತಿಯಿದ್ದು, ಎಲ್ಲವೂ ನಿಜವೆಂದು ನಂಬದೆ, ಗುರುತು ಪರಿಚಯವಿಲ್ಲದವರ ಬಳಿ ಕಾಂಟ್ಯಾಕ್ಟ್ ಬಳಸುವ ವೇಳೆ ಜಾಗೃತೆ ವಹಿಸಿ, ಹೆತ್ತವರೇ,,, ಮಕ್ಕಳ ನಡೆ ನುಡಿಯಲಿ ನೀವೂ ಎಚ್ಚರವಹಿಸಿ  ಯಾಕೆಂದರೆ ನಿಮ್ಮ ಮಕ್ಕಳಿಗೆ ಏನೇ ಆದರೂ ಹೊಣೆಗಾರರು ನೀವೆ ಎಚ್ಚರವಿರಲಿ ...

Friday, 10 July 2015

ಹೆಣ್ಮಕ್ಕಳೇ ನೀವೆಷ್ಟು ಸೇಫ್...!? (ಬೈಂದೂರು ಬಲಿಯ ಸುತ್ತ...)


ಕಾಮಾಂಧನ ಕುರುಡು ಕಾಮಕ್ಕೆ ಬಲಿಯಾದ ಅಕ್ಷತಾ...
ಮತ್ತೆ ಕರಾವಳಿಯಲ್ಲಿ ಕೊಲೆಯ ತಾಪ
ಕಾಮದ ಹಪಾಹಪಿಯ ನಡುವೆ ಕಣ್ಮುಚ್ಚಿದ ಅಕ್ಷತಾ...
ಕರಾವಳಿ ಜನರಲ್ಲಿ ಮಡುಗಟ್ಟಿದ ಕರಿಛಾಯೆಯ ಕಾರ್ಮೋಡ…

         ಗೋವಾ ಮತ್ತು ಕೇರಳಗಳ ನಡುವೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿಶಾಲ ಪ್ರದೇಶಕ್ಕೆ ಹಬ್ಬಿ ನಿಸರ್ಗ ಸೌಂದರ್ಯವನ್ನು ಉಣಿಸುತ್ತಿರುವ, ಸಮುದ್ರಕ್ಕೆ ತಾಗಿಕೊಂಡಿರುವುದೇ ಕರ್ನಾಟಕದ ಕರಾವಳಿ ಭೂಪ್ರದೇಶ. ಉಪ್ಪು ಸಿಹಿ ನೀರಿನ ಹವೆ, ಮಳೆ, ಉತ್ತಮ ಆರೋಗ್ಯದ ಜೊತೆಗೆ ದಷ್ಟ-ಪುಷ್ಟತೆಯನ್ನು, ಮೇಧಾವಿ ಚುರುಕು ಬುದ್ಧಿಯನ್ನು, ಮತ್ತು ಕಷ್ಟ ಸಹಿಸುವುದನ್ನು ಮೈಗೂಡಿಸಿಕೊಂಡ ಸ್ಥರಯುತ ಬಾಹುಳ್ಯ ಹೊಂದಿರುವವರು ಅಲ್ಲಿನ ಜನತೆ. ಕಲೆ, ಯಕ್ಷಗಾನ, ವಿದ್ಯಾಭ್ಯಾಸ, ಆರೋಗ್ಯ, ಶಿಸ್ತಿನ ಜೀವನಕ್ಕೆ ಹೆಸರು ಮಾಡಿದ್ದು, ಹೆಚ್ಚು ಅಂಕ ಪಡೆಯುವ ಜಿಲ್ಲೆ ಎಂದು ಬಿರುದನ್ನು