Tuesday, 11 August 2015

ಹೆಣ್ಣು-8


        ಈ ಸ್ಟೋರಿ ಪ್ರಾರಂಭವಾಗುವುದಕ್ಕೆ ಮುಂಚೆ ಅವಳೊಬ್ಬಳು ಪಾಪದ ಹುಡುಗಿ. ಸುಂದರ ಕನಸುಗಳನ್ನು ಹೊತ್ತ ಸುಂದರಿ. ಅವಳಿಗಿತ್ತು ಅವಳದೇ ಕೆಲವೊಂದು ರೀತಿ-ನೀತಿ, ನಲಿವಿನ ಪರಿಚಯ ಮಾತ್ರವೇ ಇತ್ತು.  ಆ ಬಾಲೆಗೆ ಮುಂದೊಂದು ದಿನ ಬದುಕೆಂಬ ದೋಣಿ ಬಿರುಗಾಳಿಗೆ ಸಿಲುಕಿ ಮುಳುಗಿ ಹೋಗುತ್ತದೆಯೇನೊ ಎಂಬ ಪರಿವೆಯೇ ಇರಲಿಲ್ಲ. ಟೋಟಲ್ ಆಗಿ ಅವಳೊಬ್ಬಳು ಮುಗ್ಧೆ ಎಂದರೆ ತಪ್ಪಿಲ್ಲ.
ತಂದೆ ತಾಯಿಯರಿಗೆ ಕಷ್ಟವಿದ್ದರೂ ಮಗಳಿಗೆ ಅದರ ಗುರುತು ನೀಡಿರಲಿಲ್ಲ. ಬೇಕೆಂದಿದ್ದನೆಲ್ಲಾ ಕೊಡಿಸಿ ಶ್ರೀಮಂತಿಕೆಯ ರಕ್ಷಾ ಕವಚ ಪರಿಚಯಿಸಿದ್ದರು. ಆಗಲೇ ಲೈಫ್ ಈಸ್ ಬ್ಯೂಟಿಫುಲ್ ಎನ್ನುತ್ತಾ ಮೆಲ್ಲನೆ ಎಸ್.ಎಸ್.ಎಲ್.ಸಿ ಮುಗಿಸುತ್ತಾ ಪಿ.ಯು.ಸಿ ಗೆ ಕಾಲಿರಿಸಿದ್ದಳು ಆಕೆ. ಈಗವಳು ಹರೆಯಕ್ಕೆ ಕಾಲಿಟ್ಟ ಚೆಲುವೆ. ಅದೊಂದು ರೀತಿಯ ಹೊಸ ಬಗೆ, ನವನವೀನ ಹುರುಪು, ಚಲ್ಲಾಟಕ್ಕೆ ಬ್ರೇಕ್ ಕೊಟ್ಟು ಸ್ವಲ್ಪ ಗಂಭೀರಕ್ಕೆ ತಿರುಗುವ ಜೋಷ್, ಬೇಡವೆಂದರೂ ಕನ್ನಡಿಯ ಮುಂದೆ ನಿಲ್ಲಿಸಿ ಮೇಕಪ್ ಮಾಡುವ ವಯಸ್ಸು. ಅದಾಗಲೇ ಹಳೆಯ ಗೆಳತಿಯರ ಜೊತೆಗೆ ಒಂದಿಷ್ಟು ಹೊಸ ಗೆಳತಿಯರು ದೊರಕಿರುವ ಖುಷಿ. ಹೀಗೆ ಎಲ್ಲವೂ ಭಿನ್ನ ಭಿನ್ನವಾಗಿದ್ದವು. ಪುಟ್ಟ ಹಳ್ಳಿಯಲ್ಲಿ ಬೆಳೆದು ಓದಿರುವ ಅವಳು ಆ ಹೊತ್ತಿಗಾಗಲೇ ಬಸ್ಸ್‍ನಲ್ಲಿ ಪಟ್ಟಣದ ಕಾಲೇಜಿಗೆ ಹೋಗಿ ಬರುತ್ತಿದ್ದಳು. ನಮ್ಮ ಹಾಗೆ ನಮ್ಮ ಮಗಳು ಆಗಬಾರದು, ಆಧುನಿಕತೆ ಅವಳಿಗೂ ಒಗ್ಗಲಿ ಎಂದೆನಿಸಿಕೊಂಡು ಮೂಲಭೂತ ಸೌಕರ್ಯ ಎಂಬಂತೆ ಒಂದೊಳ್ಳೆ ಮೊಬೈಲ್‍ನ್ನು ತೆಗೆಸಿಕೊಟ್ಟರು ತಂದೆ ತಾಯಿ.
‘ಮನೆಗೆ ಬರುವುದು ಲೇಟಾದರೆ, ಬಸ್ಸ್ ಮಿಸ್ ಆದರೆ, ಕಾಲ್ ಮಾಡಿ ತಿಳಿಸು ಮಗಳೆ’ ಎಂದು ಮುದ್ದಿಸಿ ಇನ್ನು ಸ್ವಲ್ಪ ಜಾಸ್ತಿ ಶ್ರೀಮಂತಿಕೆ ನೀಡಿ ಸಂಧರ್ಭಗಳ ಸವಿಯನ್ನು ಸವಿದಿದ್ದರು.
ಪ್ರಾರಂಭದಲ್ಲಿ ಎಲ್ಲ್ಲವೂ ನೀಟಾಗಿಯೇ ಇತ್ತು. ಸಂಬಂಧಿಕರು ಗೆಳತಿಯರು ಎಂದು ಕಾಂಟಾಕ್ಟ್ ಸೇವ್ ಆಗುತ್ತಿದ್ದ ಮೊಬೈಲ್‍ಗೆ ಮಸೇಜ್, ಕಾಲ್‍ಗಳು ಮಾಮುಲಿಯಾಗಿ ಬಂದು ಹೋಗುತ್ತಿದ್ದವು. ಇದೆಲ್ಲದರ ಮಧ್ಯೆ ಒಂದು ದಿನ ಅಚಾನಕವಾಗಿ ಬಂದ ಮಿಸ್‍ಕಾಲ್ ಅವಳ ಮೊಬೈಲ್  ಪರದೆಗೆ ಅಪ್ಪಳಿಸಿತ್ತು. ಅಂದಿನ ಆ ಮಿಸ್ಸ್ ಕಾಲ್‍ಗೆ ಶುರುವಾದ ಕ್ಯೂರ್ಯಾಸಿಟಿ ಯಾವಾಗ ಆಕೆ ಪದೆ ಪದೇ ಮೊಬೈಲ್ ನೋಡುವಂತೆ ಮಾಡಿತ್ತೋ, ಅಲ್ಲಿಂದಲೇ ಬದಲಾವಣೆಯ ಗಾಳಿ ಬೀಸಿತ್ತು ನೋಡಿ. ಅದೊಂದು ಕಳ್ಳಾಟಿಕೆ ತನ್ನ ಲೈಫ್‍ನ್ನೇ ಮುಂದೊಂದು ದಿನ ಮಿಸ್ ಮಾಡುತ್ತೆ ಎಂದು, ತಿಳಿದಿರಲಿಲ್ಲ ಆಕೆಗೆ. ಆನಾಮಿಕನಂತೆ ಮಿಸ್ ಕಾಲ್‍ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಇವಳಿಗೆ ದಿನ ಕಳೆದಂತೆ ಅವನ ವನಪು, ವಯ್ಯಾರವನ್ನು ಮೆಸೇಜ್ ಎಂಬ ಮಾಯೆಯಲ್ಲಿ ಕಳುಹಿಸುತ್ತಾ, ತನ್ನೆಡಗೆ ಸೆಳೆದು, ಬಗೆಬಗೆಯ ಆಸೆ ಹುಟ್ಟಿಸುತ್ತಾ ಮೊದಲು ಮೀಟಿಂಗ್ ಮಾಡೋಣ ಎಂದು ಕಾಲ್ ಮಾಡುವ ಸಾಹಸಕ್ಕೆ ಕೈ ಹಾಕಿ, ನಂತರ ಡೇಟಿಂಗ್‍ವರೆಗೂ ಕರೆದು ಮುಂದೇನು ಎಂಬುವಷ್ಟರಲ್ಲಿ ಜೇನು ರಸವನ್ನು ಹೀರಿ ಗೂಡು ಬಿಟ್ಟು ಪರಾರಿ ಎಂಬಂತೆ ಮಾಯವಾಗಿದ್ದ. ಜೊತೆಗೆ ತನ್ನ ಲೀಲೆಯ ಮಹಿಮೆಯನ್ನು ಸೋಷಿಯಲ್ ಆಗೂ ತಿಳಿಯುವಂತೆ ಮಾಡಿ ಪರಾರಿಯಾಗಿದ್ದ. ಮನೆಗೆ ದೀಪವಾಗಿದ್ದ ಅವಳ ಬೆಳಕು ಆ ಕ್ಷಣದಿಂದಲೇ ಬಿರುಗಾಲಿಗೆ ಸಿಲುಕಿ ನಂದಿ ಹೋಗುವ ಹಣಾಹಣಿಯಲ್ಲಿ ಸಾಗಿತ್ತು.  ವಿಷಯ ತಿಳಿದ ಅಪ್ಪ ಅಮ್ಮನ ಪ್ರೀತಿ ಅಷ್ಟಕಷ್ಟೆ ಆಗಿತ್ತು. ಕಾಲೇಜುಗಳಲ್ಲಿಯೂ ಎಲ್ಲರದೂ ಇವಳ ಜೊತೆ ನೀರವ ಮೌನ. ಸೆಳೆದು ಅಬ್ಬರಿಸುತ್ತಿದ್ದ ಅವಳ ಅಂದಕ್ಕೆ ನೋಡುವವರೆ ಗತಿ ಇರಲಿಲ್ಲ. ಅವಳಿಗೆ ಇದೀಗ ಎಲ್ಲವೂ ಸಾಕಾಗಿದೆ. ಅಂದು ಅವನ ಒಂದು ಮೆಸ್ಸೇಜ್‍ಗೆ ತಡಬಡಿಸಿ ಕಾಯುತ್ತಿದ್ದವಳು ಇಂದು ಅವನನ್ನು ನೆನೆಸಿದರೆ ಮೈಪರಚಿದಂತೆ ಪರಿತಪ್ಪಿಸುತ್ತಿದ್ದಳು. ಜೀವನವೇ ಬೇಡ ಎನಿಸಿ ಕೊನೆಗೂ ತೀರ್ಮಾನಿಸಿಯೇ ಬಿಟ್ಟಿದ್ದಳು. ಕಣ್ಣು ಮುಚ್ಚಿ ತೆರೆಯುವುದರೊಳಗೆ ಪರಲೋಕ ಸೇರಿದ್ದಳು.
ಈ ನೋವಿನ ಘಟನೆ ನಾ ಕಂಡ ನಿಜವೇ ಆದರೂ ಇದು ಒಂದು ಹುಡುಗಿಯ ಜೀವನದ ಗಾಥೆಯಲ್ಲ. ಅದೆಷ್ಟೋ ಹೆಣ್ಣು ಮಕ್ಕಳು ಅನುಭವಿಸಿರುವ ಘಟನೆ. ನಾನು ಹೇಳುವುದು ಇಷ್ಟೇ, ಹರೆಯದ ಹುಡುಗಿಯರೇ ಯಾವುದೂ ಎಷ್ಟೂ ಬೇಕೋ ಅಷ್ಟೇ ಇರಲಿ ಅತಿಯಾದರೆ ಅಮೃತವು ವಿಷ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಒಂದಿಷ್ಟು ಜನ ಬಣ್ಣ ಹಚ್ಚುವುದರಲ್ಲೆ ಬೇರೆಯವರ ಜೀವನದ ಓಕುಳಿಯನ್ನು ಆಡುತ್ತಿರುತ್ತಾರೆ, ಆಡಿರುತ್ತಾರೆ. ಕೆಲವೊಂದು ವರ್ಗ ಅದಕ್ಕಾಗಿ ನೆಲೆನಿಂತುಕೊಂಡು ಅಂದದ ಹುಡುಗಿಯರು, ಅಮಾಯಕ ಮಹಿಳೆಯರ ಜೊತೆ ಆಟವಾಡಿ ಮಜಾ ತೆಗೆದುಕೊಂಡು ಸಂಸ್ಕøತಿಯ ರೂಪು ರೇಷೆಯನ್ನು ಹಾಳುಗೆಡವುತ್ತಿದೆ. ಹೆಣ್ಣನ್ನು ಭೋಗಕ್ಕೆಂದೆ ಉಪಯೋಗಿಸುವ ಸಾಮಾಜಕ್ಕೆ ಸೋಷಿಯಲ್ ಮೀಡಿಯಾಗಳು ಪುಷ್ಟಿಕೊಟ್ಟು ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ಮೊಬೈಲ್ ಫೋನ್ ಗಳನ್ನು ಬಳಸಿ ಆದರೆ ಬಳಕೆಯಲ್ಲಿ ಮಿತಿಯಿದ್ದು, ಎಲ್ಲವೂ ನಿಜವೆಂದು ನಂಬದೆ, ಗುರುತು ಪರಿಚಯವಿಲ್ಲದವರ ಬಳಿ ಕಾಂಟ್ಯಾಕ್ಟ್ ಬಳಸುವ ವೇಳೆ ಜಾಗೃತೆ ವಹಿಸಿ, ಹೆತ್ತವರೇ,,, ಮಕ್ಕಳ ನಡೆ ನುಡಿಯಲಿ ನೀವೂ ಎಚ್ಚರವಹಿಸಿ  ಯಾಕೆಂದರೆ ನಿಮ್ಮ ಮಕ್ಕಳಿಗೆ ಏನೇ ಆದರೂ ಹೊಣೆಗಾರರು ನೀವೆ ಎಚ್ಚರವಿರಲಿ ...

Friday, 10 July 2015

ಹೆಣ್ಮಕ್ಕಳೇ ನೀವೆಷ್ಟು ಸೇಫ್...!? (ಬೈಂದೂರು ಬಲಿಯ ಸುತ್ತ...)


ಕಾಮಾಂಧನ ಕುರುಡು ಕಾಮಕ್ಕೆ ಬಲಿಯಾದ ಅಕ್ಷತಾ...
ಮತ್ತೆ ಕರಾವಳಿಯಲ್ಲಿ ಕೊಲೆಯ ತಾಪ
ಕಾಮದ ಹಪಾಹಪಿಯ ನಡುವೆ ಕಣ್ಮುಚ್ಚಿದ ಅಕ್ಷತಾ...
ಕರಾವಳಿ ಜನರಲ್ಲಿ ಮಡುಗಟ್ಟಿದ ಕರಿಛಾಯೆಯ ಕಾರ್ಮೋಡ…

         ಗೋವಾ ಮತ್ತು ಕೇರಳಗಳ ನಡುವೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿಶಾಲ ಪ್ರದೇಶಕ್ಕೆ ಹಬ್ಬಿ ನಿಸರ್ಗ ಸೌಂದರ್ಯವನ್ನು ಉಣಿಸುತ್ತಿರುವ, ಸಮುದ್ರಕ್ಕೆ ತಾಗಿಕೊಂಡಿರುವುದೇ ಕರ್ನಾಟಕದ ಕರಾವಳಿ ಭೂಪ್ರದೇಶ. ಉಪ್ಪು ಸಿಹಿ ನೀರಿನ ಹವೆ, ಮಳೆ, ಉತ್ತಮ ಆರೋಗ್ಯದ ಜೊತೆಗೆ ದಷ್ಟ-ಪುಷ್ಟತೆಯನ್ನು, ಮೇಧಾವಿ ಚುರುಕು ಬುದ್ಧಿಯನ್ನು, ಮತ್ತು ಕಷ್ಟ ಸಹಿಸುವುದನ್ನು ಮೈಗೂಡಿಸಿಕೊಂಡ ಸ್ಥರಯುತ ಬಾಹುಳ್ಯ ಹೊಂದಿರುವವರು ಅಲ್ಲಿನ ಜನತೆ. ಕಲೆ, ಯಕ್ಷಗಾನ, ವಿದ್ಯಾಭ್ಯಾಸ, ಆರೋಗ್ಯ, ಶಿಸ್ತಿನ ಜೀವನಕ್ಕೆ ಹೆಸರು ಮಾಡಿದ್ದು, ಹೆಚ್ಚು ಅಂಕ ಪಡೆಯುವ ಜಿಲ್ಲೆ ಎಂದು ಬಿರುದನ್ನು ಪಡೆದಿದ್ದು, ವಾಯುಮಾರ್ಗ, ಜಲಮಾರ್ಗ, ರಸ್ತೆ, ರೈಲ್ವೆ ಮಾರ್ಗದಲ್ಲೂ ಉನ್ನತ ಸ್ಥರದಲ್ಲಿದ್ದು, ನೀರಿರಲಿ, ಬಿಸಿಲಿರಲಿ, ಕಾಡಿರಲಿ ಯಾವುದಕ್ಕೂ ಭಯ ಪಡಲಾರೆವು ಎನ್ನುತ್ತಿದ್ದ ಜನ ಇದೀಗ ಕೊಲೆ, ಹತ್ಯೆಯೆಂಬ ಹೆಸರಿಗೆ ನಿಜಕ್ಕೂ ಬೆಚ್ಚಿ ಬೀಳುತ್ತಿರುವುದು ಎಲ್ಲರಲ್ಲೂ ಭಯತರಿಸುತ್ತಿದೆ. ಅದರಲ್ಲೂ ಹರೆಯದ ಯುವತಿಯರ ನಿಗೂಢ ಸಾವುಗಳು ಮನೆಯ ಮನೆಯಲ್ಲೂ ಮಾನಸಿಕ ವಿಕ್ಷಿಪ್ತತೆಯೊಂದಿಗೆ ಭಯ ಹುಟ್ಟಿಸುತ್ತಿದೆ.
ಅರೇ ಇದೇನಿದು ಕೇಳ್ತೀರಾ..! ಹೌದು ಕಳೆದ  ಎರಡು ಮೂರು ವರ್ಷಗಳಿಂದ ಕರಾವಳಿಯಲ್ಲಿ ಕೊಲೆಯ ಕೂಗು ಕೇಳುತ್ತಿದೆ, ಉಗ್ರರ ತಾಂಡವತೆ, ರೋಲ್ ಕಾಲ್, ಸೆಕ್ಸ್ ದಂಧೆ , ರಾಜಕಾರಣಿ ಪುಡಾರಿಗಳ ರಕ್ತಚರಿತ್ರೆ, ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಕುಖ್ಯಾತಿಯಾಗುತ್ತಿದೆ. ಒಂದು ಕಡೆ ಅಲ್ಪ ಸಂಖ್ಯಾತರನ್ನು ಪ್ರತ್ಯೇಕಿಸುತ್ತಿರುವುದು ಇನ್ನೊಂದು ಕಡೆ ದುಡಿಯುವ ದಲಿತ ಶೂದ್ರ ಸಮುದಾಯವನ್ನು ದಾರಿ ತಪ್ಪಿಸುತ್ತಿರುವುದು  ಅಷ್ಟೇ ಅಲ್ಲದೇ ದೈವ ಭಕ್ತಿಯ ಆಡಂಬರದ ಅಗ್ಗದ ಪ್ರದರ್ಶನ ಹೆಚ್ಚುತ್ತಿರುವುದನ್ನು ನೋಡಿದರೆ ಮನುಷ್ಯನ ಜೀವನ ಇಲ್ಲಿ ಅಗ್ಗವಾಗಿದೆಯೇನೋ ಅನ್ನಿಸುತ್ತಿದೆ. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ ಕ್ರಿಮಿನಲ್ ಚಟುವಟಿಕೆಗಳಿಗೆ ಧರ್ಮವನ್ನು ರಕ್ಷಾಕವಚವನ್ನಾಗಿ ಬಳಸುತ್ತಿರುವುದು ಹಲವಾರು ಕಡೆ ನಡೆಯುತ್ತಲೇ ಇದೆ.
    ಇವೆಲ್ಲವುಗಳ ಸಂಗಮ ಇಂದು ಕರಾವಳಿಯ ಜನತೆಯಲ್ಲಿ ನಿದ್ರೆಗೆಟ್ಟಿಸಿಬಿಟ್ಟಿದೆ. ಒಂದಕ್ಕೊಂದು ಸಂಭಂಧವೇನೋ ಎಂಬಂತೆ ಇದೀಗ ಮಕ್ಕಳ ರಕ್ತದಲ್ಲೂ ಉಗ್ರತೆಯ ಕಂಪು ಮೂಡುತ್ತಿದ್ದು ಇದರ ಬಗ್ಗೆ ಗಮನವಹಿಸದಿದ್ದರೆ ಮುಂದೊಂದು ದಿನ  ಪ್ರತಿಷ್ಠಿತ ಕರಾವಳಿ ದಂಡು ಪಾಳ್ಯವೋ, ಕಾಬುಲ್‍ನ ಬುಡಕಟ್ಟು ಪ್ರದೇಶದಂತೋ ಆಗುವುದಂತು ನಿಜ.
  ಬಹುತೇಕ ಕಾಡುಗಳೇ ಇರುವ ಕರಾವಳಿಯ ಹಳ್ಳಿಗಳಲ್ಲಿ ಇದೀಗ ಹೆಣ್ಣು ಮಕ್ಕಳ ಕಣ್ಮರೆ, ನಿಗೂಢ ಸಾವುಗಳು ನಡೆಯುತ್ತಿವೆ. ಅಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಗಿಂತ ಮೊದಲು ಅದೆಷ್ಟು ಹೆಣ್ಮಕ್ಕಳು ಹೆಸರಿಗಿಲ್ಲ ಎಂಬಂತೆ ಮಾಯವಾದರೋ ಗೊತ್ತಿಲ್ಲ. ಬಹುಶಃ ಇದು ಪೋಲೀಸ್ ಪುಸ್ತಕದಲ್ಲಿಯೂ ಎಂಟ್ರಿಯಾಗಿತ್ತೋ ಇಲ್ವೋ ಬಲ್ಲವರಿಲ್ಲ. ಆದರೆ ಮೂರ್ನಾಲ್ಕು ವರ್ಷದಿಂದ ಈಚೆಗೆ ನಾಲ್ಕೈದು ಹೆಣ್ಮಕ್ಕಳ ಶವ ನಿಬಿಡ ಪ್ರದೇಶದಲ್ಲಿ ದೊರಕಿದರೂ, ಹೇಗಾಯಿತು? ಯಾಕಾಯಿತು? ಯಾರು ಇದನ್ನು ಮಾಡಿರಬಹುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ದೊರಕದೆ, ರಸವತ್ತಾಗಿ ಎಲ್ಲವೂ ಕಳಚಿಕೊಂಡಿದ್ದು ನಿಮಗೂ ಗೊತ್ತಿರಬಹುದು. ಮೊನ್ನೆ ಮೊನ್ನೆ ಬೈಂದೂರಿನ ಕಾಡಿನಲ್ಲಿ ಅನಾಥವಾಗಿ ದೊರೆತ ಕಾಲೇಜು ಬಾಲೆ ಅಕ್ಷತಾ ಎನ್ನುವವಳ ಶವ, ಹಳೆಯ ಪ್ರಕರಣಗಳು ಮಾಸುವ ಮೊದಲೇ ಹೊಸ ಆಕೃಂಧನಕ್ಕೆ ನಾಂಧಿಯಾಯಿತು. ಈ ಹಿಂದೆ ನಡೆದ ಸೌಜನ್ಯ, ನಂದಿತಾ, ರತ್ನಾ ಕೊಠಾರಿಯ ಅನುಮಾನಾಸ್ಫದ ಸಾವುಗಳಿಗೆ  ಜನ ಹೋರಾಡಿ ಹೋರಾಡಿ ಸೋತು ಸುಣ್ಣವಾಗಿ ಹೋಗಿದ್ದರೂ, “ಇದು ಯುದ್ಧ ಕಣ್ರೀ ಎದುರಿಸಿ ಬಿಡೋಣ” ಎಂಬ ಕೂಗಿನೊಂದಿಗೆ ಶವ ಸಿಕ್ಕಿದ ಕ್ಷಣದಿಂದಲೇ ಪ್ರತಿಭಟನೆಯನ್ನು ಕೈಗೆತ್ತಿಕೊಂಡರು ನೋಡಿ!!!, ಆಗಲೇ ಪೋಲೀಸ್ ಮಹಾಶಯರಿಗೆ ಒತ್ತಡದ ಕಾವು ನಿದ್ದೆಗೆಡಿಸುವಂತೆ ಮಾಡಿ ಆರೋಪಿಗಳನ್ನು ಹಿಡಿಯಲೇಬೇಕು ಎಂಬ ಛಲ ಮೂಡಿ ಬಂತು. ಕುಂದಾಪುರ ತಾಲೋಕಿನ ಬೈಂದೂರಿನ ಎಲ್ಲಾ ಗ್ರಾಮಸ್ಥರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಸಹಕಾರ ಹಾಗೂ ಒತ್ತಡದೊಂದಿಗೆ  ಅಂತು ಕೊಲೆಗಡುಕ ಸಿಕ್ಕಿಯೇಬಿದ್ದ ಅವನೇ ಕಾಮಪಿಶಾಚಿ 19ರ ಹರೆಯದ ಸುನೀಲ್..





ಸುನೀಲ್ ಏನು ರೇಪ್ ಆ್ಯಂಡ್ ಮರ್ಡರ್ ಮಾಡೋಷ್ಟು ಬೆಳೆದವನಲ್ಲ. ಆದರೆ ಆತನ ಕಾಮದ ಕೀಳು, ಚುಡಾಯಿಸುವ ಪುಂಡಾಟಿಕೆ ಅಮಾಯಕ ಹೆಣ್ಣೋಬ್ಬಳ ಜೀವವನ್ನೇ ಬಲಿ ಪಡೆದದ್ದು ದುರಾದೃಷ್ಟ. ಬೈಂದೂರಿನ ಒತ್ತಿನಣೆಯ ಸಮೀಪದಲ್ಲಿರುವ ಹನ್ನಬೇರು ಎಂಬ ಪುಟ್ಟ ಊರಿನ ಪ್ರತಿಭಾನ್ವಿತ ಹುಡುಗಿ ಅಕ್ಷತಾ. ಮನೆಯಲ್ಲಿ ಬಡತನವಿದ್ದರೂ ಓದಿಗೆ ಅದು ಅಡ್ಡಿಯಲ್ಲ ಎಂದು ತೋರಿಸಿದ ಮುಗ್ಧೆ ಅವಳು. ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲ ಶೇ.93 ಅಂಕ ಪಡೆದು ಕರ್ನಾಟಕ ರಾಜ್ಯದಲ್ಲೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನೀಯರಲ್ಲಿ ಅತೀ ಹೆಚ್ಚು ಅಂಕ ಪಡೆದ ಕೀರ್ತಿಗೆ ಭಾಜನಳಾಗಿ ಹಲವು ಕಡೆ ಸನ್ಮಾನಗಳನ್ನು ಗಿಟ್ಟಿಸಿಕೊಂಡಿದ್ದಳು. ಸದ್ಯ ಬೈಂದೂರಿನ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಓದುತ್ತಿದ್ದ ಆಕೆಯ ಮೇಲೆ ಅದಾಗಲೇ ಕಿಡಿಗೇಡಿ ಸುನೀಲನ ಕಣ್ಣು ಬಿದ್ದಿತ್ತು. ಆ ದಿನ ಅಂದರೆ ಜೂನ್ 17ರಂದು ಕಾಲೇಜಿಗೆ ಹೋಗಿದ್ದ ಅಕ್ಷತಾ ಸಮಯ 6 ಆದರೂ ಮನೆಗೆ ಬರದಿದ್ದದ್ದು ಮನೆಯವರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಅದಾದ  ನಂತರ ಹುಡುಕಾಟವನ್ನು ಪ್ರಾರಂಭಿಸಿದ ಮನೆಯವರಿಗೆ ದೊರಕಿದ್ದು ದಾರಿಮಧ್ಯೆ ಪೊದೆಯ ಸಮೀಪ ಅಂಗಾತ ಮಲಗಿರುವ ಆಕೆಯ  ಶವ. ದಟ್ಟ ಕಲ್ಲು ಬಂಡೆಯ ನಡುವೆ ಹಾದು ಹೋಗಿ ಮನೆ ಸೇರಬೇಕಾದ ಹುಡುಗಿ ಸ್ಮಶಾನದ ಕದ ತಟ್ಟಿದ್ದಳು.
ಕಾಮಾಂಧ ಸುನೀಲ್, ಈಗಷ್ಟೇ ಐ.ಟಿ.ಐ ಓದುತ್ತಿರುವ ವಿದ್ಯಾರ್ಥಿಯಾಗಿದ್ದು, ಹುಡುಗಿಯರಿಗೆ ಚುಡಾಯಿಸುವುದು, ಗಾಂಜಾ, ಸಿಗರೇಟ್, ಸೇರಿದಂತೆ ಅನೇಕ ಚಟಗಳಿಗೂ ದಾಸನಾಗಿದ್ದ ಅಸಾಮಿಯೆಂದರೆ ನಂಬುತ್ತೀರಾ!?. ಎಸ್... ನಂಬಲೇಬೇಕು...  ಹೌದು!.., ಆ ದಿನ ಅಕ್ಷತಾಳ ಬರಿವಿಕೆಗೆ ಹೊಂಚು ಹಾಕಿ ಕಾಯುತ್ತಿದ್ದ, ದುರ್ಗಮ ದಾರಿಯಲ್ಲಿ ಅವಳು ಆಗಮಿಸಿದಾಗ  ಅಡ್ಡ ನಿಂತು ದುರ್ವರ್ತನೆ ತೋರಿದ್ದ. ಅದಕ್ಕವಳು ಹೆದರಿ ಓಡಲಾರಂಭಿಸಿದ್ದೆ ತಡ ಆಕೆಯ ದುಪ್ಪಟ್ಟವನ್ನು ಜಗ್ಗಿ  ಮುಗ್ಧೆಯನ್ನು ಕಡೆವಿದ್ದ. ಕೂಗಿದಾಗ, ಅದರಿಂದಲೇ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿದ್ದಾನೆ. ಅರೆಉಸಿರಿನಿಂದ ಒದ್ದಾಡುತ್ತಿರುವ  ಅಕ್ಷತಾಳನ್ನು ಪಕ್ಕದಲ್ಲೇ ಇರುವ ಅಕೇಶಿಯಾ ಗಿಡಗಳತ್ತ ಎಳೆದುತಂದು ಮಲಗಿಸಿ, ಅವಳ ಮೈ ಮೇಲೆ ಮಲಗಿ, ಲೈಂಗಿಕ ಪೀಡನೆ ನಡೆಸಿ ಮತ್ತೊಮ್ಮೆ ತನ್ನ ವಾಮನಾವತಾರವನ್ನು ತೋರಿದ್ದಾನೆ. ಅದಾಗಲೇ ಅವಳು ಪೂರ್ತಿ ಜೀವ ಕಳೆದು ಇಹಲೋಕವನ್ನು ತ್ಯಜಿಸಿದ್ದಳು. ಇದನ್ನು ಗಮನಿಸಿದ ಸುನೀಲ್ ಭಯಗೊಂಡು ಆಕೆಯ ಬ್ಯಾಗ್ ಮತ್ತು ಕೊಡೆಯನ್ನು ಪಕ್ಕದಲ್ಲಿ ಇಟ್ಟು ಪರಾರಿಯಾಗಿದ್ದಾನೆ.
ಆನಂತರದಲ್ಲೇ ನೋಡಿ, ಕಳ್ಳನ ಮನಸ್ಸು ಹುಳ್ಳಗೆ ಎನ್ನುವಂತೆ, ಪೊಲೀಸರಿಗೆ ಸುಳಿವು ಸಿಗಬಾರದೆಂದು ತಲೆ ಕೂದಲನ್ನು ಕ್ಷೌರ ಮಾಡಿಸಿಕೊಂಡು ರೂಪ ಬದಲಾವಣೆಯ ಚರ್ಯೆಗೆ ನಿಂತು ಬಿಟ್ಟ ಸುನೀಲಕಾಮಿ. ಈ ನಡುವೆ ಮಾತನಾಡುತ್ತಾ ತನ್ನ ಚಿಕ್ಕಮ್ಮನ ಮಗ ಅಕ್ಷಯನಿಗೂ ವಿಷಯ ಹಂಚಿ, ಮತ್ಯಾರಿಗೂ ಹೇಳಬೇಡ ಪೊಲೀಸರ ಮುಂದೆಯೂ ಬಾಯಿ ಬಿಡದಿರು ಎಂದು ಸಲಹೆ ನೀಡಿದ್ದ. ಅಷ್ಟೇನೂ ಖಚಿತ ಮಾಹಿತಿ ಇಲ್ಲದಿದ್ರೂ ಅನುಮಾನಾಸ್ಫದವಾದ ಸುಮಾರು 150 ರಿಂದ 200 ಮಂದಿಯನ್ನು ವಿಚಾರಿಸಿದ ಉಡುಪಿ ಎಸ್ಫಿ ಅಣ್ಣಾಮಲೈ ಹಾಗೂ ಅವರ ತಂಡ ಅಂತಿಮವಾಗಿ ಸುನೀಲ್ ಮತ್ತು ಅಕ್ಷಯನನ್ನು ಪೋಲೀಸ್ ಗಾಡಿಗೆ ಹತ್ತಿಸಿದ್ದರು. ಸ್ಟೇಷನ್‍ನಲ್ಲಿ ಒಟ್ಟಿಗೆ ವಿಚಾರಿಸಿದಾಗ ಬಾಯಿ ಬಿಡದ ಇಬ್ಬರೂ ಕದೀಮರು ಒಬ್ಬೊಬ್ಬರನ್ನೇ ವಿಚಾರಿಸಿ ಬೆಂಡೆತ್ತಿದಾಗ, ಅಕ್ಷಯ ನಿಜವನ್ನು ಅರುಹಿದ್ದ. ಅಲ್ಲಿಗೆ ಕೇವಲ ಎರಡೇ ದಿನದಲ್ಲಿ ಇದು ಸಹಜವಾದ ಸಾವಲ್ಲ ‘ರೇಪ್ ಆ್ಯಟಂಪ್ಟ್ ಆ್ಯಂಡ್ ಮರ್ಡರ್’ ಎಂಬ ಸುದ್ಧಿ ಹೊರಬಿತ್ತು. ಇದೀಗ ಸುಳ್ಳು ಮಾಹಿತಿ ಕೊಟ್ಟು ಪೊಲೀಸರ ದಾರಿ ತಪ್ಪಿಸಿದ ನಿಟ್ಟಿನಲ್ಲಿ ಅಕ್ಷಯ ಹಾಗೂ ಕೊಲೆಯ ಪ್ರಮುಖ ವ್ಯಕ್ತಿ ಸುನೀಲ್ ಇಬ್ಬರೂ ಪೊಲೀಸ್ ತೆಕ್ಕೆಯಲ್ಲಿ ಕೋಳನ್ನು ತೊಟ್ಟಿದ್ದಾರೆ.
ಕೊಲೆಯೇನೋ ನಡೆದು ಹೋಯ್ತು, ಆರೋಪಿಗಳು ಸೆರೆ ಸಿಕ್ಕರು ಆದರೆ ಕರಾವಳಿಯ ಜನರಲ್ಲಿ ಮಡುಗಟ್ಟಿದ ಕರಿಛಾಯೆಯ ಕಾರ್ಮೋಡ ಇನ್ನೂ ಇಳಿದಿಲ್ಲ. ಈ ಹಿಂದೆ ನಡೆದ ಕೊಲೆಗಳಿಗೂ ಉತ್ತರ ಹುಡುಕಲು ಇದೀಗ ಅಲ್ಲಿನ ಜನತೆ ಮುಂದಾಗಿದ್ದಾರೆ. ಇದೇನೋ ಬಹಳ ಬೇಗ ಬೇಗ ತಪಾಸಣೆ, ವಿಚಾರಣೆ ನಡೆಯಿತು ಇದರಂತೆ ಹಿಂದಿನ ಕೊಲೆಗಳಿಗೂ ಉತ್ತರಿಸಿ ಎನ್ನುವುದು ತಾಲೋಕಿನ ಜನರ ಆಶಯ. ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಕ್ಷೇತ್ರದಲ್ಲಿ ಭಟ್ಟಂಗಿತನ ಮತ್ತು ಸ್ವಹಿತಾಸಕ್ತಿ ನಡೆಸುತ್ತಿದ್ದು, ಪ್ರಜಾಪ್ರಭುತ್ವವನ್ನು ಹೊಸುಕಿಹಾಕಿ ಜನರಿಗೆ ನ್ಯಾಯ ದೊರೆಯದಂತೆ ಮಾಡುತ್ತಿವೆ, ಇಲ್ಲಿನ ಅನೇಕ ಅಕ್ರಮಗಳಿಗೆ ರಾಜಕೀಯ ಹಾಗೂ ಪ್ರಭಾವಿ ವ್ಯಕ್ತಗಳೇ ಕಾರಣ ಎನ್ನುತ್ತಾರೆ ಅಲ್ಲಿನ ಜನ.
ನಿಜ! ಈ ಜಗತ್ತನ್ನು ಬೇರೆ ಬೇರೆ ಸ್ವರೂಪದ ಅನಿಷ್ಟಗಳು ಕಾಡುತ್ತಿವೆ. ಯರ್ರಾ ಬಿರ್ರಿಯಾಗಿ ಆಳುತ್ತಿವೆ. ಅಕ್ಷತಾಳ ಕೊಲೆಯ ರಹಸ್ಯವನ್ನೇನೋ ಬೇಧಿಸಿದ್ದೇವೆ ಆದರೆ ಇಂತಹ ಘಟನೆಗಳು ಮಾನವ ಲೋಕವನ್ನೇ ತಲ್ಲಣಿಸುವ ಹಾಗೂ ಅಮಾನವೀಯವನ್ನು ಅಕ್ರಮ ಸಮಾಜದೆಡೆ ಕೊಂಡು ಹೋಗುವ ಲಕ್ಷಣಗಳಾಗಿದ್ದು ಈಗಲೇ ಇದನ್ನು ತಡೆಯದಿದ್ದರೆ ಮುಂದೆ ನಮ್ಮ ಕಣ್ಮುಂದೆ ನಮ್ಮ ಮಕ್ಕಳು ಸತ್ತು ಹೆಣವಾಗುವುದನ್ನು ಕಾಣಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಇದರ ಬಗ್ಗೆ ನಮ್ಮನ್ನಾಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೀವೇ ಹೊಣೆ ಹೊತ್ತು  ಕಾಡು ಮೇಡಿನಲ್ಲಿರುವ ಪ್ರದೇಶಗಳಿಗೆ ಸೂಕ್ತ ಭದ್ರತೆ, ದಕ್ಷ ಅಧಿಕಾರಿಯ ನೇಮಕ, ಜೊತೆಗೆ ಸರಿಯಾದ ಮಾರ್ಗ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂದು ನಮ್ಮ ಕಳಕಳಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇಲ್ಲವಾದರೇ ನೀವೆ ಹೇಳಿ ‘ಘನವೆತ್ತ ಬದುಕನ್ನು ಅವರು ಬದುಕುವುದ್ಹೇಗೆ...!?’