ಪಡೆದಿದ್ದು, ವಾಯುಮಾರ್ಗ, ಜಲಮಾರ್ಗ, ರಸ್ತೆ, ರೈಲ್ವೆ ಮಾರ್ಗದಲ್ಲೂ ಉನ್ನತ ಸ್ಥರದಲ್ಲಿದ್ದು, ನೀರಿರಲಿ, ಬಿಸಿಲಿರಲಿ, ಕಾಡಿರಲಿ ಯಾವುದಕ್ಕೂ ಭಯ ಪಡಲಾರೆವು ಎನ್ನುತ್ತಿದ್ದ ಜನ ಇದೀಗ ಕೊಲೆ, ಹತ್ಯೆಯೆಂಬ ಹೆಸರಿಗೆ ನಿಜಕ್ಕೂ ಬೆಚ್ಚಿ ಬೀಳುತ್ತಿರುವುದು ಎಲ್ಲರಲ್ಲೂ ಭಯತರಿಸುತ್ತಿದೆ. ಅದರಲ್ಲೂ ಹರೆಯದ ಯುವತಿಯರ ನಿಗೂಢ ಸಾವುಗಳು ಮನೆಯ ಮನೆಯಲ್ಲೂ ಮಾನಸಿಕ ವಿಕ್ಷಿಪ್ತತೆಯೊಂದಿಗೆ ಭಯ ಹುಟ್ಟಿಸುತ್ತಿದೆ.
ಅರೇ ಇದೇನಿದು ಕೇಳ್ತೀರಾ..! ಹೌದು ಕಳೆದ  ಎರಡು ಮೂರು ವರ್ಷಗಳಿಂದ ಕರಾವಳಿಯಲ್ಲಿ ಕೊಲೆಯ ಕೂಗು ಕೇಳುತ್ತಿದೆ, ಉಗ್ರರ ತಾಂಡವತೆ, ರೋಲ್ ಕಾಲ್, ಸೆಕ್ಸ್ ದಂಧೆ , ರಾಜಕಾರಣಿ ಪುಡಾರಿಗಳ ರಕ್ತಚರಿತ್ರೆ, ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಕುಖ್ಯಾತಿಯಾಗುತ್ತಿದೆ. ಒಂದು ಕಡೆ ಅಲ್ಪ ಸಂಖ್ಯಾತರನ್ನು ಪ್ರತ್ಯೇಕಿಸುತ್ತಿರುವುದು ಇನ್ನೊಂದು ಕಡೆ ದುಡಿಯುವ ದಲಿತ ಶೂದ್ರ ಸಮುದಾಯವನ್ನು ದಾರಿ ತಪ್ಪಿಸುತ್ತಿರುವುದು  ಅಷ್ಟೇ ಅಲ್ಲದೇ ದೈವ ಭಕ್ತಿಯ ಆಡಂಬರದ ಅಗ್ಗದ ಪ್ರದರ್ಶನ ಹೆಚ್ಚುತ್ತಿರುವುದನ್ನು ನೋಡಿದರೆ ಮನುಷ್ಯನ ಜೀವನ ಇಲ್ಲಿ ಅಗ್ಗವಾಗಿದೆಯೇನೋ ಅನ್ನಿಸುತ್ತಿದೆ. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ ಕ್ರಿಮಿನಲ್ ಚಟುವಟಿಕೆಗಳಿಗೆ ಧರ್ಮವನ್ನು ರಕ್ಷಾಕವಚವನ್ನಾಗಿ ಬಳಸುತ್ತಿರುವುದು ಹಲವಾರು ಕಡೆ ನಡೆಯುತ್ತಲೇ ಇದೆ.