ನಗ್ನತೆಯ ಪಿಸುಮಾತು...


ತಮ್ಮ-ತಂಗಿ ಶಾಲೆಗೆ ಹೋಗುತ್ತಿರುವರು ಆದರೆ...!!!

           ಜೂನ್ 1...
           ಮುಂಜಾನೆಯ ನಿತ್ಯಕರ್ಮಗಳನ್ನು ಮುಗಿಸಿ, ಬಾಹ್ಯ ಪ್ರಪಂಚಕ್ಕೆ ಹೊರ ಬೀಳುವ ಮುನ್ನ ಮೊಬೈಲ್ ಡಾಟಾ ಆನ್ ಮಾಡಿ ದಿನದ ವಿಷಯ ವೈವಿಧ್ಯ ಹಾಗೂ ಗೆಳೆಯ, ಗೆಳತಿಯರ ಸಂದೇಶ, ಪತ್ರಿಕೋದ್ಯಮದ ಸುದ್ದಿ ಶಕಾರನ್ನು ತಿಳಿಯಲು ಮನತೆರೆದೆ. ಎಂದಿನಂತೆ ಒಂದಿಷ್ಟು ಫೇಸ್ ಬುಕ್ ಟ್ಯಾಗ್‍ಗಳು, ಪೋಟೋ ಅಪ್ಡೇಟೆಡ್, ಸ್ಟೇಟಸ್, ಮೇಸೆಂಜರ್‍ನ ಸಂದೇಶಗಳು ಟಿನ್ ಟಿನ್ ಸದ್ದಿನೊಂದಿಗೆ ಪರದೆಯಲ್ಲಿ ನೋಟಿಫಿಕೇಷನ್ ಸ್ಥಳದಲ್ಲಿ ಮಿಂಚಿದವು. ಆಗಲೇ ವಾಟ್ಸಾಪ್‍ನಲ್ಲೂ ಶುಭೋದಯ ಸಾರುವ ಹಲವಾರು ಮೆಸೇಜ್‍ಗಳು ತಾ ಮುಂದು ನಾ ಮುಂದು ಎಂಬಂತೆ ಬೇರೆಯದೇ ರೀತಿಯಲ್ಲಿ ಸೌಂಡ್ ಮಾಡುತ್ತಾ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತಿದ್ದವು. ದಿನಬೆಳಗಾದರೆ ಇದಕ್ಕೇನು ಕಡಿಮೆ ಇಲ್ಲ. ಇತ್ತೀಚಿಗಂತು ಆ್ಯಂಡ್ರಾಯ್ಡ್ ಹವಾ ಎಲ್ಲರಲ್ಲೂ ಮೇಸೆಜ್‍ಗಳ ವ್ಯಾಲ್ಯೂವನ್ನು ಜಾಸ್ತಿಗೊಳಿಸಿ, ಅದಕ್ಕಿರುವ ಬೆಲೆಯ ಮೊತ್ತವನ್ನು ಕಡಿಮೆಗೊಳಿಸಿ ಬಿಟ್ಟಿವೆ ಬಿಡಿ!. ಮೊದಲು ನಾವೆಲ್ಲ ಸಿಮ್‍ನ ಪರ್ಸ್‍ನಲ್ ಆಕೌಂಟ್‍ನಿಂದ ಪ್ರತಿ ಮೇಸೆಜ್‍ಗೆ ಇಂತಿಷ್ಟು ಎಂಬಂತೆ ಹಣವನ್ನು ತೆಯ್ದು ಸಂದೇಶ ಕಳುಹಿಸುತ್ತಿದ್ದೇವು ಆಗ ಒಂದೊಂದು ಸಂದೇಶಕ್ಕೂ ಬೆಲೆ ಅಗಾಧ ಎಂಬಂತ್ತಿತ್ತು. ಆದರೀಗ ಎಲ್ಲವೂ ಇಂಟರ್‍ನೆಟ್ ಜಾಲದೊಳಗೆ ಫ್ರೀ ಎಂಬ ಪಾಶಕ್ಕೆ ಸಿಲುಕಿ ಅವುಗಳ ಮಹತ್ವವೇ ಅಡಗಿ ಹೋಗಿದೆ. ಒಮ್ಮೊಮ್ಮೆ ಈ ಮೆಸೇಜ್‍ಗಳು ಕಿರಿ ಕಿರಿ ಎನಿಸಿದರೂ ಎಲ್ಲೋ ಒಂದು ಕಡೆ ಕ್ಷಣ ಮಾತ್ರದಲ್ಲಿ ತಿಳಿಯದ ಹಾಗೂ ಅಚ್ಚರಿಯ ಕೆಲವೊಂದಿಷ್ಟು ಸುದ್ದಿ, ಪೋಟೋ ಇತ್ಯಾದಿಗಳನ್ನು ಕುಳಿತಲ್ಲೇ ವೇಗದಿ ಪಡೆಯಲು ಸಹಕಾರಿಯಾಗುತ್ತವೆ. ಆ ದಿನ ಬಂದಿರುವ ಅಷ್ಟು ಮೆಸೇಜ್‍ಗಳ ಪೈಕಿ ‘ಹಾಯ್ ಗೆಳೆಯ ಗುಡ್ ಮಾರ್ನಿಂಗ್ ಈ ದಿನ ನೆನಪಿದ್ಯಾ ನಿಂಗೆ’ ಎಂದು ಕಳುಹಿಸಿದ್ದ ನನ್ನ 18 ವರ್ಷದ ಹಿಂದಿನ ಬಾಲ್ಯದ ಗೆಳೆಯನ ಸಂದೇಶ ನನ್ನನ್ನು ತೀರಾ ಆಕರ್ಷಿಸಿತ್ತು. ಅರೇ ಇದೇನಿದು ಈ ದಿನ ಏನಿದೆ ಸ್ಫೇಷಲ್ ಅಂದುಕೊಂಡು ಮೆದುಳಿಗೆ ರೀಕಾಲ್ ಕೊಟ್ಟರೂ ಉತ್ತರ ತೋಚದಾಯಿತು. ‘ಎನ್ ಸ್ಫೇಷಲ್ ಮಿತ್ರಾ, ಗೊತ್ತಾಗಿಲ್ಲ’ ಎಂದು ರಿಪ್ಲೈ ನೀಡಿದೆ. ‘ಹೇ ಇವತ್ತು ಜೂನ್ ಒಂದು ಅಲ್ವೇನೋ, ನಾನು ನೀನು 18 ವರ್ಷಗಳ ಹಿಂದೆ ಇದೇ ದಿನ ನಮ್ಮ 6ನೇ ವಯಸ್ಸಿನಲ್ಲಿ ಒಂದನೇ ಕ್ಲಾಸ್‍ಗೆ ಹೋಗುವಾಗ ಪರಿಚಯವಾಗಿ ದೋಸ್ತಿಗಳಾಗಿದ್ದು, ಮೊದಲ ದಿನ 2 ಮೈಲಿ ದೂರವಿರುವ ಸಣ್ಣ ಶಾಲೆಗೆ ಹೋಗಿ ಒಂದು ಮೂಲೆಯಲ್ಲಿ ಯಾರದ್ದು ಪರಿಚಯವಿರದೇ ಇಬ್ಬರೇ ಎನ್ನುವಂತೆ ಮೇಸ್ಟ್ರ ಹಳೆಯ ಖುರ್ಚಿಯ ಕೆಳಗೆ ಹೋಗಿ ಕುಳಿತದ್ದು’ ಎಂದು ಹಳೆಯದನ್ನು ನೆನಪಿಸಿದ.
      ಹೌದಲ್ವಾ!!... ವಾವ್ಹ್... ಗೆಳೆಯ ಅದನ್ನೆಲ್ಲಾದ್ರೂ ಮರೆಯೋಕಾಗತ್ತಾ, ಆ ದಿನದ ಅನುಭವವೇ ಬೇರೆ. ನೀನು ದೂರದ ಗುಜರಾತ್‍ನಿಂದ  ಇಲ್ಲಿಗೆ ಬಂದು ನನ್ನ ಗೆಳೆಯನಾಗಿದ್ದು, ಅದಾದ ನಂತರವೂ ಅಷ್ಟೇ ಜೊತೆಗೆ ಶಾಲೆಗೆ ಹೋಗಿದ್ದು, ಒಂದೇ ಕೊಡೆಯಲ್ಲಿ ಗುಡುಗು ಮಿಂಚಿಗೆ ಹೆದರದೇ ಕಾಡು ಮೇಡು ದಾಟಿ ಅಕ್ಷರ ಕಲಿತದ್ದು ಅದೆಲ್ಲಾ ಎಣಿಸಿಕೊಂಡರೆ ಮೈಯಲ್ಲಿ ಎನೋ ಸಂಚಲನ ಆಗುತ್ತೆ ಮಗಾ ನೆನಪಿಸಿದ್ದಕ್ಕೆ ಥ್ಯಾಂಕ್ಸ್ ಕಣೋ ಎಂದು ಒಂದಿಷ್ಟು ಹಳೆಯ ಬಾಲ್ಯದ ನೆನಪುಗಳ ವಿಚಾರ ವಿನಿಮಯ ಮಾಡಿಕೊಂಡೆವು...
     ನಿಜಕ್ಕೂ ಅನ್ನಿಸುವುದು ನನಗೆ ಎಷ್ಟೊಳ್ಳೆ ದಿನಗಳು ಅವು. ನಾವೆಲ್ಲ ಕಾಲ್ನಡಿಗೆಯಲ್ಲಿ, ಉದ್ದನೆಯ ಹರಿದ ಕೊಡೆಯನ್ನು ಹಿಡಿದು, ಹವಾಯಿ ಚಪ್ಪಲಿಯನ್ನು ತೊಟ್ಟು ಒಮ್ಮೊಮ್ಮೆ ಅದು ಹರಿದರೆ ಬರಿಗಾಲಲ್ಲಿ ನಡೆದುಕೊಂಡು, ಮಳೆಗಾಲದಲ್ಲಿ ಮಳೆ ನೀರು ಹರಿಯುತ್ತ್ತಿದ್ದಾಗ ಕಾಗದದ ದೋಣಿ ಮಾಡಿ ಅದು ಹೋಗುವುದನ್ನೆ ಹಿಂಬಾಲಿಸಿಕೊಂಡು ಚಲಿಸುತ್ತಿದ್ದದ್ದು, ಕಾಡು ಹಣ್ಣುಗಳು ಜೊತೆಗೆ ಪೇರಲ, ನೇರಳೆ, ಮಾವು, ಗೇರು, ಬುಗುರಿಹಣ್ಣು ಇತ್ಯಾದಿಗಳನ್ನು ಕಿಸೆಯಲ್ಲಿ ತುಂಬಿಕೊಂಡು,ಹಣ್ಣು ಸಿಗದವನಿಗೆ ಸಾಲಕೊಟ್ಟು ಮರುದಿನ ಎರಡು ಹಣ್ಣು ಕೊಡು ಎನ್ನುವಂತೆ ಜಗಳ ಮಾಡುತ್ತಾ ಶಾಲೆಯ ದಾರಿಯನ್ನು ಸವೆಸುತ್ತಿದ್ದದ್ದು ಒಂಥರ ಮಜವಾಗಿದ್ದವು. ಇಂದಿನ ಕಾಲದಲ್ಲೂ ಮಕ್ಕಳು ಶಾಲೆಗೆ ಹೋಗುತ್ತಾರೆ ಆದರೆ ಶಾಲೆಯ ಜೊತೆಗೆ ಬದುಕು ಬಿನ್ನಾಣದ ಪರಪಂಚ ನೋಡಿದರೆ, ಇವತ್ತಿನ ಮಕ್ಕಳಿಗೆ ಸ್ಕೂಲ್ ಬಸ್ ಎಂಬ ವಾಹನದೊಳಗೆ ಅವರ ಸಂಭ್ರಮ ಕೊನೆಗಾಣುತ್ತದೆ. ನಮಗೆ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯದ ಆಟವಿತ್ತು ಜೊತೆಗೆ ವ್ಯಾಯಾಮದ ಆಯಾಮಗಳಿದ್ದವು. ಆದರೆ ಇಂದು ಗಿಜಿ-ಗಿಜಿಯಾಗಿ ಮಕ್ಕಳು ಸರಿಯಾದ ಕ್ರೀಡಾಂಗಣದ ವ್ಯವಸ್ಥೆಯೆ ಇಲ್ಲದೆ ನಮ್ಮ ಅಂದಿನ ಆ ಮಜದ ಸ್ಫರ್ಶವೇ ಇರದೇ ಸೊರಗುತ್ತಿದ್ದಾರೆ. ಕೇವಲ ಲಕ್ಷ ಲಕ್ಷ ಡೊನೆಷನ್‍ಗೆ ಬಾಯಿಬಿಟ್ಟು ದುಡ್ಡುಮಾಡುವ ಶಿಕ್ಷಣ ಸಂಸ್ಥೆಗಳು ತನ್ನ ಬಾಹ್ಯ ಚಹರೆ ಹೊರಗಡೆ ತೋರಬಾರದೆಂದು ದೊಡ್ಡ ದೊಡ್ಡ ಕಂಪೌಂಡ್ ಏರಿಸಿ ಸ್ವಾತಂತ್ರ್ಯದ ಆಟಕ್ಕೆ ಬ್ರೇಕ್ ಹಾಕಿ, ಓದು-ಓದು-ಓದು ಎಂದು ಮಕ್ಕಳನ್ನು ಮಂಡೆ ಬಿಸಿಯಲ್ಲೇ ಬೇಯುವಂತೆ ಮಾಡುತ್ತಿರುವುದು ನಿಜಕ್ಕೂ ನೋವು ತರಿಸುತ್ತದೆ.
          ಅಂದು ಇಂದಿನ ಮಣಬಾರದಂತ  ಬ್ಯಾಗ್‍ಗಳು ಬೆನ್ನಲ್ಲಿರುತ್ತಿರಲಿಲ್ಲ. ಇವತ್ತಿನ ಮಕ್ಕಳ ಕುತ್ತಿಗೆಯಲ್ಲಿ ವಾಟರ್ ಕ್ಯಾನ್, ಕೈಯಲ್ಲಿ ಲಂಚ್ ಕ್ಯಾರಿಯರ್ ನೋಡಿದರೆ ಅವುಗಳು ಅಂದು ನಮಗೆ ಯಾವುದೆಂದೆ ಗೊತ್ತಿರಲಿಲ್ಲ. ಮಧ್ಯಾಹ್ನ ಮರದ ಕೆಳಗೆ ಊಟದ ಬುತ್ತಿಯನ್ನು ಹಂಚಿಕೊಂಡು ತಿನ್ನುತ್ತಿದ್ದದ್ದು, ಇರುವುದು ಒಂದೇ ಜೊತೆ ಅಂಗಿ ಚಡ್ಡಿಯಾದರೂ ಅದನ್ನೇ ಒಗೆದು ಒಣಗಿಸಿಕೊಂಡು ಹಾಕಿಕೊಳ್ಳುತ್ತಿದದ್ದು, ಅಣ್ಣ-ಅಕ್ಕ ಬಳಸಿದ ಪುಸ್ತಕವನ್ನೇ ನಾವು ಬಳಸುತ್ತಿದ್ದದ್ದು, ಹಳೇ ನೋಟ್ ಪುಸ್ತಕಗಳಲ್ಲಿ ಖಾಲಿ ಇರುವ ಪುಟಗಳನ್ನು ಮಾತ್ರ ಕಿತ್ತು ರಫ್ ಬುಕ್ ಮಾಡುತ್ತಿದ್ದದ್ದು ಎಲ್ಲವೂ ಇಂದು ಬ್ಲಾಕ್ ಆ್ಯಂಡ್ ವೈಟ್ ಚಿತ್ರವಷ್ಟೆ.
 ಇಂದಿನ ಜನರೇಷನ್ ಮಕ್ಕಳಿಗೆ ಈ ಎಲ್ಲಾ ವೈವಿಧ್ಯತೆಯ ಬಗ್ಗೆ ಎಷ್ಟು ಗೊತ್ತಿರಬಹುದು ಎಂದು ಚಿಂತಿಸಿದಾಗ, ಮೊದಲು ನನಗೆ ಕಾಡುವುದೇ ಓದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎನ್ನುವ ಭಯ. ಅಪ್ಪ ಅಮ್ಮಂದಿರು, ಕನ್ನಡ ಮಾತಾಡಲೂ ಬೇಡ, ಕನ್ನಡ ಮೀಡಿಯಂ ಸ್ಕೂಲ್ ಅಂತೂ ಬೇಡವೇ ಬೇಡ ಎಂಬಂತೆ ಎಷ್ಟೇ ಬಡತನದಲ್ಲಿ ಬೇಯುತ್ತಿದ್ದರೂ ಮಗುವನ್ನೂ ಇಂಗ್ಲೀಷ್ ಮೀಡಿಯಂ ಸ್ಕೂಲ್‍ಗೆ ಲಕ್ಷಾಂತರ ಹಣ ಖರ್ಚುಮಾಡಿ ಸೇರಿಸುತ್ತಿದ್ದಾರೆ. ಬೆಳಿಗ್ಗೆ ಎದ್ದರೆ ಶುರುವಾಯ್ತು ದಿನದ ವೈಖರಿ, ಮಗುವಿಗೆ ಖಡಕ್ ಐರನ್ ಶರ್ಟ್ ಹಾಕಿಸಿ, ತಲೆ ಬಾಚಿ, ಪೌಡರ್ ಬಳಿದು, ಅಂದ ಚಂದವಾಗಿಸಿ, ಸ್ಕೂಟಿಯಲ್ಲೋ, ವ್ಯಾನ್‍ನಲ್ಲೋ ಶಾಲೆಗೆ ಭರ-ಭರನೇ ಕರೆದುಕೊಂಡು ಹೋಗಿ ಕಂಪೌಂಡ್ ಒಳಗೆ ಕಾರಾಗೃಹದೊಳಗೆ ಬಿಟ್ಟಂತೆ ದೂಡಿ ಬರುತ್ತಾರೆ. ಇನ್ನೂ ಒಳಗೋದ ಮಕ್ಕಳ ಪಾಡಂತು ಅಯ್ಯೋ ಎಂದರೂ ಇಲ್ಲ, ಅಮ್ಮಾ ಎಂದರೂ ಇಲ್ಲ...
       