    ಇವೆಲ್ಲವುಗಳ ಸಂಗಮ ಇಂದು ಕರಾವಳಿಯ ಜನತೆಯಲ್ಲಿ ನಿದ್ರೆಗೆಟ್ಟಿಸಿಬಿಟ್ಟಿದೆ. ಒಂದಕ್ಕೊಂದು ಸಂಭಂಧವೇನೋ ಎಂಬಂತೆ ಇದೀಗ ಮಕ್ಕಳ ರಕ್ತದಲ್ಲೂ ಉಗ್ರತೆಯ ಕಂಪು ಮೂಡುತ್ತಿದ್ದು ಇದರ ಬಗ್ಗೆ ಗಮನವಹಿಸದಿದ್ದರೆ ಮುಂದೊಂದು ದಿನ  ಪ್ರತಿಷ್ಠಿತ ಕರಾವಳಿ ದಂಡು ಪಾಳ್ಯವೋ, ಕಾಬುಲ್‍ನ ಬುಡಕಟ್ಟು ಪ್ರದೇಶದಂತೋ ಆಗುವುದಂತು ನಿಜ.
  ಬಹುತೇಕ ಕಾಡುಗಳೇ ಇರುವ ಕರಾವಳಿಯ ಹಳ್ಳಿಗಳಲ್ಲಿ ಇದೀಗ ಹೆಣ್ಣು ಮಕ್ಕಳ ಕಣ್ಮರೆ, ನಿಗೂಢ ಸಾವುಗಳು ನಡೆಯುತ್ತಿವೆ. ಅಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಗಿಂತ ಮೊದಲು ಅದೆಷ್ಟು ಹೆಣ್ಮಕ್ಕಳು ಹೆಸರಿಗಿಲ್ಲ ಎಂಬಂತೆ ಮಾಯವಾದರೋ ಗೊತ್ತಿಲ್ಲ. ಬಹುಶಃ ಇದು ಪೋಲೀಸ್ ಪುಸ್ತಕದಲ್ಲಿಯೂ ಎಂಟ್ರಿಯಾಗಿತ್ತೋ ಇಲ್ವೋ ಬಲ್ಲವರಿಲ್ಲ. ಆದರೆ ಮೂರ್ನಾಲ್ಕು ವರ್ಷದಿಂದ ಈಚೆಗೆ ನಾಲ್ಕೈದು ಹೆಣ್ಮಕ್ಕಳ ಶವ ನಿಬಿಡ ಪ್ರದೇಶದಲ್ಲಿ ದೊರಕಿದರೂ, ಹೇಗಾಯಿತು? ಯಾಕಾಯಿತು? ಯಾರು ಇದನ್ನು ಮಾಡಿರಬಹುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ದೊರಕದೆ, ರಸವತ್ತಾಗಿ ಎಲ್ಲವೂ ಕಳಚಿಕೊಂಡಿದ್ದು ನಿಮಗೂ ಗೊತ್ತಿರಬಹುದು. ಮೊನ್ನೆ ಮೊನ್ನೆ ಬೈಂದೂರಿನ ಕಾಡಿನಲ್ಲಿ ಅನಾಥವಾಗಿ ದೊರೆತ ಕಾಲೇಜು ಬಾಲೆ ಅಕ್ಷತಾ ಎನ್ನುವವಳ ಶವ, ಹಳೆಯ ಪ್ರಕರಣಗಳು ಮಾಸುವ ಮೊದಲೇ ಹೊಸ ಆಕೃಂಧನಕ್ಕೆ ನಾಂಧಿಯಾಯಿತು. ಈ ಹಿಂದೆ ನಡೆದ ಸೌಜನ್ಯ, ನಂದಿತಾ, ರತ್ನಾ ಕೊಠಾರಿಯ ಅನುಮಾನಾಸ್ಫದ ಸಾವುಗಳಿಗೆ  ಜನ ಹೋರಾಡಿ ಹೋರಾಡಿ ಸೋತು ಸುಣ್ಣವಾಗಿ ಹೋಗಿದ್ದರೂ, “ಇದು ಯುದ್ಧ ಕಣ್ರೀ ಎದುರಿಸಿ ಬಿಡೋಣ” ಎಂಬ ಕೂಗಿನೊಂದಿಗೆ ಶವ ಸಿಕ್ಕಿದ ಕ್ಷಣದಿಂದಲೇ ಪ್ರತಿಭಟನೆಯನ್ನು ಕೈಗೆತ್ತಿಕೊಂಡರು ನೋಡಿ!!!, ಆಗಲೇ ಪೋಲೀಸ್ ಮಹಾಶಯರಿಗೆ ಒತ್ತಡದ ಕಾವು ನಿದ್ದೆಗೆಡಿಸುವಂತೆ ಮಾಡಿ ಆರೋಪಿಗಳನ್ನು ಹಿಡಿಯಲೇಬೇಕು ಎಂಬ ಛಲ ಮೂಡಿ ಬಂತು. ಕುಂದಾಪುರ ತಾಲೋಕಿನ ಬೈಂದೂರಿನ ಎಲ್ಲಾ ಗ್ರಾಮಸ್ಥರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಸಹಕಾರ ಹಾಗೂ ಒತ್ತಡದೊಂದಿಗೆ  ಅಂತು ಕೊಲೆಗಡುಕ ಸಿಕ್ಕಿಯೇಬಿದ್ದ ಅವನೇ ಕಾಮಪಿಶಾಚಿ 19ರ ಹರೆಯದ ಸುನೀಲ್..





ಸುನೀಲ್ ಏನು ರೇಪ್ ಆ್ಯಂಡ್ ಮರ್ಡರ್ ಮಾಡೋಷ್ಟು ಬೆಳೆದವನಲ್ಲ. ಆದರೆ ಆತನ ಕಾಮದ ಕೀಳು, ಚುಡಾಯಿಸುವ ಪುಂಡಾಟಿಕೆ ಅಮಾಯಕ ಹೆಣ್ಣೋಬ್ಬಳ ಜೀವವನ್ನೇ ಬಲಿ ಪಡೆದದ್ದು ದುರಾದೃಷ್ಟ. ಬೈಂದೂರಿನ ಒತ್ತಿನಣೆಯ ಸಮೀಪದಲ್ಲಿರುವ ಹನ್ನಬೇರು ಎಂಬ ಪುಟ್ಟ ಊರಿನ ಪ್ರತಿಭಾನ್ವಿತ ಹುಡುಗಿ ಅಕ್ಷತಾ. ಮನೆಯಲ್ಲಿ ಬಡತನವಿದ್ದರೂ ಓದಿಗೆ ಅದು ಅಡ್ಡಿಯಲ್ಲ ಎಂದು ತೋರಿಸಿದ ಮುಗ್ಧೆ ಅವಳು. ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲ ಶೇ.93 ಅಂಕ ಪಡೆದು ಕರ್ನಾಟಕ ರಾಜ್ಯದಲ್ಲೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನೀಯರಲ್ಲಿ ಅತೀ ಹೆಚ್ಚು ಅಂಕ ಪಡೆದ ಕೀರ್ತಿಗೆ ಭಾಜನಳಾಗಿ ಹಲವು ಕಡೆ ಸನ್ಮಾನಗಳನ್ನು ಗಿಟ್ಟಿಸಿಕೊಂಡಿದ್ದಳು. ಸದ್ಯ ಬೈಂದೂರಿನ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಓದುತ್ತಿದ್ದ ಆಕೆಯ ಮೇಲೆ ಅದಾಗಲೇ ಕಿಡಿಗೇಡಿ ಸುನೀಲನ ಕಣ್ಣು ಬಿದ್ದಿತ್ತು. ಆ ದಿನ ಅಂದರೆ ಜೂನ್ 17ರಂದು ಕಾಲೇಜಿಗೆ ಹೋಗಿದ್ದ ಅಕ್ಷತಾ ಸಮಯ 6 ಆದರೂ ಮನೆಗೆ ಬರದಿದ್ದದ್ದು ಮನೆಯವರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಅದಾದ  ನಂತರ ಹುಡುಕಾಟವನ್ನು ಪ್ರಾರಂಭಿಸಿದ ಮನೆಯವರಿಗೆ ದೊರಕಿದ್ದು ದಾರಿಮಧ್ಯೆ ಪೊದೆಯ ಸಮೀಪ ಅಂಗಾತ ಮಲಗಿರುವ ಆಕೆಯ  ಶವ. ದಟ್ಟ ಕಲ್ಲು ಬಂಡೆಯ ನಡುವೆ ಹಾದು ಹೋಗಿ ಮನೆ ಸೇರಬೇಕಾದ ಹುಡುಗಿ ಸ್ಮಶಾನದ ಕದ ತಟ್ಟಿದ್ದಳು.