ಆಧುನಿಕ ಶಿಕ್ಷಣ ಪದ್ಧತಿಯಿಂದ ಸ್ಫರ್ಧೆಗಿಳಿದಿರುವ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ದುರಂತ ಎನ್ನಬಹುದು. ವಿಕಸನದ ಹಾದಿ ಹಿಡಿದಿರುವ ತಂದೆ ತಾಯಿಗಳು ಮಕ್ಕಳನ್ನು ಅದೇ ಹಾದಿಗೆ ಕಳುಹಿಸಲು ಇದ್ದಾಡುತ್ತಿದ್ದಾರೆ. ಬದಲಾವಣೆಯ ಸುಳಿಯಲ್ಲಿ  ಬಾಲ್ಯದ ಅದ್ಭುತತೆಯನ್ನು ಕಳೆದುಕೊಂಡು ಚಲನ ಶೀಲತೆಯನ್ನು ಕೇವಲ ಡಿಜಿಟಲ್ ಯುಗಕ್ಕೆ ಸೀಮಿತ ಮಾಡಿಕೊಳ್ಳುತ್ತಿದ್ದಾರೆ.  ಆಧುನೀಕತೆಗಳ ಶ್ರೀಮಂತಿಕೆಯಲ್ಲಿ ಕಳೆದು ಹೋಗುತ್ತಿರುವ ಬಾಲ್ಯದ ಶ್ರೀಮಂತಿಕೆ, ಶಿಕ್ಷಣ ಹಂತದಲ್ಲೇನೋ ಮಕ್ಕಳನ್ನು  ಪ್ರಭುದ್ಧವಾಗಿಸುತ್ತಿದೆ. ನಾವು ಗೆಳೆಯರು  ಮಾತನಾಡಲು ಕುಳಿತಾಗ  ಬಾಲ್ಯದ ನೆನಪುಗಳ, ಶಾಲಾದಿನಗಳ ಮಜವನ್ನು  ನೆನಪುಮಾಡಿಕೊಂಡು ಹಲ್ಕಿರಿದು ನಗು ನಗುತ್ತಾ ಧನ್ಯ ನಾನು ಎಂಬಂತೆ ಖುಷಿ ಪಡುತ್ತೇವೆ. ಅದನ್ನೆಣಿಸಿದರೆ ಆ ಮಟ್ಟಿಗೆ ನಮ್ಮ ಮಕ್ಕಳು ದುರದೃಷ್ಟವಂತರಾ..,? ಎನ್ನುವ ಪ್ರಶ್ನೆ ಮೂಡುತ್ತೆ. ಆದರೆ ಅದಕ್ಕೂ ಮಿಗಿಲಾದ ಕಂಪ್ಯೂಟರ್, ಇಂಟರ್‍ನೆಟ್, ಪ್ಲೂಯೆನ್ಸ್ ಶಿಕ್ಷಣ ಅವರಿಗೆ ಸಿಕ್ಕಿದೆ. ಊಹಿಸಲಾಗದ ವೈಜ್ಞಾನಿಕ ಆವಿಷ್ಕಾರಗಳು ಅವರ ಕೈಯಲ್ಲಿ ಹರಿದಾಡುತ್ತಿವೆ. ಅದು ಅವರ ಅದೃಷ್ಟವಿರಬಹುದು. ಆದರೂ ಹಿಂದೆ ನಾವನುಭವಿಸಿರುವ ರಜೆಯ-ಮಜ, ಶಾಲೆಯ ರೂಪು-ರೇಷೆ, ಆಟ-ಪಾಠಗಳು, ತೀರಾ ಭಾವನೆಯ ಗೊಂಚಲಿಗೆ ಹತ್ತಿರವಾದಾಗ ಈ ಮುದ್ದು-ಪೆದ್ದು ಅನಿಸಿಕೆ, ಭಾವಲಹರಿಯಲ್ಲಿ ಮೀಟಿ ಆನಂದ ಬಾಷ್ಫ ಹೊಮ್ಮಿಸುತ್ತವೆ. ಆಗ ಆನಿಸುತ್ತದೆ ನಾವೇ ಅದೃಷ್ಟವಂತರು. ಬದಲಾವಣೆಯ ಹಾದಿಯಲ್ಲೇನೋ ನಾವಿದ್ದೇವೆ ಆದರೆ ಬದಲಾಯಿಸುತ್ತಿರುವುದು ಹೆಚ್ಚಾಗಿ ಹಳೆಯ ಮಾದರಿಯ ವಿಶೇಷತೆಗಳನ್ನೇ ಹೊರತು ಹೊಸದಾಗಿ ಬಂದಿರುವ ಕಟ್ಟುಪಾಡುಗಳನ್ನಲ್ಲ... ಥಿಂಕ್ ಡಿಫರೆಂಟ್ಲೀ... ಮುಂದೆ ಅನಿಸಬಹುದು, ಇದೇ ಇರಬಹುದು ನಮ್ಮೆಲ್ಲರ ದುರದೃಷ್ಟ...





 

ಹೆಣ್ಣು -7


        ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಮಾಮೂಲಿ ಎನ್ನುವಂತೆ ನಡೆದು ಹೋಗುತ್ತಲೇ ಇದೆ. ಪ್ರಕರಣಗಳು ನಡೆದ ಬೆನ್ನಲ್ಲೇ ಒಂದಷ್ಟು ಹೋರಾಟ, ಪ್ರತಿಭಟನೆ ಕೊನೆಗೆ ಆರೋಪಿಯ ಸೆರೆ ಅಂತಿಮವಾಗಿ ಆತನಿಗೊಂದಿಷ್ಟು ವರ್ಷದ ಜೈಲು ಸಜೆ ಹೀಗೆ ಏನಿದೆ ಅದರಲ್ಲಿ ಎನ್ನುವಷ್ಟು ಸಾರಾಸಗಟಾಗಿ ಬೆತ್ತಲೆ ಜಗತ್ತು ಹೆಣ್ಣಿನ ಮಾನವನ್ನು ದಿನೇ ದಿನೇ ಬೆತ್ತಲಾಗಿಸುತ್ತಿದೆ. ಅಷ್ಟೇ ಅಲ್ಲದೇ ಸಮಾಜದಲ್ಲಿ ಹೆಣ್ಣಿನ ಶೋಷಣೆ, ಕೀಳರಿಮೆ ಇತ್ಯಾದಿಗಳು ನಡೆಯುತ್ತಲೇ ಇದೆ. ಯಾಕೆ ನಮ್ಮ ಸಮಾಜ ಹೀಗಾಗುತ್ತಿದೆ? ಕಾಮದ ಕ್ರೂರ ಕತ್ತಿಗೆ ಇಂದಿನ ಹೆಣ್ಮಕ್ಕಳು ಬಲಿಯಾಗುತ್ತಿದ್ದಾರೆ? ಇಂತಹ ಸನ್ನಿವೇಶಗಳು ಎದುರಾಗಲೂ ಹೆಣ್ಣಿನ ತಪ್ಪು ಇರಬಹುದಾ? ಕಣ್ಣೇದುರೆ ಅನಿಷ್ಟ ನಡೆದು ಹೋದರೂ ಜನ ಸುಮ್ಮನೆ ಕುಳಿತುಕೊಳ್ಳಲು ಕಾರಣವಾಗುವ ಅನ್ಯ ಷಡ್ಯಂತ್ರಗಳು ನಡೆಯುತ್ತಿವೆಯಾ? ಎನ್ನುವ ಒಂದಿಷ್ಟು ವಿಚಾರಗಳು ಪ್ರಶ್ನೆಗಳಾಗಿ ಮೂಡಿ ಬರುತ್ತವೆ.




ಹಕ್ಕಿ ಬಯಸುವುದು ಬೆಚ್ಚಗಿನ ಗೂಡಿನ ಆಸರೆ, ಮಗು ಬಯಸುವುದು ಅಮ್ಮನ ತೋಳಿನ ಆಸರೆ, ಹಾಗೆಯೇ ಹೆಣ್ಣು ಯಾವಾಗಲೂ ಬಯಸುವುದು ಗಂಡಿನ ಆಸರೆ, ಆದರೆ ಅದೇ ಗಂಡು ಇಂದು ಹೆಣ್ಣನ್ನು ಮೋಹಿಸಿ ತನ್ನ ಭೋಗಕ್ಕಾಗಿ ಉಪಯೋಗಿಸಿ, ಎಲ್ಲ ಸುಖ ಪಡೆದ ಮೇಲೆ ನಿಷ್ಕಾರಣವಾಗಿ ಅವಳ ಮೇಲೆ ವೈರುಧ್ಯ ಸಾಧಿಸಿ, ಅವಳಿಗೂ ನನಗೂ ಯಾವ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಂಡು ನೋವಿನ ಸರಪಳಿಯಲ್ಲೇ ತನ್ನ ಹಟವನ್ನೇ ಸಾಧಿಸುತ್ತಾನೆ. ಸದಾ ಹೆಣ್ಣಿನ ರೂಪ, ಅವಳ ದೇಹಕ್ಕೆ ಹಪಹಪಿಸುವ ಇಂದಿನ ಯುವ ಜನಾಂಗ ಕಾಮದ ಆಸೆಗೆ ಸೋತು, ರೇಪ್ ಎನ್ನುವ ರೌದ್ರವನ್ನು ಮೈಗೂಡಿಸಿಕೊಂಡು ತನ್ನ ಹುಟ್ಟಿಗೆ ಕಾರಣಳಾದ ಹೆಣ್ಣಿನ ಕುಲಕ್ಕೆ ಮಸಿ ಬಡಿದು, ಸಾಯಿಸುವ ಕ್ಷಣದವರೆಗೆ ಮೆರೆಯುತ್ತಿದೆ. ಜಗತ್ತು ಅಪ್ಡೇಟ್ ಆಗಿದೆ ನಾವು ಬದಲಾವಣೆಯ ಗಾಳಿಗೆ ಸಿಲುಕಿದ್ದೇವೆ ಅದೇ ಇಂದು ಇಷ್ಟೆಲ್ಲವುದಕ್ಕೆ ಕಾರಣ ಅನಿಸಿದರೆ ತಪ್ಪೇನು ಇಲ್ಲ. ಇಂದಿನ ಮೊಬೈಲ್ ಒಂದರಿಂದಲೇ ಹೆಣ್ಣು ಗಂಡಿನ ಬಣ್ಣದ ಮಾತಿಗೆ ಮರುಳಾಗಿ ಕಾಮಧಾಟಕ್ಕೆ ಸಿಲುಕಿ ಬೆತ್ತಲಾಗಿ ಬಳಲುತ್ತಿದ್ದಾಳೆ. ಕೆಲವೊಂದು ಪ್ರಕರಣಗಳಲ್ಲಿ ಹೆಣ್ಣಿನ ತಪ್ಪು ಇದೆ ಎನಿಸುತ್ತದೆ. ಯಾಕೆಂದರೆ ಅವಶ್ಯಕತೆಗೆ ಬಂದ ಒಂದಿಷ್ಟು ವಸ್ತುಗಳು ಅವಶ್ಯವಿಲ್ಲದೇ ಉಪಯೋಗಿಸಿ ಇಂದಿನ ಯುವ ಜನಾಂಗ ದಾರಿ ತಪ್ಪುತ್ತಿದೆ.
ಇವೆಲ್ಲವನ್ನು ಬಿಟ್ಟು ಮುಂದೆ ಹೋದರೆ ಹೆಣ್ಣಿಗೆ ಕಿರುಕುಳಗಳೂ ಸಹಜ ಎನಿಸುತ್ತದೆ. ವರ್ಗಗಳ ಪ್ರಾಬಲ್ಯ ಎಷ್ಟೋ ಬಾರಿ ಇನ್ನೊಬ್ಬರಿಗೆ ನೋವಾಗುತ್ತದೆ ಎಂದು ತಿಳಿದರೂ ಮೆರೆಯುತ್ತಲೇ ಇದೆ. ಒಂದು ಹುಡುಗಿ ಒಂಟಿಯಾಗಿ ನಡೆದುಕೊಂಡು ಹೋದರೆ ಆಕೆ ನೋಡುವವರಿಗೆ ಆಟಿಕೆಯ ಗೊಂಬೆಯಂತೆ ಕಾಣುತ್ತಾಳೆ. ಸಮಾಜ ಆಡುವ ಮಾತಿಗೆ ಅವಳ ಮೈ ಮನಸು ಎರಡು ಹದಗೆಡುವಂತಾಗುತ್ತಿದೆ. ರಸ್ತೆಯಲ್ಲಿ ಅಣ್ಣ ತಂಗಿಯರೇ ಇಂದು ಜೊತೆ ಹೋದರೂ ಎನೆಲ್ಲಾ ಮಾತುಗಳು ಕೇಳುವ ಪರಿಸ್ಥಿತಿಗಳು ಬಂದಿವೆ. ಇನ್ನು ಅವಳೊಬ್ಬಳೆ ಅನುಭವಿಸುವ ನೋವುಗಳನ್ನು ಪಟ್ಟಿಗೈದರೆ ಅನುಭವವಾಗುತ್ತದೋ ಇಲ್ಲವೋ ಆದರೆ ಅನುಭವಿಸಿದರೆ ಚೆನ್ನಾಗಿ ಅರಿವಾಗಬಹುದು.
ಹೆಣ್ಣು ಸಮಾಜದ ಕಣ್ಣು ಅವಳೇ ಇಂದು ಸಮಾಜದ ಕಠೋರ ಕಿರುಕುಳ ತಾಳಲಾರದೆ ಮಣ್ಣಾಗುತ್ತಿದ್ದಾಳೆ. ಅವಳು ವಾತ್ಸಲ್ಯಮಯಿ ಎಂಥಾ ಘೋರ ನೋವನ್ನಾದರೂ ತಡೆದುಕೊಳ್ಳುವ ಕ್ಷಮಯಾಧರಿತ್ರಿ ಹಾಗಂತ ಕೆಟ್ಟದ್ದಕ್ಕೆ  ಮಾತ್ರಾ ಬಳಸುತ್ತಿದ್ದರೆ ಖಂಡಿತ ಸಮಾಜ ಕೆಡುವುದಲ್ಲದೇ ಉದ್ದಾರವಂತೂ ಆಗಲ್ಲ. ಆದ್ದರಿಂದ ಇನ್ನಾದರೂ ಎಲ್ಲರೂ ಅವಳ ಉಪಸ್ಥಿತಿಯನ್ನು ಅರಿಯೋಣ ಜೊತೆಗೆ ಗೌರವವನ್ನು ನೀಡೋಣ. ಹೆಣ್ಣೇ ಈ ಮಣ್ಣಿಗೆ ಭೂಷಣವೆನ್ನುವುದನ್ನು ಅರಿಯೋಣ. ಇಂದಿನಿಂದಲೇ ನಾವು ಬದಲಾಗೋಣ, ನಮ್ಮ ತನವನ್ನು ಬದಲಾಯಿಸಿಕೊಂಡು ಸಮಾಜವನ್ನು ಬದಲಾಯಿಸೋಣ.