ಕಾಮಾಂಧ ಸುನೀಲ್, ಈಗಷ್ಟೇ ಐ.ಟಿ.ಐ ಓದುತ್ತಿರುವ ವಿದ್ಯಾರ್ಥಿಯಾಗಿದ್ದು, ಹುಡುಗಿಯರಿಗೆ ಚುಡಾಯಿಸುವುದು, ಗಾಂಜಾ, ಸಿಗರೇಟ್, ಸೇರಿದಂತೆ ಅನೇಕ ಚಟಗಳಿಗೂ ದಾಸನಾಗಿದ್ದ ಅಸಾಮಿಯೆಂದರೆ ನಂಬುತ್ತೀರಾ!?. ಎಸ್... ನಂಬಲೇಬೇಕು...  ಹೌದು!.., ಆ ದಿನ ಅಕ್ಷತಾಳ ಬರಿವಿಕೆಗೆ ಹೊಂಚು ಹಾಕಿ ಕಾಯುತ್ತಿದ್ದ, ದುರ್ಗಮ ದಾರಿಯಲ್ಲಿ ಅವಳು ಆಗಮಿಸಿದಾಗ  ಅಡ್ಡ ನಿಂತು ದುರ್ವರ್ತನೆ ತೋರಿದ್ದ. ಅದಕ್ಕವಳು ಹೆದರಿ ಓಡಲಾರಂಭಿಸಿದ್ದೆ ತಡ ಆಕೆಯ ದುಪ್ಪಟ್ಟವನ್ನು ಜಗ್ಗಿ  ಮುಗ್ಧೆಯನ್ನು ಕಡೆವಿದ್ದ. ಕೂಗಿದಾಗ, ಅದರಿಂದಲೇ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿದ್ದಾನೆ. ಅರೆಉಸಿರಿನಿಂದ ಒದ್ದಾಡುತ್ತಿರುವ  ಅಕ್ಷತಾಳನ್ನು ಪಕ್ಕದಲ್ಲೇ ಇರುವ ಅಕೇಶಿಯಾ ಗಿಡಗಳತ್ತ ಎಳೆದುತಂದು ಮಲಗಿಸಿ, ಅವಳ ಮೈ ಮೇಲೆ ಮಲಗಿ, ಲೈಂಗಿಕ ಪೀಡನೆ ನಡೆಸಿ ಮತ್ತೊಮ್ಮೆ ತನ್ನ ವಾಮನಾವತಾರವನ್ನು ತೋರಿದ್ದಾನೆ. ಅದಾಗಲೇ ಅವಳು ಪೂರ್ತಿ ಜೀವ ಕಳೆದು ಇಹಲೋಕವನ್ನು ತ್ಯಜಿಸಿದ್ದಳು. ಇದನ್ನು ಗಮನಿಸಿದ ಸುನೀಲ್ ಭಯಗೊಂಡು ಆಕೆಯ ಬ್ಯಾಗ್ ಮತ್ತು ಕೊಡೆಯನ್ನು ಪಕ್ಕದಲ್ಲಿ ಇಟ್ಟು ಪರಾರಿಯಾಗಿದ್ದಾನೆ.