Friday, 19 June 2015

ನೆನಪಿನಂಗಳದಿಂದ...


“ಊರು ಉಡಿಯೊಳಿಟ್ಟುಕೊಂಡುನಿಂತ ತೆಂಗು ಅಡಿಕೆಯು
ಬೆಟ್ಟಗಳಿಗೆ ಹಗಲಿರುಳು ನೀಲ ನೀಲ ನಿದ್ದೆಯು
ಊರ ಸುತ್ತ ತೆನೆಗಳಿಂದ ತೊನೆವ ಹಸಿರು ಗದ್ದೆಯು
ಮುಗಿಲು ಹರಿದ ಹಾಗೆ ಸುರಿದು ಬಿದ್ದ ನೀರ ಮಳೆಯು
ಸಾಲು ಮರದ ನೆರಳಿನಲ್ಲಿ ಹಾವಿನಂಥಾ ಹಾದಿಯು”
ಇದೇನೂ ಕವಿತೆಯಾ!? ಆಥವಾ ಕಥೆಯಾ!? ಎಂದು ಕೇಳಬೇಡಿ! ಯಾಕೆಂದರೆ ಮೊನ್ನೆ ಮೊನ್ನೆ ಊರಿಗೆ ಹೋಗುವಾಗ ಬಸ್ಸಿನಲ್ಲಿ ಕುಳಿತು ಅನುಭವಿಸಿದ ಪುಳಕವನ್ನು ಕವಿತೆಯ ಮೂಲಕ ಹೇಳಲಾ? ಅಥವಾ ಕತೆಯ ಮೂಲಕ ಹೇಳಲಾ? ಎಂದು ತಿಳಿಯಲಾಗದೆ ಧ್ವಂಧ್ವದಲ್ಲೇ ಭಾವನೆಗಳನ್ನು ಬಚ್ಚಿಟ್ಟು ಕುಳಿತುಕೊಂಡಿರುವೆ. ಮೇಲಿನ ಸಾಲುಗಳನ್ನು ಓದಿ ಕಣ್ಮುಚ್ಚಿ ಮನನ ಮಾಡಿದರೆ ನಿಮಗೂ ನಿಮ್ಮ ಬಾಲ್ಯ, ಆಟ, ಪಾಠ, ಹಳೆಯ ನೆನಪುಗಳು ಮತ್ತೆ ಮನದಲ್ಲಿ ಮೂಡಬಹುದು.
ಒಂದೈದು ದಿನಗಳ ರಜೆ ಪಡೆದು ಊರಿಗೆ ಬಸ್ ಹತ್ತಿದ ನನಗೆ ರಾತ್ರಿಯ ತಂಪಾದ ಗಾಳಿಯಲ್ಲಿ ಒಳ್ಳೆಯ ನಿದ್ದೆಬಂದಿತ್ತು. ಬಸ್ ಶಿರಾಡಿಘಾಟ್  ದಾಟಿ ಮುಂದೆ ಸಾಗಿ ಮಂಗಳೂರನ್ನು ಬಳಸಿ ನಮ್ಮೂರ ಕಡೆ ಸಾಗುವ ಬರದಲ್ಲಿ ಕಿಟಕಿಯಿಂದ ನುಗ್ಗಿದ ಮಳೆಯ ಹನಿಯೊಂದು ಮುಖದ ಮೇಲೆ ಬಿದ್ದು ನಿದ್ರಾದೇವಿಯನ್ನು ಓಡಿಸಿ ಮುಂಜಾನೆÉಯ ಗುಡ್ ಮಾರ್ನಿಂಗ್ ಎಂಬಂತೆ ನನ್ನ ಕಣ್ಣನ್ನು ತೆರೆಸಿತ್ತು. ಕಣ್ಬಿಟ್ಟು ನೋಡಿದರೆ ವಾವ್ಹ್ ಅದೇನೂ ತಂಪು, ಮೆಲ್ಲನೆ ಮಳೆಯ ಜೊತೆಗೆ ತಂಪಾದ ಗಾಳಿ, ನಡುವೆ ಊರು ಕೇರಿಯ ತೆಂಗು ಅಡಿಕೆ ಮರಗಳ ಸಾಲು, ಬೆಟ್ಟಗುಡ್ಡಗಳ ಝರಿ, ಹಸಿರು ಗದ್ದೆ, ಹಾವಿನಂತೆ ಸಾಗುತ್ತಿರುವ ಏರುಪೇರಿನ ಹಾದಿ, ಇವುಗಳ ಮಧ್ಯೆ ನಾನು!. ನಿಜವಾಗಲೂ ಪ್ರಕೃತಿ ಮಾತೆಯ ಮಡಿಲಲ್ಲಿ ನಾವು ಎಷ್ಟು ಎಂಜಾಯ್ ಮಾಡಬಹುದು ಎಂದು ಅನಿಸಿದ್ದೆ ಆ ಘಳಿಗೆ. ಅದಾಗಲೇ ರಾತ್ರಿಯಿಂದ ಎಡೆಬಿಡದೆ ಗಾನದ ಹೊಳೆಯನ್ನೆ ಹರಿಸುತ್ತಿದ್ದ ಹೆಡ್ ಫೋನ್‍ನ್ನು ಕಳಚಿ, ಸಿಕ್ಕಿದ್ದೆ ಸಮಯ ಎಂಬಂತೆ ಬಾಲ್ಯ ಜೀವನದಲ್ಲಿ ಆಡಿದ ಆಟ, ನೋವು, ನಲಿವು ಇತ್ಯಾದಿಗಳನ್ನು ನೆನೆಯುತ್ತಾ ಅಂದಿನ ಕಾಲಕ್ಕೆ ಕಣ್ಮುಚ್ಚಿಕೊಂಡು ಮತ್ತೆ ಜಾರಿದೆ. ಆಗ ಮೂಡಿದ ವಿಚಾರ ಸರಣಿಯೇ  ಈ ನೆನಪಿನಂಗಳ...
ಬೆಚ್ಚನೆಯ ಚಳಿಯ ಮಧ್ಯೆ ಅಮ್ಮ ‘ಏಳು ಮಗಾ ಟೈಮ್ ಏಳಾಯಿತು’ ಎಂದು ಪದೆ ಪದೇ ಕೂಗಿ ಎಬ್ಬಿಸಿದರು  ಇನೈದು ನಿಮಿಷ ಮಲಗಿರ್ತೀನಿ ಇರಮ್ಮಾ ಎಂದು ಪೂಸಿ ಹೊಡೆದು ಅರ್ಧಗಂಟೆಯಾದರೂ ಎಳದೆ  ಮತ್ತೊಂದು ಬೆಡ್ ಶೀಟ್ ಹೊದ್ದು ಮಲಗಿ ಅಪ್ಪನ ಚೀರುವಿಕೆಗೆ ಭಯಪಟ್ಟು ಎದ್ದು ಹಲ್ಲುಜ್ಜಿ ತಿಂಡಿ ತಿನ್ನುವುದು ಮತ್ತೊಂಧರ್ಧ ಗಂಟೆಯಾಗುತ್ತಿತ್ತು.
ಸಮಯ 8 ಆಯಿತೆಂದರೆ ಶಾಲೆಗೆ ಓಡುವ ತರಾತುರಿ, ಬುತ್ತಿ ಕೈಯಲ್ಲಿಟ್ಟು ಬಗಲಿಗೆ ಬೀಣಿಚೀಲ ಸಿಕ್ಕಿಸಿಕೊಂಡು, ಮರೆತು ಹೋದ ಕೊಡೆಯನ್ನು ಮತ್ತೆ ನೆನಪಿಸಿಕೊಂಡು, ಶಾಲೆಗೆ ಮಳೆಯ ನೀರಿನಲ್ಲೇ ಆಡುತ್ತಾ ಮೈ ಒದ್ದೆ ಮಾಡಿಕೊಂಡು ಓಡಿ ಹೋಗಿ ಟೀಚರ್ಗೆ ಮೊದಲ ಬೆಲ್ ಕ್ಕಿಂತ ಮೊದಲೇ ಕೋಪಿ ಪುಸ್ತಕ, ಮಗ್ಗಿ ಬರೆದಿದ್ದನ್ನು ತೋರಿಸಿ ಅಬ್ಬಾ! ನಾನು ಪ್ರಾಮಾಣಿಕ ಎಂಬಂತೆ ಎದೆಯುಬ್ಬಿಸಿಕೊಂಡು ಕ್ಲಾಸ್ ಮುಗಿಸಿ, ಮನೆಯ ಬೆಲ್ ಹೊಡೆಯುವುದನ್ನೇ ಕಾದು, ಪಟ-ಪಟನೇ ಮನೆಗೆ ಬಂದು ಚೀಲ ಬಿಸಾಕಿ, ಪಕ್ಕದ ಮನೆಯ ಹುಡುಗರ ಜೊತೆ ಶಾಲೆಯಿಂದ ಬರುವಾಗಲೇ ಪಾರ್ಟಿಹಾಕಿಕೊಂಡು ಇಲ್ಲಿ ಸೇರೋಣ ಎಂದು ನಿರ್ಧರಿಸಿರುವ ಆಟವನ್ನು ಆಡಲು ರೆಡಿ ಎಂಬಂತೆ ತಿಂಡಿ ತಿಂದು ಮನೆಯಿಂದ ಹೊರಬೀಳುತ್ತಿದ್ದೆವು.
ಆಗೆಲ್ಲಾ ಸಮಯ ಸಿಕ್ಕಾಗ ಈಗಿನ ರೀತಿ ಟಿ.ವಿ, ಮೊಬೈಲ್ ಅಂತ ಸಮಯ ಹಾಳು ಮಾಡುವ ಪರಿ ಇರಲಿಲ್ಲ. ಬೆಳಿಗ್ಗೆ ಎದ್ದಾಗಲೇ ನಮ್ಮ ಕಿವಿಗೆ ಬೀಳುವುದೆಂದರೆ ಅದು ರೇಡಿಯೋ ಧ್ವನಿಗಳು ಮಾತ್ರಾ. ಬೆಳಿಗ್ಗೆಯ ಪ್ರಾರ್ಥನೆ, ಚಿಂತನ, ವಾರ್ತೆ, ಮಧ್ಯಾಹನದ ಭಾವಗೀತೆ. ಚಿತ್ತಗೀತೆಗಳು, ಸಂಜೆಯ ಕೃಷಿರಂಗ, ಯುವವಾಣಿ, ನಾಟಕ, ಇತ್ಯಾದಿಗಳ ರೇಡಿಯೋ ಕಾರ್ಯಕೃಮ ಬಿಟ್ಟರೆ ರಾತ್ರಿ ಪಾಳಯದಲ್ಲಿ ಒಬ್ಬೊಬ್ಬರ ಮನೆಯಲ್ಲಿ ನಡೆಯುವ ಯಕ್ಷಗಾನ ಬಯಲಾಟಗಳಷ್ಠೆ ನಮ್ಮ ಮನರಂಜನೆ. ಈ ಮನರಂಜನೆಗಳನ್ನು ಹೊರತುಪಡಿಸಿದರೆ ನಮ್ಮ ಪ್ರಪಂಚ ನಾವು ಕಂಡಿದ್ದು ನಮ್ಮ ಆಟಗಳಲ್ಲಿ.
ಎಷ್ಟೋ ಬಾರಿ ನಮ್ಮ ಆಟಗಳು ರಾತ್ರಿ ಕನಸಿನಲ್ಲೂ ದಾಳಿ ಇಟ್ಟು ಸೋಲಿಸುವ ಕ್ಷಣದಲ್ಲೇ ನನ್ನನ್ನು ಗೆಲ್ಲಿಸಿ ಕೂಗುವಂತೆ ಮಾಡಿದ್ದು ಉಂಟು. ನಮ್ಮೂರಿನ ಗುಡ್ಡದಲ್ಲಿ ಒಂದು ದೊಡ್ಡ ಮರವಿತ್ತು. ಅದರ ಹೆಸರೆ ‘ಹಾಸಿಗೆ ಗೇರು ಮರ’. ಮರದ ಬುಡಕ್ಕಿಂತ ಅದರ ಕೊಂಬೆಗಳೆ ಬಲು ಅಗಲ. ಇಬ್ಬರೂ ಸರಾಸರಿ ವ್ಯಕ್ತಿಗಳು ನಡೆಯಬಹುದಾದ ಆ ಕೊಂಬೆಗಳ ಮೇಲೆಯೆ ನಮ್ಮ ಆಟ ಸಾಗುತ್ತಿತ್ತು ಅದುವೇ ‘ಮರಕೋತಿ ಆಟ’. ಒಟ್ಟಿಗೆ ಸೇರುವ ಒಂದಿಷ್ಟು ಮಂದಿಯಲ್ಲಿ ಒಬ್ಬನನ್ನು ಸೆಲೆಕ್ಟ್ ಮಾಡಿ ಉಳಿದವರನ್ನು ಆತ ಮೇಲೆ-ಕೆಳಗೆ  ಅಟ್ಟಾಡಿಸಿ ಓಡಿಸಿಕೊಂಡು, ಕೈಯಲ್ಲಿ ಮುಟ್ಟಿ ಔಟ್ ಮಾಡಿ ಆಡುವ ಆಟವೇ ಈ ಮರಕೋತಿಯಾಟ. ಇದು ಥೇಟ್ ಕೋತಿಗಳ ಆಟದಂತೆ ಇರುವುದರಿಂದ ಮರಕೋತಿಯಾಟ ಎಂದೆ ನಮಗೆಲ್ಲಾ ಚಿರಪರಿಚಿತ. ಮರಗಳನ್ನು ಹತ್ತಿಹಾರುವ ಸಂಧರ್ಭ ಆಯತಪ್ಪಿ ಕೆಳಗೆ ಬಿದ್ದರೆ ಕೈಕಾಲು ಮುರಿಯುವುದು ಗ್ಯಾರಂಟಿ ಇದ್ದರೂ ಅದಕ್ಕೆಲ್ಲಾ ಭಯಪಡದೆ ಬೆಳೆದವರು ನಾವು. ಹಾಗೆ ಸಣ್ಣ ಪುಟ್ಟ ಏಟಿಗೆ ಹೆದರುವ ಜಾಯಮಾನವೂ ನಮ್ಮದಲ್ಲ ಬಿದ್ದು ಕೈ ಮುರಿದರೂ ಒಂದು ತಿಂಗಳು ಅಷ್ಟೆ ಕಣೋ ಸರಿಯಾಗುತ್ತೆ ಎಂದು ಕೈಗೊಂದು ಸಿಮೆಂಟ್ ಬ್ಯಾಂಡೆಜ್ ಏರಿಸಿಕೊಂಡು ನಗುತ್ತಲೇ ಇದ್ದೆವು ಆದರೆ ಇಂದಿನ ಮಕ್ಕಳು!.. ಮನೆಯ ಮೆಟ್ಟಿಲಿಂದ ಕೆಳಗೆ ಬಿದ್ದರೂ ಕೈಯೋ ಕಾಲೋ ಡ್ಯಾಮೇಜ್ ಆಗೋದು ಗ್ಯಾರಂಟಿ. ಇದು ಇಂದಿನ ಕಾಲದ ತಪ್ಪೋ, ಹೆತ್ತವರ ಕರುಣೆ ಮಮತೆಯ ತಪ್ಪೋ, ನಮಗ್ಯಾಕೆ!? ಹೇಳಿದರೆ ಕೆರಳುವ ವಿಚಾರ.
        ನಾನು ಓದಿದ್ದು ಸರಕಾರಿ ಶಾಲೆ, ಹಾಗಾಗಿ ಆಗೆಲ್ಲಾ ಆಂಗ್ಲ ಭಾಷೆ ಗೊತ್ತಿರಲಿಲ್ಲ. ‘ಎಳೆ ವಯಸ್ಸು ಸ್ವಚ್ಚ ಮನಸ್ಸು’ ಎಂಬಂತೆ ಆಗಿನ ಮುಗ್ಧತೆಯ ಆಟಗಳು ಇಂದಿನ ಬೆಟ್ಟಿಂಗ್‍ನ ಅಸಂತೋಷದ ಕ್ಷಣದಂತೆ ನೋವನ್ನು ತರುತ್ತಿರಲಿಲ್ಲ. ಬೇಸಿಗೆಯ ರಜೆಯಲ್ಲಿ ಮಾವಿನ ಕಾಯಿಯನ್ನು ಕೊಯ್ದು ಉಪ್ಪು ಊಡಿಕೊಂಡು ಸವಿಯುತ್ತಿದ್ದ ಕಾಲ ಇಂದಿಗೂ ಬಾಯಲ್ಲಿ ನೀರನ್ನು ಸುರಿಸುತ್ತವೆ. ‘ಕಳೆದು ಹೋದ ನೆನಪುಗಳು ಕಳೆದುಕೊಂಡ ಆಭರಣಗಳಂತೆ’ ಅದರ ಮೇಲಿನ ನೋವು.ನೆನಪು ಕಾಡುತ್ತಲೇ ಇರುತ್ತವೆ ಹೊರತು ಎಂದಿಗೂ ಮನಸ್ಸಿನಿಂದ ಮರೆಯಾಗುವುದಿಲ್ಲ. ಅಂದು ಆಡಿದ್ದ ಕುಂಟೆ ಬಿಲ್ಲೆ, ಲಗೋರಿ, ಗೋಲಿ, ಗಿಲ್ಲಿ ದಾಂಡು, ಜೋಕಾಲಿ, ಜೂಟಾಟ, ಬುಗುರಿ, ಗಿರಿಗಿಟ್ಲೆ, ಈಜಾಟ, ಅಳಿಗುಳಿಮನೆ, ಚೌಕಾಬಾರ, ಅವರ್ ಬಿಟ್ ಇವರ್ ಬಿಟ್ ಅವರ್ಯಾರು ಸೇರಿದಂತೆ ಅನೇಕ ಆಟಗಳು ಇಂದು ಮರೆಯಾಗಿ ಏನು?, ಹೇಗೆ? ಎಂಬುದು ಅರಿಯದೆ ಪುಸ್ತಕದಲ್ಲೋ, ಇಂಟರ್‍ನೆಟ್‍ನಲ್ಲೋ ಹುಡುಕಿ ಓದುವ ಕಾಲ ವರ್ತಮಾನದಲ್ಲಿದೆ. ಅಂದಿನ ‘ಕಣ್ಣಾಮುಚ್ಚೆ ಕಾಡೇ ಗೂಡೆ ಉದ್ದಿನ ಮೂಟೆ ಉರುಳೇಹೋಯ್ತು, ನನ್ನಯ ಹಕ್ಕಿ ಬಿಟ್ಟೆ ಬಿಟ್ಟೆ  ನಿಮ್ಮಯ ಹಕ್ಕಿ ಬಚ್ಚಿಕೊಳ್ಳಿ’ ಎಂದಿರುವ ಆಟದ ಹಾಡು ಇಂದು ನೆರೆದು ದೊಡ್ಡವರಾದ ಅದೆಷ್ಟೋ ಪ್ಯಾಟೆಮಂದಿಯ ಹುಡುಗರಿಗೆ ತಿಳಿಯದಿರುವುದು ಬೇಸರ ತರಿಸುತ್ತೆ. ಹಳ್ಳಿಯ ಸೊಗಡಿನಲ್ಲಿ ಬೆಳೆದ ಪ್ರತಿಯೊಬ್ಬರಿಗೂ ಇವುಗಳ ಇಂಗಿತ, ಇಂಪು  ಸಿಕ್ಕೆ ಸಿಕ್ಕಿರುತ್ತೆ. ಆದರೆ ಇಂದು ಹಳ್ಳಿಗಳಲ್ಲೂ ಆಧುನಿಕತೆಯ ಸೋಗಡಿನ ಗಾಳಿ ಬೀಸಿ ಅಲ್ಲಿಯೂ ಕಾಣದಾಗಿರುವುದು ಯಾರ ದುರಾದೃಷ್ಟವೋ ತಿಳಿಯುತ್ತಿಲ್ಲ.
        ನನಗೆ ಈಗಲೂ ನೆನಪಿದೆ ಅಂದು ಎಮ್ಮೆಯನ್ನು ಸ್ನಾನಕ್ಕೆಂದು ನೀರಿಗೆ ಕರೆದುಕೊಂಡು ಹೋಗುವಾಗ ಅದರ ಬಾಲ ಹಿಡಿದುಕೊಂಡು ಹೋಗಿ ಅದರ ಜೊತೆಯೇ ನೀರಿಗೆ ಬೀಳುವ ಆಟ, ಮೊದಲ ಮಳೆಯ ಸಂಧರ್ಭ ಹರಿವ ನೀರಿಗೆ ಕಾಗದದ ದೋಣಿಯನ್ನು ಬಿಟ್ಟು ಅದರಲ್ಲೇ ಖುಷಿ ಪಡುತ್ತಿದ್ದದ್ದು, ಸೈಕಲ್ ಚಕ್ರವನ್ನು ಬಳಸಿ ಸಣ್ಣ ಕೋಲಿಂದ ಓಡಿಸುತ್ತಿದ್ದು, ಹೀಗೆ ಅನೇಕ ವಿಧದಲ್ಲೇ ಅದೆಷ್ಟು ಸಂತೋಷ ಪಡುತಿದ್ವಿ ಎಂದರೆ ಹೇಳಲಾಗದು ಎನಿಸುತ್ತೆ. ಹಾಗೆಯೇ ಎಂದಿಗೂ ಎಂದೆಂದಿಗೂ ಇನ್ನೂ ಅವುಗಳನ್ನು ಸವಿಯುವುದು ಕಷ್ಟ ಅನ್ನಿಸುತ್ತದೆ.
       ಬಾಲ್ಯದ ಆಟ-ಹಾಡು-ಹಸೆ ಇಂದು ಕಾಲದ ತೊರೆಯಲ್ಲಿ ಕೊಚ್ಚಿ ಹೋಗುತ್ತಿದ್ದು, ತಡೆಯಲು ಯತ್ನಿಸುವ ನೆನಪಿನ ಹಾಯಿದೋಣಿಗಳು ಇಲ್ಲದೇ ಎಲ್ಲಾ ಆಟಗಳು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿವೆ. ಅಂದಿನ ಆಟಗಳು ಮನಸ್ಸಿಗೆ ಉಲ್ಲಾಸದ ಜೊತೆ ದೇಹಕ್ಕೆ ಒಂದಿಷ್ಟು ವ್ಯಾಯಾಮವನ್ನು ನೀಡಿ ಆರೋಗ್ಯಕರವಾಗಿರಿಸುತ್ತಿದ್ದವು ಆದರೆ ಇಂದು ಅಂತಹ ಆಟಗಳೇ ಆಡದೇ ಅನಾರೋಗ್ಯಕರ ಕೆಲಸವನ್ನು ಮಾಡುತ್ತಿದ್ದೇವೆ ಎನ್ನಲೂ ವಿಷಾಧಕರವಾಗುತ್ತದೆ. ಹಳೆಯ ನೆನಪುಗಳು ಹೊಸ ಜೀವನವನ್ನು ಕಟ್ಟುತ್ತವಂತೆ ಹಾಗೆ ಅವುಗಳು ನಮ್ಮೆಲ್ಲರ ಬದುಕನ್ನು ವಿಧವಿಧವಾಗಿ ಕಲಿಸಿ ಬೆಳೆಸುತ್ತವೆ ಎನ್ನುವುದರಲ್ಲೂ ಯಾವುದೇ ಅಪಾರ್ಥವಿಲ್ಲ. ಇನ್ನಾದರೂ ಹಳೆಯ ಆಟವನ್ನು ಗುರುತಿಸಿ ಬೆಂಬಲಿಸೋಣ, ಪೋಷಿಸೋಣ ಅಲ್ವಾ!? ವಾಟ್ ಯೂ ಸೇ...