ಆನಂತರದಲ್ಲೇ ನೋಡಿ, ಕಳ್ಳನ ಮನಸ್ಸು ಹುಳ್ಳಗೆ ಎನ್ನುವಂತೆ, ಪೊಲೀಸರಿಗೆ ಸುಳಿವು ಸಿಗಬಾರದೆಂದು ತಲೆ ಕೂದಲನ್ನು ಕ್ಷೌರ ಮಾಡಿಸಿಕೊಂಡು ರೂಪ ಬದಲಾವಣೆಯ ಚರ್ಯೆಗೆ ನಿಂತು ಬಿಟ್ಟ ಸುನೀಲಕಾಮಿ. ಈ ನಡುವೆ ಮಾತನಾಡುತ್ತಾ ತನ್ನ ಚಿಕ್ಕಮ್ಮನ ಮಗ ಅಕ್ಷಯನಿಗೂ ವಿಷಯ ಹಂಚಿ, ಮತ್ಯಾರಿಗೂ ಹೇಳಬೇಡ ಪೊಲೀಸರ ಮುಂದೆಯೂ ಬಾಯಿ ಬಿಡದಿರು ಎಂದು ಸಲಹೆ ನೀಡಿದ್ದ. ಅಷ್ಟೇನೂ ಖಚಿತ ಮಾಹಿತಿ ಇಲ್ಲದಿದ್ರೂ ಅನುಮಾನಾಸ್ಫದವಾದ ಸುಮಾರು 150 ರಿಂದ 200 ಮಂದಿಯನ್ನು ವಿಚಾರಿಸಿದ ಉಡುಪಿ ಎಸ್ಫಿ ಅಣ್ಣಾಮಲೈ ಹಾಗೂ ಅವರ ತಂಡ ಅಂತಿಮವಾಗಿ ಸುನೀಲ್ ಮತ್ತು ಅಕ್ಷಯನನ್ನು ಪೋಲೀಸ್ ಗಾಡಿಗೆ ಹತ್ತಿಸಿದ್ದರು. ಸ್ಟೇಷನ್‍ನಲ್ಲಿ ಒಟ್ಟಿಗೆ ವಿಚಾರಿಸಿದಾಗ ಬಾಯಿ ಬಿಡದ ಇಬ್ಬರೂ ಕದೀಮರು ಒಬ್ಬೊಬ್ಬರನ್ನೇ ವಿಚಾರಿಸಿ ಬೆಂಡೆತ್ತಿದಾಗ, ಅಕ್ಷಯ ನಿಜವನ್ನು ಅರುಹಿದ್ದ. ಅಲ್ಲಿಗೆ ಕೇವಲ ಎರಡೇ ದಿನದಲ್ಲಿ ಇದು ಸಹಜವಾದ ಸಾವಲ್ಲ ‘ರೇಪ್ ಆ್ಯಟಂಪ್ಟ್ ಆ್ಯಂಡ್ ಮರ್ಡರ್’ ಎಂಬ ಸುದ್ಧಿ ಹೊರಬಿತ್ತು. ಇದೀಗ ಸುಳ್ಳು ಮಾಹಿತಿ ಕೊಟ್ಟು ಪೊಲೀಸರ ದಾರಿ ತಪ್ಪಿಸಿದ ನಿಟ್ಟಿನಲ್ಲಿ ಅಕ್ಷಯ ಹಾಗೂ ಕೊಲೆಯ ಪ್ರಮುಖ ವ್ಯಕ್ತಿ ಸುನೀಲ್ ಇಬ್ಬರೂ ಪೊಲೀಸ್ ತೆಕ್ಕೆಯಲ್ಲಿ ಕೋಳನ್ನು ತೊಟ್ಟಿದ್ದಾರೆ.