ಹೆಣ್ಣು-6


       'ಬೇಲಿಯೆ ಎದ್ದು ಹೊಲ ಮೆಯ್ದರೆ ಗತಿಯೇನು' ಎಂದು ಹಿರಿಯರು ಯಾವಾಗಲೂ ಹೇಳಿದ್ದು ನನಗೆ ಈಗಲೂ ನೆನಪಿದೆ. ನಾವು ಅವರ ಮಾತನ್ನು ಕೇಳಿದ್ದೆವೆ ಹೊರತು ಎಂದಿಗೂ ಫಾಲೋ ಮಾಡಲಿಲ್ಲ. ಹೆಣ್ಣು ಮಕ್ಕಳು ಸಮಾಜದ ಕಣ್ಣುಗಳಿದ್ದಂತೆ. ಗಂಡು ಮಕ್ಕಳನ್ನು ಅತೀರೇಕದಿಂದ ಕಾಣುವುದು, ಹೆಣ್ಣು ಮಕ್ಕಳನ್ನು ವಕ್ರದೃಷ್ಠಿಯಿಂದ  ಕಾಣುವುದು ಮಾಡಬಾರದು ಅಂತಲೂ ಅವರು ಹೇಳಿ ಹೋಗಿದ್ದಾರೆ. ಆದರೆ ಇಂದೇನಾಗುತ್ತಿದೆ!. ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು, ಗುಲಾಮಿ ಇವಳಲ್ಲ, ಸಲಾಮು ಹೊಡೆಯೊಲ್ಲ ಎಂದು ಮನೆಯಿಂದ ಹೊರಬಿದ್ದು ಅಧಿಕಾರ ಮತ್ತು ಹಕ್ಕುಗಳು ಹಾಗೂ ಜೊತೆಯಲ್ಲಿ ಕರ್ತವ್ಯ ಹಾಗೂ ಜವಾಬ್ಧಾರಿಗಳನ್ನು ಅರಿತುಕೊಂಡಿದ್ದಾಳೆ. ದಕ್ಷತೆ ಎಂಬುದೇನು ಎನ್ನುವುದನ್ನು ಅರಿತಿದ್ದಾಳೆ. ಎಲ್ಲಾ ರಂಗದಲ್ಲೂ ಸಫಲತೆಯನ್ನು ಕಂಡುಕೊಂಡಿದ್ದಾಳೆ. ಇವೆಲ್ಲವೂ ಸಂತೋಷದ ವಿಚಾರವೇ ಆಗಿದೆ. ಆದರೆ ಇಂದು ಅದೇ ಹೆಣ್ಣು ದುಶ್ಚಟಗಳಿಗೆ ದಾಸಿಯಾಗಿ ಸಂಸ್ಕ್ರತಿಯೆಂಬ ಗೆರೆ ದಾಟಿ ಅನಾಚಾರಕ್ಕೆ ಲಗ್ಗೆ ಇಡುತ್ತಿರುವುದು ಭಯ ತರಿಸುತ್ತದೆ.
ಜಗತ್ತು ಬದಲಾಗಿದೆ. ಎಲ್ಲವೂ, ಎಲ್ಲರೂ ಬದಲಾವಣೆಯ ಗಾಳಿಗೆ ಸಿಲುಕಿದ್ದಾರೆ. ನಾಗರಿಕತೆಯು ಬದಲಾಗಿದೆ.
ಹಾಕೋ ಡ್ರೆಸ್‍ನಿಂದ ಹಿಡಿದು ಮಾತಾಡೋ, ಜೀವನ ನಡೆಸೋ ಶೈಲಿಯವರೆಗೂ ಬದಲಾಗಿದೆ. ಹೆಣ್ಣಿನ ಜೀವನಕ್ಕೆ ಬಂದರೆ ಇದು ಇನ್ನೂ ಜಾಸ್ತಿ ಅಳವಡಿಕೆ ಕಂಡಿದೆ ಏನಿಸುತ್ತದೆ. ಆದರೆ ಇಂದಿನ ಹುಡುಗಿಯರ ಅಬ್‍ನಾರ್ಮಲ್ ಏದೆಗಾರಿಕೆಯನ್ನು ಕಂಡಾಗ ಅಚ್ಚರಿ, ಬೆರಗು, ಮೂಡಿ ಎಲ್ಲಾ ಹಾರ್ಮೋನುಗಳ ಮಹಿಮೆ ಎನಿಸುತ್ತದೆ. ಎಲ್ಲೆಂದರಲ್ಲಿ ಬಟ್ಟೆಬಿಚ್ಚಿ ಅರೆಬೆತ್ತಲಾಗಿ ಸಾರ್ವಜನಿಕವಾಗಿ ತೆರೆದುಕೊಳ್ಳುವ,  ಅದನ್ನು ಯಾರೂ ಗಮನಿಸಿಲ್ಲ ಎಂದು ತಮ್ಮ ಪಾಡಿಗೆ ತಾವಿರುವ ವಾತಾವರಣ ನೋಡಿದಾಗ ಅಯ್ಯೋ ಏನಿಸುತ್ತದೆ. ಹಿಂದೆಲ್ಲಾ ಎಲ್ಲೋ ಫೋಟೋಗಳಲ್ಲಿ ಕುಡಿಯುತ್ತಿರುವ, ಸಿಗರೇಟ್ ಸೇದುತ್ತಿರುವ ಫಾರಿನ್ ಹುಡುಗಿಯನ್ನು ಕಂಡರೆ ಬಾಯಿ ಮೇಲೆ ಕೈಯಿಟ್ಟುಕೊಂಡು ಅಬ್ಬಾ ಎಂಥಾ ಕಾಲ ಬಂದಿತಪ್ಪಾ! ಎಂದು ಆಶ್ಚರ್ಯಚಕಿತರಾಗುತ್ತಿದ್ದೆವು. ಆದರಿಂದು ಇಂತಹ ಸೇವನೆಗಳು ನಮ್ಮ ಭಾರತಕ್ಕೂ ಲಗ್ಗೆ ಇಟ್ಟು ಕಾಮನ್ ಎನ್ನುವ ಹಂತಕ್ಕೆ ತಲುಪಿದೆ.
ಸಾಮಾನ್ಯವಾಗಿ ಐಟಿಬಿಟಿ ಕಂಪೆನಿಗಳ ಆವರಣದಲ್ಲಿ ನೀವು ಒಂದು ವಾಕ್ ಮಾಡಿ ನೋಡಿದರೆ ಹುಡುಗಿಯರ ಸಿಗರೇಟ್ ಸೇವನೆಯ ಶೋಕಿ ನಿಮಗೆ ಶಾಕ್ ನೀಡುವುದು ಗ್ಯಾರಂಟಿ. ಹೌದು! ಸಿಗರೇಟ್ ಸೇವನೆ ಕೆಲವರಿಗೆ ಚಟವಷ್ಟೆ ಅಲ್ಲ ಅದೊಂದು ಶೋಕಿಯೂ ಹೌದು. ಎನಾದರೂ ಇದು 21 ಶತಮಾನ ನೋಡಿ ಇಲ್ಲಿ ಮಾನಕ್ಕಿಂತ ಶೋಕಿಯೇ ಇಂಪಾರ್ ಟೆಂಟ್.
 ಫಾರಿನ್ ಸಂಸ್ಕ0ತಿಯವರು ಏನಾದರೂ ಮಾಡಿಕೊಂಡು ಸಾಯಲಿ ಆದರೆ ನಮಗಿದು ಸಮಂಜಸವೇ ಎಂಬುದನ್ನು ನಾವರಿಯಬೇಕು. ಕೇವಲ ಸಿಗರೇಟ್ ಸೇವನೆಯೊಂದರಿಂದಲೇ ತಲೆದೊರುವ ಸಮಸ್ಯೆಗಳನ್ನು ಏಣಿಸಿದರೆ ಇದೆಲ್ಲಾ ಬೇಕಾ ಎನಿಸುತ್ತೆ. ಉಸಿರಾಟದ ಸಮಸ್ಯೆ, ಕಿಡ್ನಿ ವೈಫಲ್ಯ, ಬಂಜೆತನ, ಗರ್ಭಪಾತ, ಕಡಿಮೆ ತೂಕ, ಶಿಶುಮರಣ, ಲೈಂಗಿಕ ನಿರುತ್ಸಾಹತೆ ಹೀಗೆ ಇನ್ನೂ ಅನೇಕ ಸಮಸ್ಯೆ ಈ ಚಟದಿಂದ ನಾವೇ ಆಮುದು ಮಾಡಿಕೊಳ್ಳಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ವಿಶ್ವದ ಶೇಕಡಾ 20ರಷ್ಟು ಅಂದರೆ ಸುಮಾರು 100 ಕೋಟಿಗೂ ಹೆಚ್ಚು ಮಹಿಳೆಯರು ಸಿಗರೇಟು ಸೇದುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆಯಂತೆ.
ಇನ್ನಾದರೂ ಚಿಂತಿಸಿ ಹೆಣ್ಣುಮಕ್ಕಳೆ ನಿಮ್ಮ ಒಂದು ಪರಿವರ್ತನೆ ನಮ್ಮ ದೇಶ, ರಾಜ್ಯ, ಊರು, ಮನೆ, ಇತ್ಯಾದಿಗಳನ್ನು ಬದಲಿಸಿ ಸುಖದ ಬೆಳಕಾಗಬಹುದು, ಸಾರಿ!!, ಈ ಮಾತುಗಳು ಮಧ್ಯ ಮತ್ತು ಧೂಮಲೀಲೆಗೆ ಇಳಿದಿರುವ ನಾರಿಗೆ ಮಾತ್ರಾ. ಮನೆಬೆಳಗುವ ಹೆಣ್ಣು ಸಿಗರೇಟ್ ಬೆಳಗಿದರೆ ಮನೆಗೆ ಜೊತೆಗೆ ದೇಶಕ್ಕೆ ಬೆಂಕಿ ಇಡುತ್ತಿದ್ದಾಳೆ ಎಂದರ್ಥ ಕಾರಣ ಮಾನ ಹಾಗೂ ಜೀವನ ಎರಡು ಹಾರಾಜಾಗುವುದು ಪ್ರಭುತ್ವದ್ದೆ ಹೊರತು ಹುಡುಗಿಯರದಲ್ಲ!..

ಜಗತ್ತಿನಲ್ಲಿಯೇ ಕಷ್ಟದ ಕೆಲಸ ಯಾವುದು ಗೊತ್ತಾ!?