ಕೊಲೆಯೇನೋ ನಡೆದು ಹೋಯ್ತು, ಆರೋಪಿಗಳು ಸೆರೆ ಸಿಕ್ಕರು ಆದರೆ ಕರಾವಳಿಯ ಜನರಲ್ಲಿ ಮಡುಗಟ್ಟಿದ ಕರಿಛಾಯೆಯ ಕಾರ್ಮೋಡ ಇನ್ನೂ ಇಳಿದಿಲ್ಲ. ಈ ಹಿಂದೆ ನಡೆದ ಕೊಲೆಗಳಿಗೂ ಉತ್ತರ ಹುಡುಕಲು ಇದೀಗ ಅಲ್ಲಿನ ಜನತೆ ಮುಂದಾಗಿದ್ದಾರೆ. ಇದೇನೋ ಬಹಳ ಬೇಗ ಬೇಗ ತಪಾಸಣೆ, ವಿಚಾರಣೆ ನಡೆಯಿತು ಇದರಂತೆ ಹಿಂದಿನ ಕೊಲೆಗಳಿಗೂ ಉತ್ತರಿಸಿ ಎನ್ನುವುದು ತಾಲೋಕಿನ ಜನರ ಆಶಯ. ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಕ್ಷೇತ್ರದಲ್ಲಿ ಭಟ್ಟಂಗಿತನ ಮತ್ತು ಸ್ವಹಿತಾಸಕ್ತಿ ನಡೆಸುತ್ತಿದ್ದು, ಪ್ರಜಾಪ್ರಭುತ್ವವನ್ನು ಹೊಸುಕಿಹಾಕಿ ಜನರಿಗೆ ನ್ಯಾಯ ದೊರೆಯದಂತೆ ಮಾಡುತ್ತಿವೆ, ಇಲ್ಲಿನ ಅನೇಕ ಅಕ್ರಮಗಳಿಗೆ ರಾಜಕೀಯ ಹಾಗೂ ಪ್ರಭಾವಿ ವ್ಯಕ್ತಗಳೇ ಕಾರಣ ಎನ್ನುತ್ತಾರೆ ಅಲ್ಲಿನ ಜನ.
ನಿಜ! ಈ ಜಗತ್ತನ್ನು ಬೇರೆ ಬೇರೆ ಸ್ವರೂಪದ ಅನಿಷ್ಟಗಳು ಕಾಡುತ್ತಿವೆ. ಯರ್ರಾ ಬಿರ್ರಿಯಾಗಿ ಆಳುತ್ತಿವೆ. ಅಕ್ಷತಾಳ ಕೊಲೆಯ ರಹಸ್ಯವನ್ನೇನೋ ಬೇಧಿಸಿದ್ದೇವೆ ಆದರೆ ಇಂತಹ ಘಟನೆಗಳು ಮಾನವ ಲೋಕವನ್ನೇ ತಲ್ಲಣಿಸುವ ಹಾಗೂ ಅಮಾನವೀಯವನ್ನು ಅಕ್ರಮ ಸಮಾಜದೆಡೆ ಕೊಂಡು ಹೋಗುವ ಲಕ್ಷಣಗಳಾಗಿದ್ದು ಈಗಲೇ ಇದನ್ನು ತಡೆಯದಿದ್ದರೆ ಮುಂದೆ ನಮ್ಮ ಕಣ್ಮುಂದೆ ನಮ್ಮ ಮಕ್ಕಳು ಸತ್ತು ಹೆಣವಾಗುವುದನ್ನು ಕಾಣಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಇದರ ಬಗ್ಗೆ ನಮ್ಮನ್ನಾಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೀವೇ ಹೊಣೆ ಹೊತ್ತು  ಕಾಡು ಮೇಡಿನಲ್ಲಿರುವ ಪ್ರದೇಶಗಳಿಗೆ ಸೂಕ್ತ ಭದ್ರತೆ, ದಕ್ಷ ಅಧಿಕಾರಿಯ ನೇಮಕ, ಜೊತೆಗೆ ಸರಿಯಾದ ಮಾರ್ಗ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂದು ನಮ್ಮ ಕಳಕಳಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇಲ್ಲವಾದರೇ ನೀವೆ ಹೇಳಿ ‘ಘನವೆತ್ತ ಬದುಕನ್ನು ಅವರು ಬದುಕುವುದ್ಹೇಗೆ...!?’