 “ದಿನಂಪ್ರತಿ ಜಗತ್ತಿನಲ್ಲಿ ಅನೇಕ ಜನ ತಮ್ಮ-ತಮ್ಮ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಆದರೆ ಜಗತ್ತಿನಲ್ಲಿಯೇ ಮನುಷ್ಯನಿಗೆ ಅತ್ಯಂತ ಕಷ್ಟವಾದ ಕೆಲಸ ಅಥವಾ ಹೆಚ್ಚು ಕಷ್ಟಕರವಾದ ಕೆಲಸ ಯಾವುದು!!?”...
ಹೀಗೊಂದು ಪ್ರಶ್ನೆ ಕೇಳಿ ತಲೆ ಕೆರೆಯುವಂತೆ ಮಾಡಿದ್ದು, ನಮ್ಮ ಸಿರಿ ಮಾಸ ಪತ್ರಿಕೆಯ ಮೇಲ್ವಿಚಾರಣೆ ಹೊಣೆ ಹೊತ್ತಿರುವ ಭಾವನಾಜೀವಿ ಶ್ರೀಮತಿ ಜೆ.ಎಸ್. ರುಕ್ಮಿಣಿಯವರು. ಪ್ರಶ್ನೆ ಒ0ಥರಾ ಎಲ್ಲರ ಜೀವನಕ್ಕೂ ನೆರೆಟಿವ್ ಅನಿಸಿದ್ದರೂ, ನನ್ನ ಮುಂದೆ ಮೇಡಂ ಈ ಪ್ರಶ್ನೆ ಕೇಳಿದಾಗ ಒ0ದು ಕ್ಷಣ ನನ್ನೋಳಗೆ ನಾನು ಸ್ಥಬ್ಧನಾಗಿಬಿಟ್ಟೆ. ಮನಸ್ಸನ್ನು ಶರವೇಗದಲ್ಲಿ ಓಡಾಟ ಆರಂಭಿಸಿ, ರಾಜ್ಯ, ದೇಶ, ವಿದೇಶದಿಂದ ಹಿಡಿದು, ಸಂಸ್ಕøತಿಯಿಂದ ಸಮಾಜದೊರೆಗೂ, ಅಡುಗೆ ಮನೆಯಿಂದ ಬಚ್ಚಲ ಮನೆಯವರೆಗೂ, ಅಷ್ಟೇ ಏಕೆ ಬೀದಿಯ ಪುಟ್‍ಪಾತ್ ದಾರಿ ಅಂಗಡಿಗಳಿಂದ ಹಿಡಿದು, ಎಮ್.ಎನ್.ಸಿ ಕಂಪೆನಿಯ ಒಳಗೂ ಹೊರಗೂ ಎಲ್ಲಾ ಕಡೆಗಳಲ್ಲೂ ಆಡಿಸಿ, ಓಡಿಸಿ, ತಡಕಾಡಿಸಿ, ಸರ್ಚ್ ಮಾಡಿದರೂ, ಎಲ್ಲೆಂದರಲ್ಲಿ ಯೋಚನೆಯ ತಕಧಿಮಿತವನ್ನೂ ಆರಂಭಿಸಿದರೂ, ಯಾವುದಿರಬಹುದೂ ಈ ಪ್ರಶ್ನೆಗೆ ಉತ್ತರ? ಏನೆಂದೂ ಹೇಳಬಹುದು ಪ್ರತ್ಯುತ್ತರ ಎನ್ನುವ ಕೃಮಾಗತದಲ್ಲಿ ಎಲ್ಲ್ಲಿಯೂ ನಿಖರವಾದ ಉತ್ತರ ನೀಡಲು ತಯಾರಿರದೇ ಸುಮ್ಮನೆ ನಗುಮುಖದಲ್ಲೇ ನಿಂತುಬಿಟ್ಟೆ.
ಪ್ರಶ್ನೆಗೆ ಸಮಜಾಯಿಸಿ ಉತ್ತರವನ್ನು ಮಾತುಬಲ್ಲ ನಾನು ಕೊಡಬಹುದು ಏನಿಸಿದರೂ ಎಲ್ಲೋ ಒಂದು ಕಡೆ ನನ್ನ ಮನಸ್ಸಿನ ನೇರಕ್ಕೆ ನಾ ಹೇಳಿದ್ದು ತಪ್ಪಾಗಲೂಬಹುದು ಎಂದೆನಿಸಿ, ಕೋಲಿಗೆ ಕೋಲು ಎಂಬಂತೆ  ಏನ್ ಸಮಾಚಾರ ಮೇಡಂ!, ನೀವ್ಯಾಕೆ ಈ ಪ್ರಶ್ನೆ ಎತ್ತಿದ್ದು ಈಗ? ಪ್ರಶ್ನೇ ಮೂಡಿದ್ದರ ಸೋಜಿಗ ಕೇಳಬಹುದೇ? ಎಂಬ ನನ್ನ ಇನ್ನೊಂದಿಷ್ಟು ಮರುಪ್ರಶ್ನೆಗಳನ್ನು ಮುಂದಿಟ್ಟೆ.
ನಾನೊಮ್ಮೆ ಕಾರ್‍ನಲ್ಲಿ ಹೋಗುವಾಗ, ರಸ್ತೆಬದಿಗಳಲ್ಲಿ ತಳ್ಳಿಕೊಂಡು ಹೋಗುವ ಸೈಕಲ್ ಗಾಡಿಗಳ ಮೂಲಕ ವ್ಯಾಪಾರ ಮಾಡುವವರನ್ನು ನೋಡಿದಾಗ, ಅವರು ಬೆಳಿಗ್ಗೆಯಿಂದ ಸಂಜೆಯ ತನಕ ಎಷ್ಟೋ ದೂರದೂರಿಗೆ ಹೋಗಿ ಅಲ್ಲಿ ಪದಾರ್ಥಗಳನ್ನು ಮೂಟೆಕಟ್ಟಿಕೊಂಡು ತಂದು ಮನೆ ಮನೆಗೋ, ರಸ್ತೆ ಬದಿಗಳಲ್ಲೋ ನಿಂತು ವ್ಯಾಪಾರ ಮಾಡುವುದನ್ನು ಏಣಿಸಿ ಹೀಗನ್ನಿಸಿತು ಸಂದೀಪ್ ಎಂದರು ಮೇಡಂ.
ಓಹೋ ಹೀಗಾ ಸಮಾಚಾರ ಆದ್ರೂ ವಾವ್ಹ್ ಸೂಪರ್ ಪ್ರಶ್ನೆ ...ಮೇಡಂ ರೀಯಲೀ ನನ್ನಲ್ಲಿ ಗರಿಗೆದರಿ ದಿನವೂ ಹೊಸತನ್ನು ಹುಡುಕುವ ಭಾವನೆಗೆ ಇನ್ನಷ್ಟೂ ಕೆಲಸ ಸಿಕ್ಕಂತಾಯಿತು. ಥ್ಯಾಂಕ್ಯೂ ಮೇಡಂ ಎನ್ನುತ್ತಾ ಇಂಥಹ ಪ್ರಶ್ನೆಗಳಿಗೆ ತಕ್ಷಣ ಉತ್ತರ ನೀಡುವುದು ಮೂರ್ಖತನವೆನಿಸುತ್ತದೆ, ನನಗೆ ಒಂದಿಷ್ಟು ಸಮಯ ಬೇಕೆ ಬೇಕು ವಿಷಯ ವೈವಿಧ್ಯವನ್ನುಆಲೋಚಿಸಿ, ಸಮಾಲೋಚಿಸಿ, ಸಂಧರ್ಭದಲ್ಲಿ ನಿಮಗೆ ಉತ್ತರಿಸುತ್ತೇನೆ ಎಂದು ಕ್ಯಾಬಿನ್ ಹೊರಬಂದೆ.
ಈಗ ನಿಮ್ಮ ಮೈಂಡ್‍ನಲ್ಲೂ ಇದೇನೂ ಅಷ್ಟೊಂದು ಕಷ್ಟದ ಪ್ರಶ್ನೆಯಾ ಎಂದೆಸುತ್ತಿರಬಹುದು ಅಲ್ವಾ? ಆದರೆ ನನ್ನ ಮನಸ್ಸೆ ಹಾಗೆ, ಯಾವುದನ್ನೂ, ಯಾರನ್ನೂ ಅಷ್ಟು ಸುಲಭವಾಗಿ ಒಪ್ಪಿಕೊಂಡು ಬಿಡುವ ಜಾಯಮಾನದಲ್ಲ್ಲ ಅದು. ಏನಿದ್ದರೂ ನೆಕ್ಕಿ ರುಚಿನೋಡಿದ ಬಳಿಕವೇ ಒಪ್ಪೋ- ಉಪ್ಪೋ, ಚಪ್ಪೆಯೋ- ಹುಳಿಯೋ ಎಂದು ಪ್ರರಿಭ್ರಮಿಸುವುದು. ಸುಲಭವಾಗಿ ಒಪ್ಪಿಕೊಳ್ಳುವುದು, ಉತ್ತರ ನೀಡೋದು, ಪೆದ್ದುಪೆದ್ದಾಗಿ ಉತ್ತರದ ಮಾತನಾಡುವುದು ನನ್ನ ಪ್ರಕಾರ ಸಮಂಜಸವೂ ಅಲ್ಲ. ನಾನೊಂದು ಪರಿಸರಕ್ಕೆ ವಾಸಿಸಿಕೊಂಡಿದ್ದನ್ನು ಏಣಿಸಿ ಮೇಲಿನ ಪ್ರಶ್ನೆಗೆ ಉತ್ತರ ಹೇಳಿದರೆ, ಅಲ್ಲಿ ಕೆಲಸ ಮಾಡುವವರ ಅನೇಕಾನೇಕ ಕೈಂಕರ್ಯವನ್ನು ಗಮನಿಸಿ ಹೇಳಿದರೆ, ಪ್ರತಿ ಕೆಲಸವವೂ ಅವರವರ ಭಾವನೆಗಳಿಗೆ ಹೊಂದಿಕೊಂಡು ಅರುಹಿದರೆ ಮನದಾಳದಲ್ಲಿ “ಕಷ್ಟ ಕಷ್ಟ ಅದು ಕಷ್ಟವೇ” ಎಂಬ ಉತ್ತರ ಬರುತ್ತೆ. ಅದು ವ್ಯಕ್ತಿ, ವರ್ಗ, ಎನ್ನುವುದಕ್ಕಿಂತ ಮನಸ್ತಿತಿ ಅನ್ನಬಹುದೇನೋ ಎನಿಸುತ್ತೆ. ಸರ್ಕಾರದ ಹತ್ತಿರ ಈ ಪ್ರಶ್ನೆ ಎತ್ತಿದರೆ ಮಲ ಎತ್ತುವುದು ಅತ್ಯಂತ ಅಸಹ್ಯಕರ ಹಾಗೂ ಕಷ್ಟದ ಕೆಲಸ ಎನ್ನುವ ವೈರುಧ್ಯದ ಉತ್ತರ ಕೊಟ್ಟರೆ, ರಸ್ತೆಯಲ್ಲಿ ಡಾಂಬರ್ ಕೆಲಸ ಮಾಡುವುದು ಅತ್ಯಂತ ಬೇಗೆಯ ಕಷ್ಟದ ಕಾಯ ಎಂದು ನಾನು ಉತ್ತರಕೊಡುವೆ ಆದರೆ ಇದು ನಮ್ಮ ನೇರಕ್ಕೆ ಅಷ್ಟೆ.


ಸತ್ಯ ಜಿಜ್ಞಾಸೆಯಿಂದ ಮಥಿಸಿ ಸಿಗಬೇಕು ಎಂದು ಹೇಳುತ್ತಾರೆ ಆದರೆ ಇಲ್ಲಿ ಜಿಜ್ಞಾಸೆ ಯಾವುದು!? ಸತ್ಯ ಯಾವುದು!? ಎನ್ನುವ ಭಾವನೆಗಳನ್ನು ಅಂತಃಕರಣವನ್ನು ಕಾಡುತ್ತವೆ ಅದಕ್ಕಾಗಿ ನೋಡೋಣ ಈ ಪ್ರಶ್ನೆಯನ್ನು ಜನಕ್ಕೆ ಎದುರಿಟ್ಟರೆ ಅವರ ಬಾಯಿಂದ ಯಾವ್ಯಾವ ಉತ್ತರಗಳು ಬರುತ್ತವೆ ಎಂದು ಒಂದು ಸಮೀಕ್ಷೆಯನ್ನು  ಆರಂಭಿಸಿಯೇ ಬಿಟ್ಟೆ.
ನನ್ನ ಮೊದಲ ಪ್ರಯತ್ನವೆಂಬಂತೆ ಫೇಸ್‍ಬುಕ್‍ನ ಗೆಳೆಯರಿಗೆ ಈ ಪ್ರಶ್ನೆ ಮುಂದಿಟ್ಟೆ. ಉತ್ತರಗಳು ಬಹುಬೇಗನೆ ಬಗೆ ಬಗೆಯಲಿ ಟೈಮ್ ಲೈನ್‍ನ ಕಮೆಂಟ್‍ಬಾಕ್ಸ್‍ಗೆ ನಾ ಮುಂದೆ ತಾ ಮುಂದೆ ಎಂಬಂತೆ ಬಂದಿಳಿದವು. ಮನೆಯಲ್ಲಿ ಅಮ್ಮ ಮಾಡುವ ಕೆಲಸ ಅವಳು ನಮಗಾಗಿ ಕಷ್ಟಪಡುವುದನ್ನು ನೋಡಿದರೆ ಅವಳಿಗೆ ಜೀವನದಲ್ಲಿ ಕಷ್ಟದ ಕೆಲಸ ಇರೋದು ಅಂತ ಆತ್ಮೀಯನೊಬ್ಬ ಹೇಳಿದರೆ, ರೈತ ಎಲ್ಲರಿಗಿಂತ ಹೆಚ್ಚು ಕಷ್ಟ ಪಡುವವ, ದೇಶ ಕಾಯೋ ಸೈನಿಕ ಪ್ರಾಣ ಒತ್ತೆ ಇಟ್ಟು ಹೋರಾಡುತ್ತಿರುತ್ತಾನೆ. ಚಳಿಯಲ್ಲಿ ಅವನ ಪಾಡು ಅದೆಷ್ಟು ಕಷ್ಟವೆಂದರೆ ಹೇಳತೀರದು ಎಂದು ಮತ್ತೊಬ್ಬಳು ಗೆಳತಿ ಉತ್ತರಿಸಿದಳು. ಮತೊಬ್ಬ “Very urgent but not important, Very important but not urgent” ಎನ್ನುವ ಹಾಸ್ಯ ಸಮರ್ಥನೆಯನ್ನು ಹೇಳಿದ್ದ. ಕಂಪೆನಿಯಲ್ಲಿ ಕೆಲಸ ಮಾಡುವ ಎಜ್ಯುಕೇಟೆಡ್ ಮಿತ್ರ ಪ್ರಾಡಕ್ಟ್ ಗಳನ್ನು ತಯಾರಿಸುವಾಗ ಅದರ ರುಚಿ (taste)   ನೋಡುವ ಕೆಲಸ ಮಾಡುತ್ತಾರಲ್ಲ (ಉದಾ; ಸಿಗರೇಟ್, ಕೂಲ್ ಡ್ರಿಂಕ್ಸ್, ವೈನ್ ಇಲ್ಯಾದಿಗಳ ರುಚಿ ನೋಡುವುದು) ಅದು ತುಂಬಾನೆ ಕಷ್ಟ ಮಗಾ ಎಂದ. ಯಾವುದು ನಂಬುವುದು!?,ಯಾವುದು ಬಿಡುವುದು!?, ಆದರೂ ಇವ್ಯಾವುದು ಸರಿಯಾದ ಉತ್ತರವೆಂದು ಅನಿಸದೇ ಮುಂದಿನ ಸಮೀಕ್ಷೆಯತ್ತ ಮುಂದುವರಿದೆ. ನಿಮ್ಮ ಮನದಲ್ಲೂ ಈಗ ಪ್ರಶ್ನೆಗೆ ಉತ್ತರದ ಆಲೋಚನೆಗಳು ಅದಾ ಇದಾ ಎಂದು ಮೂಡಿ ಹುಳ ಬಿಟ್ಟಂತೆ ಆಗುತ್ತಿರಬಹುದಲ್ವಾ. ಸ್ವಲ್ಪ ಇರೀ ಇನ್ನೂ ಒಂದಿಷ್ಟು ಹಿರಿಯ ಕಿರಿಯರನ್ನು ವಿಚಾರಿಸಿದಾಗ ಅವರು ಹೇಳಿದ ಉತ್ತರ ಹೇಳುತ್ತೇನೆ ಓದಿ.
ಹಿಂದಿ ಚಿತ್ರರಂಗದ ಖ್ಯಾತ ನಟಿ ಸೋನಂ ಕಪೂರ್‍ಗೆ  ಸೆಟ್‍ನಲ್ಲಿ ಮನೆಯವರ ಜೊತೆ ನಟಿಸುವುದು ಕಷ್ಟದ ಕೆಲಸವಂತೆ. ಪ್ರಸಿದ್ದ ರಾಜಕಾರಣಿಯೊಬ್ಬ ಹೇಳಿದ ಹಾಗೆ ಅವನಿಗೆ ಕನಸುಗಳನ್ನು ಅನುಷ್ಠಾನಕ್ಕೆ ತರುವುದು ಕಷ್ಟವಂತೆ. ಪರಭಾಷಾ ನಟಿ ನಮಿತಾಗೆ ನಿರ್ಧೇಶನ ಮಾಡುವುದು ಕಷ್ಟ ಅನಿಸುತ್ತದೆ. ಗ್ಯಾಂಗ್‍ಸ್ಟರ್, ಫ್ಯಾಷನ್, ಕ್ವೀನ್, ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಯಾಗಿ ಮಿಂಚಿರುವ ಕಂಗನಾ ರನೋಟ್‍ಗೆ ದ್ವಿಪಾತ್ರದಲ್ಲಿ ನಟಿಸೋದು ಕಷ್ಟದ ಕೆಲಸ ಅನ್ನಿಸುತ್ತದಂತೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಕಷ್ಟ ಬದುಕಲ್ಲಿ.
ಕೆಲವರಿಗೆ ಉತ್ತಮ ವ್ಯಕ್ತಿಯಾಗುವುದು ಕಷ್ಟ ಎನಿಸಿದರೆ ಇನ್ನೂ ಕೆಲವರಿಗೆ ಮರಣೋತ್ತರ ಪರೀಕ್ಷೆ ಮಾಡುವುದು ಕಷ್ಟ ಎನಿಸುತ್ತದಂತೆ. ಇಲ್ಲಿ ಪರಾಮರ್ಶೆಗೆ ಇಳಿದರೆ ಮಾನಸಿಕ ವಿಕ್ಷಿಪ್ತತೆಗೆ ಒಳಗಾಗುತ್ತೇವೆ. ಸರ್ಕಾರಿ ಅಧಿಕಾರಿಯೊಬ್ಬ ಬಡತನದ ರೇಖೆ ನಿರ್ಧರಿಸುವುದು ಕಷ್ಟದ ಕೆಲಸ ಎಂದರೆ, ಹಿರಿಯರ ಬದುಕಿನ ಒಳ ಅರ್ಥಗಳನ್ನು ಅರಿಯೋದು ಕಷ್ಟವೆಂದು  ವೃದ್ಧಾಶ್ರಮದ ಸಂಘಟಕರು ಹೇಳುತ್ತಾರೆ. ಖೈದಿಗಳನ್ನು ಕಾಯುವ ಜೈಲರ್ 500ಕ್ಕಿಂತ ಹೆಚ್ಚು ಖೈದಿಗಳು ಜೈಲಲ್ಲಿ ತುಂಬಿದಾಗ ಅವರನ್ನು ನೋಡಿಕೊಳ್ಳೋದು ಕಷ್ಟದ ಕೆಲಸ ಎಂದರೆ,  ಖೈದಿಯೊಬ್ಬ ಸೆರೆಮನೆಯಲ್ಲಿ ಖುರ್ಚಿ ನೇಯುವ ಕೆಲಸ ಕಷ್ಟ ಅಂತಾನೆ. ವಿದ್ಯಾರ್ಥಿ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ ಕಣ್ರೀ ಎಂದರೆ ಕಲಾವಿದನೊಬ್ಬ ರೇಖೆಯಲ್ಲಿ ಡೊಂಬರಾಟ ನಡೆಸುವುದು ಕಷ್ಟದ ಕೆಲಸವೆಂದು ಹೇಳುತ್ತಾನೆ. ಹೌಸ್ ವೈಫ್ ಆಗಿರುವುದು ಕಷ್ಟವೆಂದು ಮಹಿಳಾ ಮಣಿಯೊಬ್ಬಳು ಹೇಳಿದರೆ, ಶಾಸಕರಾಗಿ ಕಾರ್ಯನಿರ್ವಹಿಸುವುದು ಕಷ್ಟದ ಕೆಲಸವೆಂದು ಎಂ.ಎಲ್.ಎ ಯೊಬ್ಬರು ಹೇಳುತ್ತಾರೆ. ಸಿಟಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದು ಕಷ್ಟ ಎಂದು ಒಬ್ಬ ಹೇಳಿದರೆ ಕಾಮಿಡಿ ಪಾತ್ರಗಳನ್ನು ನಿರ್ವಹಿಸುವು ಕಷ್ಟದ ಕೆಲಸವೆಂದು ನಟನೊಬ್ಬ ಹೇಳುತ್ತಾನೆ... ಹೀಗೆ ಮನಸ್ಥಿತಿಯ ನೇರಕ್ಕೆ ಅವರರವರ ಕಷ್ಟವೆಂದರೆ ಪ್ರಶ್ನೆಯೆಂಬ ಹುಳಕ್ಕೆ ವಿಷವೆಂಬ ಉತ್ತರ ಆಗಬಹುದು.
ಬಹುಶಃ ಈ ಪ್ರಶ್ನೆಗೆ ಇದೇ ರೀತಿ ಉತ್ತರ ನೀಡುತ್ತಾ ಹೊರಟರೆ ನಿಮಗೂ ಹೌದು ಹೌದು ಎನ್ನಿಸುತ್ತಲೇ ಹೋಗಬಹುದು ಅದಕ್ಕಾಗಿ ಒಂದು ಪುಟ್ಟ ದೇವತೆಗಳ ಕಷ್ಟ ಎಂಬ ಕಥೆಯನ್ನು ಹೇಳಿ ಲೇಖನ ಮುಗಿಸುತ್ತೇನೆ ಕೇಳಿ...

ಇಳಿಸಂಜೆಯ ಹೊತ್ತಲ್ಲಿ ಇಬ್ಬರು ದೇವತೆಗಳು ನಗರದ ಹೊರಬಾಗಿಲಲ್ಲಿ ಪರಸ್ಪರ ಬೇಟಿಯಾದರು. ಅನೇಕ ದಿನಗಳ ನಂತರ ಅವರ ಬೇಟಿಯಾಗಿದ್ದರಿಂದ ಉಭಯಕುಶಲೋಪರಿಯ ಜೊತೆಗೆ ಬದುಕಿನ ಹಾದಿಯ ಕೆಲಸಗಳ ಬಗ್ಗೆಯೂ ಮಾತುಕತೆಗಳನ್ನು ನಡೆಸುತ್ತಾ. ಒಬ್ಬ ದೇವತೆ ಇನ್ನೊಬ್ಬಳಿಗೆ ಕೇಳಿದರು, ‘ನಿನ್ನ ಕೆಲಸ ಹೇಗೆ ನಡೆದಿದೆ. ಈಗ ನಮ್ಮ ನಾಯಕರು ನಿನಗೆ ಯಾವ ಕೆಲಸ ವಹಿಸಿದ್ದಾರೆ.ಎಂದು ಕೇಳಿದಳು. ಅಯ್ಯೋ ಅದನ್ನೇನು ಕೇಳುತ್ತೀಯಾ?. ನಿನಗೇ ಗೊತ್ತಲ್ಲ, ನಮಗೆ ಕೆಲಸಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ವಿದೆಯೇ?. ನಾಯಕರು ಕೊಟ್ಟಿದನ್ನು ಮಾಡಬೇಕು. ಸದ್ಯ ನೀಚ ಮನುಷ್ಯನನ್ನು ಹಿಂಬಾಲಿಸುವ, ಅವನ ಕಾಳಜಿ ಮಾಡುವ ಕೆಲಸ. ಅವನೋ ಪರಮ ನೀಚ, ಕಣಿವೆ ಪ್ರದೇಶದಲ್ಲಿ ವಾಸವಾಗಿದ್ದಾನೆ. ಇದು ತುಂಬ ಕಷ್ಟದ ಕಾರ್ಯ. ಆದರೆ ನಾನು ಅತ್ಯಂತ ಪರಿಶ್ರಮದಿಂದ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದೇನೆ’. ಇದಕ್ಕೆ ಇನ್ನೊಬ್ಬ ದೇವತೆ ಉತ್ತರಿಸುತ್ತಾ ‘ಹಾಗಾದರೆ ನಿನ್ನ ಕೆಲಸವೇ ವಾಸಿ. ನೀಚರನ್ನು ಉದ್ಧರಿಸುವುದು ಸುಲಭ. ನಾನು ಕೆಲವರನ್ನು ಉದ್ಧರಿಸಿದ್ದೇನೆ.ಅದೇನು ಮಹಾ!. ನನ್ನ ಪಾಡು ಕೇಳಿದರೆ ನಿನ್ನದೇ ವಾಸಿ. ನನ್ನ ಕೆಲಸ ತುಂಬ ಕಷ್ಟಕರವಾದದ್ದು. ನನಗೊಬ್ಬ ಧರ್ಮಗುರುವನ್ನು ನೋಡಿಕೊಳ್ಳುವ ಕರ್ಮಬಂದಿದೆ. ಅವನು ತನ್ನದೇ ಸಾಮ್ರಾಜ್ಯದಲ್ಲಿದ್ದಾನೆ. ಇದಕ್ಕಿಂತ ಕಷ್ಟದ ಕೆಲಸ ಯಾವುದೂ ಇರಕ್ಕಿಲ್ಲ’ ಎಂದಳು.
ಇನ್ನೊಬ್ಬಳು ಬಿಟ್ಟಾಳೆಯೇ. ‘ಎಷ್ಟು ಅಹಂಕಾರ ನಿನಗೆ. ನಿನ್ನ ಕೆಲಸವೇ ಮುಖ್ಯ ಮತ್ತು ಕಷ್ಟದ್ದೇ. ನೀನು ಕೆಲವು ನೀಚರನ್ನು ಸರಿಮಾಡಿದ್ದಿರಬಹುದು. ಆದರೆ, ಇವನನ್ನು ಕಂಡವರೆಲ್ಲ ಗುಣಗಾನ ಮಾಡುತ್ತಾರೆ. ಏಕಾಂತದಲ್ಲಿ ಸದಾ ಅವನಿಗೆ. ಯಾರಿಗೆ, ಎಲ್ಲಿ ಎಷ್ಟು ಮೋಸ ಮಾಡಬೇಕು ಎಂಬುದೊಂದೇ ಯೋಚನೆ. ಅವನ ಮನಸ್ಸು ಎಂದಿಗೂ ಸರಿಯಾದ ದಾರಿಯಲ್ಲಿ ಚಿಂತಿಸುವುದಿಲ್ಲ. ಇಂಥವನನ್ನು ನಿಭಾಯಿಸುವ ಕೆಲಸ ನಿನಗೆ ಸಿಕ್ಕಿದ್ದರೆ ಕಷ್ಟ ಅರ್ಥವಾಗುತ್ತಿತ್ತು’. ಎಂದು ಹೂಂಕರಿಸಿದಳು. ಮೊದಲನೆಯವಳಿಗೆ ಕೋಪ ಉಕ್ಕೇರಿತು. ‘ನಿನ್ನ ಸ್ವಭಾವ ನನಗೆ ಗೊತ್ತು. ಮೊದಲಿನಿಂದಲೂ ನೀನು ಹಾಗೆಯೇ. ಯಾವಾಗಲೂ ನಿನ್ನ ಕೆಲಸವೇ ದೊಡ್ಡದು, ನೀನೇ ಶ್ರೇಷ್ಠ ಅಲ್ಲವೇ. ನಾನು ನೋಡಿಕೊಳ್ಳುತ್ತಿರುವುದು ಒಬ್ಬ ಧರ್ಮಗುರುವನ್ನು. ಅವನನ್ನು ಧಾರ್ಮಿಕನನ್ನಾಗಿಯೇ ಇಡಲು ನಾನು ಪಡುತ್ತಿರುವ ಕಷ್ಟ  ಯಾರಿಗೂ ತಿಳಿಯದು. ಅವನು ಧರ್ಮಕಾರ್ಯಗಳನ್ನು ಬಿಟ್ಟು ಇನ್ನೆಲ್ಲವನ್ನೂ ಮಾಡುತ್ತಾನೆ. ಅವನಷ್ಟು ಅನಾಚಾರಗಳನ್ನು ನೀನು ನೋಡಿಕೊಳ್ಳುತ್ತಿರುವ ಪಾಪಿಯೂ ಮಾಡಲಿಕ್ಕಿಲ್ಲ. ಅವನನ್ನು ನಿಧಾನವಾಗಿ ದಾರಿಗೆ ತರುತ್ತಿದ್ದೇನೆ. ನನ್ನ ಕೆಲಸವೇ ದೊಡ್ಡದು’ ಎಂದಳಾಕೆ ಉಗ್ರವಾಗಿ.
ಮಾತಿಗೆ ಮಾತು ಬೆಳೆಯಿತು. ಮಾತು ಜಗಳವಾಯಿತು. ಜಗಳ ಜಗಮಗಿಸಿತು. ದೇವತೆಗಳಾದರೇನಂತೆ ಅವರಿಗೂ ಸಿಟ್ಟು, ಅಹಂಕಾರ ಇದ್ದದ್ದೇ. ಕೊನೆಗೆ ಕೈಕೈಮಿಲಾಯಿಸುವ ಸಂದರ್ಭ ಬಂದಿತು. ಆಗ ಭಗವಂತನ ಆಗಮನ ಅನಿವಾರ್ಯವಾಯಿತು. ಆತ ಬಂದು ಜಗಳ ನಿಲ್ಲಿಸಿದ. ಇಬ್ಬರೂ ತಮ್ಮ ತಮ್ಮ ವಾದಗಳನ್ನು ಮಂಡಿಸಿ ಹೇಗೆ ತಮ್ಮ ಕಾರ್ಯವೇ ಶೇಷ್ಠವಾದದ್ದು ಎಂದು ಅರುಹಿದರು. ಭಗವಂತ ತಾಳ್ಮೆಯಿಂದ ಇಬ್ಬರ ಮಾತುಗಳನ್ನು ಕೇಳಿಸಿಕೊಂಡು ಹೇಳಿದ, ‘ನಾನು ಈಗಲೇ ಯಾರ ಕಾರ್ಯ ಹೆಚ್ಚು ದೊಡ್ಡದು, ಜವಾಬ್ದಾರಿಯಾದದ್ದು ಎಂದು ಹೇಳಲಾರೆ.
ಆದರೆ ನಿಮಗಿಬ್ಬರಿಗೂ ಒಂದು ವಿಷಯ ಖಚಿತವಾಗಿದೆ. ಅದೇನೆಂದರೆ ಇನ್ನೊಬ್ಬರ ಕೆಲಸ ಸುಲಭವಾದದ್ದು. ಆದ್ದರಿಂದ ನಿಮಗೆ ನಿಮ್ಮ ಕೆಲಸಗಳನ್ನು ಹಗುರಮಾಡಿಕೊಳ್ಳಲು ಈ ಕ್ಷಣದಿಂದ ನೀವು ಮಾಡುತ್ತಿರುವ  ಕಾರ್ಯಗಳನ್ನು ಅದಲುಬದಲು ಮಾಡಿದ್ದೇನೆ. ನೀವಿನ್ನು ಹೊರಡಿ’, ಇಬ್ಬರೂ ತಮ್ಮ ಕೆಲಸ ಕಡಿಮೆಯಾಯಿತೆಂಬ ಸಂತೋಷದಲ್ಲಿ  ಕುಣಿಯುತ್ತ ಹೋದರು. ಒಂದು ವಾರದ ನಂತರ ಮತ್ತೆ ಬೇಟಿಯಾದಾಗ ಮತ್ತೆ ಅದೇ ವಾದ ಮಾಡುತ್ತಾ ಈಗ ನಾವು ನಿರ್ವಹಿಸುತ್ತಿರುವ ತಮ್ಮ ಕೆಲಸವೇ ಕಷ್ಟದ್ದು ಎಂದು ಜಗಳಕ್ಕಿಳಿದರು.
ನಾವೂ ಹಾಗೆಯೇ . ನಮ್ಮ ಕಷ್ಟವೇ ದೊಡ್ಡದು, ನಮ್ಮ ಸಾಧನೆಯೇ ಹೆಚ್ಚಿನದು ಎಂದು ಭಾವಿಸುತ್ತೇವೆ, ಇನ್ನೊಬ್ಬರ ಕಷ್ಟ, ಪರಿಶ್ರಮ ಅರ್ಥವಾಗುವವರೆಗೆ ಅವರ ಕಷ್ಟ ತಿಳಿಯುವುದಿಲ್ಲ. ಅನಂತರವೇ ತಿಳಿವಳಿಕೆ ಮೂಡುತ್ತದೆ. ಅಂದರೆ ಭೂಮಿಯ ಮೇಲೆ ಮನುಷ್ಯನಿಗೆ ಕಷ್ಟವಾಗುವ ಕೆಲಸ ಯಾವುದೂ ಇಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನಬಹುದು ಆದರೆ ಅಲ್ಲಿ ಹೋಗಿ ಪರಾಂಭರಿಸಿ ನೋಡಿದರೆ ನುಣ್ಣಗಿದ್ದದ್ದೂ ವಕ್ರವಾಗಿರಬಹುದು. ಕಷ್ಟಗಳು ಹಾಗೆ ಇನ್ನೊಬ್ಬರದು ನೋಡುವಾಗ ಸುಲಭ ಎನಿಸಬಹುದು. ಅಥವಾ ನಾವಂದುಕೊಂಡಂತೆ ಎಲ್ಲವೂ ಸುಲಭ ಅಥವಾ ಎಲ್ಲವೂ ಕಷ್ಟ ಎನಿಸಲುಬಹುದು. ಅಂದುಕೊಂಡು ಮನಸಿಟ್ಟು, ಕೆಲಸ ಮಾಡಿದರೆ ಯಾವುದು ಕಷ್ಟವಿಲ್ಲ ಎಲ್ಲವೂ ನಾವಂದುಕೊಂಡಂತೆÀ ಅಲ್ವಾ ಕಷ್ಟಕ್ಕೆ ಕಷ್ಟವೇ ಸಾಟಿ,ನೋಡುವುದೆಲ್ಲಾ ಸುಲಭ, ಮಾಡುವುದು ಕಷ್ಟ, ಮಾಡುವುದು ಸುಲಭವಿರಬಹುದು!!! ಮಾಡುವ ಕೆಲಸ ನೋಡುವ ನಮ್ಮ ಕಂಗಳೆ ಕಷ್ಟವೆಂದುಕೊಂಡಿರಬಹುದು ಅಲ್ವಾ...
 ಏನಂತೀರಾ!?